Showing posts with label ಶ್ಯಾಮಲಾ ಮಾಧವ. Show all posts
Showing posts with label ಶ್ಯಾಮಲಾ ಮಾಧವ. Show all posts

19 June 2017

ನಾಳೆ ಇನ್ನೂ ಇದೆ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ
ನಾಳೆ ಇನ್ನೂ ಕಾದಿದೆ
ಅಧ್ಯಾಯ೪೨

ಇನ್ನು ಹೇಳುವುದು ಹೆಚ್ಚೇನೂ ಉಳಿದಿಲ್ಲ. ನಾನು ಆರಂಭಿಸಿದ ಕಥನ ಕೊನೆ ಮುಟ್ಟುತ್ತಾ ಬಂದಿದೆ. ನನ್ನ ಕಥನದ ಮುಖ್ಯ ಉದ್ದೇಶವಿದ್ದುದು, ಬಾಳಿನಲ್ಲಿ ನಾನು ಕಂಡು, ಕೇಳಿದ ಸ್ಮರಣೀಯ ಹಿರಿಯರ ಬಗ್ಗೆ, ಪ್ರೀತಿಪಾತ್ರರ ಬಗ್ಗೆ ತಿಳಿಸಬೇಕೆಂದು ಅನಿಸಿದ್ದನ್ನು ಓದುಗರೊಡನೆ ಹಂಚಿಕೊಳ್ಳುವುದು. ಆಗಾಗ ನನ್ನನ್ನು ಕಾಡಿದ, ಕಾಡುತ್ತಿರುವ ವಿಷಯಗಳ ಬಗ್ಗೆ ತೋಡಿಕೊಳ್ಳುವುದು. ಓದಿ ಪಟ್ಟ ಸಂತೋಷವನ್ನು, ಕಂಡು ಅನುಭವಿಸಿದ ಆನಂದವನ್ನು ಓದುಗರಿಗೆ ದಾಟಿಸುವುದು. ಕಳೆದು ಹೋದ ಹಳೆಯ ದಿನಗಳನ್ನು, ಕಳೆದುಕೊಂಡ ಅನನ್ಯ ಮೌಲ್ಯಗಳನ್ನು ಸ್ಮರಿಸುವುದು.

12 June 2017

ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯಾ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ
ನಾಳೆ ಇನ್ನೂ ಕಾದಿದೆ
ಅಧ್ಯಾಯ - ೪೧


೨೦೧೬ ಆಗಸ್ಟ್ ೨೮, ನನ್ನ ಜೇನ್ ಏರ್ ಕೊನೆಗೂ ಬಂಧಮುಕ್ತಳಾಗಿ ಬೆಳಕು ಕಂಡ ದಿನ. ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ನಡೆದ ಕೃತಿ ಲೋಕಾರ್ಪಣಾ ಸಮಾರಂಭದಲ್ಲಿ ಅನುವಾದ ಕ್ಷೇತ್ರದ ದಿಗ್ಗಜ ಎಸ್. ದಿವಾಕರ್ ಹಾಗೂ ಪ್ರಿಯ ಜಯಂತ್ ಕಾಯ್ಕಿಣಿ ಅವರು ಕೃತಿ ಅನಾವರಣ ಗೈದರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಕೆ.ವಿ.ನಾರಾಯಣ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

05 June 2017

ಮಲೆಯ ನಾಡಿಗೆ ರಸ ಋಷಿಯ ಬೀಡಿಗೆ

ಶ್ಯಾಮಲಾ ಮಾಧವ ಇವರ ಆಥ್ಮಕಥಾನಕ ಧಾರಾವಾಹಿ
ನಾಳೆ ಇನ್ನೂ ಕಾದಿದೆ 
ಅಧ್ಯಾಯ - ೪೦


ಪ್ರಕೃತಿ ದೇವಿಯ ಸೊಬಗು ದೇಗುಲದಿ ಆನಂದವೇ ಪೂಜೆ; ಮೌನವೇ ಮಹಾಸ್ತೋತ್ರ
- ಕುವೆಂಪು

ಮಲೆನಾಡಿನ ತರು ಲತೆ, ಗಿರಿ, ಶಿಖರ ಝರಿ, ತೊರೆಗಳು, ಮತ್ತಲ್ಲಿ ನಮ್ಮ ಕುವೆಂಪು ಕವಿಮನೆ ಬಹುಕಾಲದಿಂದ ನಮ್ಮ ಸೃಜನಾ ಬಳಗವನ್ನು ಕೈ ಬೀಸಿ ಕರೆಯುತ್ತಿತ್ತು. ಪ್ರವಾಸದ ಬಹುದಿನಗಳ ಕನಸು ನನಸಾದ ರೋಚಕ ಕ್ಷಣವದು! ಸೃಜನಾ ಮುಂಬಯಿ ಕನ್ನಡ ಲೇಖಕಿಯರ ಬಳಗದ ಹದಿಮೂರು ಸದಸ್ಯೆಯರು ರಾತ್ರಿ ಮಂಗಳೂರು ಎಕ್ಸ್ಪ್ರೆಸ್ ಏರಿ, ಬೆಳಿಗ್ಗೆ ಹನ್ನೊಂದರ ಸುಮಾರಿಗೆ ಉಡುಪಿ ರೈಲು ನಿಲ್ದಾಣದಲ್ಲಿ ಬಂದಿಳಿದಾಗ, ಕುಪ್ಪಳಿಗೆ ನಮ್ಮನ್ನೊಯ್ಯುವ ಮಿನಿಬಸ್ ಸಾರಥಿ, ಉದಯ ಕುಮಾರ್ ಅಲ್ಲಿ ನಮಗಾಗಿ ಕಾದಿದ್ದಗೆಳತಿ ಮಿತ್ರಾ ವೆಂಕಟ್ರಾಜ್ ಯೋಜಿಸಿದಂತೆ, ಮಿನಿ ಬಸ್ ನಮ್ಮನ್ನು ಉಡುಪಿಯ ಅವರ ರಾವ್ ಕುಟುಂಬದ ಮನೆಗೆ  ಕರೆದೊಯ್ದಿತು. ವೆಂಕಟ್ರಾಜರ ಅಣ್ಣ ರಮೇಶ ರಾವ್ ದಂಪತಿಯಲ್ಲಿಗೆ ಸ್ನಾನಕ್ಕಾಗಿ ಹೋದ ನಮಗೆ ಆದರದ ಸ್ವಾಗತ ಕಾದಿತ್ತು. ಉಡುಪಿಗೆ ಹೋದ ಮೇಲೆ ಉಡುಪಿ ಕೃಷ್ಣನನ್ನು ಒಂದರೆ ಘಳಿಗೆಯಾದರೂ ಕಾಣದಿರುವುದೆಂತು? ದೇವಳ ಶಿಲ್ಪ ವಿನ್ಯಾಸಕಾರರಾದ ರಮೇಶ ರಾವ್ ಅವರಿಂದಾಗಿ ನಮಗೆ ಸುಲಭದಲ್ಲಿ ಕೃಷ್ಣ ದರ್ಶನವಷ್ಟೇ ಅಲ್ಲ, ಪ್ರಸಾದರೂಪವಾಗಿ ಪಂಚ ಭಕ್ಷ್ಯ ಪರಮಾನ್ನದ ಭೋಜನವೂ ಪ್ರಾಪ್ತಿಯಾಯ್ತು. ಅಂಗಣದಲ್ಲಿ ನಿಂತಿದ್ದ ಬೃಹದ್ರಥವನ್ನೂ ಕನಕನ ಕಿಂಡಿಯ ಮುದ್ದು ಕೃಷ್ಣನನ್ನೂ ಹೂವಿನಂಗಡಿಯ ಬಕುಲದ ಮಾಲೆ, ಮಲ್ಲಿಗೆ ಚೆಂಡುಗಳನ್ನೂ ಕಣ್ಣಲ್ಲಿ ತುಂಬಿಕೊಂಡು, ಕುಪ್ಪಳಿ ತಲುಪುವ ಧಾವಂತದಲ್ಲಿ, ಕಿರು ಭೇಟಿಯಲ್ಲೇ ಆಪ್ತರಾದ ರಾವ್ ದಂಪತಿಗಳಿಂದ ಬೀಳ್ಕೊಂಡು ಉದಯ ರಥವೇರಿ ಮಲೆಗಳತ್ತ ಸಾಗಿದೆವು.

29 May 2017

ಬಹುಭಾಷಾ ಭಾರತಿ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ 
ನಾಳೆ ಇನ್ನೂ ಕಾದಿದೆ 
ಅಧ್ಯಾಯ೩೯

ಮೈಸೂರು ಮಹಾರಾಜರ ಸೇವೆಯಲ್ಲಿ ರೇಂಜರ್ ಆಗಿದ್ದು, ಮುಂದೆ ಮೈಸೂರು ಮೃಗಾಲಯದ ಮೇಲ್ವಿಚಾರಕರಾಗಿದ್ದ ನಮ್ಮ ಮನಮೋಹನ ಅಂಕ್ಲ್ ಹಾಗೂ ಅವರ ಮೈಸೂರು ಖೆಡ್ಡಾ ಬಗ್ಗೆ ತರಂಗದಲ್ಲಿ ಮುಖಪುಟ ಲೇಖನ ಪ್ರಕಟವಾದ ಸಮಯವದು. ಮತ್ತನಿತರಲ್ಲೇ ಕಾಕನಕೋಟೆ ಸಿನೆಮಾ ಮಾಡುವ ಯೋಜನೆಯೊಂದಿಗೆ ತನ್ನನ್ನು ಸಂಪರ್ಕಿಸಲಾದ ಬಗ್ಗೆ ಅಂಕ್ಲ್ ನನಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

ಮೈಸೂರಿನಲ್ಲಿ ಫಾರೆಸ್ಟ್ ಡಿಪಾರ್ಟ್ಮೆಂಟ್ ಕ್ವಾರ್ಟರ್ಸ್ನಲ್ಲಿ ಸಕುಟುಂಬ ಸಮೇತ ವಾಸವಾಗಿದ್ದ

22 May 2017

ಚಾಮುಂಡಿ ಬೆಟ್ಟದಿಂದ ರಂಗನತಿಟ್ಟಿಗೆ

ಶ್ಯಾಮಲಾ ಮಾಧವ ಇವರ ಆಥ್ಮಕಥಾನಕ ಧಾರಾವಾಹಿ
ನಾಳೆ ಇನ್ನೂ ಕಾದಿದೆ
ಅಧ್ಯಾಯ - ೩೮

ಏಳೆಂಟು ವರ್ಷದವಳಿದ್ದಾಗ ನೋಡಿದ ಮೈಸೂರು, ಶ್ರೀರಂಗಪಟ್ಟಣಗಳ ನೆನಪು ಹೃದಯದಲ್ಲಿ ಮಸುಕಾಗಿದ್ದು, ಪುನಃ ನೋಡಬೇಕೆಂಬ ಹಂಬಲ ಸದಾ ನನ್ನದಾಗಿತ್ತು. ಅನುವಾದ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಮೈಸೂರಿನಲ್ಲಿ ನಡೆಯುವುದೆಂದರಿತಾಗ ನನ್ನ ಹೃದಯ ಸಂತಸದಿಂದ ಪುಟಿದೆದ್ದಿತು. ಬೆಂಗಳೂರು ತಲುಪಿದ ನನ್ನನ್ನೂ ತುಷಾರ್ನನ್ನೂ ಗೆಳತಿ, ಬಂಧು ಸ್ವರ್ಣಲತಾ ಮೈಸೂರಿಗೆ ಕರೆದೊಯ್ದಳು

15 May 2017

ಸಾಧನೆ, ಸಿದ್ಧಿಯ ದಾರಿ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ
ಅಧ್ಯಾಯ೩೭

`ಗಾನ್ ವಿದ್ ವಿಂಡ್'ನಂತೆಯೇ ನನ್ನನ್ನು ಬಹುವಾಗಿ ತಟ್ಟಿ ಕಾಡಿದ ಆಂಗ್ಲಭಾಷೆಯ ಅಭಿಜಾತ ಕೃತಿ, ಶಾಲಟ್ ಬ್ರಾಂಟಿಯ `ಜೇನ್ ಏರ್.’ ಮೂಲಕೃತಿಯ ಮೇಲಿನ ಪ್ರೀತಿಯಿಂದ ನಾನಾಗೇ ಅದನ್ನು `ಕನ್ನಡನುಡಿ’ಗಿಳಿಸಲು ತೊಡಗಿದ್ದು, ಮಧ್ಯೆ ನನ್ನ ಕೈ ತಪ್ಪಿ ಹೋದದ್ದು ಈಗಾಗಲೇ ಹೇಳಿಕೊಂಡಿರುವೆ. ಅದನ್ನು ಪುನರಾರಂಭಿಸಿ, ಪ್ರತಿ ಅಧ್ಯಾಯವನ್ನೂ ಬರೆದಂತೆ ನನ್ನ ಇನ್ಬಾಕ್ಸ್ನಲ್ಲಿ ಕಾಪಿಡುತ್ತಾ ಬಂದೆ. ಅಧ್ಯಾಯದಿಂದ ಅಧ್ಯಾಯಕ್ಕೆ ಜೇನ್ ನನಗೆ ಹೆಚ್ಚು ಹೆಚ್ಚು ಪ್ರಿಯಳಾಗುತ್ತಾ ಬಂದಳು. ನನ್ನ ಒಳಗನ್ನೆಲ್ಲ ಸಂಪೂರ್ಣ ಆಕ್ರಮಿಸಿಕೊಂಡಳು. ಸರಳ ರೂಪದ, ಬುದ್ಧಿ-ಭಾವಗಳ ಸಂಘರ್ಷದಲ್ಲಿ ಬುದ್ಧಿಯೇ ಮೇಲ್ಗೈ ಆಗುವ, ತೀವ್ರತಮ ಭಾವನೆಗಳ, ಅಪಾರ ಕಲ್ಪನಾಭಿವ್ಯಕ್ತಿಯ, ಸದಾ ಆಂತರ್ಯವನ್ನಳೆವ ಹುಡುಕು ನೋಟದ, ಪ್ರೀತಿ, ಬಾಂಧವ್ಯಕ್ಕಾಗಿ ತುಡಿವ ಜೇನ್ ನನ್ನ ಮೇಲೆ ಬೀರಿದ ಪರಿಣಾಮ ಅಪಾರ.

08 May 2017

ಸರ್ವ ಧರ್ಮ ಏಕ್ ಸಮಾನ್

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ
ನಾಳೆ ಇನ್ನೂ ಕಾದಿದೆ 
ಅಧ್ಯಾಯ೩೬


ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ.ಎನ್ ಉಪಾಧ್ಯರ ಮೂಲಕ ಡಾ. ಎಂ. ಎಚ್. ಕೃಷ್ಣಯ್ಯ ಅವರು ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು ಸಂಪುಟವನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕಾಗಿ ಭಾಗಶಃ ಅನುವಾದಿಸಿ ಕೊಡುವಂತೆ ಕೇಳಿದಾಗ, ನನಗೆ ಅಚ್ಚರಿಯೇ ಆಯ್ತು. ಮರಾಠಿ ಭಾಷೆಯಲ್ಲಿ ಇನಿತೂ ಪ್ರಭುತ್ವವಿರದ ನಾನು ಅದೆಂತು ಮಾಡಲಿ, ಎಂದಾಗ, "ಇಲ್ಲ, ನಿಮ್ಮಿಂದ ಖಂಡಿತ ಸಾಧ್ಯವಿದೆ; ಮಾಡಿಕೊಡಿ", ಎಂದು ಇಬ್ಬರೂ ಅನುನಯಿಸಿದರು. ಅವರ ಭರವಸೆಯೇ ಇಂಬಾಗಿ, ಆರಂಭಿಸಿದ ನನಗೆ, ಅನುವಾದಿಸುತ್ತಾ ಹೋದಂತೆ ಬರವಣಿಗೆ ಸಲೀಸಾಯ್ತು.

ಅನುವಾದ ಸಾಗಿದಂತೆ ಅಂಬೇಡ್ಕರ್ ವಿಚಾರಗಳು ರುಚಿಸಿದರೂ, ತಾತ್ವಿಕ ಸಂಘರ್ಷ ಬಂತೇ ಬಂತು. ಆದರ್ಶ ಪಾಲನೆಯಲ್ಲಿ, ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಬಗೆಗಿನ ಅವರ ಕಟು ವಿಚಾರಗಳನ್ನು, ಮಾತುಗಳನ್ನು ನನ್ನ ನುಡಿಯಲ್ಲಿ ಅನುವಾದಿಸಿ ಬರೆಯುವುದು ಹಿಂಸೆಯೇ ಅನಿಸಿತು. ಆದರೆ, ಅನುವಾದಿಸಲೊಪ್ಪಿಕೊಂಡು ಕಾರ್ಯೋನ್ಮುಖಳಾದ ಮೇಲೆ ಇದ್ದುದನ್ನಿದ್ದಂತೆ ಅನುವಾದಿಸದೆ ಉಪಾಯವಿರಲಿಲ್ಲ. ಮೂಲಕ್ಕೆ ಬದ್ಧವಾಗಿರುವುದೇ ನನ್ನನುವಾದದ ಆಶಯ. ಅಂತೆಯೇ ಮಾಡಿದೆ.

24 April 2017

ಕೆರೆಯ ನೀರನು ಕೆರೆಗೆ ಚೆಲ್ಲಿ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ  ನಾಳೆ ಇನ್ನೂ ಕಾದಿದೆ 
ಅಧ್ಯಾಯ - ೩೫

ಪ್ರವಾಸ ಹಾಗೂ ಪ್ರೇಕ್ಷಣೀಯ ಸ್ಥಳಗಳ ದರ್ಶನ ನನಗೆ ಬಹು ಪ್ರಿಯವಾದರೂ ನಾನು ಕಂಡುದು ಅತ್ಯಲ್ಪ. ಊರಿಗೆ ವರ್ಷಕ್ಕೆ ನಾಲ್ಕೈದು ಬಾರಿ ಪಯಣಿಸುವದಾದರೂ ವಿಹಾರಕ್ಕೋ, ಸ್ಥಳ ದರ್ಶನಕ್ಕೋ ಅನ್ಯತ್ರ ಹೋದುದು ಬೆರಳೆಣಿಕೆಯಷ್ಟೇ ಸಲ. ಅಂತಹ ಪ್ರವಾಸಗಳಲ್ಲಿ ಅತ್ಯಂತ ಪ್ರಿಯವಾದ ದೆಹಲಿ-ಆಗ್ರಾ ಪ್ರವಾಸದ ನೆನಪಿನೊಂದಿಗೆ ನನ್ನ ಹೃದಯದಲ್ಲಿ ಅಚ್ಚೊತ್ತಿ ಉಳಿದವರು - ಗೆಳತಿ ಕ್ರಿಸ್ತೀನಾ ಹಾಗೂ ಅವಳ ಪತಿ, ಮಣಿ.

ಕ್ರಿಸ್ತೀನಾ ಪರಿವಾರ ಅಮೆರಿಕಾ ಸೇರಿಕೊಂಡ ಬಗ್ಗೆ ಹಿಂದೆಯೇ ಬರೆದಿದ್ದೇನೆ. ತಾಯ್ತಂದೆ, ಅಣ್ಣ ತಮ್ಮಂದಿರೆಲ್ಲ ಅಲ್ಲೇ ನೆಲಸಿದ್ದರಿಂದ ಹಾಗೂ ಬಿಡುವಿರದ ವೃತ್ತಿಜೀವನದಿಂದಾಗಿ ಕ್ರಿಸ್ತಿನ್ಗೆ ಊರಿಗೆ ಬರುವ ಪ್ರಮೇಯವೇ ಇರಲಿಲ್ಲ. ತಂಗಿ ಆಗ್ನಿಸ್ ಬೊಂದೇಲ್ ಕಾನ್ವೆಂಟ್ ಸೇರಿದ್ದಳು. ಡಾಕ್ಟರಾಗಿದ್ದ ಅಕ್ಕ, ಕಣ್ಣಿನ ಕ್ಯಾನ್ಸರ್ನಿಂದ ತೀರಿಕೊಂಡಿದ್ದರು. "ತಾಯ್ನಾಡನ್ನೊಮ್ಮೆ ನೋಡುವ ಆಶೆಯಾಗುವುದಿಲ್ವೇ, ಕ್ರಿಸ್ತಿನ್?" ಎಂದು ನಾನು ಪತ್ರದಲ್ಲಿ ಕೇಳಿದಾಗ, ತುಂಬ ಆಶೆಯಾಗುತ್ತಿದೆ, ಆದರೆ ಎಲ್ಲರಿಗೂ ಹೊಂದುವ ಸಮಯದ ಅಭಾವ, ಎಂದುತ್ತರಿಸಿದ ಕ್ರಿಸ್ತಿನ್, ಇಪ್ಪತ್ತೇಳು ವರ್ಷಗಳ ಸರ್ವಿಸ್ ಬಳಿಕ ವಾಲಂಟರಿ ರಿಟಾಯರ್ಮೆಂಟ್ ತೆಗೆದುಕೊಂಡು ಪತಿಯೊಡನೆ ಊರನ್ನೊಮ್ಮೆ ಸಂದರ್ಶಿಸುವ ಯೋಜನೆ ಹಾಕಿಕೊಂಡಳು. ಹಿಂದಿನ ವರ್ಷವೇ ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಲು ದೆಹಲಿಗೆ ಹೋಗಿ ಬಂದಿದ್ದ ನನ್ನನ್ನು ತಮ್ಮೊಡನೆ ದೆಹಲಿಗೂ ಬರುವಂತೆ ಆಹ್ವಾನಿಸಿದಳು. ನಮ್ಮೆಲ್ಲ ಪಯಣ, ಹೊಟೇಲ್ ವಾಸ್ತವ್ಯ ಎಲ್ಲವನ್ನೂ ಅಲ್ಲಿಂದಲೇ ನಿಯೋಜಿಸಿಕೊಂಡ ಗೆಳತಿಗೆ ಜೊತೆ ನೀಡುವುದಷ್ಟೇ ನನ್ನ ಕೆಲಸವಾಗಿತ್ತು.