ಬಿ.ಎಂ
ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ
ದೀಪದಡಿಯ
ಕತ್ತಲೆ
ಅಧ್ಯಾಯ ೩೯
ನಡೆದು ಬಂದ ದಾರಿಯ ಕಡೆಗೊಮ್ಮೆ ದೃಷ್ಟಿ ಹಾಯಿಸಿದಾಗ ಈ ದಾರಿ ಮೊದಲೇ ಇತ್ತೇ? ಅಥವಾ ನಾನೇ ಮಾಡಿಕೊಂಡೆನೇ ಎಂದು ನನಗೆ ಸಂದೇಹವೂ ಆಶ್ಚರ್ಯವೂ ಉಂಟಾಗುತ್ತದೆ. ಈ ದಾರಿಯ ನಿರ್ಮಾಣದಲ್ಲಿ ಕೆಲವರು ಹೊಂಡ ತೋಡಿದವರಿದ್ದರು. ಹಲವರು ಹಾರೆ ಗುದ್ದಲಿ ಹಿಡಿದು ನನಗೆ ಸಹಕರಿಸಿದವರೂ ಇದ್ದರು. ಹೊಂಡಕ್ಕೆ ದೂಡಿದವರಿರುವಂತೆ ಕೈ ಹಿಡಿದೆತ್ತಿ ಆಸರೆ ನೀಡಿ ಮುನ್ನಡೆಸಿದವರೂ ಇದ್ದರು. ನಮ್ಮ ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರೀತಿಯನ್ನು ಧಾರೆಯೆರೆದವರ ಪಾತ್ರ ಎಷ್ಟು ಮಹತ್ವವೋ ಅದಕ್ಕಿಂತಲೂ ಹೆಚ್ಚು ಮಹತ್ವದ ಪಾತ್ರ ವಹಿಸಿದವರಾರು ಗೊತ್ತೇ? ನಿಂದಕರು ಮತ್ತು ಶತ್ರುಗಳು. ಕೆಟ್ಟ ಮಾತು ಆಡಲಾರೆವು ಎಂಬಷ್ಟು ಸುಲಭದಲ್ಲಿ ಕೆಟ್ಟ ಮಾತು ಕೇಳಲಾರೆವು ಎಂದು ಹೇಳಲು ಸಾಧ್ಯವಿಲ್ಲವಷ್ಟೆ.



