(ಮರಣೋತ್ತರ
ನುಡಿನಮನಗಳು ೧)
(ಬಾಗಲೋಡಿ
ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ
ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
(ಭಾಗ ೧೬)
-
ಕು.ಶಿ. ಹರಿದಾಸಭಟ್ಟ
ಮಿತ್ರ ಬಾಗಲೋಡಿ ದೇವರಾಯರು ಇಷ್ಟು
ಬೇಗನೆ ನಮ್ಮ ಸ್ಮೃತಿಪಟಲಕ್ಕೆ ಸೇರುವರೆಂದು ಕಳೆದ ತಿಂಗಳು ತಾನೇ ಅವರನ್ನು ಉಡುಪಿ ಮಣಿಪಾಲಗಳಲ್ಲಿ
ಕಂಡು ಮಾತನಾಡಿದ ಯಾರೂ ಊಹಿಸಲಾರರು. ಇಷ್ಟಮಿತ್ರ ಬಂಧುಬಳಗವನ್ನು ಕಂಡು ವಿದಾಯ ಹೇಳುವುದಕ್ಕಾಗಿಯೇ
ಈ ಸಾರೆ ಅವರು ಬಂದ ಹಾಗಿತ್ತು. ಮರೆಯದೆ ಅವರು ನೋಡಿದವರ ಪೈಕಿ ಅವರ ಪ್ರಾಥಮಿಕ ಶಾಲಾ ಉಪಾಧ್ಯಾಯರೂ
ಪ್ರೌಢಶಾಲಾ ಉಪಾಧ್ಯಾಯರೂ ಸೇರಿದ್ದು ಅವರ ಮನೋಧರ್ಮ ಹಾಗೂ ಜೀವನಧರ್ಮದ ದ್ಯೋತಕವಾದ್ದಾಗಿದೆ. ಸ್ವಾತಂತ್ರ್ಯಾನಂತರ
ಸಿಕ್ಕ ಹಕ್ಕುಗಳ ಭರಾಟೆಯಲ್ಲಿ ಕೃತಜ್ಞತೆಯೆಂಬ ಕರ್ತವ್ಯ ಭಾಗವನ್ನು ಮರೆತುಬಿಡುವ ಈ ಕಾಲದಲ್ಲಿ ಶ್ರೀ
ದೇವರಾಯರು ಭಾರತೀಯ ಸಂಸ್ಕೃತಿಯ ಒಂದು ಸಲ್ಲಕ್ಷಣವನ್ನು ಪ್ರತಿನಿಧಿಸಿದಂತೆ ತೋರುವುದು ಇಂಥ ಗುಣಗಳಿಂದ.
ಶೈಕ್ಷಣಿಕ ವಲಯದಲ್ಲಿ ರ್ಯಾಂಕುಗಳಿಗೆ ಮಣೆ ಹಾಕಿದ್ದರಿಂದಲೋ ಗುಣಶೀಲಗಳನ್ನು ಅಳೆಯಲು ಅಂಕಗಳ ಮಾನದಂಡ
ನಿರುಪಯುಕ್ತವೆಂಬುದರಿಂದಲೋ ಇತ್ತೀಚೆಗೆ ರ್ಯಾಂಕಿನಿಂದಲೇ ಒಬ್ಬ ವ್ಯಕ್ತಿ, ಒಂದು ಸಂಸ್ಥೆಯನ್ನು ಅಳೆಯುವುದು
ರೂಢಿಯಾಗಿದೆ. ಇದು ಸರಿಯಲ್ಲ, ಮನುಷ್ಯನ ಚಾರಿತ್ಯದಲ್ಲಿ ಬೆಳೆಸಿಕೊಳ್ಳಬೇಕಾದ ಸದ್ಗುಣಗಳು ಹಲವುಂಟು
- ಕೃತಜ್ಞತೆ ಅವುಗಳಲ್ಲಿ ಪರಮಶ್ರೇಷ್ಠವಾದದ್ದು ಎಂಬುದೇ ದೇವರಾಯರ ಸಾರ್ಥ ಬದುಕಿನ ಸಂದೇಶವೆನಿಸಬಹುದು.

