ಬಾಗಲೋಡಿ
ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ
ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
(ಭಾಗ ೨)
ಏರ್ಯ ಲಕ್ಷ್ಮೀನಾರಾಯಣ ಆಳ್ವರ ಮುನ್ನುಡಿ
ಯಾವುದೋ ಒಂದು ಶುಭ ಗಳಿಗೆಯಲ್ಲಿ `ಅಭಿರುಚಿ
ಬಂಟ್ವಾಳ’ ಇವರು ಬಾಗಲೋಡಿ ದೇವರಾಯರ ಸಂಸ್ಮರಣ ಕಾರ್ಯಕ್ರಮವನ್ನು ಹಮ್ಮಿಕೊಂಡರು (೧೧-೧೦-೨೦೦೨). ಅಂದು
ಬಾಗಲೋಡಿಯವರ ಪರಿಚಯ ಇದೆ ಎಂಬ ನೆಲೆಯಲ್ಲಿ ಪ್ರಧಾನ ಭಾಷಣಗಾರರಾಗಿ ಕನ್ನಡದ ಹಿರಿಯ ಲೇಖಕ, ಚಿಂತಕ ಜಿ.ಟಿ.
ನಾರಾಯಣರಾಯರನ್ನು ಕರೆದಿದ್ದರು. ಅಧ್ಯಕ್ಷನಾಗಿ ಸ್ಥಳೀಯನಾದ ನನ್ನನ್ನು ಆಹ್ವಾನಿಸಿದ್ದರು. ಬಾಗಲೋಡಿಯವರ
ಕಥೆಗಳ ಕುರಿತು ಮಾತಾಡಲು ಮಹಾಲಿಂಗಭಟ್ಟರನ್ನು ಬರಹೇಳಿದ್ದರು.
ಅಂದು ಜಿಟಿಯವರು ಬಾಗಲೋಡಿಯವರ ಕಾಲೇಜು
ವಿದ್ಯಾರ್ಥಿ ಕಾಲದಿಂದ ಹಿಡಿದು ಕೊನೆಯ ದಿನಗಳವರೆಗಿನ, ತಮಗೆ ನೇರವಾದ ಸಂಪರ್ಕದಿಂದ ತಿಳಿದ ಘಟನೆಗಳ
ಸುರುಳಿಯನ್ನು, ತಮ್ಮದೇ ಪ್ರಬುದ್ಧ ಧಾಟಿಯಲ್ಲಿ ಬಿಚ್ಚುತ್ತ ಹೋದಂತೆ, ನೆರೆದ ಶ್ರೋತೃಗಳೆಲ್ಲ ಭಾವವಶರಾಗಿದ್ದರು.
ಕನ್ನಡ ಸಾರಸ್ವ ಲೋಕದ ಅನನ್ಯ ಪ್ರತಿಭಾವಂತ ಲೇಖಕನೊಬ್ಬನ ಮರೆಯಲ್ಲಿದ್ದ ಬಾಳಿನ ಅನಾವರಣವನ್ನು ಸಮರ್ಥರೀತಿಯಲ್ಲಿ
ಜಿಟಿಯವರು ನಡೆಸಿದ್ದರು. ಬಾಗಲೋಡಿಯವರ ಅಷ್ಟು ಸಮೀಪದ ಸಂಪರ್ಕ ಇವರಿಗೆ ಇತ್ತು ಎಂಬುದು ನನಗೆ ಆ ತನಕ
ತಿಳಿದಿರಲಿಲ್ಲ. ಅವರ ಕಥಾಸಾಹಿತ್ಯದಿಂದ ಅತ್ಯಂತ ಪ್ರಭಾವಿತನಾಗಿದ್ದ ನಾನಂತೂ ನಾರಾಯಣರಾಯರ ಅನುಭವ
ಮಾತಿನ ಮೂಲಕ ಚಿತ್ರಿತವಾಗುತ್ತಿದ್ದ ಬಾಗಲೋಡಿಯವರ ಬದುಕನ್ನು ಅನುಭವಿಸುವುದರಲ್ಲಿ ತನ್ಮಯನಾಗಿದ್ದೆ.
