(ಮರಣೋತ್ತರ
ನುಡಿನಮನಗಳು ೨)
(ಬಾಗಲೋಡಿ
ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ
ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
(ಭಾಗ ೧೭)
-
ಹಾ.ಮಾ. ನಾಯಕ
ಸುಮಾರು ೧೯೪೨-೪೩ರ ಮಾತು. ಮಂಗಳೂರಿನ
ಸಂತ ಅಲೋಶಿಯಸ್ ಕಾಲೇಜಿನ ಇಂಟರ್ಮೀಡಿಯೆಟ್ ತರಗತಿಯ ಇಂಗ್ಲಿಷ್ ಪಾಠದ ಅವಧಿ. ದೊಡ್ಡ ಹಾಲು; ಮೂರು
ನಾಲ್ಕು ತರಗತಿಗಳ ಹುಡುಗರು ಸೇರಿದ್ದಾರೆ. ಫಾದರ್ ಸಿಕ್ವೇರಾ ಆ ಹೊತ್ತು ತಮ್ಮ ಕಡತದಿಂದ ಆರಿಸಿ ಒಂದು
ಪ್ರಬಂಧವನ್ನು ಓದಿದರು. ತಲೆದೂಗುವಂಥ ಬರವಣಿಗೆ. ಜೊತೆಗೆ ಸಿಕ್ವೇರಾ ಅವರ ಓದುಗಾರಿಕೆಯ ಆಕರ್ಷಣೆ.
ಹುಡುಗರು ಮಂತ್ರಮುಗ್ಧರಾಗಿ ಕೇಳಿದರು. ಪ್ರಬಂಧವನ್ನು ಓದಿ ಮುಗಿಸಿ, ಸಿಕ್ವೇರಾ ತರಗತಿಯನ್ನು ಪ್ರಶ್ನಿಸಿದರು.
"ಈ ಪ್ರಬಂಧವನ್ನು ಬರೆದವರು ಯಾರು?" ಯಾರು ಉತ್ತರ ಕೊಡಬೇಕು? ಕೊನೆಗೆ ಅವರೇ ಹೇಳಿದರು,
"ಈ ಪ್ರಬಂಧ ಬರೆದವರು ಇದೇ ತರಗತಿಯ ವಿದ್ಯಾರ್ಥಿ ಬಿ. ದೇವರಾವ್." "ಯಾರು ದೇವರಾವ್?"
ಫಾದರ್ ಸಿಕ್ವೇರಾ ಕೇಳಿದರು. ಹುಡುಗರೆಲ್ಲ ಕುತೂಹಲದಿಂದ ಆ ಕಡೆ ಈ ಕಡೆ ಕಣ್ಣಾಡಿಸತೊಡಗಿದರು. ಎದುರು
ಸಾಲಿನಲ್ಲಿದ್ದ ಒಬ್ಬ ಸಣ್ಣ ಹುಡುಗ ಎದ್ದು ನಿಂತು ಹೇಳಿದ, "ನಾನೇ ದೇವರಾವ್". ಎಲ್ಲರಿಗೂ
ಆಶ್ಚರ್ಯ. ಈ ಪೋರನಿಗೆ ಇಂಗ್ಲಿಷಿನ ಮೇಲೆ ಇಷ್ಟೊಂದು ಪ್ರಭುತ್ವವೇ ಎನ್ನುವುದು ಆಶ್ಚರ್ಯಕ್ಕೆ ಕಾರಣ.
ಸಿಕ್ವೇರಾ ಹುಡುಗನನ್ನು ಕೇಳಿದರು, "ಈ ಪ್ರಬಂಧ ನೀನೇ ಸ್ವಂತವಾಗಿ ಬರೆದದ್ದೇ?" ಹುಡುಗ
ದೃಢವಾದ ಧ್ವನಿಯಲ್ಲಿ ಹೇಳಿದ. "ಅಫ್ ಕೋರ್ಸ್! ಅನುಮಾನಕ್ಕೆ ಕಾರಣವೇನು?"
