(ಈ ಬರಹದ ಮೊದಲ ಪ್ರತಿಯನ್ನು ಐದು ಕಂತುಗಳ ಧಾರಾವಾಹಿಯಾಗಿ ಫೇಸ್ ಬುಕ್ಕಿನಲ್ಲಿ ಪ್ರಕಟಿಸಿದ್ದೆ. ಇಲ್ಲಿ ಅವನ್ನು ಪರಿಷ್ಕರಿಸಿ ಸಂಕಲಿಸಿದ್ದೇನೆ. ಫೇಸ್ ಬುಕ್ಕಿನಲ್ಲಿ ವಿಷಾದ ವ್ಯಕ್ತಪಡಿಸಿದವರು, ತಮ್ಮ ವಲಯದ ಇನ್ನಷ್ಟು ಮಂದಿಗೆ ಮುಟ್ಟಿಸಿದವರು ನೂರಾರು. ಅಲ್ಲಿ ಬಂದ ಕೆಲವು ವಿಷಯಕ ಪ್ರತಿಕ್ರಿಯೆಗಳನ್ನು ಇಲ್ಲಿ ಪ್ರತಿಕ್ರಿಯಾ ಅಂಕಣದಲ್ಲಿ ಸೇರಿಸಿಕೊಳ್ಳುತ್ತಿದ್ದೇನೆ. ಹಾಗೇ ಸುದೀರ್ಘ ಟಿಪ್ಪಣಿಯನ್ನೇ ಕೊಟ್ಟ ‘ಪವಾಡ ವಿರೋಧಿ’ ನರೇಂದ್ರ ನಾಯಕ್ ಮತ್ತು ಹಿರಿಯ ವೈದ್ಯ ಮಿತ್ರ ಶ್ರೀನಿವಾಸ ಕಕ್ಕಿಲ್ಲಾಯರ ಬರಹಗಳನ್ನು, ಅವರ ಅನುಮತಿಯೊಡನೆ ಇದಕ್ಕೆ ಅನುಬಂಧಗಳಾಗಿ ಬಳಸಿಕೊಂಡಿದ್ದೇನೆ)
ಕೃಶಿ ತೊರೆ ಬತ್ತಿಹೋಯ್ತು
ಮಲೇಶ್ಯಾದಿಂದ ವೈದ್ಯಕೀಯ ಓದಿಗಾಗಿ ಅಸಂಖ್ಯ ವಿದ್ಯಾರ್ಥಿಗಳು ಮಂಗಳೂರು, ಮಣಿಪಾಲಕ್ಕೆ ಬರುತ್ತಿದ್ದ ಕಾಲವದು (ಸುಮಾರು ೧೯೮೪). ಆ ಬಳಗದ್ದೇ ಇದೊಂದು ಕುಡಿ ಎಂದೇ ನಾನೋರ್ವ ಧಡೂತಿ ತರುಣನನ್ನು ಭಾವಿಸಿದ್ದೆ. ಆದರೆ ಒಮ್ಮೆ ನಾನು ಇನ್ಯಾರದೋ ಜತೆ ಕನ್ನಡದಲ್ಲಿ ಮಾತಾಡುತ್ತಿದ್ದಾಗ, ಅಲ್ಲೇ ಇದ್ದ ಈತ ಅರ್ಥಪೂರ್ಣ ನಗೆ ಕೊಟ್ಟ! ಆಗ ತಿಳಿಯಿತು, ಈತ ಅಪ್ಪಟ ಕನ್ನಡಿಗ - ಸಮೀಪದ ಮೂಡಬಿದ್ರೆಯ ಕೃಷ್ಣಮೋಹನ ಪ್ರಭು; ಮಿತ್ರವಲಯಕ್ಕೆ ಕೃಶಿ. ಮುಂದೆ ನನ್ನ ಮಾತಿನ ಚಪಲಕ್ಕೋ, ಕೃಶಿಯದೇ ಮಿತಿಯರಿಯದ ಕುತೂಹಲಕ್ಕೋ ನಮ್ಮೊಳಗೆ ಅಪೂರ್ವ ಗೆಳೆತನದ ಬಂಧ ಏರ್ಪಟ್ಟಿತ್ತು. ಮತ್ತದು ಸುಮಾರು ಮೂವತ್ತೇಳು ವರ್ಷಗಳ ಉದ್ದಕ್ಕೆ ದೃಢವಾಗಿ ಬೆಳೆದಿತ್ತು. ಆದರೆ ಈಚೆಗೆ (೧೧-೧-೨೦೨೨) ತೀರಾ ಅನಿರೀಕ್ಷಿತವಾಗಿ, ಅಕಾಲಿಕವಾಗಿ ಮತ್ತು ಯಾವತ್ತಿಗೂ ಕಡಿದು ಹೋಯ್ತು; ಕೃಶಿ ಇನ್ನಿಲ್ಲ!










