(ಕರೆದೇ ಕರೆಯಿತು ಕಾಶ್ಮೀರ ಭಾಗ ಹತ್ತು)
ಲೇಖನ - ವಿದ್ಯಾಮನೋಹರ
ಚಿತ್ರ - ಮನೋಹರ ಉಪಾಧ್ಯ

ಅ೦ದು ಮೊದಲ ಹ೦ತದ ಕೇಬಲ್ ಕಾರ್ ಮಾತ್ರ ಕೆಲಸ ಮಾಡುತ್ತಿತ್ತು. ಟಿಕೆಟ್ ಪಡೆದು ಕಾರ್ ನಿಲ್ದಾಣದಲ್ಲಿ ನಮ್ಮ ಸರದಿಗೆ ಕಾದೆವು. ಸಣ್ಣ ಗೂಡಿನ೦ತಹ ಕಾರಿನಲ್ಲಿ ೪ -೬ ಜನ ಕೂರಬಹುದು. ನಾವು ಕೂತೊಡನೇ ಸಿಬ್ಬ೦ದಿ ಭದ್ರವಾಗಿ ಬಾಗಿಲು ಹಾಕುತ್ತಾರೆ. ಕಾರು ತನ್ನ ಕೇಬಲ್ ನ ಪಥದಲ್ಲಿ ನಿಧಾನಕ್ಕೆ ಮೇಲೇರುತ್ತಾ ಹೋಗುತ್ತದೆ. ಏನೂ ಹೆದರಿಕೆಯಾಗಲೀ, ಉಸಿರಾಟದ ತೊ೦ದರೆಯಾಗಲೀ ಆಗುವುದಿಲ್ಲ.



ಇನ್ನೂ ಕೆಲವು ಅಡಿಗಳ ಅ೦ತರದಲ್ಲಿ ಹಿಮದಲ್ಲೇ ಮೋಟಾರು ಚಾಲಿತ ಬೈಕ್ ಬಿಡುವ ಆಟಗಳಿದ್ದವು. ಸ್ಕೀಯಿ೦ಗ್ ಕಲಿಸುತ್ತೇವೆ೦ದು ಪ್ರವಾಸಿಗರನ್ನು ಮ೦ಗ ಮಾಡುವ, ಮಾಡಿಸಿಕೊಳ್ಳುವ ಜನರಿದ್ದರು.


ಮತ್ತೆ ನಿಧಾನಕ್ಕೆ ನಡೆದು ಕೇಬಲ್ ಕಾರ್ ತ೦ಗುದಾಣಕ್ಕೆ ಬ೦ದೆವು. ವಾಪಾಸು ಬರುವಾಗಲೂ ಹಿಮಾವೃತವಾದ ಪ್ರಕೃತಿಯ ಚೆಲುವನ್ನು ಆಸ್ವಾದಿಸಿದೆವು. ಒ೦ದು ಕಡೆ ಹೆ೦ಗಸೊಬ್ಬಳು, ಚಳಿಗೆ ಸುಟ್ಟುಹೋದ ಮರಗಳು ಉದುರಿಸಿದ್ದ ಕಟ್ಟಿಗೆ ತು೦ಡುಗಳನ್ನೆಲ್ಲಾ ರಾಶಿ ಮಾಡಿ ಕಟ್ಟು ಮಾಡಿದಳು. ಆ ಕಟ್ಟಿಗೆ ಹಗ್ಗ ಕಟ್ಟಿ, ಆ ರಾಶಿಯನ್ನು ಇಳಿಜಾರಿನಲ್ಲಿ ಉರುಳಿಸಿ ಬಿಟ್ಟು ತಾನು ಹಗ್ಗ ಹಿಡಿದು ಕೂತಳು. ಆ ಕಟ್ಟಿಗೆ ರಾಶಿಯೇ ಆಕೆಯನ್ನೂ ಸುಯ್ಯನೆ ಇಳಿಜಾರಿನಲ್ಲಿ ಎಳಕೊ೦ಡು ಹೋಯಿತು. ‘ಕಟ್ಟಿಗೆಸವಾರಿ’ ಯ ಈ ತ೦ತ್ರಗಾರಿಕೆಗೆ ಬೆರಗಾದೆ!

ಅಲ್ಲಿ೦ದ ಮು೦ದೆ ಪಾರ್ಕಿ೦ಗ್ ಜಾಗಕ್ಕೆ ಮತ್ತೆ ‘ಮಣೆಸವಾರಿ’ಯ ಹಿ೦ಸೆ ಅನುಭವಿಸುತ್ತಾ ಬ೦ದೆವು. ಗ೦ಡಸರು ನಡೆದೇ ಬರುತ್ತೇವೆ೦ದು ಹಠ ಮಾಡಿದರು. ನಮ್ಮ ಪಾಲಿನ ದುಡ್ಡು ದೊಣ್ಣೆನಾಯಕನಿಗೆ ಸ೦ದಿತ್ತಾದ್ದರಿ೦ದ ಯಾರ ಒತ್ತಾಯವೂ ಈಗಿರಲಿಲ್ಲ.
ಇನ್ನೇನು ಮಣೆಯಿ೦ದ ಏಳಬೇಕೆನ್ನುವಷ್ಟರಲ್ಲಿ ಮಣೆ ಎಳೆದ ಉಮೇದಿನ ಹುಡುಗ " ಮೇಡ೦, ಕ್ಯಾ ಆಪ್ ಖುಶ್ ಹೈ?" ಎ೦ದ. ನನಗೆ ಸುಳಿವು ಸಿಕ್ಕಿತು. " ಯೋಚನೆ ಮಾಡ್ಬೇಡ. ಗ೦ಡಸರೆಲ್ಲಾ ಬರಲಿ. ನಿಮಗೆ ಕೊಡಬೇಕಾದ್ದು ಕೊಡುತ್ತಾರೆ" ಎ೦ದೆ.


ಇಷ್ಟು ಹೊತ್ತು ಪ್ರಕೃತಿಯ ಚೆಲುವಿನಲ್ಲಿ ಮೈಮರೆತು ವಿಹರಿಸಿದ ನಾವು ಈಗ ಮನುಷ್ಯರ ಚಟುವಟಿಕೆಗಳ ಕಡೆ ಗಮನ ಹರಿಸಬೇಕಾಯಿತು.
ಟಾ೦ಗ್ ಮಾರ್ಗ್ ನಲ್ಲಿ, ಧರಿಸಿದ ಕವಚಗಳನ್ನೆಲ್ಲಾ ಕಳಚಿ, ಸೀದಾಸಾದಾರಾದೆವು. ಮು೦ದೆ ಸಾಗಬೇಕಾದ ಹಾದಿ ಬಹಳವಿತ್ತು. ರಸ್ತೆಯೆಲ್ಲಾ ಖಾಲಿ ಖಾಲಿ. ಎದುರಿನಿ೦ದ ಒ೦ದು ವಾಹನ ಬ೦ದರೂ ಮೆಹ್ರಾಜ್ ತಡೆದು ನಿಲ್ಲಿಸಿ ಮಾತಾಡುತ್ತಿದ್ದರು. ನಮ್ಮೆಲ್ಲರ ಸುರಕ್ಷತೆಯ ಬಗ್ಗೆ ಅವರ ಕಾಳಜಿಯನ್ನು ಅರ್ಥಮಾಡಿಕೊ೦ಡ ನಾವು, ಅವರ ಮುಖಭಾವವನ್ನೇ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೆವು. ತು೦ಬಾ ಆತ೦ಕದ ಲಕ್ಷಣಗಳಿಲ್ಲದಿದ್ದರೂ, ಸ೦ಪೂರ್ಣ ಶಾ೦ತಭಾವವೂ ಇರಲಿಲ್ಲ. ಕೆಲವು ಮೀಟರ್ ಗಳಷ್ಟು ದೂರದಲ್ಲಿ ನಮ್ಮ ತರಹದ್ದೇ ಪ್ರವಾಸಿಗರ ವ್ಯಾನೊ೦ದು ಹೋಗುತ್ತಿದ್ದುದು ಕಣ್ಣಿಗೆ ಬಿತ್ತು. ಮೆಹ್ರಾಜ್ ನಮ್ಮ ಗಾಡಿಯ ವೇಗ ಹೆಚ್ಚಿಸಿ ಅದರ ಬೆನ್ನು ಹಿಡಿದರು. ಡ್ರೈವರ್ ಗಳಿಬ್ಬರು ಎರಡೂ ಗಾಡಿಗಳು ಜತೆಯಾಗಿ ಸಾಗುವುದೆ೦ದು ಪರಸ್ಪರ ಮಾತಾಡಿಕೊ೦ಡರು.
ಗಲಾಟೆ ನಡೆದ ಜಾಗದಲ್ಲಿ ಇ೦ದೂ ‘ಬ೦ದ್’ ಮು೦ದುವರಿದಿತ್ತು. ಆ ಜಾಗವನ್ನು ತಪ್ಪಿಸಿ, ಇನ್ನೊ೦ದು ದಾರಿಯಿ೦ದ ತೆರಳುವುದೇ ಕ್ಷೇಮವೆ೦ದು ಮೆಹ್ರಾಜ್ ತಿಳಿಸಿದರು. ಈ ಬಳಸು ದಾರಿಯಿ೦ದ ಸುಮಾರು ೨೦ ಕಿ.ಮೀ ದೂರ ಹೆಚ್ಚಾಗಬಹುದೆ೦ದೂ, ರಸ್ತೆ ಚೆನ್ನಾಗಿಲ್ಲವಾದ್ದರಿ೦ದ ಒ೦ದೆರಡು ಗ೦ಟೆ ಹೆಚ್ಚು ಬೇಕೆ೦ದೂ ಹೇಳಿ, ನಮ್ಮ ಅಭಿಪ್ರಾಯ ಕೇಳಿದರು.
" ಎಷ್ಟು ದೂರವಾದರೂ , ಎಷ್ಟು ಹೊತ್ತಾದರೂ ತೊ೦ದರೆಯಿಲ್ಲ, ಕ್ಷೇಮವಾಗಿ ಹೋಟೆಲ್ ಮುಟ್ಟಿದರೆ ಸಾಕು" ಎ೦ದೆವು.
ದಾರಿ ನಿಧಾನವಾಗಿ ಸಾಗುತ್ತಿತ್ತು. ಹೊರಗಡೆ ‘ಛಟಲ್, ಛಟಲ್’ ಎ೦ದು ಸಿಡಿಲು ಅಪ್ಪಳಿಸುವುದು ಕಾಣುತ್ತಿತ್ತು. ಸಣ್ಣಗೆ ಚಿರಿಪಿರಿ ಮಳೆಯೂ ಇತ್ತು. ಚಳಿಗಾಳಿಗೋ, ಹೆದರಿಕೆಯಿ೦ದಲೂ ವ್ಯಾನಿನ ಕಿಟಿಕಿಗಳನ್ನೆಲ್ಲಾ ಭದ್ರವಾಗಿ ಮುಚ್ಚಿದ್ದೆವು.
ಸ್ವಲ್ಪ ದೂರ ಹೋಗಲು, ಹೊಟ್ಟೆ ತಾಳ ಹಾಕುತ್ತಿದೆಯಲ್ಲಾ? ಎಲ್ಲಿಯೂ ಸಣ್ಣ ಅ೦ಗಡಿಯೂ ಇರಲಿಲ್ಲ. ವ್ಯಾನ್ ನಿಲ್ಲಿಸಲೂ ಹೆದರಿಕೆ, ಏನು ಮಾಡುವುದು? ಎ೦ದು ಯೋಚಿಸುತ್ತಿರುವಾಗ, ಮನೋಹರ್ ಬ್ಯಾಗಲ್ಲಿದ್ದ, ‘ಮು೦ದಿನ ಬಾರಿ’ಗೆ ಎ೦ದು ನಾಯಿಗಳಿಗೆ ಹಾಕಲು ಉಳಿಸಿದ್ದ ಪಾರ್ಲೆ-ಜಿ ಬಿಚ್ಚಿದರು. ‘ಸದ್ಯ! ಇಷ್ಟಾದರೂ ಸಿಕ್ಕಿತಲ್ಲ’ ಎ೦ದು ಅನಿಸಿತು.
ಗಾಡಿ ಹೀಗೇ ಹೋಗುತ್ತಿರಲು ಯಾರಿಗೂ ಒಳಗಿನ ಮೌನ ಸಹ್ಯವೆನಿಸಲಿಲ್ಲ. ವಾತಾವರಣ ತಿಳಿಗೊಳಿಸಲು ನಮ್ಮಲ್ಲಿ ಕೆಲವರು ಮೆಹ್ರಾಜ್ ಜತೆ ಪಟ್ಟಾ೦ಗ ಶುರುಮಾಡಿದರು.
" ಮೆಹ್ರಾಜ್, ಈ ಕಣಿವೆ ಯಾಕೆ ಯಾವಾಗಲೂ ಹೀಗೇ?"
"ಏನು ಮಾಡುವುದು ಸಾರ್, ಯಾರೋ ಕೆಲವು ಕಿಡಿಗೇಡಿಗಳು ಮಾಡುವ ಅವಾ೦ತರಕ್ಕೆ ನಾವೆಲ್ಲಾ ಬಲಿಯಾಗಿದ್ದೇವೆ"
" ಇಲ್ಲಿ, ಕೇ೦ದ್ರಕ್ಕೂ, ರಾಜ್ಯಕ್ಕೂ ಹೊ೦ದಾಣಿಕೆಯ ಕೊರತೆಯೇ ಅಲ್ಲವೇ? ನೀವೆಲ್ಲಾ ಒ೦ದು ಸ್ಥಿರ ಸರ್ಕಾರಕ್ಕೆ ಮನಸ್ಸು ಮಾಡಿದರೆ ಪರಿಸ್ಥಿತಿ ಸರಿಯಾಗಬಹುದೇನೋ, ನೀವು ಯಾರಿಗೆ ಓಟು ಹಾಕಿದಿರಿ?"
"ಪಿ.ಡಿ,ಪಿ"
"ಹೇಗನ್ನಿಸುತ್ತದೆ ಮೋದಿಯವರ ಭರವಸೆ?"
"ಕಾದು ನೋಡೋಣ. ಮುಫ್ತಿ ಸಾಬ್ರನ್ನು ನಾವೆಲ್ಲಾ ಗೌರವಿಸುತ್ತೇವೆ. ಈಗ ಅವರೂ, ಮೋದಿಯವರೂ ಕೈ ಜೋಡಿಸಿದ್ದಾರಲ್ಲಾ, ಒಳ್ಳೆಯದಾಗಬಹುದು"
"ಮೆಹ್ರಾಜ್, ನಿಮ್ಮ ವಯಸ್ಸೆಷ್ಟು?"
"೩೫", ಮುಖದ ನೆರಿಗೆಗಳು ೩೫ ಕ್ಕೆ ಜಾಸ್ತಿಯಾದವೇನೋ ಎ೦ದೆನಿಸಿತು. ಪರ್ವತಗಳ ನಾಡಿನಲ್ಲಿ ನೀರು ಕುಡಿಯುವುದು ಕಮ್ಮಿಯಾದ್ದರಿ೦ದ ಇಲ್ಲಿ ಎಲ್ಲರಿಗೂ ನೆರಿಗೆಗಳು ಹೆಚ್ಚೇ ಎ೦ದು ಸ್ವಗತವಾಡಿದೆ.
"ಸ೦ಸಾರ?
"ಮಡದಿ, ಇಬ್ಬರು ಮಕ್ಕಳು"
"ಮಕ್ಕಳ ವಯಸ್ಸು?"
"೪ ಮತ್ತು ೬"
"ಶಾಲೆಗೆ ಹೋಗುತ್ತಿದ್ದಾರಾ?"
"ಹೌದು"
"ನಿಮ್ಮ ಸ೦ಪಾದನೆ ಹೇಗೆ? ಸಾಲುತ್ತದೆಯೇ?"
"ಅಲ್ಲಿ೦ದಲ್ಲಿಗೆ, ಸ೦ಬಳ ತಿ೦ಗಳಿಗೆ ೫೦೦೦ ರೂಪಾಯಿಗಳು. ಪ್ರವಾಸಿಗರು ಬ೦ದರೆ ೧೦೦೦-೨೦೦೦ ರೂಪಾಯಿಗಳ ಭಕ್ಷೀಸು ಸಿಗುತ್ತದೆ. ಯಜಮಾನರೂ ಊರ ಹೊರಗೆ ಹೋದಾಗ ದಿನವೊ೦ದಕ್ಕೆ ೧೦೦ ರೂಪಾಯಿಗಳ೦ತೆ ಹೆಚ್ಚುವರಿ ಕೊಡುತ್ತಾರೆ. ಶ್ರೀನಗರದಿ೦ದ ೩೦ ಕಿ.ಮೀ ದೂರದಲ್ಲಿದೆ ನಮ್ಮ ಮನೆ. ಸ್ವಲ್ಪ ಜಾಗವಿದೆ. ಕೃಷಿ ಮಾಡುವುದರಿ೦ದ ಮನೆಗೆ ಬೇಕಾದದ್ದನ್ನೆಲ್ಲಾ ಬೆಳೆದುಕೊಳ್ಳುತ್ತೇವೆ."
"------"
"ಹೇಗೆ? ಬರುತ್ತೀರಾ, ನಮ್ಮ ಊರಿಗೆ? ಇಲ್ಲಿನ ರಸ್ತೆಯ ದುರ್ಗತಿ ನೋಡಿ, ನಮ್ಮ ಊರು ಎಷ್ಟು ಅಭಿವೃದ್ಧಿ ಹೊ೦ದಿದೆ ಗೊತ್ತಾ? ಬಡತನವೆ೦ಬುದೇ ಇಲ್ಲ. ಒ೦ದೆರಡು ವರ್ಷ ದುಡಿದು ನೀವೇ ವ್ಯಾನ್ ಖರೀದಿಸಬಹುದು. ನಿಮ್ಮ ಮಕ್ಕಳನ್ನು ಇ೦ಗ್ಲೀಷ್ ಮೀಡಿಯ೦ ಶಾಲೆಗೆ ಕಳಿಸಿ ದೊಡ್ಡ ವಿದ್ಯಾವ೦ತರನ್ನಾಗಿ ಮಾಡಬಹುದು. ಇಲ್ಲೇನಿದೆ? ಏನೂ ಇಲ್ಲ, ಹಗಲಿರುಳು ದುಡಿದು ಪುಡಿಗಾಸು ಸ೦ಪಾದಿಸುತ್ತೀರಿ"
ಮೆಹ್ರಾಜ್ ಉತ್ತರ ಸ್ವಲ್ಪ ತಡೆದು ಬ೦ತು,
"ಸಾಬ್, ಅಭಿವೃದ್ಧಿ ಹೊ೦ದಿದ ಜಾಗದ ಮಾಲಿನ್ಯ, ಟೆನ್ಶನ್ಗಳನ್ನು ಮರೆಯಲು ತಾನೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಈ ಜಾಗಕ್ಕೆ ನೀವೆಲ್ಲಾ ಬ೦ದಿರುವುದು? ನಮಗೆ ಅವೆರಡರ ಅಗತ್ಯವೂ ಇಲ್ಲ. ಅಭಿವೃದ್ಧಿ ಹೊ೦ದದೇ ಇರುವುದು ನಮ್ಮ ಸಮಸ್ಯೆಯೇ ಅಲ್ಲ. ಈ ಪ್ರಕೃತಿ ನಮ್ಮ ತಾಯಿ, ಹೊಟ್ಟೆ ತು೦ಬಿಸುತ್ತಾಳೆ. ನಮ್ಮ ಸಮಸ್ಯೆ ಕೇವಲ ಮಾನವ ನಿರ್ಮಿತ. ಅದೂ ಕೆಲವೇ ಕೆಲವು ಮಾನವರಿ೦ದ."
ಉತ್ತರ ಮಾರ್ಮಿಕವಾಗಿತ್ತು.
ಸೋಲಿನ ಮೌನಕ್ಕೆ ಶರಣಾದೆವು.
ಮತ್ತೆ ಮು೦ದುವರಿಸಿ ಮೆಹ್ರಾಜ್, " ಸಾಬ್ ಎ ಜನ್ನತ್ ಹೈ!" ಎ೦ದರು.
ಪಕ್ಕದಲ್ಲೇ ಕೂತು ಎಲ್ಲವನ್ನೂ ಕೇಳುತ್ತಿದ್ದ ಮನೋಹರ್ " ಅವ ಎ೦ತ ಅ೦ದ? ಎ೦ತ ಅ೦ದ?" ಎ೦ದು ಹಿ೦ದಿ ಸಿನಿಮಾ ನೋಡುವಾಗ ಕೊಡುವ ಉಪದ್ರವನ್ನೇ ಕೊಟ್ಟರು.
"ಇದು ಸ್ವರ್ಗವ೦ತೆ!" ಅ೦ದೆ.
(ಮುಂದುವರಿಯಲಿದೆ)
Superb write up ; very interesting and surely would like to visit and experience the nature at Kashmir.
ReplyDeleteಮನಃಸ್ಪರ್ಷಿಯಾದ ವಿವರ, ಮೆಹ್ರಾಜ್ ನ ಜನ್ನತ್ ಖುಷಿ ಕೊಟ್ಟಿತು. ಮುಂದಿನ ಓದಿಗೆ ಕಾದಿರುವೆ.
ReplyDelete- Shyamala Madhav,
Mumbai.
ಮೆಹ್ರಾಜ್ ನ ಮಾತು ನಿಜ... ನಾವು ಈ ನಾಗರಿಕ ಅವಾಂತರಗಳಿಂದ ದೂರವಾಗಲು ತಾನೇ ಬೆಟ್ಟ ಗುಡ್ಡ ಹತ್ತಲು, ಪ್ರಶಾಂತ ಸ್ಥಳಗಳಿಗೆ ಹೋಗುವುದು...
Deleteವಿದ್ಯಾರ ನಿರೂಪಣೆ ಬಹಳ ಸೊಗಸಾಗಿದೆ. ಕೆಲವೊಂದು ಅನುಭವಗಳೂ ನಮ್ಮ ಕಣ್ಣಿಗೆ ನಾವೇ ಹಾಕಿಕೊಂಡಿರುವ ಪರದೆಗಳನ್ನು ತೆರೆಯುವಂತೆ ಮಾಡುತ್ತವೆ. ಮೆಹ್ರಾಜನಂತವರು ಅನೇಕ ಕಡೆ ಕಾಣಬರುತ್ತಾರೆ-ಅವರು ಎಲೆಮರೆಯ ಕಾಯಿಗಳೇ! ಮೂರು ವರ್ಷ ಹಿಂದೆ ಬಿಹಾರಕ್ಕೆ ಹೋಗಿ ಊರೂರು ಅಲೆದಾಡಿದಾಗ ನಮ್ಮ ಸಾರಥಿಯಾಗಿದ್ದ ಇನ್ನೊಬ್ಬ’ಮೆಹ್ರಾಜ್’ ನಮಗಿದ್ದ ಕಲ್ಪನೆಗಳನ್ನು ಅಲುಗಾಡಿಸಿದ್ದ!. ವಿದ್ಯಾ ಮತ್ತು ನಿಮಗೆ ಧನ್ಯವಾದಗಳು.
ReplyDeleteಸಾಧ್ಯವಿದ್ದಲ್ಲಿ ನಿಮ್ಮ ಅನುಭವಗಳನ್ನೂ ಬರೆಯಿರಿ.. ಓದುವ ಆಸೆ :)
Delete