Showing posts with label ಕುಶಿ ಹರಿದಾಸ ಭಟ್ಟ. Show all posts
Showing posts with label ಕುಶಿ ಹರಿದಾಸ ಭಟ್ಟ. Show all posts

25 December 2017

ಮಿತ್ರ ದೇವರಾಯರು

(ಮರಣೋತ್ತರ ನುಡಿನಮನಗಳು ೧)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
 (ಭಾಗ ೧೬)
- ಕು.ಶಿ. ಹರಿದಾಸಭಟ್ಟ
ಮಿತ್ರ ಬಾಗಲೋಡಿ ದೇವರಾಯರು ಇಷ್ಟು ಬೇಗನೆ ನಮ್ಮ ಸ್ಮೃತಿಪಟಲಕ್ಕೆ ಸೇರುವರೆಂದು ಕಳೆದ ತಿಂಗಳು ತಾನೇ ಅವರನ್ನು ಉಡುಪಿ ಮಣಿಪಾಲಗಳಲ್ಲಿ ಕಂಡು ಮಾತನಾಡಿದ ಯಾರೂ ಊಹಿಸಲಾರರು. ಇಷ್ಟಮಿತ್ರ ಬಂಧುಬಳಗವನ್ನು ಕಂಡು ವಿದಾಯ ಹೇಳುವುದಕ್ಕಾಗಿಯೇ ಈ ಸಾರೆ ಅವರು ಬಂದ ಹಾಗಿತ್ತು. ಮರೆಯದೆ ಅವರು ನೋಡಿದವರ ಪೈಕಿ ಅವರ ಪ್ರಾಥಮಿಕ ಶಾಲಾ ಉಪಾಧ್ಯಾಯರೂ ಪ್ರೌಢಶಾಲಾ ಉಪಾಧ್ಯಾಯರೂ ಸೇರಿದ್ದು ಅವರ ಮನೋಧರ್ಮ ಹಾಗೂ ಜೀವನಧರ್ಮದ ದ್ಯೋತಕವಾದ್ದಾಗಿದೆ. ಸ್ವಾತಂತ್ರ್ಯಾನಂತರ ಸಿಕ್ಕ ಹಕ್ಕುಗಳ ಭರಾಟೆಯಲ್ಲಿ ಕೃತಜ್ಞತೆಯೆಂಬ ಕರ್ತವ್ಯ ಭಾಗವನ್ನು ಮರೆತುಬಿಡುವ ಈ ಕಾಲದಲ್ಲಿ ಶ್ರೀ ದೇವರಾಯರು ಭಾರತೀಯ ಸಂಸ್ಕೃತಿಯ ಒಂದು ಸಲ್ಲಕ್ಷಣವನ್ನು ಪ್ರತಿನಿಧಿಸಿದಂತೆ ತೋರುವುದು ಇಂಥ ಗುಣಗಳಿಂದ. ಶೈಕ್ಷಣಿಕ ವಲಯದಲ್ಲಿ ರ್ಯಾಂಕುಗಳಿಗೆ ಮಣೆ ಹಾಕಿದ್ದರಿಂದಲೋ ಗುಣಶೀಲಗಳನ್ನು ಅಳೆಯಲು ಅಂಕಗಳ ಮಾನದಂಡ ನಿರುಪಯುಕ್ತವೆಂಬುದರಿಂದಲೋ ಇತ್ತೀಚೆಗೆ ರ್ಯಾಂಕಿನಿಂದಲೇ ಒಬ್ಬ ವ್ಯಕ್ತಿ, ಒಂದು ಸಂಸ್ಥೆಯನ್ನು ಅಳೆಯುವುದು ರೂಢಿಯಾಗಿದೆ. ಇದು ಸರಿಯಲ್ಲ, ಮನುಷ್ಯನ ಚಾರಿತ್ಯದಲ್ಲಿ ಬೆಳೆಸಿಕೊಳ್ಳಬೇಕಾದ ಸದ್ಗುಣಗಳು ಹಲವುಂಟು - ಕೃತಜ್ಞತೆ ಅವುಗಳಲ್ಲಿ ಪರಮಶ್ರೇಷ್ಠವಾದದ್ದು ಎಂಬುದೇ ದೇವರಾಯರ ಸಾರ್ಥ ಬದುಕಿನ ಸಂದೇಶವೆನಿಸಬಹುದು.

09 October 2017

ಕ್ರಿಶ್ಚಿಯನ್ ಕಾಲೇಜಿನ ಕ್ವಥನಭಾಂಡದಲ್ಲಿ

(ಸಹಪಾಠಿ ಮಿತ್ರರು ಕಂಡ ಬಾಗಲೋಡಿ ೧)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
(ಭಾಗ ೫)
- ಕುಶಿ ಹರಿದಾಸ ಭಟ್ಟ

[ಉಡುಪಿಯ ಶೈಕ್ಷಣಿಕ-ಸಾಂಸ್ಕೃತಿಕ-ಸಾಮಾಜಿಕ ದ್ರಷ್ಟಾರರಾಗಿ ರಾರಾಜಿಸಲಿದ್ದ ಕುಶಿ ಮತ್ತು ಕನ್ನದ ಕಥಾಲೋಕಕ್ಕೆ “ಪ್ರಜ್ವಲಿಸುವ ಮಹದುಲ್ಕೆಯ ತೆರದಲಿ” (ಕುವೆಂಪು) ಪ್ರವೇಶಿಸಿದ ಹಾಗೂ ಭಾರತದ ಭಾವೀ ರಾಯಭಾರಿಯಾಗಿ ವಿಜೃಂಭಿಸಲಿದ್ದ ಬಾಗಲೋಡಿ ಎಂಬ `ದ್ರವ್ಯ’ಗಳು ಕ್ರಿಶ್ಚಿಯನ್ ಕಾಲೇಜಿನ ಕ್ವಥನ ಭಾಂಡದಲ್ಲಿ ರೂಪಾಂತರಗೊಂಡ `ಸಿದ್ಧಪಾಕ’ಗಳು, ಪ್ರಸಿದ್ಧ ಸೀಮಾ ಪ್ರತಿಭೆಗಳು – ಜಿಟಿನಾ]

೧೯೪೬ನೆಯ ಜೂನ್ ೨೩ರಿಂದ ೧೯೪೯ನೆಯ ಏಪ್ರಿಲ್ ವರೆಗೆ ತಾಂಬರಂನಲ್ಲಿ ಕಳೆದ ಕಾಲೇಜ್ ದಿನಗಳು ನನ್ನ ಜನ್ಮ ವೃತ್ತಾಂತದ ಸ್ವರ್ಣಪುಟಗಳಾಗಿದ್ದುವು. ಪಾಠಪ್ರವಚನದ ಮೂಲಕ ಕಲಿತದ್ದಕ್ಕಿಂತ ಹೆಚ್ಚಾಗಿ ಓರಗೆಯ ಗೆಳೆಯರಿಂದ, ಕಾಲೇಜಿನ ವಿಶಿಷ್ಟ ಸನ್ನಿವೇಶದಿಂದ, ಸಮಕಾಲೀನ ವಿದ್ಯಮಾನಗಳ ಪ್ರಭಾವದಿಂದ ಅನುಭವ ಗಳಿಸಿದೆ. ಎಲ್ಲ ಅನುಭವಗಳಿಗು ಮನಸ್ಸು ತೆರೆದಿಟ್ಟೆ. ೧೯೪೬-೪೭ ಸ್ವಾತ್ರಂತ್ರ್ಯಪೂರ್ವದ ಒಂದು ವರ್ಷ ಭಾರತದ ರಾಜಕೀಯ ರಂಗ ಪ್ರಕ್ಷುಬ್ಧವಾಗಿತ್ತಲ್ಲವೇ? ಆದರೆ ಕ್ರಿಶ್ಚಿಯನ್ ಕಾಲೇಜಿನ ಪರಿಸರ ಶಾಂತವಾಗಿತ್ತು. ಕಾಲೇಜಿನ ವರಿಷ್ಠರಾದ ಸ್ಕಾಟಿಷ್ ಮಿಶನಿನ ಗುರುಗಳೂ ಪ್ರೊಫೆಸರರುಗಳೂ ಬ್ರಿಟಿಷ್ ಸಾಮ್ರಾಜ್ಯದ ಅವಸಾನ ಸಮೀಪಿಸಿದ್ದನ್ನು ನಿಚ್ಚಳವಾಗಿ ಅರಿತು ಹೊಸ ಪರಿಸ್ಥಿತಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧರಾಗುತ್ತಿದರು. “ಎಷ್ಟು ಬೇಕಾದರೂ