Showing posts with label ಬೆಂಗಳೂರು. Show all posts
Showing posts with label ಬೆಂಗಳೂರು. Show all posts

19 June 2020

ಬಹುಸಂಸ್ಕೃತಿಯ ರಾಜನಗರದಲ್ಲಿ

(ಜಾತಿ ಮತಗಳ ಚಕ್ರಸುಳಿ ಮೀರಿ - ೨) 

ಬೆಂಗಳೂರಿನ ದಿನಗಳು 


[ಕ್ಷಮಿಸಿ, ಮತ್ತೆ ನೆನಪಿಸುತ್ತೇನೆ: ಈ ಮಾಲಿಕೆ ನನ್ನ ಆತ್ಮಕಥೆ ಅಲ್ಲ. ನನ್ನ ಜೀವನದ ಆಯ್ದ ಘಟನೆಗಳನ್ನು ಒಡ್ಡಿಕೊಂಡು, ವ್ಯಕ್ತಿ ರೂಪಣೆಯಲ್ಲಿ ಕಾಲ್ಪನಿಕ ಜಾತಿ, ಮತ, ಅಂತಸ್ತು ಮುಂತಾದವು ವಹಿಸುವ ಪಾತ್ರವನ್ನು ಎತ್ತಿ ತೋರಿಸುವುದಷ್ಟೇ ಇದರ ಉದ್ದೇಶ. ಓದಿನ ಸ್ವಾರಸ್ಯಕ್ಕಾಗಿ ಇತರ ಸ್ವಲ್ಪ ಮಾಹಿತಿಗಳನ್ನೂ ಕೋದಿದ್ದೇನೆ.] 

೧. ವಿಧಾನಸೌಧದ ಬಯಕೆ (ನಗರ ದರ್ಶನ) 


ಬಳ್ಳಾರಿ - ಪುತ್ತೂರು ಓಡಾಟ ಕಾಲದಲ್ಲಿ ನಮ್ಮ ಬೆಂಗಳೂರು ಮಧ್ಯವರ್ತಿ, ಹಿಂದೆ ಹೇಳಿದಂತೆ ಚಿಕ್ಕಪ್ಪ ಮೂರ್ತಿ. ಆತ (೧೯೬೫) ನಮಗೆ ಹನುಮಂತ ನಗರದಲ್ಲಿ ಬಾಡಿಗೆ ಮನೆ ಹಿಡಿದಿಟ್ಟಿದ್ದ. ಒಂದೇ ಯಜಮಾನಿಕೆಯ ಕಟ್ಟಡ ಗೊಂದಲವದು.

05 March 2018

ಆಭಾಳ ಪ್ರೀತಿಯೊಡನೆ ಬೆಂಗಳೂರು ಪ್ರದಕ್ಷಿಣೆ

(ಚಕ್ರೇಶ್ವರ ಪರೀಕ್ಷಿತ ೧೬)


೧. ಆಭಾ ಕರೆದಮೇಲೇ ಹೋಗದಿರಲಾದೀತೇ?:

ಅಭಯನ ‘ಪಡ್ಡಾಯಿ’ ಚಿತ್ರೀಕರಣದ ಉದ್ದಕ್ಕೆ ರಶ್ಮಿ (ಸೊಸೆ) ಆಭಾ (ಮೊಮ್ಮಗಳು) ನಮ್ಮೊಡನಿದ್ದರು. ನಮ್ಮ ಮನೆಯಲ್ಲೇ ಅವತರಿಸಿ, ಗಾಳಿಯನ್ನು ಕಲಕಿ ಝಾಡಿಸುತ್ತಿದ್ದಂತೆ ಬೆಂಗಳೂರಿಸಿದ್ದ ಮೊಮ್ಮಗು, ಈಗ ಮಗುಚಿ, ಹರಿಯುವಷ್ಟಾಗಿತ್ತು. ಸಹಜವಾಗಿ ಮನೆಯ ನೆಲದಲ್ಲಿ ವಿರಮಿಸಿದ್ದ ಡಬ್ಬಿ, ಚೀಲಗಳು ಹೆದರಿ ಕಾಲ್ಮಣೆ, ಮೇಜುಗಳನ್ನೇರಿ ಕುಳಿತವು. ಕಾಲೊರಸುಗಳು, ಬಟ್ಟೆದೋಟಿಗಳು ಬಚ್ಚಲು, ಹಿತ್ತಲು ಸೇರಿ ಬಾಗಿಲೆಳೆದುಕೊಂಡವು. ಆಭಾ ವಿಕಾಸಪಥದ ಮುಂದಿನ ನಾಲ್ಕೆಂಟು ದಿನಗಳು (ಸರೀಸೃಪಗಳು ನಾಲ್ಗಾಲಿನವಾದ) ಜೀವವಿಕಾಸ ಬೃಹನ್ನಾಟಕದ ಕಿರುರೂಪಕವೇ ಆಗಿತ್ತು. ಆಕೆ
ನಿರಾತಂಕವಾಗಿ ತೆವ
ಳುತ್ತಿದ್ದ ಕುರ್ಚಿಯ ತಳ ಈಗ ತಲೆಗೆ ಹೆಟ್ಟತೊಡಗಿತ್ತು; ನೆಲಕ್ಕೆ ಕೈಕೊಟ್ಟು ಎದೆ ಎತ್ತುತ್ತಿದ್ದಳು. ನುಸುಳಿ ಸಾಗುತ್ತಿದ್ದ ಟೀಪಾಯ್ ಸಂದು ಇರುಕಿಸಿತ್ತು; ನಾಲ್ಗಾಲು ತೊಡಗಿದ್ದಳು. ಕುರ್ಚಿ ಹತ್ತಿ ಕುಳಿತಳು, ಟೀಪಾಯ್ ಮೇಜುಗಳೆಲ್ಲವೂ ಕೈಯಾಸರೆಯಲ್ಲಿ ನಿಲ್ಲುವ ತಾಣಗಳಾದವು. ಅಗಮ್ಯವೆಂದೇ ಬಿಟ್ಟಿದ್ದ ಮಹಡಿಗೇರುವ ಸೋಪಾನಸರಣಿಯ ಬುಡಕ್ಕೆ ಹೋಗಿ ಈಗ ಆಕೆ “ಹತ್ತಿ” ಎಂದು ಮೊಣಕಾಲಿಕ್ಕಿದರೆ ಸಾಕು, ಬೆಂಗಾವಲಿನವರು ಥೇಟ್ ‘ವಿಕೆಟ್ ಕೀಪರ್’ಗಳಾಗಲೇಬೇಕು! ಎರಡೂ ಹಸ್ತ ಅರಳಿಸಿ ಹಿಂದುರುಳದಂತೆ ಕಾಯಲೇಬೇಕು. ನಾವು ತಿನ್ನುವ ಯಾವುದಕ್ಕೂ ಅವಳ ಪೂರ್ಣ ತೆರೆದ ಬಾಯಿ ಪಾಲು ಕೇಳುತ್ತಿತ್ತು. ಹಾಗೆಂದು ಕುಶಿ ಹೆಚ್ಚಿ ಯಾವುದನ್ನೂ ಇದ್ದಂತೆ ಕೊಡುವಂತಿಲ್ಲ; ಇರುವ ಮೂರೂವರೆ ಹಲ್ಲು ತಪ್ಪಿಸಿ ಗಂಟಲು ಕಟ್ಟಿಬಿಟ್ಟರೆ? ಮೆತ್ತಗಿನ ದೋಸೆ, ರೊಟ್ಟಿಯಾದರೂ ಹಿಸಿದು ಕೊಡಬೇಕು. ಚಕ್ಕುಲಿ, ಚಿಪ್ಸ್ ಕುಟ್ಟಾಣಿಗಿಕ್ಕಿ ಪುಡಿ ಮಾಡಿ ಕೊಟ್ಟರೆ "ಎಷ್ಟು ತಿಂದರೂ ಸಾಲದು"! "ಆಂ" (=ತಿನ್ತೇನೆ?) ಸೌಮ್ಯ ಅರ್ಜಿ, "ಆಂಪುಡ್ಕ" (=ತಿನ್ನುವುದನ್ನು ಕೊಡೋ?) ಹಕ್ಕೊತ್ತಾಯ!

17 April 2015

ಎಸ್ಸಾರೆಸ್ ಮತ್ತು ಶಿವಗಂಗೆ ಎರಡು ಶಿಲಾಶಿಖರಗಳು

ಅಭಯ ಸಂಚಿ ಟ್ರಸ್ಟಿನ ಜ್ಞಾನಯಜ್ಞಕ್ಕೆ ಕರೆಕೊಟ್ಟಿದ್ದ. (ಮೊದಲ ಭಾಷಣ – ಡಾ| ಉಲ್ಲಾಸಕಾರಂತರದು) ಅದನ್ನು ನಾವು ಅತಿ-ಸಾಂಪ್ರದಾಯಿಕ ಸ್ತರದಲ್ಲಿ ಬಳಸುವವರಂತೆ, ಎರಡು ದಿನ ಮುಂಚಿತವಾಗಿಯೇ ಬೆಂಗಳೂರು ಸೇರಿದ್ದೆವು. ಆದರೆ ಅಲ್ಲಿನ ವಾತಾವರಣ ಬೇರೆಯೇ ಇತ್ತು. ಅಭಯ ವಾರ್ತಾ ಇಲಾಖೆಯ ವತಿಯಿಂದ ದೂರದರ್ಶನಕ್ಕೆ ಐವತ್ತು ವಿಜ್ಞಾನ ಪ್ರಯೋಗಗಳ, ಇಪ್ಪತ್ತು ಸರಣಿಯನ್ನು ತಯಾರು ಮಾಡಲು ಒಂದು ಕೈ, ಎನ್ನೆಫ್ಡಿಸಿ ಮಾನ್ಯತೆ ನೀಡಿದ ಈತನದೇ ಚಿತ್ರಕತೆಯೊಂದನ್ನು ಪುಣೆಯಲ್ಲಿ ನಡೆಯಲಿದ್ದ ಮೂರನೇ ಕಮ್ಮಟಕ್ಕೆ ಪರಿಷ್ಕರಿಸುವಲ್ಲಿ ಇನ್ನೊಂದು ಕೈ, ನೀನಾಸಂನಲ್ಲಿ ಐದು ದಿನಗಳ ಕಿರುಚಿತ್ರ ಕಮ್ಮಟ ಮುಗಿಸಿ ಬಂದದ್ದರ ಉತ್ತರಕ್ರಿಯೆಯಲ್ಲಿ ಮತ್ತೊಂದು ಕೈ, ಯಾವುದೋ ಬ್ಯಾಂಕಿನವರ ಯೋಜನಾ ಯಶಸ್ಸನ್ನು ಸಾರುವ ಸಾಕ್ಷ್ಯಚಿತ್ರದಲ್ಲಿ ಮಗುದೊಂದು ಕೈ ಎಂದೆಲ್ಲಾ ಸಿಕ್ಕಿಸಿಕೊಂಡು, ನಿಜದಲ್ಲಿ ತನಗೆಷ್ಟು ಕೈ ಎಂದೇ ಕಳೆದುಹೋಗಿದ್ದ. (ಖಂಡಿತವಾಗಿಯೂ ಪುರಾಣದಲ್ಲಿ ಬರುವಂತೆ ಸಹಸ್ರಬಾಹುವಲ್ಲ!) ಬೆಳಿಗ್ಗೆ ಎದ್ದ ಕೂಡಲೇ ರಾತ್ರಿಯುದ್ದಕ್ಕೆ ಮಿನುಗುತ್ತಲೇ ಇದ್ದ ಲ್ಯಾಪ್ಟಾಪನ್ನು ನೇವರಿಸಬೇಕು, ನಿತ್ಯ ಕೆಲಸಗಳ ನಡುವೆಯೂ ಅದನ್ನು ತಡವಬೇಕು, ಎಡೆ ಎಡೆಯಲ್ಲಿ ಕುಟ್ಟಬೇಕು. ಎಂಟೂವರೆಗೆ ಅದನ್ನು ಬೆನ್ನಚೀಲಕ್ಕೆ ತುಂಬಿ ಮನೆ ಬಿಟ್ಟೋಡಿದ ಎಂದರೆ ಮತ್ತೆ ಕತ್ತಲಾದ ಮೇಲೇ ದರ್ಶನ. ನಮ್ಮ ಕುರಿತು ಅಕ್ಕರೆ, ಮಾತು ಇಲ್ಲವೆಂದಲ್ಲ – ಕೆಲಸದ ಒತ್ತಡದಲ್ಲಿ ಎಲ್ಲ ಅಸಂಗತ ನಾಟಕದ ಸಂಭಾಷಣೆಗಳೇ ಆಗುತ್ತಿದ್ದುವು. ಗಣಕ ಕೆಲಸದ ಸೆಳೆತ, ಅಪ್ಪಮ್ಮನ ಪ್ರೀತಿಯ ಒಲೆತ – ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ, ಎನ್ನುವುದರ ಹೊಸರೂಪ! ನಾನು ಬರೆಯುತ್ತಿರುವುದು ಆರೋಪಪಟ್ಟಿಯಲ್ಲ, ಅವನ ಮೂಗಿನವರೆಗೆ ಮುಳುಗಿದ ಸ್ಥಿತಿಯ ಸಾನುಕಂಪ ವರದಿ ಮಾತ್ರ.

03 April 2015

ಬೆಂಗಳೂರಿಗೊಂದು ಸೈಕಲ್ ಮಹಾಯಾನ

(ಭಾಗ ಒಂದು)
ಗಡಿಯಾರದ ಪ್ರತಿ ಮೈಮುರಿತಕ್ಕೂ ಅಲಾರಾಂ ಈಗ ಹೊಡೆಯುತ್ತದೆ, ಗಂಟೆ ಎರಡೂವರೆಯಾಗುತ್ತದೆ, ಏಳಬೇಕು,  ಹೊರಡಬೇಕು, ಮೂರೂವರೆಗೆ ಇಂಡಿಯನ್ ಆಯಿಲ್ ಕಾರ್ಪೊರೇಶನ್ನಿನ ಪ್ರಾದೇಶಿಕ ಕಚೇರಿ ಎದುರು ಸೇರಬೇಕು ಎಂಬ ತಹತಹದಲ್ಲಿ ಮೊನ್ನೆ ಶುಕ್ರವಾರ (೧೩-೩-೧೫) ರಾತ್ರಿಯಿಡೀ ನಿದ್ದೆಯಿಲ್ಲ. ಇದು ನನ್ನೊಬ್ಬನ ಭ್ರಮೆಯಲ್ಲ, ಹೆಚ್ಚು ಕಡಿಮೆ ಎಲ್ಲಾ ಭಾಗಿಗಳ ಕತೆ! ಅಂತೂ ಅಪರಾತ್ರಿಯೋ ತೀರಾ ಮುಂಜಾನೆಯೋ ಎಂದು ಹೇಳಲಾಗದ ಮೂರೂವರೆ ಗಂಟೆಗೆ ಐದು ಹತ್ತು ಮಿನಿಟಿನ ಅಂತರದಲ್ಲಿ ಹದಿನೆಂಟೂ ಸವಾರರು ತಂತಮ್ಮ ವೈವಿಧ್ಯಮಯ ಸೈಕಲ್ಲೇರಿ ಆರಂಭದ ಧ್ವಜ ಎದುರಿಸಲು ಸಜ್ಜಾಗಿದ್ದರು. ಕಂಪೆನಿ ಎಲ್ಲರಿಗೂ ಗಾಢವರ್ಣದ ಪ್ರಚಾರ-ಶರ್ಟನ್ನು ಕೊಟ್ಟು ತಮ್ಮ ಜಾಹೀರಾತನ್ನೂ ತಂಡದ ವಿಶಿಷ್ಟ ಸಾಹಸವನ್ನೂ ಲೋಕಕ್ಕೆ ಸಾರುವ ಕೆಲಸ ಮಾಡಿದ್ದರು. ನಮ್ಮ ಸವಾರಿಗೆ ಅಗತ್ಯವಿಲ್ಲದ ವೈಯಕ್ತಿಕ ಹೊರೆ ಹೊತ್ತು, ತುರ್ತು ಅಗತ್ಯಗಳಿಗೆ  ಒದಗಲು ಚಾಲಕನ ಸಹಿತ ಪ್ರಸನ್ನ ತನ್ನ ಇನ್ನೋವಾ ಕಾರನ್ನೇ ಸಜ್ಜುಗೊಳಿಸಿದ್ದ. ಅದರಲ್ಲಿ ಪ್ರಾಯೋಜಕನ ನೆಲೆಯಲ್ಲಿ, ಸದಾ ನಗೆಮುಖದ ತರುಣ ಅಧಿಕಾರಿ ಮಹೇಶ್ ಇದ್ದರು. ಸಂಯೋಜನೆಯ ಎಲ್ಲ ಜವಾಬ್ದಾರಿ ಹೊತ್ತು ಇವರು ಪ್ರಸಂಗಕ್ಕೆ ತಕ್ಕಂತೆ ಮಹಾಯಾನದ ಹಿಂದೋ ಮುಂದೋ ಲಭ್ಯರಿರುತ್ತಿದ್ದರು, ದಕ್ಷವಾಗಿ ಕೆಲಸ ನಡೆಸಿಕೊಡುತ್ತಿದ್ದರು. ಅಗತ್ಯಗಳಲ್ಲೂ ಅನಿವಾರ್ಯತೆಗಳಲ್ಲೂ ಸೈಕಲ್ಲುಗಳನ್ನು ಹೊರಲು ಒಂದು ಲಾರಿಯೂ ಹಿಂಬಾಲಿಸುವುದಿತ್ತು. ಲಾರಿಯಲ್ಲಿ ತಾಜ್ ಸೈಕಲ್ ಕಂಪೆನಿಯ ರಿಪೇರಿ ಪ್ರವೀಣ ಸಯ್ಯದ್ ಪೀರ್, ಪ್ರಮುಖ ಬಿಡಿಭಾಗಗಳ ಸಹಿತ ತನ್ನ ಹಡಪ ಹೊತ್ತು ಜತೆಗೊಡಲಿದ್ದರು.

03 May 2013

ಕ್ಯಾರಟ್ಸ್ - ೧೦೦% ಸಸ್ಯಾಹಾರಿ!


ಇದು ಬರಿ ಹೋಟೆಲಲ್ಲೋ ಅಣ್ಣಾ

“ಸ್ವಾಮೀ ಇಂಥದ್ದೊಂದು ಪುಸ್ತಕ ಕನ್ನಡದಲ್ಲಿ ಪ್ರಕಟಿಸುವುದಿದ್ದರೆ ಹೇಗೆ?” ಹ್ಯಾಮ್ಲಿನ್ ಪ್ರಕಾಶಕರ ಬಲುವರ್ಣದ, ಬಹುಚಂದದ ಮಕ್ಕಳ ವಿಜ್ಞಾನ ಪುಸ್ತಕ ಕೈಯಲ್ಲಿ ಹಿಡಿದುಕೊಂಡು ಆ ತರುಣ ಕೇಳಿದ. ಕೆಂಚು ಬಿಳಿಯಾಗಿ ಮೈತುಂಬಿಕೊಂಡು, ಈಗ ತಾನೇ ಅಮೆರಿಕಾದಿಂದ ಇಳಿದಂತಿದ್ದ ಈತನಿಗೇನು  ಬೆಪ್ಪೇ ಅನಿಸಿತ್ತು. ಕನ್ನಡ ಮಾಧ್ಯಮ, ಕನ್ನಡ ಶಾಲೆ ಎನ್ನುವುದೇ ‘ಅಪರಾಧ’ವಾಗಿರುವ ಕಾಲವಿದು. ಆ ಪ್ರಶ್ನೆ ನನಗೆ ನಗೆ ತರಿಸಿತು, ಜೊತೆಗೆ ಒಂದೆರಡು ನೆನಪೂ.

ಸುಮಾರು ನಾಲ್ಕು ದಶಕಗಳ ಹಿಂದೆಯೇ ಐಬಿಯೆಚ್ ಪ್ರಕಾಶನ ವಿದೇಶೀ ಮೂಲದ, ಸುಂದರ ವರ್ಣಚಿತ್ರಗಳ, ಉತ್ತಮ ಗುಣಮಟ್ಟದ ಮಕ್ಕಳ ಪುಸ್ತಕ ಮಾಲಿಕೆಗಳೆರಡನ್ನು ಕನ್ನಡಕ್ಕಿಳಿಸತೊಡಗಿದ್ದರು. ಹಾಗೆ ಬಂದ ‘ಮೂಲವಿಜ್ಞಾನ ಪಾಠಮಾಲೆ’ ಮತ್ತು ‘ವಿಜ್ಞಾನಪ್ರಪಂಚ’ಗಳ ಪ್ರಧಾನ ಸಂಪಾದಕನ ಜವಾಬ್ದಾರಿ (ಬಹುತೇಕ ಅನುವಾದವೂ) ಹೊತ್ತವರು ನನ್ನ ತಂದೆ (ಜಿಟಿನಾ). ಅಂದು ಕನ್ನಡದ  ಶಾಲೆಗಳಿಗೆ ಇಂದಿನ ಅನಾಥ ಸ್ಥಿತಿಯಿರಲಿಲ್ಲ. ಆ ಪುಸ್ತಕಗಳ ನೈಜ ಜನಪ್ರಿಯತೆಯ ಬೆಳಕಿನಲ್ಲಿ ಪ್ರಕಾಶಕರ ಉತ್ಸಾಹ ಹೆಚ್ಚಿ, ಸ್ವತಂತ್ರವಾಗಿಯೂ ಕನ್ನಡದಲ್ಲಿ ‘ವಿಜ್ಞಾನ ನೋಡುಕಲಿ’ ಎಂಬ ಹೆಸರಿನಲ್ಲಿ ಇನ್ನಷ್ಟು ಮಕ್ಕಳ ಪುಸ್ತಕಗಳನ್ನು ತರಲು ಮುಂದಾದರು. ಇದಕ್ಕೂ ತಂದೆಯದೇ ಸಾರಥ್ಯ. ರಥದಲ್ಲಿ ಅಡ್ಯನಡ್ಕ ಕೃಷ್ಣ ಭಟ್ಟ, ಕೆ.ಎಸ್ ನಿಸಾರ್ ಅಹಮದ್ ಮುಂತಾದವರು ಮೆರೆದದ್ದೂ ಆಯಿತು. ಆಕಾಶದ ಅದ್ಭುತಗಳು, ಮನುಷ್ಯನ ಕತೆ, ಶಿಲೆಗಳು ಖನಿಜಗಳು, ಹಕ್ಕಿಗಳು ಇತ್ಯಾದಿ ಪುಸ್ತಕಗಳು ಆ ಕಾಲಕ್ಕೆ ಅಪ್ಪಟ ದೇಶೀ ಚಿತ್ರ, ಕನ್ನಡ ಭಾಷೆಯಲ್ಲಿ (ಜನಪ್ರಿಯತೆ ಗಮನಿಸಿ, ಇಂಗ್ಲಿಷ್ ಅನುವಾದವೂ) ಕೈತೊಳೆದು ಮುಟ್ಟುವಷ್ಟು ಚಂದಕ್ಕೇ ಬರತೊಡಗಿದವು. ಆದರೆ ಈ ಕನ್ನಡ ಸಾಹಸಗಳನ್ನು ವಾಣಿಜ್ಯ ನೆಲೆಯಲ್ಲೂ ಯಶಸ್ವಿಗೊಳಿಸುವ ಪ್ರಕಾಶಕರ ಉತ್ಸಾಹದಲ್ಲಿ ಎಡವಟ್ಟಾಗಿ ಎಲ್ಲ ನಿಂತೇ ಹೋಯಿತು.

05 April 2013

‘ಬೋರೇಗೌಡ’ನ ಇನ್ನಷ್ಟು ನೆನಪುಗಳು!


(ನಂದಿ ಹೋಗಲಿರುವ ನಂದಿಯ ಮೂರನೇ ಮತ್ತು ಅಂತಿಮ ಭಾಗ)
ಗಾಳಿಪಟ, ಬುಗುರಿ ಮತ್ತು ರೌಡಿ ರುದ್ರ!

ಬಾಲ್ಯದಲ್ಲಿ ನಾನು ಭಾರೀ ಕಾರುಭಾರಿಯೇನೂ ಅಲ್ಲ. (ಈಗ ಹೌದೆಂದೂ ಅಲ್ಲ! ಈ ಜಾಲತಾಣದ ದೆಸೆಯಲ್ಲಿ ಅನಿವಾರ್ಯವಾಗಿ ನನಗೆ ಬಂದನಾಯಕತ್ವಕ್ಕೆ ಇಷ್ಟು ಹೇಳಬೇಕಾಗಿದೆ) ಆದರೂ ಮಡಿಕೇರಿ ಮತ್ತು ಬಳ್ಳಾರಿಯಲ್ಲಿ ವಿಸ್ತಾರದಲ್ಲೇ ಬೆಳೆದ ನಮಗೆ (ಅತ್ರಿ - ಅಶೋಕ, ಆನಂದ, ಅನಂತ) ಹನುಮಂತನಗರ ಕಿಷ್ಕಿಂಧೆಯ ನೆನಪನ್ನೇ ಕೊಟ್ಟಿತು! ಅಲ್ಲಿನ ಸಂಜೆಗಳು ನನಗೆ ಆಸುಪಾಸಿನ ಮನೆಯ ಹುಡುಗರೊಡನೆ ದಾರಿಬದಿಯಲ್ಲೋ ಇನ್ನೂ ನಿವೇಶನಗಳಾಗಿ ಸ್ಪಷ್ಟ ಅಭಿವೃದ್ಧಿಗೊಳ್ಳದ ಹದಿನೈದನೇ ಅಡ್ಡ ರಸ್ತೆಯಿಂದಾಚಿನ ಮೈದಾನದಲ್ಲೋ ಕಬಡ್ಡಿ, ಕ್ರಿಕೆಟ್, ಗಾಳಿಪಟ, ಬುಗುರಿಯಾಟಗಳಲ್ಲಿ ಮುಗಿಯುತ್ತಿತ್ತು.

ಆಗ ಇಂದಿನಂತೆ ಸಿದ್ಧ ಗಾಳಿಪಟಗಳು ಮಾರಾಟಕ್ಕೆ ಸಿಗುತ್ತಿದ್ದದ್ದು ನನಗೆ ತಿಳಿದಿರಲಿಲ್ಲ. ಯಾರೋ ಸಹಪಾಠಿಯಿಂದ ಕಲಿತು, ಹಳೇ ಪತ್ರಿಕೆಯ ಪುಟಗಳಿಗೆ ಮನೆಯ ಹಿಡಿಸೂಡಿ ಕಡ್ಡಿ ಹೊಸೆದು, ಅನ್ನದ ಅಂಟು ಹಚ್ಚಿ ತೇಲಿಬಿಡುವ ನನ್ನ ಹುಚ್ಚಿಗೆ ಅಮ್ಮನ ಎಂಬ್ರಾಯಿಡರಿ ನೂಲೆಲ್ಲಾ ಖಾಲಿಯಾಗಿತ್ತು. ಪಟ್ವೇನೋ ಮಾಡ್ಬೌದೂ. ಸೂಸ್ತ್ರ ಕಟ್ಟೋದೇ ಇರೋದು ಎನ್ನುವ ಕೋಣಗಳ ನಡುವೆ ನಾನು ಅದೃಷ್ಟದಲ್ಲೆ ಜಾಣ ಅನ್ನಿಸಿಕೊಂಡಿದ್ದೆ! ಒಂದಕ್ಕೊಂದು ಜಂಟಿ ಹಾಕಿ ಐದು ಪಟದವರೆಗೂ ನಾನು ಗಾಳಿಗೇರಿಸಿದ್ದಿತ್ತು. ನಮ್ಮ ಮನೆಯ ಬೋಳು ತಾರಸಿಗೇರಿ (ಎರಡನೇ ಮಾಳಿಗೆ) ಪಟ ಏರಿಸಿದರೆ, ಅದು ಸಾಮಾನ್ಯವಾಗಿ ಯಾವುದೇ ಲೈಟ್ ಕಂಬ, ತಂತಿಗೆ ಸಿಗದಂತೆ ಮೇಲೇರಿ ಹಾರುತ್ತಿತ್ತು. ಇನ್ನೂ ದೊಡ್ಡ ಲಾಭವೆಂದರೆ ಕೊಳೆಗೇರಿಗಳೇ ಆಗಿದ್ದ ಅತ್ತಿತ್ತಣ ಹಳ್ಳಿಯ ಪೋಲಿ ಪಟಾಲಮ್ಮು ಎಟುಕಿಗೆ ನನ್ನ ಪಟ ನಿಲುಕದ ಎತ್ತರವನ್ನೂ ಸಾಧಿಸುತ್ತಿತ್ತು.

22 March 2013

ಬೋರೇಗೌಡ ಬೆಂಗಳೂರಿಗ್ಬಂದ

(ನಂದಿಹೋಗಲಿರುವ ನಂದಿಯ ಎರಡನೇ ಭಾಗ)

ಈ ಸಲದ ನಮ್ಮ ಬೆಂಗಳೂರು ಪ್ರವಾಸದ ಮುಖ್ಯ ಕಲಾಪ ಹಿಂದಿನ ಲೇಖನದಲ್ಲಿ ಹೇಳಿದಂತೆ  -  ಮಂಟಪರ ‘ಭಾಮಿನಿ’ ಪ್ರದರ್ಶನ ಮತ್ತು ಚರ್ಚೆ. ನಂದಿ ಬೆಟ್ಟದಿಂದ ಹೊರಟ ನಾವು ಸಕಾಲಕ್ಕೆ ತಲಪಿಕೊಂಡೆವು. ಆರೂವರೆಗೇ ಅನೌಪಚಾರಿಕವಾಗಿ ತೊಡಗಿದ ಚರ್ಚೆ, ಪ್ರದರ್ಶನ ಮತ್ತು ಮುಂದುವರಿದ ಚರ್ಚೆ ರಾತ್ರಿ ಹತ್ತೂವರೆಯವರೆಗೂ ಚೆನ್ನಾಗಿಯೇ ನಡೆಯಿತು. ಇದರ ಕುರಿತು ಮುಂದೆಂದಾದರೂ ಹೆಚ್ಚು ಅಧಿಕಾರಯುತವಾಗಿ ಅಭಯನೇ ಬರೆಯಬೇಕಾದ್ದರಿಂದ ನಾನು ವಿಷಯಾಂತರಿಸುತ್ತೇನೆ.

ಹನುಮಂತನಗರ

೧೯೬೫ರ ಸುಮಾರಿನಿಂದ ನಾಲ್ಕೈದು ವರ್ಷ ನನ್ನ ತಂದೆ ಸರಕಾರೀ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಸಹಜವಾಗಿ ನಾನು ಬೆಂಗಳೂರಿನಲ್ಲೇ ಪ್ರೌಢಶಾಲಾ (ಬೆಂಗಳೂರು ಹೈಸ್ಕೂಲ್) ಮತ್ತು ಪದವಿಪೂರ್ವ (ಸರಕಾರೀ ಕಲಾ ಮತ್ತು ವಿಜ್ಞಾನ ಕಾಲೇಜು ಅಥವಾ ಆ ಕಾಲದಲ್ಲಿ ಜನಪ್ರಿಯವಾಗಿ ಪ್ರಚಾರದಲ್ಲಿದ್ದಂತೆ ಗ್ಯಾಸ್ ಕಾಲೇಜ್ - G.A & S Collge!) ವಿದ್ಯಾಭ್ಯಾಸವನ್ನು ಮಾಡಿದ್ದೆ. ನಮ್ಮ ಬಾಡಿಗೆ ಮನೆ ಹನುಮಂತನಗರದ ಹದಿಮೂರನೇ ಅಡ್ಡ ರಸ್ತೆಯಲ್ಲೊಂದು ಮಾಳಿಗೆಯಲ್ಲಿತ್ತು. ಮೊನ್ನೆ ಬೆಂಗಳೂರಲ್ಲಿದ್ದ ಎರಡನೇ ಸಂಜೆ ನನಗೊಮ್ಮೆ ಅಲ್ಲೆಲ್ಲಾ ಸುತ್ತಿ ಬರುವ ಉತ್ಸಾಹ ಬಂತು. ಅಭಯನೇನೋ ಗೂಗಲ್ ನಕ್ಷೆ ಕೊಟ್ಟೇ ಕೊಟ್ಟ. ಆದರೆ ಮೈಸೂರು ರಸ್ತೆಯಲ್ಲಿದ್ದ ನನಗೆ, ಚಾಮರಾಜಪೇಟೆ, ಬಸವನಗುಡಿರಸ್ತೆ, ಹನುಮಂತನಗರವೆಲ್ಲ “ಅಂಗೈ ರೇಖೆ, ಎಲ್ಲಿಗೆ ಮಾರ್ಗದರ್ಶಿ” ಎಂಬ ಉಡಾಫೆ. ದೇವಕಿಯನ್ನು ಬೆಂಬಲಕ್ಕಿಟ್ಟುಕೊಂಡು ಬೈಕೇರಿ ಹೊರಟೇಬಿಟ್ಟೆ.

15 March 2013

ನಂದಿಹೋಗಲಿರುವ ನಂದಿ - ಖ್ಯಾತ ಗಿರಿಧಾಮದ ವಿಭಿನ್ನ ಕತೆ!!

ಅಭಯನಿಗೀಗ ಕತೆ ಹೇಳುವ ವೃತ್ತಿ. ನಟರಾಜನಿಂದ ತೊಡಗಿ, ಝಣ ಝಣ ಲಕ್ಷ್ಮೀಪುತ್ರನಿಗೆ, ಕಟಿಪಿಟಿ ನಟೀಮಣಿಗೆ, ಕಾವ್ಯಶ್ರೀಗೆ, ವಿಶ್ವಕರ್ಮನಿಗೆ, ಕಂಠಶ್ರೀಗೆ ಮುಂತಾದವರಿಗೆ ಹೊಸಹೊಸದಾಗಿ ಬರೆದು ಓದುತ್ತಿರುತ್ತಾನೆ. ಕೆಲವೊಮ್ಮೆ ಇವರನ್ನೆಲ್ಲ ಸೇರಿಸಿ ಸಮೂಹ ಘೋಷದಲ್ಲಿ ಸಾರ್ವಜನಿಕಕ್ಕೂ ಇವನು ಹೇಳುವುದು ಕಥೆಯನ್ನೇ. (ಹಾಗೆ ಬಂದವುಗಳೆ ಗುಬ್ಬಚ್ಚಿಗಳು, ಶಿಕಾರಿ ಮತ್ತು ಇನ್ನೇನು ಬರಲಿರುವ ಸಕ್ಕರೆ.) ಅವನ ಮೊದಲ ಪಟ್ಟಿಯಲ್ಲೇನೂ ಬಾರದ ನಮಗೂ ಅವನು ಕತೆಗಳನ್ನು ಕೇಳಿಸುವುದು ಇದೆ. ಆವನ ಬಾಲ್ಯದಲ್ಲಿ ನಾವು ಅವನಿಗೆ ಹೇಳಿರಬಹುದಾದ ಕತೆಗಳ ಸಾಲ ತೀರುವಳಿಯೋ, ಸೇಡು ತೀರುವಳಿಯೋ ನಾವು ಲೆಕ್ಕವಿಟ್ಟವರಲ್ಲ. ಅವನಿಗೋ ಕತೆ ಮೊಳೆಯುವ ಕಾಲದಲ್ಲೇ ಬೆಳೆಯ ಸಿರಿ ಅಂದಾಜಿಸುವ ತವಕ. ಹಾಗೇ ಮೊನ್ನೆ ದಿಢೀರ್ ಅವನ ದೂರವಾಣಿ ಕರೆ “ಅಪ್ಪಾ, ಮಿಂಚಂಚೆಯಲ್ಲಿ ಒಂದು ಕತೆ ಕಳಿಸಿದ್ದೇನೆ. ಕೂಡಲೇ ನೀವಿಬ್ಬರೂ ಓದಿ ವಿಮರ್ಶೆ ತಿಳಿಸ್ತೀರಾ?” ನಾನು ಕತೆ, ಕಾದಂಬರಿಗಳಿಗೆ ದೂರ. ಅದಕ್ಕೂ ಹೆಚ್ಚಿಗೆ ಕತೆಯನ್ನು ಒಂದು ದೃಶ್ಯ ನಿರೂಪಣೆಯ ವಸ್ತುವಾಗಿ ಗ್ರಹಿಸುವಲ್ಲಿ ದೇವಕಿಗಿಂತ ತುಂಬಾ ಹಿಂದುಳಿದವ. ಆದರೆ ದೇವಕಿ ಹಾಗಲ್ಲ. ಅವಳಿಗೆ ಕಾದಂಬರಿ ತೆರೆದರೆ ಊಟ ನಿದ್ರೆಗಳ ಪರಿವೆಯೂ ಇರದ ಕಾಲವಿತ್ತು. ಕಾಲಧರ್ಮಾನುಸಾರ ಈಗ ಆಯ್ದ ಟೀವಿ ಸರಣಿ ತೆರೆದರೂ ಹಾಗೇ. ನಾನು ಆ ಕತೆಯ ಪ್ರೇರಣೆಗಳ ಬಗ್ಗೆ ತುಸು ಯೋಚನೆ ಹರಿಸಿದರೆ, ದೇವಕಿ ಪಾತ್ರಧಾರಿಗಳ ಆಯ್ಕೆಯ ಮಟ್ಟದಲ್ಲೂ ಸಲಹೆಗಳನ್ನಿಟ್ಟಳು.