Showing posts with label ರಘುಚಂದ್ರ ಹೆಬ್ಬಾರ್ ವಿ. Show all posts
Showing posts with label ರಘುಚಂದ್ರ ಹೆಬ್ಬಾರ್ ವಿ. Show all posts

25 September 2017

ಅಳಿಯನ ಅಳಿಯದ ನೆನಪುಗಳು

(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
(ಭಾಗ ೩)
ಸೋದರಳಿಯಂದಿರ ಬಂಧ ಸಂಬಂಧಗಳು ೧
- ವಿ. ರಘುಚಂದ್ರ ಹೆಬ್ಬಾರ್
ಸಂಕ್ಷಿಪ್ತ ಜೀವನ ಚಿತ್ರ
ಬಾಗಲೋಡಿ ದೇವರಾಯರು ನನ್ನ ಸೋದರಮಾವ. ಅವರ ಅಕ್ಕ ಇಂದಿರಾ ನನ್ನ ತಾಯಿ. ದಕ್ಷಿಣ ಕನ್ನದ ಜಿಲ್ಲೆಯ ಕಿನ್ನಿಕಂಬಳ ಇವರ ಜನ್ಮ ಸ್ಥಳ (ಫೆಬ್ರುವರಿ ೨೮, ೧೯೨೭). ತಂದೆ ಕೃಷ್ಣರಾಯರು (೧೮೯೩-೧೯೭೫) ಅಲ್ಲಿಯ ಬೋರ್ಡ್ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರು. ತಾಯಿ ಲಕ್ಷ್ಮಿ (೧೮೯೮-೧೯೩೨). ೧೯೩೨ರಲ್ಲಿ ಈಕೆಯ ಮರಣಾನಂತರ ಕೃಷ್ಣರಾಯರು ಎರಡನೆಯ ಮದುವೆ ಆದರು. ದ್ವಿತೀಯ ಪತ್ನಿಯ ಹೆಸರು ಕೃಷ್ಣವೇಣಿ.

ಕೃಷ್ಣರಾಯರೊಬ್ಬ ಆದರ್ಶ ಗುರು. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವಂತೆ ಅನೇಕ ಯಶಸ್ವೀ ಪ್ರಯೋಗಗಳನ್ನು ನಿರ್ವಹಿಸಿದ ಕುಶಲಿ. ದೇವಮಾವನೊಬ್ಬ ಆಜನ್ಮ ಜೀನಿಯಸ್ – ಯಾವುದೇ ತರಗತಿಯ ಅವಧಿ ಪೂರ್ತಿಗೊಳ್ಳುವ ಮೊದಲೇ ಮೇಲಿನದಕ್ಕೆ ಜಿಗಿಯುತ್ತಿದ್ದ ಬಾಲಪ್ರತಿಭೆ. ಪ್ರತಿಯೊಂದು ತರಗತಿಯಲ್ಲಿಯೂ ಈತನದು ಅಗ್ರಸ್ಥಾನ. (ಅಪ್ಪ - ಕೃಷ್ಣರಾಯರ ಮಡಿಲಲ್ಲಿ ಕುಳಿತ ಬಾಲ - ದೇವರಾಯರ ಚಿತ್ರದ ಸಂಗ್ರಹ ನರಸಿಂಗ ರೈ, ಕೃಪೆ: ಕೆ.ಪಿ. ರಾವ್)

ಮಂಗಳೂರಿನ ಗಣಪತಿ ಹೈಸ್ಕೂಲಿನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದರು. ಅಲ್ಲಿಯ ಆದರ್ಶ ಮುಖ್ಯೋಪಾಧ್ಯಾಯ ಎಂ.ಎಸ್. ಏಕಾಂಬರರಾಯರ ನೆಚ್ಚಿನ ವಿದ್ಯಾರ್ಥಿಯಾಗಿ ಎಸೆಸೆಲ್ಸಿ ಮುಗಿಸಿದರು (೧೯೪೨). ಮುಂದಿನ ಎರಡು ವರ್ಷ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಇಂಟರ್ಮೀಡಿಯೇಟ್ ಅಧ್ಯಯನ (೧೯೪೨-೪೪); ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ ಇವರು ಆಯ್ದುಕೊಂಡಿದ್ದ ಐಚ್ಛಿಕ ವಿಷಯಗಳು. ಹಿಂದಿ ದ್ವಿತೀಯ ಭಾಷೆ, ಕಾಲೇಜಿನ ಭಾಷಣ, ಲೇಖನ ಸ್ಪರ್ಧೆಗಳಲ್ಲಿ ಇವರು ಸದಾ ಮುಂದು.