Showing posts with label ಅಂಡಮಾನ್ ಪ್ರವಾಸ. Show all posts
Showing posts with label ಅಂಡಮಾನ್ ಪ್ರವಾಸ. Show all posts

26 June 2009

ಅಂಡಮಾನ್ ಎಂಟನೇ ಭಾಗ (ಮುಕ್ತಾಯ)


ಪ್ರಿಯ ಆನಂದಾ,
[ಅಮೆರಿಕಾದಲ್ಲಿರುವ ನನ್ನೊಬ್ಬ ತಮ್ಮ ಆನಂದವರ್ಧನನನ್ನು ಉದ್ದೇಶಿಸಿದ ಅರೆ-ಖಾಸಗಿ ಪತ್ರವಿದು. ಹೆಚ್ಚಿನ ವಿವರಗಳಿಗೆ ‘ಮೆಕ್ಸಿಕೋಕ್ಕೆ ಬನ್ನಿ, ಅಂಡಮಾನ್ ಬಿಡಿ’ ಸೇರಿದಂತೆ ಇದರದ್ದೇ ಹಿಂದಿನ ಆರು ಭಾಗಗಳನ್ನು ಇಲ್ಲೇ ನೋಡಿ. ಪ್ರತಿ ಓದುಗನ ಸಹೃದಯೀ ಪತ್ರಪ್ರತಿಕ್ರಿಯೆಗಳ ಕುಮ್ಮಕ್ಕಿನಲ್ಲಿ ಮುಂದಿನ ಕಂತುಗಳು ಬೇಗಬೇಗನೆ ಅನಾವರಣಗೊಳ್ಳಲಿವೆ ಎಂದು ಉದ್ದಕ್ಕೂ ಕೇಳಿಕೊಂಡಿದ್ದೆ, ಬಂದವು ಕೆಲವೇ ಕೆಲವು. ನಾನು ಕೊರೆತಕ್ಕೆ ಮುಕ್ತಾಯ ಕಾಣಿಸಿದ್ದಕ್ಕಾದರೂ ನೀವು ಉದಾರಿಗಳಾಗುತ್ತೀರೋ ಕಾದಿದ್ದೇನೆ - ಅಶೋಕವರ್ಧನ]



ಕಾಂಡ್ಲವನದ ದೋಣಿಗಟ್ಟೆಯಲ್ಲಿಳಿದ ನಾವು ನಾವಿಕನೊಬ್ಬೊಬ್ಬನ ನೇತೃತ್ವದಲ್ಲಿ, ಸಣ್ಣ ಸಣ್ಣ ತಂಡಗಳಲ್ಲಿ, ಪಾಳುಬಿದ್ದ ಗದ್ದೆಯಂತಹ ಹರಹಿನಲ್ಲಿ, ಕೇವಲ ಸವಕಲು ಜಾಡಿನಲ್ಲಿ ಒಳನಾಡಿನತ್ತ ನಡೆದೆವು. ನಿಂಬೇ ಶರಬತ್, ಸಣ್ಣಪುಟ್ಟ ತಿನಿಸು ಪಾನೀಯಗಳ ಒಂದೆರಡು ಜೋಪಡಿ ಬಿಟ್ಟರೆ ಏನೂ ಮನುಷ್ಯ ರಚನೆಗಳ ಹಾವಳಿ ಅಲ್ಲಿಗೆ ತಲಪಿದಂತಿರಲಿಲ್ಲ. ಮುಂದುವರಿದಂತೆ ಕೃಷಿಯ ವೈಭವ ಒಂದನ್ನು ಕಳೆದು ಪಕ್ಕಾ ನಮ್ಮದೇ ಹಳ್ಳಿಗಳನ್ನು ನೆನಪಿಗೆ ತರುವ ಪುಟ್ಟ ಜನವಸತಿ ಕಾಣಿಸಿತು. ಒಂದೋ ಎರಡೋ ಬಿಡಾರ ಕಂಡ ನೆನಪು. ಆದರೆ ಅವರ ಜೀವನಯಾಪನೆಯ ಪರಿ ಏನೆಂದು ಯೋಚಿಸಲೂ ಪುರುಸೊತ್ತಿಲ್ಲದ ಧಾವಂತ ನಮ್ಮದು. ನಮ್ಮ ಬಿಸಲೇ ಹಳ್ಳಿಯಲ್ಲಿ ಹೀಗೇ ಗದ್ದೆಯೊಂದರ ಕಟ್ಟಪುಣಿಯಲ್ಲಿ (=ದಂಡೆ, ಬದು) ಪುಟ್ಟ ಶಿಖರವೊಂದರ ಗುರಿ ಇಟ್ಟುಕೊಂಡು ಧಾವಿಸುತ್ತಿದ್ದಾಗ ಒಮ್ಮೆಗೆ ಮೆಟ್ಟಿದ ಬಿಸಿ ಆನೆಲದ್ದಿ ನೆನಪಾಯ್ತು. ಮತ್ತೆ ಪ್ರತಿ ಹೆಜ್ಜೆಗೂ ಎದುರಿನ ಕಾಡಿನ ಸಂಚಲನ, ಅಲ್ಲಿಗೆ ಸಹಜವಾದ ಸದ್ದುಗಳು ನಮಗೆ ಗಜಮೂಲದವಿರಬಹುದೇ ಎಂಬ ತವಕ. ಅದು ಬೇಸಗೆಯ ಕೊನೆಯ ಪಾದ. ಸಿಕ್ಕ ವಿಸ್ತಾರ ಪಾತ್ರೆಯ ತೋಡಿನಲ್ಲಿ ಗೊಸರು ಹೆಚ್ಚಾಗಿದ್ದರೂ ತೆಳು ನೀರಿನ ಹರಿವು ಇದ್ದೇ ಇತ್ತು. ಆ ತೋಡಿನುದ್ದಕ್ಕೆ ನಡೆಯುವಲ್ಲಿ ಇನ್ನೂ ಪೂರ್ತಿ ನೀರು ತುಂಬದ ಆನೆಯ ಹೆಜ್ಜೆ ಗುಂಡಿಗಳು. ಇದ್ದಕ್ಕಿದ್ದಂತೆ ಅನತಿ ದೂರದಿಂದ ಮರದ ಗೆಲ್ಲು ಮುರಿದ ಸದ್ದು. ಮುಂಚೂಣಿಯ ಕರಿಯಣ್ಣನ ಹವಾಯ್ ಚಪ್ಪಲಿ ಗೊಸರಿನಂಟಿನಿಂದ ಮೇಲೇಳಲಿಲ್ಲವೋ ಇವನೇ ಮರವಟ್ಟು ಕಾಲೆತ್ತಲಿಲ್ಲವೋ ತಿಳಿಯುವುದರೊಳಗೆ ದಟ್ಟ ಪಿಸುನುಡಿ - ಆನೆ! ಇಡೀ ಸಾಲಿನ ಲಯ ತಪ್ಪಿಹೋಯ್ತು. ಹೌದು ಹಾಗೇ ಇಲ್ಲೂ ಆಯ್ತು. ಒಳನಾಡಿನತ್ತ ಧಾವಿಸುತ್ತಿದ್ದ ಮುಂದಾಳು ಒಮ್ಮೆಲೆ ಹಾವು ಮೆಟ್ಟಿದವನಂತೆ ನಿಂತ! ಇದು ಅಕ್ಷರಶಃ ನಿಜ, ಸಣ್ಣ ತಿದ್ದುಪಡಿಯೊಡನೆ - ಕಟ್ಟುಕಟ್ಟಿನ ಈ ಭಾರೀ ಹಾವು ಸತ್ತುಬಿದ್ದಿತ್ತು. ವಾಸ್ತವವಾಗಿ ಅದೇನೂ ಅಂಥ ದೊಡ್ದ ಸಂಗತಿಯಲ್ಲ. ದ್ವೀಪಸ್ತೋಮದಲ್ಲಿ ಯಾವುದೇ ಆಕ್ರಮಣಕಾರೀ ಪ್ರಾಣಗಳಿಲ್ಲ ಎಂದು ತಿಳಿದಿದ್ದದ್ದಲ್ಲದೆ, ಐದಾರು ದಿನಗಳನ್ನು ಕಳೆದ ಸ್ಥಿತಿಯಲ್ಲಿ ನಮ್ಮ ಮನಸ್ಸೂ ಗಟ್ಟಿಗೊಂಡಿತ್ತು. ಒಮ್ಮೆಗೆ ಹಾವು, ಅದೂ ಭಯಂಕರ ವಿಷಕಾರಿಯೇ ಇರಬಹುದು ಎಂದೆಲ್ಲಾ ತಲೆಯಲ್ಲಿ ಒಮ್ಮೆಗೆ ಮಿಂಚು ಹೊಡೆದಂತಾಯ್ತು ಅಷ್ಟೇ. ಮರುಕ್ಷಣದಲ್ಲಿ ಚೇತರಿಸಿಕೊಂಡು ಮುಂದುವರಿದೆವು.


24 May 2009

ಅಂಡಮಾನ್ ಏಳನೇ ಭಾಗ

[ಅಮೆರಿಕಾದಲ್ಲಿರುವ ನನ್ನೊಬ್ಬ ತಮ್ಮ ಆನಂದವರ್ಧನನನ್ನು ಉದ್ದೇಶಿಸಿದ ಅರೆ-ಖಾಸಗಿ ಪತ್ರವಿದು. ಹೆಚ್ಚಿನ ವಿವರಗಳಿಗೆ ‘ಮೆಕ್ಸಿಕೋಕ್ಕೆ ಬನ್ನಿ, ಅಂಡಮಾನ್ ಬಿಡಿ’ ಸೇರಿದಂತೆ ಇದರದ್ದೇ ಹಿಂದಿನ ಐದು ಭಾಗಗಳನ್ನು ಇಲ್ಲೇ ನೋಡಿ. ಆದರೆ ಪ್ರತಿ ಓದುಗನ ಸಹೃದಯೀ ಪತ್ರಪ್ರತಿಕ್ರಿಯೆಗಳ ಕುಮ್ಮಕ್ಕಿನಲ್ಲಿ ಮುಂದಿನ ಕಂತುಗಳು ಬೇಗಬೇಗನೆ ಅನಾವರಣಗೊಳ್ಳಲಿವೆ ಎಂದು ಮಾತ್ರ ಖಚಿತವಾಗಿ ಹೇಳಬಲ್ಲೆ - ಅಶೋಕವರ್ಧನ]

ಪ್ರಿಯ ಆನಂದಾ,

ಪೋರ್ಟ್ ಬ್ಲೇರಿಗೆ ಮರಳಿ ಇತಿಹಾಸದ ಪುಟಗಳಲ್ಲಿ ಕುಖ್ಯಾತವೂ ವರ್ತಮಾನದಲ್ಲಿ ವಿಖ್ಯಾತವೂ ಆದ ಸೆಲ್ಯುಲರ್ ಜೈಲ್ ಸೇರಿದೆವು. ಅದರ ಸಂಜೆಯ ಸಂದರ್ಶನ ವೇಳೆ ತೀರಾ ಸಂಕ್ಷಿಪ್ತ. ಬಾಗಿಲು ತೆರೆದು ನಮ್ಮನ್ನು ಒಳಗೆ ಬಿಡುವಾಗಲೇ ಮುಸ್ಸಂಜೆ.  ಜೈಲಿನ ಸ್ವಾಗತ ಕಛೇರಿಯ ವಠಾರದಲ್ಲಿ ಐತಿಹಾಸಿಕ ಚಿತ್ರ, ಕೆಲವು ದಾಖಲೆಗಳು, ಸಾಮಗ್ರಿಗಳು ಜೋಡಿಸಿದ್ದರು. ಅವನ್ನು ನೋಡನೋಡುತ್ತಿದ್ದಂತೆ ಸಿಬ್ಬಂದಿ ದೀಪವಾರಿಸುತ್ತಾ ನಮ್ಮನ್ನು ಜೈಲಿನ ಒಳವಠಾರ ನೋಡಲು ಹೋಗುವಂತೆ ಅವಸರಿಸಿದರು.  ಮುಖ್ಯ ಅಂಗಳದಲ್ಲಿ ಸಣ್ಣ ವೇದಿಕೆಯ ಎದುರು ನೂರಾರು ಕುರ್ಚಿ ಜೋಡಿಸಿ ಸಜ್ಜುಗೊಳಿಸಿದ್ದರು. ಕಾಲದ ಪರೀಕ್ಷೆಯಲ್ಲಿ ದಾಟಿಬಂದವೆಲ್ಲಾ ಐತಿಹಾಸಿಕ ಮಹತ್ವಪಡೆದುಕೊಳ್ಳುವುದನ್ನು ಸಾಕ್ಷಿಸುವಂತೆ ಪ್ರಾಚೀನ ಒಂಟಿಮರ, ಹಿಂದೆ ಶಿಕ್ಷೆಯ ಅಂಗವಾಗಿ ನಡೆಯುತ್ತಿದ್ದ ಕಾರ್ಯಾಗಾರ, ಗಲ್ಲಿಗೇರಿಸುವ ಕೋಣೆಗಳನ್ನು ನೋಡಿದೆವು. ಎರಡೋ ಮೂರೋ ಮಹಡಿಯ ಎತ್ತರಕ್ಕೆ ನಿಂತ ವೃತ್ತಾಕಾರದ ಮೆಟ್ಟಿಲ ಕೋಣೆ ಮತ್ತು ಕೇಂದ್ರೀಯ ಕಣ್ಗಾವಲ ಕೋಣೆಗೂ ನುಗ್ಗಿದೆವು. ಅಲ್ಲಿಂದ ಸೂರ್ಯ ಕಿರಣಗಳು ವಿಸ್ತರಿಸುವಂತೆ ಚಾಚಿಕೊಂಡಿದ್ದ ಓಣಿಗಳಲ್ಲಿ ಪಾದಬೆಳೆಸುವಾಗ ಹ್ಯಾವ್ಲಾಕಿನಲ್ಲಿ ಮಣ್ಣಗೋಲಿಗಳನ್ನು ಸೂರ್ಯಕಿರಣದ ಮಾದರಿಯಲ್ಲಿ ಜೋಡಿಸಿದ ಏಡಿ ನೆನಪಾಗಿ ಬೆರಗುಪಟ್ಟೆ. ಓಣಿಯುದ್ದಕ್ಕೆ ಖೈದಿಗಳ ಕೋಣೆ ಕೋಣೆ; ಕಿಷ್ಕಿಂಧೆ, ಓಣಿಯೊಂದೇ ದೃಶ್ಯ. ಅಲ್ಲೆಲ್ಲೋ ಸಾವರ್ಕರ್ ಇದ್ದ ಕೊಠಡಿ, ಇನ್ಯಾರ್ಯಾರೋ ಮಹಾತ್ಮರುಗಳು ರಾಜಕೀಯ ಕೈದಿಗಳಾಗಿದ್ದ ಗೂಡುಗಳನ್ನೂ ತಗುಲಿಸಿದ್ದ ನಾಮಫಲಕಗಳಿಂದ ಕಂಡುಕೊಂಡೆವು. ಇವನ್ನೆಲ್ಲ ಚರಿತ್ರೆಯ ಭಾಗವಾಗಿ ನೋಡುವುದಷ್ಟೇ ನನಗೆ ಸಾಧ್ಯ. ಸ್ವಾತಂತ್ರ್ಯ ಹೋರಾಟಗಾರರ ಕಥೆಗಳು ಮಹತ್ವದವೇ - ವಿಕಾಸವಾದದ ಎಲ್ಲ ಕೊಂಡಿಗಳಂತೆ. ಯಾವುದೇ ಪುರಾಣಗಳನ್ನು (ನಿರಾಧಾರ ಇತಿಹಾಸ?) ಅವು ಪ್ರತಿಪಾದಿಸುವ ಸಾರ್ವಕಾಲಿಕ ಮೌಲ್ಯಗಳಿಗಾಗಿ ಬಳಸುವಂತೆ ಇಂಥವನ್ನೂ ನೋಡುವುದು ನಮಗೆ ಸಾಧ್ಯವಾಗಬೇಕು. ಅವುಗಳಿಗೆ ವರ್ತಮಾನದಲ್ಲಿ ಭಾವುಕರಾಗುವುದು (ಭಜನೆ ಮಾಡುವುದು), ನ್ಯಾಯ ಹುಡುಕುವ ಪ್ರಯತ್ನ ಮಾಡುವುದನ್ನು ನಾನು ಬುದ್ಧಿಪೂರ್ವಕವಾಗಿ ತಿರಸ್ಕರಿಸುತ್ತೇನೆ. ಅಂದಿನ ಹೋರಾಟ ೧೯೪೭ರ ‘ವಿಜಯ’ದಿಂದಷ್ಟೇ ‘ನಮಗೆ’ ಉದಾತ್ತವಾಗುತ್ತದೆ. ಇಲ್ಲವಾದರೆ ಇಂದಿನ ಶ್ರೀಲಂಕಾದ ಎಲ್ಟಿಟಿಯಿ, ಪಾಕಿಸ್ಥಾನದ ತಾಲೀಬಾನಿಗಳ ಹಾಗೇ ಅಂದಿನ ಆಡಳಿತ ಇವರನ್ನು ನೋಡಲೇಬೇಕಿತ್ತಲ್ಲವೇ? (ಎಸ್.ಎಲ್ ಭೈರಪ್ಪನವರ ಕೊನೆಯ ಕಾದಂಬರಿ - ಆವರಣ, ನೆನಪಿಗೆ ಬಂದು ಈ ಮಾತು ಹೇಳಿದ್ದೇನೆ. ಆನಂದಾ ನೀನದನ್ನು ಓದಿದ್ದೀಯಾ?)

22 April 2009

ಅಂಡಮಾನ್ ಕಥನ ಐದನೇ ಭಾಗ

[ಅಮೆರಿಕಾದಲ್ಲಿರುವ ನನ್ನೊಬ್ಬ ತಮ್ಮ ಆನಂದವರ್ಧನ (ಐದು ವರ್ಷ ಕಿರಿಯನಾದರೂ) ನನ್ನ ‘ಬಹುಹುಚ್ಚುಗಳ ನಿಕಟ ಅನುಯಾಯಿ. ಹತ್ತತ್ತಿರ ಎರಡು ವರ್ಷದ ಹಿಂದಿನ ಅನುಭವವಿದಾದರೂ ಪುರುಸೊತ್ತಿದ್ದಾಗ ಉದ್ದಕ್ಕೂ ನಿಧಾನಕ್ಕೆ ಬರಹಕ್ಕಿಳಿಯುತ್ತಲೇ ಇತ್ತು. ಆನಂದನಿಗೂ ಬ್ಲಾಗಿಗರಿಗೂ ಅದನ್ನು ಒಮ್ಮೆಗೇ ಉಣಬಡಿಸುವ ಉಮೇದು ನನ್ನದು. ನಿಮ್ಮೆಲ್ಲರ ಸಹೃದಯೀ ಪತ್ರಪ್ರತಿಕ್ರಿಯೆಗಳ ಕುಮ್ಮಕ್ಕಿನಲ್ಲಿ ಮುಂದಿನ ಕಂತುಗಳು ಬೇಗಬೇಗನೆ ಅನಾವರಣಗೊಳ್ಳಲಿವೆ - ಅಶೋಕವರ್ಧನ]

ಪ್ರಿಯ ಆನಂದಾ,

3
ಆದ್ಯತೆಯಲ್ಲಿ ಕಳೆದ ವಾರ ಯಕ್ಷಗಾನ ಗೋಷ್ಠಿ ಬಂದು ನಿನ್ನ ಕಥೆ ತಡೆ ಹಿದಿದಿದ್ದೆ. ಅಲ್ಲಿ ವಿಡಿಯೋ ಚಿತ್ರಗಳನ್ನು ಅಳವಡಿಸುತ್ತಾ ಅಭಯ ನನಗೆ ‘ಯೂಟ್ಯೂಬ್ ಕಾರ್ಯಾಚರಣೆಯ ಕ್ರಮ ವಿವರಿಸಿದ್ದು ನೆನಪಿಗೆ ಬರುತ್ತದೆ. (ಹಿಂದೆಲ್ಲ ನಾನು ಯೂಟ್ಯೂಬಿನಲ್ಲಿ ಬೇಕಾದ ಚಿತ್ರ ಆರಿಸಿಕೊಂಡು, ಕ್ಲಿಕ್ ಮಾಡುತ್ತಿದ್ದೆ. ಮತ್ತದು ಚೂರುಚೂರೇ ಲೋಡಾಗುತ್ತ ಚರೆಪರೆಗುಟ್ಟುತ್ತಾ ತುಂಡು ತುಂಡಾದ ಟೇಪಿನಂತೆ ತಡವರಿಸುತ್ತಾ ಸಾಗುವ ಉದ್ದಕ್ಕೂ ಸಹಿಸಿಕೊಳ್ಳುತ್ತಿದ್ದೆ. ಎಷ್ಟೋ ಬಾರಿ ಅರ್ಧದಲ್ಲೇ ಸ್ವಾರಸ್ಯ ಕಳೆದುಕೊಂಡು ರದ್ದುಪಡಿಸಿದ್ದೂ ಇದೆ. ಇಲ್ಲವಾದರೆ ಒಮ್ಮೆ ಪೂರ್ಣ ಲೋಡಾದ ಮೇಲೆ ರೀಪ್ಲೇ ಮಾಡುತ್ತಿದ್ದೆ.) ಅಪ್ಪಾ ನೀವು ಒಮ್ಮೆ ಕ್ಲಿಕ್ ಮಾಡುವುದು ಸರಿ. ಮತ್ತೆ ಪಾಜ್ ಕ್ಲಿಕ್ ಮಾಡಿ. ಮತ್ತದರಲ್ಲೇ ಕಾಣುವ ಚಿತ್ರದ ಅವಧಿಯವರೆಗೆ ಅದನ್ನು ಕೆಳಸಾಲಿಗೆ ಸಂಕ್ಷಿಪ್ತಗೊಳಿಸಿಬಿಡಿ ಮತ್ತು ಬೇರೆ ಕೆಲಸದಲ್ಲಿ ತೊಡಗಿಕೊಳ್ಳಬಹುದು.  ಪ್ರದರ್ಶನ ನಿಂತರೂ ಲೋಡಿಂಗ್ ನಡೆದೇ ಇರುತ್ತದೆ. ಅಲ್ಲೇ ಪೂರ್ಣತೆಗೆ ತಗಲುವ ಅವಧಿಯ ಇಳಿಗಣನೆ ಮಾಪಕ ನೋಡಿಕೊಂಡು ಒಟ್ಟು ವ್ಯವಸ್ಥೆಯನ್ನು ಮಿನಿಮೈಸ್ ಮಾಡಿ, ನಿಶ್ಶಬ್ದವಾಗಿ ಬೇರೇ ಕೆಲಸದಲ್ಲಿ ತೊಡಗಿಕೊಳ್ಳಬಹುದು. ಹಾಗೇ ಆಯ್ತು, ತಲೆಯೊಳಗೆ ಅಂಡಮಾನ್ ಕಥನ ಪಾಜ್‌ಗೆ ಹಾಕಿದಂತೆ ಲೋಡಾಗುತ್ತಲೇ ಇತ್ತು. ತಗೋ ಮತ್ತೆ ಹರಿಬಿಡುತ್ತೇನೆ.


29 March 2009

ಅಂಡಮಾನ್ - ನಾಲ್ಕನೇ ಭಾಗ

ಅಮೆರಿಕಾದಲ್ಲಿರುವ ನನ್ನೊಬ್ಬ ತಮ್ಮ ಆನಂದವರ್ಧನ (ಐದು ವರ್ಷ ಕಿರಿಯನಾದರೂ) ನನ್ನ `ಬಹುಹುಚ್ಚುಗಳ’ ನಿಕಟ ಅನುಯಾಯಿ. ಹತ್ತತ್ತಿರ ಎರಡು ವರ್ಷದ ಹಿಂದಿನ ಅನುಭವವಿದಾದರೂ ಪುರುಸೊತ್ತಿದ್ದಾಗ ಉದ್ದಕ್ಕೂ ನಿಧಾನಕ್ಕೆ ಬರಹಕ್ಕಿಳಿಯುತ್ತಲೇ ಇತ್ತು. ಆನಂದನಿಗೂ ಬ್ಲಾಗಿಗರಿಗೂ ಅದನ್ನು ಒಮ್ಮೆಗೇ ಉಣಬಡಿಸುವ ಉಮೇದು ನನ್ನದು. ಆದರೆ ಯಾಕೋ ಮೂರನೇ ಕಂತು ಬ್ಲಾಗಿಗೇರಿಸಿ ವಾರ ಕಳೆದರೂ ಪ್ರತಿಕ್ರಿಯೆ ಒಂದೂ ಕಾಣಲಿಲ್ಲ! ದಯವಿಟ್ಟು ಮರೀಬೇಡಿ, ನಿಮ್ಮೆಲ್ಲರ ಸಹೃದಯೀ ಪತ್ರಪ್ರತಿಕ್ರಿಯೆಗಳ ಕುಮ್ಮಕ್ಕಿಲ್ಲದಿದ್ದರೆ ಮುಂದಿನ ಕಂತುಗಳು ನನ್ನಲ್ಲೇ ಕಂತಿಹೋದಾವು. ಬರೀತೀರಲ್ಲಾ? - ಅಶೋಕವರ್ಧನ

ಪ್ರಿಯಾನಂದಾ,

ಇಕೋ ಇದು ಉಡುಪಿ ಕುಂದಾಪುರಗಳಿಂದಲೂ ಉತ್ತರಕ್ಕೆ ರಾಷ್ಟ್ರೀಯ ಹೆದ್ದಾರಿಯ ಅಂಚಿಗೇ ಇರುವ ಸಾಕ್ಷಾತ್ ಅರಬ್ಬೀ ಸಮುದ್ರದಿಂದಲೇ ಅಕ್ಷರಶಃ ಪಾದ ತೊಳೆಸಿಕೊಳ್ಳುತ್ತಿರುವ ಒತ್ತಿನೆಣೆ. ಇಲ್ಲೇ ಈಚೆಗೆ ಕನ್ನಡದ ಒಬ್ಬ ಸಿನಿ-ನಿರ್ಮಾಪಕನಿಗೆ ತನ್ನೊಂದು ಸಿನಿಮಾಕ್ಕೆ ಬೃಹತ್ ಚಾರ್ಲೀ ಚಾಪ್ಲಿನ್ ವಿಗ್ರಹ ನಿಲ್ಲಿಸಬೇಕೆಂದು ಮನಸ್ಸಾಯ್ತು. ಅದನ್ನು ಖಾಯಂ ನೆಲೆಯಲ್ಲಿ ರಚಿಸಿ, ನಿಲ್ಲಿಸಿ, ತನ್ನ ಕೆಲಸ ಮುಗಿದಮೇಲೆ ಪ್ರವಾಸೋದ್ಯಮದ ಹೆಚ್ಚಳಕ್ಕೆ ಉಚಿತವಾಗಿ ಸಾರ್ವಜನಿಕಕ್ಕೆ ಬಿಟ್ಟುಕೊಡುವುದಾಗಿಯೂ ಹೇಳಿಕೊಂಡ. ಆದರೆ ದುರುದ್ದೇಶಪೂರಿತವಾಗಿಯೋ (ಪೋಲಿಸ್ ಪೆಟ್ಟು ತಿಂದಾದರೂ ಪತ್ರಿಕೆಯ ಪ್ರಥಮಪುಟದ ಪ್ರಚಾರಗಿಟ್ಟಿಸುವವರಂತೆ?) ಅಪ್ಪಟ ಮೌಢ್ಯವೋ ಈ ಯೋಜನೆ ೧. ಕರಾವಳಿಯಲ್ಲಿ ಜಲರೇಖೆಯಿಂದಿಷ್ಟು ದೂರದವರೆಗೆ ಯಾವುದೇ ಖಾಯಂ ಮನುಷ್ಯ ರಚನೆಗಳು ಕೂಡದು ಎಂಬ ನಿಯಮವನ್ನು ಉಲ್ಲಂಘಿಸುತ್ತಿತ್ತು. ೨. ಅರಣ್ಯ ಇಲಾಖೆಗೆ ಸೇರಿದ ಜಾಗಕ್ಕೆ ಅನಧಿಕಾರಿಯಾದ ಗ್ರಾಮಪಂಚಾಯ್ತಿನ ಅನುಮತಿ ಪತ್ರ ಪಡೆದು ಕೆಲಸ ಶುರುಮಾಡಿತ್ತು. ೩. ಇರುವ ನೂರೆಂಟು ಗಣ್ಯರ (ಗಾಂಧಿ, ಅಂಬೇಡ್ಕರ್ ಮುಂತಾದವು) ಸಾವಿರಾರು ದೇವಾನುದೇವತೆಗಳ ವಿಗ್ರಹ, ಪ್ರಾತಿನಿಧಿಕ ರಚನೆಗಳನ್ನು (ಪ್ರಾಕೃತಿಕಕ್ಕಿಂತ ಗಂಭೀರವಾಗಿ ಮನುಷ್ಯ ವಿಕೃತಿಗಳಿಂದ) ಕಾಪಾಡುವುದೇ ಎಂದೂ ಮುಗಿಯದ ತಲೆನೋವಾಗಿರುವಾಗ ಹೊಸದೊಂದು ವಿಗ್ರಹ ಬೇಕೇ ಎಂಬ ವಿವೇಚನೆಯಂತೂ ಕೆಲಸ ಮಾಡಲೇ ಇಲ್ಲ. ಇವೆಲ್ಲಕ್ಕೆ ಕಲಶಪ್ರಾಯವಾಗಿ ಮಠೀಯವಾದಿಗಳು, ಭಾಸಾ ಹಭಿಮಾನಿಗಳು ಚಾಪ್ಲಿನ್ ಕ್ರಿಶ್ಚಿಯನ್ ಮತ್ತು ಅಕನ್ನಡಿಗ ಎಂದೂ ಗುರುತಿಸಿಬಿಟ್ಟರು. (ಕೊನೆಯ ವಿಭಾಗದವರ ಮಾತು, ಅದಕ್ಕೂ ಮಿಗಿಲಾಗಿ ಅವರ ರಟ್ಟೇ ಬಲವೂ ಪರಿಣಾಮಕಾರಿಯಾದ್ದರಿಂದ ಅಂತಿಮವಾಗಿ ಮೂರ್ತಿಸ್ಥಾಪನೆಯಾಗುತ್ತಿಲ್ಲ.)

19 March 2009

ಅಂಡಮಾನ್ ಮೂರನೇ ಭಾಗ

ಪ್ರಿಯಾನಂದಾ,

`ಛಲಬಿಡದ ರಾಜಾ ತ್ರಿವಿಕ್ರಮನು ಮತ್ತೆ ಮರದ ಬಳಿಗೆ ಹೋಗಿ, ಬೇತಾಳನನ್ನು ಇಳಿಸಿ, ಹೆಗಲ ಮೇಲೆ ಹಾಕಿಕೊಂಡು ಮೌನವಾಗಿ ನಡೆಯತೊಡಗಿದ’ ಎಂಬ ಮಾತುಗಳು ನಿನಗೇನು, ಚಂದಮಾಮದ ಓದುಗರಿಗೆಲ್ಲಾ ಸುಪರಿಚಿತವೇ. ಹಾಗೇ ನಾನೂ ಮರದ ಮನೆಯಿಂದ ನೆನಪಿನ ಬೇತಾಳವನ್ನು ಹೊತ್ತು ಮೌನವಾಗಿ ಹೊರಟಿದ್ದೇನೆ. ಬೇತಾಳ ನಗುತ್ತದೆ “ಅಯ್ಯಾ ರಾಜಾ ಕತ್ತಲು ಬೇಗಾಯ್ತೆಂದ ಮಾತ್ರಕ್ಕೆ ನೀನು ನಿದ್ದೆಗೆ ಶರಣಾಗಬೇಕೆಂಬ ಭ್ರಮೆ ಬಿಡು. ನಿನ್ನ ಮಾರ್ಗಾಯಾಸಕ್ಕೆ ಹ್ಯಾವ್ಲಾಕ್ ದ್ವೀಪದ ಮರದ ಮನೆ ಸೇರಿದವರ ಮುಂದಿನ ಕಥೆ ಹೇಳುತ್ತೇನೆ...”

Andaman 1ಮರುದಿನದ ಕಾರ್ಯಕ್ರಮ ಗಟ್ಟಿಮಾಡುವ ಅವಸರದಲ್ಲಿ ಅಲ್ಲೇ ನಮ್ಮ ಚೀಲಗಳನ್ನು ಎಸೆದು (ಅಮೂಲ್ಯವಾದ್ದನ್ನು ನಾವೇ ಹೊತ್ತು) ಮತ್ತೆ ದಾರಿಗೆ ಬಂದೆವು. ಕಾರೇರಿ ದಕ್ಕೆಯಿಂದ ಬಂದ ದಾರಿಯಲ್ಲೇ ಸ್ವಲ್ಪ ಮುಂದೆಲ್ಲೋ ಡೈವ್ ಇಂಡಿಯಾದ ಕಛೇರಿಯಿದೆಯೆಂದು ತಿಳಿದು ನಡೆದಿದ್ದೆವು. ಸೂರ್ಯಾಸ್ತವಾಗಿ ಮಂದ ಬೆಳಕಷ್ಟೇ ಉಳಿದಿತ್ತು. ಅಪರಿಚಿತ ನೆಲದಲ್ಲಿ ನಮ್ಮ ಎಚ್ಚರಕ್ಕೆ ಟಾರ್ಚೇನೋ ಹಿಡಿದಿದ್ದೆವು ಆದರೆ `ಬರಬಹುದಾದದ್ದರ’ (ಹಾವೋ ಹುಲಿಯೋ) ಕಲ್ಪನೆ ಏನೂ ಇರಲಿಲ್ಲ. ಆಗ ಬಡಿಯಿತು ಕಿವಿಗೆ ಭೀಕರ ಆರ್ತನಾದ! ನಮ್ಮ ಹಿಂದೆ ದಾರಿಯ ಬಲಬದಿಯ ಕುರುಚಲು ಕಾಡಿನಾಚೆಯಿಂದೆಲ್ಲೋ ಅಲೆಯಲೆಯಾಗಿ ದೀರ್ಘ ಕೀರಲು ಕೂಗು. ಏಕಚಕ್ರಾನಗರಿಯಲ್ಲಿ ಭಿಕ್ಷಾಟನೆ ಮಾಡಿ ಊಟಕ್ಕೆ ಕೂತ ಪಂಚ-ಪಾಂಡವರಿಗೆ ಬಡಬ್ರಾಹ್ಮಣನ ಮನೆಯಿಂದ ಇಂಥದ್ದೇ ಕೇಳಿರಬೇಕು. ನಾವು ಪಾಂಡವರಲ್ಲದಿದ್ದರೂ ಪಂಚರು ಹೌದಷ್ಟೇ, ಇನ್ನೇನು ಅತ್ತ ಧಾವಿಸಬೇಕಿತ್ತು! ಅಷ್ಟರಲ್ಲಿ ಇಲ್ಲೇ ಎದುರಿನ ಕಾಲ್ದಾರಿಯ ಆಚಿನಿಂದಲೂ ಇನ್ನೊಂದೇ ಅಂಥದೇ ಕಳಕು ಕೇಳಿಸಿತು. ಮತ್ತೆ ಎಲ್ಲೆಲ್ಲಿಂದಲೋ ವಿವಿಧ ಶ್ರುತಿಗಳಲ್ಲಿ ಇನ್ನಷ್ಟು ಮತ್ತಷ್ಟು ಅಂಥವು ಅನುರಣಿಸತೊಡಗಿದಾಗ ಅಭಯನಿಗೆ ತ್ರಿಪುರದಲ್ಲಿ ಚಿತ್ರ ತೆಗೆಯಲು ಹೋಗಿದ್ದಾಗಿನ ಅನುಭವ ನೆನಪಿಗೆ ಬಂತು. ಮರಿಕೆ ಮನೆಯಲ್ಲಿ (ನಮ್ಮ ಅಜ್ಜನ ಮನೆ) ಅತ್ತಿಗೆ (ವಾಸ್ತವದಲ್ಲಿ ಸೋದರಮಾವನ ಹೆಂಡತಿ ಅತ್ತೆ) ಸೂರ್ಯಾಸ್ತದ ವೇಳೆ ಮನೆ ದೇವರ ದೀಪ ಹಚ್ಚಿ, ಮೂರು ಬಾರಿ ಶಂಖವಾದನ ಮಾಡುತ್ತಿದ್ದದ್ದೂ ಸಂವಾದಿಯಾಗಿ ನನಗೂ ನೆನಪಿಗೆ ಬಂತು. ಹ್ಯಾವ್ಲಾಕ್-ವಾಸಿ ಬಂಗಾಳಿಗಳಿಗೆ ಪ್ರತಿ ಸಂಜೆಯ ಈ ಕಳಕು ಅಂಥದ್ದೇ ಒಂದು ಕಳಚಿಕೊಳ್ಳಲಾಗದ ಸಂಪ್ರದಾಯವಂತೆ! ಬಕಾಸುರನನ್ನು ಬಡೀತಿದ್ವೋ ಇಲ್ವೋ ಬಂಡಿ ಅನ್ನವಂತೂ ಹೊಡೀತಿದ್ವೂ ಅನ್ನು.

08 March 2009

ಅಂಡಮಾನ್ ಎರಡನೇ ಭಾಗ

ಪ್ರಿಯಾನಂದಾ

ಬಂಗಾಳಕೊಲ್ಲಿಯ ಕಡೆದಿಟ್ಟ ನವನೀತ 'ಅಂಡಮಾನ್' ಒಂದು ಆಪ್ತ ಪತ್ರ-ಪ್ರವಾಸ ಕಥನ ಎರಡನೇ ಭಾಗ

andaman-6
[ಅಮೆರಿಕಾದಲ್ಲಿರುವ ನನ್ನೊಬ್ಬ ತಮ್ಮ ಆನಂದವರ್ಧನ (ಐದು ವರ್ಷ ಕಿರಿಯನಾದರೂ) ನನ್ನ `ಬಹುಹುಚ್ಚುಗಳ’ ನಿಕಟ ಅನುಯಾಯಿ. ಹತ್ತತ್ತಿರ ಎರಡು ವರ್ಷದ ಹಿಂದಿನ ಅನುಭವವಿದಾದರೂ ಪುರುಸೊತ್ತಿದ್ದಾಗ ಉದ್ದಕ್ಕೂ ನಿಧಾನಕ್ಕೆ ಬರಹಕ್ಕಿಳಿಯುತ್ತಲೇ ಇತ್ತು. ಆನಂದನಿಗೂ ಬ್ಲಾಗಿಗರಿಗೂ ಅದನ್ನು ಉಣಬಡಿಸುವ ಉಮೇದು ನನ್ನದು. ನಿಮ್ಮೆಲ್ಲರ ಸಹೃದಯೀ ಪತ್ರಪ್ರತಿಕ್ರಿಯೆಗಳ ಕುಮ್ಮಕ್ಕಿನಲ್ಲಿ ಮುಂದಿನ ಕಂತುಗಳು ಬೇಗಬೇಗನೆ ಅನಾವರಣಗೊಳ್ಳಲಿವೆ - ಅಶೋಕವರ್ಧನ]


ತಾಪೇದಾರಿಯಲ್ಲಿರುವವರು ಒಂದು ಲೆಕ್ಕದಲ್ಲಿ (`ನಮಗೆ ನಾವೇ ಯಜಮಾನರು’ ಎಂದುಕೊಳ್ಳುವ ನನ್ನಂಥವರಿಗಿಂಥ ಅಂದರೆ) ಸ್ವೋದ್ಯೋಗಿಗಳಿಗಿಂಥ ಹೆಚ್ಚು ಮುಕ್ತರು. ಅವರು ರಜಾ ಅರ್ಜಿ ಎಸೆದು ಎಲ್ಲಿಗೂ ಎದ್ದುಕೊಂಡು ಹೋಗಿಬಿಡಬಹುದು. ಹಾಗೇಂತ ನಾನು ದಿಢೀರ್ ಅಂಗಡಿ ಬಾಗಿಲು ಎಳೆದು ಹೋದರಾದೀತೇ? ಅಂಗಡಿ ತೆರೆದ ಮೊದಮೊದಲ ಸ್ಥಿತಿಯನ್ನು  ಸರಳವಾಗಿ ಹೇಳುವುದಾದರೆ ಹೊಟ್ಟೆಪಾಡು ಮತ್ತು ಭವಿಷ್ಯದ ಹೆದರಿಕೆ ನಿವಾರಣೆಗೆ ಶಿಸ್ತು ಅಗತ್ಯವಿತ್ತು. ಕಾಲಾನಂತರ ಆ ಸ್ವಾರ್ಥಕ್ಕೂ ಮಿಗಿಲಾಗಿ ಒಂದು ಸಾಮಾಜಿಕ ಜವಾಬ್ದಾರಿಯಾಗಿ ನಾನು ಶಿಸ್ತು ಪಾಲಿಸಲೇಬೇಕಾಗುತ್ತದೆ. ಎಲ್ಲೆಲ್ಲಿಂದಲೋ ವೈಯಕ್ತಿಕ ಮತ್ತು ಸಾಂಸ್ಥಿಕ ಪುಸ್ತಕ ಅಗತ್ಯಗಳವರು ಸ್ಪಷ್ಟವಾಗಿ ನನ್ನಂಗಡಿಗೇ ಸಮಯ, ಹಣಹೊಂದಿಸಿಕೊಂಡು ಬರುವಾಗ ನಾನಿಲ್ಲದಿದ್ದರೆ? ನನ್ನಂಗಡಿಗೆ ಬರುವ ತುಂಬಾ ವಿದೇಶೀ ಪ್ರವಾಸಿಗಳು ಒಂಬತ್ತು ತಿಂಗಳು ಸರಿಯಾಗಿ ದುಡಿದು ಹಣ, ರಜೆ ಕೂಡಿಹಾಕಿ ಪ್ರವಾಸ ಹೊರಟುಬಿಡ್ತಾರಂತೆ. ಕಷ್ಟವೋ ನಷ್ಟವೋ ನಿನ್ನ ಭಾರತಯಾತ್ರೆಗಳು ನಡೆಯುವುದೂ ಇದೇ ಸೂತ್ರದಲ್ಲಿ ತಾನೇ. ಆದ್ರೆ ನನ್ನದು? “ಬೆಳಿಗ್ಗೆ ಎಂಟೂವರೆಯಿಂದ ಒಂದು, ಎರಡೂವರೆಯಿಂದ ಎಂಟು. ವಾರದ ರಜಾ ಆದಿತ್ಯವಾರ” ಎಂದು ವರ್ಷದ ಹನ್ನೆರಡೂ ತಿಂಗಳು ಸಾರ್ವಜನಿಕಕ್ಕೆ ಒಪ್ಪಿಸಿಕೊಳ್ಳುತ್ತೇನೆ. ಮಹಾರಾಜನ ವೇಷದ ಗುಲಾಮ, ಏರಿಂಡಿಯಾ `ಮಹಾರಾಜ’ನ ಹಾಗೇ! ನನಗೂ ಹೀನಾಯ ನನ್ನ ಸಹಾಯಕ ಶಾಂತಾರಾಮನದು!! ಇದಕ್ಕೆ ಸಣ್ಣ ಸಮಾಧಾನವಾಗಿ ಸುಮಾರು ಮೂರ್ನಾಲ್ಕು ವರ್ಷದ ಹಿಂದೆ ಆರೇಳು ದಿನ ಮೀರದ `ಅತ್ರಿಗೆ ಬೇಸಗೆ ರಜಾ’ ಘೋಷಿಸಿದೆ. ಅದನ್ನು ಅರ್ಥಪೂರ್ಣವಾಗಿ ನಡೆಸುವ ಅನುಕೂಲ ಒದಗಿದ್ದು ಬಹುಶಃ ಒಮ್ಮೆ ಮಾತ್ರ. ಆದರೆ ಮೊದಲೇ ಹೇಳಿದ ಹಾಗೆ ಸುಮಾರು ಎರಡು ವರ್ಷದ ಹಿಂದೆ ಒದಗಿದ ಅಂಡಮಾನ್ ಪ್ರವಾಸಾವಕಾಶ. ಅದು ಕಾಲದಿಂದ ಮಾಸದಾ ವಿಚಿತ್ರವಾಗಿಯೇ ನನ್ನ ಮನದೊಳಗಿರುವುದರಿಂದ ಮತ್ತೆ ಹೇಳಲು ತೊಡಗುತ್ತೇನೆ. ಮೊನ್ನೆ ಅಂಗಡಿಯ ಗಲ್ಲಾದಲ್ಲಿ ನಿರ್ಯೋಚನೆಯಿಂದ ಕುಳಿತಿದ್ದವ ಇಂದು, ಹಿಂದಿನ ಪತ್ರ ಕಂತಿನಲ್ಲಿ ಹೇಳಿದಂತೆ...

22 February 2009

ಬಂಗಾಳಕೊಲ್ಲಿಯ ಕಡೆದಿಟ್ಟ ನವನೀತ ಅಂಡಮಾನ್

ಅಂಡಮಾನ್ ಮಾಲಿಕೆ - ಭಾಗ ಒಂದು


ಪ್ರಿಯಾನಂದಾ ನಿಂಗೆ ಬೇಕೋ ಬೇಡವೋ ಎಂಬ ಪ್ರಶ್ನೆ ಇಲ್ಲ, ನನಗೆ ಪುರ್ಸೊತ್ತಾಗಿದೆ, ಅಂಡಮಾನ್ ಪ್ರವಾಸದ ಅನುಭವ (೨೦೦೭ ಏಪ್ರಿಲ್ನಿಂದ) ವರ್ಷಕ್ಕೂ ಮಿಕ್ಕು ಕಾಲದಿಂದ ಒತ್ತಡ ಹಾಕುತ್ತಲೇ ಇದೆ. ಈಗ ಇಳಿಸ್ಕೊಳ್ಳಲು ನಿನ್ನ ಹೆಸರಿನಲ್ಲಿ ಒಂದಷ್ಟು ಕುಟ್ಟಿ ಕಂತುಗಳಲ್ಲಿ ಬ್ಲಾಗಿಗೇರಿಸಿ ಒಂದಷ್ಟು ಜನರನ್ನು ಗೋಳುಹೊಯ್ಕೊಳ್ತೇನೆ. ಸಿಂಡಿಕೇಟ್ ಬ್ಯಾಂಕಿನ ಗೆಳೆಯರಾದ ಶಕುಂತಲಾ ಉಚ್ಚಿಲ್ ಸುಮಾರು ಹದಿನೆಂಟು ವರ್ಷಗಳ ಹಿಂದೆ ಅಲ್ಲಿಗೆ ವರ್ಗಾವಣೆ ಪಡೆದು ಹೋಗಿದ್ದಾಗ, ಎಡೆಡೆಯಲ್ಲಿ ರಜಾದಲ್ಲಿ ಬಂದಾಗೆಲ್ಲಾ ನಮ್ಮ ಹುಚ್ಚು ಚೆನ್ನಾಗಿ ಗೊತ್ತಿದ್ದುದರಿಂದ “ಬನ್ನಿ, ಭನ್ನೀ”ಂತ ಕರೀತ್ಲೇ ಇರ್ತಿದ್ರು. ಅಖಿಲಭಾರತ ಮಹಾಯಾನದ (`ಕುವೆಂಪು ಸೃಜಿಸಿದೀ ಮಹಾಕಾವ್ಯ’ ಎಂಬಂತೆ!) ಕಲ್ಪನೆಗಳಿಗೆ ದಿನ ಹೊಂದಿಸುವ ಉನ್ನತಿಕೆಯಿಂದ ಅಪಾರ ನೀರ ನಡುವಿನ ನಾಲ್ಕೆಂಟು ತುಂಡು ನೆಲ, ಅಲ್ಲಿನ ಒಂದೆರಡು ಬೆತ್ಲೆಪುರ್ಕರನ್ನು ನೋಡಲು ಮನಸ್ಸು ಇಳಿಯಲೇ ಇಲ್ಲ. ಇತ್ತ ಅಂಗಡಿಯ ಶೆಲ್ಫುಗಳ ಪರಿಷ್ಕರಣ, ಮುಖ ಎತ್ತುವಿಕೆ, ಅಭಿಮಾನೀ ಕೊಳ್ಳುಗರಿಗಿನ್ನೊಂದಿಷ್ಟು (ಇಲ್ಲಿ ಓದುಗ ಮಹಾಶಯ ಈಚೆಗೆ ಸಂದುಹೋದ ಕನ್ನಡದ ಮೇರುನಟನ ಪ್ರಿಯಪದದ ಪ್ರಭಾವವನ್ನು ಅವಶ್ಯ ಗಮನಿಸಬೇಕು) ಅನುಕೂಲವೆಲ್ಲ ಕಲ್ಪಿಸುವ ಅಂದಾಜು ಹಾಕಿ ಆಚಾರಿಯ ಬಿಡುವು ಕಾದಿದ್ದೆ. ಅಭಯ ಪ್ರಥಮ ಕನ್ನಡ ವೃತ್ತಿಪರ ಸಿನಿರಂಗದೊಡನೆ ತೊಡಗುವ ಉತ್ಸಾಹದಲ್ಲಿ ಬೆಂಗಳೂರಿಸಿದ್ದಾನೆ. ಬೇಸಗೆಯ ಉರಿ, ಹಂಪನ್ಕಟ್ಟಕ್ಕೆ ಹೋಗುವ ದಾರಿ ಬಂದಾಗಿ ನಿರೀಕ್ಷೆಯ ಜನರ ಸಮ್ಮರ್ದವಿಲ್ಲದ ದಿನ ಎಂದೆಲ್ಲಾ ಸೇರಿರುವಂತಾ ಗಳಿಗೆಯಲ್ಲಿ ನಿರೇನ್ ಫಕ್ಕನೆ ದೂರವಾಣಿಸಿ ಕೇಳಿದರು, ಅಂಡಮಾನಿಗೆ ಬರ್ತೀರಾ? ಆಫ಼್ ಸೀಸನ್ ರೇಟಿನಲ್ಲಿ ಅಂಡಮಾನಿಗೆ ಹೋಗೋಣ ಬರ್ತೀರಾ? ನನ್ನ ಸುಮಾರು ಹದಿನಾರು ವರ್ಷಗಳ ಸುಪ್ತ ಬಯಕೆಗೆ ಒಮ್ಮೆಲೇ ಮೀಟುಗೋಲು ಸಿಕ್ಕಿದ ಹಾಗಾಯ್ತು. ಅದೂ ಪೂರ್ತಿ ಪ್ರಯಾಣ ವಿಮಾನದಲ್ಲಾದರೂ ರೈಲು ಹಡಗುಗಳ ಖರ್ಚಿಗೂ ಕಡಿಮೆಯಲ್ಲಿ ಎಂದಾಗ ಯಾಕೆ ಬೇಡ ಎಂದು ದೊಡ್ಡದಾಗಿಯೇ ಹೂಂಗುಟ್ಟಿದೆ.