Showing posts with label ಜಿ.ಟಿ. ನಾರಾಯಣ ರಾವ್. Show all posts
Showing posts with label ಜಿ.ಟಿ. ನಾರಾಯಣ ರಾವ್. Show all posts

03 July 2020

ಜಿಟಿ ನಾರಾಯಣ ರಾವ್ - ನನಗೆ ದಕ್ಕಿದ್ದು!

ಜಾತಿ ಮತಗಳ ಚಕ್ರ ಸುಳಿ ಮೀರಿ - ೬


ಹುಟ್ಟಿನ ಆಕಸ್ಮಿಕದೊಡನೇ ಸಮಾಜದಲ್ಲಿ ಬಹುತೇಕರ ಅಪ್ಪ, ಅಮ್ಮ, ಅಣ್ಣ, ಅಜ್ಜಿ ಇತ್ಯಾದಿ ಅನೇಕ ಭೌತಿಕ ಸ್ಥಾನಗಳೂ ಭಾವನಾತ್ಮಕ ಜವಾಬ್ದಾರಿಗಳೂ ಸೇರಿಕೊಳ್ಳುತ್ತವೆ. ಅವನ್ನು ಹೊರತುಪಡಿಸಿ ಒಂದು ವ್ಯಕ್ತಿತ್ವವನ್ನು ರೂಪಿಸುವ ಪ್ರಭಾವಗಳನ್ನು ಸೋದಾಹರಣವಾಗಿ ಕಾಣಿಸುವ ಉದ್ದೇಶಕ್ಕೇ ಈ ಮಾಲಿಕೆಯನ್ನು ಮೀಸಲಾಗಿರಿಸಿದೆ. ಅದು ಒಂದು ಮಿತಿಯ ಆತ್ಮಕಥನವೂ ಆದದ್ದು ಆಕಸ್ಮಿಕ. ಆದರೆ ಈ ಕೊನೆಯಲ್ಲಿ, ನಾನು ‘ಮೀರಿದವು’ ಅಥವಾ ಸ್ವತಂತ್ರವೆಂದು ನಂಬಿದ ಪ್ರಭಾವಗಳೂ ಬಹುತೇಕ ‘ಮೂಲ ಆಕಸ್ಮಿಕ’ದ ಭಾಗವೇ ಆಗಿರುತ್ತದೆ ಎಂದರಿವಾಯ್ತು. ಅಂಥಾ ತಂದೆಯನ್ನೇ ತಿಳಿದುಕೊಳ್ಳುವ ಪ್ರಯತ್ನದೊಡನೆ, ನನ್ನ ವಿದ್ಯಾರ್ಥಿ ದಿನಗಳ ಉದಾಹರಣೆಗೇ ಸರಣಿಯನ್ನು ಮುಗಿಸುತ್ತಿದ್ದೇನೆ. 

30 October 2017

ಉಣಿಸೊಂದು ಹೊರೆಯಿವಗೆ

(ಸಹಪಾಠಿ ಮಿತ್ರರು ಕಂಡ ಬಾಗಲೋಡಿ - ೩ರ ಉತ್ತರಾರ್ಧ)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
(ಭಾಗ ೮)
- ಜಿ.ಟಿ. ನಾರಾಯಣ ರಾವ್
ಕ್ರಿಶ್ಚಿಯನ್ ಕಾಲೇಜ್ ಹಾಸ್ಟೆಲ್ಲಿನ ಪುಷ್ಕಳ ಪೌಷ್ಟಿಕ ರುಚಿಕರ ಆಹಾರ ಸೇವನೆಯೂ ದೇವರಾಯರ ಎತ್ತರ, ಸುತ್ತಳತೆ ಅಥವಾ ಭಾರ ವೃದ್ಧಿಸಲು ಶಕ್ತವಾಗಲಿಲ್ಲ. ಅತಿ ಕ್ಷಿಪ್ರ ವೇಳೆಯಲ್ಲಿ ಅತ್ಯಲ್ಪ ಆಹಾರ ಸೇವನೆ, "ಬದುಕುವ ಓದುವ ಬರೆಯುವ ಎಲ್ಲ ಸಂತೋಷಕ್ಕಾಗಿ ಈ ತೊಂದರೆ ಅನುಭವಿಸಬೇಕು ನೋಡಿ!"
ಅವರ ಹೊಟ್ಟೆಯನ್ನೂ ಮಿದುಳು ಮೇದು ವಿಜೃಂಬಿಸುತ್ತಿದ್ದ ದೃಶ್ಯ ಕಂಡಾಗಲೆಲ್ಲ ಹುಟ್ಟಾ ಹೊಟ್ಟೆಬಾಕನೂ ತಿಂಡಿಪೋತನೂ ಆದ ನಾನು ಕೆಣಕುವುದಿತ್ತು. "ದಡ್ಡನಾದರೂ ದೊಡ್ಡನಾಗಿರಬೇಕು, ನನ್ನಂತೆ!"
"ಆತ್ಮ ಭರ್ತ್ಸನೆ ಸಲ್ಲದು. ಪರನಿಂದನೆ ಕೂಡ. ಅವರವರ ಸುಖದು:ಖ ಅವರವರಿಗೆ," ಅವರ ನಯ ನಿರಾಕರಣೆ. ಎಂದೂ ಅಣಕವಾಡಿದವರಲ್ಲ, ಮುಂದೆ ಅವರವರ ಸುಖದುಃಖ ಎಂಬ ಕತೆಯನ್ನೂ ಬರೆದರು. ನಿಜ; ಮುಪ್ಪಿನ ಷಡಕ್ಷರಿ ವಚನ -
ಅವರವರ ದರುಶನಕೆ
ಅವರವರ ವೇಷದಲಿ
ಅವರವರಿಗೆಲ್ಲ ಗುರು ನೀನೊಬ್ಬನೆ
ಅವರವರ ಭಾವಕ್ಕೆ
ಅವರವರ ಪೂಜೆಗಂ
ಅವರವರಿಗೆಲ್ಲ ಶಿವ ನೀನೊಬ್ಬನೆ


23 October 2017

ವಾಮನಮೂರ್ತಿ ತ್ರಿವಿಕ್ರಮ ಕೀರ್ತಿ

(ಸಹಪಾಠಿ ಮಿತ್ರರು ಕಂಡ ಬಾಗಲೋಡಿ ೩)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
(ಭಾಗ ೭)
- ಜಿ.ಟಿ. ನಾರಾಯಣ ರಾವ್
ದೂರದರ್ಶನ:
೧೯೪೦ರ ದಶಕಾರಂಭದಲ್ಲಿ ಕೊಡಗಿನಲ್ಲಿದ್ದುದು ಕೇವಲ ಮೂರು ಪ್ರೌಢಶಾಲೆಗಳು. ಮಡಕೇರಿಯಲ್ಲಿ ಎರಡು, ವಿರಾಜಪೇಟೆಯಲ್ಲಿ ಒಂದು. ಇವು ಮದ್ರಾಸ್ ಸರ್ಕಾರದ ಶಿಕ್ಷಣ ಮಂಡಳಿಗೆ ಸಂಯೋಜಿತವಾಗಿದ್ದುವು.

ಮಡಿಕೇರಿ ಸೆಂಟ್ರಲ್ ಹೈಸ್ಕೂಲಿನಿಂದ ನಾನು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಕೊಡಗು ಪ್ರಥಮನಾಗಿ ಉತ್ತಾರಿಸಿದೆ (೧೯೪೨). ಅದೇ ಜೂನಿನಲ್ಲಿ ಮಂಗಳೂರು ಸಂತ ಅಲೋಶಿಯಸ್ ಕಾಲೇಜಿಗೆ ದಾಖಲಾದೆ. ಜೂನಿಯರ್ ಇಂಟರ್ಮೀಡಿಯೆಟ್ ಪಿಸಿಎಂ (ಭೌತ - ರಸಾಯನ - ಗಣಿತ ವಿಜ್ಞಾನಗಳು) ಜೋಡಣೆ. ಆಗ ಮೊದಲ ಭ್ರಮನಿರಸನವಾಯಿತು; ಸುಮಾರು ೧೦೦ ಯುವಚೇತನಗಳ ಈ ಸಮುದಾಯದಲ್ಲಿ ನನ್ನ ನೆಲೆ ೫೦ರ ಒಳಗೂ ಇರಲಿಲ್ಲ! ಕೊಡಗು ಪ್ರಥಮ ಮಂಗಳೂರು ಅಂತಿಮ!

29 July 2016

ಜಿಟಿನಾರಾಯಣ ರಾವ್ ಹಿನ್ನುಡಿ

ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ  ಹತ್ತೊಂಬತ್ತನೇ ಅಧ್ಯಾಯ
[ಅತ್ರಿ ಬುಕ್ ಸೆಂಟರಿನ ಪ್ರಕಾಶನ ವಿಭಾಗದೆಲ್ಲ ಪ್ರಕಟಣೆಗಳಿಗೂ ಅಘೋಷಿತ ಸಂಪಾದಕರೇ ಆಗಿದ್ದ ನನ್ನ ತಂದೆ ಜಿ.ಟಿ. ನಾರಾಯಣರಾವ್ ಪುಸ್ತಕ ಮಾರಾಟ ಹೋರಾಟಕ್ಕೆ ಬರೆದ ಸಂಪಾದಕೀಯ. ]


ಪ್ರಸ್ತುತ ಪುಸ್ತಕಕರ್ತೃವಿನ ತಂದೆಯಾಗಿ ಮತ್ತು ತನ್ನ ವೃತ್ತಿ ಜೀವನದ ದಿನಗಳಂದು ಒಬ್ಬ ಗೌರವ-ಪುಸ್ತಕ ವ್ಯಾಪಾರಿಯಾಗಿ ನಾನು ಈ ನಾಲ್ಕು ಸೂತ್ರವಾಕ್ಯಗಳನ್ನು ಪೋಣಿಸುವುದು ಉಚಿತ ಮತ್ತು ಅಪೇಕ್ಷಣೀಯ ಎಂದು ಭಾವಿಸಿದ್ದೇನೆ.

`ಸವಾಲನ್ನು ಎದುರಿಸುವ ಛಲ’ ಎಂಬ ನನ್ನ ಪುಸ್ತಕದಲ್ಲಿ [೧೯೯೩ರ ಅತ್ರಿ ಬುಕ್ ಸೆಂಟರಿನ ಪ್ರಕಟಣೆ. ಸದ್ಯ ಅಭಿನವ ಪ್ರಕಾಶನ, ಬೆಂಗಳೂರು ಮರುಮುದ್ರಣ ತಂದಿದೆ] ಪ್ರಕಟವಾಗಿರುವ ಒಂದು ಶೀರ್ಷಿಕೆ: ಸಹಕಾರದಲ್ಲಿ ಒಂದು ಪ್ರಯೋಗ – ಮೌಲ್ಯ – ವಾಸ್ತವತೆ ಸಂಘಟ್ಟನೆ. ಈ ಲೇಖನ ಬರೆದ ವರ್ಷವೇ - ೧೯೭೫, ನಮ್ಮ ಮಗನ `ಅತ್ರಿ ಬುಕ್ ಸೆಂಟರ್’ ಪುಸ್ತಕ ಮಳಿಗೆ ಪ್ರಾರಂಭವಾದದ್ದು ಕೇವಲ ಆಕಸ್ಮಿಕ. ಆ ಲೇಖನದ ಸಮಾರೋಪ:

20 November 2015

ಜಿ ಟಿ ಎನ್ – ಕೆಲವು ನೆನಪುಗಳು

ಎ.ವಿ. ಗೋವಿಂದರಾವ್

[ಸಂಪಾದಕೀಯ: ಎರಡು ತಿಂಗಳ ಹಿಂದೆ ರವೀಂದ್ರ ಭಟ್ಟ ಮಾವಖಂಡ ಕರ್ನಾಟಕ ಸರ್ಕಾರ ಪ್ರಣೀತ `ಕಣಜ’ದ ಸೇತು ಕೊಟ್ಟು, “ಇಲ್ಲಿರುವ ಜಿಟಿನಾ (ನನ್ನ ತಂದೆ) ಹುಟ್ಟಿದ ದಿನಾಂಕ ತಪ್ಪಲ್ಲವೇ” ಎಂದು ವಿಚಾರಿಸಿದರು. “ಹೌದು” ಎನ್ನುವುದರೊಡನೆ ಆ ಟಿಪ್ಪಣಿಯಲ್ಲಿದ್ದ ಇನ್ನಷ್ಟು ತಪ್ಪುಗಳನ್ನು ಗುರುತಿಸಿ, ಒಪ್ಪೋಲೆ ತಯಾರಿಸಿ ಕಣಜಕ್ಕೇ ಪ್ರತಿಕ್ರಿಯಿಸಿದೆ. (ತಿದ್ದುಪಡಿ ಇಂದಿನವರೆಗೂ ಆಗಿಲ್ಲ :-( ಅದಂತಿರಲಿ.) ಹಾಗೆ ಆ ಲೇಖನ ಶುದ್ಧ ಮಾಡುವ ಜಾಲಾಟದಲ್ಲಿ ಒಂದಾನೊಂದು ಕಾಲದಲ್ಲಿ ತಂದೆಯ ಶಿಷ್ಯ (ಸಂಬಂಧಿಯೂ ಹೌದು), ಮುಂದೆ ಆತ್ಮೀಯ ಗೆಳೆಯನಾಗಿಯೂ ಒದಗಿದ ಎ.ವಿ. ಗೋವಿಂದ ರಾವ್ ಅವರ ಜಾಲತಾಣಕ್ಕೆ (ಎವಿಜಿ ವಿಚಾರಲಹರಿಆಕಸ್ಮಿಕವಾಗಿ ಮರುಭೇಟಿ ಕೊಟ್ಟೆ.

ಅಲ್ಲಿ ಸುಮಾರು ಮೂರು ವರ್ಷಗಳ ಹಿಂದೆ ಎರಡು ಕಂತಿನಲ್ಲಿ ಗೋವಿಂದರಾಯರು ತಂದೆಯ ಬಗ್ಗೆ ಬರೆದ ಸ್ಮೃತಿ-ಟಿಪ್ಪಣಿಗಳನ್ನು ಮತ್ತೆ ಓದಿ ಸಂತಸಪಟ್ಟೆ. ಜತೆಗೆ ಅವರ ಜಾಲತಾಣದ ಸಂದರ್ಶಕ ಬಳಗಕ್ಕಿಂತಲೂ ಭಿನ್ನವಾದ ಮತ್ತು ತುಸು ಹೆಚ್ಚೂ ಇರುವ ನನ್ನ ಜಾಲತಾಣದಲ್ಲಿ ಯಾಕೆ ಮರುಪ್ರಕಟಿಸಬಾರದು ಎಂಬ ಯೋಚನೆ ಬಂತು, ಕೇಳಿದೆ, `ಗೋವಿಂದನ ದಯೆ ತಥಾಸ್ತು’ ಎಂದಿತು! ಎರಡು ದಿನ ಬಿಟ್ಟು ಮತ್ತೆ ನಾಲ್ಕು ಹೊಸ ನೆನಪಿನ ತುಣುಕುಗಳನ್ನೂ ನಾನು ಬಯಸಿದಂತೆ ಕೆಲವು ಹಳಗಾಲದ ಚಿತ್ರಗಳನ್ನೂ ಸೇರಿಸಿ ಗೋವಿಂದರಾಯರು ಕಳಿಸಿಕೊಟ್ಟರು. ಅಲ್ಲರಳಿದ ಅಲರುಗಳನ್ನು ಇಲ್ಲಿ ಸೂಡುವ ಸಂತೋಷ ನನ್ನದು. ಇನ್ನು ಆಘ್ರಾಣಿಸುವ ರಸಿಕರು – ನಿಮಗೆ, ಬಿಟ್ಟಿದ್ದೇನೆ - ಅಶೋಕವರ್ಧನ]

26 June 2015

ಜಿ.ಟಿ.ಎನ್ : ಮುಗಿದ ಪಯಣ


[ತಿಂಗಳ ಹಿಂದೆ ಗೆಳೆಯ ಕೆ.ಎಸ್.ನವೀನ್ ಚರವಾಣಿಸಿ “ಅನಂತರಾಮು ಜಿಟಿಎನ್ ಬಗ್ಗೆ ಬರೆದ ಲೇಖನ ನಿಮ್ಮಲ್ಲಿದೆಯೇ” ಕೇಳಿದ್ದರು. ನನ್ನಲ್ಲಿರಲಿಲ್ಲ, ನಾನು ನೋಡಿಯೂ ಇರಲಿಲ್ಲ. ಎರಡು ವಾರದ ಹಿಂದೆ ಮಾಯೆಯಲ್ಲಿ ಎಂಬಂತೆ ಸ್ವತ: ಅನಂತರಾಮು ಅವರೇ ನನ್ನನ್ನು ಮಿಂಚಂಚೆ ಮೂಲಕ, ಇದೇ ಮೊದಲು, ಸಂಪರ್ಕಿಸಿದರು, ಈ ಲೇಖನವನ್ನು ವಿಶ್ವಾಸಪೂರ್ವಕವಾಗಿ ಕಳಿಸಿದ್ದರು! ಅನಂತರ ತಿಳಿದಂತೆ ನಡೆದದ್ದಿಷ್ಟು: (ನನ್ನ ಮಗ) ಅಭಯಸಿಂಹ ಮತ್ತು ಗೆಳೆಯರು ತಮ್ಮ ಸಂಚಿ ಟ್ರಸ್ಟಿನ ಜ್ಞಾನಸರಣಿ ಭಾಷಣ ಮಾಲಿಕೆಯಲ್ಲಿ ಮೂರನೇ ವಿಷಯವಾಗಿ `ಕುದಿಯುತ್ತಿರುವ’ ಬೆಂಗಳೂರ ಕೆರೆಗಳನ್ನಾರಿಸಿಕೊಂಡಿದ್ದರು. ಇದಕ್ಕೆಂದು ಕನ್ನಡದ ಜನಪ್ರಿಯ ವಿಜ್ಞಾನ ಲೇಖಕರಾದ ನಾಗೇಶ ಹೆಗಡೆಯವರನ್ನು ವಾರದ ಹಿಂದೆಂದೋ ಸಂದರ್ಶಿಸಿದ್ದೂ ನನಗೆ ತಿಳಿದಿತ್ತು. ಅಂದು (೬-೬-೧೫) ಬೆಳಗ್ಗೆ ಅನಂತರಾಮು ಅವರನ್ನು ಸಂದರ್ಶಿಸಿದ್ದು ನನಗೆ ತಿಳಿದಿರಲಿಲ್ಲ. ಸಂದರ್ಶನ ಚೆನ್ನಾಗಿಯೇ ಆಯ್ತು. ಆಗ ಪ್ರಾಸಂಗಿಕವಾಗಿ ಅನಂತರಾಮು ಅವರಿಗೆ, ಅಭಯ ಜಿಟಿಎನ್ ಮೊಮ್ಮಗನೆಂದು ತಿಳಿಯಿತಂತೆ. ಆಗ ಅವರಿಗಾದ ಸಂತೋಷ ಸಂಜೆಯಾದರೂ ಮಾಸದೆ, ಒಂದೇ ಬೀಸಿನಲ್ಲಿ ನಮ್ಮಿಬ್ಬರಿಗೂ ಮಿಂಚಂಚೆ ಮೂಲಕ ಮಾತಿನ ಮಾಲೆ ತೊಡಿಸಿತ್ತು, ಈ ಲೇಖನದ ಕಾಣಿಕೆಯನ್ನು ಕೊಡಿಸಿತ್ತು.

ಈ ಲೇಖನದ ಮೂಲರೂಪ ೭-೭-೨೦೦೮ರ ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದು ಹಾಗೇ ಹಳೆಯ ಸಂಚಿಕೆಯಲ್ಲಿ ಮಾಸಬಾರದು ಮತ್ತು ಸುಲಭವಾಗಿ ಸಾರ್ವಜನಿಕರಿಗೆ ಸಿಗುವಂತಾಗಬೇಕು ಎಂದು ನಾನು ಬಯಸಿದೆ, ಅನಂತರಾಮು ಅವರು ಪೂರ್ಣ ಅನುಮೋದಿಸಿದರು. ಮತ್ತೆ ತಮ್ಮ ಪೂರ್ವನಿರ್ಧರಿತ ಜವಾಬ್ದಾರಿಗಳ ನಡುವೆ ಬಿಡುವು ಮಾಡಿಕೊಂಡು, ಸಂತೋಷದಿಂದ ಪರಿಷ್ಕರಿಸಿಯೂ ಕೊಟ್ಟಿದ್ದಾರೆ.

ಜಿಟಿಎನ್ ತೀರಿಹೋದ ಏಳನೇ ವರ್ಷದ (೨೭-೬-೨೦೦೮) ಸ್ಮೃತಿದಿನಕ್ಕೆ ಆಕಸ್ಮಿಕವಾಗಿಯೇ ಒದಗಿದ ಈ ಸಂತೋಷಕ್ಕೆ ನಾನು ಅನಂತರಾಮು ಅವರಿಗೆ ಋಣಿ. – ಅಶೋಕವರ್ಧನ]

25 March 2014

ರಕ್ತದ ಆಸೆ

(ಕೊಡಗಿನ ಸುಮಗಳು – ಜಿಟಿನಾ ಸಮಗ್ರ ಕಥಾ ಸಂಕಲನದ ಕೊನೆಯ ಮತ್ತು ಹನ್ನೆರಡನೆಯ ಕತೆ - ೧೯೪೯)

ನಾನು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕುಳಿತ ವರ್ಷವದು (೧೯೪೨ ಮಾರ್ಚ್). ಪರೀಕ್ಷೆ ಮುಗಿದ ಮೇಲೆ ನನ್ನ ಚಿಕ್ಕಪ್ಪನವರಲ್ಲಿಗೆ ಹೋದೆನು, ಕೆಲವು ದಿನಗಳನ್ನು ಅಲ್ಲಿ ಕಳೆಯಲೆಂದು. ಅವರು ಕಾರುಗುಂದ ಎಂಬ ಹಳ್ಳಿಯಲ್ಲಿ ವೈದ್ಯರಾಗಿದ್ದರು. ಅವರ ಮನೆಯು ಎತ್ತರ ನೆಲೆಯಲ್ಲಿ ಪ್ರಕಾಶಮಾನವಾಗಿಯೂ ಆಹ್ವಾದಕರವಾಗಿಯೂ ನಿಂತಿತ್ತು. ಒಂದು ಬದಿಯಲ್ಲಿ ಮಡಿಕೇರಿ ಭಾಗಮಂಡಲದ ರಸ್ತೆಯು ನೇರವಾಗಿ ಓಡುತ್ತದೆ. ಇನೊಂದು ಕಡೆ ನಾಪೋಕ್ಲಿಗೆ ಹೋಗುವ ದಾರಿ ಕವಲೊಡೆದಿದೆ. ರಸ್ತೆಗಳ ಮಧ್ಯದಲ್ಲಿ ಒಂದು ದ್ವೀಪದಂತೆ ಈ ಮನೆಯು ಇದೆ. ಹಗಲು ನಮಗೆ ಜನರ ಅಭಾವವೇ ಇರಲಿಲ್ಲ. ಔಷಧಿಗೆ ಬರುವವರು ಬಲುಮಂದಿ ಇರುತ್ತಿದ್ದರು. ಸುತ್ತಲಿನ ಹಳ್ಳಿಗಳಿಗೆ ಇಲ್ಲಿ ದಾಕುದಾರರು ಇರುವುದಾಗಿತ್ತು. ಇಲ್ಲವಾದರೆ ಒಳ್ಳೆ ಔಷಧಿ ದೊರೆಯಲು ಮತ್ತೆ ಹನ್ನೆರಡು ಮೈಲು ದೂರದ ಮಡಿಕೇರಿಗೆ ಹೋಗಬೇಕು. ಚಿಕ್ಕಪ್ಪ ಕಾರುಗುಂದದಲ್ಲಿ ಔಷಧಾಲಯ ಸ್ಥಾಪಿಸಿ ಒಂದು ತಿಂಗಳಾಗಿತ್ತು ಅಷ್ಟೆ. ಆದ್ದರಿಂದ ಅವರಿಗೆ ಸುತ್ತಲಿನ ಜನರ ಪರಿಚಯ ಚೆನ್ನಾಗಿ ಆಗಿರಲಿಲ್ಲ. ಆದರೆ ನನಗೆ ಸಮಯ ಹೋಗಲು ಯಾವ ತೊಂದರೆಯೂ ಇರಲಿಲ್ಲ. ಸೈಕಲ್ ತೆಗೆದುಕೊಂಡು ದೊಡ್ಡ ದಾರಿಯಲ್ಲಿ ದೂರ ಸವಾರಿ ಹೋಗುವುದು. ನಾಪೋಕ್ಲು ಕಡೆ ಹೋದರೆ ಒಂದೂವರೆ ಮೈಲಿನಲ್ಲಿಯೇ ಕಾವೇರಿ ಹೊಳೆಯು ಸಿಗುವುದು. ಅದರ ಪರಂಬು (ಮಳೆಗಾಲದಲ್ಲಿ ಪ್ರವಾಹದ ನೀರು ನಿಂತು ಫಲವತ್ತಾದ ಹೊಳೆಯ ಕರೆಯ ಬಯಲು) ವಿಶಾಲವಾಗಿ ಸುಂದರವಾಗಿ ಹಬ್ಬಿದೆ, ಅಲ್ಲಿ ಹೋಗಿ ಮಲಗಿಕೊಂಡು ಮುಗಿಲನ್ನೂ ನಿಬಿಡವಾಗಿ ಬೆಳೆದಿರುವ ಕಾಡುಗಳನ್ನೂ ನೋಡುವದು; ನೇರಿಳೆ ಹಣ್ಣುಗಳನ್ನು ತಿನ್ನಲು ಹೋಗಿ ಕೆಂಪಿರುವೆಗಳಿಂದ ಕಡಿಸಿಕೊಂಡು ಕೈ ಕುಡುಗುವುದು; ಇನ್ನು ಮನೆಯಲ್ಲಿಯೇ ಕುಳಿತಾಗ ಮಕ್ಕಳೊಡನೆ ಆಡುವುದು, ಕೆಣಕಿ ಅಳಿಸುವುದು; ಅಡುಗೆಮನೆಯೊಳಗೆ ಅವಲಕ್ಕಿ ಕಾಯನ್ನು ಮೆಲ್ಲುತ್ತ ಚಿಕ್ಕಮ್ಮನೊಡನೆ ಪಟ್ಟಾಂಗ - ಇವೇ ಮುಂತಾದವುಗಳು ನನ್ನ ಮುಖ್ಯ ಕಾರ್ಯಗಳಾಗಿದ್ದುವು. ಒಮ್ಮೊಮ್ಮೆ ಹಳ್ಳಿಯವರು ಮಡಿಕೇರಿಯ ಈ ಪ್ರಭೃತಿಯನ್ನು ನೋಡಬೇಕೆಂದು ಬಯಸುತ್ತಿದ್ದರು. ಆಗ ಚಿಕ್ಕಪ್ಪ ನನ್ನನ್ನು ಕರೆಯುತ್ತಿದ್ದರು. ನನ್ನೊಡನೆ ಕೆಲವು ಮಾತಾಡಿ,  ಆ ಹಳ್ಳಿಗನು ಇಂದಿಗೆ ಧನ್ಯನಾದೆ ಎಂಬಂತೆ ಹೋಗುತ್ತಿದ್ದ. ನಾನು ಇದು ಬಹಳ ವಿನೋದಕರವಾಗಿದೆಯಂದು ಒಳಗೆ ಹೋಗುತ್ತಿದ್ದೆನು. ಸಾಯಂಕಾಲ ಪೇಷಂಟುಗಳಿಲ್ಲದಿದ್ದರೆ ನಾನೂ ಚಿಕ್ಕಪ್ಪನೂ ಸ್ವಲ್ಪ ದೂರ ತಿರುಗಾಡಿಕೊಂಡು ಹೋಗುತ್ತಿದ್ದೆವು. ಆದರೆ ದಾರಿಯಲ್ಲಿ ಕೆಲವರು “ಸ್ವಲ್ಪ ಬನ್ನಿ, ಸ್ವಾಮಿ” ಎಂದು ಕರೆದುಕೊಂಡು ತಮ್ಮ ಮನೆಗೆ ಹೋಗಿ ಖಾಯಿಲಸ್ತರನ್ನು ತೋರಿಸುತ್ತಿದ್ದರು. ನಾನು ಅವರನ್ನು ಹಿಂಬಾಲಿಸಬೇಕಿತ್ತು. ಅಲ್ಲಿ ಕಾದು ಕಾದು ಬೇಸರ ಬರುತ್ತಿತ್ತು. ಹೊರಡುವಾಗ ಮಾತ್ರ ಹಾಲು, ಬಾಳೇಹಣ್ಣು, ನೇರಿಳೇ ಹಣ್ಣು ಇವೆಲ್ಲ ತಿನ್ನಲು ದೊರೆಯುತ್ತಿದ್ದುವು. ಯಾರು ನನಗೆ ಸರಿಯೆನ್ನುವ ಭಾವನೆಯಿಂದ ಆ ದಿನಗಳನ್ನು ಸಂತೋಷದಿಂದ ಕಳೆಯುತ್ತಿದ್ದೆನು.

18 March 2014

ಕಾವೇರೀ ಮಾತೆ

(ಕೊಡಗಿನ ಸುಮಗಳು – ಕತೆ ಹನ್ನೊಂದು -೧೯೫೧)
ಇದು ಅಗಸ್ತ್ಯನ ತಪದಮಣೆ ಕಾವೇರಿ ತಾಯ ತವರ್ಮನೆ
ಕದನಸಿರಿಗುಯ್ಯಾಲೆ ತೂಗಿದನಿಲ್ಲಿ ಚಂದಿರವರ್ಮನೆ !
-       ಕವಿಶಿಷ್ಯ

ಕೊಡಗುದೇಶದಿ ಜನಿಸಿ ಕೊಡಗಿನ
ಬೆಡಗ ವರ್ಧಿಸಿ ಸಡಗರದಿ ತಾ
ನಡೆವಳೋಡುವಳೀ ಕವೇರನ ಸುತೆಯು ಕಾವೇರಿ
ಜಡರ ಪಾಪಾಂಬುಧಿಯ ನೀಗುತ
ಕಡುಬಡವರಿಗೆ ಪುಣ್ಯನಿಧಿಯಂ
ಕೊಡುತ ಹರಿವಳು ಪತಿತಪಾವನೆ ದೇವಿ ಕಾವೇರಿ

ಕಮಲಜ ಕುಧರದ ವಿಮಲತಟಾಕದಿ
ತಮವಂ ತೊರೆಯುವ ಜನಿಸುವಳು
ರಮಿಸುತ ನಲಿದು ವಸುಮತಿಗೆ ಹಸುರುಡೆ
ನಮನವಸಲ್ಲಿಸಿ ಮೆರೆಯುವಳು

ಬ್ರಹ್ಮಗಿರಿಯು ಕೊಡಗು ಸಂಸ್ಥಾನದ ಪವಿತ್ರತಮ ಪರ್ವತ. ಲೋಕ ಪಾವನೆಯಾದ ಕಾವೇರೀ ಮಾತೆಯು ಈ ಶೈಲದಲ್ಲಿ ನದೀ ರೂಪ ತಳೆದು ಮಂಗಳಪ್ರದಾಯಿನಿಯಾಗಿ ಪ್ರವಹಿಸಿ ಸಾಗುವಳು. ಯುಗ ಯುಗಾಂತರಗಳಿಂದ ಗಂಭೀರವಾಗಿ ತಲೆಯೆತ್ತಿ ನಿಂತಿರುವ ಪರ್ವತವು ನೋಟಕರಲ್ಲಿ ಆಶ್ಚರ್ಯವನ್ನೂ ಭಕ್ತಿಯನ್ನೂ ಬೀರುವುದು. ಬೃಹತ್ತಾದುದರ ಸುತ್ತಲೂ ಮಹತ್ತ್ವದ ಒಂದು ಕ್ಷೇತ್ರ ವ್ಯಾಪಿಸಿರುವುದು - ಅಯಸ್ಕಾಂತ ಶಿಲೆಯ ಸುತ್ತಲೂ ಆಕರ್ಷಣ ಕ್ಷೇತ್ರವು ಇರುವಂತೆ. ಬ್ರಹ್ಮಗಿರಿಯು ಇಂತಹ ಪವಿತ್ರವಾದ ಆಕರ್ಷಣ ಕ್ಷೇತ್ರ. ಇದು ಪ್ರತಿದಿನವೂ ಹಲವಾರು ಭಕ್ತರನ್ನು ತನ್ನ ಸಮ್ಮುಖಕ್ಕೆ ಸೆಳೆಯುವುದು. ಭಕ್ತವೃಂದ ದಾರಿಯುದ್ಧಕ್ಕೂ ಸೃಷ್ಟಿ ಸೌಂದರ್ಯದ ರಸದೂಟ ಉಣ್ಣುತ್ತ ಪುನೀತರಾಗಿ ಬ್ರಹ್ಮಗಿರಿಯ ದರ್ಶನಕ್ಕೆ ಯೋಗ್ಯತೆ ಪಡೆದು ಮೇಲೆ ಬರುವರು. ಆ ಸೌಂದರ್ಯದ ಸೌಧಕ್ಕೆ ಕಳಶವನ್ನೇರಿಸುವಂತೆ ಧೀರಗಂಭೀರವಾಗಿ, ಸ್ಥಿರತೆಯ ಪ್ರತೀಕವಾಗಿ, ಗಗನ ಚುಂಬಿಯಾಗಿ, ಭವ್ಯವಾಗಿ ನಿಂತಿರುವ ಬ್ರಹ್ಮಗಿರಿಯನ್ನು ಈಕ್ಷಿಸಿ ಸಮೀಕ್ಷಿಸಿ ಪುಳಕಿತಕಾಯರಾಗುವರು. ಮಹಾತ್ಮರ ದರ್ಶನವೇ ಪರಮಸುಖ.

11 March 2014

ಆತ್ಮಯಜ್ಞ

(ಕೊಡಗಿನ ಸುಮಗಳು - ಜಿಟಿ ನಾರಾಯಣ ರಾಯರ ಸಮಗ್ರ ಕಥಾಸಂಕಲನ - ಧಾರಾವಾಹಿಯಾಗುತ್ತಿರುವಲ್ಲಿ ಇದು... ಹತ್ತನೇ ಸಣ್ಣ ಕತೆ - ೧೯೫೧)

ಸಿರಿಬಾಯಿ ವೀರರಾಜನಿಗೆ ಇಬ್ಬರು ಗಂಡು ಮಕ್ಕಳು: ಹಿರಿಯವನು ಬಸವರಾಜ, ಎರಡನೆಯವನು ಶಿವರಾಜ. ವೀರರಾಜನ ಆಳ್ವಿಕೆಯಲ್ಲಿ ಕೊಡಗು ಸಂಸ್ಥಾನವು ಬಹಳವಾಗಿ ವಿಸ್ತರಿಸಲ್ಪಟ್ಟಿತು. ಇಂತಹ ವಿಶಾಲ ರಾಷ್ಟ್ರದಲ್ಲಿ ಅವನು ಶಾಂತಿ ಸುವ್ಯವಸ್ಥೆಗಳನ್ನು ಸ್ಥಾಪಿಸಿದ್ದನು. ದಕ್ಷನಾದ ಪ್ರಭು ಈ ರಾಜ್ಯ ತನ್ನ ಅನಂತರವೂ ವಂಶಪಾರಂಪರ್ಯವಾಗಿ ಹೀಗೆಯೇ ಮುಂದುವರಿಯಬೇಕೆಂದು ಭಾವಿಸುವುದು ಸಹಜ. ವ್ಯಕ್ತಿಕೇಂದ್ರೀಕೃತವಾಗಿದ್ದ ಅಧಿಕಾರ, ದರ್ಪ ಹಾಗೆಯೇ ಸಾಗಬೇಕಾಗಿದ್ದರೆ ರಾಜಕುಮಾರರು ಸಮಾಧಿಕ ಯೋಗ್ಯತಾ ಸಂಪನ್ನರಾಗಿರಬೇಕು. ರಾಜಪುತ್ರತ್ವವೊಂದೇ ಸಿಂಹಾಸನವನ್ನು ದೊರಕಿಸಿ ಕೊಡುವುದಿಲ್ಲ - ಪ್ರಾಯಶಃ ದೊರಕಿಸಿಕೊಡುವುದು; ಆದರೆ ಅಲ್ಲಿಯೇ ಚಿರಕಾಲ ಮಂಡಿಸಿರುವ ಭದ್ರತೆಯನ್ನು ನೀಡುವುದಿಲ್ಲ. ಅಂತಹ ಯೋಗ್ಯತೆ ಸಿದ್ಧಿಸುವುದು ಬುದ್ಧಿಶಕ್ತಿ ಮತ್ತು ದೇಹಶಕ್ತಿಗಳ ಶ್ರೀಮಂತಿಕೆಯಿಂದ. ಇದನ್ನು ಚೆನ್ನಾಗಿ ಅರಿತಿದ್ದ ರಾಜನು ತನ್ನ ಕುಮಾರರಿಗೆ ಅತ್ಯುತ್ತಮವಾದ ಶರೀರ ಮತ್ತು ಬುದ್ಧಿ ಶಿಕ್ಷಣ ದೊರೆಯುವ ವ್ಯವಸ್ಥೆ ಮಾಡಿದನು. ರಾಜ ಪುತ್ರರು ಸಂಸ್ಕೃತ ಕನ್ನಡ ಸಾಹಿತ್ಯಗಳ ಸವಿಯುಂಡರು. ಕಾವ್ಯಗಳಲ್ಲಿ, ರಾಜ್ಯಭಾರ ಶಾಸ್ತ್ರದಲ್ಲಿ, ಪ್ರಜಾರಂಜನೆಯಲ್ಲಿ ಅವರಿಗೆ ಶಿಕ್ಷಣ ದೊರೆಯಿತು. ಪೂರಕ ಅಂಶವಾಗಿ ಅಂಗಸಾಧನೆಯಿಂದ, ವ್ಯಾಯಾಮಗಳಿಂದ ದೇಹಗಳನ್ನು ಪುಷ್ಟವನ್ನಾಗಿರಿಸಿದರು. ದೃಢಕಾಯರಾಗಿ ಆರೋಗ್ಯಸಂಪನ್ನತೆಯಿಂದ ಮೆರೆಯುವ ರಾಜಕುಮಾರರು ಅಶ್ವಿನಿದೇವತೆಗಳಂತೆ ಶೋಭಿಸಿದರು. ಯುದ್ಧ ಕಲೆ, ಚಾಣಕ್ಯತಂತ್ರ, ಶಶ್ತ್ರಾಸ್ತ್ರ ಪ್ರಯೋಗ ಮುಂತಾದವುಗಳಲ್ಲಿ ಅವರು ಪರಿಣಿತರಾದರು. ಹೀಗೆ ದಿನದಿಂದ ದಿನಕ್ಕೆ ವರ್ಧಿಸುತ್ತಿರುವ ವಂಶದ ಕುಡಿಗಳನ್ನು ನೋಡಿ ನೋಡಿ ವೀರರಾಜನಿಗೆ ಸಂತೋಷ ಉಕ್ಕುತ್ತಿತ್ತು. ಅವರ ಸಾಹಸ ಕಾರ್ಯಗಳನ್ನು ಸಾಹಿತ್ಯಾಭ್ಯಾಸವನ್ನು ಕೇಳಿ ಕೇಳಿ ರಾಜನು ಹರ್ಷ ಹೊಂದುತ್ತಿದ್ದನು. ಮಡಿಕೇರಿಯ ನಿವಾಸಿಗಳಿಗೆ ಈ ತರುಣೇಭದ್ವಯರನ್ನು ನಿತ್ಯವೂ ಕಾಣುವ ಭಾಗ್ಯ. ರಾಜನ ಸುಕೃತದಿಂದ ನಾಡಿನ ಸೌಭಾಗ್ಯದಿಂದ ಇಂತಹ ಯೋಗ್ಯ ರಾಜಕುಮಾರರು ಜನಿಸಿ ಅಭ್ಯುದಯ ಹೊಂದುತ್ತಿದ್ದಾರೆ ಎಂದು ಅವರು ಹೇಳಿಕೊಳ್ಳುತ್ತಿದ್ದರು.

04 March 2014

ಚಂದ್ರವರ್ಮನ ಖಡ್ಗ

(ಕೊಡಗಿನ ಸುಮಗಳು - ಜಿಟಿ ನಾರಾಯಣ ರಾಯರ ಸಮಗ್ರ ಕಥಾಸಂಕಲನ - ಧಾರಾವಾಹಿಯಾಗುತ್ತಿರುವಲ್ಲಿ ಇದು... ಒಂಬತ್ತನೇ ಸಣ್ಣ ಕತೆ - ೧೯೫೨)

ಗುರುಬಸವನ ಮೇಲೆ ಪಣ್ಯ ಗ್ರಾಮನಿವಾಸಿಗಳಿಗೆಲ್ಲ ಅತುಲವಾದ ಭಕ್ತಿ ಗೌರವ. ಅವನ ನಿಜವಾದ ಹೆಸರು ಬಸವಯ್ಯ ಎಂದಿದ್ದರೂ ಗ್ರಾಮಸ್ಥರು ಅವನಲ್ಲಿ ತಮಗಿದ್ದ ಅಭಿಮಾನ ಮರ್ಯಾದೆಗಳ ಕುರುಹಾಗಿ ಅವನನ್ನು ಗುರುಬಸವಯ್ಯ ಎಂದು ಕರೆಯುತ್ತಿದ್ದರು. ಗುರುಬಸವಯ್ಯನು ಪಣ್ಯಗ್ರಾಮದಲ್ಲಿ ಗಣ್ಯ ವ್ಯಕ್ತಿಯಾಗಿದ್ದನು. ಅವನ ಅಖಂಡ ಏಕಾಂಗೀ ಜೀವನದಲ್ಲಿ ಗ್ರಾಮಸ್ಥರೆಲ್ಲರೂ, ಹಿರಿಯರು ಕಿರಿಯರು ಎನ್ನುವ ವ್ಯತ್ಯಾಸವಿಲ್ಲದೆ, ಅವನು ಬಂಧುಗಳಾಗಿದ್ದರು, ಬಳಗವಾಗಿದ್ದರು. ಅವನಿಗೆ ಮದುವೆಯಾಗಿದ್ದಿತೋ ಇಲ್ಲವೋ, ಅವನಿಗೆ ಆಪ್ತ ಬಂಧುಗಳು ಇರುವರೋ ಇಲ್ಲವೋ ಯಾರಿಗೂ ತಿಳಿದಿರಲಿಲ್ಲ. ಅಂದರೆ ಅವನು ಪಣ್ಯ ಗ್ರಾಮದಲ್ಲಿ ಹುಟ್ಟಿ ಬೆಳೆದವನಾಗಿರಲಿಲ್ಲ. ಏಕಾಂಗಿಯಾಗಿ ಶಿವಧ್ಯಾನದಿಂದ ಜಂಗಮರಂತೆ ದೇಶಪರ್ಯಟನ ಮಾಡುತ್ತಿದ್ದ ಅವನು ಅಲ್ಲಿ ಬಂದು ನೆಲಸಿದನು. ನೆಲಸಿದವನು ಎನ್ನುವುದಕ್ಕಿಂತಲೂ ಶಿವನು ಅವನನ್ನು ಅಲ್ಲಿಯೇ ಉಳಿಯುವಂತೆ ಪ್ರೇರಣೆಯಿತ್ತನು ಎನ್ನುವುದು ಹೆಚ್ಚು ವಾಸ್ತವಿಕವಾಗುವುದು.ಗುರುಬಸವನೇ ಒಂದು ಸಲ ಆ ಅನುಭವವನ್ನು ಹೇಳಿದ್ದನು, ಅವನು ಪರಮೇಶ್ವರನ ಧ್ಯಾನಾಸಕ್ತನಾಗಿ ದೇಶದ ತೀರ್ಥಕ್ಷೇತ್ರಗಳಲ್ಲಿ ಸಂಚರಿಸುತ್ತ ಶಿವಶರಣರ ದರ್ಶನ ಸೇವೆಗಳಲ್ಲಿ ಆಯುಷ್ಯ ಸವೆಯುತ್ತಿದ್ದನು. ಮೈಸೂರು ಸಂಸ್ಥಾನದ ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸಿ ಮುಂದೆ ಭಗವಂತನ ಪುತ್ರ ಶ್ರೀ ಸುಬ್ರಹ್ಮಣ್ಯ ದೇವರ ಕೃಪೆ ಆಶೀರ್ವಾದ ಪಡೆಯಲೆಂದು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ದಯಮಾಡಿಸಿದನು. ಅಲ್ಲಿಂದ ಮುಂದೆ ಘಟ್ಟವನ್ನೇರಿ ಕೊಡಗು ಸಂಸ್ಥಾನವನ್ನು ತಲಪಿದನು. ಈ ಪುಣ್ಯಭೂಮಿಯನ್ನು ಆಗ ದೊಡ್ಡ ವೀರರಾಜನು ಆಳುತ್ತಿದ್ದನು. ರಾಜಕುಲ ಶಿವಭಕ್ತರ ಪಂಗಡವಾಗಿದ್ದಿತು. ಶಂಕರ  ಕಿಂಕರರು ಯಾರೂ ಕೊಡಗು ದೇಶಕ್ಕೆ ಬರದೇ ರಾಜದರ್ಶನ ಮಾಡದೇ ಹೋಗುತ್ತಿರಲಿಲ್ಲ. ಹಾಗೆ ಬಸವಯ್ಯನು ಕೊಡಗು ದೇಶಕ್ಕೆ ಏರಿ ಬಂದನು, ಬರುತ್ತಿದ್ದಂತೆಯೇ - ರಾಜಧಾನಿ ಮಡಿಕೇರಿ ತಲುಪುವ ಮೊದಲೇ - ಬಸವಯ್ಯನನ್ನು ಅಧಿಕ ತೃಷ್ಣೆಯೂ ಹಸಿವೂ ಬಾಧಿಸಿದುವು. ನಿರಾಹಾರ, ಕಠಿಣ ಪ್ರಯಾಣದ ಆಯಾಸ. ಬೋಳು ಗುಡ್ಡೆಯ ಮೇಲೆ ಬೇಸಗೆಯ ಮಧ್ಯಾಹ್ನ ಕಾಲ ಅವನು  ನಡೆಯುತ್ತಿದ್ದನು. ಮುಂದೆ ಒಂದು ಹೆಜ್ಜೆಯನ್ನೂ ಇಡಲಾಗಲಿಲ್ಲ.

25 February 2014

ನ್ಯಾಯ ಪರಿಪಾಲನೆ

(ಕೊಡಗಿನ ಸುಮಗಳು - ಎಂಟನೇ ಸಣ್ಣ ಕತೆ -೧೯೫೧)

ಲಿಂಗರಾಜನ ವಿಷಯವನ್ನು ಹಿಂದೊಮ್ಮೆ (ಪಂಜರದ ಗಿಳಿ) ಹೇಳಲಾಗಿದೆ. ಒಲಿದರೆ ಶಂಕರನೂ ಮುನಿದರೆ ಭಯಂಕರನೂ  ಆಗಿದ್ದ ಲಿಂಗರಾಜನು ಅತಿ ಚಿಕ್ಕ ಪ್ರಾಯದಲ್ಲಿ ಕೊಡಗಿನ ಸಿಂಹಾಸವನ್ನೇರಿದ್ದನು. ಅವನಿಗೆ ಆಗ ಇನ್ನೂ ಹದಿನೈದು ವರ್ಷ ತುಂಬಿರಲಿಲ್ಲ - ಆಗಲೇ ಅವನ ತಂದೆ ವೀರರಾಜನು ಶಿವಾಧೀನನಾದನು, ರಾಜಕುಟುಂಬ ದುಃಖಸಾಗರದಲ್ಲಿ ಮುಳುಗಿತ್ತು. ನಡುನೀರಿನಲ್ಲಿ ಬಿರುಗಾಳಿಯ ತೀವ್ರತೆ ಏರಿದ್ದಾಗ ಹಡಗಿನ ಕೂವೆಮರ ಒಡೆಯಿತು. ಅನೇಕ ಸಾಮಂತರಾಜರು ವೀರರಾಜನ ಕರ್ಮಾಂತರಗಳಿಗೆ ಬಂದು ಭಾವೀ ರಾಜನಾದ ಕಿರಿಯ ಲಿಂಗರಾಜನಿಗೆ ತಮ್ಮ ಗೌರವ, ವಿಧೇಯತನಗಳನ್ನು ಸಲ್ಲಿಸಿ ಮರಳಿದರು. ಆದರೆ ಆ ಔಪಚಾರಿಕವಾದ ವಿನಯ ಪ್ರದರ್ಶನಗಳು ಅವರ ಹಿಂದೆಯೇ ತೆರಳಿದುವು. ಕೆಲವು ಉದ್ಧತ ಸಾಮಂತ ಭೂಪಾಲರು ಈ ಒಂದು ಮರ್ಯಾದೆಯನ್ನೂ ತೋರಿಸಲಿಲ್ಲ. ವೀರರಾಜನ ಮರಣವಾರ್ತೆ ಕೇಳಿದಾಗಲೇ ತಾವೇ ಅರಸರೆಂದು ಸಾರಿ ಹಾಗೆ ವರ್ತಿಸತೊಡಗಿದರು. ರಾಜಕುಲವನ್ನು ಸರಿಯಾದ ದಾರಿಯಲ್ಲಿ ನಡೆಯಿಸುವ ಧೀರರು ಯಾರೂ ಇರಲಿಲ್ಲವೆನ್ನುವಂತೆ ತೋರಿತು. ಅನುಭವಿಗಳಾದ ಮಂತ್ರಿಗಳು, ವೃದ್ಧರು ಇರಲಿಲ್ಲ. ರಾಜ್ಯದ ರಕ್ಷಣೆ ಮತ್ತು ಆಡಳಿತ ಎಳೆ ಹರೆಯದ ಲಿಂಗರಾಜನ ಮೇಲೆ ಬಿದ್ದುವು.

18 February 2014

ಹುಲಿಯ ಪ್ರೇಮ

(ಆರನೇ ಸಣ್ಣ ಕತೆ -೧೯೪೬)
[ಜಿಟಿ ನಾರಾಯಣ ರಾವ್ (ನನ್ನ ತಂದೆ) ೧೯೪೬ ರಿಂದ ೧೯೫೨ರ ನಡುವೆ ಕೆಲವು ಸಣ್ಣ ಕತೆಗಳನ್ನು ಬರೆದು, ಆ ಕಾಲದ ಕೆಲವು ನಿಯತಕಾಲಿಕಗಳಲ್ಲಲ್ಲದೆ ಎರಡು ಸಂಕಲನವಾಗಿಯೂ ಪ್ರಕಟಿಸಿದ್ದರು. ಅವನ್ನೆಲ್ಲ ಕೇವಲ ಐತಿಹಾಸಿಕ ದಾಖಲೆಗಾಗಿ ನಾನು ಒಟ್ಟು ಮಾಡಿ ೧೯೯೩ರಲ್ಲಿ ಕೊಡಗಿನ ಸುಮಗಳು ಹೆಸರಿನಲ್ಲಿ ಪ್ರಕಟಿಸಿದ್ದೆ. ಅದರ ವಿ-ಧಾರಾವಾಹಿಯಲ್ಲಿ ಇದು ಆರನೇ ಗುಟುಕು. ಆಸಕ್ತರು ಹಿಂದಿನ ಐದೂ ಕತೆಗಳ ಸರಣಿ ನೋಡಲು ಇಲ್ಲಿ ಚಿಟಿಕೆ ಹೊಡೆಯಬಹುದು. ಹೀಗೆ ಎಲ್ಲ ಕತೆಗಳ ಪ್ರಕಟಣಾ ಕೊನೆಯಲ್ಲಿ ಇಡಿಯ ಸಂಕಲನವನ್ನು ವಿ-ಪುಸ್ತಕವಾಗಿಯೂ ಸಾರ್ವಜನಿಕಕ್ಕೆ ಮುಕ್ತಗೊಳಿಸಲಿದ್ದೇನೆ.  - ಅಶೋಕವರ್ಧನ]

ಸವಿದು ಮೆದ್ದರೊ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು? - ಕವಿಶಿಷ್ಯ.
ಮಡಿಕೇರಿಯಿಂದ ಐದು ಮೈಲು ದೂರದಲ್ಲಿ ಹುಲಿತಾಳವೆನ್ನುವ ಒಂದು ಹಳ್ಳಿಯಿದೆ. ಪ್ರತಿಯೊಂದು ಪ್ರಖ್ಯಾತ ಸ್ಥಳದ ಹಿನ್ನೆಲೆಯಲ್ಲಿಯೂ ಒಂದು ಸ್ಥಳ ಪುರಾಣವಿರುವಂತೆ ಇದರ ಹಿನ್ನೆಲೆಯಲ್ಲಿಯೂ ಒಂದು ದಂತ ಕಥೆಯಿದೆ. ಎಲ್ಲಾ ಹಳ್ಳಿಗಳಿಗೂ ಬೀಡುಗಳಿಗೂ ಈ ರೀತಿಯ ಇತಿಹಾಸಗಳಿದ್ದರೂ ಅವೆಲ್ಲ ಸಾಕಷ್ಟು ಪ್ರಚಾರವಿಲ್ಲದೆ, ಕೇಳುವವರಿಲ್ಲದೆ ಪ್ರಕಾಶಕ್ಕೆ ಬರುವುದಿಲ್ಲ. ಹುಲಿತಾಳವನ್ನು ಹುಲಿಯು ತಾಳ ಹಾಕುವ ಸ್ಥಳವೆಂದು ಕೆಲವರು ವಿವರಿಸಿದರೆ, ಅದು ಹುಲ್‌ತಆಳ ಅಂದರೆ ಆಳವಾಗಿ ಹುಲ್ಲು ಬೆಳೆದಿರುವ ಸ್ಥಳವೆಂದು ಇನ್ನು ಕೆಲವರು ಅರ್ಥ ಮಾಡುವರು. ಇದೊಂದೂ ಸರಿಯಲ್ಲ, ಬೇರೇನೋ ನಿಗೂಢಾರ್ಥ ಇದರಲ್ಲಿರಬೇಕು ಅಥವಾ ಅರ್ಥವಿಹೀನವಾದ ಅನೇಕ ಶಬ್ದಗಳಂತೆಯೇ ಇದೂ ಒಂದು ಎಂದು ಹಲವರು ತಿಳಿಯುವರು. ಮಡಿಕೇರಿಯೇ ಕಾಡು; ಇನ್ನು ಅದರ ಸಮೀಪದ ಹಳ್ಳಿಯೆಂದರೆ ಅದು ಗೊಂಡಾರಣ್ಯವೆಂದೇ ತಿಳಿಯಬೇಕು. ಈ ಮಹಾರಣ್ಯದ ಮಧ್ಯೆ ಮನುಷ್ಯ ನಿರ್ಮಿತವಾದ ಗದ್ದೆ ಬಯಲುಗಳು ಅಂಚಿನಲ್ಲಿ ಅಲ್ಲಲ್ಲಿ ದೂರದೂರದಲ್ಲಿ ಒಂದೆರಡು ಗುಡಿಸಲುಗಳು ಇವೆ. ಇವುಗಳೇ ಈ ಹಳ್ಳಿಯ ಮುಖ್ಯ ಮಾರ್ಗಗಳು ಮತ್ತು ಜನವಸತಿಯ ನೆಲೆಗಳು. ಕೆಲವು ವರ್ಷಗಳ ಹಿಂದೆ ಈ ಹಳ್ಳಿಯಲ್ಲಿ ನಮ್ಮ ಸಂಬಂಧಿಕರೊಬ್ಬರ ಮನೆಯಲ್ಲಿ ಒಂದು ಮದುವೆ ನಡೆಯಿತು. ಅದಕ್ಕೆ ಹೋಗಿದ್ದಾಗ ಹುಲಿತಾಳದ ವಿಷಯದಲ್ಲಿ ನನ್ನ ಉತ್ಸಾಹ ಕೆದರಿತು. ಮಂಟಪದಲ್ಲಿ ಕುಳಿತಿದ್ದ ಒಬ್ಬ ವೃದ್ಧ ಮಹಾಶಯರನ್ನು, ಆ ಸ್ಥಳಕ್ಕೆ ಸಂಬಂಧಿಸಿದವರನ್ನು, ಇದರ ಕುರಿತು ಪ್ರಶ್ನಿಸಿದೆ. ಅವರೆಂದರು, ಊಟವಾಗ್ಲಿ; ಆ ಮೇಲೆ ಒಂದು ಜಾಗಕ್ಕೆ ಹೋಗೋಣ. ಅಲ್ಲಿ ಕಥೆ ಹೇಳುವೆನು. ಇದು ನನ್ನ ಕುತೂಹಲವನ್ನು ಇನ್ನೂ ಹೆಚ್ಚಿಸಿತು. ಮಾತು ಬೇರೆ ಕಡೆಗೆ ಹರಿಯಿತು.

11 February 2014

ಶಂಭುವಿನ ಕಥೆ

(ಐದನೇ ಸಣ್ಣ ಕತೆ -೧೯೪೭)
[ಜಿಟಿ ನಾರಾಯಣ ರಾವ್ (ನನ್ನ ತಂದೆ) ೧೯೪೬ ರಿಂದ ೧೯೫೨ರ ನಡುವೆ ಕೆಲವು ಸಣ್ಣ ಕತೆಗಳನ್ನು ಬರೆದು, ಆ ಕಾಲದ ಕೆಲವು ನಿಯತಕಾಲಿಕಗಳಲ್ಲಲ್ಲದೆ ಎರಡು ಸಂಕಲನವಾಗಿಯೂ ಪ್ರಕಟಿಸಿದ್ದರು. ಅವನ್ನೆಲ್ಲ ಕೇವಲ ಐತಿಹಾಸಿಕ ದಾಖಲೆಗಾಗಿ ನಾನು ಒಟ್ಟು ಮಾಡಿ ೧೯೯೩ರಲ್ಲಿ ಕೊಡಗಿನ ಸುಮಗಳು ಹೆಸರಿನಲ್ಲಿ ಪ್ರಕಟಿಸಿದ್ದೆ. ಹಾಗೆ ಮಾಡುವಾಗ ಪ್ರಸ್ತುತ ಒಂದು ಕತೆಯ ಹಳೆಯ ಪ್ರತಿ ಅಲಭ್ಯವಾದ್ದರಿಂದ ಅನಿವಾರ್ಯವಾಗಿ ಸ್ವತಃ ಆಧುನಿಕ ಜಿಟಿನಾ ಅದನ್ನು ನೆನಪಿನಿಂದ ಪುನರ್ನಿರೂಪಿಸಿದ್ದಾರೆ. ಕತಾಸಂಕಲನದ ವಿ-ಧಾರಾವಾಹಿಯಲ್ಲಿ ಇದು ಐದನೇ ಹೆಜ್ಜೆ. ಆಸಕ್ತರು ಹಿಂದಿನ ನಾಲ್ಕೂ ಕತೆಗಳ ಸರಣಿ ನೋಡಲು ಇಲ್ಲಿಚಿಟಿಕೆ ಹೊಡೆಯಬಹುದು. ಹೀಗೆ ಎಲ್ಲ ಕತೆಗಳ ಪ್ರಕಟಣಾ ಕೊನೆಯಲ್ಲಿ ಇಡಿಯ ಸಂಕಲನವನ್ನು ವಿ-ಪುಸ್ತಕವಾಗಿಯೂ ಸಾರ್ವಜನಿಕಕ್ಕೆ ಮುಕ್ತಗೊಳಿಸಲಿದ್ದೇನೆ.  - ಅಶೋಕವರ್ಧನ]

ಮಡಿಕೇರಿಯ ಸುಂಕದ ಕಟ್ಟೆಯಲ್ಲಿ ಬಸ್ಸು ಜಕ್ಕು ಹೊಡೆದು ತನ್ನ ತುಂಬಿ ಬಿರಿವ ಸರಕನ್ನು ಬರಖಾಸ್ತು ಮಾಡಿದಾಗ ನಾನೂ ಹೊರಕ್ಕೆ ರಟ್ಟಿದೆ. ಈ ಮಹಾಘಟನೆಯನ್ನೇ ಕಾಯುತ್ತಿತ್ತೋ ಎಂಬಂತೆ ಆಗ ಕೋಟೆ ಗಡಿಯಾರ ನಟ್ಟಿರುಳ ೧೨ನ್ನು ಢಣಾರಣೆ ಬಜಾಯಿಸಿ ಅನುರಣಿಸಿ ವಿರಮಿಸಿತು. ಕೂಲಿಗಳಿರಲಿ, ತೊಂಡಿದನ ನಾಯಿ ಕೂಡ ಇರದ ಶ್ಮಶಾನ ಭೀಕರತೆ, ಅಮಾವಾಸ್ಯೆಯ ಕರಾಳ ರಾತ್ರಿ. ಮೂಳೆಯೊಳಗಣ ನೆಣ ಮಜ್ಜೆಗಳನ್ನೇ ಝಾಡಿಸುವಂತಿತ್ತು ಚಳಿ. ನಡುಗಿದೆ - ಚಳಿಗೆ, ಮಿಗಿಲಾಗಿ ಎಲ್ಲಿ ಆಸರೆ ಅರಸಲಿ ಆ ಅಕಾಲ ಎಂದರಿಯದೇ.

04 February 2014

ಪಂಜರದ ಅರಗಿಳಿ

(ನಾಲ್ಕನೇ ಸಣ್ಣ ಕತೆ -೧೯೪೮)
[ಜಿಟಿ ನಾರಾಯಣ ರಾವ್ (ನನ್ನ ತಂದೆ) ೧೯೪೬ ರಿಂದ ೧೯೫೨ರ ನಡುವೆ ಕೆಲವು ಸಣ್ಣ ಕತೆಗಳನ್ನು ಬರೆದು, ಕಾಲದ ಕೆಲವು ನಿಯತಕಾಲಿಕಗಳಲ್ಲಲ್ಲದೆ ಎರಡು ಸಂಕಲನವಾಗಿಯೂ ಪ್ರಕಟಿಸಿದ್ದರು. ಅವನ್ನೆಲ್ಲ ಕೇವಲ ಐತಿಹಾಸಿಕ ದಾಖಲೆಗಾಗಿ ನಾನು ಒಟ್ಟು ಮಾಡಿ ೧೯೯೩ರಲ್ಲಿ ಕೊಡಗಿನ ಸುಮಗಳು ಹೆಸರಿನಲ್ಲಿ ಪ್ರಕಟಿಸಿದ್ದೆ. ಈಗ ಮತ್ತದೇ ಕಾರಣಕ್ಕಾಗಿ ಇಲ್ಲಿ ಅನಿಯತ ಧಾರಾವಾಹಿಯಾಗಿ ಕೊಡುವಲ್ಲಿ ಇದು ನಾಲ್ಕನೇ ಹೆಜ್ಜೆ. ಆಸಕ್ತರು ಹಿಂದಿನ ಮೂರೂ ಕತೆಗಳ ಸರಣಿ ನೋಡಲು ಇಲ್ಲಿ ಚಿಟಿಕೆ ಹೊಡೆಯಬಹುದು. ಹೀಗೆ ಎಲ್ಲ ಕತೆಗಳ ಪ್ರಕಟಣಾ ಕೊನೆಯಲ್ಲಿ ಇಡಿಯ ಸಂಕಲನವನ್ನು ವಿ-ಪುಸ್ತಕವಾಗಿಯೂ ಸಾರ್ವಜನಿಕಕ್ಕೆ ಮುಕ್ತಗೊಳಿಸಲಿದ್ದೇನೆ.  - ಅಶೋಕವರ್ಧನ]

[೧೯೯೩ರಂದು ಜಿಟಿನಾ ಬರೆದ ಅರಿಕೆಯ ಮುಂದುವರಿದ ಮಾತುಗಳು: ೧೯೫೧ರಲ್ಲಿ ವನಸುಮ ಕತಾಸಂಕಲನಕ್ಕೆ ಬರೆದ ಮುನ್ನುಡಿಯಿಂದ ಉದ್ಧೃತಾಂಶ: ಸಾಹಿತ್ಯದ ಸವಿಯನ್ನು ಲೇಖಕನಿಗೆ [=ನನಗೆ] ಊಡಿಸಿದವರು ಅವನ ಬಾಲ್ಯದ ಗುರುಗಳಾದ ಶ್ರೀ ಎನ್.ಎಸ್. ರಾಮಚಂದ್ರ ಅವರು. ಸಕಲ ಸಂದರ್ಭಗಳಲ್ಲಿಯೂ ಲೇಖಕನಿಗೆ ಉಚಿತ ಹಿತೋಕ್ತಿಗಳನ್ನೂ ಪ್ರೋತ್ಸಾಹವನ್ನೂ ನೀಡಿ ಅವನ ಸಾಹಿತ್ಯತೃಷ್ಣೆಯನ್ನು ವರ್ಧನೆಮಾಡಿದವರು ಶ್ರೀ ಎಂ.ಎಸ್. ಅನಂತಪದ್ಮನಾಭರಾಯರು. ಮಹನೀಯರುಗಳಿಗೆ ಪುಟ್ಟ ಪುಸ್ತಕವನ್ನು ಭಕ್ತಿಪೂರ್ವಕವಾಗಿ ಸಮರ್ಪಿಸಲು ಸಂತೋಷವಾಗುವುದು. ಗುರುವರ್ಯರುಗಳಿಗೆ ಕೀರ್ತಿಯನ್ನು ತರಲಿ, ತಾರದಿರಲಿ ಅರ್ಪಣೆಯಲ್ಲಿನ ಉದ್ದೇಶವು ಸದ್ಭಾವಪ್ರಚೋದಿತ.

28 January 2014

ಅತ್ರಿ ವೃಕ್ಷದ ಬೀಜವಾಪನೆ

ಜಿಟಿನಾರಾಯಣ ರಾಯರ ಮುಗಿಯದ ಪಯಣ ವಿ-ಧಾರಾವಾಹಿಯ ಅಂತಿಮ ಮತ್ತು ನಲ್ವತ್ತೊಂದನೇ ಕಂತು
ಅಧ್ಯಾಯ ೯೨  (ಮೂಲದಲ್ಲಿ ೬೩)
ಪ್ರೌಢಶಾಲೆಯ ಎಲ್ಲ ತರಗತಿಗಳಲ್ಲಿಯೂ ನಾನು ಪ್ರಥಮಸ್ಥಾನವನ್ನೇ ಗಳಿಸುತ್ತಿದ್ದರೂ ಪರೀಕ್ಷೆ ಬರೆಯಲು ನನಗೆ ನಿಗದಿಯಾಗುತ್ತಿದ್ದ ಸ್ಥಳ ಮಾತ್ರ ಎಲ್ಲಿಯೋ ಮೂಲೆಯಲ್ಲಿದ್ದ ಒಂದು ಇಕ್ಕಟ್ಟು ಕೊಠಡಿ. ಎಂದೂ ಶಾಲೆಯ ಆ ಭವ್ಯ ಸಭಾಂಗಣವಲ್ಲ. ಕಾರಣ? ತೀರ ಕ್ಷುದ್ರ, ಆದರೂ ನನ್ನ ಯುವ ಮನಸ್ಸು ಇದನ್ನು ಹಾಗೆಂದು ಒಪ್ಪುವ ಪಕ್ವತೆ ಗಳಿಸಿರಲಿಲ್ಲ. ಇಂಗ್ಲಿಷ್ ವರ್ಣಮಾಲೆ ಪ್ರಕಾರ ವಿದ್ಯಾರ್ಥಿಗಳ ಹೆಸರುಗಳನ್ನು ಅಳವಡಿಸಿ ಸ್ಥಳ ನಿಗದಿಸುತ್ತಿದ್ದರು. - ಯಿಂದ ಸುಮಾರು ಎಲ್ - ವರೆಗಿನ ಅಕ್ಷರಗಳಿಂದ ಆರಂಭವಾಗುವ ಹೆಸರುಗಳಿದ್ದವರಿಗೆ ಸಭಾಂಗಣದಲ್ಲಿ ಸ್ಥಾನ, ಮುಂದಿನವರಿಗೆ ಎಲ್ಲೆಲ್ಲಾದರೂ! ನನ್ನ ಹೆಸರು ಅಭಿಜಿತ್ ಅಥವಾ ಅಚ್ಯುತ ಎಂದಿರಬಾರದಿತ್ತೇ ಎಂದು ಪರಿತಪಿಸಿದ್ದಿತ್ತು.

ತರುವಾಯದ ವರ್ಷಗಳಲ್ಲಿ ಕಾಲೇಜ್ ಅಧ್ಯಯನದ ವೇಳೆ, ಅಂತೆಯೇ ವಿವಿಧ ಸಂದರ್ಶನಗಳಿಗೆ ಹಾಜರಾದಾಗ, ವಿಮಾನ ಹಾಗೂ ರೈಲ್ವೇ ನಿಲ್ದಾಣಗಳಲ್ಲಿ ನನ್ನ ಸರದಿಗಾಗಿ ಕಣ್ಣು ಕಿವಿ ಅರಳಿಸಿ ನಿಂತಿರುತ್ತಿದ್ದಾಗ ಈ ಎನ್ - ಪೀಡೆ  ನನ್ನನ್ನು ಅತಿಯಾಗಿ ಬಾಧಿಸುತ್ತಿತ್ತು: ಒಂದು ಹಗಲಿಡೀ ಕಾದರೂ ಎಲ್ - ನಿಂದ ಮುಂದಿನವರಿಗೆ ಅವಕಾಶ ಒದಗುತ್ತಲೇ ಇಲ್ಲ. ಉದಾಹರಣೆಗೆ, ಮದರಾಸು  ಕ್ರಿಶ್ಚಿಯನ್ ಕಾಲೇಜಿನಲ್ಲಿ ಗಣಿತ ಟ್ಯೂಟರ್ (೧೯೪೭-೪೯) ಆಗಿದ್ದಾಗ ಭಾರತೀಯ ವಾಯುಪಡೆಯ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಿದೆ. ಮದ್ರಾಸಿನಲ್ಲಿಯ ಪ್ರಾರಂಭಿಕ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿ ಮುಂದೆ ಡೆಹ್ರಾಡೂನಿನ ಸೇನಾಶಿಕ್ಷಣ ಕೇಂದ್ರದಲ್ಲಿ ನಾಲ್ಕು ದಿನಗಳ ಅಂತಿಮ ಪರೀಕ್ಷೆ-ತಪಾಸಣೆ-ಮೌಖಿಕ ಭೇಟಿಗಳಿಗೆ ಹಾಜರಾದೆ. ಇಲ್ಲೆಲ್ಲ ಈ ಎನ್ - ಭಾರದ ಕಾರಣವಾಗಿ ನನ್ನ ಸರದಿ ಬರುವಷ್ಟರಲ್ಲಿ ಪರೀಕ್ಷಕರೆಲ್ಲ ಸೋತು ಸುಣ್ಣಾಗಿ ಕಾಟಾಚಾರಕ್ಕೆ ಅದನ್ನು ಹೇಗೋ ಮುಗಿಸುತ್ತಿದ್ದರೆಂಬ ಭಾವನೆ ನನ್ನನ್ನು ಪ್ರಬಲವಾಗಿ ಕಾಡತೊಡಗಿತು. ಅಲ್ಲಿ ಆಯ್ಕೆ ಆಗಲಿಲ್ಲ ಎಂಬ ಸಂಗತಿ ಈಗ ಅಪ್ರಸ್ತುತ! ಹೆಸರಲ್ಲೇನಿದೆ? ಗುಲಾಬಿ ಹೂವನ್ನು ಬೇರೆ ಯಾವ ಹೆಸರಿಂದ ಕರೆದರೂ ಅದರ ಪರಿಮಳಕ್ಕೇನಾದರೂ ಊನ ತಟ್ಟೀತೇ ಎಂಬ ಶೇಕ್ಸ್ಪಿಯರ್ ವಾಣಿ ನನ್ನ ವಿಚಾರದಲ್ಲಿ ಹುಸಿಯಾಗಿತ್ತು!

21 January 2014

ಚಂದ್ರ ದರ್ಶನ ಮತ್ತು ಸಂದರ್ಶನ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ ವಿ-ಧಾರಾವಾಹಿಯ ಕಂತು ಮೂವತ್ತೊಂಬತ್ತು
ಅಧ್ಯಾಯ ೮೭ (ಮೂಲದಲ್ಲಿ ೫೯)

ನಮ್ಮ ಎರಡನೆಯ ಮಗ ಆನಂದ. ಇವನ ಮಡದಿ ಜಯಶ್ರೀ, ಮಗಳಂದಿರು ಅನರ್ಘ್ಯ ಮತ್ತು ಐಶ್ವರ್ಯ. ಈತ ಗಣಕ ವಿಜ್ಞಾನಿ, ಜಯಶ್ರೀ ಗೃಹಿಣಿ. ಈ ಕುಟುಂಬ ೧೯೯೦ರ ವೇಳೆಗೆ ಹೊಸ ಹಸುರು ಅರಸಿ ಪಡುವಲಿಗೆ ಪಯಣಿಸಿ ಅಮೆರಿಕದ ಪೋರ್ಟ್ ಲ್ಯಾಂಡಿನಲ್ಲಿ (ಓರೆಗಾನ್) ನೆಲಸಿತು. ಪ್ರತಿಷ್ಠಿತ ಇಂಟೆಲ್ ಕಂಪೆನಿಯಲ್ಲಿ ಇವನೊಬ್ಬ ತಂತ್ರಾಂಶ ಎಂಜಿನಿಯರ್. ಮಕ್ಕಳ ಶಿಕ್ಷಣ ಅಲ್ಲೇ. ಇವರ ಮನೋಧರ್ಮ ಹೇಗಿತ್ತು, ಮತ್ತು ಇದೆ? ಅಶನ ವಸನ ವಸತಿ ಅಲ್ಲಿ (ಅಮೆರಿಕ), ಆದರೆ ಉಸಿರು ಮಾತ್ರ ಇಲ್ಲಿ (ಭಾರತ). ಮನೆಯಲ್ಲಿ ಸಂಪೂರ್ಣ ಭಾರತೀಯ ಸಂಸ್ಕೃತಿ, ಕನ್ನಡದ ಕಂಪು, ಅಲ್ಲಿಯ ಕನ್ನಡ ಮತ್ತು ಕಲಾಸಂಘಗಳಲ್ಲಿ ಸಕ್ರಿಯ ಪಾತ್ರ ಮುಂತಾದವು ಇವರ ಜೀವನ ಶೈಲಿ, ಹಕ್ಕಿನ ರಜಾದಿನಗಳಲ್ಲಿ ಭಾರತಕ್ಕೆ ಮರಳಿ ಇಲ್ಲಿಯ ಆತ್ಮೀಯ ಸಾಂಸ್ಕೃತಿಕ ಹವೆಯಲ್ಲಿ ಯಥೇಚ್ಛವಾಗಿ ಮಿಂದು ಪುನೀತರಾಗಿ ನವೋತ್ಸಾಹದೀಪ್ತರಾಗಿ ಮರಳುವುದು ವಾಡಿಕೆ.

ಸಹಜವಾಗಿ ಇವರ ಒಂದು ಉತ್ಕಟ ಅಪೇಕ್ಷೆ ನಮ್ಮಿಬ್ಬರನ್ನೂ ಅಂತೆಯೇ ಜಯಶ್ರೀಯ ತಾಯಿ ತಂದೆಯರನ್ನೂ ಅಮೆರಿಕಕ್ಕೆ ಕರೆಸಿಕೊಂಡು ತಮ್ಮ ಹೊಸಗೂಡಿನ ನವಗಾನದ ಸೊಗಸನ್ನು ಉಣಿಸುವುದು. ಇಂಥ ಎಲ್ಲ ಪ್ರೀತಿಯ ಆಹ್ವಾನಗಳಿಗೂ ನನ್ನ ಸಿದ್ಧ ದೃಢ ಉತ್ತರ ಒಂದೇ, “God is my enemy number one, and travel enemy number two. I keep away from both.” ಅವರ ಒತ್ತಾಯ ತೀರ ಜಾಸ್ತಿ ಆದಾಗ ನಾನೊಂದು ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದ್ದೆ, ಮಕ್ಕಳೇ! ನಮ್ಮ ಮೇಲೆ ನೀವು ವೆಚ್ಚ ಮಾಡಬೇಕೆಂದಿರುವ ಈ ಹಿರಿ ಮೊಬಲಗನ್ನು ನಿಮಗೆ ಪ್ರಿಯವಾದ ಯಾವುದೇ ಭಾರತೀಯ ಸಂಸ್ಥೆಗೆ ದಾನಮಾಡಿಬಿಡಿ. ಇಂಥ ಸೇವೆ ಶಾಶ್ವತ, ನಮ್ಮ ಪ್ರಯಾಣದಿಂದ ನಿಮಗೆಲ್ಲ ದೊರೆಯುವ ಸಂತೋಷವಾದರೋ ಕೇವಲ ಕ್ಷಣಿಕ.

14 January 2014

ನಿವೃತ್ತ ಜೀವನದಲ್ಲಿ ತಯಾರಿಸಿದ ಅನುಭವದಡುಗೆ

ಜಿಟಿನಾರಾಯಣ ರಾಯರಮುಗಿಯದ ಪಯಣ ವಿ-ಧಾರಾವಾಹಿಯ ಕಂತು ಮೂವತ್ತೆಂಟು
ಅಧ್ಯಾಯ ೮೪  (ಮೂಲದಲ್ಲಿ ೫೬)

ಸೆಪ್ಟೆಂಬರ್ ೧೪, ೧೯೮೬ರಂದು ನನಗೆ ಅಧಿಕೃತವಾಗಿ ವಯಸ್ಸು ೬೦ ತುಂಬಿದುದರಿಂದ (ವಾಸ್ತವವಾಗಿ ಈ ದಿನಾಂಕ ೩೦--೧೯೮೬ ಆಗಬೇಕು) ನಾನು ವಿಶ್ವವಿದ್ಯಾನಿಲಯದ ನಿಯಮಗಳ ಪ್ರಕಾರ ಸೆಪ್ಟೆಂಬರ್ ೩೦ರಂದು ವೃತ್ತಿಯಿಂದ ನಿವೃತ್ತನಾದೆ. ಆರೋಗ್ಯ, ಅನುಭವ, ಉತ್ಸಾಹ, ಗೃಹಸ್ಥಿತಿಗತಿ ಮತ್ತು ಕಾರ್ಯೋಲ್ಲಾಸ ಎಲ್ಲವೂ ಗರಿಷ್ಠ ಮಟ್ಟದಲ್ಲಿದ್ದಾಗ, ವಿಶ್ವಕೋಶ ನಿರ್ಮಾಣಕಾರ್ಯ ಇನ್ನೂ ಪೂರ್ಣವಾಗಿರದಿದ್ದಾಗ (೧೪ ಸಂಪುಟಗಳ ಯೋಜನೆಯಲ್ಲಿ ೧೨ ಮಾತ್ರ ಆ ವೇಳೆಗೆ ಮುಗಿದಿದ್ದುವು), ಇದನ್ನು ಪೂರೈಸಲು ಸಮರ್ಥ ವಿಜ್ಞಾನ ಸಂಪಾದಕ ಅಲಭ್ಯವಾಗಿದ್ದಾಗ ಮತ್ತು ಕನ್ನಡದ ಈ ಕರ್ತವ್ಯ ನಿರ್ವಹಿಸಲು ನಾನು ಸಿದ್ಧನಾಗಿದ್ದಾಗ ವಿಶ್ವವಿದ್ಯಾನಿಲಯ ಕೇವಲ ಅಂಧ ಧೇನುಕ ನಿಯಮಗಳಿಗೆ ಶರಣಾಗಿ ನನ್ನ ನಿವೃತ್ತಿಯನ್ನು ಮನ್ನಣೆ ಮಾಡಿತು.

ಮುಂದೇನು ದಾರಿ ನನ್ನೆದುರು? ಯಾವುದೇ ಬಗೆಯ ತಾಬೆದಾರಿಗೆ, ಎಷ್ಟೇ ಆಕರ್ಷಣೀಯವಾಗಿದ್ದರೂ ಒಪ್ಪಿಕೊಳ್ಳತಕ್ಕದ್ದಲ್ಲ ಎಂಬುದು ನನ್ನ ದೃಢ ನಿಲವು. ಒಮ್ಮೆ ರಾಜನಾಗಿದ್ದ ಕಾನನಕ್ಕೆ ಮತ್ತೆ ಪ್ರವೇಶಿಸತಕ್ಕದ್ದಲ್ಲ, ಅಲ್ಲವೇ?
ದಾರಿಗಾ! ನಿನಗೊಂದು ಪಥ ದತ್ತವಾಗಿಲ್ಲ
ನೀರಿಗಿಳಿ, ಅಂಜದೆಯೆ ಅಳುಕದೆಯೆ ಈಸುತಿರು
ನೀ ರೂಪಿಸುವೆ ಹೊಸತು ಮಾರ್ಗವನು, ಬದುಕಿನಲಿ
ಸಾರ್ಥಕ್ಯ ಗಳಿಸಲಿಹ ಮಾರ್ಗವಿದು ಅತ್ರಿಸೂನು

07 January 2014

ಕೊಡಗುಜಿಲ್ಲಾ ೫ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಭಾಷಣ


ಜಿಟಿನಾರಾಯಣ ರಾಯರ ‘ಮುಗಿಯದ ಪಯಣ ವಿ-ಧಾರಾವಾಹಿಯ ಕಂತು ನಲ್ವತ್ತು
ಅಧ್ಯಾಯ ೯೧ (ಮೂಲದಲ್ಲಿ ೬೨ರ ಭಾಗ)
ತನು ಕನ್ನಡ, ಮನ ಕನ್ನಡ, ಧನ ಕನ್ನಡವೆಮ್ಮವು - ಮಂಜೇಶ್ವರ

ಪೀಠಿಕೆ
ನಲವತ್ತಮೂರು ವರ್ಷಗಳ ಹಿಂದೆ (೧೯೬೩) ಕೊಡಗಿನಿಂದ ಭೌತಿಕವಾಗಿ ದೂರಹೋದ ಒಬ್ಬ ಸಾಮಾನ್ಯನನ್ನು ಇಂದಿನ ಸ್ಥಳೀಯ ಚೇತನಗಳು ಗುರುತಿಸಿ ಗೌರವಿಸುತ್ತಿರುವುದು ನನ್ನ ಜೀವನದಲ್ಲಿ ಒಂದು ಅವಿಸ್ಮರಣೀಯ ಅನುಭವ. ಇಲ್ಲಿಯ ಸಹೃದಯ ಬಂಧುಗಳ ಔದಾರ್ಯಕ್ಕೆ ಕೃತಜ್ಞತೆಯಿಂದ ಶಿರಬಾಗಿ ಈ ಗಳಿಗೆಯಲ್ಲಿ ನನ್ನ ಮನದೊಳಗೆ ಮಿಡಿಯುತ್ತಿರುವ ಭಾವವನ್ನು ಅಭಿವ್ಯಕ್ತಿಸಲು ಮುಂದಿನ ಸಾಲುಗಳನ್ನು ವಾಚಿಸ ಬಯಸುತ್ತೇನೆ:
ಔದಾರ್ಯ ಸಹಜ ಗುಣ, ಅಭಿವ್ಯಕ್ತಿ ಪರಮ ಗುಣ
ಸೋದರತೆಯಂ ಪ್ರೇರಿಸುವ ದೇವ ಲಕ್ಷಣವೊ!
ನಾದುತಿರೆ ಬಾಳೆಂಬ ಚೂರ್ಣವನು ಕಾಯಕದಿ
ಬುದ್ಬುದಿಪ ಪೀಯೂಷಸಾರವದು ಅತ್ರಿಸೂನು

ವ್ಯಕ್ತಿಯ ತಂದೆ ತಾಯಿಯರ ಅಥವಾ ಜನನ ಸ್ಥಳದ ಆಯ್ಕೆ ಕುರಿತಂತೆ ಆತನಿಗೇನೂ ಸ್ವಾತಂತ್ರ್ಯವಿಲ್ಲ. ಅದು ನಿಸರ್ಗದ ಅಭೇದ್ಯ ರಹಸ್ಯಗಳ ಪೈಕಿ ಒಂದು. ಹುಟ್ಟಿದ ಬಳಿಕ ಆತನ ವಿಕಾಸದಲ್ಲಿ ಪ್ರಮುಖ ಪಾತ್ರ ವಹಿಸುವ ಪ್ರಭಾವಗಳು ಐದು: ಗೃಹಪರಿಸರ, ಶಿಕ್ಷಣ, ಸ್ಥಳೀಯ ಸಂಸ್ಕೃತಿ, ನಿಸರ್ಗ ಮತ್ತು ಸಮಕಾಲೀನತೆ.

31 December 2013

ಕುಲಪತಿ ಬೀರಿದ ಕ್ಷಿಪಣಿ ತಿರುಗುಬಾಣವಾದಾಗ

ಜಿಟಿನಾರಾಯಣ ರಾಯರಮುಗಿಯದ ಪಯಣ ವಿ-ಧಾರಾವಾಹಿಯ ಕಂತು ಮೂವತ್ತೇಳು
ಅಧ್ಯಾಯ ೮೧  (ಮೂಲದಲ್ಲಿ ೫೩)

೧೯೮೬ರ ಸೆಪ್ಟೆಂಬರ್ ಕೊನೆಗೆ ನಾನು ನಿವೃತ್ತನಾಗಬೇಕಿತ್ತು. ಆಗ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದವರು ವೈ.ಪಿ. ರುದ್ರಪ್ಪ ಮತ್ತು ಕುಲಸಚಿವ ಎಸ್. ನಾರಾಯಣಶೆಟ್ಟಿ (ಸುಜನಾ ಎಂಬ ಕಾವ್ಯನಾಮದ ಖ್ಯಾತ ಕವಿ). ಇನ್ನು ನಮ್ಮ ಸಂಸ್ಥೆಯ ನಿರ್ದೇಶಕರಾಗಿದ್ದವರು ಎಚ್. ತಿಪ್ಪೇರುದ್ರಸ್ವಾಮಿ. ರುದ್ರಪ್ಪ ಹೆಸರಿಗೆ ತಕ್ಕಂತೆ ಶಿಸ್ತುನಿಷ್ಠುರರು, ಸತ್ಯಸಂಧರು ಮತ್ತು ಉಗ್ರಕೋಪಿಷ್ಠರೆಂದೇ ಪ್ರಸಿದ್ಧರು. ಆ ವೇಳೆಗೆ ವಿಶ್ವವಿದ್ಯಾನಿಲಯದೊಳಗಿನ ಸ್ಥಿತಿ ಏನಾಗಿತ್ತು ಗೊತ್ತೇ?
ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ
ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ?
ತನುವಿನೊಳಗೆ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ
ಮತ್ತು, “ದಾರುಗಟ್ಟಿ ಮಾಳ್ಪರಿಲ್ಲದೆ ಕಾಲ ಕತ್ತಲೆಯೊಳಗೆ.... ಸೋರುತಿಹುದು ಮನೆಯ ಮಾಳಿಗಿ” (ಶಿಶುನಾಳ ಶರೀಫ).
ವಿಶ್ವಕೋಶದಲ್ಲಿಯ ನಮ್ಮ ಭವಿಷ್ಯವೇ ಶೂನ್ಯಗಾಮಿಯಾಗುತ್ತಿದೆಯೋ ಎಂಬ ಆತಂಕದ ದಿನಗಳವು. ಇಂಥ ಅರಾಜಕತೆಗೆ ಶಾಸ್ತಿ ಮಾಡಲು ಒಬ್ಬ ಉಕ್ಕಿನ ಆಡಳಿತಗಾರರಾಗಿ ಬಂದವರೇ ರುದ್ರಪ್ಪ. ಕೇವಲ ಬೆರಳೆಣಿಕೆಯ ದಿನಗಳಲ್ಲೇ ಅವರು ತಮ್ಮ ಉಕ್ಕುತನವನ್ನು ಆಡಳಿತೆಯ ಜಡಯಂತ್ರಕ್ಕೆ ಪ್ರಹಾರಿಸಿ ಎಲ್ಲ ಕೆಲಸಗಳ್ಳ ಅಲಸಿಗರಿಗೂ ಸಿಂಹಸ್ವಪ್ನವಾದರು. ಅವರ ಕಾರ್ಯವೈಖರಿಯ ವಿವರಗಳು ಜನಜನಿತವಾಗಿ ನನ್ನ ಕಿವಿಗೂ ಮುಟ್ಟುತ್ತಿದ್ದುವು. “ಭಲೇ ರುದ್ರಪ್ಪ!” ಎಂದುಕೊಳ್ಳುತ್ತಿದ್ದೆ ಮನದೊಳಗೆ.

24 December 2013

ಎಂಎಸ್‌ಐಎಲ್ ಮಾಡಿದ ನೂತನ ಪ್ರಯೋಗ

ಜಿಟಿನಾರಾಯಣ ರಾಯರಮುಗಿಯದ ಪಯಣ ವಿ-ಧಾರಾವಾಹಿಯ ಕಂತು ಮೂವತ್ತಾರು
ಅಧ್ಯಾಯ ೭೮  (ಮೂಲದಲ್ಲಿ ೫೦)

ಅಂದಾಜು ೧೯೭೪. ಅದೇ ಜೂನ್ ತಿಂಗಳ ಒಂದು ದಿನ ನಮ್ಮ ಮನೆಗಿಬ್ಬರು ಅಪರಿಚಿತರು ಬಂದರು. ಇವರಲ್ಲೊಬ್ಬ ಬೆಂಗಳೂರಿನಲ್ಲಿ ತತ್ಪೂರ್ವ ನನ್ನ ಶಿಷ್ಯ ಆಗಿದ್ದರಂತೆ, ಹೆಸರು ಜಯದೇವ. ಆದರೆ ನನಗೆ ಕೊಂಚವೂ ನೆನಪಿರಲಿಲ್ಲ. ಭವ್ಯ ಗಾತ್ರದ ಹಸನ್ಮುಖಿ ಮತ್ತು ಯಾವುದೇ ಸಾಹಸವನ್ನು ಪ್ರದರ್ಶಿಸಿ ಗೆಲ್ಲಬಲ್ಲೆನೆಂಬ ಆತ್ಮವಿಶ್ವಾಸವಿದ್ದಾತ. ಕಾಲೇಜ್ ವ್ಯಾಸಂಗಾನಂತರ ಎಂಎಸ್ಐಎಲ್ ಸಂಸ್ಥೆ ಸೇರಿದ್ದನೆಂದು ತಿಳಿಯಿತು. ಇವರ ಜೊತೆಗಿದ್ದ ತುಸು ಹಿರಿಯನ ಹೆಸರು ಪೀಟರ್ ಕೊಲಾಸೊ. ಇವರು ಆ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ. ಎಲ್ಲವೂ ನನಗೆ ಟಿಂಬಕ್ಟೂ ಭಾಷೆ! ಅವರನ್ನೇ ಪ್ರಶ್ನಿಸಿ ತಿಳಿದುಕೊಂಡೆ ಆ ನಾಲ್ಕು ಅಕ್ಷರಗಳ ಬೀಜಮಂತ್ರದ ಮಹಿಮೆಯನ್ನು: Mysore Sales International Limited ಎಂಬುದೊಂದು ಸರ್ಕಾರಿ ಸ್ವಾಮ್ಯದ ಸ್ವಾಯತ್ತ ವಾಣಿಜ್ಯ ಸಂಸ್ಥೆ. ಇದರ ಹಲವಾರು ಯೋಜನೆಗಳ ಪೈಕಿ ವಿದ್ಯಾರ್ಥಿ ಆವಶ್ಯಕತೆಗಳಾದ ಲೇಖನ ಸಾಮಗ್ರಿಗಳ ತಯಾರಿಕೆ ಮತ್ತು ಸಗಟು ವ್ಯಾಪಾರ ಒಂದು. ಕಾಗದದ ಬೆಲೆ ತೀರ ತುಟ್ಟಿಯಾಗಿದ್ದ ಆ ದಿನಗಳಂದು ಎಂಎಸ್ಐಎಲ್ ರಂಗ ಪ್ರವೇಶಿಸಿ ಸಾದಿಲ್ವಾರು ರಂಗದಲ್ಲಿಯ ಕೊರತೆಯನ್ನು ನೀಗಿತ್ತು ಮತ್ತು ಗಮನಾರ್ಹ ಬೆಲೆ ನಿಯಂತ್ರಣ ಕೂಡ ಸಾಧಿಸಿ ವಿದ್ಯಾರ್ಥಿಗಳ ಪ್ರೀತಿ ಗಳಿಸಿತ್ತು. ಇವರಲೇಖಕ್ ಛಾಪಿನ ಲೇಖನ ಸಾಮಗ್ರಿಗಳು ಕರ್ನಾಟಕಾದ್ಯಂತ ಒಂದು ಕ್ರಾಂತಿಯನ್ನೇ ಸಾಧಿಸಿದ್ದುವು.