Showing posts with label ಸೈಕಲ್ ಸಾಹಸಗಳು. Show all posts
Showing posts with label ಸೈಕಲ್ ಸಾಹಸಗಳು. Show all posts

25 November 2020

ಸೈಕಲ್ ಕಾಣಿಸಿದ ಇನ್ನಷ್ಟು ಅಭಿವೃದ್ಧಿಯ ಕಥನಗಳು

ಗುಡ್ಡ ಬೆಟ್ಟಗಳು ಬರಿಯ ಮಣ್ಣ ದಿಬ್ಬವಲ್ಲ - ಬಜ್ಪೆ 

(ಚಕ್ರೇಶ್ವರ ಪರೀಕ್ಷಿತ ೨೪

ದೈನಂದಿನ ಸೈಕಲ್ ಸರ್ಕೀಟಿನ ಸಂಗ್ರಹ) 



ಅನ್ಯ ಕಾರ್ಯ ಒತ್ತಡಕ್ಕೆ ಸಿಕ್ಕಿ ತಳೆದಿದ್ದ ಐದು ದಿನಗಳ ಸೈಕಲ್ ಸನ್ಯಾಸ ಇಂದು ಸಂಜೆ ಮುರಿದೆ. ಬಂಟರ ಹಾಸ್ಟೆಲ್, ಮಲ್ಲಿಕಟ್ಟೆಗಾಗಿ ನಂತೂರು ಚಡಾವು ಹಿಡಿದೆ. ಅರ್ಧಾಂಶ ಕಾಂಕ್ರೀಟೀಕರಣ ಮುಗಿದಿದೆ. ಏಕಮುಖ ಸಂಚಾರದ ನಿರ್ಬಂಧ ಏರುವವರ ಪರವಾಗಿಯೇ ಇತ್ತು. ವೃತ್ತದಲ್ಲಿ ನೇರ ಸಾಗಿ, ಪದವು ಶಾಲೆ, ಯೆಯ್ಯಾಡಿ, ಬೊಂದೇಲ್, ಕಾವೂರು ವೃತ್ತ, ಮರಕಡ, ಫಲ್ಗುಣಿ ನದಿ ದಾಟಿ, ವಿಮಾನ ನಿಲ್ದಾಣದ ಹೊಸ ದಾರಿಯವರೆಗೂ ಓಟಕ್ಕೊಂದು ಚೂಪು ಇರಲಿಲ್ಲ. ಇಲ್ಲಿ ಹಳೆಯ ಆದ್ಯಪಾಡಿ ರಸ್ತೆಗೆ ಹೊಸ ಬಾಯಿ ಕೊಟ್ಟು, ಇಲಿ ಹಿಡಿಯಲೆಂದೇ ಭಾರೀ ಗುಡ್ಡ ಅಗೆದದ್ದರ ವರ್ತಮಾನ ನೋಡುವ ಉತ್ಸಾಹದಲ್ಲಿ ತಿರುಗಿದೆ. 

02 April 2020

ಮೂರು ಸಾವಿರ ಕೋಟಿ ನುಂಗಿದ ಸಂಕೇತ....

ಭಾರತದ ಏಕತಾಮೂರ್ತಿ - ಸರ್ದಾರ್ ಪಟೇಲ್ ವಿಗ್ರಹ! 

(ಸೈಕಲ್ಲೇರಿ ವನಕೆ ಪೋಗುವ- ಮೂರನೇ ಮತ್ತು ಅಂತಿಮ ಭಾಗ) 

ರಾಜಸ್ತಾನದ ಮೂರು ವನಧಾಮಗಳಲ್ಲಿ ನಾವು ಸೈಕಲ್ ಹೊಡೆದ ಕಥನ - ಸೈಕಲ್ಲೇರಿ ನಾನು ನೀವು ವನಕೆ ಪೋಗುವಾ (೨೦೧೮ ಡಿಸೆಂಬರ್), ನೀವೆಲ್ಲ ಓದಿದ್ದೀರಿ. ಆ ಕಥನಾಂತ್ಯದಲ್ಲಿ "....... ಪುನಶ್ಚೇತನರಾಗಿ, ಇನ್ನೊಂದೇ ಹೊಸ ಅನುಭವಕ್ಕೆ ಪೀಠಿಕೆ ಎಂಬಂತೆ ರೈಲ್ವೇ ನಿಲ್ದಾಣಕ್ಕೆ ಧಾವಿಸಿದೆವು" ಎಂದಿದ್ದೆ. ಅದಕ್ಕೀಗ ಮುಹೂರ್ತ ಬಂದಿದೆ. 

ಮಂಗಳೂರಿನಿಂದ ರಾಜಸ್ತಾನಕ್ಕೆ ಹೋಗುವ ದಾರಿಯಲ್ಲಿ ನಮ್ಮ ಜತೆಗಿರದ ಅನಿಲ್ ಶಾಸ್ತ್ರಿ, ವಾಪಾಸಾಗುವ ದಾರಿಯಲ್ಲಿ ಸೇರಿಕೊಂಡಿದ್ದರು. ಹೀಗೆ ಹರಿವಾಯು (ಹರಿಪ್ರಸಾದ್ ಶೇವಿರೆ ಮತ್ತು ಅನಿಲ್ ಶಾಸ್ತ್ರಿ) ಸಂಧಿಯಲ್ಲಿ ನಮ್ಮದು ಪೂರ್ಣ ರೈಲು ಯಾನ ಎಂದೂ ಟಿಕೆಟ್ಟೂ ಶುದ್ಧವಾಗಿತ್ತು. ವಡೋದರದಲ್ಲಿ ಐದಾರು ಗಂಟೆಗಳ ವ್ಯತ್ಯಾಸದಲ್ಲಿ ಗಾಡಿ ಬದಲಾವಣೆಯ ಅನಿವಾರ್ಯತೆ ಏನೋ ಇತ್ತು. ಆ ಅಂತರವನ್ನು ನಾವು ಹನ್ನೆರಡು ಗಂಟೆಗಳಿಗೆ (ಒಂದು ಗಾಡಿಯನ್ನು ನಿರಾಕರಿಸಿ) ವಿಸ್ತರಿಸಿ,
ವಡೋದರ ರೈಲ್ವೇ ಆರಾಮ್ ಘರ್ ಜಗುಲಿ
ನರ್ಮದಾಸಾಗರ ತಟದಲ್ಲಿ, ಹೊಸದಾಗಿ (೨೦೧೭) ಮೂಡಿ, ವಿಶ್ವವಿಕ್ರಮ ಸ್ಥಾಪಿಸಿರುವ ಸರ್ದಾರ್ ಪಟೇಲರ ವಿಗ್ರಹ ನೋಡುವುದೆಂದೂ ನಿಶ್ಚೈಸಿದ್ದೆವು. 

ಮಾಳಿಗೆ ರೈಲು
ಸೈಕಲ್ ಯಾನ ಮತ್ತದರ ಸಮಾರೋಪ ಸಮಾರಂಭ ಅಪರಾಹ್ನ ಮೂರು ಗಂಟೆಗೇ ಮುಗಿದದ್ದು ಸರಿ. ಆದರೆ ಆ ಚಿತೋರ್ಘರ್‍ನಿಂದ ಸುಮಾರು ನೂರು ಕಿಮೀ ದೂರದ ಉದಯಪುರಕ್ಕೆ ನಮ್ಮನ್ನು ಹೊತ್ತು ಮುಟ್ಟಿಸಲಿದ್ದ ಬಸ್ ಮಾತ್ರ ನಿಧಾನಿಯಾಯ್ತು. ಕಾಡು ದಾರಿಯ ಪೆಡಲಿಕೆಯಿಂದ

25 June 2019

ಬಿಸಿಲೆಗೆ ಓಡಿದ ಸೈಕಲ್ಲುಗಳ ಬೆಂಬತ್ತಿ


‘ನಾವೂ ಸೈಕಲ್ಲಿಗರು’ (ವೀಯಾರ್ಸೀ) ಮಂಗಳೂರಿನ ಮೂರನೇ ಸೈಕಲ್ ಸಂಘ. ಇದರ ಜತೆಗಾರನಾದ ದಂತವೈದ್ಯ ಗೆಳೆಯ ಪುಂಡಿಕಾಯ್ ರಾಮರಾಜ ಮೊನ್ನೆ ಆದಿತ್ಯವಾರ ಸೈಕಲ್ಲಿನಲ್ಲಿ ಕೇವಲ ಬಿಸಿಲೆ ಘಾಟಿ ಏರುವ ಯೋಜನೆ ಸಂಘಟಿಸಿದ್ದರು. ಹಾಗೆ ಬೆಳೀಗ್ಗೆ ಮಂಗಳೂರಿನಿಂದ ನಾಲ್ಕು, ಉಡುಪಿಯಿಂದ ಒಂದು ಕಾರನ್ನೇರಿ ಹನ್ನೊಂದು ಸೈಕಲ್ ಮತ್ತು ಸವಾರರು ಸುಬ್ರಹ್ಮಣ್ಯದತ್ತ ಹೊರಡುವವರಿದ್ದರು. ನಿಮಗೆಲ್ಲ ತಿಳಿದಂತೆ ‘ಅಶೋಕವನ’ದ ರಚನೆಯೊಡನೆ, ಬಿಸಿಲೆಯ ಕುರಿತ ನನ್ನ

24 March 2019

ನರಹರಿಯುವ ಬೆಟ್ಟಕ್ಕೆ...

(ಸೈಕಲ್ ಸರ್ಕೀಟ್ ೪೬೩) 


ನೆನಪಿದೆಯಲ್ಲಾ, ನಿನ್ನೆ (ಫೇಸ್ ಬುಕ್ಕಿನ ಸೈಕಲ್ ಸರ್ಕೀಟ್ ೪೬೨ ನೋಡಿ) ಹೇಳಿದಂತೆ, ಇಂದು (೨೪-೩-೨೦೧೯) ನನ್ನ ಸೈಕಲ್ ಸವಾರಿ ಒಂಟಿಯಲ್ಲ, ಮಂಗಳೂರು ಬೈಸಿಕಲಿಗರ ಸಂಘಕ್ಕೆ ಜಂಟಿ. ತಂಡದ ಲಕ್ಷ್ಯ - ಬಂಟ್ವಾಳದಾಚಿನ ನರಹರಿಪರ್ವತ. ದಿನದ ಬೆಳಕು ಹರಿಯುವ ಮುನ್ನ, ಮೊದಲ ಪಾದದಲ್ಲೇ ಕಂಬಳದ
ಗದ್ದೆಯಿಂದ ಕದ್ರಿಗುಡ್ಡೆಯ ನೆತ್ತಿಗೆ ಒಂದು ಗುಣಿಸು ಒಂದು ಗೇರಿನಲ್ಲಿ ಏರುವ ಪಡಿಪಾಟಲು ನನ್ನದು! ಇದು ಪರೋಕ್ಷವಾಗಿ

31 December 2018

ಕಾಡಿಗೆ ಪೆಡಲಿ ಸಂಪೂರ್ಣಂ

(ಸೈಕಲ್ಲೇರಿ ವನಕೆ ಪೋಗುವಾ ೨) 


ಜೈಸಮಂಡ್, ಹವಾಮಹಲ್

ಜೈಸಮಂಡ್ ಅಣೆಕಟ್ಟೆಯ ಮಹಾದ್ವಾರದಲ್ಲಿ ಮತ್ತೆ ಅರಣ್ಯ ಇಲಾಖೆ ಢಮ್ಮ ಢಕ್ಕದ ಗದ್ದಲ, ತಿಲಕ, ಹಾರಗಳ ಸ್ವಾಗತ ಸಜ್ಜುಗೊಳಿಸಿತ್ತು. ಭಾಗ್ದೋರಾದಲ್ಲಿ ತೊಡಗಿದ್ದ ಈ ನಾಟಕ, ಅಲ್ಲಲ್ಲಿ ಮರುಕಳಿಸಲಿದೆ ಎಂಬ ಸೂಚನೆ ನನಗೆ ಹಿಡಿಸಲಿಲ್ಲ, ನಾನು (ಇನ್ನೂ ಕೆಲವರು) ತಲೆತಪ್ಪಿಸಿಕೊಂಡೆ. "ನಾಮ ಎಂಥದ್ದೋ ಕೆಮಿಕಲ್ ಮಾರಾಯ್ರೇ, ತೊಳೆದರೆ ಸುಲಭವಾಗಿ ಹೋಗುದಿಲ್ಲ" ಎಂದು ಹರಿ ಹೇಳಿದ್ದು ನನಗೆ ಹೆಚ್ಚಿನ ಅನುಕೂಲವೇ ಆಯ್ತು. ನಿಜದಲ್ಲಿ, ಕಟ್ಟೆಯಾಚಿನ

20 December 2018

ಸೈಕಲ್ಲೇರಿ ನಾನು ನೀವು ವನಕೆ ಪೋಗುವಾ

ಹೊಸ್ತಿಲಲ್ಲಿ ಮುಗ್ಗರಿಸಿದವ!

ಮೊನ್ನೆ ಅಕ್ಟೋಬರಿನಲ್ಲಿ (೨೦೧೮) ನಮ್ಮನ್ನು ಕೇದಾರ ಬದರಿಗೆಳೆದ ಸೈಕಲ್ ಗೆಳೆಯ - ಹರಿಪ್ರಸಾದ್ ಶೇವಿರೆ, ನಿಮಗೆಲ್ಲ ಗೊತ್ತೇ ಇದೆ (ಇಲ್ಲದವರು ಓದಿಕೊಳ್ಳಿ: ಕೇದಾರನಾಥ ೨೮ ವರ್ಷಗಳ ಮೇಲೆ). ಮತ್ತವರೇ ನವೆಂಬರ್ ಮೊದಲ ವಾರದಲ್ಲಿ, ಒಮ್ಮೆಲೆ ಭಾಗವತರಂತೆ "ಸೈಕಲ್ಲೇರಿ ನಾನು ನೀವು ವನಕೆ ಪೋಗುವಾ" ಎಂದು ರಾಗ ತೆಗೆದರು. ಅರೆ, ಇದ್ಯಾವ ಹೊಸ ಯಕ್ಷ-ಪ್ರಸಂಗಾಂತ ಒಮ್ಮೆ ಬೆರಗಾದೆ. ಆದರೆ ಅವರು ಚರಣಗಳಲ್ಲಿ,
ನವೆಂಬರ್ ೨೯,೩೦ ಮತ್ತು ಡಿಸೆಂಬರ್ ೧,೨ ದಿನಗಳನ್ನು ಸೂಚಿಸಿದರು. ವ್ಯವಸ್ಥೆ ರಾಜಸ್ತಾನದ ಅರಣ್ಯ ಇಲಾಖೆಯ ವನ್ಯ ವಿಭಾಗದ್ದು. ಸಹಯೋಗದಲ್ಲಿ ಅಂತಾರಾಷ್ಟ್ರೀಯ ಪ್ರವಾಸೀ ಸಂಸ್ಥೆ ‘ಲೆ ಟೂರ್ ಇಂಡಿಯಾ’ ಇತ್ತು. ಆದರೂ ಕೇವಲ ಒಂಬತ್ತೇ ಸಾವಿರ ರೂಪಾಯಿಗೆ ವನಧಾಮಕ್ಕೆ ಪ್ರವೇಶಾನುಮತಿ, ಮಾರ್ಗದರ್ಶನ, ಬೆಂಬಲ, ಊಟ, ವಾಸ, ಸ್ಥಳೀಯ ಪಯಣ.... ಎಂದೆಲ್ಲ ರಾಗ ತಾಳ ವಿಸ್ತರಿಸಿದಾಗ ನಾನೂ ಗೆಜ್ಜೆ ಕಟ್ಟಿ, ಹೆಜ್ಜೆ ಕೂಡಿಸಿದೆ. ಮಂಗಳೂರಿನ ತಂಡವೆಂಬ ಹೆಸರಿಗೆ, ಇನ್ನೋರ್ವ ಸೈಕಲ್ ಗೆಳೆಯ - ಅನಿಲ್ ಕುಮಾರ್ ಶಾಸ್ತ್ರಿ, (ಹಿಂದೂ ಪತ್ರಿಕೆಯ ಪ್ರತಿನಿಧಿ) ಸೇರಿಕೊಂಡರು. 

11 August 2018

ವೈಮಿಯಾ ಹುಚ್ಚು, ಉಚ್ಚಿಲಕ್ಕೂ ಬರಲಿ!


ಮೊನ್ನೆ ಗೆಳೆಯ ವೆಂಕಟ್ರಮಣ ಉಪಾಧ್ಯರು "ಇದೊಂದು ವಿಚಿತ್ರ ನದಿ ನೋಡಿ ಮಾರಾಯ್ರೇ. ಜನರ ಹುಚ್ಚಾಟವನ್ನಿದು ಮನ್ನಿಸಿ, ಮತ್ತೆ ಮತ್ತೆ ಸಂಭ್ರಮಕ್ಕೆ ಅವಕಾಶ ಕೊಡುತ್ತಲೇ ಇದೆಯಂತೆ!" ಎಂದು ಈ ಸೇತು ಕೊಟ್ಟರು: 

ನಾನು ನೋಡಿದೆ, ನಿಸ್ಸಂದೇಹವಾಗಿ ಸಂತೋಷಪಟ್ಟೆ. ಆದರೆ ಮರುಕ್ಷಣಕ್ಕೆ ಉದ್ಗರಿಸಿದ್ದಿಷ್ಟೇ "ಅಯ್ಯೋ ಇದು ನಮ್ಮ ಉಚ್ಚಿಲ ಬಟಪಾಡಿಯ ತ್ರಿವೇಣೀ!"

03 January 2018

ಹಳೆಯಂಗಡಿಯ ಹೊಸ ಸಾಹಸ - ಸೈಕಲ್ ಸಂಘ

ಮಂಗಳೂರು ಕರಾವಳಿಯ ಚಳಿಗಾಲ ನಿಜದಲ್ಲಿ ಸೈಕಲ್ ಚಟುವಟಿಕೆಗಳಿಗೆ ಬಹಳ ಉತ್ತಮ ಕಾಲ. ಸಹಜವಾಗಿ ಅಂದು (೩೦-೧೨-೨೦೧೭) ಬೆಳಿಗ್ಗೆ ಎಂಟಕ್ಕೆ ಸೈಕಲ್ ಉಡುಪಿ ದಾರಿಯಲ್ಲಿ ಪೆಡಲೊತ್ತತೊಡಗಿದವ ಸುಮಾರು ೨೦ ಕಿಮೀ ಸವಾರಿಯನ್ನು ಒಂಬತ್ತಕ್ಕೆ ಸರಿಯಾಗಿ ವಿರಮಿಸಿದ ಸ್ಥಳ - ಹಳೆಯಂಗಡಿ ಸಪಪೂ ಕಾಲೇಜು ವಠಾರ. ಅಲ್ಲಿ ಮುಕ್ತ ವೇದಿಕೆಯ ಮೇಲೆ ಸುಮಾರು ಇಪ್ಪತ್ತು ಸೈಕಲ್ಲುಗಳು ಪರಿಸರ ಪ್ರಿಯ ಘೋಷವಾಕ್ಯಗಳೊಡನೆ ಸಜ್ಜಾಗಿದ್ದರೆ, ನೂರಕ್ಕೂ ಮಿಕ್ಕು ಮಕ್ಕಳು, ಅಧ್ಯಾಪಕರು ಮಹತ್ತಿನ ಸಂಭ್ರಮದಲ್ಲಿದ್ದರು. ಕಾಲೇಜಿನ ಪ್ರಾಂಶುಪಾಲೆ - ಪಿ.
ಜಯಶ್ರೀಯವರು, ತನ್ನ ಅಧ್ಯಾಪಕರುಗಳು ನಿಯತ ಶಿಕ್ಷಣದ ಹೊರಗೂ ನಡೆಸುವ ವಿದ್ಯಾರ್ಥಿಪರ ಚಟುವಟಿಕೆಗಳಿಗೆ ಬೆಂಬಲ ಕೊಡುವುದರಲ್ಲಿ ಹೆಸರುವಾಸಿ. "ಮನೆಯೆ ಮೊದಲ ಪಾಠಶಾಲೆ" - ಎನ್ನುವ ಮಾತಿದೆ. ಆದರೆ ಇದು ಹೆಚ್ಚಾಗಿ ಬಳಕೆಯಾವುಗುದು ಕೇವಲ ಮಾತಿನ ಚಂದಕ್ಕೆ ಮಾತ್ರ. ನಾವು ತಯಾರಿಸಿದ ‘ಕಸ’ಕ್ಕೆ ಜವಾಬ್ದಾರಿ ಮಾತ್ರ ಇನ್ನೊಬ್ಬರೆಂದು ನಡೆಯುತ್ತಿರುವ ದಿನಗಳಿವು. ಮಕ್ಕಳ ಔಪಚಾರಿಕ ವಿದ್ಯಾ ಸಂಸ್ಕಾರದೊಡನೆ ಏಳ್ಗೆ ಮತ್ತು ಹಾನಿತಡೆಗಳಿಗೆಲ್ಲ ಸಮಾಜ ಸುಲಭವಾಗಿ ಶಿಕ್ಷಣ

25 March 2016

ಸೈಕಲ್, ಚಾರ್ಮಾಡಿಯ ಎತ್ತರಕೆ! ಶಿರಾಡಿಯ ಬಿತ್ತರಕೆ!


ಕುದುರೆಮುಖಕ್ಕೆ ಸೈಕಲ್ ಸವಾರಿ ಹೋದ ನಮ್ಮ `ದುಷ್ಟಚತುಷ್ಟಯಕ್ಕೆ ಚಾರ್ಮಾಡಿ ಘಾಟಿಯನ್ನೂ ಸೈಕಲ್ಲೇರಿ ತುಡುಕುವ ಮನಸ್ಸಾಯ್ತು. ಮಂಗಳೂರು, ಚಾರ್ಮಾಡಿ, ಮೂಡಿಗೆರೆ, ಸಕಲೇಶಪುರ, ಶಿರಾಡಿಗಾಗಿ ವಾಪಾಸುನಮ್ಮ ಯೋಜನೆ. ತಿಂಗಳ ಹಿಂದೆಯೇ ಮಾರ್ಚ್ ೧೨,೧೩ರ ಮುಹೂರ್ತವೇನೋ ನಿಕ್ಕಿಯಾಯ್ತು. ಆದರೆ ನಿವೃತ್ತ ನನ್ನನ್ನುಳಿದು ಮೂವರಿಗೂ ವೃತ್ತಿ ಜವಾಬ್ದಾರಿಯ ಕಟ್ಟುಪಾಡಿನಲ್ಲಿ ಎಲ್ಲ ಗೊಂದಲ. ಕಳೆದು, ಕೂಡಿಸಿ, ಉಂಟೂ ಇಲ್ಲಾ ಮಾಡಿ ಅಂತೂ ಶನಿವಾರ ಬೆಳಿಗ್ಗೆ ಐದೂವರೆಗೆ ಮಂಗಳೂರಿನ ನಂತೂರು ವೃತ್ತದಿಂದ ಹೊರಟವರು ಐದು ಮಂದಿವೇಣುವಿನೋದ್, ಅನಿಲ್ ಶೇಟ್, ಸಮರ್ಥ ರೈ, ಚಿನ್ಮಯ ದೇಲಂಪಾಡಿ ಮತ್ತು ನಾನು.


11 March 2016

ಅಣ್ಣನ ಸ್ಮೃತಿಗಾಗಿ ಉರುಳು ಸೇವೆ

.ಪಿ. ತಿಮ್ಮಪ್ಪಯ್ಯ, ಅಂದರೆ ಪುತ್ತೂರಿನಾಚಿನ ಹಳ್ಳಿ ಮರಿಕೆಯಲ್ಲಿದ್ದ ನನ್ನ ದೊಡ್ಡ ಸೋದರಮಾವ, ನಾನು ಸಂಬೋಧಿಸುತ್ತಿದ್ದಂತೆ ಅಣ್ಣ, ಸುಮಾರು ಎರಡು ವರ್ಷದ ಹಿಂದೆ ತೀರಿಹೋದದ್ದರ ನೆನಪಿನ ದಿನವದು (೨೫--೨೦೧೬). (ನೋಡಿ: ಅಸಮ ಸಾಹಸಿ, ಮರಿಕೆಯ ಅಣ್ಣ) ನೆಪದಲ್ಲಿ ಬಾಲ್ಯದ ನೆನಪುಗಳನ್ನು ಮತ್ತೆ ಹೆಕ್ಕುವ, ಆಪ್ತರೊಡನೆ ಒಡನಾಡುವ ಸಂತೋಷಕ್ಕಾಗಿ ಭಾಗಿಯಾಗಲು ಹೊರಟೆ. ದೇವಕಿ ಅನ್ಯ ಕಾರ್ಯನಿಮಿತ್ತ ಹಿಂದುಳಿದಳು. ಅಣ್ಣನ ಬಹುಮುಖೀ ಚಟುವಟಿಕೆಗಳ ಬಹುಭಾಗದ ಓಡಾಟವೆಲ್ಲ ನಡೆದದ್ದು ಸೈಕಲ್ಲಿನಲ್ಲೇ. ಅದರ ಸ್ಮೃತಿಗೂ ನನ್ನ ಚಟ ಹೊಂದಿ ಬಂತೆಂದು ಸೈಕಲ್ಲನ್ನೇ ಏರಿಬಿಟ್ಟೆ.

ಬೆಳಿಗ್ಗೆ ಆರು ಗಂಟೆಗೇ ದೀಪ ಬೆಳಗಿಕೊಂಡು ಪುತ್ತೂರು ದಾರಿ ಹಿಡಿದೆ. ಅಡ್ಯಾರ್ ವಲಯಗಳಲ್ಲಿ ತೆಳು ಮಂಜುಮುಸುಕಿತ್ತು. ತುಂಬೆ ಸಮೀಪಿಸುತ್ತಿದ್ದಂತೆ ಇನ್ನೂ ನಿದ್ರೆಯ ಮಂಪರು ಹರಿಯದ ಸೂರ್ಯ ಎದ್ದ. ಜೋಡುಮಾರ್ಗ ಕಳೆದು, ನೇತ್ರಾವತಿ ಸಂಕದಲ್ಲಿ ಐದು ಮಿನಿಟು ವಿರಮಿಸಿ, ಮುಂದುವರಿದೆ. ಸೈಕಲ್ ಸವಾರಿಗೆ ಮಂಗಳೂರು ಪುತ್ತೂರು ದಾರಿಯಲ್ಲಿ ನರಹರಿ ಪರ್ವತದ ಭುಜ ಹತ್ತುವುದೊಂದೇ ಸಿಗುವ ತುಸು ಕಠಿಣ ಸವಾಲು. ನೇತ್ರಾವತಿ ಸಂಕದ ವಿರಾಮದನಂತರ ನರಹರಿ ಬೆಟ್ಟವನ್ನೂ ನಗಣ್ಯ ಮಾಡಿ, ನನ್ನದು `ತಡೆರಹಿತ ಬಸ್ಸು’! (ಹಿಂದೆ, ಕೆಂಬೋರ್ಡು ಹೊತ್ತು, ಜೋಡುಮಾರ್ಗದಲ್ಲಿ ಮಾತ್ರ ನಿಲುಗಡೆ ಇದ್ದು, ಪುತ್ತೂರು ಮಂಗಳೂರುಗಳ ನಡುವೆ ಓಡಾಡುತ್ತಿದ್ದ ಸರ್ಕಾರಿ ನಾನ್-ಸ್ಟಾಪ್ ಬಸ್ಸುಗಳ ನೆನಪಿಗೆ) ಕಲ್ಲಡ್ಕದ ರಿಂಜಿಂ ಕಾಫಿ ಖ್ಯಾತಿಯ ಲಕ್ಷ್ಮೀ ಹೋಟೆಲ್ ಸೈಕಲ್ಲಿಗರಿಗೆಲ್ಲ ಪ್ರಿಯ ಇಂಧನ ಕೇಂದ್ರ. ಆದರೆ ಬೆಳಗ್ಗಿನ ಐದು ಗಂಟೆಯ ಅವೇಳೆಯಲ್ಲೂ ದೇವಕಿ ಬಿಸಿ ದೋಸೆ, ಕಾಫಿ ಮಾಡಿಕೊಟ್ಟದ್ದರಿಂದ ಈ ಬಸ್ಸಿಗೆ ಇಂಧನದ (`ಡೀಸೆಲ್ ವೆಚ್ಚ’ದ) ಚಿಂತೆಯೂ ಇರಲಿಲ್ಲ.

02 February 2016

ಕುದುರೆಮುಖಕ್ಕೆ ಸೈಕಲ್ ಸವಾರಿ

ನಿಶ್ಚಲ ಕತ್ತಲಿನಲ್ಲಿ, ಚಳಿಗಾಲದ ತೆಳು ಮಂಜಿನ ಹೊದಿಕೆಯಲ್ಲಿ, ಮೂಕವಾಗಿದ್ದ ದಾರಿಗೆ ಒಮ್ಮೆಗೇ ನಾಲ್ಕು ಜೋಡಿ ಚಕ್ರಗಳು ಚಕ್ಕಂದಕ್ಕೆ ಸಿಕ್ಕ ಸಂಭ್ರಮ “ರೊಂಯ್ ರೊಂಯ್, ರೊಂಯ್!” ಕರಿಯ ಹೊಗೆಯಿಲ್ಲ, ಕರ್ಕಶ ಧ್ವನಿಯಿಲ್ಲ, ಹರಿದೋಡುವ ಧಾವಂತವಿಲ್ಲ – ಸಮಾಧಾನದ ಸವಾರಿಯ ನಾಲ್ಕು ಸೈಕಲ್ಲುಗಳು, ಮೇಲೆ ಸವಾರರು. ಮಾರ್ಗದಂಚಿನ ಬಿಳಿಗೀಟು ಇವರ ಸಂಗಾತಿ, ಪ್ರತಿ ಬಿರುಕೂ ಜಲ್ಲಿಕಣವೂ ನಿವಾರಿಸಬೇಕಾದ ಅಡ್ಡಿ, ಹಾಗೆಂದು ಲಕ್ಷ್ಯಕ್ಕೆ ಮಿತಿಯಿಲ್ಲ. ಹಾಗೆ ಶತೋತ್ತರ ಕಿಮೀ ಅಂತರದ ಕುದುರೆಮುಖವನ್ನೇ ಮಣಿಸ ಹೊರಟ ಮಹತ್ವಾಕಾಂಕ್ಷಿಗಳು ನಾವು ನಾಲ್ವರು. ಐದು ಗಂಟೆಗೇ ಮನೆ ಬಿಟ್ಟ ನನ್ನನ್ನು ಕೊಟ್ಟಾರದಲ್ಲಿ ಚಿನ್ಮಯ ದೇಲಂಪಾಡಿ, ಅರವಿಂದ ಕುಡ್ಲರೂ ಸುರತ್ಕಲ್ಲಿನಲ್ಲಿ ವೇಣು ವಿನೋದರೂ ಸೇರಿಕೊಂಡಿದ್ದರು. ಅಂಥ ಚಳಿಯೇನೂ ಇರಲಿಲ್ಲ. ನಗರ ಮಿತಿಯಲ್ಲಿ ಬೀದಿದೀಪಗಳ ಅತಿರೇಕದಲ್ಲಿ ದೃಷ್ಟಿಮಂದನೂ ಸಂಭ್ರಮಿಸಬಹುದಿತ್ತು. ಅಲ್ಲಿ ನಮ್ಮ ಗುರುತಿಗೆ, ಉಳಿದಂತೆ ಕತ್ತಲ ಓಟಗಳಲ್ಲಿ ನಮ್ಮ ನೋಟಕ್ಕೂ ಒದಗುವಂತೆ ಬಿಳಿಪ್ರಭೆಯ ಕೋಲು ಎದುರು ಬಿಟ್ಟಿದ್ದೆವು. ಅದಕ್ಕೂ ಮುಖ್ಯವಾಗಿ ಹಿಂಬಾಲಿಸುವವರಲ್ಲಿ ನಮ್ಮ ಕುರಿತು ಜಾಗೃತಿಯನ್ನುಂಟುಮಾಡುವಂತೆ ಹಿಂದೆ ಕೆಂಪು ಮಿನುಗಿನ ದೀಪವನ್ನೂ ಸಿಕ್ಕಿಸಿಕೊಂಡಿದ್ದೆವು. ತಿಂಡಿಗೆ ಕಡಾರಿ, ಮಧ್ಯಾಹ್ನದೂಟಕ್ಕೆ ಕುದುರೆಮುಖ, ರಾತ್ರಿಗೆ ಮರಳಿ ಮಂಗಳೂರು – ಹೆಚ್ಚು ಕಡಿಮೆ ಇನ್ನೂರಿಪ್ಪತ್ತು  ಕಿಮೀ ನಮ್ಮ ಲಕ್ಷ್ಯ. ತುಸು ಪಳಗಿದ ಸವಾರನಿಗೆ ಮಟ್ಟಸ ದಾರಿಗಳಲ್ಲಿ ಇದು ದೊಡ್ಡ ಲೆಕ್ಕವೇನಲ್ಲ. ಆದರೆ ಇಲ್ಲಿ ಕೊನೆ ಹಂತದ ಸುಮಾರು ಇಪ್ಪತ್ನಾಲ್ಕು ಕಿಮೀ - ಏಕ ಕಟ್ಟೇರಿನ ಭಗವತೀ ಘಾಟಿ, ನಮಗಿದ್ದ ಸಾಹಸದ ಸವಾಲು.

25 December 2015

ನಿತ್ಯ ಹಸಿರುಳಿಸಿದ ನೀಲಗಿರಿಯಾನ

(ನೀಲಗಿರಿಗೆ ಸೈಕಲ್ ಸವಾರಿ - ಅಂತಿಮ ಭಾಗ)

ಉದಕಮಂಡಲದಲ್ಲಿ ತ್ರಿಕೋನದ ಮೂರು ಮೂಲೆಗಳಂತೆ ಮುಖ್ಯ ನಗರಗಳಿವೆ. ಮೈಸೂರು ಮೂಲೆಯಲ್ಲಿನ ಮುಖ್ಯ ನಗರಿ ಊಟಿ. ಅದರ ನೇರ ಮುಂದುವರಿಕೆಯಾಗಿ ಸಿಗುವ ಕೂನೂರು ಮೆಟ್ಟುಪಾಳ್ಯಂ ಮೂಲೆಯಲ್ಲಿದೆ. ಇವೆರಡರ ಸುಮಾರು ಸಮಾನ ಅಂತರದ ಎದುರು ಮೂಲೆಯಲ್ಲಿನ ನಗರಿ ಕೋತಗೇರಿ. ಇದನ್ನು ಕಾಡುಮೂಲೆ ಎನ್ನುವುದೇ ಸರಿ! ವಾಸ್ತವದಲ್ಲಿ ಮೆಟ್ಟುಪಾಳ್ಯದ ಬಲಗವಲು ಮತ್ತು ಅನ್ಯ ಕಾರಣಗಳಿಗಾಗಿ ಉದಕಮಂಡಲದ ಉಳಿದೆಲ್ಲಾ ದಾರಿಗಳಿಗಿಂತ ಉತ್ತಮ ದಾರಿ ಕೋತಗೇರಿಯದ್ದು. ಗಿರಿ, ವನ, ಜಲಪಾತಗಳ ರೌದ್ರವೇ ಈ ವಲಯದ ವೈಶಿಷ್ಟ್ಯ. ಸಹಜವಾಗಿ ನಮ್ಮ ನೀಲಗಿರಿ ಸೈಕಲ್ ಸವಾರಿ ಮೂರು ನಾಲ್ಕನೇ ದಿನಗಳ ಸೈಕಲ್ ಕಲಾಪಗಳನ್ನು ಈ ದಿಕ್ಕಿನಲ್ಲೇ ವಿಸ್ತರಿಸಿತ್ತು. ವಾಸದ ನೆಲೆಯಾಗಿ ಕೂನೂರನ್ನೇ ಉಳಿಸಿಕೊಂಡಿತ್ತು.

ಹೋಟೆಲ್ ವಿವೇಕ್ ಗಿರಿಪಟ್ಟಣಕ್ಕೆ ಸಾಕಷ್ಟು ದೊಡ್ಡ ವಠಾರದಲ್ಲೇ ಇದೆ. ಇದು ಮೂರು ಮಹಡಿಗಳ ಎತ್ತರಕ್ಕೆ ವಸತಿ ಕಲ್ಪಿಸುವ ಸಾಮಾನ್ಯ ಸೌಕರ್ಯಗಳಿರುವ ಹೋಟೆಲ್. ಸಾಮಾನ್ಯವಾಗಿ ಎಲ್ಲಾ ಹೋಟೆಲ್ಲುಗಳಂತೆ ಇಲ್ಲೂ “ಸ್ನಾನಕ್ಕೆ ಬಿಸಿನೀರು ಬೆಳಿಗ್ಗೆ ಮಾತ್ರ.” `ಎಕ್ಸ್‍ಪ್ರೆಸ್ ಗಾಡಿ’ ರಜನಿ, ಮೊದಲ ದಿನ ಅವರ ಬಟ್ಟೆ ಗಂಟು ಹೊತ್ತ ವಿಂಗರ್ ಬರುವ ಮೊದಲೇ ಹೋಟೆಲ್ ತಲಪಿದ್ದರು. ಹಾಗೇ ಎರಡನೇ ದಿನ ಅವರ ಕೋಣೆಯ ಕೀಲಿಕೈಯವರು ಬರುವ ಮೊದಲೇ ಹೋಟೆಲ್ ಸೇರಿದ್ದರು. ಆತ ಅನುಕೂಲಗಳ ದಾರಿ ಕಾಯದೇ ಬೆವರು ಮಳೆಯ ನೆನಕೆಯನ್ನು ಕೊರೆಶೀತದ ನೀರಿನಲ್ಲೇ “ಚಳಿ ಚಳಿ ತಾಳೆನು, ಅಹಾ ಉಹೂ” ಹಾಡುತ್ತಾ ತೊಳೆದುಕೊಂಡಿದ್ದರು. ನಾವು ಅಲ್ಲಿಗೆ ಮುಟ್ಟುವಾಗ ರಜನಿ ಹೋಟೆಲಿನವರ ಟೂ ಪೀಸ್ ಸೂಟಿನಲ್ಲಿ ಶೋಭಿಸುತ್ತಿದ್ದರು! ಕಿಟಕಿ ಮುಚ್ಚಿದ ವ್ಯಾನಿನೊಳಗಿನ ಬಿಸಿ ಕಳೆಯದೆ ನೋಡುವವರಿಗೆ ರಜನಿಯದ್ದು ಒಳ್ಳೇ ಹಾಸ್ಯ. ಆದರೆ ವ್ಯಾನಿನ ಬಾಗಿಲು ತೆರೆದು ಕಾಲು ಹೊರ ಇಟ್ಟ ಮರು ಮಿನಿಟಿಗೆ ಪರಿಸರದ ಶೈತ್ಯ ಅಮರಿಸುವಾಗ ಮಹಾ ಸಾಹಸ. ನಾನಂತು ನಿರ್ಯೋಚನೆಯಿಂದ ಘೋಷಿಸಿಬಿಟ್ಟೆ “ಧ್ರುವಪ್ರದೇಶದಲ್ಲಿ ಆರು ತಿಂಗಳು ಸ್ನಾನ ಇಲ್ಲ”! ಹೋಟೆಲ್ ವಿವೇಕಿನಲ್ಲೂ ತಿಂಡಿತೀರ್ಥದ ವಿಭಾಗ ಔತ್ತರೇಯರಿಗೆ ಪರಭಾರೆಯಾಗಿತ್ತು. ನಮ್ಮ ತಂಡ ಅನಿವಾರ್ಯತೆಯಲ್ಲಿ ಎರಡು ರಾತ್ರಿಗಳ ಊಟವನ್ನಷ್ಟೇ ಅಲ್ಲಿ ಮಾಡಿತು. ಅಲ್ಲಿನ ಕೋಣೆಗಳು ಸಣ್ಣವಾದ್ದರಿಂದ ಇಬ್ಬಿಬ್ಬರಿಗೊಂದು ಕೋಣೆ ಕೊಟ್ಟಿದ್ದರು. ಹಾಗಾಗಿ ಗೊರಕೆಯವರನ್ನು ಕಳಚಿಕೊಂಡ ರಜನಿ ಮತ್ತು ನನಗೆ ನಿದ್ದೆಗೆಡುವ ಪ್ರಸಂಗ ಬರಲಿಲ್ಲ!

18 December 2015

ನೀಲಗಿರಿಗೆ ಸೈಕಲ್ ಸವಾರಿ


`ಸೈಕಲ್ ವೆಂಕಿ’ ಎಂದೇ ಖ್ಯಾತರಾದ ಬೆಂಗಳೂರಿನ ವೀಲ್ ಸ್ಪೋರ್ಟ್ಸ್ ಸೈಕಲ್ ಅಂಗಡಿಯ ಯಜಮಾನರ ಫೇಸ್ ಬುಕ್ ನಮೂದು ನನ್ನನ್ನು ಆಕರ್ಷಿಸಿತು: “ಡಿಸೆಂಬರಿನ ಚಳಿಯ ಐದು ದಿನಗಳಲ್ಲಿ ಬಿಸಿಯೇರಿಸಲು, ಹೊಡೆಯಿರಿ ಸೈಕಲ್ ಉದಕಮಂಡಲಕ್ಕೆ!”

ಪ್ರವಾಸಿಗಳ ಸ್ವರ್ಗ ಅರ್ಥಾತ್ ಒಂದಕ್ಕೆ ನಾಲ್ಕರ ಬೆಲೆಯ ಲೂಟಿಯ ಊಟಿಯಲ್ಲೂ ಭಾಗಿಗಳಿಗೆ ವಾಸ, ತಿನಿಸು, ಉದ್ದಕ್ಕೂ ವೈದ್ಯಕೀಯ ಹಾಗೂ ತಾಂತ್ರಿಕ ಬೆಂಬಲಗಳು ಸೇರಿ ಕೇವಲ ಹದಿನೈದು ಸಾವಿರ ರೂಪಾಯಿಯ ಶುಲ್ಕ. ಆಗಲೇ ಕೆಲವು ಸೈಕಲ್ ಮಹಾಯಾನಗಳನ್ನು ಯಶಸ್ವಿಯಾಗಿ ಸಂಘಟಿಸಿ ವಿಶ್ವಾಸಾರ್ಹತೆ ಗಳಿಸಿದ್ದ ಬ್ಲೂ ಮೌಂಟೇನ್ ಬೈಕ್ ಟೂರ್ಸ್, ಹೃಸ್ವ ರೂಪದಲ್ಲಿ ಬೀಯೆಂಬೀಟಿ ಅರ್ಥಾತ್ ನೀಲಗಿರಿಯ ಸೈಕಲ್ ಯಾತ್ರೆ, ಮಹಾಯಾನದ ಸಂಘಟಕರು. ಇಷ್ಟಿದ್ದ ಮೇಲೆ ನನಗೆ ಸೈಕಲ್ ಹೊರಡಿಸಲು ಮಹಾ ಶಕ್ತಿ, ಧೈರ್ಯಗಳೇನೂ ಬೇಕಾಗಲಿಲ್ಲ - ಬಲ ಕುಸಿಯೆ ಕಾರಿಹುದು ಮಂಕುತಿಮ್ಮ! ಅಂತರ್ಜಾಲ ಅವಸ್ಥೆಯ ಬ್ಯಾಂಕಿನೊಡನೆ ಏಗಿ ಮುಂಗಡ ರವಾನಿಸಿದೆ, ಅರ್ಜಿ ಸಲ್ಲಿಸಿದೆ. ಮಗಸೊಸೆಯರ ಸಹವಾಸದಲ್ಲಿ ಬೆಂಗಳೂರು ನನಗೆ ಪರಕೀಯವಲ್ಲ. ಆದ್ದರಿಂದ ನವೆಂಬರ್ ಮೂವತ್ತರ ಸಂಜೆಗೇ ನಾನು `ಅ(ಭಯ)ರ(ಶ್ಮಿಯರ)ಮನೆ’ ಸೇರಿಕೊಂಡೆ. ಅಭಯನಲ್ಲಿದ್ದ ನನ್ನದೇ ಮಾದರಿಯ ಮೆರಿಡಾ ೨೧ ಸ್ಪೀಡಿನ, ಪರ್ವತಾರೋಹಿ ಸೈಕಲ್ (ಎಂಟೀಬೀ) ಸಜ್ಜಾಗಿ ಕಾದಿತ್ತು.


ಇದನ್ನು ನುಣ್ಣನೆ ದಾರಿಯಲ್ಲಿನ ವೇಗ ಸವಾರಿಗೆ ಸಾಮಾನ್ಯವಾಗಿ ಯಾರೂ ಬಯಸುವುದಿಲ್ಲ. ಆದರೆ ಎದುರು ಕಬೆಯ ಆಘಾತಹಿಂಗುವ ಗುಣ (ಶಾಕ್ ಅಬ್ಸಾರ್ಬರ್), ಎಂಥಲ್ಲೂ ನಿಟ್ಟುಸಿರು ಬಿಡದೆ ದಾರಿಕಚ್ಚಿ ಸಾಗುವ ದಪ್ಪ ಚಕ್ರಗಳು ನನಗಂತು ಪ್ರಿಯವೇ ಆಗಿವೆ. ಅಭಯ ದೊಡ್ಡ ಪಯಣಕ್ಕಾಗಿ ಗೊಪ್ರೊ ಕ್ಯಾಮರಾವನ್ನು ಅದರ ಹ್ಯಾಂಡಲ್ಲಿಗೇರಿಸಿದ್ದ. ಇದು ಇಟ್ಟಲ್ಲಿ (ಹ್ಯಾಂಡಲ್, ಶಿರಸ್ತ್ರಾಣ ಇತ್ಯಾದಿ) ಗಟ್ಟಿಯಾಗಿ ಕುಳಿತು, ಮಳೆಬಿಸಿಲುಗಳಲ್ಲಿ ತರತಮ ಮಾಡದೆ, ಬಲು ಸರಳ ನಿಯಂತ್ರಣದಲ್ಲಿ ಚಿತ್ರ, ಚಲಚಿತ್ರಗಳನ್ನು ದಾಖಲಿಸುತ್ತದೆ.  ಅಭಯ ಅದನ್ನು ಬಳಸುವ ಕುರಿತು ಸರಳ ಪಾಠ ಬೇರೆ ಮಾಡಿದ. ಮಂಗಳವಾರ ಬೆಳಿಗ್ಗೆ ಒಂದು ಅಭ್ಯಾಸದ ಸರ್ಕೀಟ್ ಹೊರಟೆ.


04 September 2015

ಕರಿಗಿರಿಯ ಬಿಳಿಗಿರಿಗೆ

(ಚಕ್ರವರ್ತಿಗಳು – ೩೪)
[೨೦-೧೦-೧೯೭೪ರ ಕರ್ಮವೀರ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನದ ಪರಿಷ್ಕೃತ ರೂಪ]

ಮೈಸೂರಿನಲ್ಲಿ ನನ್ನ ಮಹಾರಾಜ ಕಾಲೇಜಿನ ದಿನಗಳು ತೊಡಗುವ ಕಾಲಕ್ಕೆ ಅಲ್ಲಿನ ದಪಸಂ (ದಖ್ಖಣ ಪರ್ವತಾರೋಹಣ ಸಂಸ್ಥೆ), ಪರ್ಯಾಯವಾಗಿ ಸಾಹಸಿಯಾಗಿ ಬಹುಖ್ಯಾತರಾದ ವಿ.ಗೋವಿಂದರಾಜ್ ಪರಿಚಯವೂ ಆಗಿತ್ತು.
ನಮ್ಮ ಬಳಗ ವಾರಾಂತ್ಯದ ಶಿಲಾರೋಹಣ, ಚಾರಣ ಚಟುವಟಿಕೆಗಳಿಗೆ ಚಾಮುಂಡಿ ಬೆಟ್ಟದ (ಸುಮಾರು ಮೂರ್ನಾಲ್ಕು ಕಿಮೀ) ಕಿರಿದಂತರದಿಂದ ತೊಡಗಿ ಕರಿಘಟ್ಟ (೧೭ ಕಿಮೀ), ಪಾಂಡವಪುರದವರೆಗಿನ (೨೨ ಕಿಮೀ), ಹಿರಿದಂತರದ ದಾರಿ ಸವೆಸಿ, ಬಂಡೆ ಶಿಖರಗಳಿಗೆ ಬೆಳಿಗ್ಗೆ ಹೋಗಿ ಸಂಜೆಗೆ ಮರಳುತ್ತಿದ್ದೆವು.


ಬಂಡೆ, ಬೆಟ್ಟಗಳಲ್ಲಿ ನಮ್ಮ ಅಸಾಮಾನ್ಯ ಚಟುವಟಿಕೆಗಳೇನಿದ್ದರೂ ಹೋಗಿ ಬರುವ ಸಾಧನ ಮಾತ್ರ ಸೈಕಲ್ಲೇ. ಇಂದಿನ ಹಗುರ ಆದರೆ ದೃಢ ದೇಹಿ, ಅದರಲ್ಲೂ ವಿವಿಧ ವೇಗಗಳ ಸೌಕರ್ಯದ ಕಲ್ಪನೆಗಳೆಲ್ಲ ನಮ್ಮನ್ನು ಮುಟ್ಟಿಯೇ ಇರಲಿಲ್ಲ. ನಮ್ಮವೆಲ್ಲ ಫೋರ್ಕ್ ಮುರಿದರೆಂದು ಹೆಚ್ಚುವರಿ ತಿರುಚಿದ ಕಬ್ಬಿಣ ಸರಳಿನ ರಕ್ಷಣೆ, ಸಾರ್ವಕಾಲಿಕ ಮಡ್ಗಾರ್ಡ್, ಚಂದದ ಪೂರ್ಣ ಚೈನ್ ಕವರ್ರು, ಕ್ಯಾರಿಯರ್, ದೊಡ್ಡ ಸ್ಟ್ಯಾಂಡ್ ಮುಂತಾಗಿ ಸಕಲಾಲಂಕಾರವೂ ಕಬ್ಬಿಣದ ರಚನೆಗಳೇ. ಈ ಹೊರೆಯ ಮೇಲೆ ನಮ್ಮ ಮಧ್ಯಾಹ್ನದ ಬುತ್ತಿ, ನೀರು ಮತ್ತು ಪರ್ವತಾರೋಹಣ ಸಲಕರಣೆಗಳ ಹೊರೆಯೂ ಇರುತ್ತಿತ್ತು.

21 July 2015

ಬಿಸಿಲೆ ಕಾಡಿನ ಕೊನೆಯ ದಿನಗಳು!

(ಸೈಕಲ್ ಸಾಹಸಕ್ಕೆ ಮುಂದೆ ಅಲಭ್ಯ)

ರಾತ್ರಿಯಿಡೀ ಉಧೋ ಮಳೆ. ತುಸು ಬಿಟ್ಟಿತು ಎನ್ನುವಾಗ, ಅಲಾರಾಂ ನಾಲ್ಕೂವರೆ ಎಂದೊರಲಿತು. ದಡಬಡ ಹೊರಡುತ್ತಿದ್ದಂತೆ ಸುರತ್ಕಲ್ಲಿನಿಂದ ಅಭಿ ಚರವಾಣಿ ಮನೆ ಬಿಟ್ಟಿದ್ದೇನೆ, ಪಂಚೇರ್ ಕಿಟ್ ಮರೆತುಬಿಟ್ಟೆ. ಹಿಂದೆ ಹೋಗಿ ತರ್ಲಾ?” “ಬಿಡು, ಪರ್ವಾಗಿಲ್ಲ. ರೈಗಳು ಏನೋ ತರ್ತಾರೆನನ್ನ ಸಮಾಧಾನ. ಐದೂಐವತ್ತಕ್ಕೆ ನಾನೂ ಸೈಕಲ್ ಏರಿದೆ.
ದಾರಿಯೆಲ್ಲ ಮಳೆ ಹೊಯ್ದು ಚೊಕ್ಕ ತೊಳೆದಂತಿತ್ತು. ಸೂರ್ಯಮೇಶ್ಟ್ರು ಕಣ್ಣು ಕೆಕ್ಕರಿಸುವಾಗ, ಪಡ್ಡೆ ಮೋಡಗಳು ಅಡಗುಮೂಲೆಗೆ ಧಾವಿಸಿದ್ದವು. ಆದರೆ ಉಡುಪಿ - ಮಂಗಳೂರು ಹೆದ್ದಾರಿ ಇಷ್ಟು ಸರಳವಾಗಿರಲಿಲ್ಲ. ಅಲ್ಲಿ ಚತುಷ್ಚಕ್ರ (ಮತ್ತು ಅದಕ್ಕೂ ಮೀರಿದವು!) ವಾಹನಗಳಿಗೆ ಹಾವುನಡೆ ಅಭ್ಯಸಿಸಲು ಆಚೆಗೂ ಈಚೆಗೂ ಕೈಕಂಬ ಬದಲಿಸುತ್ತಲೇ ಇರುತ್ತಾರೆ, ಜಲಕ್ರೀಡೆಯಾಡಲು ಅಸಂಖ್ಯ ಕೊಳಗಳನ್ನೂ ಮಾಡಿದ್ದಾರೆ. ಹೀಗಾಗಿ ಅದರಲ್ಲಿ ಸುರತ್ಕಲ್ ಸಮೀಪದಿಂದ, ಅಂದರೆ ಸುಮಾರು ಹನ್ನೆರಡು ಕಿಮೀ ಸೈಕಲ್ ತುಳಿಯಬೇಕಾದ ಅಭಿಗೆ, ಮಳೆ ಬಿಟ್ಟರೂ ಇರಿಚಲು ಬಿಡದ ಕಾಟ! ಆದರೂ ಆರು ಕಳೆದು ಎರಡೋ ಮೂರೋ ಮಿನಿಟಿನಲ್ಲಿ ಅವನು ನಂತೂರು ತಲಪಿದಾಗ, ನಮ್ಮ ಬಿಸಿಲೆ ಮಹಾಯಾನಕ್ಕೆ ಜೀವ ಬಂದಿತ್ತು.

10 April 2015

ಬೆಂಗಳೂರು ಇನ್ನು ಹತ್ತಿರ

(ಸೈಕಲ್ ಮಹಾಯಾನದ ಎರಡನೇ ಮತ್ತು ಅಂತಿಮ ಭಾಗ)

ಮಹಾಯಾನ ಹೊರಡುವ ಹಿಂದಿನ ದಿನ ನನ್ನ ಚರವಾಣಿ `ಇನ್ಫಿ ಸಂದೀಪ್’ ಎಂದು ರಿಂಗಣಿಸಿತ್ತು. ಸಂದೀಪ್ ಇನ್ಫೋಸಿಸ್ಸಿನ ಮಂಗಳೂರು ಶಾಖೆಯಲ್ಲಿದ್ದಾಗ ನನಗೆ ಪರಿಚಯಕ್ಕೆ ಸಿಕ್ಕಿದವರು. ಐಟಿ ಅಂದರೆ ಹಣ, `ಮಝಾ’ ಎಂಬೆಲ್ಲ ಭ್ರಾಂತರಿಂದ ಈ ವ್ಯಕ್ತಿ ಭಿನ್ನ. ನಮ್ಮೊಟ್ಟಿಗೆ ಚಾರಣಕ್ಕೆ ಬಂದರು, ಅವರದೇ ಮೆರಥಾನ್ ಓಟ ಬಿಡಲಿಲ್ಲ, ವನ್ಯಗಣತಿಯಲ್ಲಿ ತೊಡಗಿಕೊಂಡರು, ಸಮಯ ಸಿಕ್ಕಾಗ ಸ್ಪರ್ಧಾತ್ಮಕ ಟ್ರಯತ್ಲಾನಿನಲ್ಲಿ ದ್ವಿತೀಯರಾಗಿ ಹೊರಬಿದ್ದರು, ಕಪ್ಪೆ ಶಿಬಿರದ ಸಂಘಟನೆಯಲ್ಲಿ ಮುಂಚೂಣಿಯಲ್ಲಿ ನಿಂತರು, ಮಂಗಳೂರು ಸೈಕಲ್ಲಿಗರ ಸಂಘ ಸಿಕ್ಕಾಗ ಅನುಭವೀ ನಾಯಕನಾಗಿಯೇ ಗುರುತಿಸಿಕೊಂಡರು, ಬಿಡು ಸಮಯದಲ್ಲಿ ವನ್ಯ ಸಂರಕ್ಷಣೆಗಾಗಿ ಗುಮಾಸ್ತಗಿರಿಗೂ ಸೈ ಎಂದರು. ಇವರು ಕಂಪೆನಿ ಬದಲಿಸಿ ಬೆಂಗಳೂರಿಸಿದರೂ ಒಲವಿನ ಸ್ನೇಹಾಚಾರಕ್ಕಾಗಿ ಮಂಗಳೂರು ಮರೆತಿರಲಿಲ್ಲ. ಹಾಗೆ ಮಹಾಯಾನದ ಸುದ್ದಿ ಸಿಕ್ಕ ಕೂಡಲೇ ಅನಿಲ್ ಶೇಟ್'ರನ್ನು ಸಂಪರ್ಕಿಸಿದ್ದರು. ಸಂದೀಪ್ ಐದು ದಿನದ ದುಡಿಮೆಯ ವಾರ ಅನುಭವಿಸುವವರಾದ್ದರಿಂದ, ಒಂಟಿಯಾಗಿಯೇ ಬೆಂಗಳೂರಿನಿಂದ ಸೈಕಲ್ಲೇರಿ ಬಂದು ಅರ್ಧ ದಾರಿಯಲ್ಲಿ ಸೇರಿಕೊಳ್ಳುವುದಾಗಿ ತಿಳಿಸಿದ್ದರು. ಕೊನೆಗಳಿಗೆಯ ಖಚಿತ ಮಾಹಿತಿಗಾಗಿ ನನ್ನನ್ನು ಸಂಪರ್ಕಿಸಿದ್ದರು. ನಾವು ಶಿರಾಡಿ ಹಿಡಿಯುವವರಲ್ಲ, ಸಕಲೇಶಪುರ ಅಥವಾ ಹಾಸನದಲ್ಲೂ ನಿಲ್ಲುವವರಲ್ಲ ಎಂದು ಗಟ್ಟಿ ಮಾಡಿಕೊಂಡರು. ಅನಂತರ ನಾವತ್ತ ಮಂಗಳೂರು ಬೆಳ್ತಂಗಡಿಗಳ ನಡುವೆ ಇದ್ದ ವೇಳೆಯಲ್ಲಿ, ಅಂದರೆ ಸುಮಾರು ಆರು ಗಂಟೆಗೆ ಇವರಿತ್ತ ಚನ್ನರಾಯಪಟ್ಟಣ ಚಲೋ ಅಂದಿದ್ದಾರೆ. ಅವರ ಸೈಕಲ್ ಚಕ್ರ ಬಲು ಸಪುರ ಮತ್ತು ನುಣ್ಣಗೆ. ಮಿಂಚಿನ ಹಾಗೆ (ಗಂಟೆಗೆ ಮೂವತ್ತು ಕಿಮೀ ಸರಾಸರಿಯಲ್ಲಿ) ಹನ್ನೊಂದು ಗಂಟೆಯ ಸುಮಾರಿಗೇ ಚನ್ನರಾಯಪಟ್ಟಣ ಸೇರಿದ್ದರು. ಅಂಗೈಬ್ರಹ್ಮಾಂಡ – ಚರವಾಣಿ, ಹಿಡಿದು ಅದೆಲ್ಲೋ ಕುಳಿತು, ಒಂದು ಗಂಟೆ ವಿಶ್ವಕಪ್ಪಿನಲ್ಲಿ ಮುಳುಗಿದರಂತೆ. ಭಾರತ ಸತತ ಆರನೇ ಜಯದೆಡೆಗೆ ಎಂದು ಖಚಿತ ಪಡಿಸಿಕೊಂಡರು. 

03 April 2015

ಬೆಂಗಳೂರಿಗೊಂದು ಸೈಕಲ್ ಮಹಾಯಾನ

(ಭಾಗ ಒಂದು)
ಗಡಿಯಾರದ ಪ್ರತಿ ಮೈಮುರಿತಕ್ಕೂ ಅಲಾರಾಂ ಈಗ ಹೊಡೆಯುತ್ತದೆ, ಗಂಟೆ ಎರಡೂವರೆಯಾಗುತ್ತದೆ, ಏಳಬೇಕು,  ಹೊರಡಬೇಕು, ಮೂರೂವರೆಗೆ ಇಂಡಿಯನ್ ಆಯಿಲ್ ಕಾರ್ಪೊರೇಶನ್ನಿನ ಪ್ರಾದೇಶಿಕ ಕಚೇರಿ ಎದುರು ಸೇರಬೇಕು ಎಂಬ ತಹತಹದಲ್ಲಿ ಮೊನ್ನೆ ಶುಕ್ರವಾರ (೧೩-೩-೧೫) ರಾತ್ರಿಯಿಡೀ ನಿದ್ದೆಯಿಲ್ಲ. ಇದು ನನ್ನೊಬ್ಬನ ಭ್ರಮೆಯಲ್ಲ, ಹೆಚ್ಚು ಕಡಿಮೆ ಎಲ್ಲಾ ಭಾಗಿಗಳ ಕತೆ! ಅಂತೂ ಅಪರಾತ್ರಿಯೋ ತೀರಾ ಮುಂಜಾನೆಯೋ ಎಂದು ಹೇಳಲಾಗದ ಮೂರೂವರೆ ಗಂಟೆಗೆ ಐದು ಹತ್ತು ಮಿನಿಟಿನ ಅಂತರದಲ್ಲಿ ಹದಿನೆಂಟೂ ಸವಾರರು ತಂತಮ್ಮ ವೈವಿಧ್ಯಮಯ ಸೈಕಲ್ಲೇರಿ ಆರಂಭದ ಧ್ವಜ ಎದುರಿಸಲು ಸಜ್ಜಾಗಿದ್ದರು. ಕಂಪೆನಿ ಎಲ್ಲರಿಗೂ ಗಾಢವರ್ಣದ ಪ್ರಚಾರ-ಶರ್ಟನ್ನು ಕೊಟ್ಟು ತಮ್ಮ ಜಾಹೀರಾತನ್ನೂ ತಂಡದ ವಿಶಿಷ್ಟ ಸಾಹಸವನ್ನೂ ಲೋಕಕ್ಕೆ ಸಾರುವ ಕೆಲಸ ಮಾಡಿದ್ದರು. ನಮ್ಮ ಸವಾರಿಗೆ ಅಗತ್ಯವಿಲ್ಲದ ವೈಯಕ್ತಿಕ ಹೊರೆ ಹೊತ್ತು, ತುರ್ತು ಅಗತ್ಯಗಳಿಗೆ  ಒದಗಲು ಚಾಲಕನ ಸಹಿತ ಪ್ರಸನ್ನ ತನ್ನ ಇನ್ನೋವಾ ಕಾರನ್ನೇ ಸಜ್ಜುಗೊಳಿಸಿದ್ದ. ಅದರಲ್ಲಿ ಪ್ರಾಯೋಜಕನ ನೆಲೆಯಲ್ಲಿ, ಸದಾ ನಗೆಮುಖದ ತರುಣ ಅಧಿಕಾರಿ ಮಹೇಶ್ ಇದ್ದರು. ಸಂಯೋಜನೆಯ ಎಲ್ಲ ಜವಾಬ್ದಾರಿ ಹೊತ್ತು ಇವರು ಪ್ರಸಂಗಕ್ಕೆ ತಕ್ಕಂತೆ ಮಹಾಯಾನದ ಹಿಂದೋ ಮುಂದೋ ಲಭ್ಯರಿರುತ್ತಿದ್ದರು, ದಕ್ಷವಾಗಿ ಕೆಲಸ ನಡೆಸಿಕೊಡುತ್ತಿದ್ದರು. ಅಗತ್ಯಗಳಲ್ಲೂ ಅನಿವಾರ್ಯತೆಗಳಲ್ಲೂ ಸೈಕಲ್ಲುಗಳನ್ನು ಹೊರಲು ಒಂದು ಲಾರಿಯೂ ಹಿಂಬಾಲಿಸುವುದಿತ್ತು. ಲಾರಿಯಲ್ಲಿ ತಾಜ್ ಸೈಕಲ್ ಕಂಪೆನಿಯ ರಿಪೇರಿ ಪ್ರವೀಣ ಸಯ್ಯದ್ ಪೀರ್, ಪ್ರಮುಖ ಬಿಡಿಭಾಗಗಳ ಸಹಿತ ತನ್ನ ಹಡಪ ಹೊತ್ತು ಜತೆಗೊಡಲಿದ್ದರು.

13 March 2015

ಬೆಂಗಳೂರ ದಾಳಿಗೆ ಮಂಗಳೂರ ದಂಡು ಸಜ್ಜುಗೊಳ್ಳುತ್ತಿದೆ!



ಗೆಳೆಯ ಕಾವೂರು ಪ್ರಸನ್ನನಿಗಿರುವ (ಗೊತ್ತಲ್ಲಾ ಸರ್ವೋ ಕೀಲೆಣ್ಣೆಗಳ ಪ್ರಾದೇಶಿಕ ವಿತರಕ) ಕಲ್ಲೆಣ್ಣೆ ಕಂಪೆನಿಗಳ ಸಂಪರ್ಕ ಬಲದಲ್ಲಿ `ಮಂಗಳೂರು ಬೆಂಗಳೂರು ಸೈಕಲ್ ಓಟ’ಕ್ಕೆ ಕರೆ ಕೊಟ್ಟ. ಮಾರ್ಚ್ ೧೪ ಶನಿವಾರ ಬೆಳೀಈಈಗ್ಗೆ ಶಿರಾಡಿ ದಾರಿಯಲ್ಲಿ ಗುಂಡ್ಯ (೯೩ ಕಿಮೀ). ಅಲ್ಲಿಂದ ಸಕಲೇಶಪುರದವರೆಗೆ ಹೆದ್ದಾರಿ ಬಂದಾಗಿರುವ ಕಾರಣ ಎಲ್ಲರನ್ನೂ ಎಲ್ಲವನ್ನೂ ಮೋಟಾರು ವಾಹನಗಳಲ್ಲೇರಿಸಿ ಪಾರುಗಾಣಿಸುತ್ತಾರಂತೆ. ಮುಂದೆ ದಿನದ ಕೊನೆಯ ಲಕ್ಷ್ಯ ಚನ್ನರಾಯಪಟ್ಟಣ (೭೭ ಕಿಮೀ). ಅಂದರೆ ಸುಮಾರು ೧೭೦ ಕಿಮೀ ಸವಾರಿಯ ಕೊನೆಯಲ್ಲಿ, ಹೋಟೆಲ್ ವಾಸ. ಮರುದಿನ ಮತ್ತೆ ಬೆಳೀಈಗ್ಗೆ (೧೪೬ ಕಿಮಿಯಾದ್ದರಿಂದ ಒಂದು ದೀರ್ಘ ಕಮ್ಮಿ!) ಬೆಂಗಳೂರು ಚಲೋ. ವಿಧಾನಸೌಧದಲ್ಲಿ ಆರೋಗ್ಯಮಂತ್ರಿಯ ಭೇಟಿ ಮಾಡಿ `ಮೂರು-ಉ ಮನವಿ’ ಸಲ್ಲಿಕೆ. ಅಂದರೆ, ಉಳಿತಾಯ - ಕಲ್ಲೆಣ್ಣೆಯದು, ಉತ್ತಮಿಕೆ - ಪರಿಸರದ್ದು ಹಾಗೂ ಉತ್ಥಾನ - ಸಾರ್ವಜನಿಕ ಸ್ವಾಸ್ಥ್ಯದ್ದು. ಇವನ್ನು ಸುಲಭದಲ್ಲಿ ಸಾಧಿಸುವ ಸೈಕಲ್ ಪ್ರೋತ್ಸಾಹಿಸಿ - ಮನವಿಯ ಸಾರಾಂಶ. ರಾತ್ರಿ ಬಸ್ಸಿನಲ್ಲಿ ಜನ, ಪ್ರತ್ಯೇಕ ವಾಹನದಲ್ಲಿ ಸೈಕಲ್ ಮಂಗಳೂರಿಗೆ ವಾಪಾಸು. ಸಕಲ ವ್ಯವಸ್ಥೆ ಮತ್ತು ವೆಚ್ಚವನ್ನು ವಹಿಸಿಕೊಳ್ಳುತ್ತಿರುವವರು _ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿ., ಮಂಗಳೂರ ಪ್ರಾದೇಶಿಕ ವಿಭಾಗ - ಸ್ವತಃ ಪುನರುತ್ಪಾದಿಸಲಾಗದ ಇಂಧನದ ಬಹು ದೊಡ್ಡ ವ್ಯಾಪಾರೀ ಸಂಸ್ಥೆ.

30 May 2014

ಬೆಂಗಳೂರು – ಮಂಗಳೂರು ಸೈಕಲ್ ಸವಾರಿ

ಅದೊಂದು ಮಂಗಳೂರಿನ ಮಾಮೂಲೀ ಸುಡು-ಸಂಜೆ. ಜಂಟಿ ಸೈಕಲ್ ಸವಾರಿಯಲ್ಲಿ (ಹೆಚ್ಚಿನ ವಿವರಗಳಿಗೆ ಸೈಕಲ್ ಸಾಹಸಗಳು ಹಳೆ ಲೇಖನಗಳನ್ನು ನೋಡಿ)  ಮುಂದೆ ಮೀಸೆಧ್ವಜನಾದ ನಾನು ಏನೋ ಘನ ಕಾರ್ಯವಿರುವವನಂತೆ ಪೆಡಲೆರಡನ್ನು ಒತ್ತೊತ್ತಿ ತುಳಿಯುತ್ತಾ ಆಗಾಗ ಹಳೆಗಾಲದ ಬೆಂಝ್ ಗಾಡಿಯಂತೆ ಠೊಶ್ಶೆಂದು ನಿಟ್ಟುಸಿರು ಬಿಡುತ್ತಾ ಸಾಗಿದ್ದಂತೆ, “ಇನ್ನು ನಿವೃತ್ತಿ” ಎಂದು ಅಂಗಡಿ ಮುಚ್ಚಿ  ಮನೆಯಲ್ಲಿ ಕುಳಿತವನಿಗೆ “ದಿನವಹಿ ಲೆಕ್ಕ ಬರೆಯುವ ಕೆಲಸ ನಿಮ್ಮದೇ” ಎಂದು ಮನೆಯಲ್ಲಿ ವರಾತ ಹಚ್ಚಿದ್ದು ಸಾಲದೆಂದು ಇಲ್ಲೂ ಬೆನ್ನು ಬಿದ್ದವಳಂತೆ, ದೇವಕಿ ತನ್ನದೇ ಲಯದಲ್ಲಿ ಅವಳ ಪೆಡಲುಗಳನ್ನೂ ತುಳಿತುಳಿಯುತ್ತ ಜೊತೆಯಲ್ಲೇ ಸಾಗುತ್ತಾ ಮಂಗಳೂರಿನ ಗಲ್ಲಿ ಗಲ್ಲಿ ಸುತ್ತಿ, ಗುರುಪುರ ನದಿಗುಂಟ ಏರಿ, ಹೆದ್ದಾರಿಗೆ ಹತ್ತಿ ಆಕಾಶವಾಣಿ ಚಡಾವಿನ ಬುಡದಲ್ಲಿ, ಬಹುತೇಕ ನಿರ್ಜನ ಪ್ರದೇಶದಲ್ಲಿ ನೀರು ಕುಡಿಯಲೆಂದು ನಿಂತೆವು. ಚತುಷ್ಪಥದಲ್ಲಿ ಘಡಘಡಾಯಿಸುತ್ತ ಹೋಗುವ ಭಾರೀ ಲಾರಿಗಳಿಂದ, ರೊಯ್ಕೆಂದು ಮಿಂಚಿಮರೆಯಾಗುವ ಬೈಕುಗಳವೆರೆಗೂ ನಮ್ಮದು ದಿವ್ಯ ನಿರ್ಲಕ್ಷ್ಯ. ಆದರೂ ಅದೊಂದು ಬೈಕು – ಮುಖ ಶಿರಸ್ತ್ರಾಣದೊಳಗೆ ಹೂತ ಸವಾರ, ಕಡಿವಾಣ ಬಿಗಿಮಾಡಿ ನಮ್ಮಿಂದ ತುಸು ಮುಂದಕ್ಕೆ  ಎಡ ಸರಿದು ನಿಂತ. ಇಳಿದು, ಹತ್ತಿರ ಬರುತ್ತಾ ಮುಸುಕು ತೆಗೆಯುವಾಗ “ಅರೆ, ನಮ್ಮ ಪಾರೆಯ ಶ್ಯಾಮ ಭಟ್ರೂ” ಎಂದು ನಾನು ಸಹಜವಾಗಿ ಉದ್ಗರಿಸಿದೆ. ಈತ ಸುಳ್ಯದ ಬಳಿಯ, ನನಗಿಂತಲೂ ಯುವಕನಾದ (– ನಲ್ವತ್ತೊಂಬತ್ತರ ಹರಯ!) ಕೃಷಿಕ, ಹಿಂದೆ ನನ್ನಂಗಡಿಯ ಒಳ್ಳೆಯ ಗಿರಾಕಿ, ಎಲ್ಲಕ್ಕೂ ಮಿಗಿಲಾಗಿ ನನ್ನ ಎರಡನೆಯ ಭಾರತ ಬೈಕ್ ಯಾನಕ್ಕೆ (೧೯೯೦ ರ ದಶಕದಲ್ಲಿ) ಸೇರಿಯೇ ಸೇರುತ್ತೇನೆಂದು ಛಲದಲ್ಲಿ ಹೆಸರು ಕೊಟ್ಟು ಅನಿವಾರ್ಯ ಮತ್ತು ಪ್ರಾಮಾಣಿಕ ಕಾರಣದಿಂದ ತಪ್ಪಿಹೋದ ಉತ್ಸಾಹಿ. `ತುಂಬಾ ಸಮಯವಾಯ್ತು ಕಾಣ್ಲೇ ಇಲ್ಲಾ’ ದೃಷ್ಟಿ ಕೊಡುತ್ತಾ ಮುಖವೆಲ್ಲಾ ನಗೆಯಾಗುತ್ತಾ ಸಮೀಪಿಸಿದರು. ನಮ್ಮ ಸೈಕಲ್ ಉತ್ಸಾಹಕ್ಕೆ ಪೂರಕವಾಗುವಂತೆ ಒಂದೇ ಉಸಿರಿನಲ್ಲಿ ಶ್ಯಾಮೋದ್ಗಾರ “ನನ್ನತ್ರ ಹೀಗಲ್ಲ. ಗೇರಿರುವ ವಿದೇಶೀ (ಒಂಟಿ) ಸೈಕಲ್ಲಿದೆ. ಸುಮಾರು ಎರಡೂವರೆ ವರ್ಷಗಳಿಂದ ಬಳಸುತ್ತಿದ್ದೇನೆ. ಸದ್ಯ ಅದನ್ನು ಬೆಂಗಳೂರಿನಲ್ಲಿ ರಿಪೇರಿಗೆ ಬಿಟ್ಟಿದ್ದೇನೆ. ಅಂದಾಜು ಇನ್ನೊಂದು ವಾರದಲ್ಲಿ ಅಲ್ಲಿಗೆ ಬಸ್ನಲ್ಲಿ ಹೋಗಿ ಸವಾರಿ ಮಾಡಿಕೊಂಡೇ ತರ್ತಾ ಇದ್ದೇನೆ.” ಅವರದು ಸವಾಲು, ಆಮಂತ್ರಣಗಳೇನೂ ಅಲ್ಲ, ಸಮಾನಾಸಕ್ತರೊಡನೆ ಹಂಚಿಕೊಳ್ಳುವ ಹಂಬಲವಷ್ಟೇ. ಆದರೆ ಅರವತ್ತೆರಡರ ಮುಪ್ಪಿದ್ದರೂ `ಹುಳಿ’ ಕಳೆಯದ (ಗಾದೆ – ಮರಮುಪ್ಪಾದರೂ ಹುಳಿ ಮುಪ್ಪೇ) ನಾನು, ನೀಲಾಕಾಶದಲ್ಲಿ ಹಿಂಜಿದ ಅರಳೆಯಂತಿದ್ದ ನನ್ನ ಯೋಚನೆಗಳನ್ನು ಒಮ್ಮೆಲೆ ಸುಳಿಗೊಳಿಸಿ, ಸಂದರ್ಭಕ್ಕೆ ಚೂಪಾಗಿಸಿ “ನಾನೂ ಒಳ್ಳೇ ಒಂಟಿ ಸೈಕಲ್ ಕೊಳ್ಳಬೇಕೆಂದಿದ್ದೆ. ಅಲ್ಲೇ ಕೊಂಡು, ನಿಮಗೆ ಜೊತೆಗೊಟ್ಟರೆ ಹೇಗೆ?” ಎಂದುಬಿಟ್ಟೆ. ಕೂತು ಮಾತಾಡಿ, ಹತ್ತು ಅಭಿಪ್ರಾಯಗಳ ತುಲನಾತ್ಮಕ ಕೋಷ್ಠಕ ಹಾಕಿ, ಆದರೂ ಆಗೀಗ ಮೋಸಹೋಗುವ ದೇವಕಿಗೆ ಬದ್ಧ ವಿರೋಧೀ ಪ್ರವೃತ್ತಿ ನನ್ನದು. ದೇವಕಿ ಆ ಕ್ಷಣದಲ್ಲಿ ಸೌಜನ್ಯಕ್ಕೆ ಅನುಮೋದನೆಯ ಭಾವ ಮುದ್ರೆ ಮುಖದಲ್ಲಿ ಹೊತ್ತಿದ್ದಂತೆ ನನಗೂ ಶ್ಯಾಮಭಟ್ರಿಗೂ ಒಪ್ಪಂದ ಆಗಿಯೇ ಹೋಯ್ತು.

13 December 2013

ಸೈಕಲ್ ಪ್ರವಾಹಕ್ಕೀಡಾಯ್ತು ಮಂಗಳೂರು

(ಸೈಕಲ್ ಅಭಿಯಾನ ೨೦೧೩)

ಜಂಟಿ ಸೈಕಲ್ ಬಳಸುತ್ತ ನಾವು ವರ್ಷವೇನೋ ಕಳೆದೆವು. ಆದರೆ ಒಂಟಿಯಾಗಿ ನನಗೆ ಎರಡೆರಡು ಬಾರಿ ಸೈಕಲ್ ರ್ಯಾಲೀ ಅನುಭವ ಕೊಟ್ಟ ಆರೆಕ್ಸ್ ಲೈಫ್ ಬಳಗದ ವರ್ಷಾವಧಿ ಸೈಕಲ್ ರ್ಯಾಲೀಯಲ್ಲಿ ಭಾಗವಹಿಸಲಾಗದ ಬೇಸರವುಳಿದೇ ಇತ್ತು. ಅದು ಇಂದು (೨೦೧೩ ಡಿಸೆಂಬರ್ ೮) ತೀರಿತು. ಸುಮಾರು ಒಂದು ಸಾವಿರದ ಒಂಬೈನೂರಕ್ಕಿಂತ ಹೆಚ್ಚಿನ ಸೈಕಲ್ ಸಾಗರದಲ್ಲಿ (ಸೈ-ಸಾಗರ) ಈ ಬಾರಿ ಏಕೈಕ ಜಂಟಿ ಸವಾರರು (ಹಾಗಾಗಿ ಅನಿವಾರ್ಯವಾಗಿ ಗಣ್ಯತೆಯನ್ನೂ ಪಡೆದವರು) ನಾನು ಮತ್ತು ದೇವಕಿ. ನೋಂದಾವಣೆ ಲೆಕ್ಕಕ್ಕೆ ಸಂ. ೧೪೮೧ ಒಂದೇ ಆದರೂ ತಲೆ ಲೆಕ್ಕಕ್ಕೆ ಎರಡೆಂದೇ ದಾಖಲಿಸಿಕೊಳ್ಳಿ ಎಂದೇ ಸೇರಿದವರು. ನಾನು ಭಾಗವಹಿಸಿದ ಅವರ ೨೦೧೧ರ ರ್ಯಾಲೀ ಬೆಂಗ್ರೆಯವರೆಗೆ ಸಾಗಿ, ದೋಣಿಯಾನದ ಹೆಚ್ಚಿನ ಆಕರ್ಷಣೆಯನ್ನು ಒದಗಿಸಿತ್ತು. ಅಂದು (ಮೊದಲ ಬಾರಿ ಸವಾರರ ಸಂಖ್ಯೆ ಸಾವಿರ ದಾಟಿತ್ತು) ಮೊಗವೀರ ಮಹಾಸಭಾದ ಸದಸ್ಯರು ಬಹಳ ಚುರುಕಾಗಿಯೇ ದೋಣಿಗಟ್ಟಳೆ ಸೈಕಲ್ ಮತ್ತು ಭಾಗಿಗಳನ್ನು ದಾಟಿಸಿಕೊಟ್ಟಿದ್ದರು. ಅವರ ಸೇವಾಮನೋಭಾವ, ವೃತ್ತಿಪರತೆಗಳ ಬಗ್ಗೆ ಯಾರಿಗೂ ಸಂದೇಹವಿರುವುದು ಸಾಧ್ಯವಿಲ್ಲ. ಆದರೆ ಮಂಗಳೂರಿನ ಈ ವರ್ಷಾವಧಿ ಕಲಾಪದಲ್ಲಿ ಬಹುತೇಕ ಭಾಗಿಗಳು ಎಂಟು ವರ್ಷದಿಂದ ಹದಿನೈದರ ಒಳಗಿನವರು. ಇವರಲ್ಲಿ (ದೊಡ್ಡವರೂ ಸೇರಿದಂತೆ) ಬಹುದೊಡ್ಡ ಸಂಖ್ಯೆ ಅನ್ಯ ದಿನಗಳಲ್ಲಿ ಸಾರ್ವಜನಿಕ ದಾರಿಗಳಲ್ಲಿ ಸೈಕಲ್ ಬಿಟ್ಟವರಲ್ಲ. ಅವರೆಲ್ಲ ಮುಖ್ಯವಾಗಿ ಸಂಘಟಕರ ಕರೆ ಈ ರ್ಯಾಲೀ (ಸ್ಪರ್ಧೆಯಲ್ಲ,) ಮನೋಲ್ಲಾಸಕ್ಕಾಗಿ ಒಂದು ಆರೋಗ್ಯಕರ ಸೂಚನೆ ಎಂಬುದನ್ನು ಮನಸಾರೆ ಒಪ್ಪಿ ಬರುತ್ತಾರೆ, ದೊಡ್ಡ ಹಬ್ಬದಂತೇ ಆಚರಿಸುತ್ತಾರೆ (ಇಂಧನ ಉಳಿಸಿ, ವಾಯುಮಾಲಿನ್ಯ ತಡೆ, ಹಸುರುಮನೆ ಪರಿಣಾಮ ವಿರೋಧ, ಜಾಗತಿಕ ತಾಪಮಾನ ನಿಯಂತ್ರಣ ಇತ್ಯಾದಿ ದೊಡ್ಡ ಮಾತುಗಳು ಒತ್ತಟ್ಟಿಗಿರಲಿ, ಬಿಡಿ). ಈ ಸಂಭ್ರಮ ದೋಣಿ ಯಾನದಲ್ಲೇನಾದರೂ ಆಕಸ್ಮಿಕಗಳಿಗೆ ಕಾರಣವಾದರೆ ಎನ್ನುವ ಭಯ ನನ್ನನ್ನು ಕಾಡಿತ್ತು. ಕಾರಣವೇನೇ ಇರಲಿ, ವರ್ಷದಿಂದ ವರ್ಷಕ್ಕೆ ಏರುತ್ತಲೇ ಬಂದ ಭಾಗಿಗಳ ಸಂಖ್ಯೆಯನ್ನು ಒಂದೇ ಆಯಾಮದಲ್ಲಿ ಸುಧಾರಿಸುವ ಸಲುವಾಗಿಯಾದರೂ ದೋಣಿಯಾನ ನಿಲ್ಲಿಸಿದ್ದು ಸರಿಯೇ ಆಯ್ತು. ಮತ್ತಿನ ವರ್ಷದಲ್ಲಿ ಎಂಸಿಎಫ್ ಕಾರ್ಖಾನೆಯ ಹಿತ್ತಲಿನ ಹಳ್ಳಿಪರಿಸರದಲ್ಲಿ ದಾರಿಯಲ್ಲೇ ಸುತ್ತಾಡಿ ಮರಳುವಲ್ಲಿಗೇ ರ್ಯಾಲೀ ದಾರಿಯಿತ್ತು. ಈ ಬಾರಿಯೂ ಹಾಗೇ ಆಯೋಜಿತವಾಗಿತ್ತು; ದಾರಿ ಮಾತ್ರ ತುಸು ಭಿನ್ನ.