
ದುರ್ಗಮ ಕಾಡುಕೊಳ್ಳದಲ್ಲಿ ಎದ್ದುಬಿದ್ದು ಬಂದ ಶ್ರಮಕ್ಕೆ
ಮೈಯನ್ನು ಗಾಳಿಗೊಡ್ಡಿಕೊಳ್ಳುತ್ತಾ ಉಶ್ ಎಂದು ಬಂಡೆಯಂಚಿನಿಂದ ಕೂಡ್ಲು ಝರಿ ಹಾರಿಕೊಳ್ಳುತ್ತಲೇ ಇತ್ತು.
ಗಾಳಿಯ ಲಹರಿಯಲ್ಲಿ ಬಳುಕಿ, ಅತ್ತಿತ್ತ ತೆಳು ಪರದೆಯನ್ನೇ ಬಿಡಿಸಿ, ಅಲ್ಲಿಲ್ಲಿ ನೀರಹುಡಿಯಲ್ಲಿ ಕಾಮನಬಿಲ್ಲು
ಮೂಡಿಸಿ, ದರೆಯ ಗೋಡೆಗಂಟಿದ ಅಷ್ಟೂ ತನ್ನ ಖಾಸಾ ಹಸಿರಿನ ವೈವಿಧ್ಯದ ಮೈದಡವಿ, ಸೀತಾಳೆಹೂಗಳಲ್ಲಿ ಮುತ್ತಿನ
ಹನಿಯಿಟ್ಟು, ಮಡುವಿನ ಮೇಲೆ ಸೂರ್ಯ ಕೋಲೂರಿದಲ್ಲೆಲ್ಲಾ ಬೆಳಕಿನ ಬೀಜಗಳನ್ನು ಬಿತ್ತುತ್ತಿತ್ತು. ಕೆಲವೊಮ್ಮೆ
ಗಾಳಿಯ ಆತುರಕ್ಕೆ ಪ್ರಪಾತದಂಚಿನಲ್ಲೇ ಕ್ಷಣಕಾಲ ನೀರೆ ಹಿಂಜರಿದು, ಹೆಚ್ಚಿನ ರಭಸದಲ್ಲಿ ಧುಮುಕುತ್ತಿದ್ದಳು!
ಅನುಮಾನ ಧಾವಂತಗಳ ಈ ಅಲೆ ಮಾತ್ರ ಮಡುವನ್ನು ಕಲ್ಲೋಲಗೊಳಿಸುತ್ತ
ಅಬ್ಬರಿಸುತ್ತಿತ್ತು. ಸುಮಾರು ಮೂವತ್ತಡಿ ವ್ಯಾಸದ ಕನ್ನಡಿಕೊಳ, ಸುತ್ತ ಮತ್ತಷ್ಟು (ಸುಮಾರು ನೂರಡಿ
ವ್ಯಾಸ) ಅಂತರದಲ್ಲಿ ಪ್ರಕೃತಿಯೇ ಕಟ್ಟಿಕೊಟ್ಟ ಮನೋಹರ ಆವರಣ ಯಾರನ್ನೂ ನೀರಾಟಕ್ಕಿಳಿಯಲು ಆಹ್ವಾನಿಸುತ್ತಿತ್ತು.
ನಮಗೋ ಕಲ್ಲೆದ್ದು ಕೊರಕಲುಬಿದ್ದ ದಾರಿ ಎಂಬ ಅವಶೇಷದಲ್ಲಿ ಸುಮಾರು ಎಂಟೊಂಬತ್ತು ಕಿಮೀ ಬೈಕಿನಲ್ಲಿ
ಉರುಡಾಡಿದ ಶ್ರಮ ಒಂದು ಕಡೆ. ಅಲ್ಲಿ ಮೆತ್ತಿಕೊಂಡ ದೂಳು, ಹೊಗೆಯನ್ನು ಕೂಡ್ಲು ತೋಟದಲ್ಲಿ ಬೈಕ್ ಬಿಟ್ಟು,
ಜಲಪಾತದೆಡೆಗಿನ ಓಟದಲ್ಲಿಳಿದ ಬೆವರಿನಲ್ಲಿ ಕಲಸಿದ್ದೆವು. (ಮಡಿಕೇರಿ ಬಾಲ್ಯದಲ್ಲಿ ಕೊಹಿನೂರು ಟೂರಿಂಗ್
ಟಾಕೀಸಿನಲ್ಲಿ ಸಿನಿಮಾಕ್ಕೆಂದು ನಡೆದು ಹೊರಟವರಿಗೆ ಮುಖ್ಯ ರಸ್ತೆ ಬಿಡುವ ಮೊದಲೇ “ನಮೋ ವೆಂಕಟೇಷಾ...” ಕೇಳಿದ ಅನುಭವವಾಗಿ, ಸಿನಿಮಾ ಮುಗಿದೇ ಹೋಯ್ತೋ ಎಂಬ ಕಾತುರ
ಏರಿ, ಹಿರಿಯರೆಲ್ಲಾ ಎಷ್ಟು ನಿಧಾನಿಗಳೆಂದು ಕೋಪ ತಲೆಗಡರಿದ್ದೆಲ್ಲಾ ನೆನಪಾಗದೆ ಇಲ್ಲ!) ಅಬ್ಬಿಯ ಆವರಣದೊಳಗೆ
ನುಗ್ಗುತ್ತ ಎಡಕ್ಕೆ ಸಾಕಷ್ಟು ವಿಸ್ತಾರಕ್ಕೆ ಉರುಟುರುಟು ಕಲ್ಲು, ಅಚ್ಚ ಬಿಳಿ ಮರಳಿನ ದಂಡೆ. ಮಡುವಿನ
ಹೊರಹರಿವು ಬಲಪಾತ್ರೆಯಲ್ಲಿ ಕಲಕಲಿಸುತ್ತಿತ್ತು. ಮಳೆಗಾಲಕ್ಕೆ ಸೊಕ್ಕಿದ್ದನ್ನು ಉಳಿಗಾಲಗಳಲ್ಲಿ ನಾಚಿಕೊಂಡಂತೆ
ಹತ್ತೆಂಟು ಜಾಡುಗಳಲ್ಲಿ ತೆಳುವಾಗಿ ಹರಿದಿತ್ತು.