Showing posts with label ಮಾನಸಗಂಗೋತ್ರಿ ದಿನಗಳು. Show all posts
Showing posts with label ಮಾನಸಗಂಗೋತ್ರಿ ದಿನಗಳು. Show all posts

20 December 2017

ಮೈಸೂರು ಸುತ್ತು, ನೆನಪನ್ನು ಹೊತ್ತು


(ಚಕ್ರೇಶ್ವರ ಪರೀಕ್ಷಿತ ೧೪)
ಮಂಗಳೂರಲ್ಲ, ಮೈಸೂರು ಯಾಕೆ?

ನನಗೆ ಹೇಳ್ಕೊಳ್ಳೋಕ್ ಒಂದೂರು ಮಡಿಕೇರಿ. ಅದು ನನ್ನ ಹುಟ್ಟೂರು. ಅಲ್ಲಿ ನಾನಿದ್ದದ್ದು ಮೊದಲ ಸುಮಾರು ಹತ್ತು ವರ್ಷ ಮಾತ್ರ. ಮತ್ತೆ ಎರಡು ವರ್ಷ ಬಳ್ಳಾರಿ, ಐದು ವರ್ಷ ಬೆಂಗಳೂರು, ಮತ್ತಷ್ಟೇ ವರ್ಷ ಮೈಸೂರು. ಅಲ್ಲಿಗೆ ನನ್ನ ವಿದ್ಯಾರ್ಥಿ ದೆಸೆ ಮುಗಿದಿತ್ತು. ಪ್ರಸ್ತುತ ನಲ್ವತ್ತಕ್ಕೂ ಮಿಕ್ಕು ವರ್ಷಗಳ ವೃತ್ತಿ ಹಾಗೂ ವಾಸದ ಬಲದಲ್ಲಿ ನಾನು ನಿಸ್ಸಂದೇಹವಾಗಿ ಮಂಗಳೂರಿಗ. ಆದರೂ ನನ್ನ ಮೂಲ ಕುಟುಂಬ ಮೈಸೂರಿನಲ್ಲಿ ಖಾಯಂ ನೆಲೆ ನಿಂತದ್ದರಿಂದ ನನ್ನ
ಜೀವನದಲ್ಲಿ ಅದಕ್ಕೆ ಮಹತ್ವ ಹೆಚ್ಚು. ಪ್ರಾಸಂಗಿಕವಾಗಿ ಮೈಸೂರು ನನಗೆ ಶೈಕ್ಷಣಿಕ ಉನ್ನತಿಯನ್ನು ಮಹಾರಾಜ ಕಾಲೇಜು ಹಾಗೂ ಮಾನಸಗಂಗೋತ್ರಿಯಲ್ಲಿ ಒದಗಿಸಿತು. ಇಲ್ಲೇ ಎನ್ಸಿಸಿ ಮತ್ತು ದಖ್ಖಣ ಪರ್ವತಾರೋಹಣ ಸಂಸ್ಥೆಯ ಹವ್ಯಾಸೀ ಚಟುವಟಿಕೆಗಳು ನನ್ನ ಮನೋಭೂಮಿಕೆಯನ್ನು ವೃತ್ತಿ ಸಾಹಸಕ್ಕೆ ಸಜ್ಜುಗೊಳಿಸಿದವು. ಎಲ್ಲಕ್ಕೂ ಮುಖ್ಯವಾಗಿ ತನ್ನ ಸಮೃದ್ಧ ಮತ್ತು ಸಹಜ ಪುಸ್ತಕ ಸಂಸ್ಕೃತಿಯಿಂದ, ನನ್ನ ವೃತ್ತಿಜೀವನಕ್ಕೆ ದೃಢ ಉಡ್ಡಯನ ಕೇಂದ್ರವಾಗಿ ನಿಂತದ್ದು ಮೈಸೂರು.

28 February 2014

ತಡೆಬೇಲಿಯೊಳಗಿನ ಕೋಣ!

(ಮಾನಸಗಂಗೋತ್ರಿ ದಿನಗಳು - ೩)

ಕನ್ನಡ ಭಾಷೆಯ ಶಕ್ತಿ, ವ್ಯಾಪ್ತಿಗಳನ್ನು ಕುರಿತ ಮಾತು ಬರುವಾಗ ವಿಜ್ಞಾನ, ವಾಣಿಜ್ಯ ಮುಂತಾದ ಜನಪದದ ಎಲ್ಲ ಶಿಸ್ತುಗಳನ್ನು ತಲಪುವ ಸಾಹಿತ್ಯಗಳನ್ನು  ಧಾರಾಳ ಉದಾಹರಿಸುತ್ತೇವೆ. ಅಧಿಕಾರ, ಸವಲತ್ತು, ಪ್ರಶಸ್ತಿಗಳ ಮಾತು ಬರುವಾಗ ಶುದ್ಧ ಸಾಹಿತ್ಯ ಸಂಬಂಧವನ್ನು ಮಾತ್ರ ಪರಿಗಣಿಸುತ್ತೇವೆ. ಇದು ಇಂದಿನ ಕನ್ನಡದ ಅವನತಿಗೆ ಬಹುದೊಡ್ಡ ಕಾರಣವೆಂದೇ ನಾನು ತಿಳಿದಿದ್ದೇನೆ. ಈ ಅವಸ್ಥೆ ಸಂಸ್ಥೀಕರಣಗೊಂಡ ಯಾವುದೇ ವ್ಯವಸ್ಥೆಯನ್ನು ಕಾಡುವಂತೆ ನಲ್ವತ್ತು ವರ್ಷಗಳ ಹಿಂದೆ ನಮ್ಮ ಇಂಗ್ಲಿಷ್ ವಿಭಾಗಕ್ಕೂ ಅನ್ವಯಿಸುತ್ತಿತ್ತು ಎಂದೇ ನಾನು ನಂಬಿದ್ದೇನೆ. ಸಾಹಿತ್ಯ ಅಧ್ಯಯನ ಎನ್ನುವುದು ಅನುಭವದ ವಿಸ್ತರಣೆಗೆ ದ್ವಾರವಾಗದೆ, ಈಗಾಗಲೇ ಬಂದ ಮುದ್ರಿತ ಅಕ್ಷರಗಳಲ್ಲಿ ಕಳೆದುಹೋಗಿತ್ತು; ಅಧ್ಯಯನ ಎಂದರೆ ಪಿಷ್ಟಪೇಷಣ!

ಮಾಸ್ಟರ್ ಡಿಗ್ರಿಯ ಎರಡು ವರ್ಷದ ಉದ್ದಕ್ಕೂ ಇಲಾಖೆಗೆ ಪಠ್ಯೇತರ ಎಂಬ ವಿಚಾರವೇ ಅವಹೇಳನಕಾರಿಯಾಗಿ ಇದ್ದಂತಿತ್ತು. ಕನಿಷ್ಠ ಮಿತಿಗೆ ಪಾಠಪಟ್ಟಿ, ಅಧ್ಯಯನದ ವ್ಯಾಪ್ತಿ ವಿಶ್ವಮುಖಿ ಎನ್ನುವ ನನ್ನ ಭಾವ ಅಮೂರ್ತವಾಗಿಯೇ ಅಲ್ಲಿ ಚಡಪಡಿಸಿದ್ದು ಅಪಾರ (ಆಗ ಅನುಭವದ ಕೊರತೆಯಿಂದ ಇದನ್ನು ಕಂಡುಕೊಳ್ಳದಾಗಿದ್ದೆ). ಮಹಾರಾಜಾ ಕಾಲೇಜಿನಲ್ಲಿದ್ದಾಗಲೇ ಕರ್ಮವೀರ, ಉದಯವಾಣಿಯೇ ಮುಂತಾದ ಪತ್ರಿಕೆಗಳಲ್ಲಿ ಕೆಲವು, ಪತ್ರಿಕೋದ್ಯಮ ಇಲಾಖೆಯ ಪ್ರಯೋಗ ಪತ್ರಿಕೆಗೆ ಖಾಯಂ ಟಿಪ್ಪಣಿ, ಲೇಖನಗಳನ್ನು ಕೊಡುತ್ತಿದ್ದೆ. ಅದನ್ನು ಎಂಎ ಅವಧಿಯಲ್ಲೂ ಮುಂದುವರಿಸಿದೆ. ಶೇಕ್ಸ್‌ಪಿಯರ್ ಪಾಠ ಆಗುತ್ತಿದ್ದಾಗ, ನಮ್ಮ ಕಟ್ಟಡದ ಕೆಳಗೇ ನಿಂತುಕೊಂಡಿದ್ದ ಆಟೋರಿಕ್ಷಾ ಒಂದರ ರಿಪೇರಿ ನಡೆದಿತ್ತು. ನಾನು ಅಧ್ಯಾಪಕರ ಪ್ರವಚನಕ್ಕೆ ಕಿವುಡಾಗಿ ರಿಕ್ಷಾ ಅಂಡ್ ಶೇಕ್ಸ್ಪಿಯರ್ (ರಾಜಾರಾವ್ ಪುಸ್ತಕ ಕ್ಯಾಟ್ ಅಂಡ್ ಶೇಕ್ಸ್ಪಿಯರ್ ಸ್ಫೂರ್ತಿ!) ಲೇಖನ ಬರೆಯುತ್ತಿದ್ದೆ!

21 February 2014

ಗೊಡ್ಡೆಮ್ಮೆ ಪುರಾಣ

(ಮಾನಸಗಂಗೋತ್ರಿ ದಿನಗಳು ಭಾಗ ಎರಡು)

"೧೯೭೪ರಲ್ಲಿ ಅಂದರೆ ಸರೀ ನಲ್ವತ್ತು ವರ್ಷಗಳ ಹಿಂದೆ ನಾನೂ ಇಲ್ಲಿ ಈಗ ನಿಮ್ಮಂತೆಯೇ ಇದ್ದೆ ಎನ್ನುವ ಒಂದೇ ಯೋಗ್ಯತೆಯಿಂದ ಇಂದು ನಿಮ್ಮ ಮುಂದೆ ಮಾತಾಡಲು ನಿಂತಿದ್ದೇನೆ. ೧೯೭೨-೭೪ರ ಅವಧಿಯಲ್ಲಿ ನಾನು ಇಂಗ್ಲಿಷ್ ಎಂಎ ಮಾಡಿದ್ದು ಹೌದು. ಆದರೆ ನಾನು ಕಟ್ಟಿಕೊಂಡಿರುವುದು ಗೊಡ್ಡು ಎಮ್ಮೆ! ಸಣ್ಣ ತರಗತಿಗಳಲ್ಲಿದ್ದಾಗ ಉನ್ನತ ಓದು ಎಂಬ ಲಕ್ಷ್ಯ ಇರುವುದು ತಪ್ಪಲ್ಲ. ಶಾಲೆಯಲ್ಲಿ (ಬೆಂಗಳೂರು ಹೈಸ್ಕೂಲು) ಕೊನೆಯ ವರ್ಷ ಎನ್ನುವಾಗ ಏನೋ ಕೋಡು. ನನ್ನ ಕಾಲದಲ್ಲಿ ಪದವಿಪೂರ್ವ ಕಲಿಕೆ ಒಂದೇ ವರ್ಷವಿತ್ತು ಮತ್ತು ಅದು ಬೆಂಗಳೂರಿನ ಸರಕಾರೀ ಪ್ರಥಮ ದರ್ಜೆ ಕಾಲೇಜಿನ ( ಕಾಲದ ಗ್ಯಾಸ್ ಕಾಲೇಜು ಅರ್ಥಾತ್ ಗವರ್ನಮೆಂಟ್ ಸೈನ್ಸ್ ಅಂಡ್ ಆರ್ಟ್ಸ್ ಕಾಲೇಜು!) ಭಾಗವಾಗಿಯೇ ಇದ್ದುದರಿಂದ ಬಚ್ಚಾಗಳಾಗಿಯೇ ಇದ್ದೆವು! ಆದರೆ ಮೈಸೂರಿನ ಮಹಾರಾಜಾಕ್ಕೆ ಬಂದಾಗ ಕಾಲೇಜ್ ಫೈನಲ್ ಇಯರ್ ಎನ್ನುವ ಹಂತದಲ್ಲಿ ಒಂದು ಗತ್ತು,  ಕಲಿತು ಮುಗಿಯಿತು ಎನ್ನುವ ಭಾವ ತುಳುಕುತ್ತಿತ್ತು. ಅದೇ ಸ್ನಾತಕೋತ್ತರ ಕೇಂದ್ರ ಸೇರಿ ಶಿಖರ ಸಮೀಪಿಸುವಾಗ, ಅಂದರೆ ಡಬ್ಬಲ್ ಗ್ರಾಜುಯೇಟ್, ಇಡೀ ಜಗತ್ತೇ ನಮ್ಮನ್ನು ನೋಡುತ್ತಿದೆ ಎನ್ನುವ ಮನೋಸ್ಥಿತಿ ಹೆಚ್ಚು ಅಮಲಿನದು! ಆದರೆ ಅದು ಕಳೆದ ಮೇಲೆ ನಿಜ ಜೀವನರಂಗದ ಅಥವಾ ವೃತ್ತಿ ರಂಗದ ಶಿಖರಗಳು ಅನಾವರಣಗೊಳ್ಳತೊಡಗುತ್ತವೆ; ಅದುವರೆಗೆ ಗುಡ್ಡಕ್ಕೆ ಗುಡ್ಡ ಅಡ್ಡ! ವಿದ್ಯಾರ್ಥಿ ದೆಸೆಯ ಕಲಿಕೆಯೆಲ್ಲಾ ಬರಿಯ ಪ್ರವೇಶದ್ವಾರದ ಅಲಂಕಾರ. ಜೀವನದ ಹರಹಿನಲ್ಲಿ ವಿದ್ಯಾರ್ಥಿಜೀವನದ ಕಲಿಕೆ ಪುಟ್ಟ ಸಲಕರಣೆ ಮಾತ್ರ. ನೇರ ಬಳಸಿ (ಅಧ್ಯಾಪನ, ಸಂಶೋಧನೆ ಇತ್ಯಾದಿ) ಹೆಚ್ಚಿನದನ್ನು ಗಳಿಸಬಹುದು, ಬಿಟ್ಟಂತೆ ಕಂಡರೂ ಪರೋಕ್ಷ ಸಂಸ್ಕಾರದ ಬಲದಲ್ಲಿ ಯಶಸ್ವಿಯೂ ಆಗಬಹುದು. ನನ್ನ ವೃತ್ತಿ ರಂಗದ ಬಳಕೆಯಲ್ಲಿ ಎಂಎ ಇಂಗ್ಲಿಷ್ಗೆ ವಿಶೇಷ ಸ್ಥಾನವೇನೂ ಇರಲಿಲ್ಲ. ಹಾಗಾಗಿ ಇಲ್ಲಿ ಮಾತೃಸಂಸ್ಥೆಯ (ಅಲ್ಮಾಮೇಟರ್) ಮರ್ಯಾದೆಗೂ ನಾಲ್ಕು ತೊಟ್ಟು ಹಾಲು ಕೊಡದ ಗೊಡ್ಡು ಎಮ್ಮೆ. ಬಳಕೆ ತಪ್ಪಿದ ಇಂಗ್ಲಿಷಿನಲ್ಲಿ ಭಾವವಿಸ್ತರಣೆಗಿಳಿಯುವ ಬದಲು ಕನ್ನಡದಲ್ಲೇ ನಿಮ್ಮನ್ನು ಬೋರುತ್ತೇನೆ."

14 February 2014

ಮಾನಸಗಂಗೋತ್ರಿ ದಿನಗಳು

(ಭಾಗ ಒಂದು)
ಅಮ್ಮನ ಆರೈಕೆ ಎಂಬ ಪೀಠಿಕೆ

ಪ್ರಾಕೃತಿಕವಾಗಿ ನನ್ನಮ್ಮ (ಲಕ್ಷಿ ನಾ. ರಾವ್ ೧೯೩೦-) ಸದೃಢವಂತೆ, ನಿರೋಗಿ. ನನ್ನಪ್ಪನೂ (ಜಿ.ಟಿ ನಾರಾಯಣ ರಾವ್ - ೧೯೨೬-೨೦೦೮) ಸ್ವಲ್ಪ ಮಟ್ಟಿಗೆ ಹಾಗೇ - ಸದಾ ಶೀತಪ್ರವೃತ್ತಿಯೊಂದನ್ನು ಹೊರತುಪಡಿಸಿ! ಸೋರುಮೂಗು, ನಾಸಾಬಂದ್, ಕೆಮ್ಮು ಸಂಬಂಧಗಳಲ್ಲಿ ಅಪ್ಪ ಮಾಡದ ಪ್ರಯೋಗಗಳಿಲ್ಲ (ಹೊಮಿಯೋಪಥಿ, ರಾತ್ರಿ ನಿದ್ರಿಸುವ ಮುನ್ನ ಮೂಗಿಗೆ ಬಿಸಿ ತುಪ್ಪ, ಪ್ರಾಣಾಯಾಮ, ನೇತಿ, ರೇಕಿ, ಗಿಡಮೂಲಿಕೆಗಳ ಹಲವು ಬಗೆ ಮತ್ತವುಗಳ ಹಲವು ರೂಪ - ನೇರ ಸೇವನೆ, ಪರಿಷ್ಕರಣೆ, ಲೇಪನೆ ಇತ್ಯಾದಿ). ವ್ಯರ್ಥ ಕದನದ ಹತಾಶಾ ಶಿಖರದಲ್ಲಿ, ಅಂದರೆ ಸುಮಾರು ಹತ್ತು ವರ್ಷಗಳ ಹಿಂದೊಮ್ಮೆ ಅವರು ಭವರೋಗ ಧನ್ವಂತರಿಯೇ ಸರಿ ಎಂದು ನಂಬಿದ್ದ ಓರ್ವ ಯಮ.ಬಿ.ಬೀ.ಯೆಸ್ ವೈದ್ಯ ಹೆಚ್ಚುಕಮ್ಮಿ ಮರಣಾಂತಿಕವಾಗಿ ವಂಚಿಸಿದ್ದ. ಒಂದು ಕಾಲು ಗೋರಿಯೊಳಗೆ ಎಂದೇ ಹೊರಟಿದ್ದ ಅಪ್ಪನನ್ನು ನಿಜಪರಿಣತ ವೈದ್ಯರಿನ್ನೊಬ್ಬರು (ಮೈಸೂರಿನ ಬೀಯೆಮ್ಮೆಸ್ಸ್ ಆಸ್ಪತ್ರೆಯ ಡಾ| ಕುದರಿ) ಇತ್ತ ಎಳೆದು ತಂದಿದ್ದರು. ಆಗ ಸುಮಾರು ಒಂದೂವರೆ ತಿಂಗಳು ಆಸ್ಪತ್ರೆವಾಸ ಮತ್ತೆ ಮನೆಯಲ್ಲೂ ಮುಂದುವರಿದ ಅಪ್ಪನ ಆರೈಕೆಯನ್ನು ಸತಿ ಸಾವಿತ್ರಿಯಂತೇ ಮಾಡಿದವಳು ಅಮ್ಮ. ಆದರೆ ಅಪ್ಪನ ಆರೈಕೆಯಲ್ಲಿ ಸ್ವಂತದ ಪ್ರಾಯ (ಅಪ್ಪನಿಗಿಂತ ನಾಲ್ಕೇ ವರ್ಷಕ್ಕೆ ಸಣ್ಣಾಕೆ), ಅನುಪಾನ ಮತ್ತು ವಿಶ್ರಾಂತಿಗಳನ್ನು ಏರುಪೇರು ಮಾಡಿಕೊಂಡು ಬಳಲಿದ ಅಮ್ಮನಿಗೆ ಗಂಟುವಾತದ ಅನಪೇಕ್ಷಿತ ಸಂಬಂಧ ಕುದುರಿಕೊಂಡಿತು. ಅದರ ವಿವರಗಳು ಯಾವುದೇ ದೀರ್ಘ ಕಾಲೀನ ಕಾಯಿಲೆಗಳನ್ನು  ಅನುಭವಿಸುವವರದ್ದಕ್ಕಿಂತ ಭಿನ್ನವಿರಲಾರದು. ಹಾಗಾಗಿ ಅಂಥ ಅನುಭವ ಇರುವವರಿಗೆ ನಾನಿಲ್ಲಿ ಹೇಳುವ ಅಗತ್ಯವಿಲ್ಲ, ಇತರರಿಗೆ ಹೇಳಿ ಪ್ರಯೋಜನವಿಲ್ಲ! ಸುಮಾರು ಹತ್ತು ವರ್ಷಗಳ ಉದ್ದಕ್ಕೆ ಅನಪೇಕ್ಷಿತ ಅತಿಥಿಯನ್ನುಸಾಕಿಕೊಂಡು ಅಮ್ಮ ನಡೆಸಿದ ಪ್ರಯೋಗಗಳು ಅಪ್ಪನದ್ದರಂತೇ ವೈವಿಧ್ಯಮಯವಾದರೂ ಅನುಭವಿಸುತ್ತಿರುವ ನೋವು ಖಂಡಿತವಾಗಿಯೂ ತೀವ್ರ ಹಾಗೂ ದೀರ್ಘತಮ.