Showing posts with label ಇತರ ಸಾಹಸಗಳು. Show all posts
Showing posts with label ಇತರ ಸಾಹಸಗಳು. Show all posts

30 June 2020

ದ್ವಿಜತ್ವ ಕೊಡಿಸಿದ ಮೈಸೂರು

(ಜಾತಿ ಮತಗಳ ಚಕ್ರಸುಳಿ ಮೀರಿ - ೫) 


೧. ಬ್ರಾಹ್ಮಣ ಭೋಜನದಲ್ಲಿ ವೀರಪ್ಪ ಗೌಡರು! 

ಸಾಂದರ್ಭಿಕ ಚಿತ್ರ

ವೈಜ್ಞಾನಿಕ ಮನೋಧರ್ಮವನ್ನು ಸ್ವಂತ ಜೀವನಕ್ಕಳವಡಿಸಿಕೊಂಡೇ ಇತರರಿಗೆ ಮಾತು, ಬರಹಗಳಲ್ಲಿ ಪ್ರಚಾರ ಮಾಡಿದವರು ನನ್ನ ತಂದೆ - ಜಿಟಿನಾ. ಅವರಿಗೆ ಮುತ್ತಜ್ಜನಿಂದ ಶ್ಲೋಕಗಳ ಪಾಠವಾದ್ದಕ್ಕೆ, ಏಳರ ಪ್ರಾಯದಲ್ಲಿ ಉಪನಯನದ ಮುದ್ರೆ ಬಿದ್ದಿತ್ತು. ಮುಂದೆ ಹುಡುಗ ವೇದ ಮಂತ್ರಗಳಿಗೆ ಏರುತ್ತ, ಬಾಲಶಂಕರನೇ ಆಗಬೇಕೆಂಬ ನಿರೀಕ್ಷೆ ಅವರಪ್ಪಮ್ಮಂದಿರದ್ದಿತ್ತು. ಆದರೆ ಹನ್ನೊಂದರ ಪ್ರಾಯದಲ್ಲಿ ಇವರಲ್ಲಿ ‘ಬುದ್ಧ’ನೆದ್ದಿದ್ದ. (ಹೆಚ್ಚಿನ ವಿವರಗಳಿಗೆ ಶಾಲೆ ತೊಡಿಸಿದ ಕಡಿವಾಣ

ನನ್ನ ಬಾಲ್ಯದಲ್ಲಿ ಪರಿಚಿತ ಸಮಾಜದ ನಿರೀಕ್ಷೆಯ ‘ಅಶೋಕನ ಉಪನಯನ’, ‘ಗಣಪತಿ ಮದುವೆ’ ಆಗಿತ್ತು. ಆದರೆ ಮಗನ ಮೇಲೆ ಅಮ್ಮನ ಹಕ್ಕನ್ನು ತಂದೆ ತಡವಾಗಿಯಾದರೂ ಮನ್ನಿಸಬೇಕಾಯ್ತು. (ನನ್ನನ್ನೂ ಒಪ್ಪಿಸಲಾಯ್ತು!) ನಾನು

26 June 2020

ಅರೆಸೈನಿಕನ ರೂಪಣೆಯಲ್ಲಿ ಮೈಸೂರು

(ಜಾತಿ ಮತಗಳ ಚಕ್ರಸುಳಿ ಮೀರಿ -೪) 


೧. ತಪ್ಪಿಸಿಕೊಳ್ಳಲಾಗದ ಕಂಬಳಿ ಪೆರೇಡ್ 


ಮಹಾರಾಜಾದಲ್ಲಿ ನಾನು ಕಾಲೇಜಿಗಿಂತ ಹೆಚ್ಚಿನ ಮುತುವರ್ಜಿಯಲ್ಲಿ ಎನ್.ಸಿ.ಸಿ ಸೇರಿದ್ದೆ. ಕಾರಣ ಗೊತ್ತಲ್ಲ - ತನ್ಮೂಲಕ ಪರ್ವತಾರೋಹಣ ಶಿಬಿರಕ್ಕೆ ಹೋಗುವುದು! ನಾನು ಬೆಂಗಳೂರಿನಲ್ಲಿದ್ದಾಗ ಕಡ್ಡಾಯ ಎನ್.ಸಿ.ಸಿ ಇತ್ತು. ಸಹಜವಾಗಿ ಸರಕಾರೀ ಕಾಲೇಜು ಒಂದಕ್ಕೇ ಒಂದು ಬಟಾಲಿಯನ್ ವ್ಯವಸ್ಥೆ ಇತ್ತು. ಆದರೆ ಮೈಸೂರಿಗೆ ಬರುವಾಗ ಕಡ್ಡಾಯ ರದ್ದಾಗಿತ್ತು. ಹಾಗಾಗಿ ನಮ್ಮ ಬಟಾಲಿಯನ್ನಿನ ವ್ಯಾಪ್ತಿಗೆ ಮೈಸೂರಲ್ಲದೆ ಸಮೀಪದ ಕೊಳ್ಳೇಗಾಲ, ಮಂಡ್ಯ ಮುಂತಾದ ಊರುಗಳ ಹಲವು ಕಾಲೇಜುಗಳೂ ಸೇರಿಕೊಂಡಿದ್ದವು. (ನನಗೆ ಅಗೋಚರ ಸ್ಪರ್ಧಿಗಳೂ ಇದ್ದರು!) ಮಹಾರಾಜಾದ ಹಾಜರಿ ಪುಸ್ತಕದಲ್ಲಿ ಸುಮಾರು ನಲ್ವತ್ತೈವತ್ತು ಹೆಸರಿದ್ದರೂ ನಿಯತ ಕವಾಯತುಗಳಿಗೆ ನಿಜ ಭಾಗಿಗಳು ಇಪ್ಪತ್ತು ಮೂವತ್ತನ್ನು ಮೀರುತ್ತಿರಲಿಲ್ಲ. 

23 June 2020

ಮೈಸೂರಿನ ದಿನಗಳಲ್ಲಿ - ವಿದ್ಯಾರ್ಥಿ

(ಜಾತಿ ಮತಗಳ ಚಕ್ರಸುಳಿ ಮೀರಿ - ೩) 


೧. ಕೈಮರದ ಅಡಿಯಲ್ಲಿ ‘ಕನ್ನಾಡಿಗ’ನ ಗೊಂದಲ 


ಪದವಿಪೂರ್ವದ ಪರೀಕ್ಷೆಯಲ್ಲಿ ನಾನು ರಸಾಯನ ವಿಜ್ಞಾನ ಅಜೀರ್ಣ ಮಾಡಿಕೊಂಡು, ನ್ಯಾಶನಲ್ ಟ್ಯುಟೋರಿಯಲ್ಸ್‍ನಲ್ಲಿ ಶುಶ್ರೂಷೆ ಪಡೆದು ಸೆಪ್ಟೆಂಬರ್ ಪರೀಕ್ಷೆ ಎದುರಿಸಿದೆ. ಚೇತರಿಕೆಯ ಧೈರ್ಯ ಇದ್ದದ್ದಕ್ಕೆ, ಮುಂದಿನ ಶಿಕ್ಷಣ ವರ್ಷದವರೆಗೆ ಎಂಬಂತೆ, ಸುಲಭದಲ್ಲಿ ಜರ್ಮನ್ ಕಲಿತು ಬಿಡುತ್ತೇನೆಂದು ಗಯಟೆ ಸಂಸ್ಥೆಗೆ ಸೇರಿಕೊಂಡೆ. ಆದರೆ ವಾರಕ್ಕೆ ಎರಡೋ ಮೂರೋ ಗಂಟೆಯ ಪಾಠದಲ್ಲಿ ಕಾಗುಣಿತ, ವ್ಯಾಕರಣದ ಕಗ್ಗಂಟಿನಲ್ಲಿ ಸಿಕ್ಕಿ ಕಂಗಾಲಾದೆ. ಅಷ್ಟರಲ್ಲಿ ನನ್ನ ಅದೃಷ್ಟಕ್ಕೆ, ತಂದೆ ತನ್ನ ವೃತ್ತಿ ಜೀವನಕ್ಕೆ ಇನ್ನೊಂದೇ ಕ್ರಾಂತಿಕಾರಿ ತಿರುವು ತೆಗೆದುಕೊಂಡರು. ಅಧ್ಯಾಪನವನ್ನೂ ಬೆಂಗಳೂರನ್ನೂ ಬಿಟ್ಟು, ಮೈಸೂರಿನಲ್ಲಿ ಹೊಸ ಜವಾಬ್ದಾರಿ - ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕತ್ವ! ನನ್ನ ಜರ್ಮನ್ ಸಂಕಟ ಸಹಜವಾಗಿ ಕಳಚಿಹೋಯ್ತು. 

19 June 2020

ಬಹುಸಂಸ್ಕೃತಿಯ ರಾಜನಗರದಲ್ಲಿ

(ಜಾತಿ ಮತಗಳ ಚಕ್ರಸುಳಿ ಮೀರಿ - ೨) 

ಬೆಂಗಳೂರಿನ ದಿನಗಳು 


[ಕ್ಷಮಿಸಿ, ಮತ್ತೆ ನೆನಪಿಸುತ್ತೇನೆ: ಈ ಮಾಲಿಕೆ ನನ್ನ ಆತ್ಮಕಥೆ ಅಲ್ಲ. ನನ್ನ ಜೀವನದ ಆಯ್ದ ಘಟನೆಗಳನ್ನು ಒಡ್ಡಿಕೊಂಡು, ವ್ಯಕ್ತಿ ರೂಪಣೆಯಲ್ಲಿ ಕಾಲ್ಪನಿಕ ಜಾತಿ, ಮತ, ಅಂತಸ್ತು ಮುಂತಾದವು ವಹಿಸುವ ಪಾತ್ರವನ್ನು ಎತ್ತಿ ತೋರಿಸುವುದಷ್ಟೇ ಇದರ ಉದ್ದೇಶ. ಓದಿನ ಸ್ವಾರಸ್ಯಕ್ಕಾಗಿ ಇತರ ಸ್ವಲ್ಪ ಮಾಹಿತಿಗಳನ್ನೂ ಕೋದಿದ್ದೇನೆ.] 

೧. ವಿಧಾನಸೌಧದ ಬಯಕೆ (ನಗರ ದರ್ಶನ) 


ಬಳ್ಳಾರಿ - ಪುತ್ತೂರು ಓಡಾಟ ಕಾಲದಲ್ಲಿ ನಮ್ಮ ಬೆಂಗಳೂರು ಮಧ್ಯವರ್ತಿ, ಹಿಂದೆ ಹೇಳಿದಂತೆ ಚಿಕ್ಕಪ್ಪ ಮೂರ್ತಿ. ಆತ (೧೯೬೫) ನಮಗೆ ಹನುಮಂತ ನಗರದಲ್ಲಿ ಬಾಡಿಗೆ ಮನೆ ಹಿಡಿದಿಟ್ಟಿದ್ದ. ಒಂದೇ ಯಜಮಾನಿಕೆಯ ಕಟ್ಟಡ ಗೊಂದಲವದು.

17 June 2020

ಜಾತಿ ಮತಗಳ ಚಕ್ರಸುಳಿ ಮೀರಿ

ಮಡಿಕೇರಿಯ ಉದಾಹರಣೆಗಳು 


ಹುಟ್ಟಿನ ಆಕಸ್ಮಿಕದೊಡನೆ ಬಹುತೇಕರ ಅಪ್ಪ, ಅಮ್ಮ, ಅಣ್ಣ, ಅಜ್ಜಿ ಇತ್ಯಾದಿ ಅನೇಕ ಭೌತಿಕ ಸ್ಥಾನಗಳೂ ಅವಕ್ಕೆ ಸೇರಿದ ಭಾವನಾತ್ಮಕ ಜವಾಬ್ದಾರಿಗಳೂ ಸಾಮಾಜಿಕ ರೂಢಿಯಂತೆ ಸೇರಿಕೊಳ್ಳುತ್ತವೆ. ಅವನ್ನು ಬಿಟ್ಟು, ವ್ಯಕ್ತಿತ್ವವನ್ನು ರೂಪಿಸುವ ಪ್ರಭಾವಗಳನ್ನು ಸೋದಾಹರಣವಾಗಿ ಕಾಣಿಸುವ ಉದ್ದೇಶಕ್ಕೇ ಮೀಸಲಾದ ಮಾಲೆ - ಜಾತಿ ಮತಗಳ ಚಕ್ರಸುಳಿ ಮೀರಿ. ಇಲ್ಲಿ ‘ಜಾತಿ ಮತ’ ಎನ್ನುವುದನ್ನು ಸಾಮಾಜಿಕ, ಆರ್ಥಿಕ, ಭಾಷಿಕ ಎಂಬಿತ್ಯಾದಿ ತೋರಿಕೆಯ ರೂಢಿಗಳನ್ನೆಲ್ಲ ಒಳಗೊಂಡಿದೆ. 

ವಿಚಾರ ಸರಣಿಯನ್ನು ಶಾಬ್ದಿಕ ಕಸರತ್ತು ಮಾಡುವ ಬದಲು, ನಿದರ್ಶನಗಳ ಕಥನವನ್ನಾಗಿಸಿದ್ದೇನೆ. ಹಾಗೆ ಮಾಡುವಲ್ಲಿ ವಿವಾದ ಮೂಲವೂ ಆಗಬಹುದಾದ ಅನ್ಯರ ವರ್ತನೆಗಳ ಮೇಲೆ ಊಹಾಗೋಪುರ ಕಟ್ಟುವುದರ ಬದಲು, ಆತ್ಮಕಥನದ ದಾರಿಯನ್ನೇ ಹಿಡಿದಿದ್ದೇನೆ. ಪ್ರಸ್ತುತ ಐವತ್ತು ಕಿರು ಟಿಪ್ಪಣಿಗಳಲ್ಲಿ ನನ್ನ ವಿದ್ಯಾರ್ಥಿದಿನಗಳನ್ನು, ಅದರಲ್ಲೂ ಬಹುತೇಕ ಇದುವರೆಗೆ ನಾನು ಬರಹಕ್ಕಿಳಿಸದ ಅನುಭವಗಳನ್ನು ಆಯ್ದುಕೊಂಡಿದ್ದೇನೆ. ನನ್ನ ವಿದ್ಯಾದಿನಗಳೆಲ್ಲ (೧೯೫೨-೧೯೭೪) ತಂದೆಯ ವೃತ್ತಿಯ ಊರುಗಳನ್ನೇ ಅನುಸರಿಸಿಕೊಂಡು ಬಂತು. ಆ ಲೆಕ್ಕದಲ್ಲಿ ನನ್ನ ನೆನಪಿಗೆ ಸಿಗುವ ಮೊದಲ ಊರು - ಮಡಿಕೇರಿ. 

13 July 2017

ಲಲಿತ ನಟನಾ ಶಿಲ್ಪ ಅಷ್ಟಪದಿ


(ಹವ್ಯಾಸೀ ಮರ ಕೆತ್ತುವ ಕಲೆ - ಭಾಗ ೨)

ನನ್ನ ತೆಂಗಿನತುಂಡುಗಳ ಗುದ್ದಾಟಕ್ಕೂ ಎಷ್ಟೋ ಮೊದಲು, ಅಂದರೆ ಮಳೆ ಕಡಿಮೆಯಾಗುತ್ತಿದ್ದಂತೇ `ರಕ್ಕಸ’ ಸಾಗುವಾನಿ ಬೊಡ್ಡೆಯೊಂದಿಗೆ ದೇವಕಿ  ಹೋರಾಟ ಸುರುಮಾಡಿದ್ದಳು. ರಕ್ಕಸ ಸುಮಾರು ಹತ್ತಿಂಚು ವ್ಯಾಸದ ಇನ್ಯಾವುದೋ ಮರದ ಗುತ್ತಿ ಬೇರುಗಳನ್ನು ತನ್ನ ಬೇರಜಾಲದ ಮರಣಾಂತಿಕ ಅಪ್ಪುಗೆಗೊಳಪಡಿಸಿತ್ತು. ಅದನ್ನು ಸಮೂಲ ಕಿತ್ತೆಸೆಯಬೇಕು. ಮರ ಬೆಳೆದ ವಠಾರದ ಜನ ಕಾಲಕಾಲಕ್ಕೆ ನಿರ್ಲಕ್ಷ್ಯದಲ್ಲಿ ಕಲ್ಲಚೂರುಗಳು, ಬೂದಿ, ಸಿಮೆಂಟು ತುಂಡುಗಳಾದಿ ವಿವರಿಸಲಾಗದ ಹಾಳಮೂಳಗಳೆಲ್ಲವನ್ನೂ ಆ ಸಾಗುವಾನಿ ಬುಡಕ್ಕೆ ಹಾಕಿದ್ದಿರಬೇಕು. ಆ ಬರಗೇಡಿ ಮರ ಸಹಜ ಮಣ್ಣಿನೊಡನೆ ಅವನ್ನೆಲ್ಲ ತನ್ನ ಉಡಿಯೊಳಗೆ ಗಂಟು ಕಟ್ಟಿಕೊಂಡಿತ್ತು. ಸತ್ತುಹೋದ ನಿಗೂಢ ಲಕ್ಷಾಧಿಪತಿ ಬಿಕ್ಷುಕನ ಕತೆ ಕೇಳಿದ್ದೀರಲ್ಲಾ? ದೇವಕಿಗೆ ಆ ಬಿಕ್ಷುಕನ ಜೋಳಿಗೆಯೊಳಗೆ ಕೈ ಹಾಕುವ ಕೆಲಸ. ಕೊಳಕನ್ನು ಕಳೆದು, ಸಿರಿಯನ್ನು

06 July 2017

ಕಲ್ಪವೃಕ್ಷದಲ್ಲಿ ಚತುರ್ಮುಖಗಳು


ಹವ್ಯಾಸೀ ಮರ ಕೆತ್ತುವ ಕಲೆ - ಭಾಗ ೧
ಬನ್ನಿ, ನನ್ನ ಹೊಸ ಪರಿವಾರದ ಪರಿಚಯ ಮಾಡಿಕೊಳ್ಳಿ. ಚಿತ್ರದಲ್ಲಿ ಎಡದಿಂದ ಮೊದಲನೆಯವ ದೊಡ್ಡ – ತೆಂಗಿನ ನಾಲ್ಕು ಮರದ ತುಂಡುಗಳಲ್ಲಿ ದೊಡ್ಡವ, ದೊಡ್ಡ ತೆಂಗಿನ ಮರದ ಬುಡದ ತುಂಡು. ಸಹಜ ಉರುಟು ಮೈಯನ್ನು ಆರು ಕೋನಯುಕ್ತಗೊಳಿಸುವ ಅಂದಾಜಿನಲ್ಲೇ ಆಯ್ಕೆಯಾಗಿ ಬಂದವ – ಎರಡನೆಯವ, ಆರ್ಮುಗಂ ಉರುಫ್ ಎಣ್ಮುಗಂ! ಕಾಯಿಲಸ್ಥ ಬಡಕಲು ಮರದ, ತುಸು ಸೊಟ್ಟವ ಮತ್ತಿನವ, ಅನ್ವರ್ಥ ನಾಮ – ಡೊಂಕ. ಕೊನೆಯವ ಹಾಗೂ ಇದ್ದವುಗಳಲ್ಲಿ ಸಣ್ಣವ – ಪುಟ್ಟ. ಏನೀ ಚತುರ್ಮುಖರ ವಿಶೇಷ ಎನ್ನುವುದಕ್ಕೆ ಪೂರ್ವಭಾವಿಯಾಗಿ ಸುಮಾರು ಮೂರು ವರ್ಷಗಳ ಹಿಂದಕ್ಕೆ, ನಮ್ಮನೆ ಅಭಯಾದ್ರಿಗೇ ನಿಮ್ಮನ್ನು ಒಯ್ಯುತ್ತೇನೆ. 

`ಅಭಯನ ಬೆಟ್ಟ’ ಎಂಬರ್ಥದ ಮನೆ ಹೆಸರೇ ಸೂಚಿಸುವಂತೆ

06 April 2017

ಗೇರುಬೀಜದ ಅನುಬಂಧ

[ಗೇರುಹಣ್ಣನ್ನು ಹೆಕ್ಕುವಲ್ಲಿಂದ, ಅದರ ಬೀಜ ಹಲ್ವಾದಲ್ಲಿ ಞ್ಞಕ್ಕುವ ನಡುವೆ ಹಾಯುವ ಅರ್ಥಶಾಸ್ತ್ರ, ಜೀವಶಾಸ್ತ್ರ, ಔದ್ಯಮಿಕ ಸತ್ಯಗಳ ಕುರಿತು ಪ್ರತ್ಯಕ್ಷದರ್ಶಿಯ ಹಕ್ಕಿನೋಟ]

ಹರಿಪ್ರಸಾದ್ ಶೇವಿರೆ ತಾನು “ಪುತ್ತೂರು ಮೂಲದವನು,” ಎಂದಾಗಲೇ ಆಪ್ತವೆನ್ನಿಸಿ, “ನನ್ನಜ್ಜನ ಊರು” ಎಂದಿದ್ದೆ. `ಶೇವಿರೆ’ ಅಂದರೆ ಕೆಸುವಂತೆ. ಸಸ್ಯ ವರ್ಗೀಕರಣ ಏನೇ ಇರಲಿ, ತಾವರೆಯಂತೇ ಕೆಸುವೂ ನೀರು ಬಿದ್ದರೂ ಅಂಟಿಸಿಕೊಳ್ಳದ ಜಾತಿ. ಈ ಹರಿಪ್ರಸಾದ್ ಸ್ವಲ್ಪ ಹಾಗೇ; ಗೇರು ಉದ್ಯಮದಲ್ಲಿ ಮುಳುಗಿದ್ದೂ ಇರದಂತಿರುವವರು. ಪುತ್ತೂರು ಹುಟ್ಟೂರಾದರೂ ತಂದೆಯ ಮರಣದಿಂದ, ಮೂಡಬಿದ್ರೆಯ ದೂರಕ್ಕೆಳೆಯಿತು ಇವರ ಜೀವನಕಾಂಡ. ಅಕ್ಕ ಭಾವರ ಸಾಂಗತ್ಯದಲ್ಲಿ ಹರಿಪ್ರಸಾದರ ವ್ಯವಹಾರ ಕೌಶಲ್ಯದ ಎಲೆಯಗಲಿತು. ಮುಂದುವರಿದು ಸಣ್ಣಣ್ಣನ ಉದ್ದಿಮೆ ಭಾಗೀದಾರಿಕೆಯಲ್ಲಿ ದೃಢ ವೃತ್ತಿ-ಹೂವರಳಿತು, ಮಂಗಳೂರಿನ ಉಡಿಯಲ್ಲಿ ಗೃಹಸ್ಥನಾಗಿ ನೆಲೆಕಂಡು ಧನ್ಯವಾಯ್ತು ಈ ಶೇವಿರೆ.

02 February 2016

ಕುದುರೆಮುಖಕ್ಕೆ ಸೈಕಲ್ ಸವಾರಿ

ನಿಶ್ಚಲ ಕತ್ತಲಿನಲ್ಲಿ, ಚಳಿಗಾಲದ ತೆಳು ಮಂಜಿನ ಹೊದಿಕೆಯಲ್ಲಿ, ಮೂಕವಾಗಿದ್ದ ದಾರಿಗೆ ಒಮ್ಮೆಗೇ ನಾಲ್ಕು ಜೋಡಿ ಚಕ್ರಗಳು ಚಕ್ಕಂದಕ್ಕೆ ಸಿಕ್ಕ ಸಂಭ್ರಮ “ರೊಂಯ್ ರೊಂಯ್, ರೊಂಯ್!” ಕರಿಯ ಹೊಗೆಯಿಲ್ಲ, ಕರ್ಕಶ ಧ್ವನಿಯಿಲ್ಲ, ಹರಿದೋಡುವ ಧಾವಂತವಿಲ್ಲ – ಸಮಾಧಾನದ ಸವಾರಿಯ ನಾಲ್ಕು ಸೈಕಲ್ಲುಗಳು, ಮೇಲೆ ಸವಾರರು. ಮಾರ್ಗದಂಚಿನ ಬಿಳಿಗೀಟು ಇವರ ಸಂಗಾತಿ, ಪ್ರತಿ ಬಿರುಕೂ ಜಲ್ಲಿಕಣವೂ ನಿವಾರಿಸಬೇಕಾದ ಅಡ್ಡಿ, ಹಾಗೆಂದು ಲಕ್ಷ್ಯಕ್ಕೆ ಮಿತಿಯಿಲ್ಲ. ಹಾಗೆ ಶತೋತ್ತರ ಕಿಮೀ ಅಂತರದ ಕುದುರೆಮುಖವನ್ನೇ ಮಣಿಸ ಹೊರಟ ಮಹತ್ವಾಕಾಂಕ್ಷಿಗಳು ನಾವು ನಾಲ್ವರು. ಐದು ಗಂಟೆಗೇ ಮನೆ ಬಿಟ್ಟ ನನ್ನನ್ನು ಕೊಟ್ಟಾರದಲ್ಲಿ ಚಿನ್ಮಯ ದೇಲಂಪಾಡಿ, ಅರವಿಂದ ಕುಡ್ಲರೂ ಸುರತ್ಕಲ್ಲಿನಲ್ಲಿ ವೇಣು ವಿನೋದರೂ ಸೇರಿಕೊಂಡಿದ್ದರು. ಅಂಥ ಚಳಿಯೇನೂ ಇರಲಿಲ್ಲ. ನಗರ ಮಿತಿಯಲ್ಲಿ ಬೀದಿದೀಪಗಳ ಅತಿರೇಕದಲ್ಲಿ ದೃಷ್ಟಿಮಂದನೂ ಸಂಭ್ರಮಿಸಬಹುದಿತ್ತು. ಅಲ್ಲಿ ನಮ್ಮ ಗುರುತಿಗೆ, ಉಳಿದಂತೆ ಕತ್ತಲ ಓಟಗಳಲ್ಲಿ ನಮ್ಮ ನೋಟಕ್ಕೂ ಒದಗುವಂತೆ ಬಿಳಿಪ್ರಭೆಯ ಕೋಲು ಎದುರು ಬಿಟ್ಟಿದ್ದೆವು. ಅದಕ್ಕೂ ಮುಖ್ಯವಾಗಿ ಹಿಂಬಾಲಿಸುವವರಲ್ಲಿ ನಮ್ಮ ಕುರಿತು ಜಾಗೃತಿಯನ್ನುಂಟುಮಾಡುವಂತೆ ಹಿಂದೆ ಕೆಂಪು ಮಿನುಗಿನ ದೀಪವನ್ನೂ ಸಿಕ್ಕಿಸಿಕೊಂಡಿದ್ದೆವು. ತಿಂಡಿಗೆ ಕಡಾರಿ, ಮಧ್ಯಾಹ್ನದೂಟಕ್ಕೆ ಕುದುರೆಮುಖ, ರಾತ್ರಿಗೆ ಮರಳಿ ಮಂಗಳೂರು – ಹೆಚ್ಚು ಕಡಿಮೆ ಇನ್ನೂರಿಪ್ಪತ್ತು  ಕಿಮೀ ನಮ್ಮ ಲಕ್ಷ್ಯ. ತುಸು ಪಳಗಿದ ಸವಾರನಿಗೆ ಮಟ್ಟಸ ದಾರಿಗಳಲ್ಲಿ ಇದು ದೊಡ್ಡ ಲೆಕ್ಕವೇನಲ್ಲ. ಆದರೆ ಇಲ್ಲಿ ಕೊನೆ ಹಂತದ ಸುಮಾರು ಇಪ್ಪತ್ನಾಲ್ಕು ಕಿಮೀ - ಏಕ ಕಟ್ಟೇರಿನ ಭಗವತೀ ಘಾಟಿ, ನಮಗಿದ್ದ ಸಾಹಸದ ಸವಾಲು.

27 March 2015

ಅಸಮ ಸಾಹಸಿ ಮರಿಕೆಯ ಅಣ್ಣ!


Photo credit: Abhijit APC
`ವೈದಿಕ’ ಲೆಕ್ಕಾಚಾರಗಳ ಪ್ರಕಾರ ಮೊನ್ನೆ ೮-೩-೧೫ರಂದು ನನ್ನ ಮರಿಕೆಯ `ಅಣ್ಣ’ನ ವರ್ಷಾಂತಿಕ. ನನ್ನ ತಾಯಿಯ ತಂದೆ, ಅಜ್ಜ ಎ.ಪಿ. ಸುಬ್ಬಯ್ಯನವರ (೧೯೦೧-೧೯೭೭) ಹತ್ತು ಮಕ್ಕಳಲ್ಲಿ ಹಿರಿಯನಾದ್ದಕ್ಕೆ ಎ.ಪಿ.ತಿಮ್ಮಪ್ಪಯ್ಯ (೧೯೨೮-೨೦೧೪) ಮನೆಮಂದಿಗೆಲ್ಲಾ `ಅಣ್ಣ’. ಆತನ ಪ್ರಥಮ ತಂಗಿ, ನನ್ನಮ್ಮ - ಲಕ್ಷ್ಮೀ ದೇವಿ. ಸಂಬಂಧದಲ್ಲಿ ತಿಮ್ಮಪ್ಪಯ್ಯ ನನಗೆ ಸೋದರಮಾವನಾದರೂ ಬಳಕೆಯ ಬಲದಲ್ಲಿ ನನಗೆ ಅಣ್ಣನೇ. ಇಲ್ಲಿ ನಾನೊಂದು ಸ್ಪಷ್ಟೀಕರಣ ಕೊಡುವುದು ಅವಶ್ಯ. ನಾನು ಅಣ್ಣನಿಗೆ ಪ್ರಥಮ ಸೋದರಳಿಯ, ಸಲುಗೆ ಹೆಚ್ಚು. ಹಾಗೆ ರೂಢಿಸಿದ ಸಂಬೋಧನೆಯ ಏಕವಚನವನ್ನು ಇಲ್ಲಿಯೂ ಪ್ರೀತಿಪೂರ್ವಕವಾಗಿಯೇ ಮುಂದುವರಿಸಿದ್ದೇನೆ. ಅನಂತರ ಬಂದ ಸೋದರ ಅಳಿಯಂದಿರು ನನ್ನಷ್ಟು ಸ್ವಾತಂತ್ರ್ಯವಹಿಸದೇ ಬಹುವಚನದಲ್ಲೇ `ಅಣ್ಣಮಾವ’ ಎನ್ನುತ್ತಿದ್ದರು. ಮತ್ತೆ ಅಣ್ಣನ ಹೆಂಡತಿ, ಮನೆಮಂದಿಗೆಲ್ಲ ಅತ್ತಿಗೆಯಾದಾಕೆ - ರಮಾದೇವಿ, ನನಗೂ ಬಳಕೆಯ ಬಲದಲ್ಲಿ `ಅತ್ತಿಗೆ’ಯೇ. 

08 March 2013

ಕ್ಷಣಕ್ಷಣವೂ ರೋಮಾಂಚನ: ಮೋಟಾರ್ ರ‍್ಯಾಲಿ


(ಚಕ್ರವರ್ತಿಗಳು - ಹತ್ತನೇ ಸುತ್ತು)

[ಚಾಲಕ-ವಾಹನ-ಮಾರ್ಗ ಅಥವಾ ವ್ಯಕ್ತಿ-ಯಂತ್ರ-ಪರಿಸರ ಸಮನ್ವಯದ ಪರಾಕಾಷ್ಠೆಗೊಂದು ನಿದರ್ಶನ ಮೋಟಾರ್ ರ‍್ಯಾಲಿ: ಅರಾಜ ಮಾರ್ಗದಲ್ಲಿ ಅಶಿಸ್ತಿನ ಗೊಂದಲದಲ್ಲಿ ಅಸ್ಥಿರ ಮನಸ್ಕನಾಗದೇ ಲಕ್ಷ್ಯಚ್ಯುತನಾಗದೇ ನಿಶ್ಚಿತ ಮುಹೂರ್ತದಲ್ಲಿ ಗುರಿ ತಲಪಬಲ್ಲ ಅದಟಿನ ಪ್ರತ್ಯಕ್ಷ ರೂಪ, ಅರ್ಜುನ ಶರಪ್ರಯೋಗದ ಆಧುನಿಕ ಅವತಾರ. ಪುಸ್ತಕದಲ್ಲಿ ಜಿಟಿನಾ ಸಂಪಾದಕೀಯ ಟಿಪ್ಪಣಿ.]
ಅರವಿಂದ ಹೆಲ್ಮೆಟ್ಟಿನ ವೈಸರ್ ಕೊನೆಗೊಮ್ಮೆ ಒರಸಿ, ತಲೆಗೆ ಹಾಕಿ ಬೆಲ್ಟ್ ಬಿಗಿದರು. ಮೊಟಾರ್ ಸೈಕಲ್ಲನ್ನು ಒದ್ದು ಹೊರಡಿಸಿದರು. ಪಕ್ಕದಲ್ಲೇ ಹೆಲ್ಮೆಟ್ ಕಟ್ಟಿಯೇ ನಿಂತಿದ್ದ ಪ್ರತಾಪ್ ತಿದ್ದಿದಷ್ಟೂ ‘ಸ್ಟ್ಯಾಂಡರ್ಡ್ ಟೈಮ್’ಗೆ ಐವತ್ತು ಸೆಕೆಂಡ್ ಹಿಂದೆಯೇ ಉಳಿಯುತ್ತಿದ್ದ ವಾಚನ್ನು ಕಸಿವಿಸಿಯೊಡನೆ ಕೊನೆಗೊಮ್ಮೆ ಕೈಗೆ ಬಿಗಿದು, ಮೇಜಿನ ಕಡೆಗೆ ನಡೆದರು. ‘ರೋಡ್ ಬುಕ್’ ಪಡೆದು, ಅದರಲ್ಲೂ ಮೇಜಿನ ಮೇಲಿನ ಪಟ್ಟಿಯಲ್ಲೂ ವೇಳೆ ೮.೫೧ ದಾಖಲಿಸಿ ಬಂದು ಅರವಿಂದನ ಹಿಂದೆ ಕುಳಿತರು. ಇನ್ನು ಅವರ ಅಸ್ತಿತ್ವ - ಹಿಂದಿನವ ಮಾರ್ಗದರ್ಶಿ, ಎದುರಿನವ ಸವಾರ, ಒಟ್ಟು ಸ್ಪರ್ಧಾಳು ಸಂಖ್ಯೆ ೬೪.


23 November 2012

ರೈಲೋಡಿದ ಬೈಕು


(ಚಕ್ರವರ್ತಿಗಳು - ಆರನೆಯ ಸುತ್ತು)

ದೇವಕಿ ಮುನಿಸಿಕೊಂಡಿದ್ದಳು. ಬೆಟ್ಟ ಗುಡ್ಡ ಏರ್ತೀರಿ, ಬಂದು ಕೊಚ್ತೀರಿ, ಪೇಪರಿಗೆ ಗೀಚ್ತೀರಿ, ನಮಗೆ ಸಿಕ್ಕಿದ್ದೇನು? ಒಂದರ್ಥದಲ್ಲಿ ನಿಜ. ಮಗ ಸಣ್ಣವನಾದ್ದರಿಂದ ಎಲ್ಲಾದಕ್ಕೂ ಒಯ್ಯುವುದು ಅಸಾಧ್ಯ. ಸಹಜವಾಗಿ ಅವನಿಗೆ ಜೊತೆಯಾಗಿ ಈಕೆಯೂ ನಿಲ್ಲುವುದು ಅನಿವಾರ್ಯ. (ನಾನು ನಿಂತರೆ ಕಾರ್ಯಕ್ರಮವೇ ಆಗುವುದಿಲ್ಲ!) ಮಡದಿಯ ದುಃಖವೂ ನ್ಯಾಯವೇ ಎಂದು ಕಂಡು, ಅದೊಂದು ಆದಿತ್ಯವಾರ (೨೭-೧೦-೧೯೮೫) ನಾಲ್ಕು ಬೈಕೇರಿ ಹೊರಟ ನಮ್ಮ ತಂಡ ಬಹುತೇಕ ದಂಪತಿಗಳದ್ದೇ. ನಾನು, ನನ್ನ ಹೆಂಡ್ತಿ, ಮತ್ಮಗು ಯೆಜ್ದಿ ಮೇಲಿದ್ದೆವು. ಹಿಂದಿನಂತೇ ಬಸವರಾಜು, ಶಾಂತಾ ರಾಜದೂತನ ಮೇಲೆ. [ಬಸವರಾಜು ಇಂದು ಹಿರಿಯ ಪತ್ರಕರ್ತನಾಗಿ ನಿವೃತ್ತ (ಮೈಸೂರಿನಲ್ಲಿದ್ದಾರೆ) ಎನ್ನೋದೇ ಹವ್ಯಾಸೀ ಅಂಕಣಗಳ ಸರಣಿ ನೋಡುವಾಗ ಹೆಚ್ಚು ಪ್ರವೃತ್ತ ಎನ್ನೋದೇ! ಇವರೀರ್ವರ ಮಗ ಮಿಲಿಂದ ಸಿ.ಎಫ್.ಟಿ.ಆರೈ ನೌಕರನಾದರೂ ತಬ್ಲಾವಾದನದಲ್ಲಿ ಬಾಲಭಾಸ್ಕರ] ಮತ್ತೊಂದು ರಾಜದೂತನ ಮೇಲೆ ಚಾರ್ಲ್ಸ್, ಬ್ಯೂಲಾ [ತಲೆನೂರ್ಮಲೆ ಘಾಟಿ, ಕರಿಕೆ ದಾರಿಯಲ್ಲೆಲ್ಲ ಬಂದ ಅದೇ ಚಾರ್ಲ್ಸ್ ಅಂದು ಔಷಧ ಕಂಪೆನಿಯೊಂದರ ಪ್ರತಿನಿಧಿ. ಇಂದು ಸ್ವೋದ್ಯೋಗೀ ಮತ್ತು ಅನಿಮಲ್ ಕೇರ್ ಟ್ರಸ್ಟಿನ ತುರುಸಿನ ಕಾರ್ಯಕರ್ತ. ಈತ ನವವಿವಾಹಿತನಾಗಿ ನಮಗೆ ಪರಿಚಯಿಸುತ್ತಿದ್ದ ಬ್ಯೂಲಾ ಕಾಲೇಜ್ ಅಧ್ಯಾಪಿಕೆ. ಈಕೆ ಇಂದು ಅದೇ ವೃತ್ತಿಯಲ್ಲಿ ಹಿರಿತನದೊಡನೆ ದಾಂಪತ್ಯದಲ್ಲಿ ಎರಡು ಮಕ್ಕಳ ಅಮ್ಮನೂ ಹೌದು] ಮತ್ತು ಕೊನೆಯಲ್ಲಿ ಜಾವಾದ ಮೇಲೆ ಅರವಿಂದ, ಬಾಲಾ. ಕ್ಷಮಿಸಿ, ಕೊನೆಯ ಜೋಡಿ ಮಾತ್ರ ದಂಪತಿಗಳಲ್ಲ. ಶಾನುಭಾಗರ ಮಗಳೂ... ಮದುವೆ ಇಲ್ಲಾ ಇನ್ನೂ ಎಂದು ಹಾಡಿಕೊಂಡಿದ್ದ ಪ್ರಾಯದ ಅರವಿಂದರಾವ್ (ನೆನಪಿದೆಯಲ್ಲ, ಅದೇ ಜಂಕೂಸ್ ಇಂಡಿಯಾ...?) ಮತ್ತು ಬಾಲಕೃಷ್ಣ! [ಅರವಿಂದ್ ಸದ್ಯ ರಾಜಸಿಂಹ (ಲಯನ್ ಪ್ರೆಸಿಡೆಂಟ್), ವೃತ್ತಿಯಲ್ಲಿ ನೋವಾ ಟೆಕ್ ಪ್ರಯೋಗಾಲಯದ ಮುಖ್ಯಸ್ಥ, ಗಾಯತ್ರಿ ಪತಿ ಮತ್ತು ಎರಡು ಮಕ್ಕಳ ಅಪ್ಪ. ಬಾಲಕೃಷ್ಣ ಸೋಮಯಾಜಿ ಮುಂಬೈಯಲ್ಲಿ ಮಝಗಾಂವ್ ಡಾಕಿನ ಹಿರಿಯ ತಂತ್ರಜ್ಞ, ಉಷಾಪತಿ, ಅರ್ಪಿತಪಿತ.]

19 October 2012

ಅರಂತೋಡಿನಿಂದ ಕರಿಕೆಗೆ

(ಚಕ್ರವರ್ತಿಗಳು - ನಾಲ್ಕನೆಯ ಸುತ್ತು)

ಹೊಸ ದಾರಿಯೊಂದರ ಅನಾವರಣಕ್ಕೆಂದೇ ಅದೊಂದು ಆದಿತ್ಯವಾರ (೨೪-೨-೧೯೮೫) ನಮ್ಮದೊಂದು ತಂಡ ಹೊರಟಿತ್ತು. ಮಂಗಳೂರಿನಿಂದ ಯೆಜ್ದಿಯಲ್ಲಿ ನಾನು ಮತ್ತು (ಮಂಗಳೂರು ವಿವಿನಿಲಯದ ಗಣಿತ ಪ್ರೊ|) ಸಂಪತ್ಕುಮಾರ್, ರಾಜದೂತದಲ್ಲಿ ಚಾರ್ಲ್ಸ್, ಬಜಾಜ್ ಸ್ಕೂಟರ್‌ನಲ್ಲಿ ರಾಮಮೋಹನ ಮತ್ತು ಇಲ್ಯಾಸ್. ಮಾಣಿಯಲ್ಲಿ ಯೆಜ್ದಿಯೊಡನೆ (ಆಗ ಇನ್ನೂ ವಿಶ್ವಯಾನದ ಯೋಚನೆಯೂ ಮಾಡಿರದ) ಗೋವಿಂದ ಸೇರಿಕೊಂಡ. ಪುತ್ತೂರಿನಿಂದ ಸ್ವಲ್ಪ ಮುಂದಿರುವ ಆರ್ಯಾಪಿನಲ್ಲಿ ನನ್ನ ಸೋದರ ಮಾವ - ಎ.ಪಿ.ರಾಮನಾಥ ರಾವ್ ಅವರ ಮನೆಯಲ್ಲಿ ಎಲ್ಲ ಪೊಗದಸ್ತು ತಿಂಡಿ ಹೊಡೆದದ್ದಾಯ್ತು. ನಮ್ಮ ತಂಡದಲ್ಲಿ  ಮತ್ತೆರಡು ಸಹವಾರೀ ಅವಕಾಶಗಳು ಖಾಲೀ ಇದ್ದುದರಿಂದ ರಾಮನಾಥನನ್ನು ಚಾರ್ಲ್ಸ್ ಬೆನ್ನಿಗೂ ಇನ್ನೋರ್ವ ಮಾವ ಗೋವಿಂದನ ಮಗ (ಇಂದಿನ ಮರ್ಯಾದೆ ಸಹಿತ ಹೇಳುವುದಾದರೆ ಡಾ| ಎ.ಪಿ.) ರಾಧಾಕೃಷ್ಣನನ್ನು ಗೋವಿಂದನ ಬೆನ್ನಿಗೂ ಅಂಟಿಸಿಯಾಗುವಾಗ ತಂಡಕ್ಕೆ ಎಂಟು ಗಂಡಸರ ಬಲ ಬಂತು.

08 November 2011

ಅರಳಿದ ಗರಿ ಮುರಿಯಿತು


(ಕರಾವಳಿಗೆ ಹೊಸ ಸಾಹಸ ಕ್ರೀಡೆ - ಭಾಗ ಎರಡು)

ಅಮೆರಿಕಾದ ಫ್ರಾನ್ಸಿಸ್ ಎಂ. ರೊಗೆಲ್ಲೋ ಎಂಬ ವೈಮಾನಿಕ ಸಂಶೋಧಕ ಹ್ಯಾಂಗ್ ಗ್ಲೈಡರ್ ಅರ್ಥಾತ್ ನೇತು ತೇಲುವ ರೆಕ್ಕೆಯ (೧೯೫೧) ಜನಕ. ಮಡಚಿದಾಗ ಒಬ್ಬನೂ ಹೊತ್ತೊಯ್ಯಬಹುದಾದಷ್ಟು ಹಗುರ, ಸರಳ ಈ ರೆಕ್ಕೆ. ಯಾವುದೇ ಮಾಲಿನ್ಯ (ಶಬ್ದ, ವಾಯು) ಉಂಟುಮಾಡದ, ನಿರ್ವಹಣಾ ವೆಚ್ಚ (ಪೆಟ್ರೊಲ್, ಬ್ಯಾಟರಿ) ಕೇಳದ, ಸುಸಂಬದ್ಧವಾಗಿ ನಿರ್ವಹಿಸಿದರೆ ಅರ್ಥಾತ್ ಆಕಾಶ ನಮ್ಮ ಮಾಧ್ಯಮವಲ್ಲ ಎಂಬ ಮಿತಿಯನ್ನು ಮರೆಯದೆ ವಿಹರಿಸಿದರೆ ಈ ‘ಹಾರಾಟ’ ನಿರಂತರ ಇಳಿಜಾರಿನ ದಾರಿಯಲ್ಲಿ (ಪೆಡಲ್ ಒತ್ತುವ ಶ್ರಮವೂ ಇಲ್ಲ!) ಸೈಕಲ್ ಸವಾರಿಯಷ್ಟೇ ಸರಳ. ನಮ್ಮ ವಲಯದಲ್ಲಿ ಪರಿಕರಗಳ ಮತ್ತು ಪರಿಣತಿಯ ವಿರಳತೆಯಿಂದಷ್ಟೇ ಇದು ದುಬಾರಿಯೆನಿಸಬಹುದು. ಇಲ್ಲವಾದರೆ ನಿಜಕ್ಕೂ ರೈಟ್ ಸೋದರರ ಕನಸು - ಸಾಮಾನ್ಯನಿಗೆ ಹಾರುವ ಸಾಧ್ಯತೆಯನ್ನು ಸಾಕಾರಗೊಳಿಸಿದ ಕ್ರೀಡೆ. ಇಲ್ಲೂ ದಾಖಲೆಯ ಬೆನ್ನು ಹತ್ತಿದವರು ತೇಲುತ್ತಲೇ ಇಪ್ಪತ್ನಾಲ್ಕು ಗಂಟೆಯ ಮಿತಿಯನ್ನು ಮೀರಿದ್ದು, ವಿಮಾನಗಳ ಹಾರಾಟದ ಔನ್ನತ್ಯವನ್ನು (ಇಪ್ಪತ್ತು ಸಾವಿರ ಅಡಿಗೂ ಮಿಕ್ಕು) ಸಾಧಿಸಿದ್ದು, ದುರ್ಗಮ ಸ್ಥಳ ಮತ್ತು ಪರಿಸ್ಥಿತಿಗಳಲ್ಲಿ ಅನಿವಾರ್ಯವಾಗಿ ಒದಗಿಬಂದದ್ದು ಇತ್ಯಾದಿ ಪಟ್ಟಿ ೧೯೮೦ರ ದಶಕಕ್ಕೇ ಬಲು ದೊಡ್ಡದಿತ್ತು. ಇನ್ನು ಈಗದರ ಕಥೆ ಜಾಲಾಡಲಿಳಿದರೆ ಅಕ್ಷರಶಃ ಪಾರಾವಾರ.

30 October 2011

ಹಾರೋಣ ಬಾಆಆಆಆಆಆ


(ಕರಾವಳಿಗೆ ಹೊಸ ಸಾಹಸ ಕ್ರೀಡೆ - ಭಾಗ ಒಂದು)

೧೯೮೦ರ ದಶಕದ ಮೊದಲ ಭಾಗದಲ್ಲಿ ಸ್ಕೈ ರೈಡರ್ಸ್ ಎಂಬ ಇಂಗ್ಲಿಷ್ ಸಿನಿಮಾ ನೋಡಿದಾಗ ಒಮ್ಮೆಲೇ ನನಗೆ ಬಗಲಲ್ಲಿ ರೆಕ್ಕೆ ಮೊಳೆಯುವ ನೋವು ಶುರುವಾಗಿತ್ತು. ಗಡಿಬಿಡಿಯಾಗಬೇಡಿ, ಅದು ಹ್ಯಾಂಗ್ ಗ್ಲೈಡಿಂಗ್ ಅಥವಾ ನೇತು ತೇಲಾಟದ ಹುಚ್ಚು. ಯಾವುದೇ ಕೋಡುಗಲ್ಲ ನೆತ್ತಿ, ಶಿಖರಾಗ್ರಕ್ಕೆ ಹೋದರೆ “ಹೂಪ್” ಎಂದು ಉದ್ಗರಿಸಿ, ಬಾನಾಡಿಗಳೊಡನೆ ರೆಕ್ಕೆ ಜೋಡಿಸುವ ತುಡಿತಕ್ಕೆ ಇಲ್ಲಿತ್ತು ಸುಲಭ ದಾರಿ. ಕಡಲತಡಿಯ ಗಾಳಿಯ ಹೆಗಲೇರಿ ಸುಂದರ ದೃಶ್ಯ ಹೊಸೆಯುವ ಕಡಲಕ್ಕಿಗಳ ಗೆಣೆಕಾರರಾಗುವ ಅವಕಾಶ ನೇತು ತೇಲಾಟದಲ್ಲಿತ್ತು. ಸೂರ್ಯನತ್ತ ಹಾರಿದ ಮರಿ ವೈನತೇಯ ಇನ್ನು ಪುರಾಣ ಕಲ್ಪನೆಯಲ್ಲ. ಫ್ಯಾಂಟಮ್ ಸಾಹಸಗಳ ಚಿತ್ರಕಥೆಯಲ್ಲಿ ಬಂದ ಗರುಡನ ಬಳಗದ ಠಕ್ಕು, ಇಲ್ಲಿ ವಾಸ್ತವ. ಎಲ್ಲಕ್ಕೂ ಮಿಗಿಲಾಗಿ ರೈಟ್ ಸೋದರರ ಮೂಲ ಆಶಯ - ಸಾಮಾನ್ಯನಿಗೆ ಹಾರಾಟ, ನೇತು ತೇಲಾಟದಲ್ಲಿ ನಮಗೂ ದಕ್ಕುವಂತಿತ್ತು; ಕಾರ್ಯರೂಪಕ್ಕೆ ಇಳಿಸುವುದಷ್ಟೇ ಬಾಕಿ!