Showing posts with label ಡಾರ್ಜಿಲಿಂಗ್. Show all posts
Showing posts with label ಡಾರ್ಜಿಲಿಂಗ್. Show all posts

26 June 2020

ಅರೆಸೈನಿಕನ ರೂಪಣೆಯಲ್ಲಿ ಮೈಸೂರು

(ಜಾತಿ ಮತಗಳ ಚಕ್ರಸುಳಿ ಮೀರಿ -೪) 


೧. ತಪ್ಪಿಸಿಕೊಳ್ಳಲಾಗದ ಕಂಬಳಿ ಪೆರೇಡ್ 


ಮಹಾರಾಜಾದಲ್ಲಿ ನಾನು ಕಾಲೇಜಿಗಿಂತ ಹೆಚ್ಚಿನ ಮುತುವರ್ಜಿಯಲ್ಲಿ ಎನ್.ಸಿ.ಸಿ ಸೇರಿದ್ದೆ. ಕಾರಣ ಗೊತ್ತಲ್ಲ - ತನ್ಮೂಲಕ ಪರ್ವತಾರೋಹಣ ಶಿಬಿರಕ್ಕೆ ಹೋಗುವುದು! ನಾನು ಬೆಂಗಳೂರಿನಲ್ಲಿದ್ದಾಗ ಕಡ್ಡಾಯ ಎನ್.ಸಿ.ಸಿ ಇತ್ತು. ಸಹಜವಾಗಿ ಸರಕಾರೀ ಕಾಲೇಜು ಒಂದಕ್ಕೇ ಒಂದು ಬಟಾಲಿಯನ್ ವ್ಯವಸ್ಥೆ ಇತ್ತು. ಆದರೆ ಮೈಸೂರಿಗೆ ಬರುವಾಗ ಕಡ್ಡಾಯ ರದ್ದಾಗಿತ್ತು. ಹಾಗಾಗಿ ನಮ್ಮ ಬಟಾಲಿಯನ್ನಿನ ವ್ಯಾಪ್ತಿಗೆ ಮೈಸೂರಲ್ಲದೆ ಸಮೀಪದ ಕೊಳ್ಳೇಗಾಲ, ಮಂಡ್ಯ ಮುಂತಾದ ಊರುಗಳ ಹಲವು ಕಾಲೇಜುಗಳೂ ಸೇರಿಕೊಂಡಿದ್ದವು. (ನನಗೆ ಅಗೋಚರ ಸ್ಪರ್ಧಿಗಳೂ ಇದ್ದರು!) ಮಹಾರಾಜಾದ ಹಾಜರಿ ಪುಸ್ತಕದಲ್ಲಿ ಸುಮಾರು ನಲ್ವತ್ತೈವತ್ತು ಹೆಸರಿದ್ದರೂ ನಿಯತ ಕವಾಯತುಗಳಿಗೆ ನಿಜ ಭಾಗಿಗಳು ಇಪ್ಪತ್ತು ಮೂವತ್ತನ್ನು ಮೀರುತ್ತಿರಲಿಲ್ಲ. 

22 January 2016

ಚಾರಣಿಗರ ಡಾರ್ಲಿಂಗ್ – ಡಾರ್ಜಿಲಿಂಗ್

ಅಶೋಕ ವರ್ಧನ ಮತ್ತು ಗಿರೀಶ್ ಪಾಲಡ್ಕ
ಜಂಟಿ ಕಥನದಲ್ಲಿ ಡಾರ್ಜಿಲಿಂಗ್ ಭಾಗ ಮೂರು

ಅಶೋಕವರ್ಧನ:

ನನ್ನ ಮೊದಲ ಎರಡೂ ಡಾರ್ಜಿಲಿಂಗ್ ಭೇಟಿಗಳು, ಒಂದು ಲೆಕ್ಕದಲ್ಲಿ ಸೋಲಿನ ಕತೆಗಳೇ ಆದದ್ದು ಕೇಳಿದ್ದೀರಿ. ಮೊದಲನೆಯದು ಅವಸರದ ಫಲವಾದರೆ, ಎರಡನೆಯದ್ದು ವಾಸ್ತವ ಮರೆತ ಬಹುನಿರೀಕ್ಷೆಯ ದೋಷ. ಆದರೆ ಗೆಳೆಯ ಗಿರೀಶ್ ಪಾಲಡ್ಕರಿಗೆ ಹಾಗಾಗಲಿಲ್ಲ. ಅದಕ್ಕೆ ನನ್ನದೇನು ವಗ್ಗರಣೆ, ಗಿರೀಶ್ ಮಾತುಗಳಲ್ಲೇ ಓದಿ ಅಥವಾ ಕೇಳಿ.

ಗಿರೀಶ್ ಪಾಲಡ್ಕ:

೨೦೧೦ ರಲ್ಲಿ ಡಾರ್ಜಿಲಿಂಗ್ಗೆ ಪೂರ್ವ ನಿಯೋಜಿತವಲ್ಲದ ಅನಿರೀಕ್ಷಿತ ಭೇಟಿಯ ಬಗ್ಗೆ ಹಿಂದೆ ಬರೆದಿದ್ದೆ. ಅದು  ಓರ್ವ ಸಾಮಾನ್ಯ ಪ್ರವಾಸಿಗನ ಅನುಭವಗಳಷ್ಟೆ. ಭಿನ್ನ ಸಂಸ್ಕೃತಿ, ಭಿನ್ನ ಪ್ರಕೃತಿಯ ಪ್ರದೇಶಗಳಲ್ಲಿ ಸಂಚಾರ ಮಾಡುವಾಗಿನ ಅನುಭವಗಳೂ ಭಿನ್ನವಾಗಿರುತ್ತವೆ ಮಾತ್ರವಲ್ಲ ವಿಶಿಷ್ಟವೂ ಅಗಿರಬಹುದು. ನಾನು ಕೆಲಸ ಮಾಡುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಕ್ರೀಡಾ ನಿಯಂತ್ರಣ ಮಂಡಳಿಯು ತನ್ನ ನೌಕರರಿಗಾಗಿ ಪ್ರತಿವರ್ಷ ಕ್ಷೇತ್ರ ಮಟ್ಟ ಹಾಗೂ ರಾಷ್ಟ್ರಮಟ್ಟದಲ್ಲಿ ಚಾರಣವನ್ನು ಆಯೋಜಿಸುತ್ತದೆ. ಬಯಸುವ ಎಲ್ಲರಿಗೂ ಭಾಗವಹಿಸಲು ಅವಕಾಶ ಸಿಗುವುದಿಲ್ಲ. ಕೆಲವೊಮ್ಮೆ ಅದೃಷ್ಟವೂ ಬೇಕಾಗಬಹುದು. ೨೦೧೪ ರಲ್ಲಿ ಆಯೋಜಿತವಾದ ಡಾರ್ಜಿಲಿಂಗ್ ಚಾರಣಕ್ಕೆ ಅರ್ಜಿ ಸಲ್ಲಿಸಿದ್ದ ನನಗೆ ಅದೇ ರೀತಿಯಲ್ಲಿ ಅವಕಾಶ ಲಭ್ಯವಾಯಿತು. ಜಲಪಾಯಿಗುರಿಯ ಸಿಂಡ್ರೆಲ್ಲಾ ಹೋಟೇಲಿಗೆ ಬಂದು ವರದಿಮಾಡಬೇಕೆನ್ನುವ ಆದೇಶದೊಂದಿಗೆ ಹಲವಾರು ಅಡಕಗಳು. ಸೂಚನೆ, ನಿರ್ದೇಶನಗಳು, ಆವಶ್ಯಕ ಚಾರಣ ಸಾಮಗ್ರಿಗಳ ಪಟ್ಟಿ, ವೈದ್ಯಕೀಯ ಪ್ರಮಾಣಪತ್ರದ ಮಾದರಿ, ಧೃಡೀಕರಣ ಪತ್ರ ಇತ್ಯಾದಿ  ಚಾರಣಾರ್ಥಿಯಾಗಿ ಸಿಂಡ್ರೆಲ್ಲಾ ಹೋಟೇಲಿಗೆ ತಲುಪಿಯೂ ಆಯಿತು. ಇದ್ದ ಒಂದು ದಿನದಲ್ಲಿ ಅಲ್ಲಿಯೇ ಸುತ್ತಾಡಿ ಪಟ್ಟಿಯಲ್ಲಿದ್ದ ಕೆಲ ವಸ್ತುಗಳನ್ನು (ಕೊಡೆ ಇತ್ಯಾದಿ) ಅಲ್ಲಿಯೇ ಖರೀದಿ ಮಾಡಿದೆವು.

15 January 2016

ಜಂಟಿ ಕಥನದ ಡಾರ್ಜಿಲಿಂಗ್ ಭಾಗ ಎರಡು

(ಅಶೋಕ ವರ್ಧನ ಮತ್ತು ಗಿರೀಶ್ ಪಾಲಡ್ಕ)
ಅಶೋಕವರ್ಧನ:

ಕಳೆದ ವಾರದ ಕಥನದಲ್ಲಿ ಗಿರೀಶ್ ಪಾಲಡ್ಕ ತಂಡ ಕೊಲ್ಕೊತ್ತಾದಿಂದ ಡಾರ್ಜಿಲಿಂಗ್ ಸೇರಿದ್ದನ್ನು ನೀವು ಓದಿದ್ದೀರಿ/ ಕೇಳಿದ್ದೀರಿ. ಜತೆಗೇ ಗಿರೀಶರಿಂದಲೂ ಸುಮಾರು ಒಂದೂವರೆ ದಶಕದ ಹಿಂದೆ ನಾನೂ ಡಾರ್ಜಿಲಿಂಗಿಗೆ ಕೊಟ್ಟ ಪ್ರಥಮ ಭೇಟಿ ಮತ್ತು ಪಲಾಯನದ ಕಥನವೂ ನಿಮ್ಮ ಅನುಭವಕೋಶಕ್ಕೆ ಸೇರಿದ್ದಾಗಿದೆ. ಮುಂದುವರಿದು ೧೯೯೦ರ ದಶಕದಲ್ಲಿ ನಾನೊಂದು ಮೋಟಾರ್ ಸೈಕಲ್ ತಂಡ ಕಟ್ಟಿ ಭಾರತ ಸುತ್ತುವುದರ ಭಾಗವಾಗಿ ಕೊಲ್ಕೊತ್ತಾದಿಂದಲೇ ಹೊರಟದ್ದನ್ನೂ ಹೇಳಿದ್ದೇನೆ. ಅದರಲ್ಲಿ ರಾತೋರಾತ್ರಿ ಕೊಲ್ಕತ್ತಾ – ಸಿಲಿಗುರಿ ಪಯಣಿಸಿದ ಗಿರೀಶರ ಬಳಗಕ್ಕಿಂತ ವಿರಾಮದಲ್ಲಿ ನಾವೂ ಸಿಲಿಗುರಿ ತಲಪಿದ್ದು, ಮಹಾನಂದ ವನಧಾಮದಲ್ಲಿ ತಂಗಿದ್ದನ್ನೂ ಹಿಂದಿನ ಅಧ್ಯಾಯದಲ್ಲೇ ಹೇಳಿದ್ದಾಗಿದೆ. ಅಲ್ಲಿಂದ ಮರು ಬೆಳಿಗ್ಗೆ...

ಬೆಳಿಗ್ಗೆ ವನಸಂಚಾರದ ಭ್ರಮೆ ಮೊದಲು ಪೂರೈಸಿಕೊಂಡೆವು. ಫಲಿತಾಂಶ ಹಿಂದೆ ಹೇಳಿದ್ದೇ – ನಿರಾಶೆ. ಅಲ್ಲಿಂದ ಡಾರ್ಜಿಲಿಂಗ್ ಪೇಟೆ ಸುಮಾರು ಎಂಬತ್ತು ಕಿಮೀಯ ಬಹುತೇಕ ಕಟ್ಟೇರು ದಾರಿ. ಸಾಲದ್ದಕ್ಕೆ ನಾವು ಕೊಲ್ಕೊತ್ತ ಬಿಟ್ಟಂದಿನಿಂದ ಮಳೆ ಪ್ರತಿ ಸಂಜೆ ಬರುತ್ತಿತ್ತು. ಬೆಟ್ಟ ಸಮೀಪಿಸಿದ್ದಕ್ಕೋ ಏನೋ ಅಲ್ಲಿ ಅಂದಂತು ಬೆಳಿಗ್ಗೆಯೇ ವಾತಾರಾವಣ ವ್ಯಗ್ರನಾಗಿದ್ದ - ಮೋಡ ಮೋಡವೇ ಇತ್ತು. ನಮ್ಮೆಲ್ಲ ಗಂಟು ಮೂಟೆಗಳನ್ನು ಪ್ಲ್ಯಾಸ್ಟಿಕ್ ಹಾಳೆಗಳಿಂದ ಸುತ್ತಿಯೇ ಬೈಕಿಗೇರಿಸಿ, ಬಿಗಿದಿದ್ದೆವು. ನಾವೂ ಉಣ್ಣೆಯಂಗಿ, ಮಂಗನತೊಪ್ಪಿಗಳ ಮೇಲೆ ಮಳೆಕೋಟು, ಪ್ಯಾಂಟು ಏರಿಸಿಯೇ ಎಂಟೂಮುಕ್ಕಾಲರ ಹೊತ್ತಿಗೆ ಘಾಟಿಗಿಳಿದೆವು.

08 January 2016

ಡಾರ್ಜಿಲಿಂಗ್ ಜೋಡು ಕಥನ

(ಅಶೋಕವರ್ಧನ ಮತ್ತು ಗಿರೀಶ್ ಪಾಲಡ್ಕ ಜುಗಲ್ಬಂಧಿಯಲ್ಲಿ ಡಾರ್ಜಿಲಿಂಗ್ ಪ್ರವಾಸ ಕಥನ)

  
ಅಶೋಕವರ್ಧನ:

ನನ್ನಂಗಡಿಯ ಸಂಬಂಧದಲ್ಲಿ, ಕೇವಲ ಮುಖಪರಿಚಯವಿರುವ, ಬಂದವರು ಒಲವು ತೋರಿದರೆ ಸಮಯ ಕಳೆಯಲು ಮಾತಾಡಿದ (ಹೆಚ್ಚಿನವು ದೀರ್ಘ ಕಾಲ ನೆನಪುಳಿಯುವಂಥವೇನೂ ಅಲ್ಲ) ಪರಿಚಯಗಳಲ್ಲಿ ಗಿರೀಶ್ ಅಥವಾ ಈಗಿನ ಅವರ ವೃತ್ತಿ-ವಾಸ್ತವ್ಯ ನೋಡಿ ಹೇಳುವುದಿದ್ದರೆ ಗಿರೀಶ್ ಬಜ್ಪೆ ಒಬ್ಬರು. ಇವರು...

ಗಿರೀಶ್ ಪಾಲಡ್ಕ:

ನಾನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಅಗ್ನಿ ಶಮನ ಪ್ರಚಾಲಕ (ಫ಼ೈರ್ ಅಪರೇಟರ್). ನನಗೆ ಈ ಕೆಲಸದ ಕುರಿತು ಮೊದ ಮೊದಲಿಗೆ ಸ್ವಲ್ಪ ಕೀಳರಿಮೆಯಿತ್ತು. ಈಗ ನೋಡಿದರೆ ಅದೇ ಹುದ್ದೆಗೆ ಇಂಜಿನಿಯರಿಂಗ್ ಹಾಗೂ ಸ್ನಾತಕೋತ್ತರ ಪದವೀಧರರೂ ಬರುತ್ತಿದ್ದಾರೆ. ವಿಷಾದದ ಸಂಗತಿಯೆಂದರೆ ನಾವು ಬೆರಳೆಣಿಕೆಯಷ್ಟು ಜನ ಮಾತ್ರ ಕನ್ನಡಿಗರು ಈ ಕ್ಷೇತ್ರದಲ್ಲಿದ್ದೇವೆ. ಈಗ ಇದಕ್ಕೆ ಅವಶ್ಯವಿರುವ ಅರ್ಹತೆ ಪಿ.ಯು.ಸಿ. ಅಥವಾ ಎಲೆಕ್ಟ್ರಿಕಲ್ /ಮೆಕ್ಯಾನಿಕಲ್ /ಅಟೋಮೊಬಾಯಿಲ್ ಡಿಪ್ಲೋಮಾ ಹಾಗೂ ಘನ (ಹೆವಿ) ವಾಹನ ಚಾಲನೆಯ ಲೈಸನ್ಸ್ ಮಾತ್ರ. ಜತೆಗೆ ದೈಹಿಕ ಕ್ಷಮತೆ ಅವಶ್ಯಕ (ಸೈನ್ಯದ ಮಾದರಿ).


ಇತ್ತೀಚೆಗೆ ದಕ್ಷಿಣ ಕ್ಷೇತ್ರದ ವಿಮಾನ ನಿಲ್ದಾಣಗಳಿಗೆ ಆಯ್ಕೆಯಾದ ನೂರಾ ನಲವತ್ತೆಂಟು ಮಂದಿಯಲ್ಲಿ ಕನ್ನಡಿಗರ ಸಂಖ್ಯೆ ಶೂನ್ಯ! ನಮ್ಮಲ್ಲಿ ಬಂದ ೨೬ ಜನ ಹೊಸಬರೆಲ್ಲಾ ಕೇರಳಿಗರು. ಬಂದವರೇನೂ ಅಯೋಗ್ಯರಲ್ಲ. ಬಹುಪಾಲು ಇಂಜಿನಿಯರಿಂಗ್ ಹಾಗೂ ಸ್ನಾತಕೋತ್ತರ ಪದವೀಧರರು. ಕರ್ನಾಟಕದಲ್ಲಿ ಅರ್ಹ ಅಭ್ಯರ್ಥಿಗಳ ಸಂಖ್ಯೆ ಸಾಕಷ್ಟಿದ್ದರೂ ಹೀಗೇಕೆ ಆಗುತ್ತಿದೆ ಎನ್ನುವುದು ಮಾತ್ರ ಯಕ್ಷಪ್ರಶ್ನೆ! ಈಗೆಲ್ಲಾ ಜಾಹೀರಾತುಗಳು ಜಾಲತಾಣ (ವೆಬ್ ಸೈಟ್) ನಲ್ಲಿ ಮಾತ್ರ ಬರುತ್ತವೆ.  ನಾವು ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಪ್ರಚಾರ ನೀಡಿದ್ದೆವು. ತಕ್ಕಮಟ್ಟಿನ ಪ್ರತಿಕ್ರಿಯೆಯೂ ಇತ್ತು. ಆದರೂ ಹೀಗೇಕೆ ಅನ್ನುವುದು ಮಾತ್ರ ನಮಗೆ ತಿಳಿಯುತ್ತಿಲ್ಲ.