Showing posts with label ಮೂರ್ತಿ ದೇರಾಜೆ. Show all posts
Showing posts with label ಮೂರ್ತಿ ದೇರಾಜೆ. Show all posts

27 July 2017

ತಾಳವಾದ್ಯಗಳ ಸವ್ಯಸಾಚಿ ಎನ್ .ವಿ. ಮೂರ್ತಿರಾಯರು


-     ಭಾರವಿ ದೇರಾಜೆ

[ಮಹಾರಾಜಾಕಾಲೇಜಿನ ನನ್ನ ಸಹಪಾಠಿ, ಗೆಳೆಯ ದೇರಾಜೆ ಮೂರ್ತಿಯ ಹಿರೀ ಮಗ - ಭಾರವಿ. ಈತ ಸಮಾಜಸೇವಾ ಅಧ್ಯಯನಗಳ ಕಾಲೇಜೆಂದೇ ಖ್ಯಾತವಾದ ಮಂಗಳೂರಿನ ರೋಶನಿ ನಿಲಯದ ಸ್ನಾತಕೋತ್ತರ ಪದವೀಧರ. ಅದಕ್ಕೂ ಮಿಗಿಲಾಗಿ ಅಲ್ಲಿಂದ ಹೊರ ಬಂದ ಕೂಡಲೇ `ವೃತ್ತಿ ಭದ್ರತೆ’ ಎಂಬ ಕಿಸೆ ತುಂಬ ಕಾಸು, ಕಣ್ತುಂಬಾ ನಿದ್ರೆಯ ತಾಪೇದಾರಿ ನೆಚ್ಚದೆ, ತನ್ನ ಪದವಿಯನ್ನು ನಿತ್ಯ ಅಗ್ನಿಪರೀಕ್ಷೆಗೊಳಪಡಿಸುವಂತೆ, ಅದೂ ಎಳೆವರಯದಲ್ಲೇ (`ಚಿರಂತನ’ ಟ್ರಸ್ಟ್, ಸುರತ್ಕಲ್) ವೃದ್ಧಾಶ್ರಮ ಕಟ್ಟಿ, ನಡೆಸುತ್ತಲಿದ್ದಾನೆ. ಇನ್ನು ಅಜ್ಜ (ದೇರಾಜೆ ಸೀತಾರಾಮಯ್ಯ), ಅಪ್ಪ, ಮಾವ (ಐಂದ್ರಜಾಲಿಕ ಶಂಕರ್) ಇವರಿಂದ ಆನುವಂಶಿಕವೋ ಎಂಬಂತೆ ಹಲವು ಕಲಾಪರಿಣತಿಗಳನ್ನು ಸಾಧಿಸಿದ್ದಾನೆ ಮತ್ತು ಕೆಲವು ಕೂಟ ಸಂಘಟನೆಗಳಲ್ಲೂ ಯಶಸ್ವಿಯಾಗಿದ್ದಾನೆ. ಅಂಥವನಿಗೆ ತನ್ನ ವಿಶೇಷ ಪಾಂಡಿತ್ಯದ - ತಬ್ಲಾ ವಾದನದಲ್ಲಿ, ನಮ್ಮ ನಡುವೆ ಇದ್ದೂ ಮರವೆಗೆ ಸಂದಂತಿದ್ದ ಹಿರಿಯ ಕಲಾಕಾರರೊಬ್ಬರನ್ನು ಕಂಡಾಗ ಹೇಗನ್ನಿಸಿರಬೇಕು! ಅವರ ಬಗ್ಗೆ ಇದುವರೆಗಿನ ತನ್ನ ಅವಜ್ಞೆ, ಬಹುತೇಕ ಸಾರ್ವಜನಿಕರದ್ದೂ ಹೌದೆಂದೇ ಆತನಿಗೆ ಸರಿಯಾಗಿಯೇ ಕಾಣಿಸಿದೆ. ಹಾಗಾಗಿ ಒಂದು ಸಂಕ್ಷಿಪ್ತ ವ್ಯಕ್ತಿ ಪರಿಚಯವನ್ನು ಲೇಖಿಸಿದ್ದಾನೆ. ಈಗ ಓದಿ, ಕೇಳಿ ಭಾರವಿಯ ಬರಹ - ಅಶೋಕವರ್ಧನ]

18 September 2015

ಬಿ.ವಿ.ಕಾರಂತರನ್ನು ನೆನೆಯುತ್ತಾ...

(ರಂಗ ಸಂಗೀತದ ಕುರಿತಾದ ಒಂದಿಷ್ಟು ತೀರಾ ಸಾಮಾನ್ಯ ವಿಚಾರಗಳು.)
ವಿಟ್ಲದಿಂದ ಮೂರ್ತಿ ದೇರಾಜೆ

[ಸಂಪಾದಕೀಯ: ೧೯೭೫ - ನಾನು ಮಂಗಳೂರಿನಲ್ಲಿ ಅಂಗಡಿ ತೆರೆದ ಹೊಸತು. ಸುಮಾರಿಗೆ ಆ ದಿನಗಳಲ್ಲೇ ಉಡುಪಿಯ ನಿಜಾರ್ಥದ ಸಾಂಸ್ಕೃತಿಕ ವಕ್ತಾರ - ಕುಶಿ ಹರಿದಾಸ ಭಟ್ಟರು, ತರುಣ ಬಿವಿ ಕಾರಂತರಿಗೆ ತಮ್ಮಲ್ಲಿ ಪ್ರಯೋಗ ರಂಗವನ್ನು ತೆರೆದಿಟ್ಟರು. ನನಗವನ್ನು ಅನುಭವಿಸುವ ಆಸೆಯಿತ್ತು, ಯೋಗ ಇರಲಿಲ್ಲ. ಆದರೆ ಅಲ್ಲೇ ಮುಂದೆ ಆನಂದ ಗಾಣಿಗರ ನಾಟಕರಂಗ ತಮ್ಮ ವಾರ್ಷಿಕ ನಾಟಕೋತ್ಸವಕ್ಕೆ ಕಾರಂತರ ನಾಟಕಗಳನ್ನು ಬೆಂಗಳೂರಿನಿಂದ ಕರೆಸುತ್ತಿದ್ದದ್ದನ್ನು ಹೋಗಿ, ನೋಡಿ ಬರುವಲ್ಲಿ ಬಹುಶಃ ನಾನೆಂದೂ ತಪ್ಪಿದ್ದಿಲ್ಲ.

***

ವೈಯಕ್ತಿಕವಾಗಿ ಬಿವಿ ಕಾರಂತರ ಬಗ್ಗೆ ನಾನು ಹೆಚ್ಚೇನೂ ತಿಳಿದುಕೊಂಡಿರಲಿಲ್ಲ. ಆದರೆ ಅವರು ಮೈಸೂರಿನಲ್ಲಿ ರಂಗಾಯಣ ಕಟ್ಟುತ್ತಿದ್ದ ಕಾಲಕ್ಕೆ ನನ್ನ ತಂದೆಗೆ (ಜಿಟಿನಾ) ನಿಕಟವಾಗಿದ್ದರು. ರಂಗಾಯಣ ಮೊದಲ ಬಾರಿಗೆ ತಿರುಗಾಟ ಹೊರಡಲು ಸಜ್ಜಾದಾಗ ಕಾರಂತರು ನನ್ನ ತಂದೆ ಮೂಲಕ ನನ್ನನ್ನು ಸಂಪರ್ಕಿಸಿದ್ದರು. “ನಮ್ಮ ಪೂರ್ವರಂಗ ಪ್ರಯೋಗಗಳಿಗೆ ಮಂಗಳೂರಿನಲ್ಲಿ ಅವಕಾಶ ಮಾಡಿಸುತ್ತೀರಾ?” ನಾನು ಭಂಡ ಧೈರ್ಯದಿಂದ ಒಪ್ಪಿಕೊಂಡಿದ್ದೆ. ಆರ್ಥಿಕವಾಗಿ ಮಂಗಳೂರು ಭಾರತೀಯ ವಿದ್ಯಾಭವನ – ಮುಖ್ಯವಾಗಿ ಜಯರಾಮ ಶೆಟ್ಟರು, ನನ್ನ ಮಹಾಬಲ. ಮತ್ತೆ ಸಂಘಟನಾತ್ಮಕವಾಗಿ ಸಹಕರಿಸಲು ಸ್ವತಃ ರಂಗಕರ್ಮಿಯೇ ಆದ ನಾ. ದಾಮೋದರ ಶೆಟ್ಟರಿದ್ದರು. ಅಲೋಶಿಯಸ್ ಕಾಲೇಜು ವಠಾರದಲ್ಲಿ ಮೂರು ದಿನಗಳ ಕಾಲ ನಡೆದ ಈ ಉತ್ಸವ ಸಾರ್ವಜನಿಕರ ನೆಲೆಯಲ್ಲಿ ಚೆನ್ನಾಗಿಯೇ ಇತ್ತು. ಆದರೆ ನನಗೆ ಅಂಗಡಿಯ ಸಮಯದ ಶಿಸ್ತಿನಲ್ಲಿ, ಕಾರಂತರೊಡನೆ ವಿಶೇಷ ಒಡನಾಟ ಸಾಧ್ಯವಾಗಲೇ ಇಲ್ಲ. ಉತ್ಸವದ ಕೊನೆಗೆ ನಾನು ತಂಡದ ಅಶಿಸ್ತಿನ ಕುರಿತು ಒಂದು ಕಟುಟೀಕಾ ಪತ್ರವನ್ನು ಕಾರಂತರಿಗೆ ವೈಯಕ್ತಿಕವಾಗಿ ಬರೆದಿದ್ದೆ. ನನ್ನ ನಿರೀಕ್ಷೆ ಮೀರಿ, ಕ್ಲಪ್ತ ಕಾಲದಲ್ಲಿ ಕಾರಂತರ ಉತ್ತರ ಬಂದಾಗ, ನಾನು ಸಂಕೋಚದಲ್ಲಿ ಮುದುಡಿಹೋದೆ. ದೊಡ್ಡ ಮನುಷ್ಯ, ಯಾವುದೇ ಸಮಜಾಯಿಷಿ ಕೊಡ ಹೋಗದೇ ತಪ್ಪುಗಳನ್ನು ಒಪ್ಪಿಕೊಂಡು, ಕ್ಷಮೆ ಯಾಚಿಸಿದ್ದರು!!

***

೧೯೯೯ರಲ್ಲಿ ಕುಂದಾಪುರ ಭಂಡಾರ್ಕರ್ಸ್ ಕಾಲೇಜಿನ ರಂಗಶಾಲೆ ಉದ್ಘಾಟನಾ ಕಾರ್ಯಕ್ರಮದಲ್ಲಿ, ಮುಖ್ಯವಾಗಿ ಸಂಜೆ ಬಿವಿ ಕಾರಂತರೊಡನೆ ಸಂವಾದ ಇತ್ತು. ಅದಕ್ಕಾಗಿ ನಾನು ಬೆಳಗ್ಗೆ ಮಂಗಳೂರು ಬಿಟ್ಟಿದ್ದೆ. ದಾರಿಯಲ್ಲಿ – ಉಡುಪಿಯಲ್ಲಿ, ಕುಶಿಯವರನ್ನು ಭೇಟಿಯಾಗಿ, ಹಿಂದಿನ ದಿನವಷ್ಟೇ ಮುದ್ರಣಾಲಯದಿಂದ ಬಂದಿದ್ದ ನನ್ನ `ಪುಸ್ತಕ ಮಾರಾಟ ಹೋರಾಟ’ ಪ್ರತಿಯೊಂದನ್ನು ವಿಶ್ವಾಸಪೂರ್ವಕವಾಗಿ ಕೊಟ್ಟು ಮುಂದುವರಿದಿದ್ದೆ. ಕುಂದಾಪುರದಲ್ಲಿ ಸಂಜೆ ಸಭೆಗೂ ಮೊದಲೇ ಗಣ್ಯವ್ಯಕ್ತಿಗಳ ಕೊಠಡಿಯಿಂದ ನನಗೆ ಕುಶಿಯವರ ಬುಲಾವ್ ಬಂತು. ಕುಶಿಯವರು ಅಷ್ಟರಲ್ಲೇ ನನ್ನ ಪುಸ್ತಕವನ್ನು ಹೆಕ್ಕಿ ಹೆಕ್ಕಿ ಓದಿ ಒಂದು ಸುತ್ತು ಮುಗಿಸಿಬಿಟ್ಟಿದ್ದರು. ಪರಿಣಾಮವಾಗಿ ಅವರು ಅಲ್ಲಿದ್ದ ಬಿವಿ ಕಾರಂತಾದಿ ಗಣ್ಯರೆದುರು ನನ್ನನ್ನು ಪುಸ್ತಕದ ಉದಾಹರಣೆಗಳ ಸಹಿತ ವಾಚಾಮಗೋಚರ ಹೊಗಳಿಬಿಟ್ಟರು. ಆಗ ನನ್ನ ಸಂಕೋಚವನ್ನು ಇಮ್ಮಡಿಸುವಂತೆ ಬಿವಿ ಕಾರಂತರು ಗಟ್ಟಿಯಾಗಿ “ಅದು ಸರಿ, ಆದರೆ ಅಂಥ ಪುಸ್ತಕಕ್ಕೆ ಇಲ್ಲಿ ನಾನೂ ಒಬ್ಬ ಇದ್ದೇನೆ ಎಂದು ನೀವ್ಯಾಕೆ ಯೋಚಿಸಲಿಲ್ಲ?” ಎಂದೇ ಕೇಳಿದರು. ಕಾರಂತರ ಓದಿನ ದಾಹ, ತಿಳಿವಿನ ಹಂಬಲ, ಶೋಧದ ಹುಚ್ಚುಗಳೆಲ್ಲ ಅದು ಮೊದಲಾಗಿ ನನ್ನ ಅರಿವಿಗೆ ಬರತೊಡಗಿತು! ಆದರೆ ವಿಷಾದದ ಸಂಗತಿಯೆಂದರೆ, ಈ ಅರಿವಿನೊಡನೆ ಮತ್ತೆ ಅವರ ವಿಶೇಷ ಒಡನಾಟದ ಅವಕಾಶ ನನಗೆ ಒದಗಲೇ ಇಲ್ಲ.

30 August 2013

ದೇರಾಜೆ ಮೂರ್ತಿ ಕಂಡ ಮಹಾರಾಜಾ ಕಾಲೇಜು

ನನ್ನ ಮಹಾರಾಜಾ ಕಾಲೇಜು ನೆನಪುಗಳನ್ನು ಓದಿ, ಸಹಪಾಠಿ ಗೆಳೆಯ ಮೂರ್ತಿ ದೇರಾಜೆಗೆ ಈ ಸಲದ ನೆರೆ/ಮಳೆ-ಕಾಲದಂತೆ ಹೆದ್ದೆರೆಗಳಲ್ಲಿ ಭಾವಸ್ಫುರಣಗಳಾಗಿವೆ. ಆದರೆ ಆತ ಆವೇಶಿತನಾಗಿ ಊಊದ್ದದ ಪ್ರತಿಕ್ರಿಯೆಗಾಗಿ ಅಂತರ್ಜಾಲ ತೆರೆದು, ಚಂಡಿಯುಟ್ಟ ಗದುಗಿನ ವೀರನಾರಯಣನ ಕಿಂಕರನಂತೆ ಕೂತಾಗೆಲ್ಲಾ ವಿಟ್ಲದ ಅಂತರ್ಜಾಲ ಅಂತರ್ಲಾಗ ಹೊಡೆಯುತ್ತಿತ್ತಂತೆ. ನನಗೆ ದೂರು-ವಾಣಿಸಿದರು. ಅದು ಬಿಡಿ, ಲಹರಿಗೆ ಬಂದೆಲ್ಲವನ್ನೂ ಅಲಾಯದ ಕುಟ್ಟಿ, ಜಾಲ ಸಿಕ್ಕಾಗ ನನಗೆ ಮಿಂಚಂಚೆ ಮಾಡಿಬಿಡಿ. ಟಿಪ್ಪಣಿಗಳನ್ನು ಲೇಖನದ ರೂಪಕ್ಕೆ ಕಟ್ಟುವ ಕೆಲಸ ನನಗಿರಲಿ ಎಂದದ್ದಕ್ಕೆ ಒಪ್ಪಿ ಐದಾರು ಕಂತುಗಳಲ್ಲಿ ಕೊಟ್ಟಿದ್ದಾರೆ ನೋಡಿ. ಇಲ್ಲಿ ನನ್ನ ಸಾಂದರ್ಭಿಕ ಟಿಪ್ಪಣಿಗಳನ್ನು
[-ಅವ] ಒಳಗೆ ಸೇರಿಸಿದ್ದೇನೆ - ಅಶೋಕವರ್ಧನ.
ಇನ್ನು ಅಂಬಿಗ - ದೇರಾಜೆ ಮೂರ್ತಿ, ಯಾನ ಸುಖ ನಿಮ್ಮದು
(ಮಹಾರಾಜ ನೆನಪು ಭಾಗ ನಾಲ್ಕು)

15 October 2012

ಕಣ್ಮರೆಯಾದರೂ ಮನದಲ್ಲುಳಿದವರು - ಕುರಿಯ ವಿಠಲ ಶಾಸ್ತ್ರಿಗಳು


(ವಿಠಲ ಶಾಸ್ತ್ರಿಗಳ ೯೧ ನೇ ಜಯಂತಿಯ ಸಂದರ್ಭ ಬರೆದದ್ದು)
ಮೂರ್ತಿ ದೇರಾಜೆ, ವಿಟ್ಲ
[೧೯೬೯ ಮೈಸೂರು ಮಹಾರಾಜ ಕಾಲೇಜಿನಲ್ಲಿ ನಾನು (ಇಂಗ್ಲಿಷ್ ಮತ್ತು) ಕನ್ನಡ ಐಚ್ಛಿಕ ವಿಷಯದ ವಿದ್ಯಾರ್ಥಿ. ಅಸಂಖ್ಯ ಸಹಪಾಠಿಗಳಲ್ಲಿ ಇಂದಿಗೂ ನೆನಪಲ್ಲುಳಿದ ಹೆಸರುಗಳು ಕೆಲವು, ಒಡನಾಟದಲ್ಲುಳಿದ ಸ್ನೇಹಗಳು ಇನ್ನಷ್ಟು ಕಡಿಮೆ. ಈ ವಿರಳರ ಗುಂಪಿನಲ್ಲಿ ಅಂದಿನಿಂದ ಇಂದಿನವರೆಗೂ ಯಮಳರಂತೆ ಬಳಕೆಯಿರುವ ಹೆಸರು, ವ್ಯಕ್ತಿಗಳು - ಶಂಕರ್, ಮೂರ್ತಿ. “ನಮ್ಮ ಸಹಪಾಠಿಗಳಂತೆ, ದಕ ಜಿಲ್ಲೆಯವರಂತೆ, ಹಾಸ್ಟೆಲ್ ವಾಸಿಗಳಂತೆ, ಶತಮಾನೋತ್ಸವ ಭವನದಲ್ಲಿ ಮ್ಯಾಜಿಕ್ ಪ್ರದರ್ಶನ ನೀಡ್ತಾರಂತೆ” ಹೀಗೇನೋ ನನಗಿವರ ಮೊದಲ ಪರಿಚಯ. ವಾಸ್ತವದಲ್ಲಿ ಈ ‘ಯಕ್ಷಿಣಿ ಯಮಳ’ರು ಕೇವಲ ಚಡ್ಡಿದೋಸ್ತರು (ಇಬ್ಬರೂ ಸುಮಾರು ಏಳನೇ ತರಗತಿಯಲ್ಲಿ ಓದುತ್ತಿದ್ದ ಕಾಲದಲ್ಲಿ ಮೂರ್ತಿಯ ಅಪ್ಪ - ದೇರಾಜೆ ಸೀತಾರಾಮಯ್ಯನವರು ಶಂಕರನ ಅಪ್ಪನ ಮನೆಯ ಬಳಿ ಆಸ್ತಿ ಮಾಡಿ ನೆಲೆಸಿದ್ದರಿಂದ ತೊಡಗಿದ್ದಂತೆ). ಮತ್ತೆ ಸಾಂಪ್ರದಾಯಿಕ ಓದಿನ ಹೊರಗಿನ ನೂರೆಂಟು ‘ಬೇಡಂಗಟ್ಟೆ’ಗಳಲ್ಲಿ ಸಮಾನಾಸಕ್ತರು. ಸಹಜವಾಗಿ ಆ ಎಳವೆಯಲ್ಲೆ ಶಂಕರ್ ‘ಗಿಲಿ ಗಿಲಿ ಮ್ಯಾಜಿಕ್’ ಎಂದದ್ದೂ ಮೂರ್ತಿ ತಟ್ಟೆ ತಪಲೆಯಲ್ಲಿ ‘ಮ್ಯೂಜಿಕ್ ಬೊಟ್ಟಿ’ದ್ದೂ ನನ್ನ ಬಗೆಗಣ್ಣಿಗೆ ಕಾಣಿಸುತ್ತದೆ! ಮಹಾರಾಜದದಿಂದ ಕನ್ನಡ, ಮನಶಾಸ್ತ್ರದಲ್ಲಿ ಇವರೀರ್ವರು ಸ್ನಾತಕರು. ಸಿಂಡಿಕೇಟ್ ಬ್ಯಾಂಕಿನಲ್ಲಿ ಸ್ವಯಂ ನಿವೃತ್ತಿ ಯೋಗ ಒದಗುವವರೆಗೂ ನೌಕರರು. ಆದರೆ ಆ ಕಾಲಕ್ಕೆ ತಮಾಷೆಯ ವಿಷಯವೆಂದರೆ ಇವರ ಬ್ಯಾಂಕಿನ ಹುದ್ದೆ ಯಕ್ಷಿಣಿಯದ್ದೇ; ಬ್ಯಾಂಕಿನ ಪ್ರಚಾರ ವಿಭಾಗದಲ್ಲಿ ಇವರದು ‘ಮಾಯಾ ಮಂತ್ರ.’

ಇಂದಿವರ ಯಕ್ಷಿಣಿ ಜೋಡಿ ಸಾಮಾಜಿಕ ಮುಖದಲ್ಲಿ ವಿಶ್ವಖ್ಯಾತಿಯನ್ನೂ ವೈಯಕ್ತಿಕ ಮಟ್ಟದಲ್ಲಿ ಕೌಟುಂಬಿಕ ವ್ಯಾಪ್ತಿಯನ್ನೂ ಪಡೆದು ಧನ್ಯವಾಗಿ ಮುಂದುವರಿದಿದೆ. ಸಣ್ಣದಾಗಿ ಹೇಳುವುದಾದರೆ ಶಂಕರರ ಮಗ, ಮಗಳು ಮೂರ್ತಿಯ ಅಳಿಯ, ಸೊಸೆ. ಇಂದು ಎಲ್ಲರೂ ವೃತ್ತಿ ಮತ್ತು ವಾಸ್ತವ್ಯದ ನೆಲೆಗಳಲ್ಲಿ ಸ್ವತಂತ್ರರೇ ಇದ್ದರೂ ಅಧಿ-ವೃತ್ತಿರಂಗ, ಅರ್ಥಾತ್ ಯಕ್ಷಿಣೀ ಲೋಕದಲ್ಲಿ ಒಂದಾಗಿ, ಬಾಟಲಿ ಬಿಟ್ಟ ಭೂತದಂತೆ ಭೂಮವಾಗಿ ಬೆರಗುಗೊಳಿಸುವುದು ಬಿಟ್ಟಿಲ್ಲ! 

ಮೂರ್ತಿಯ ಯಕ್ಷಿಣಿಗೆ ಅಪ್ಪ - ದೇರಾಜೆ ಸೀತಾರಾಮಯ್ಯನವರ, ಯಕ್ಷನ (ಯಕ್ಷಗಾನ) ಉಪದ್ರ ಕಡಿಮೆಯದ್ದೇನೂ ಅಲ್ಲ. ಮೂರ್ತಿಯ ಸಣಕಲ ಶರೀರ ವೇಷಕ್ಕೆ ಕುಣಿತಕ್ಕೆ ಹೇಳಿದ್ದಲ್ಲ, ನಾದವಿಲ್ಲದ ಶಾರೀರ ಗಾಯನಕ್ಕೆ ಸಲ್ಲ, ಅರ್ಥಧಾರಿಗೆ ಬೇಕಾದ ಕೃಷಿಯನ್ನೂ ಇವರು ಮಾಡಿದ್ದಿಲ್ಲ. ಆದರೆ ಅವೆಲ್ಲವನ್ನೂ ಹೆಚ್ಚಿನದನ್ನೂ ಬೌದ್ಧಿಕವಾಗಿ ಗ್ರಹಿಸಿ, ನಾಟಕರಂಗದ ನೇಪಥ್ಯದ ಕಲಾಪಗಳಲ್ಲಿ, ಮುಖ್ಯವಾಗಿ ನಿರ್ದೇಶನದಲ್ಲಿ ತೊಡಗಿಸಿಕೊಂಡಿರುವುದು ದೇರಾಜೆ ಮೂರ್ತಿತ್ವ. ಇವರು ಈಚೆಗೆ ಕೆಲವು ರಂಗ ಪ್ರಮಾಣಿತ ನಾಟಕಗಳನ್ನು ಬರೆದು ಪ್ರಕಟಿಸುವಷ್ಟೂ ಮುಂದುವರಿದಿದ್ದಾರೆ. ನನ್ನ ಜಾಲತಾಣದ ಓದಿನೊಡನೆ ಇವರು ತನ್ನ ಯಕ್ಷ-ಮುಖವರ್ಣಿಕೆಯನ್ನು ಇಲ್ಲಿ ಕೈಗೆತ್ತಿಕೊಂಡಿದ್ದಾರೆ. ನಮ್ಮೊಳಗಿನ ಮಾತುಕತೆಯಲ್ಲಿ ಮೂರ್ತಿ, ಹೀಗೆ ಎಲ್ಲೋ ಬರೆದ, ಎಂದೋ ಪ್ರಕಟವಾದ ಅಥವಾ ಆಗದ, ಆಪ್ತ ಯಕ್ಷ ವಿವರಗಳ ಬಗ್ಗೆ ಉಲ್ಲೇಖಿಸಿದರು. “ಅಂತರ್ಜಾಲದಲ್ಲಿ ಬರೆದವರಿಗೆ ಮತ್ತು ಪ್ರಕಟಿಸಿದವರಿಗೆ ಆರ್ಥಿಕ ಉಪಯುಕ್ತತೆ ಇಲ್ಲದಿರಬಹುದು. ಆದರೆ ಪ್ರಕಟಣೆಗೆ ವೆಚ್ಚವಿಲ್ಲ, ಸಾರ್ವಜನಿಕ ಉಪಯುಕ್ತತೆಗೆ ಮೇರೆಯಿಲ್ಲ” ಎನ್ನುವ ನನ್ನ ಧೋರಣೆಯಲ್ಲಿ ರುಚಿಕಂಡು ಮೂರ್ತಿ ಒಂದು ಲೇಖನ ಮತ್ತು ಅವರ ಸಂಗ್ರಹದಲ್ಲೇ ಇದ್ದ ಆ ಕಾಲದ ಎರಡು ಸೂಕ್ತ ಚಿತ್ರಗಳನ್ನೂ ಕಳಿಸಿಕೊಟ್ಟಿದ್ದಾರೆ. ಅದನ್ನು ಓದಿ, ಇನ್ನಷ್ಟು ಈ ಮಾಧ್ಯಮವನ್ನು ಸಮೃದ್ಧಗೊಳಿಸುವಂತೆ ನಿಮ್ಮ ಪ್ರತಿ-ಬರಹಗಳನ್ನು ಕೊಡುವಿರಾಗಿ ನಂಬಿದ್ದೇನೆ. ಇನ್ನು ಓದಿ, ದೇರಾಜೆ (ಕೃಷ್ಣ) ಮೂರ್ತಿ...]