(ಕೊಡಗಿನ ಸುಮಗಳು – ಜಿಟಿನಾ ಸಮಗ್ರ ಕಥಾ ಸಂಕಲನದ ಕೊನೆಯ ಮತ್ತು ಹನ್ನೆರಡನೆಯ ಕತೆ - ೧೯೪೯)
ನಾನು ಎಸ್ಎಸ್ಎಲ್ಸಿ
ಪರೀಕ್ಷೆಗೆ ಕುಳಿತ ವರ್ಷವದು (೧೯೪೨ ಮಾರ್ಚ್). ಪರೀಕ್ಷೆ ಮುಗಿದ ಮೇಲೆ ನನ್ನ
ಚಿಕ್ಕಪ್ಪನವರಲ್ಲಿಗೆ ಹೋದೆನು, ಕೆಲವು ದಿನಗಳನ್ನು ಅಲ್ಲಿ ಕಳೆಯಲೆಂದು. ಅವರು ಕಾರುಗುಂದ ಎಂಬ
ಹಳ್ಳಿಯಲ್ಲಿ ವೈದ್ಯರಾಗಿದ್ದರು. ಅವರ ಮನೆಯು ಎತ್ತರ ನೆಲೆಯಲ್ಲಿ ಪ್ರಕಾಶಮಾನವಾಗಿಯೂ
ಆಹ್ವಾದಕರವಾಗಿಯೂ ನಿಂತಿತ್ತು. ಒಂದು ಬದಿಯಲ್ಲಿ ಮಡಿಕೇರಿ ಭಾಗಮಂಡಲದ ರಸ್ತೆಯು ನೇರವಾಗಿ
ಓಡುತ್ತದೆ. ಇನೊಂದು ಕಡೆ ನಾಪೋಕ್ಲಿಗೆ ಹೋಗುವ ದಾರಿ ಕವಲೊಡೆದಿದೆ. ರಸ್ತೆಗಳ ಮಧ್ಯದಲ್ಲಿ ಒಂದು
ದ್ವೀಪದಂತೆ ಈ ಮನೆಯು ಇದೆ. ಹಗಲು ನಮಗೆ ಜನರ ಅಭಾವವೇ ಇರಲಿಲ್ಲ. ಔಷಧಿಗೆ ಬರುವವರು ಬಲುಮಂದಿ
ಇರುತ್ತಿದ್ದರು. ಸುತ್ತಲಿನ ಹಳ್ಳಿಗಳಿಗೆ ಇಲ್ಲಿ ದಾಕುದಾರರು ಇರುವುದಾಗಿತ್ತು. ಇಲ್ಲವಾದರೆ
ಒಳ್ಳೆ ಔಷಧಿ ದೊರೆಯಲು ಮತ್ತೆ ಹನ್ನೆರಡು ಮೈಲು ದೂರದ ಮಡಿಕೇರಿಗೆ ಹೋಗಬೇಕು. ಚಿಕ್ಕಪ್ಪ
ಕಾರುಗುಂದದಲ್ಲಿ ಔಷಧಾಲಯ ಸ್ಥಾಪಿಸಿ ಒಂದು ತಿಂಗಳಾಗಿತ್ತು ಅಷ್ಟೆ. ಆದ್ದರಿಂದ ಅವರಿಗೆ ಸುತ್ತಲಿನ
ಜನರ ಪರಿಚಯ ಚೆನ್ನಾಗಿ ಆಗಿರಲಿಲ್ಲ. ಆದರೆ ನನಗೆ ಸಮಯ ಹೋಗಲು ಯಾವ ತೊಂದರೆಯೂ ಇರಲಿಲ್ಲ. ಸೈಕಲ್
ತೆಗೆದುಕೊಂಡು ದೊಡ್ಡ ದಾರಿಯಲ್ಲಿ ದೂರ ಸವಾರಿ ಹೋಗುವುದು. ನಾಪೋಕ್ಲು ಕಡೆ ಹೋದರೆ ಒಂದೂವರೆ ಮೈಲಿನಲ್ಲಿಯೇ ಕಾವೇರಿ
ಹೊಳೆಯು ಸಿಗುವುದು. ಅದರ ಪರಂಬು (ಮಳೆಗಾಲದಲ್ಲಿ ಪ್ರವಾಹದ ನೀರು ನಿಂತು ಫಲವತ್ತಾದ ಹೊಳೆಯ ಕರೆಯ
ಬಯಲು) ವಿಶಾಲವಾಗಿ ಸುಂದರವಾಗಿ ಹಬ್ಬಿದೆ, ಅಲ್ಲಿ ಹೋಗಿ ಮಲಗಿಕೊಂಡು ಮುಗಿಲನ್ನೂ ನಿಬಿಡವಾಗಿ ಬೆಳೆದಿರುವ
ಕಾಡುಗಳನ್ನೂ ನೋಡುವದು; ನೇರಿಳೆ ಹಣ್ಣುಗಳನ್ನು ತಿನ್ನಲು ಹೋಗಿ ಕೆಂಪಿರುವೆಗಳಿಂದ ಕಡಿಸಿಕೊಂಡು ಕೈ ಕುಡುಗುವುದು; ಇನ್ನು ಮನೆಯಲ್ಲಿಯೇ ಕುಳಿತಾಗ ಮಕ್ಕಳೊಡನೆ ಆಡುವುದು, ಕೆಣಕಿ ಅಳಿಸುವುದು; ಅಡುಗೆಮನೆಯೊಳಗೆ ಅವಲಕ್ಕಿ ಕಾಯನ್ನು ಮೆಲ್ಲುತ್ತ ಚಿಕ್ಕಮ್ಮನೊಡನೆ ಪಟ್ಟಾಂಗ - ಇವೇ
ಮುಂತಾದವುಗಳು ನನ್ನ ಮುಖ್ಯ ಕಾರ್ಯಗಳಾಗಿದ್ದುವು. ಒಮ್ಮೊಮ್ಮೆ ಹಳ್ಳಿಯವರು ಮಡಿಕೇರಿಯ ಈ
ಪ್ರಭೃತಿಯನ್ನು ನೋಡಬೇಕೆಂದು ಬಯಸುತ್ತಿದ್ದರು. ಆಗ ಚಿಕ್ಕಪ್ಪ ನನ್ನನ್ನು ಕರೆಯುತ್ತಿದ್ದರು.
ನನ್ನೊಡನೆ ಕೆಲವು ಮಾತಾಡಿ, ಆ ಹಳ್ಳಿಗನು ಇಂದಿಗೆ ಧನ್ಯನಾದೆ
ಎಂಬಂತೆ ಹೋಗುತ್ತಿದ್ದ. ನಾನು ಇದು ಬಹಳ ವಿನೋದಕರವಾಗಿದೆಯಂದು ಒಳಗೆ ಹೋಗುತ್ತಿದ್ದೆನು. ಸಾಯಂಕಾಲ
ಪೇಷಂಟುಗಳಿಲ್ಲದಿದ್ದರೆ ನಾನೂ ಚಿಕ್ಕಪ್ಪನೂ ಸ್ವಲ್ಪ ದೂರ ತಿರುಗಾಡಿಕೊಂಡು ಹೋಗುತ್ತಿದ್ದೆವು.
ಆದರೆ ದಾರಿಯಲ್ಲಿ ಕೆಲವರು “ಸ್ವಲ್ಪ ಬನ್ನಿ, ಸ್ವಾಮಿ” ಎಂದು ಕರೆದುಕೊಂಡು ತಮ್ಮ ಮನೆಗೆ ಹೋಗಿ
ಖಾಯಿಲಸ್ತರನ್ನು ತೋರಿಸುತ್ತಿದ್ದರು. ನಾನು ಅವರನ್ನು ಹಿಂಬಾಲಿಸಬೇಕಿತ್ತು. ಅಲ್ಲಿ ಕಾದು ಕಾದು
ಬೇಸರ ಬರುತ್ತಿತ್ತು. ಹೊರಡುವಾಗ ಮಾತ್ರ ಹಾಲು, ಬಾಳೇಹಣ್ಣು, ನೇರಿಳೇ ಹಣ್ಣು ಇವೆಲ್ಲ ತಿನ್ನಲು ದೊರೆಯುತ್ತಿದ್ದುವು. ಯಾರು
ನನಗೆ ಸರಿಯೆನ್ನುವ ಭಾವನೆಯಿಂದ ಆ ದಿನಗಳನ್ನು ಸಂತೋಷದಿಂದ ಕಳೆಯುತ್ತಿದ್ದೆನು.
