Showing posts with label ತಿರುಪತಿ ಪ್ರವಾಸ. Show all posts
Showing posts with label ತಿರುಪತಿ ಪ್ರವಾಸ. Show all posts

17 June 2020

ಜಾತಿ ಮತಗಳ ಚಕ್ರಸುಳಿ ಮೀರಿ

ಮಡಿಕೇರಿಯ ಉದಾಹರಣೆಗಳು 


ಹುಟ್ಟಿನ ಆಕಸ್ಮಿಕದೊಡನೆ ಬಹುತೇಕರ ಅಪ್ಪ, ಅಮ್ಮ, ಅಣ್ಣ, ಅಜ್ಜಿ ಇತ್ಯಾದಿ ಅನೇಕ ಭೌತಿಕ ಸ್ಥಾನಗಳೂ ಅವಕ್ಕೆ ಸೇರಿದ ಭಾವನಾತ್ಮಕ ಜವಾಬ್ದಾರಿಗಳೂ ಸಾಮಾಜಿಕ ರೂಢಿಯಂತೆ ಸೇರಿಕೊಳ್ಳುತ್ತವೆ. ಅವನ್ನು ಬಿಟ್ಟು, ವ್ಯಕ್ತಿತ್ವವನ್ನು ರೂಪಿಸುವ ಪ್ರಭಾವಗಳನ್ನು ಸೋದಾಹರಣವಾಗಿ ಕಾಣಿಸುವ ಉದ್ದೇಶಕ್ಕೇ ಮೀಸಲಾದ ಮಾಲೆ - ಜಾತಿ ಮತಗಳ ಚಕ್ರಸುಳಿ ಮೀರಿ. ಇಲ್ಲಿ ‘ಜಾತಿ ಮತ’ ಎನ್ನುವುದನ್ನು ಸಾಮಾಜಿಕ, ಆರ್ಥಿಕ, ಭಾಷಿಕ ಎಂಬಿತ್ಯಾದಿ ತೋರಿಕೆಯ ರೂಢಿಗಳನ್ನೆಲ್ಲ ಒಳಗೊಂಡಿದೆ. 

ವಿಚಾರ ಸರಣಿಯನ್ನು ಶಾಬ್ದಿಕ ಕಸರತ್ತು ಮಾಡುವ ಬದಲು, ನಿದರ್ಶನಗಳ ಕಥನವನ್ನಾಗಿಸಿದ್ದೇನೆ. ಹಾಗೆ ಮಾಡುವಲ್ಲಿ ವಿವಾದ ಮೂಲವೂ ಆಗಬಹುದಾದ ಅನ್ಯರ ವರ್ತನೆಗಳ ಮೇಲೆ ಊಹಾಗೋಪುರ ಕಟ್ಟುವುದರ ಬದಲು, ಆತ್ಮಕಥನದ ದಾರಿಯನ್ನೇ ಹಿಡಿದಿದ್ದೇನೆ. ಪ್ರಸ್ತುತ ಐವತ್ತು ಕಿರು ಟಿಪ್ಪಣಿಗಳಲ್ಲಿ ನನ್ನ ವಿದ್ಯಾರ್ಥಿದಿನಗಳನ್ನು, ಅದರಲ್ಲೂ ಬಹುತೇಕ ಇದುವರೆಗೆ ನಾನು ಬರಹಕ್ಕಿಳಿಸದ ಅನುಭವಗಳನ್ನು ಆಯ್ದುಕೊಂಡಿದ್ದೇನೆ. ನನ್ನ ವಿದ್ಯಾದಿನಗಳೆಲ್ಲ (೧೯೫೨-೧೯೭೪) ತಂದೆಯ ವೃತ್ತಿಯ ಊರುಗಳನ್ನೇ ಅನುಸರಿಸಿಕೊಂಡು ಬಂತು. ಆ ಲೆಕ್ಕದಲ್ಲಿ ನನ್ನ ನೆನಪಿಗೆ ಸಿಗುವ ಮೊದಲ ಊರು - ಮಡಿಕೇರಿ. 

14 June 2013

ಕಥನಾಂತೇ ಗೋವಿಂದಾನೆ ಗೋವಿಂದಾ...


(ಕ್ಷೇತ್ರ ದರ್ಶನದಲ್ಲೊಂದು ಸುತ್ತು ಭಾಗ ಆರು)

ತಿರುಪತಿಗೆ ನಾನು, ದೇವಕಿಯಾದರೋ ಮುಕ್ತ ಮನಸ್ಸಿನ ಕುತೂಹಲ ಒಂದನ್ನೇ ಇಟ್ಟುಕೊಂಡು ಹೋದವರು. ಹಾಗಾಗಿ ಮತ್ತೆ ದೇವದರ್ಶನದ ಪ್ರಯತ್ನಕ್ಕಿಳಿಯದೆ, ಕೇವಲ ಕ್ಷೇತ್ರದರ್ಶನ ಮುಂದುವರೆಸಿದೆವು. ಅಳಪಿರಿ ಮೆಟ್ಟಿಲ ಸಾಲಿನ ಒತ್ತಿನಲ್ಲೇ ಊರು ನುಗ್ಗಿದ ದಾರಿ ನಗರದ ಪ್ರಮುಖ ದಾರಿಯೂ ಹೌದು, ಏಕೈಕ ಇದ್ದಾರಿಯೂ ಹೌದು. ಅದೂ ಸೇರಿದಂತೆ ಊರೆಲ್ಲ ಸದಾ ಗುಡಿಸಿ, ತೊಳೆದಿಟ್ಟಂತೆಯೇ ಇತ್ತು. (ಉದ್ಯಾನವನ ಒಂದರಲ್ಲಿ ಸಂಜೆ, ಅಗತ್ಯಮೀರಿದ ಉದುರೆಲೆಗಳನ್ನು ಗೋಣಿಗಳಲ್ಲಿ ತುಂಬಿ, ಟ್ರ್ಯಾಕ್ಟರಿಗೆ ಹೇರಿ ಕಾಂಪೊಸ್ಟ್ ಕೇಂದ್ರಕ್ಕೆ ರವಾನಿಸುತ್ತಿದ್ದುದನ್ನೂ ಕಂಡೆ. ಒಟ್ಟು ಗಾಡಿಗೆ ಸುರುವಿ ಊರೆಲ್ಲಾ ‘ಪ್ರಸಾರ’ ಮಾಡಲಿಲ್ಲ, ಅಲ್ಲಲ್ಲೇ ಗುಪ್ಪೆ ಮಾಡಿ ಕಿಚ್ಚಿಟ್ಟು ಹೊಗೆ ಕರಿಕು ಬೂದಿ ಪ್ರಸಾದಗಳನ್ನು ಉಳಿಸಲೂ ಇಲ್ಲ.) ಗರುಡಾದ್ರಿ ನಗರ ಕಾಲೊನಿ ಸಾಮಾನ್ಯ ಯಾತ್ರಿಗಳಿಗಿದ್ದಂತೆ ಊರೆಲ್ಲಾ ಹಲವು ನಮೂನೆಯ ವಸತಿ ಸೌಕರ್ಯಗಳನ್ನು ಸಜ್ಜುಗೊಳಿಸಿದ್ದು ಕಂಡೆವು. ನಾವು ಬೆಳಿಗ್ಗೆ ಉಪಾಹಾರ ಸ್ವೀಕರಿಸಿದ ಹೋಟೆಲಿನಂತೆ ಹಲವು ಬರಿಯ ತಿನಿಸು ಪಾನೀಯಗಳ ಕೇಂದ್ರಗಳೂ ತಾರಾಮೌಲ್ಯಗಳ ಸನಿವಾಸ ಹೊಟೆಲುಗಳೂ ಇಲ್ಲಿವೆ. ನಮ್ಮ ಪ್ರವಾಸೀ ದೃಷ್ಟಿಕೋನದಲ್ಲಿ ಮಿತವ್ಯಯ ಪ್ರಧಾನ ಶ್ರುತಿ. ಮತ್ತೆ ಆಹಾರ, ವಸತಿಗಳಲ್ಲಿ ಆರೋಗ್ಯ ಹಾಗೂ ಕನಿಷ್ಠ ಸವಲತ್ತುಗಳನ್ನಷ್ಟೇ ಅರಸುತ್ತೇವೆ. ಪದ್ಮಾವತಿ, ವರಾಹಸ್ವಾಮಿ ಎಂಬಿತ್ಯಾದಿ ದೇವಳದ ವ್ಯಾಪ್ತಿಯ ಅತಿಥಿಗೃಹಗಳಾಗಲೀ ಮಿನರ್ವಾ ಮೊದಲಾದ ಖಾಸಗಿ ಹೋಟೆಲುಗಳಾಗಲೀ ನಮಗೆ ನಾಮಫಲಕಗಳಿಂದಾಚಿನ ಕುತೂಹಲ ಹುಟ್ಟಿಸಲಿಲ್ಲ. ಊರಿನ ಇನ್ನು ಕೆಲವು ದೇವಮಂದಿರಗಳು, ನಾವು ಹಿಂದಿನ ರಾತ್ರಿ ಮೂರು ಗಂಟೆಗಳನ್ನೇ ಕಳೆದ ‘ಸರದಿ-ಭವನ’ವಲ್ಲದೇ ಊರೆಲ್ಲಾ ವಿವಿಧ ರೂಪಗಳಲ್ಲಿ ಹಬ್ಬಿದ್ದ ಸರದಿ-ಗುಹೆ (ಸರ್ಕಸ್ಸಿನಲ್ಲಿ ಒಳಗಿನಿಂದ ಹುಲಿ ಸಿಂಹಗಳನ್ನು ರಂಗಕ್ಕೆ ಅಟ್ಟಲು ಮಾಡಿದ ಹಾಗೆ ಇಲ್ಲೂ ಬಲವಾದ ಉಕ್ಕಿನ ಸರಳು, ಬಲೆಗಳನ್ನೇ ಉಪಯೋಗಿಸಿ ಮಾಡಿದ್ದಾರೆ. ಯಾವ್ಯಾವುದೋ ಪುಟ್ಟಪಥಗಳಂಚಿನಲ್ಲಿ

07 June 2013

ಇಂದು ಎನಗೆ ಶ್ರೀ ಗೋವಿಂದಾ


(ಕ್ಷೇತ್ರ ದರ್ಶನದಲ್ಲೊಂದು ಸುತ್ತು ಭಾಗ ಐದು)

ಹೊಸಬರಿಗಾಗಿ ತಿರುಮಲದ ದೇವದರ್ಶನದ ಕುರಿತು ಒಂದೆರಡು ಪೀಠಿಕೆ ಮಾತು ಇಲ್ಲಿ ಹೇಳಬೇಕು. ಇಲ್ಲಿನ ಗರ್ಭಗುಡಿ ಅಪರಾತ್ರಿ ಹನ್ನೆರಡೂವರೆಯಿಂದ ಬೆಳಗ್ಗಿನ ಜಾವ ಮೂರು ಗಂಟೆಯವರೆಗೆ ಮಾತ್ರ ಮುಚ್ಚಿರುತ್ತದೆ. ಆದರೆ ದೇವದರ್ಶನದ ಏಕೈಕ ಲಕ್ಷ್ಯದೊಡನೆ ಇಪ್ಪತ್ನಾಲ್ಕೂ ಗಂಟೆ ಕಳೆಯುವ, ಕಿಮೀಗಟ್ಟಳೆ ಸರದಿಯ ಸಾಲು (ಸ್ವರೂಪ ಬದಲಾಗಿ ಭಕ್ತರ ಶ್ರಮ ಕಡಿಮೆಯಾಗಿದ್ದರೂ ಫಲ ಅದೇ) ಅನುಸರಿಸುವ ಭಕ್ತಗಡಣ ಮಾತ್ರನಡೆದೇಇರುತ್ತದೆ. ಅಂದರೆ ತಿರುಮಲ ಹೆಚ್ಚು ಕಡಿಮೆ ರಾತ್ರಿಯಿಡೀ ಜಾಗೃತವೇ ಇರುತ್ತದೆ. (“ಏನೂ ಆಶ್ಚರ್ಯವಿಲ್ಲಾಎನ್ನುತ್ತಾರೆ, ಪ್ರತಿಷ್ಠಿತ ಬಾಲವಾಡಿಗೆ ತಮ್ಮ ಮಗುವನ್ನು ಸೇರಿಸುವ ಅನಿವಾರ್ಯತೆಗೆ ಬೆಂಗಳೂರು ಪುಟ್ಟಪಥದಲ್ಲಿ ಸರದಿಸಾಲಿಡಿದು, ಮಲಗಿ ಕಳೆದ ತಂದೆಯೊಬ್ಬರು!) ಮೊದಲೇ ಹೇಳಿದಂತೆ, ಭಕ್ತರ ಹಣ ಅಥವಾ ಶ್ರಮದ ಯೋಗ್ಯತಾನುಸಾರ ದೇವದರ್ಶನಕ್ಕಿಲ್ಲಿ ಬೇರೆ ಬೇರೆ ಮಣೆಗಳಿವೆ. ಅಷ್ಟಿದ್ದೂ ಪಾದ ಯಾತ್ರಿಕನಿಗೆ (ಗಾಳಿಗೋಪುರದ ಬಳಿ ಕೊಟ್ಟ ಪತ್ರ ತಂದವರು) ಪ್ರಥಮ ಪ್ರಾಶಸ್ತ್ಯ ಮತ್ತು ಒಂದೇ ಗಂಟೆಯೊಳಗೆದರ್ಶನ ಗ್ಯಾರಂಟಿ.’ ದೇವಕಿ ಸಾಮಾನ್ಯವಾಗಿ ಎಲ್ಲೂ ತನ್ನ ಅಭಿಪ್ರಾಯವನ್ನು ಗಟ್ಟಿಸಿ ಹೇಳಿದವಳಲ್ಲ. ಆದರೆ ಅಂದು - ಚೆನ್ನೈ ಪ್ರಯಾಣ, ಮೆಟ್ಟಿಲೇರಿದ ಶ್ರಮ, ಮನೆ ಹಿಡಿಯಲು ನಡೆಸಿದ ಓಡಾಟದಿಂದ ನಾನು ಹಾಸಿಗೆ ಹೆಟ್ಟಲು ಹೊರಟಾಗ ಹೇಳಿದ್ದು ಮಾತ್ರವಲ್ಲ, ಮೇಲುಗೈ ಪಡೆದಳು. “ದೇವದರ್ಶನದ ಕಟ್ಟಳೆಯನ್ನು ಈಗಲೇ ಮುಗಿಸಿಕೊಳ್ಳುವ. ಆಗ ನಮ್ಮ ಯೋಜಿತ ಎರಡು ದಿನದ ಇತರ ದರ್ಶನಗಳೆಲ್ಲ ನಿರುಮ್ಮಳವಾಗಿರುತ್ತದೆ.”

31 May 2013

ಬೆರಗಾಗಿ ನಗುತ್ತಿದ್ದ ಪುರಂದರ ವಿಠಲಾ


(ಕ್ಷೇತ್ರ ದರ್ಶನದಲ್ಲೊಂದು ಸುತ್ತು ಭಾಗ ನಾಲ್ಕು)

ಅಲಿಪಿರಿ ಮೆಟ್ಟಿಲಸಾಲು ಏರುವ ತಿರುಮಲದ ಮುಖ ಪ್ರಾಕೃತಿಕವಾಗಿ ತೀವ್ರ ಇಳುಕಲಿನ ಮತ್ತು ಬಹ್ವಂಶ ಹುಡಿ ಕಲ್ಲೇ ಗಿಡಿದಂಥ ನೆಲ. ಆ ಸ್ಥಿತಿಗನುಗುಣವಾಗಿ ಗಟ್ಟಿ ಕುಳ್ಳ ಮರಗಳೂ ದಟ್ಟ ಕುರುಚಲ ಕಾಡೂ ಸಹಜವಾಗಿ ವ್ಯಾಪಿಸಿವೆ. ಆದರೆ ಭಕ್ತಾದಿಗಳ ಆವೇಶದಲ್ಲಿ ಅಗ್ನಿ ಆಕಸ್ಮಿಕಗಳು ಸಂಭವಿಸದಂತೆ ಮೆಟ್ಟಿಲಸಾಲಿನ ಎರಡು ಪಕ್ಕಗಳಲ್ಲಿ ಸುಮಾರು ಐವತ್ತಡಿ ದೂರದವರೆಗೂ  ಪೊದರು, ಉದುರು ದರಗು ಕಡ್ಡಿಗಳೆಲ್ಲವನ್ನು ಸವರಿ ತೆರವುಗೊಳಿಸಿದ್ದಾರೆ. ಉಳಿದ ಮರಗಳಷ್ಟೂ ಮೆಟ್ಟಿಲ ಸಾಲಿಗೆ ಬಿಸಿಲ ಗಾರು ತಟ್ಟದಂತೆ ನೋಡಿಕೊಳ್ಳುತ್ತವೆ. ಹೀಗಾಗಿ ಬೇಸಗೆಯ ಅಪರಾಹ್ನವನ್ನೇ ನಾವು ಆಯ್ದುಕೊಂಡಿದ್ದರೂ ನಮ್ಮ ಆರೋಹಣ ರಮ್ಯವಾಗಿತ್ತು. ಟಿಟಿಡಿಯೇನೋ ಬೆಳಿಗ್ಗೆ ಆರರಿಂದ ಸಂಜೆ ಆರರೊಳಗಷ್ಟೇ ಇಲ್ಲಿ ಸಂಚಾರ ಪ್ರಶಸ್ತ ಎಂದು ಸೂಚಿಸುತ್ತದೆ. ಆದರೆ ಭಕ್ತಾದಿಗಳು ದಿನದ ಇಪ್ಪತ್ನಾಲ್ಕೂ ಗಂಟೆ ಏರಿಳಿಯುತ್ತಲೇ ಇರುತ್ತಾರಂತೆ. (ಹಸಿವು ಶೌಚಗಳಿಗೆ ವ್ಯವಸ್ಥೆ, ಮೆಟ್ಟಿಲ ಶುಚಿ ಗಮನಿಸಿ ಎಷ್ಟೋ ಯಾತ್ರಿಗಳು ಅವೇಳೆಯಲ್ಲಿ ಅಲ್ಲಲ್ಲೇ ಧಾರಾಳ ಮಲಗುವುದೂ ಇದೆಯಂತೆ.) ನಿಜದಲ್ಲಿ ಅಲ್ಲಿನ ರಾಷ್ಟ್ರೀಯ ಉದ್ಯಾನವನದ ಸ್ಥಿತಿಯನ್ನೂ ಗ್ರಹಿಸಿ ಹೇಳುವುದಾದರೆ ಅವೇಳೆಯ ಸಂಚಾರ ಅಥವಾ ವಾಸ್ತವ್ಯ ಸೂಕ್ತವಲ್ಲ. ವನ್ಯ ಮೃಗಗಳ ಮುಖಾಮುಖಿ ನಿರಾಕರಿಸುವಂತಿಲ್ಲ. ಅದಕ್ಕೂ ಹೆಚ್ಚಿನದು ಮನುಷ್ಯರದೇ ಕ್ರೌರ್ಯಗಳನ್ನು ಹೀಗೆ ಎಂದು ಊಹಿಸುವುದಕ್ಕಾದೀತೇ?! 

24 May 2013

ನಮೋ ವೇಂಕಟೇಶಾ ನಮೋ ತಿರುಮಲೇಶಾ!


(ಕ್ಷೇತ್ರ ದರ್ಶನದಲ್ಲೊಂದು ಸುತ್ತು ಭಾಗ ಮೂರು)

ಯಾರೋ ಐಎಎಸ್ ಅಧಿಕಾರಿಯಂತೆ, ತಿರುಪತಿ ವಲಯದಲ್ಲಿ ಅಧಿಕೃತ ಕೆಲಸವನ್ನೇ ಮಾಡಿದವರಂತೆ, ಅಪಾರ ಶ್ರೀನಿವಾಸ ದೈವಲೀಲೆಗಳನ್ನು ಅನುಭವಿಸಿ ಕಥಿಸಿದ್ದು ಈಚೆಗೆ ನನ್ನಮ್ಮನಿಗೆ ಭಾರೀ ಹಿಡಿಸಿಬಿಟ್ಟಿತು. ನಾನದನ್ನು ಕೇವಲ ಅಮ್ಮನ ನಂಬಿಕೆಯೆಂದೇ ಲೆಕ್ಕಕ್ಕಿಟ್ಟರೂ ಅಧಿಕಾರಿ ಅಲ್ಲಿ ದಕ್ಷವಾಗಿ ರೂಢಿಸಿದ್ದೆಂದು ಪ್ರಚಾರದಲ್ಲಿರುವ ಜನಪರ ಕೆಲಸಗಳನ್ನಷ್ಟು ನೋಡಲೇಬೇಕೆಂಬ ಕುತೂಹಲ ಉಳಿಸಿಕೊಂಡೇ ಇದ್ದೆ. ಅದಕ್ಕೆ ಇನ್ನಷ್ಟು ಒತ್ತಾಸೆಗಳನ್ನು ಸೇರಿಸಿದವರು ತಮ್ಮ ಅನಂತ ಮತ್ತು ಗೆಳೆಯ ಕೆ.ಎಲ್ ರೆಡ್ಡಿ. ನಮ್ಮಿಬ್ಬರ ತಿರುಗುವ, ಅಳವಿಯೊಳಗೆ ನಿಲುಕಿದರೆ ಯಾವುದನ್ನೂ ನನಗೆ ನೋಡಬಾರದೆಂದಿಲ್ಲ. ಹಾಗೇ ದಿಢೀರ್ ಎಂದು ಬೆಂಗಳೂರಿನಿಂದ ಬೈಕೇರಿ ತಿರುಪತಿಗೆ ಹೊರಟ ಸಾಹಸ ನೀವೀಗಾಗಲೇ ಓದಿದ್ದೀರಿ. ನನ್ನ ಬೋರೇಗೌಡತನದಲ್ಲಿ ವೇಂಕಟೇಶ ನಾಮಜಪ ಮಾಡುತ್ತಾ ಬೆಂಗಳೂರಿಗೆ ಸುಮಾರು ಎಪ್ಪತ್ನಾಲ್ಕು ಕಿಮೀ ಪ್ರದಕ್ಷಿಣೆ ಹಾಕಿದ್ದು ಹುರಿಗಟ್ಟಿದ ಮೀಸೆ ಜೋತುಬಿದ್ದ ಅನುಭವ! ವಧು ದಕ್ಷಿಣೆಯೆನ್ನಿ, ವಿವಾಹವೆಚ್ಚವೆನ್ನಿ ಒಟ್ಟಾರೆ ಮಹಾಸಾಲಗಾರ ವೇಂಕಟೇಶ್ವರನನ್ನು ಬಾರಿಯಾದರೂ ಆತನ ಊರು, ಬಿಡಾರದಲ್ಲಿ ನೋಡಿಯೇ ಬಿಡಬೇಕೆಂದು ನಾನು, ದೇವಕಿ ಚನ್ನೈಯಿಂದ ಬಸ್ಸು ಹಿಡಿದೆವು. ದೈವಭೀರುಗಳು ತಿಮ್ಮಪ್ಪನೇ ಕರೆಸಿಕೊಂಡಎಂದುಕೊಂಡರೆ ಅಡ್ಡಿಯಿಲ್ಲ. ಆದರೆ ನನ್ನ ಲೆಕ್ಕಕ್ಕೆ ಇದು (ತಮಾಷೆಗೆ ಸವಾಲಿಗುತ್ತರ ಎಂದರೂ) ಭಕ್ತಿ ಉದ್ದಿಮೆಯನ್ನು ಶೋಧಿಸುವ ಯಾತ್ರೆ.

10 May 2013

ಮಾಮಲ್ಲಪುರಂ


(ಕ್ಷೇತ್ರ ದರ್ಶನದಲ್ಲೊಂದು ಸುತ್ತು - ಭಾಗ ಎರಡು)

ತಮಿಳುನಾಡು ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಪೊಟ್ಟಣದಲ್ಲಿ ನಮ್ಮ ಎರಡನೇ ಕಾರ್ಯಕ್ರಮದ (ಒಂದು ಹಗಲು) ಮುಖ್ಯ ಲಕ್ಷ್ಯ ಮಹಾಬಲಿಪುರಂ ಅಥವಾ ಮಾಮಲ್ಲಪುರ; ಚೆನ್ನೈಯಿಂದ ದಕ್ಷಿಣಕ್ಕೆ ಸುಮಾರು ೫೮ ಕಿಮೀ ಓಟ. ಹಿಂದಿನ ದಿನದ ನಗರ ತಿರುಗಾಟದಲ್ಲಿ ಹದಿನಾಲ್ಕೇ ಜನರಿದ್ದರೆ ಈ ದೊಡ್ಡದಕ್ಕೆ ಇನ್ನೂ ಕಡಿಮೆ - ಎಂಟೇ ಜನ. ಇಲ್ಲಿನ ನಿರ್ವಾಹಕ ಬರಿಯ ಉದ್ಘೋಷಕನಲ್ಲ, ಇಂಗ್ಲಿಷ್ನಲ್ಲಿ ತುಸು ಮಾತಾಡಬಲ್ಲವನಾಗಿದ್ದ. ಚಾಲಕನ ಗೂಡೊಳಗೆ ಮುಖಮರೆಸಿಕೊಳ್ಳದೆ, ಅನೌಪಚಾರಿಕವಾಗಿ ನಮ್ಮ ಪುಟ್ಟ ತಂಡದ ನಡುವೆ ನಿಂತೇ ವಿವರಣೆ ಕೊಡುತ್ತಿದ್ದ. ಈತನ ಬಗ್ಗೆ ಇನ್ನೊಂದು ಮಾತೂ ಇಲ್ಲೇ ಹೇಳಿಬಿಡುತ್ತೇನೆ, ದಿನದ ಕೊನೆಯಲ್ಲಿ ಹೆಚ್ಚಿನ ಆದಾಯಕ್ಕೆ ವ್ಯಕ್ತಿತ್ವ ಮಾರಿಕೊಂಡು ಆತ ಯಾರಿಗೂ ಸಲಾಮು ಹೊಡೆಯಲಿಲ್ಲ; ಸಂತತಿ ಸಾವಿರವಾಗಲಿ.

26 April 2013

ಕ್ಷೇತ್ರ ದರ್ಶನದಲ್ಲೊಂದು ಸುತ್ತು


ಭಾಗ ಒಂದು - ತಮಿಳರ ಲೋಕದಲ್ಲಿ

ಯಾರದೇ ಮನೆಗೆ ಔಪಚಾರಿಕ ಹಾಜರಿ ಹಾಕುವಲ್ಲಿ ನನಗೆ ಯಾವತ್ತೂ ವಿಶೇಷ ಆಸಕ್ತಿಯಿಲ್ಲ. ಮನೆಗೆ ಬನ್ನಿ, (ಲೋಕಾಭಿರಾಮವಾಗಿ) ಮಾತಾಡುವಾಂದ್ರೆ ನಾನು ಮಾರು ದೂರ. ಆದರೆ ಯಾವುದೇ ಮನೆಯ ವಾಸ್ತು, ಪರಿಸರ, ಸನ್ನಿವೇಶ ಅಥವಾ ವ್ಯಕ್ತಿ ವೈಶಿಷ್ಟ್ಯಗಳು ಆಹ್ವಾನ ನೀಡಿದರೆ ನಾನು ಹೋಗದೇ ಉಳಿದದ್ದೂ ಇಲ್ಲ. (ವಾಸ್ತು ಎಂದಾಗ ಚಾಲ್ತಿಯಲ್ಲಿರುವ ಕಳಂಕಿತ ಅರ್ಥ ಖಂಡಿತಾ ಅಲ್ಲ. ದೇವು ಕಟ್ಟಿಸಿದ ಪರಿಸರ ಸ್ನೇಹೀ ಮಣ್ಣಿನಮನೆ, ನಿರೇನ್ ಕಟ್ಟಿಕೊಂಡ ದರೆಯಂಚಿನ ಬಿಡಾರ, ಕೃಶಿಯ ‘ಹಳೆಬೇರು ಹೊಸ ಚಿಗುರು,’ ಪಂಡಿತರ ಜಲಸ್ತಂಭ ಒಂದಕ್ಕಿಂತ ಒಂದು ಚಂದ. ಮುಂದೆಂದಾದರೂ ಸಂದರ್ಭ ಬಂದರೆ ಆ ಕುರಿತು ಇಲ್ಲಿ ಬರೆದುಕೊಳ್ಳುವ ಉತ್ಸಾಹವೂ ನನಗುಂಟು.) ಈಚೆಗೆ ವ್ಯಕ್ತಿ ವೈಶಿಷ್ಟ್ಯದ ‘ಪೀಡೆ’ ಶುರು ಮಾಡಿದವರು ನನ್ನ ತಮ್ಮ ಅನಂತನ ಮಗಳು ಅಕ್ಷರಿ ಮತ್ತವಳ ಗಂಡ ಮಹೇಶ. ಅವರು ಚೆನ್ನೈಯಲ್ಲಿ ಬಿಡಾರ ಹೂಡಿ “ದೊಡ್ಡಪ್ಪ (/ಮ್ಯಾಂವಾ) ಯಾವಾಗ?” ಎಂದು ಒತ್ತಡ ತರತೊಡಗಿದಳು. ಅನಂತ ರುಕ್ಮಿಣಿಯರದೂ ಮಗಳದೇ ಪಕ್ಷ. ಚೆನ್ನೈಯ ಸೆಕೆ, ಯಾವುದೋ ಫ್ಲ್ಯಾಟಿನ ಕೋಳಿಗೂಡಿನಂಥ ಒಂದಂಕಣಕ್ಕೆ ನುಗ್ಗಿ, ಝಂಡಾ ಹೊಡೆಯುವ ಕಷ್ಟವನ್ನು ಅಕ್ಷರಿಗಾಗಿ ಒಮ್ಮೆಯಾದರೂ ಮಾಡಬೇಕು ಅಂದುಕೊಳ್ಳುತ್ತಲೇ ಇದ್ದೆ. ಅದಕ್ಕೆ ನನ್ನ ಊರು ತಿರುಗುವ ಉತ್ಸಾಹವನ್ನು ಜತೆ ಮಾಡಿ “ಹಾಂ, ಒಟ್ಟಿಗೇ ಬರ್ತೇವೆ, ಬರ್ತೇವೆ” ಎಂದು ದಿನ ತಳ್ಳುತ್ತಾ ಇದ್ದೆ.