Showing posts with label ಅರವಿಂದ ಶರ್ಮ ಎಂ. Show all posts
Showing posts with label ಅರವಿಂದ ಶರ್ಮ ಎಂ. Show all posts

02 October 2017

ಆವ ಧೂಳಿನೊಳಾವ ಚೈತನ್ಯ ಕಣವೋ!

ಸೋದರಳಿಯಂದಿರ ಬಂಧ ಸಂಬಂಧಗಳು - ೨
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
(ಭಾಗ ೪)
- ಎಂ. ಅರವಿಂದ ಶರ್ಮ

ಬಾಗಲೋಡಿ ದೇವರಾಯರ ಅಕ್ಕನ (ರಾಜೀವಿ) ಮಗ ನಾನು. ಅವರು ಕಿನ್ನಿಕಂಬಳದ ಶಾಲೆಯಲ್ಲಿ ೮ನೇ ತರಗತಿ ಮುಗಿಸಿ `ಉನ್ನತ ವ್ಯಾಸಂಗ’ ಮಾಡುವ ಸಲುವಾಗಿ ಮಂಗಳೂರಿನ ನಮ್ಮ ಬಾಡಿಗೆ ಬಿಡಾರದ ಗೂಡು ಸೇರಿದರು – ೧೯೩೦ರ ದಶಕದಲ್ಲಿ. ಅಂದಿನ ಎಲ್ಲ ನಿಮ್ನ ಮಧ್ಯಮ ವರ್ಗಗಳವರಂತೆ ನಮ್ಮದು ಕೂಡ ಹಿರಿ ಕುಟುಂಬ. ಕಡಿಮೆ ವರಮಾನ, ಆದರೂ ಸ್ವಾಭಿಮಾನ ಮತು ವಿದ್ಯಾದಾಹದೀಪ್ತ. ನನ್ನ ತಂದೆ ಖಾಸಗಿ ಆಯುರ್ವೇದ ವೈದ್ಯರು. ಇವರ ಮತ್ತು ದೇವರಾಯರ ಅಣ್ಣ ಶ್ರೀಶರಾಯರ ಅಲ್ಪ ಆದಾಯವೇ ಸಂಸಾರದ ಆರ್ಥಿಕ ಆಧಾರ. ಶ್ರೀಶರಾಯರು ಒಂದು ಬಂಡಸಾಲೆಯಲ್ಲಿ ಕಾರಕೂನ.


ನಾವು ನಾಲ್ವರ ಜೊತೆಗೆ ನಮ್ಮ ಮನೆಯಲ್ಲಿ ದೇವರಾಯರ ತಂಗಿ (ಅನಸೂಯಾ ದೇವಿ), ನಮ್ಮ ತಾಯಿಯ ಚಿಕ್ಕಮ್ಮ ಮತ್ತು ಅಕ್ಕನ ಮಕ್ಕಳು ಕೂಡ ಇದ್ದರು. ಯಾವುದೇ ದಿವಸ ಸರಾಸರಿಯಲ್ಲಿ ಐವರು ವಿದ್ಯಾರ್ಥಿಗಳು ನಮ್ಮಲ್ಲಿಯ ಸದಸ್ಯರು. ಇವರ ಜೊತೆಗೆ ಸ್ವಂತ ಕೆಲಸಕ್ಕಾಗಿ ಮಂಗಳೂರಿಗೆ ಬರುತ್ತಿದ್ದ ನಂಟರಿಷ್ಟರ ಭೇಟಿ, ವಾಸ್ತವ್ಯ ಸದಾ ಇದ್ದದ್ದೇ. ಇವಾವುವೂ ನನ್ನ ತಾಯಿಯ ಮತ್ತು ಶ್ರೀಶಮಾವನ ಔದಾರ್ಯ ದೃಷ್ಟಿಗೆ ಸಮಸ್ಯೆಯೇ ಆಗಲಿಲ್ಲ. ಸ್ವತಃ ಆಸ್ತಮಾ ರೋಗಿಯಾಗಿ ದುರ್ಬಲಿಯಾಗಿದ್ದ ಈ ಮಾವ ಅಂದು ತಮ್ಮ ಬಳಿಗೆ ಬಂದವರಿಗೆ ನೀಡಿದ ಅಭಯ ಹಸ್ತ ಅವಿಸ್ಮರಣೀಯ. ಇವರು ಅವಿವಾಹಿತರಾಗಿಯೇ ಉಳಿದರು. ವಸುಧೈವ ಕುಟುಂಬಕಂ ತತ್ತ್ವವನ್ನು ಅನುಷ್ಠಾನಿಸಿದರು.