Showing posts with label ರಂಗ ಸ್ಥಳ. Show all posts
Showing posts with label ರಂಗ ಸ್ಥಳ. Show all posts

07 April 2021

ರಂಗಪುರುಷನ ಸಾಕ್ಷಾತ್ಕಾರ ನೋಡುವ ನೆಪದಲ್ಲಿ


೧. ಕಥನಾರಂಭದಲ್ಲಿ

ನೀನಾಸಂ ಮತ್ತು ಸಂಚಿ ಫೌಂಡೇಶನ್ ಸಹಯೋಗದ ವಿಡಿಯೋ ದಾಖಲೀಕರಣದ ಕತೆಗಳು ನಿಮಗೆ ಹೊಸದೇನಲ್ಲ. (ನೋಡಿ: ಸಿನಿಮಾವಲ್ಲ, ದಾಖಲೀಕರಣ) ಅಂಥದ್ದೇ ಯೋಜನೆಯ ಭಾಗವಾಗಿ ೨೦೧೯ರ ಒಂದು ದಾಖಲೀಕರಣಕ್ಕೆ ಜತೆಗೊಟ್ಟ ನನಗೆ, ಅಯಾಚಿತವಾಗಿ ಆ ವರ್ಷದ ನೀನಾಸಂ ರಂಗ ಶಾಲೆಯ ಹೊಸ ವಿದ್ಯಾರ್ಥಿಗಳ ಮೊದಲ ದಿನವನ್ನೂ ನೋಡುವ ಅವಕಾಶ ಒದಗಿತ್ತು. (ನೋಡಿ: ನೀನಾಸಂ ಕಥನ ಮಾಲಿಕೆ...) ಅಂದು ಪ್ರಾಸಂಗಿಕವಾಗಿ, ಆದರೆ ಶುದ್ಧ ಪ್ರಾಯೋಗಿಕವಾಗಿ ಕೆವಿ ಅಕ್ಷರ ಮಾತಾಡುತ್ತಾ (ವಿದ್ಯಾರ್ಥಿಗಳನ್ನು ಉದ್ದೇಶಿಸಿ) "ನೀವೆಲ್ಲ ವರ್ಷದ ಕೊನೆಯಲ್ಲಿ ದಶ ಶಿರನನ್ನು ಮೀರಿಸಿದ ರಂಗಪುರುಷನನ್ನು ಇಲ್ಲಿ ರೂಪಿಸಬೇಕು..." ಎಂದಿದ್ದರು. ಆದರೆ ನಿಮಗೆಲ್ಲ ತಿಳಿದಂತೆ, ‘ಕೋವಿಡ್’ ಮಹಾಮಾರಿಯ ಗೊಂದಲದಲ್ಲಿ ಇಲ್ಲೂ ವಿದ್ಯಾವರ್ಷ ಮೊಟಕುಗೊಂಡಿತ್ತು.ಈಚೆಗೆ ಸರಕಾರದ ಬಿಗಿತಗಳು ಕಡಿಮೆಯಾದ ಮೇಲೆ, ನೀನಾಸಂ ಕಡಿದ ಎಳೆಗಳನ್ನು ಜೋಡಿಸಿ, ಆ ಬಳಗದ ಶಿಕ್ಷಣವನ್ನು ಪೂರ್ಣಗೊಳಿಸಿತ್ತು. ಮತ್ತದನ್ನು ಸಣ್ಣದಾಗಿ ಲೋಕಕ್ಕೆ ಸಾರುವಂತೆ ಎರಡು ದಿನಗಳ ನಾಟಕೋತ್ಸವ ಹಮ್ಮಿಕೊಂಡಿತ್ತು. ಹೀಗೆ ಮೈದಳೆದ ಸುಮಾರು ಇಪ್ಪತ್ತು ತಲೆಗಳ (ವಿದ್ಯಾರ್ಥಿ ಸಂಖ್ಯೆ) ರಂಗಪುರುಷನ ಎರಡು ಅವತಾರಗಳನ್ನು (ಪರಮಪದ ಸೋಪಾನಪಟ ಮತ್ತು ಮಳ್ಳಗಿಂಪೆಲ್) ಕ್ಯಾಮರಾದಲ್ಲಿ ಹಿಡಿಯಲು, ಅತ್ತ ಬೆಂಗಳೂರಿನಿಂದ ಅಭಯನ ಬಳಗ ಹದಿನೇಳರ ರಾತ್ರಿ ಬಸ್ ಹಿಡಿದಿತ್ತು. ‘ಮಗನನ್ನು ಕರೆದರೆ ಪೋಷಕರು ಮುಫತ್ತು’ ಎಂದು ನೀನಾಸಂ ತಿಳಿದರೂ ಸರಿ, ಎಂದು ಇತ್ತ ಮಂಗಳೂರಿನಿಂದ ನಾವೂ ಹೊರಟೆವು. ಹೊಸ ಎರಡು ನಾಟಕಗಳನ್ನು ಕಣ್ದುಂಬಿಕೊಳ್ಳುವುದರೊಡನೆ, ನಮ್ಮ ತಿರುಗಾಡಿತನಕ್ಕೊಪ್ಪುವಂತೆ (ಹೀರೊ ಹೊಂಡಾ ಸೂಪರ್ ಸ್ಪ್ಲೆಂಡರ್ - ೧೨೫ ಸಿಸಿ) ಬೈಕೇರಿದ್ದೆವು.


೨. ಹೀಗೊಬ್ಬ ಚಾಯ್ವಾಲಾ

ಸೋಮಾರಿ ಅರುಣ ಜಡ ಕಳೆದು, ಲೋಕವನ್ನು ಹುರಿಯಲು ಕಾವೇರಿಸುವ ಮೊದಲು ನಾವು ಪಡುಬಿದ್ರೆಗಾಗಿ ಕಾರ್ಕಳ ಮುಟ್ಟಿದ್ದೆವು. ಕಾರ್ಕಳದ ಹೊರಬಳಸಿನ ರಸ್ತೆಯಲ್ಲಿದ್ದ ಸಣ್ಣ ಹೋಟೆಲಿಗೆ ನುಗ್ಗಿದೆವು. ಬಟವಾಡೆ ಹಿರಿಯ ಎದುರು

02 December 2020

ಅಡುಗೆಮನೆ ಜಗತ್ತಿನ ‘ಅವಿಲು’ಪಾಕ


[ಮಣಿಪಾಲದ ಡಾ| ಟಿ.ಎಂ.ಎ.ಪೈ ಭಾರತೀಯ ಸಾಹಿತ್ಯ ಪೀಠಕ್ಕೆ ವೈದೇಹಿಯವರು ಗೌರವಾಧ್ಯಕ್ಷೆಯಾಗಿದ್ದ ಕಾಲವದು (೨೦೧೭). ಅವರ ಎರಡು ವರ್ಷಗಳುದ್ದದ ಸೇವಾವಧಿಯ ಕೊನೆಯ ಕಲಾಪ ಎಂಬಂತೆ, ಅಂದು ಎರಡು ದಿನಗಳುದ್ದಕ್ಕೊಂದು ವಿಚಾರ ಸಂಕಿರಣ - `ಅಡುಗೆಮನೆ ಜಗತ್ತು’ ಸಂಘಟಿಸಿದ್ದರು. ಅದರಲ್ಲಿ ನಮ್ಮ ಮಗ – ಅಭಯಸಿಂಹನಿಗೆ ಓರ್ವ ಪ್ರಬಂಧಕಾರನ ಪಾತ್ರ ಕೊಟ್ಟಿದ್ದರು. ಆದರೆ ವೇದಿಕೆ ಮೇಲಿನ ಮಾತು ಮತ್ತು ಕೆಳಗಿನ ಕೇಳ್ಮೆ ಮೀರಿ, ಹಳೆಗಾಲದ ಅಡುಗೆಮನೆಯ ಒಲೆಕಟ್ಟೆ ಸುತ್ತಣ ಸಂವಾದದ ಸಾಧ್ಯತೆಯನ್ನೂ ಶೋಧಿಸುವ ಸಾಹಸ ವೈದೇಹಿಯವರದ್ದು. ಇದಕ್ಕೆ ಬಲಕೊಡುವಂತೆ ವೇದಿಕೆಯ ಕಲಾಪಗಳಿಲ್ಲದೆಯೂ ನಾಡಿನ

06 November 2019

ಇನ್ನೊಂದು ಸಂಸ್ಕೃತಿ ಶಿಬಿರದ ನಿರೀಕ್ಷೆಯಲ್ಲಿ...

(ನೀನಾಸಂ ಕಥನ ಮಾಲಿಕೆ ೪) 

ನಿನ್ನೆ ಕಂಡದ್ದು

"ನಡು ಬೇಸಗೆಯಿರುಳ ನಲ್ಗನಸುಗಳನ್ನು ಯಾವುದೋ ಕೌಟುಂಬಿಕ ಕೂಟವೊಂದರ ಆನಂದಕ್ಕಾಗಿಯೇ ಶೇಕ್ಸ್‍ಪಿಯರ್ ರಚಿಸಿದ್ದಿರಬೇಕು. ಆದರೆ ದೂರದೃಷ್ಟಿಯಲ್ಲಿ ಅದು ಆತನ ಎಲ್ಲ ನಾಟಕಗಳ ಪ್ರಯೋಗಗಳೂ ನಡೆಯುತ್ತಿದ್ದ ಗ್ಲೋಬ್ ಥಿಯೇಟರ್ ಪರಿಸರಕ್ಕೂ ಹೊಂದುವಂತೆ ರಚಿಸಿದ,

ಪ್ರಮುಖ ಪ್ರಹಸನ ನಾಟಕ" ಎಂಬ (ಶಿಬಿರಾರ್ಥಿಯಾಗಿಯೇ ಬಂದಿದ್ದ ಇಂಗ್ಲಿಷ್ ಪ್ರಾಧ್ಯಾಪಕರೊಬ್ಬರ - ಕ್ಷಮಿಸಿ, ಅವರ ಹೆಸರು ನೆನಪಿಲ್ಲ) ಉಪಯುಕ್ತ ಪ್ರಸ್ತಾವದೊಡನೇ ನಾಲ್ಕನೇ ದಿನದ ಮೊದಲ ಕಲಾಪ, ಅಂದರೆ ಹಿಂದಿನ ದಿನದ ರಂಗಪ್ರಯೋಗದ ವಿಮರ್ಶೆ, ತೊಡಗಿತ್ತು. ಹಿಂದೆ ಹೇಳಿದಂತೆ, ಇದು ಹೆಗ್ಗೋಡಿನ ಹತ್ತು ಸಮಸ್ತರ, ಸುಬ್ಬಣ್ಣ ಸ್ಮೃತಿದಿನದ (ಜುಲಯ್ ೧೬) ಪ್ರಸ್ತುತಿಯ, ಎರಡನೆಯ ಪ್ರಯೋಗ ಮತ್ತು ನಿರ್ದೇಶನ ಇಕ್ಬಾಲ್ ಅಹಮದ್ದರದ್ದು. ಅನಿವಾರ್ಯ ಕಾರಣಗಳಿಂದ ಅಂದು ನಿರ್ದೇಶಕರು ಬಂದಿರಲಿಲ್ಲವಾದರೂ ಒಟ್ಟಾರೆ ಪ್ರೇಕ್ಷಕರ ಮೆಚ್ಚುಗೆಯ ಮಾತುಗಳಿಗೆ ಏನೂ ಕೊರತೆಯಾಗಲಿಲ್ಲ. ಅದರಲ್ಲೂ ಶಿಷ್ಟ ತಂಡದೊಳಗೊಂದು ಅಪ್ಪಟ ಜನಪದ ತಂಡವನ್ನು ಮಾಡಿ, ನಾಟಕದೊಳಗಿನ ನಾಟಕವನ್ನು

05 November 2019

ಅದ್ವಿತೀಯ ದಿನಗಳ ಚಿತ್ರಣ

(ನೀನಾಸಂ ಕಥನ ಮಾಲಿಕೆ ೩) 


ರಾಕ್ಷಸ ತಂಗಡಿ 

ಮೊದಲೇ ಹೇಳಿದಂತೆ, ಎರಡನೇ ದಿನದ ಮೊದಲ ಕಲಾಪ - ಹಿಂದಿನ ಸಂಜೆ ನೋಡಿದ ನಾಟಕ - ರಾಕ್ಷಸ-ತಂಗಡಿಯ ವಿಮರ್ಶೆ, ಜಶವಂತ ಜಾಧವರ ನಿರ್ವಹಣೆಯಲ್ಲಿ ನಡೆಯಿತು. ಅವರು ಪ್ರಯೋಗದ ಕುರಿತು ಪೀಠಿಕೆ ಕೊಡಲಿಲ್ಲ, ಹೀಗೊಂದು ಸಣ್ಣ ಸೂಚನೆಯನ್ನಷ್ಟೇ ಕೊಟ್ಟರು. ಔಪಚಾರಿಕ ಅಭಿನಂದನೆ, ಹೊಗಳಿಕೆಗಳಲ್ಲಿ ತೇಲಿಹೋಗದೆ, ನೇರ ನಾಟಕದ ಕುರಿತ ನಿಮ್ಮ ಅಭಿಪ್ರಾಯವನ್ನಷ್ಟೇ ಕೊಡಿ. ಚರ್ಚೆಗೆ ಬಂದಲ್ಲಿ ವಿವರಣೆ ಕೊಡಿ. ಮೊದಲ ಅವಕಾಶಗಳು ಕಿರಿಯರವು, ಮುಂದುವರಿದಂತೆ ಹಿರಿಯರೂ ಮುಕ್ತ ಚರ್ಚೆಯಲ್ಲಿ
ಪಾಲ್ಗೊಳ್ಳುತ್ತಾರೆ. ರಾಕ್ಷಸ ತಂಗಡಿಯ ನಾಟಕಕಾರ ಗಿರೀಶ್ ಕಾರ್ನಾಡ್ ಬದುಕಿಲ್ಲ. ಉಳಿದಂತೆ, ನೀನಾಸಂ ಪರಂಪರೆಯಂತೆ, ನಿರ್ದೇಶಕ (ಬಿ. ಆರ್ ವೆಂಕಟ್ರಮಣ ಐತಾಳ) ಹಾಗೂ ತಂಡದ ಯಾರಿಂದಲೂ ‘ಉತ್ತರ’ವನ್ನು ನಿರೀಕ್ಷಿಸಬೇಡಿ. 

ರಾಕ್ಷಸ ತಂಗಡಿ ಇದೇ ಸರ್ವಪ್ರಥಮವಾಗಿ ರಂಗಕ್ಕೇರುತ್ತಿದೆ ಎಂದೊಂದು ಮಾತು ಬಂದಿತ್ತು - ಅದು ತಪ್ಪು. ನಾವು ತಿಂಗಳ ಹಿಂದೆಯೇ, ಉಡುಪಿ ನಿರ್ಮಾಣದಲ್ಲಿ ಇದನ್ನು ಮಂಗಳೂರಿನಲ್ಲೇ ನೋಡಿದ್ದೆವು. ಶಿಬಿರದಲ್ಲಿ ಮುಖ್ಯವಾಗಿ, ಇದು ಗಿರೀಶ ಕಾರ್ನಾಡರು ವಯೋಸಹಜವಾದ ದೌರ್ಬಲ್ಯಗಳ ಕಾಲದಲ್ಲಿ ಬರೆದ (ಕೊನೆಯದ್ದೂ ಹೌದು) ನಾಟಕವಾದ್ದರಿಂದ ತುಂಬ ಜಾಳಾಗಿದೆ. ಐತಿಹಾಸಿಕವಾಗಿ ವಿಜಯನಗರ ಸಾಮ್ರಾಜ್ಯದ ಅವನತಿ ಸಣ್ಣ ಸಂಚುಗಳ ಕೂಟ, ದೊಡ್ಡ ನಾಟಕೀಯ ರೂಪದ್ದಲ್ಲ. ಅಂಥದ್ದನ್ನು ಪ್ರಯೋಗಿಸುವಲ್ಲಿ ಪೂರ್ಣ ಪಠ್ಯಾನುಸರಣೆ ಮಾಡಿದ್ದು ಸರಿಯಾಗಿಲ್ಲ ಎಂಬರ್ಥದ ಮಾತುಗಳು ಬಂದವು. ನಾನು ಪಠ್ಯ ಓದಿಲ್ಲ. ನಾಟಕೀಯತೆಗಿಂತಲೂ

02 November 2019

ಸಂಸ್ಕೃತಿ ಶಿಬಿರ ೨೦೧೯ -‘ಕಲಾನುಭವ’

(ನೀನಾಸಂ ಕಥನ ಮಾಲಿಕೆ ೨)

ಅನೌಪಚಾರಿಕ ಸುಬ್ಬಣ್ಣ

೧೯೭೫ರಲ್ಲಿ ನಾನು ಪುಸ್ತಕದಂಗಡಿ ತೆರೆದಾಗ, ಸಹಜವಾಗಿ ಅಕ್ಷರಪ್ರಕಾಶನದ ನೆಪದಲ್ಲಿ ಹೆಗ್ಗೋಡೆಂಬ ಪಕ್ಕಾ ಹಳ್ಳಿಯ ಸಂಪರ್ಕವಾಯ್ತು. ಆದರೆ ಅದು ಬಲು ಬೇಗನೆ ವ್ಯಾಪಾರಿ ಬಂಧದಿಂದ ಮೇಲೇರಿ ಬಹುಮುಖೀ ಸಾಂಸ್ಕೃತಿಕ ಚಳವಳಿಕಾರ - ಕೆವಿ ಸುಬ್ಬಣ್ಣ, ಮುಂದುವರಿದು ಅವರ ಮಗ ಕೆವಿ ಅಕ್ಷರರ ಬಳಗದ ಗಾಢ ಸಾಂಸ್ಕೃತಿಕ ಸಂಬಂಧವೇ ಆಗಿದೆ. ೧೯೪೯ರಲ್ಲಿ ಹೆಗ್ಗೋಡಿನ ಹಳ್ಳಿಗರು ಗ್ರಾಮೀಣ ಮನರಂಜನೆಗೆಂದು ಕಟ್ಟಿಕೊಂಡ ಕೂಟ - ನೀಲಕಂಠೇಶ್ವರ ನಾಟ್ಯಸೇವಾ ಸಂಘ, ಅಥವಾ ಕಿರುರೂಪದಲ್ಲಿ ನೀನಾಸಂ. ಅದಕ್ಕೆ ಸ್ಪಷ್ಟ ಸಾಂಸ್ಥಿಕರೂಪ ಮತ್ತು ದಿಟ್ಟ ಸಾಂಸ್ಕೃತಿಕ ನಿಲುವು ಕೊಟ್ಟವರು ಕೆವಿ ಸುಬ್ಬಣ್ಣ. (ನೋಡಿ: ಸಹಪಾಠಿ ಗಂಗಾಧರ ಕಲ್ಲಹಳ್ಳ ಕಂಡ ಸುಬ್ಬಣ್ಣ

ಸುಬ್ಬಣ್ಣನವರ ಸಹಯೋಗದ ನೀನಾಸಂ ೧೯೭೨ರಲ್ಲಿ ನಭೂತೋ ಎನ್ನುವಂತೆ, ಹಳ್ಳಿಮೂಲೆಯ ಹೆಗ್ಗೋಡಿನಲ್ಲಿ ಶಿವರಾಮ ಕಾರಂತ ರಂಗಮಂದಿರ ಕಟ್ಟಿ, ಸಿನಿಮಾ ಮತ್ತು ಯಾವುದೇ ರಂಗಪ್ರಯೋಗಗಳಿಗೆ ಮುಕ್ತ ಅವಕಾಶವನ್ನು ಲೋಕಾರ್ಪಣಗೊಳಿಸಿತು. ಇದನ್ನು ಕೇಂದ್ರವಾಗಿಟ್ಟುಕೊಂಡು ವ್ಯಾಪಿಸಿದ ಹೆಚ್ಚಿನ ಚಟುವಟಿಕೆಗಳು ನಾಟಕಕ್ಕೇ ಸಂಬಂಧಿಸಿತ್ತು. ಸಹಜವಾಗಿ (೧೯೮೦ರಲ್ಲಿ) ರಂಗಶಿಕ್ಷಣ ಕೇಂದ್ರವೂ ಅದರ ‘ಪುಣ್ಯಫಲ’ವನ್ನು ರಾಜ್ಯಾದ್ಯಂತ
ಮುಟ್ಟಿಸಲು (೧೯೮೫ರಲ್ಲಿ) ‘ತಿರುಗಾಟ’ವೂ ಹೊರಟಿತು, ಇಂದಿಗೂ ಶಿಸ್ತುಬದ್ಧವಾಗಿ ನಡೆದೇ ಇದೆ. ಇವಕ್ಕೆಲ್ಲ ಅನಿವಾರ್ಯ ಸಂಗಾತಿಗಳಾಗಿ ಕೂಡಿಕೊಂಡ ಕಛೇರಿ, ವಸತಿ, ಭೋಜನಾಲಯ, ಗ್ರಂಥಾಲಯ ಮುಂತಾದವುಗಳೂ ರಂಗ ಮಂದಿರದ ಸರಳ ಉಪಯುಕ್ತತೆಯನ್ನೇ ಸಾರುತ್ತವೆ; ಸರಕಾರೀ ರಂಗದಂತೆ, ಅನುಪಯುಕ್ತ ವೈಭವೀಕರಣದಲ್ಲಿ ಕಳೆದುಹೋಗಿಲ್ಲ. 

29 October 2019

ನೀನಾಸಂ ಹೆಗ್ಗೋಡು ವಠಾರಕ್ಕೆ ....



(ನೀನಾಸಂ, ಕಥನ ಮಾಲಿಕೆ ೧) 


ನೀನಾಸಂನ ಮಹತ್ತರ ನಾಟಕಗಳು ಮತ್ತು ತತ್ಸಂಬಂಧೀ ಕೆಲವು ಕಲಾಪಗಳನ್ನು ಸಂಚಿ ಫೌಂಡೇಶನ್ ವಿಡಿಯೋ ದಾಖಲೀಕರಣಕ್ಕೊಳಪಡಿಸಿ, ಯೂ ಟ್ಯೂಬ್ ಮೂಲಕ ಉಚಿತವಾಗಿ ಲೋಕಾರ್ಪಣಗೊಳಿಸುತ್ತಿರುವುದು ನಿಮಗೆಲ್ಲ ತಿಳಿದೇ ಇದೆ. ಈ ದಾಖಲೆಗಳು ಸಾರ್ವಕಾಲಿಕವಾಗುಳಿಯುತ್ತವೆ ಎನ್ನುವ ಎಚ್ಚರದೊಡನೆ ಸಂಚಿ ದುಡಿದರೆ, ಆಯಾ ಕಾಲಘಟ್ಟದ ಅತ್ಯುತ್ತಮ ಪ್ರಯೋಗವನ್ನೇ ಕೊಡಬೇಕೆನ್ನುವ ಕಾಳಜಿ ನೀನಾಸಂನಲ್ಲಿದೆ. ಆ ನಿಟ್ಟಿನಲ್ಲೇ ೧೫-೭-೧೯ರಂದು, ಸದ್ಯದ ಎರಡು ಹೊಸ ರಂಗಪ್ರಯೋಗಗಳ ವಿಶೇಷ ಪ್ರದರ್ಶನವನ್ನು ನೀನಾಸಂ ವ್ಯವಸ್ಥೆ ಮಾಡಿತ್ತು. ಅದಕ್ಕೆ ಪೂರ್ವಭಾವಿಯಾಗಿ ಅಭಯನ ‘ಪಡ್ಡಾಯಿ - ಚಿತ್ರ ಕಟ್ಟಿದ ಕಥೆ, ಚಿತ್ರ ಕಥೆ’ ಪುಸ್ತಕದ ಲೋಕಾರ್ಪಣ (೧೩-೭-೧೯) ಮಂಗಳೂರಿನಲ್ಲಿ ನಡೆಯಿತು. ಪಡ್ಡಾಯಿ ಪುಸ್ತಕದ ಪ್ರಕಾಶಕನ ನೆಲೆಯಲ್ಲೂ ಸ್ವತಃ ಪುಟ ವಿನ್ಯಾಸ ಮಾಡಿದವನ ಭಾಗೀದಾರಿಕೆಯಲ್ಲೂ ಹೆಗ್ಗೋಡಿನಿಂದ ಕೆ.ವಿ. ಶಿಶಿರ (ಕೆವಿ ಅಕ್ಷರರ ಮಗ)
ಕಾರಿನಲ್ಲಿ ಬಂದಿದ್ದರು. ಅವರು ಮಾರಣೇ ದಿನ ವಾಪಾಸು ಹೊರಟಾಗ, ದಾಖಲೀಕರಣದ ಜವಾಬ್ದಾರಿಯೊಡನೆ ಅಭಯ ಮತ್ತು ಆತನ (ಪಡ್ಡಾಯಿಯದ್ದೂ) ಕ್ಯಾಮರಾಮ್ಯಾನ್ ವಿಷ್ಣು ಸೇರಿಕೊಂಡರು. ಹೆಗ್ಗೋಡಿನಿಂದ ಬರುವಾಗಲೇ ಜತೆಗೊಟ್ಟಿದ್ದ, ಪಡ್ಡಾಯಿಯ ನಟ, ಪ್ರಸ್ತುತ ನೀನಾಸಂನ ಅಧ್ಯಾಪಕ ಅವಿನಾಶ್ ರೈ ಜತೆಗೆ ನಾನೂ ಕೇವಲ ಪ್ರೇಕ್ಷಕನ ನೆಲೆಯಲ್ಲಿ ಸೇರಿಕೊಂಡೆ.

30 April 2019

ಆನೆ ದಾರಿಯಲ್ಲಿ ಅಲ್ಲೋಲ ಕಲ್ಲೋಲ


‘ಆನೆದಾರಿಯಲ್ಲಿ ಅಲ್ಲೋಲ ಕಲ್ಲೋಲ’ ಪ್ರಸಾದ್ ರಕ್ಷಿದಿಯವರ ನಾಟಕ, ರಕ್ಷಿದಿಯಲ್ಲೇ ಪ್ರಥಮ ಪ್ರದರ್ಶನ ಎಂದು ತಿಳಿದದ್ದೇ ನಾನು ದೂರ, ಸಮಯಗಳನ್ನು ಅಲಕ್ಷಿಸಿದೆ. ದೇವಕೀ ಸಮೇತನಾಗಿ ಮೊನ್ನೆ (೨೫-೪-೧೯) ಮಧ್ಯಾಹ್ನ ಸುಮಾರು ಒಂದೂಮುಕ್ಕಾಲಕ್ಕೆ ಸಿಕ್ಕ ಮಂಗಳೂರು-ಬೆಂಗಳೂರು ಬಸ್ಸೇರಿ ಹೋದೆ. ಸಂಜೆ ಐದಕ್ಕೆ ನಾವು ಸಕಲೇಶಪುರದಲ್ಲಿ ಇಳಿಯುವುದನ್ನೇ ಕಾದಿದ್ದಂತೆ, ಮೂಡಿಗೆರೆ ಬಸ್ ನಮ್ಮನ್ನು ತುಂಬಿಕೊಂಡಿತು. ಐದೂಮುಕ್ಕಾಲಕ್ಕೆ ರಕ್ಷಿದಿಯಲ್ಲಿದ್ದೆವು. ನಾಟಕ ಒಂಬತ್ತೂಕಾಲರ ಅಂದಾಜಿಗೆ ಮುಗಿದಿತ್ತು. ಮತ್ತೆ ಪ್ರಸಾದರ ಕೃಪೆಯಲ್ಲಿ ಸಕಲೇಶಪುರ, ಬಸ್ಸಿಡಿದು ಅಪರಾತ್ರಿಯಲ್ಲೇ ಮಂಗಳೂರಿಗೆ ಮರಳಿದ್ದೆವು. ಪ್ರತಿಯಾಗಿ ನಾನು ಪ್ರಸಾದರಿಗೆ ಕಳಿಸಿದ ಕೃತಜ್ಞತಾ ಸಂದೇಶದ ಭರತ ವಾಕ್ಯ ಹೀಗಿತ್ತು - ‘ಆನೆ ಜಾಡಿನಲ್ಲಿ ಅಲ್ಲೋಲ ಕಲ್ಲೋಲ’ ಒಂದು ನಾಟಕವೇ ಅಲ್ಲ!’

17 September 2018

ದಾಖಲೀಕರಣದ ದುಮ್ಮಾನಗಳು


ನೀನಾಸಂಗೆ ಔಪಚಾರಿಕತೆಯ ಕಟ್ಟುಪಾಡುಗಳು ಹಿಡಿಸುವುದಿಲ್ಲ. ಅನಿವಾರ್ಯತೆಯಲ್ಲಿ ಉದ್ಘಾಟನೆ, ಸಮಾರೋಪ ಕಲಾಪಗಳು ನಡೆದರೂ ದೊಡ್ಡವಾಗುವುದಿಲ್ಲ, ಗಟ್ಟಿ ಕೆಲಸವನ್ನು ತೋರಿಸಿ, ಉಪಯುಕ್ತತೆಯನ್ನು ಸಾರುತ್ತವೆ. ರಂಗಶಿಕ್ಷಣ ಇದರ ಪ್ರಧಾನ ಲಕ್ಷ್ಯ. ಅದರ ಭಾಗವಾಗಿ ಸಜ್ಜುಗೊಳ್ಳುವ ಅನೇಕ ನಾಟಕಗಳು ಅಲ್ಲೇ ಒಂದೋ ಎರಡೋ ಸಾರ್ವಜನಿಕ ಪ್ರದರ್ಶನಕ್ಕಷ್ಟೇ ಉಳಿದು ಬರ್ಖಾಸ್ತಾಗುತ್ತವೆ. ಶಿಕ್ಷಣ ಕೇಂದ್ರದ ಚಟುವಟಿಕೆಯನ್ನು ವಿಸ್ತೃತ ಕನ್ನಡ ಜಗತ್ತಿಗೆ ಪರಿಚಯಿಸುವುದರೊಡನೆ,
ರಂಗಾಸಕ್ತಿ ಪ್ರೇರಿಸಲೆಂದೇ ಪ್ರತ್ಯೇಕವಾಗಿ ಸಂಘಟನೆಗೊಳ್ಳುವ, ಆಹ್ವಾನಿತ ರಂಗ ಪರಿಣತರ ತಂಡ ತಿರುಗಾಟ. ಇವು ನಿರ್ದಿಷ್ಟ ರಂಗಕೃತಿಗಳೊಡನೆ ಎರಡು ಮೂರು ತಿಂಗಳು ‘ಕಸರತ್ತು’ ನಡೆಸಿ, ನೀನಾಸಂನ ವಾರ್ಷಿಕ ‘ಸಂಸ್ಕೃತಿ ಶಿಬಿರ’ದಲ್ಲಿ ಮೊದಲು ಸಾರ್ವಜನಿಕ ಪ್ರದರ್ಶನಕ್ಕಿಳಿಯುತ್ತವೆ. ಪ್ರತಿ ತಿರುಗಾಟ ತಂಡದ ಬಂಧ ಮತ್ತು ಪ್ರದರ್ಶನಾವಧಿ ಒಂದು ವರ್ಷಕ್ಕೇ ಸೀಮಿತ. ತಿರುಗಾಟದಲ್ಲಿ ಕೆಲವು ಮುಖಗಳು ಮತ್ತೆ ಮತ್ತೆ ಕಾಣಿಸಿದರೂ ವ್ಯವಸ್ಥೆಯಲ್ಲಿ ಅವು ಪ್ರತಿವರ್ಷ ಸ್ವಪ್ರೇರಣೆಯಿಂದ

16 August 2018

ರಂಗಮನೆಗಳು ಬೆಳೆಯಬೇಕು, ರಂಗಾಯಣವಲ್ಲ


ಜೀವನರಾಂ ಸುಳ್ಯ - ನಾಟಕ ರಂಗದ ಬಹುಮುಖಿ (ನಟ, ನಿರ್ದೇಶಕ, ಸಂಘಟಕ ಇತ್ಯಾದಿ), ಅಪ್ಪಟ ಮನುಷ್ಯಪ್ರೀತಿಯ (ಮನುಜ ನೇಹಿಗ, ಇವರ ಮಗನ ಹೆಸರು!) ಕಲಾವಿದ. ಇವರು ಸ್ವಂತ ವಾಸಕ್ಕೆ ಕಟ್ಟಿಕೊಳ್ಳುವಲ್ಲೂ ರೂಪಿಸಿದ್ದು ‘ರಂಗಮನೆ’ ಎಂಬ ವಿಶಿಷ್ಟ ಆವರಣ. ಇದನ್ನು ನಾನು ಹಿಂದೆ ಕಂಡವನೇ ಮತ್ತು ಅಲ್ಲಿ ನಡೆಯುವ ಕಲಾಪಗಳೂ ನನಗೆ ಸದಾ ಕುತೂಹಲಕಾರಿಯವೇ ಇತ್ತು. ಆದರೆ ಮಂಗಳೂರಿನಿಂದ ಅಲ್ಲಿಗಿರುವ ಭೌತಿಕ ಅಂತರ (ಸುಮಾರು ಎರಡು ಗಂಟೆಯ ಪ್ರಯಾಣಾವಧಿ) ಮತ್ತು ಅವೇಳೆಗಳಲ್ಲಿ 

16 July 2018

ಮೂಡಾಯಿಯ ಕಗುರಾಕ್ಕೆ ತೆಂಕು, ಬಡಗುಗಳ ಯಕ್ಷ ಸಲಾಂ!


ದಿನವಿಡೀ ಭೋರ್ಗುಟ್ಟುತ್ತಿತ್ತು ಮಳೆ, ಸಹಜವಾಗಿ ೭-೭-೧೮ರ ಸಂಜೆ ಡಾನ್ ಬಾಸ್ಕೋ ಸಭಾಂಗಣ ಪ್ರೇಕ್ಷಾವೃಂದದ ಕೊರತೆಯಲ್ಲಿ ಸೊರಗಿತ್ತು. ಆದರೇನು ಆ ಸಂಜೆಯ (ನಾಲ್ಕರಿಂದ ಸುಮಾರು ಎಂಟು ಗಂಟೆಯವರೆಗೆ) ಕಲಾಪದ ಪ್ರಧಾನ ಕಣ್ಮಣಿಯಾಗಿ, ಸಮ್ಮಾನಿತರಾಗಲಿದ್ದ, ಸುದೂರದ ಜಪಾನಿನ ಪ್ರೊ| ಸುಮಿಯೋ ಮೊರಿಜಿರಿ, ಸಪತ್ನೀಕರಾಗಿ ಸಕಾಲದಲ್ಲಿ ಬಂದಿದ್ದರು. ಅಧ್ಯಕ್ಷತೆ ವಹಿಸಲಿದ್ದ ಪ್ರೊ| ಬಿ.ಎ. ವಿವೇಕ ರೈ, ಸಮ್ಮಾನದ ನುಡಿಮಾಲೆ ಹೆಣೆಯುವ ಪ್ರೊ| ಪುರುಷೋತ್ತಮ ಬಿಳಿಮಲೆ
ಮತ್ತು ಪ್ರೊ| ಚಿನ್ನಪ್ಪ ಗೌಡರೂ ಉತ್ಸುಕರಾಗಿಯೇ ಸೇರಿಕೊಂಡಿದ್ದರು. ಒಟ್ಟು ಕಲಾಪವನ್ನು ಶುದ್ಧ ಪ್ರೀತಿಯಿಂದ ಸಂಘಟಿಸಿದ ಕಲಾಗಂಗೋತ್ರಿ ಬಳಗ (ಸೋಮೇಶ್ವರ-ಉಚ್ಚಿಲ, ಮಂಗಳೂರು), ಕರೆಯೋಲೆಯ ಸಮಯ ನಿಷ್ಠೆ ಕಾಯ್ದುಕೊಂಡು, ಮೂರು ಹಂತದ ಕಲಾಪಕ್ಕಿಳಿದೇ ಬಿಟ್ಟಿತು. 

ಸುಮಾರು ಎರಡು ದಶಕಗಳ ಕಾಲ ಯಕ್ಷಗಾನ, ದೈವಾರಾಧನೆಗಳನ್ನು ಅಧ್ಯಯನ ಮಾಡಿ, ಜಪಾನೀ ಭಾಷೆಯಲ್ಲಿ ಎರಡು ಉದ್ಗ್ರಂಥಗಳನ್ನೇ ಬರೆದು, ಪ್ರಕಟಿಸಿದ

06 July 2018

ಮೊರಿಜಿರಿ ಮತ್ತು ಹಯಾಚಿನ್ ಟಕೆ ಕಗುರ

ಶನಿವಾರ (೭-೭-೧೮) ಸಂಜೆ ನಾಲ್ಕಕ್ಕೆ ಮಂಗಳೂರಿನ ಡಾನ್ ಬಾಸ್ಕೋ ಹಾಲಿನಲ್ಲಿ ‘ಮೊರಿಜಿರಿ ಸಮ್ಮಾನ’ 


ಹಯಾಚಿನ್ ಟಕೆ ಕಗುರ - ಜಪಾನೀ ಆರಾಧನಾ ನೃತ್ಯ, ಇದರ ಒಂದು ತಂಡ (ಸುಮಾರು ಹದಿನೈದು ಮಂದಿ), ಈ ವಲಯದಲ್ಲಿ ಸುಮಾರು ಮೂರು ವರ್ಷಗಳ ಹಿಂದೆ, ಅದೇ ಪ್ರಥಮವಾಗಿ ನಮ್ಮ ವಲಯದಲ್ಲಿ ತಿರುಗಾಟ ನಡೆಸಲು ಏಕೈಕ ಕಾರಣ ಜಪಾನೀ ಪ್ರೊ| ಸುಮಿಯೋ ಮೊರಿಜಿರಿ.
ಸುಮಾರು ಎರಡೂವರೆ ದಶಕಗಳ ಹಿಂದೆ ಕೇರಳದ ಜನಪದ ಕಲೆಗಳ ಅಧ್ಯಯನಕ್ಕೆಂದು ಭಾರತಕ್ಕೆ ಬಂದಿದ್ದರಂತೆ ಈ ವಾಮನಮೂರ್ತಿ ಮೂರ್ತಿ. ಆದರೆ ಅವರೊಳಗಿನ ತ್ರಿವಿಕ್ರಮ ನಮ್ಮ ವಲಯದ ಯಕ್ಷಗಾನ, ಭೂತಾರಾಧನೆಗಳತ್ತ ಹೆಜ್ಜೆಗಳನ್ನಿಟ್ಟದ್ದು, ಇಲ್ಲಿನ ಯಕ್ಷಗಾನ ತಂಡವನ್ನು ಜಪಾನಿಗೆ ಕರೆಸಿಕೊಂಡದ್ದು, ಅಲ್ಲಿನ ಅಸಂಖ್ಯ ವಿದ್ಯಾರ್ಥಿಗಳನ್ನು ಇಂದಿಗೂ ಪ್ರೇರಿಸುತ್ತಿರುವುದು, ಆ ಕುರಿತು ಜಪಾನೀ ಭಾಷೆಯಲ್ಲಿ ಉದ್ಗ್ರಂಥಗಳಿಗೆ ಕಾರಣರಾದದ್ದು, ವೈಯಕ್ತಿಕವಾಗಿ ನನ್ನ ಅಂಗಡಿಯ ಪುಸ್ತಕಗಳಿಗೆ ದೊಡ್ಡ

09 June 2018

ರಂಗಾಯಣದ ಮರಿಗಳಿಗೆ ಜೈ!


ರಂಗಾಯಣ ಮೈಸೂರು, ಇದರ ‘ಭಾರತೀಯ ರಂಗಶಿಕ್ಷಣ ಕೇಂದ್ರ’ದ ಯೋಜನೆಯಲ್ಲಿ ಒಂಬತ್ತನೇ ಯುವ ನಾಟಕಕರ್ಮಿಗಳ ತಂಡ (೨೦೧೭-೧೮) ಸಜ್ಜಾಗಿ, ಇದೇ ಮೇ ಮೂವತ್ತೊಂದರಂದು ಲೋಕಾರ್ಪಣವಾಗಿದೆ. ಸುಮಾರು ಇಪ್ಪತ್ತು ಮಂದಿ, ಒಂದು ವರ್ಷದ ಅವಧಿಯಲ್ಲಿ, ನಾಟಕ ಶಿಕ್ಷಣದ ಕಡುಪಾಕವನ್ನು ರಂಗಾಯಣದ ಹಿರಿಯ ಮತ್ತು ಹೊರಗಿನ ಅನುಭವೀ ರಂಗಕರ್ಮಿಗಳಿಂದ ಪಡೆದಿದ್ದಾರೆ. ತಂಡ ಅಧ್ಯಯನದ ಭಾಗವಾಗಿ ನಾಲ್ಕು ವೈವಿಧ್ಯಮಯ ಪೂರ್ಣ ನಾಟಕಗಳಲ್ಲಿ, ಸಾರ್ವಜನಿಕ
ಪ್ರದರ್ಶನಕ್ಕೂ ಒಡ್ಡಿಕೊಳ್ಳುವಂತೆ ಸಜ್ಜಾಗಿತ್ತು. ಹಿಂದೆಲ್ಲ ಮೈಸೂರಿಗೇ ಸೀಮಿತಗೊಳ್ಳುತ್ತಿದ್ದ ಆ ಪ್ರದರ್ಶನಗಳು (ಒಂದು - ‘ಜಟಾಯು ಮೋಕ್ಷ’ವನ್ನುಳಿದು) ಇದೇ ಮೊದಲು ಮೊನ್ನೆ ಮೂರು ದಿನ (ಮೇ ೨೮, ೨೯ ಮತ್ತು ೩೦) ಮಂಗಳೂರಿಗೆ ಒದಗಿತ್ತು. ಆತಿಥೇಯತ್ವವನ್ನು ವಹಿಸಿಕೊಂಡವರು ಜರ್ನಿ ಥೇಟರ್ ಮತ್ತು ಅರೆಹೊಳೆ ಪ್ರತಿಷ್ಠಾನ. ಆ ಯುವಪಡೆ, ಹಳೆಗಾಲದ ಡಾನ್ ಬಾಸ್ಕೋ ಹಾಲಿನ ಮಿತಿ ಮತ್ತು ಅಕಾಲಿಕವಾಗಿ ಬಂದ ಭಾರೀ ಮಳೆಯಿಂದ ಸೊರಗಿದ ಪ್ರೇಕ್ಷಾವರ್ಗದ ಎದುರೂ ಕುಂದದ

12 October 2017

ಜ್ಞಾನಕಡಲಿಗೆ ಹೆಗ್ಗೋಡಿನ ಹೊಸ ಹನಿಗಳು.....

ನೀನಾಸಂನ ವಾರ್ಷಿಕ ಸಂಸ್ಕೃತಿ ಶಿಬಿರ ಅದರ ವಾರ್ಷಿಕ ತಿರುಗಾಟ ನಾಟಕಗಳ ನಾಂದಿಯೂ ಹೌದು. ಎಂದಿನಂತೆ ಈ ವರ್ಷದ ಶಿಬಿರ ಅಕ್ಟೋಬರ್ ಒಂದರಿಂದ ನಡೆಯಲಿದೆ ಎಂದು ತಿಳಿಯುತ್ತಿದ್ದಂತೆ, ಸಂಚಿ ಬಳಗದ ದಾಖಲೀಕರಣದ ದಿನಾಂಕವೂ ಸೆಪ್ಟೆಂಬರ್ ೨೬ಕ್ಕೇ ನಿಗದಿಗೊಂಡಿತು. ಅದು ಎಂದಿನಂತೆ ಸಂಚಿ ದಾಖಲೀಕರಣಕ್ಕಾಗಿ ವಿಶೇಷ ಪ್ರದರ್ಶನ (ಸಾರ್ವಜನಿಕರಿಗಿಲ್ಲ) ಮತ್ತು ದಾಖಲೀಕರಣದ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಗರಿಷ್ಠ ಪ್ರದರ್ಶನಗಳ ವ್ಯವಸ್ಥೆಯೂ ಆಗಿರುತ್ತದೆ. ಸಂಚಿ ಫೌಂಡೇಶನ್, ಭಿನ್ನ ಕಾರ್ಯವಲಯಗಳ ಆದರೆ ಸಾಂಸ್ಕೃತಿಕ ಕನ್ನಡ ಕಟ್ಟುವಲ್ಲಿ ಏಕಾಸಕ್ತಿಯ ಮೂವರ ಕೂಟ. ಸಂಚಿಯಲ್ಲಿ ದಾಖಲೀಕೃತ ಮಾಹಿತಿಯ ಅಂತರ್ಜಾಲ ನಿರ್ವಹಣೆ ಗಣಕತಜ್ಞ ಓಂಶಿವಪ್ರಕಾಶ್ ನಡೆಸಿದರೆ, ವೈಚಾರಿಕ ಹಂದರ ಕಟ್ಟುವವರು ಪ್ರಜಾವಾಣಿ ಬಳಗದ ಬಹುಶ್ರುತ ಸಂಪಾದಕ ಎನ್.ಎ.ಎಂ ಇಸ್ಮಾಯಿಲ್.

05 September 2017

ನಾಟ್ಯಾಚಾರ್ಯ ಮುರಲೀಧರ ರಾವ್ ಸ್ಮರಣೆ


[ಖ್ಯಾತ ನಾಟ್ಯಗುರು ಕೆ. ಮುರಲೀಧರ ರಾವ್ ಈಚೆಗೆ (ಮೇ ೧, ೨೦೧೭) ನಿಧನರಾದರು. ಮುರಲೀಧರರಾಯರು ನಾಟ್ಯಕೆ ಗುರುವೆನಲು ಬರೆದ ಮತ್ತು ರೂಪಿಸಿದ (ರೇಖಾಚಿತ್ರ ಹಾಗೂ ಛಾಯಾಚಿತ್ರಗಳೂ ಅವರವೇ) ‘ನೃತ್ಯಲೋಕ’ದ ಪ್ರಕಾಶಕ ನಾನು. ಅವರ ಗಣ್ಯ ಶಿಷ್ಯವರ್ಗದಲ್ಲಿ ಹೆಸರಾಂತ ಶ್ರೀವಿದ್ಯಾಮುರಲೀಧರ್ ಈಚೆಗೆ (೨-೯-೨೦೧೭) ಮಂಗಳೂರ ಪುರಭವನದಲ್ಲಿ ‘ಗುರುಸ್ಮರಣೆ’ಯನ್ನು ತುಂಬ ಅರ್ಥಪೂರ್ಣವಾಗಿ ನಡೆಸಿದರು. ಆ ಕಲಾಪದ ದೊಡ್ಡ ಹಾಸಿನಲ್ಲಿ ಅಯಾಚಿತವಾಗಿ ನನಗೂ ಒಂದು ಸಣ್ಣ ಅಭಿಪ್ರಾಯ ಮಂಡನೆಗೆ ಅವಕಾಶ ಒದಗಿದ ಬಲದಲ್ಲಿ, ಇಲ್ಲಿ ಮುರಳೀಧರರಾಯರ ಸ್ಮರಣೆಗೊಂದು ದಾಖಲೀಕರಣದ ನೆಲೆ ಕೊಡಲು ಪ್ರಯತ್ನಿಸಿದ್ದೇನೆ.]

ದ್ರೋಣರ ಪಾದಕ್ಕೆ ಬಾಣ ಹೊಡೆದಂತೆ....

ಹದಿನೈದು ದಿನಗಳ ಹಿಂದೆ ಶ್ರೀವಿದ್ಯಾ ಮುರಲೀಧರ್ ನನಗೆ ದೂರವಾಣಿಸಿ "ಗುರುಸ್ಮರಣೆ ಮಾಡ್ತಾ ಇದ್ದೇವೆ, ನೀವೂ ಭಾಗವಹಿಸಬೇಕು" ಎಂದು ಕರೆದರು. ಆಗ ನನ್ನ ಮನಸ್ಸು ೧೯೯೮ರ ಮೇ ೨೮ರಷ್ಟು ಹಿಂದಕ್ಕೆ ಜಾರಿತು. ಅಂದು ನನಗೆ ಅಷ್ಟೇನೂ ಪರಿಚಯವಿಲ್ಲದ ನಾಟ್ಯಾಚಾರ್ಯ ಕಾಸರಗೋಡು (ಕೆ.) ಮುರಲೀಧರರಾವ್ ಎನ್ನುವವರು, ಮೈಸೂರಿನಲ್ಲಿದ್ದುಕೊಂಡು ಬರೆದ, ಮಂಗಳೂರಿನ ನನ್ನ ಬಡ-ಪ್ರಕಾಶನ ವ್ಯವಸ್ಥೆ - ಅತ್ರಿಗೆ, ಬೃಹತ್ ಗ್ರಂಥವೇ ಆದ ನೃತ್ಯಲೋಕದ ಲೋಕಾರ್ಪಣೆ. ಆಗ "ಈಕೆ ಮಡಿಕೇರಿಯ ಕಾಲೇಜ್
ಹುಡುಗಿ, ಮುರಳೀಧರರಾಯರ ಶಿಷ್ಯೆ, ಪುಸ್ತಕದಲ್ಲಿ ಪ್ರಕಟವಾದ ಚಿತ್ರಗಳ ರೂಪದರ್ಶಿ" ಎಂದು ನನ್ನ ತಂದೆ (ಜಿಟಿನಾ) ಪರಿಚಯಿಸಿದ್ದು ಶ್ರೀವಿದ್ಯಾರಾಮನ್ನರನ್ನು (ಹೆಸರಿನ ಉತ್ತರಾರ್ಧ ಆಕೆಯ ತಂದೆಯದ್ದು). ಅಂದು ಸಭಾಕಲಾಪದ ಬೆನ್ನಿಗೆ ಗುರುವಿನ ಪ್ರತಿಭಾ ಅಭಿವ್ಯಕ್ತಿಯಾಗಿ ರಂಗದಲ್ಲಿ ನೃತ್ಯ ಕಲಾಪದೊಂದಿಗೆ ಮೆರೆದವರೂ ಈಕೆಯೇ. ಅನಂತರದ ದಿನಗಳಲ್ಲಿ ಶ್ರೀವಿದ್ಯಾ ಮಂಗಳೂರು ವಿವಿನಿಲಯದ ಸ್ನಾತಕೋತ್ತರ ವಿದ್ಯಾರ್ಥಿನಿ, ಸಂಶೋಧನಪಟು, ಎಲ್ಲೋ ಅಧ್ಯಾಪಿಕೆ ಎಂದೆಲ್ಲಾ ಕಾಣುತ್ತಿದ್ದಂತೆ ಗೃಹಿಣಿಯಾಗಿ ಶ್ರೀವಿದ್ಯಾಮುರಲೀಧರ್ (ಈಗ ಹೆಸರಿನ ಉತ್ತರಾರ್ಧ ಆಕೆಯ ಪತಿಯದ್ದು) ಅನ್ನಿಸಿಕೊಂಡದ್ದೂ ಆಯ್ತು. ಮತ್ತೆ ಪತಿಯನ್ನನುಸರಿಸಿ ವಿದೇಶದಲ್ಲಿ ಕೆಲಕಾಲ ಇದ್ದದ್ದು, ಮರಳಿ ಮಂಗಳೂರನ್ನೇ ಕಾರ್ಯಕ್ಷೇತ್ರವಾಗಿ ಆರಿಸಿಕೊಂಡದ್ದೂ ಆಯ್ತು.

03 August 2017

ನೀನಾಸಂನಲ್ಲಿ ನಾಟಕಗಳ ಮಳೆ, ಮಳೆ ನೀರ ಕೊಯ್ಲು!

“ಹೆಗ್ಗೋಡಿನಲ್ಲಿ ಮತ್ತೆ ಮೂರು ನಾಟಕಗಳ, ನಾಲ್ಕು ಪ್ರದರ್ಶನ” ಎಂದು ಅಭಯ (ಮಗ) ನಮಗೆ ಕೊಟ್ಟದ್ದು ವೈಯಕ್ತಿಕ ಸೂಚನೆ ಮಾತ್ರ. ಆದರೆ ನಾನು, ದೇವಕಿ ಎಂದಿನಂತೆ ಅದನ್ನು ಆಮಂತ್ರಣವಾಗಿಯೇ ಗ್ರಹಿಸಿ, ಮಂಗಳೂರಿನಿಂದ ಬಸ್ಸು ಹಿಡಿದು ೧೬-೭-೧೭ರ ಮಧ್ಯಾಹ್ನಕ್ಕೇ ನೀನಾಸಂ ಸೇರಿಕೊಂಡೆವು. ಅಲ್ಲಿನ ಪ್ರದರ್ಶನಗಳನ್ನು ದಾಖಲೀಕರಣಕ್ಕೊಳಪಡಿಸುವ ಯೋಜನೆಯಂತೆ, ಅಭಯ ಅವನ ಕ್ಯಾಮರಾ ತಂಡದೊಡನೆ ಹಿಂದಿನ ರಾತ್ರಿ ಬೆಂಗಳೂರು ಬಿಟ್ಟು, ಅಂದೇ ಬೆಳಿಗ್ಗೆ ಅಲ್ಲಿಗೆ ತಲಪಿದ್ದ. ಅವನಿಗೆ ನೀನಾಸಂ ಕೊಟ್ಟಿದ್ದ ವಸತಿ ವ್ಯವಸ್ಥೆಗೆ ನಾವೂ ಸೇರಿಕೊಂಡೆವು.

27 July 2017

ತಾಳವಾದ್ಯಗಳ ಸವ್ಯಸಾಚಿ ಎನ್ .ವಿ. ಮೂರ್ತಿರಾಯರು


-     ಭಾರವಿ ದೇರಾಜೆ

[ಮಹಾರಾಜಾಕಾಲೇಜಿನ ನನ್ನ ಸಹಪಾಠಿ, ಗೆಳೆಯ ದೇರಾಜೆ ಮೂರ್ತಿಯ ಹಿರೀ ಮಗ - ಭಾರವಿ. ಈತ ಸಮಾಜಸೇವಾ ಅಧ್ಯಯನಗಳ ಕಾಲೇಜೆಂದೇ ಖ್ಯಾತವಾದ ಮಂಗಳೂರಿನ ರೋಶನಿ ನಿಲಯದ ಸ್ನಾತಕೋತ್ತರ ಪದವೀಧರ. ಅದಕ್ಕೂ ಮಿಗಿಲಾಗಿ ಅಲ್ಲಿಂದ ಹೊರ ಬಂದ ಕೂಡಲೇ `ವೃತ್ತಿ ಭದ್ರತೆ’ ಎಂಬ ಕಿಸೆ ತುಂಬ ಕಾಸು, ಕಣ್ತುಂಬಾ ನಿದ್ರೆಯ ತಾಪೇದಾರಿ ನೆಚ್ಚದೆ, ತನ್ನ ಪದವಿಯನ್ನು ನಿತ್ಯ ಅಗ್ನಿಪರೀಕ್ಷೆಗೊಳಪಡಿಸುವಂತೆ, ಅದೂ ಎಳೆವರಯದಲ್ಲೇ (`ಚಿರಂತನ’ ಟ್ರಸ್ಟ್, ಸುರತ್ಕಲ್) ವೃದ್ಧಾಶ್ರಮ ಕಟ್ಟಿ, ನಡೆಸುತ್ತಲಿದ್ದಾನೆ. ಇನ್ನು ಅಜ್ಜ (ದೇರಾಜೆ ಸೀತಾರಾಮಯ್ಯ), ಅಪ್ಪ, ಮಾವ (ಐಂದ್ರಜಾಲಿಕ ಶಂಕರ್) ಇವರಿಂದ ಆನುವಂಶಿಕವೋ ಎಂಬಂತೆ ಹಲವು ಕಲಾಪರಿಣತಿಗಳನ್ನು ಸಾಧಿಸಿದ್ದಾನೆ ಮತ್ತು ಕೆಲವು ಕೂಟ ಸಂಘಟನೆಗಳಲ್ಲೂ ಯಶಸ್ವಿಯಾಗಿದ್ದಾನೆ. ಅಂಥವನಿಗೆ ತನ್ನ ವಿಶೇಷ ಪಾಂಡಿತ್ಯದ - ತಬ್ಲಾ ವಾದನದಲ್ಲಿ, ನಮ್ಮ ನಡುವೆ ಇದ್ದೂ ಮರವೆಗೆ ಸಂದಂತಿದ್ದ ಹಿರಿಯ ಕಲಾಕಾರರೊಬ್ಬರನ್ನು ಕಂಡಾಗ ಹೇಗನ್ನಿಸಿರಬೇಕು! ಅವರ ಬಗ್ಗೆ ಇದುವರೆಗಿನ ತನ್ನ ಅವಜ್ಞೆ, ಬಹುತೇಕ ಸಾರ್ವಜನಿಕರದ್ದೂ ಹೌದೆಂದೇ ಆತನಿಗೆ ಸರಿಯಾಗಿಯೇ ಕಾಣಿಸಿದೆ. ಹಾಗಾಗಿ ಒಂದು ಸಂಕ್ಷಿಪ್ತ ವ್ಯಕ್ತಿ ಪರಿಚಯವನ್ನು ಲೇಖಿಸಿದ್ದಾನೆ. ಈಗ ಓದಿ, ಕೇಳಿ ಭಾರವಿಯ ಬರಹ - ಅಶೋಕವರ್ಧನ]

03 June 2016

ಶಯರಾಬಾನೊ ಮತ್ತು ಚಂದ್ರಗಿರಿಯ ತೀರದಲ್ಲಿ

ಕತೆ, ಕಾವ್ಯ, ಕಾದಂಬರಿಗಳನ್ನು (ಏನನ್ನೂ) ನಾಟಕವಾಗಿ ಪ್ರಯೋಗಿಸುವುದರಲ್ಲಿ ನನಗೆ ತಿಳಿದಂತೆ ಬಹುಖ್ಯಾತಿ ಗಳಿಸಿದವರು ಬಿವಿ ಕಾರಂತ. ಇಂದು ಅದು ಹೊಸ ವಿಚಾರವಲ್ಲ. ಹಾಗೇ ಸಾರಾ ಅಬೂಬಕ್ಕರ್ ಅವರ ಚಂದ್ರಗಿರಿಯ ತೀರದಲ್ಲಿ ಕಾದಂಬರಿ ಸುಮಾರು ಒಂದು ವರ್ಷಕ್ಕೂ ಮೊದಲೇ ರೂಪ ಕೋಟೇಶ್ವರರಿಂದ ರಂಗರೂಪಗಳಿಸಿದ್ದು, ನಯನ ಜೆ. ಸೂಡರಿಂದ ನಿರ್ದೇಶನಗೊಂಡು ಬೆಂಗಳೂರಿನಲ್ಲಿ ಹಲವು ಪ್ರದರ್ಶನಗಳ ಜನಪ್ರಿಯತೆಯನ್ನು ಗಳಿಸಿದ್ದೂ ಹೊಸತಲ್ಲ. ಆ ಪ್ರಯೋಗ, ಕಾದಂಬರಿ ಉಲ್ಲೇಖಿಸುವ ಈ ವಲಯಕ್ಕೇ ಬಂದದ್ದು, ಅದರ ಭಾವ ಇನ್ನೂ ಜೀವಂತವಾಗಿರುವ ಪರಿಸರದಲ್ಲೇ ದಿಟ್ಟವಾಗಿ ರಂಗವೇರಿದ್ದು, ಅದರ ಮೂಲ ಲೇಖಕಿ – ಸಾರಾ ಅವರ ಎದುರೇ ಪ್ರದರ್ಶನಕ್ಕೆ ನಿಂದದ್ದು ನಿಜಕ್ಕೂ ಹೊಸತು ಹಾಗೂ ಸಂತಸದ ವಿಚಾರ. `ಚಂದ್ರಗಿರಿಯ ತೀರದಲ್ಲಿ’ ನಾಟಕ ೨೭-೫-೨೦೧೬ರಂದು ಡಿವೈಎಫ್‍ಐ ಸಂಯೋಜನೆಯಲ್ಲಿ, ಮಂಗಳೂರು ಪುರಭವನದಲ್ಲಿ ಹೆಚ್ಚುಕಡಿಮೆ ತುಂಬಿದ ಗೃಹದಲ್ಲಿ ಪ್ರದರ್ಶನ ಕಂಡಿತು.

26 February 2016

ಯಕ್ಷಗಾನ ಪುನರುತ್ಥಾನದ ಸಿಂಹ ಗುರುತುಗಳು

(ಉಡುಪಿ ಯಕ್ಷಗಾನ ಕೇಂದ್ರ, ಪರ್ಯಾಯವಾಗಿ ಗುರು ಬನ್ನಂಜೆ ಸಂಜೀವ ಸುವರ್ಣರ ಎರಡು ಪ್ರದರ್ಶನ-ಪ್ರಯೋಗಗಳ ಕುರಿತ ಸಾಮಾನ್ಯ ಗ್ರಹಿಕೆಯ ಸಾಮಯಿಕ ವಿಶ್ಲೇಷಣೆ)

ಪೂರ್ವಾರ್ಧ ಲಂಕಿಣಿಮೋಕ್ಷ:

ಮೊನ್ನೆಯಷ್ಟೇ (೨೧-೧-೨೦೧೬) ದಿಲ್ಲಿ ನಾಟಕಶಾಲೆಯ ವಿದ್ಯಾರ್ಥಿಗಳಿಗೆ ಯಕ್ಷಗಾನ ಹಿಡಿಸಿ, ಅಭಿಮನ್ಯುವಧ ನಡೆಸಿ (ವಿಶ್ಲೇಷಣೆ ಇಲ್ಲೇ ಉತ್ತರಾರ್ಧದಲ್ಲಿದೆ), ಪ್ರದರ್ಶನದ ಯಶಸ್ಸು ಇಲ್ಲಿ ಮಾತ್ರವಲ್ಲ ದಿಲ್ಲಿಯಲ್ಲೂ ಉರವಣಿಸುವಂತೆ ಮಾಡಿದವರು ಗುರು ಬನ್ನಂಜೆ ಸಂಜೀವ ಸುವರ್ಣ. ಅವರು ಇನ್ನೊಂದೇ ಯಕ್ಷ-ಪ್ರಯೋಗದ ವೀಕ್ಷಣೆಗೆ (೧೮-೨-೨೦೧೬) ಮತ್ತೆ ಫೋನಾಯಿಸಿದರು “ಈಗದ್ದು ನಮ್ಮ ಮಕ್ಕಳದ್ದೇ ಸಾರ್”. ಸುವರ್ಣರ ನಿಜದ ಕೌಟುಂಬಿಕ ಲೆಕ್ಕ ತೆಗೆದರೆ ಮಕ್ಕಳು ಎರಡೇ. ಆದರೆ ಎಲ್ಲೆಲ್ಲಿನ ಊಟಕ್ಕಿಲ್ಲದ, ವಿದ್ಯಾವಕಾಶ ನಿಲುಕದ ಮಕ್ಕಳು ಉಡುಪಿಯ ಈ ಯಕ್ಷಗಾನ ಕೇಂದ್ರದಲ್ಲಿ, ಅಲ್ಲೇ ನೆಲೆ ನಿಂತ ಸುವರ್ಣರ ಕುಟುಂಬದ ನೇರ ಸುಪರ್ದಿನಲ್ಲಿ ವಿಕಸಿಸುವುದನ್ನು ಕಂಡ ಯಾರೂ ಆಶ್ಚರ್ಯಪಡುವುದಿಲ್ಲ. ಆ ಮಕ್ಕಳಿಗೆ (ಎಲ್ಲ ಉಚಿತ) ಅಶನ, ವಸನ, ವಸತಿ ಮತ್ತು ಶಾಲಾಶಿಕ್ಷಣವನ್ನೂ ಕಲ್ಪಿಸಿ, ಕೊನೆಯಲ್ಲಿ ಯಕ್ಷಶಿಕ್ಷಣವನ್ನೂ ಕೊಡುವಲ್ಲಿ ಸಂಜೀವರಿಗೆ ಅವರು ಅನ್ಯರಾಗುವುದು ಸಾಧ್ಯವೂ ಇಲ್ಲ.

30 October 2015

ಸಿನಿಮಾವಲ್ಲ, ದಾಖಲೀಕರಣ!


ಸಿನಿಮಾವಲ್ಲ, ದಾಖಲೀಕರಣ!
(ನೀನಾಸಂ ನಾಟಕಗಳ ದಾಖಲೀಕರಣ, ಹಿಂದೆ, ಮುಂದೆ - ೨)

ನೀಲಕಂಠೇಶ್ವರ ನಾಟ್ಯ ಸಂಘ, ಕಿರಿದರಲ್ಲಿ ನೀನಾಸಂ, ತನ್ನ ವರ್ಷ ಪೂರ್ಣ ರಂಗ ಶಿಕ್ಷಣ, ಅಕ್ಷರ ಪ್ರಕಾಶನದ ಮೂಲಕ ಸಾಹಿತ್ಯ ಸೇವೆ ಮತ್ತು ವೈಚಾರಿಕ ಚಿಂತನೆಗಳಿಗೊಂದು ದೊಡ್ಡ ಸಾರ್ವಜನಿಕ ಭಾಗೀದಾರಿಕೆಗೆ ಕೊಡುವ ಅವಕಾಶಕ್ಕೆ ಸದ್ಯದ ಹೆಸರು ಸಂಸ್ಕೃತಿ ಶಿಬಿರ.

ಇದು ವರ್ಷಾವಧಿ ಜಾತ್ರೆಯಂತೆ ನಡೆಸಲೇ ಬೇಕಾದ ಹರಕೆ ಏನು ಅಲ್ಲ. ಅನುಲ್ಲಂಘನೀಯ ವಿಧಿ ನಿಷೇಧಗಳು, ಔಪಚಾರಿಕ ಉದ್ಘಾಟನೆ ಸಮಾರೋಪ ಸಮಾರಂಭಗಳು, ಸಾವಿರದೊಂದು ಋಣಸಂದಾಯಕ್ಕೆಂದೇ ಮಂತ್ರಿ, ಉದ್ಯಮಿಗಳಿಗೆ ವೇದಿಕೆಯ ಮೇಲೆ ಸ್ಥಾನ ಅಥವಾ ಮಾತಿಗವಕಾಶ, ಸಮ್ಮಾನ ಇತ್ಯಾದಿ ಏನೂ ಇಲ್ಲಿ ಸಲ್ಲುವುದಿಲ್ಲ. ಆದರೂ ಮೂರು ದಶಕಗಳಿಗೂ ಮಿಕ್ಕು ಕಾಲದಿಂದ ನಿರಂತರವಾಗಿ, ಇತಿಹಾಸದ ಭಾರ ತಲೆಯ ಮೇಲೆ ಹೊತ್ತುಕೊಳ್ಳದೇ ಪ್ರತಿ ಸಲವೂ ಹೊಸತೆಂಬ ಭಾವದಿಂದಲೇ ನಡೆದು ಬಂದಿದೆ. ತೀರಾ ಮೊದಲು ಸಿನಿಮಾ ರಸಗ್ರಹಣದಿಂದ ತೊಡಗಿದ ಈ ಶಿಬಿರಸರಣಿ, ನಾಟಕ, ಸಾಹಿತ್ಯ, ಸಂಗೀತ ಎಂದಿತ್ಯಾದಿ ಹಾಯ್ದು ಇಂದು `ಸಂಸ್ಕೃತಿ’ ಹೆಸರಿನಲ್ಲಿ, ಆದರೆ ಎಂದೂ ಮನೋವಿಕಾಸದ ಉಪಯುಕ್ತತೆಗೆ ಎರವಾಗದಂತೆ ಗಂಭೀರವಾಗಿ ನಡೆಯುತ್ತಲೇ ಬಂದಿದೆ. ಈ ವರ್ಷದ ಸಂಸ್ಕೃತಿ ಶಿಬಿರಕ್ಕೆ ನೀನಾಸಂ ಮನೆ ಹಬ್ಬದಂತೇ ಅಣಿಗೊಳ್ಳುತ್ತಿತ್ತು.

16 October 2015

ಕುಂಭಾಸಿ, ಕಮಲಶಿಲೆ, ನಗರ

(ನೀನಾಸಂ ನಾಟಕಗಳ ದಾಖಲೀಕರಣ, ಹಿಂದೆ ಮತ್ತು ಮುಂದೆ, ಭಾಗ -೧)
ಅಭಯಸಿಂಹ (ಮಗ), ಇಸ್ಮಾಯಿಲ್ ಮತ್ತು ಓಂಶಿವಪ್ರಕಾಶ್ ಸೇರಿಕೊಂಡು ಕಟ್ಟಿದ ಸಂಚಿ ಫೌಂಡೇಶನ್ ನಿಮಗೆ ತಿಳಿಯದ್ದೇನಲ್ಲ. ಈ ಸಲ ಅದರ ಮಹತ್ತ್ವಾಕಾಂಕ್ಷೆಯ ಕಲಾಪವಾಗಿ ಹೆಗ್ಗೋಡಿನ, ವಿಶ್ವಖ್ಯಾತಿಯ ನೀನಾಸಂ ತಿರುಗಾಟದ, ೨೦೧೫ನೇ ಸಾಲಿನ ನಾಟಕಗಳ ದಾಖಲೀಕರಣ ಯೋಜಿಸಿದ್ದರು.
ಒಂದೆರಡು ತಿಂಗಳ ಹಿಂದೆ ಅಭಯ ನೀನಾಸಂನಲ್ಲೇ ಕಿರುಚಿತ್ರ ನಿರ್ಮಾಣದ ಕಮ್ಮಟವೊಂದನ್ನು ನಡೆಸಿದ್ದ. ಅದರ ಅನುಭವದ ಬಲದಲ್ಲಿ ನೀನಾಸಂ ಮುಖ್ಯಸ್ಥ - ಕೆ.ವಿ. ಅಕ್ಷರ, ದಾಖಲೀಕರಣದ ಯೋಜನೆಯನ್ನು ಪೂರ್ಣ ಹೃದಯದಿಂದಲೇ ಒಪ್ಪಿ, ಅಪ್ಪಿಕೊಳ್ಳುವವರಿದ್ದರು. ಆದರೆ ನೀನಾಸಂಗೆ ಎಂದೂ ಬಾರದ ಆರ್ಥಿಕ ಅಸಹಾಯಕತೆ ಇಂದು ಬಂದಿದೆ! ಕಾರಣ ಇಷ್ಟೆ: ಇಂಥವಕ್ಕೆಲ್ಲ ಪೋಷಕ ಜೀವಾತುಗಳನ್ನು ಕೊಡಲೆಂದೇ ಕೇಂದ್ರ ಸರಕಾರ ಬಹುಮುಖಗಳನ್ನೇ ಹೊಂದಿದೆ. ಆದರೆ ಇಂದಿನ ದಿಲ್ಲಿ ದರ್ಬಾರಿಗೆ ಚತುರ್ಮುಖನ (ಸೃಷ್ಟಿಕರ್ತ) ದೇವಗುಣ ಬಿಟ್ಟು, ದಶಕಂಠನ (ವಿಧ್ವಂಸಕ) ರಕ್ಕಸಗುಣ ಆವಾಹನೆಯಾಗಿದೆ. ಬಹುರಂಗೀ ಭಾರತೀಯ ಸಾಂಸ್ಕೃತಿಕ ವೈವಿಧ್ಯಕ್ಕೆ ಕೇಸರಿ ಅಂಗಿ ಹೊಲಿಯುವ ಗದ್ದಲದಲ್ಲಿ ಕೇಂದ್ರ ಸರ್ಕಾರದ ಕಲಾಪೋಷಕ ಇಲಾಖೆ ನೀನಾಸಂ ಮನವಿಗೆ ಜಾಣ ಕಿವುಡು ತಾಳಿದೆ. ಆದರೆ ಸಂಚಿ ಟ್ರಸ್ಟ್ ಹಿಂದುಳಿಯಲಿಲ್ಲ. ಹಳ್ಳಿಯಂಗಳದಲ್ಲೇ ಇದ್ದುಕೊಂಡು, ಅಂತಾರಾಷ್ಟ್ರೀಯ ಮ್ಯಾಗ್ಸೇಸೆ ಪ್ರಶಸ್ತಿಯವರೆಗೆ ಕನ್ನಡ ಸಂಸ್ಕೃತಿಯನ್ನು ನಿರಪೇಕ್ಷವಾಗಿ ಶ್ರೀಮಂತಗೊಳಿಸಿದ ನೀನಾಸಂಗೆ ಬಹು ಸಣ್ಣ ಋಣಸಂದಾಯಕ್ಕೆ ಸಜ್ಜಾಯಿತು. ನಾಟಕಗಳ ದಾಖಲೀಕರಣ ಪರೋಕ್ಷವಾಗಿ ಕನ್ನಡಕ್ಕೇ ಬಹು ದೊಡ್ಡ ಆಸ್ತಿಯೂ ಆಗುವ ಸಾಧ್ಯತೆಯನ್ನು ಮನಗಂಡ ಸಂಚಿ ಟ್ರಸ್ಟ್, `ಸಾರ್ವಜನಿಕ ಬಿಕ್ಷೆ’ ನಡೆಸಿತು. ಸ್ವಂತ ಸೇವೆಯೊಡನೆ, ಕೊರತೆ ಬಂದಲ್ಲಿ ಸ್ವಂತ ಹಣವನ್ನೂ ತೊಡಗಿಸುವ ಉಮೇದು ತೋರಿತು.

http://www.ninasam.org/tirugata/current-productions/

ನೀನಾಸಂ ತನ್ನಳವಿಯೊಳಿರುವ ಎಲ್ಲ ಸವಲತ್ತುಗಳನ್ನು ಸಂಚಿ ಟ್ರಸ್ಟಿಗೆ ಮುಕ್ತಗೊಳಿಸಿತು. ಅದರಲ್ಲಿ ಮುಖ್ಯವಾದವು, ತಿರುಗಾಟದ ಎರಡು ಮತ್ತು ಶಿಬಿರದ ಒಂದು ನಾಟಕಗಳ ವಿಶೇಷ ಪ್ರದರ್ಶನ (೨-೧೦-೨೦೧೫) ಹಾಗೂ ದಾಖಲೀಕರಣದ ತಾಂತ್ರಿಕ ವರ್ಗಕ್ಕೆ ಉಚಿತ ಆತಿಥ್ಯ. ಈ ಅಪೂರ್ವ ಸನ್ನಿವೇಶದಲ್ಲಿ ಸೇರಿಕೊಳ್ಳುವ ಸಂಭ್ರಮಕ್ಕೆ, `ಅಳಿಯನೊಂದಿಗೆ ಗಿಳಿಯ’ ಎಂಬ ನೆಲೆಯಲ್ಲಿ ನಾನು ದೇವಕಿಯೂ ಅಕ್ಟೋಬರ್ ಒಂದರ ಬೆಳಿಗ್ಗೆ ಮಂಗಳೂರು ಬಿಟ್ಟೆವು.