Showing posts with label ಅಮೆದಿಕ್ಕೆಲ್. Show all posts
Showing posts with label ಅಮೆದಿಕ್ಕೆಲ್. Show all posts

02 September 2016

ದಿಕ್ಕೆಲ್ ಕಲ್ಲಿಗೆ ಲಗ್ಗೆ

(ಮೂರು ಭಾಗಗಳ ಸಾಹಸ ಕಥನ – ಅಸಾಧ್ಯ ಅಮೆದಿಕ್ಕೆಲ್ಲಿನ ಅಂತಿಮ ಭಾಗ)
ನನ್ನ ಚಾರಣಗಳು ಹಳ್ಳಿ, ಕುಗ್ರಾಮಗಳನ್ನು ದಾಟಿಯೇ ಇರುತ್ತಿದ್ದವು ನಿಜ. ಆದರೆ ಆ ಸಂದರ್ಭಗಳಲ್ಲಿ ಸ್ಥಳೀಯ ಜನ ಮತ್ತು ಜನಪದಗಳನ್ನು ನಮ್ಮ ಮಾರ್ಗದರ್ಶನದ ಆವಶ್ಯಕತೆಗಿಂಥ ಹೆಚ್ಚಿಗೆ ನಾನು ಬಳಸಿಕೊಂಡವನಲ್ಲ, ವಿಶೇಷ ಆಸಕ್ತಿಯೂ ತೋರಿದವನಲ್ಲ. ಅವುಗಳ ಕುರಿತು ನನಗೆ ಕುತೂಹಲವಿರುತ್ತಿತ್ತು, ಆದರೆ ನನ್ನ ವೃತ್ತಿಯ ಸಮಯಮಿತಿಯಲ್ಲಿ ಪ್ರಾಕೃತಿಕ ಸತ್ಯಗಳನ್ನು ಮೀರಿದ ಇನ್ಯಾವುದರಲ್ಲೂ ತೊಡಗಿಕೊಳ್ಳಲು ನನಗೆ ಕಷ್ಟವೇ ಆಗುತ್ತಿತ್ತು; ಖಂಡಿತಕ್ಕೂ ತಿರಸ್ಕಾರವಿರಲಿಲ್ಲ. ಹಾಗೆ ಉಪಯುಕ್ತತೆಯನ್ನಷ್ಟೇ ಲೆಕ್ಕ ಹಾಕಿ ಉಳಿದುಕೊಂಡ ಸಂಬಂಧಗಳು ಮಾತ್ರ ಬಹುತೇಕ ಗಾಢವಾಗಿರುತ್ತಿತ್ತು. ಅಂಥಾ ಸಂಬಂಧಗಳಲ್ಲಿ ಅಮೆದಿಕ್ಕೆಲ್ ನೆಪದಿಂದ ಒದಗಿದ ನೆರಿಯ ಹೆಬ್ಬಾರರ ಕುಟುಂಬದ ಪರಿಚಯ, ನನಗೆ ಹೆಚ್ಚು ಸ್ಮರಣೀಯವಾಗಿರುವುದು ವನ್ಯಬಂಧದಿಂದ.

ನಾನು ಸುಮಾರು ೧೯೭೪ರಿಂದ ೧೯೮೫ರವರೆಗೆ, ಅಂದರೆ ನನ್ನ ಮಂಗಳೂರು ವಾಸದ ಮೊದಲ ದಿನಗಳಲ್ಲಿ ಕೇವಲ ಸಾಹಸ ಚಟುವಟಿಕೆಗಳ ತೋರಗಾಣ್ಕೆಯ ದಿನಚರಿ ಪುಸ್ತಕವನ್ನೇ ಇಟ್ಟಿದ್ದೆ. ಅದು ಡೈರಿಯೊಂದರಲ್ಲಿ ಯಾವ ಔಪಚಾರಿಕ ಅಂಚುಗಳನ್ನೂ ಉಳಿಸದೆ ಒತ್ತೊತ್ತಾಗಿ ತುಂಬಿದ, ಕೇವಲ ಟಿಪ್ಪಣಿ ರೂಪದ ದಾಖಲೆಯಾದರೂ ಸುಮಾರು ಎಪ್ಪತ್ತು ಪುಟಗಳಷ್ಟಿದೆ. ಮುಂದೆ, ಅಂದರೆ ಸುಮಾರು ೧೯೮೫ರಿಂದ ೨೦೦೦ದವರೆಗೆ ನನ್ನದೇ ನಕ್ಷೆಯೊಡನೆ ಅಂಕಿಸಂಕಿಗಳಕಾರ್ಡುಗಳನ್ನು ಮಾಡುತ್ತ ಬಂದೆ.

26 August 2016

ಚಾರ್ಮಾಡಿಯಿಂದ ಶಿರಾಡಿಗೆ


ಅಸಾಧ್ಯ ಅಮೆದಿಕ್ಕೆಲ್  ಸಾಹಸ ಕಥನಮಾಲಿಕೆಯಲ್ಲಿ ಎರಡನೇ ಭಾಗ

ಆರೋಹಣದ ಮಿತ್ರ ಬಳಗದಲ್ಲಿ ಆನೆಗಾವಲಿನ ಅಮೆದಿಕ್ಕೆಲ್ ಸವಾಲು ಎಸೆದೆ. ಪತ್ರಿಕೆಯ ಓದುಗರ ಅಂಕಣದಲ್ಲಿ ಎರಡೆರಡು ಕರೆ ಕೊಟ್ಟೆ – “ಚಾರ್ಮಾಡಿ – ಶಿರಾಡಿ ಚಾರಣಕ್ಕೆ ಬನ್ನಿ!” ಪರಿಚಿತ ಪ್ರಾಂಶುಪಾಲ, ಅಧ್ಯಾಪಕರ ಮೂಲಕ ಕೆಲವು ಕಾಲೇಜುಗಳ ವಿದ್ಯಾರ್ಥಿ ವೃಂದಕ್ಕೂ ಸಾಹಸಾವಕಾಶ ಮುಕ್ತಗೊಳಿಸಿದೆ. ನಾಡಿನ ವಿವಿಧ ಮೂಲೆಗಳಿಂದ, ಹಲವು ಜೀವನ ಸ್ತರದವರ ಪ್ರತಿಕ್ರಿಯೆ ಬಂತು. ನನ್ನ ಬಳಗದವರೇ (ಆರೋಹಣ ಪರ್ವತಾರೋಹಿಗಳು, ಸಾಹಸಿಗಳು) ಆದ ಪಾಲಿಟೆಕ್ನಿಕ್ ವಿದ್ಯಾರ್ಥಿ ಸಮೀರ ರಾವ್ ಮತ್ತು ಆತನ ತಮ್ಮ ಇನ್ನೂ ಪ್ರೌಢಶಾಲಾ ವಿದ್ಯಾರ್ಥಿ ಶೌರಿ ರಾವ್ ಮೊದಲು ನಾವಿದ್ದೇವೆ ಎಂದರು. ಮೀನುಗಾರಿಕಾ ಕಾಲೇಜಿನ ಲೋಕೇಶರಿಗೆ ಬಿಡುವಾಗದಿದ್ದರೂ ಅವರ ಅಧ್ಯಾಪಕ, ಹಾಸನ ಮೂಲದ ಶ್ರೀಕಂಠಯ್ಯ, ತಾನು ಕಡಿಮೆಯವನಲ್ಲ ಎಂದು ಸೇರಿಕೊಂಡರು. ಪಶ್ಚಿಮ ಘಟ್ಟಮಾಲೆಯ ತಪ್ಪಲಿನ ಮಾಳದವರೇ ಮುಕುಂದ ಚಿಪ್ಲೂಣಕರ್. ಕಾರ್ಪೊರೇಶನ್ ಬ್ಯಾಂಕಿನ ನೌಕರಿಯ ನೆಪದಲ್ಲಿ ಊರೂರು ತಿರುಗಿದವರು. ಅಲ್ಲೆಲ್ಲ ಮಾತು ಬರುವಾಗ, ಹೇಳಿಕೊಳ್ಳಲು ತಮ್ಮದೇ ಘಟ್ಟಮಾಲೆಯ ದಿಗ್ಗಜಗಳನ್ನು ಏರಿ ಅನುಭವಿಸಿಲ್ಲ ಎಂಬ ಕೊರಗು ಹೆಚ್ಚಿತ್ತಂತೆ. ಅದಕ್ಕೆ ಪರಿಹಾರವೆನ್ನುವಂತೆ ಮುಕುಂದ ಮೊದಲ ಸಮಯಾನುಕೂಲ ನೋಡಿಕೊಂಡು ಮಂಗಳೂರಿಗೇ ಬಂದು ನನ್ನಲ್ಲಿ ಹೆಸರು ದಾಖಲಿಸಿದ್ದರು.

19 August 2016

ಅಸಾಧ್ಯ ಅಮೆದಿಕ್ಕೆಲ್

(ಮೂರು ಭಾಗಗಳ ಸಾಹಸ ಕಥನದಲ್ಲಿ ಪ್ರಥಮ ಭಾಗ)
ಉತ್ತರನ ಸಾಹಸ!

ಪುತ್ತೂರಿನ ಹಿರಿಯ ವಕೀಲ, ನನ್ನ ಸೋದರಮಾವ ಗೌರೀಶಂಕರರ ಗೆಳೆಯ-ಸಹೋದ್ಯೋಗಿ, ಸಾಹಿತ್ಯ, ಸಂಗೀತ, ಇತಿಹಾಸ, ನಕ್ಷಾಶಾಸ್ತ್ರವೇ ಮೊದಲಾದ ಹತ್ತೆಂಟು ಮುಖಗಳಲ್ಲಿ ತೀವ್ರ ಆಸಕ್ತ, ಹಿರಿಯ ಮಿತ್ರ - ಬಂದಾರು ಶ್ರೀಪತಿರಾಯರು ೧೯೭೫ರಲ್ಲಿ ಮಂಗಳೂರಿನಲ್ಲಿ ಅತ್ರಿ ಬುಕ್ ಸೆಂಟರ್ ತೆರೆದಾಗ ಸಂಭ್ರಮಿಸಿದ್ದು ಸಹಜವೇ ಇತ್ತು. ಅವರ ಸೀಮಿತ ಹಣಕಾಸು, ಅವರನ್ನು ಅಂಗಡಿಯ ದೊಡ್ಡ ಗಿರಾಕಿಯೇನೂ ಮಾಡಲಿಲ್ಲ. ಆದರೆ ಅವರ ಶ್ರೀಮಂತ ಮನಸ್ಸು, ಅವರ ಮಂಗಳೂರು ಭೇಟಿಗಳಲ್ಲಿ `ಅತ್ರಿ ವಿಹಾರ’ವನ್ನು ಮಾತ್ರ ಕಡ್ಡಾಯ ಕಲಾಪ ಮಾಡಿತ್ತು. ಅವರು ಯಥಾನುಶಕ್ತಿ ಖರೀದಿ ಅವಶ್ಯ ಮಾಡುತ್ತಿದ್ದರು. ಅದಕ್ಕೂ ಮಿಗಿಲಾಗಿ ಹಾಗೆ ಬಂದಾಗೆಲ್ಲಾ ನನ್ನ  ಬೆಟ್ಟಕಾಡುಗಳ ಹುಚ್ಚಿಗೊಂದಿಷ್ಟು ಸುಳುಹು, ನಕ್ಷೆಗಳ ಕಿಚ್ಚಿಟ್ಟು ಹೋಗುತ್ತಿದ್ದರು. ಹಾಗೇ ಒಮ್ಮೆ “ಹತ್ತಿದರೆ ಅಮೆದಿಕ್ಕೆಲ್ ಅಯ್ಯ, ಒಂದು ಶಿಖರ” ಎಂದು ಉದ್ಗರಿಸಿದ್ದಿತ್ತು. ಮತ್ತೆ ರಾಯರು ಆವಿಷ್ಟರಾಗಿ ಅಂಗಡಿಯ ಗೀಚು-ಕಾಗದದ ಹರಕಿನ ಮೇಲೆ ನನ್ನದೇ ಪೆನ್ನು ಇಟ್ಟು ಗೆರೆ ಎಳೆಯುತ್ತಿದ್ದಾಗ ಬೆಳ್ತಂಗಡಿಯ ಕಗ್ಗಾಡಮೂಲೆ - ಶಿಶಿಲದಲ್ಲೇ ನಿಂತಂತಿದ್ದರು. ಉತ್ತರಮುಖಿಯಾಗಿ ನಿಂತು, ಕತ್ತೆತ್ತಿ ಸುದೂರದಲ್ಲಿ ಗಗನಕ್ಕಂಟಿದಂತಿದ್ದ ದಿಕ್ಕೆಲ್ ಕಲ್ಲನ್ನೇ ದಿಟ್ಟಿಸುತ್ತ ಆ ಮಹಾಮೇರುವಿನ ನಿಖರ ಸೂಕ್ಷ್ಮ ಬಳಕುಗಳನ್ನೇ ಕಾಗದದ ಸಣ್ಣ ಆಯಕ್ಕಿಳಿಸಿದ್ದರು!