Showing posts with label ಡೇವಿಡ್ ಕಾಪರ್ಫೀಲ್ಡ್‌. Show all posts
Showing posts with label ಡೇವಿಡ್ ಕಾಪರ್ಫೀಲ್ಡ್‌. Show all posts

14 July 2015

ಕೊನೆಯ ಸಿಂಹಾವಲೋಕನ

ಅಧ್ಯಾ ಅರವತ್ನಾಲ್ಕು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಅರವತ್ತಾರನೇ ಕಂತು
ಇನ್ನು ಬರೆಯತೊಡಗಿದ ನನ್ನ ಜೀವನ ವೃತ್ತಾಂತವು, ಸಾಧಾರಣ, ಇಲ್ಲಿಗೆ ಮುಗಿಯುವುದು. ಇಲ್ಲೇ ನಡೆದುಹೋದ ಸಂಗತಿಗಳನ್ನು ಒಮ್ಮೆ ಹಿಂತಿರುಗಿ ನೋಡೋಣವೆಂದು ಮನಸ್ಸಾಗುತ್ತದೆ.

ನನ್ನ ಈ ಜೀವನದ ಸಂಗಾತಿಯಾಗಿ ಏಗ್ನೆಸ್ಸಳು ನನ್ನ ಕೈ ಹಿಡಿದುಕೊಂಡು ಜತೆಯಲ್ಲೇ ಬರುತ್ತಿರುವಳು. ನನ್ನ ಮಕ್ಕಳು, ಸ್ನೇಹಿತರು, ಪರಿಚಿತರು, ನಮ್ಮ ಸುತ್ತಲೂ ಕಂಡುಬರುತ್ತಾರೆ. ಈ ಜನಸಮೂಹದಿಂದಲೂ ನನಗೆ ವಿಶೇಷ ಪರಿಚಯವಿಲ್ಲದ ಇತರರಿಂದಲೂ ನನ್ನನ್ನು ಕುರಿತಾಗಿ ಅವರು ಆಡುತ್ತಿರುವ ಪ್ರಶಂಸೆ, ಹಿತವಚನ ಮೊದಲಾದ ಮಾತುಗಳೂ ಕೇಳಿಬರುತ್ತಿವೆ.

ಜನಸಂದಣಿಯಲ್ಲಿ ಸ್ಪಷ್ಟವಾಗಿ ತೋರಿಬರುವ ಮುಖಗಳು ಕೆಲವಿವೆ. ಅವರೆಲ್ಲರನ್ನೂ ಒಂದಾವೃತ್ತಿಯಾದರೂ ನೋಡೋಣ. ಮೊದಲು ನನಗೆ ಕಾಣುವವಳು ನನ್ನ ಅತ್ತೆ – ಎಂಬತ್ತು ವರ್ಷ ಪ್ರಾಯ ಕಳೆದರೂ ನೆಟ್ಟಗೆ ನಿಂತು, ಚಳಿಯಲ್ಲೂ ಆರು ಮೈಲು ನಡೆದು ದಣಿಯದೆ, ಕನ್ನಡಕ ಧರಿಸಿರುವ ಅತ್ತೆ. ಅನಂತರ ಕಾಣುವವಳು – ಪೆಗಟಿ, ನನ್ನ ಬಾಲ್ಯದ ದಾದಿ. ನನಗೆ ನಡೆಯಲು ಕಲಿಸಿದಂತೆ ನನ್ನ ಕಿರಿಮಗುವಿಗೆ ಈಗ ಅವಳು ನಡೆಯಲು ಕಲಿಸುತ್ತಿದ್ದಾಳೆ.  ನನ್ನ ಹಳೆ `ಮೊಸಳೆ ಪುಸ್ತಕ’ವನ್ನು ಕಾಪಾಡಿಕೊಂಡು ಬಂದಿದ್ದಾಳೆ ಪೆಗಟಿ – ಎಷ್ಟೊಂದು ಪ್ರೀತಿ!

07 July 2015

ಒಬ್ಬ ಅಭ್ಯಾಗತ

ಅಧ್ಯಾ ಅರವತ್ತ್ಮೂರು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಅರವತ್ತೈದನೇ ಕಂತು
ನನ್ನ ಕಾರ್ಯ ಬಹ್ವಂಶ ಮುಗಿದಿದೆ. ಆದರೆ ಈ ಒಂದು ವಿಷಯವನ್ನು ಹೇಳದಿರುವುದು ಸರಿಯಲ್ಲ. ನನ್ನ ಮನಸ್ಸಿನಲ್ಲಿ ಸದಾ ಎದ್ದು ಕಾಣುತ್ತಿದ್ದು, ಸದಾ ನನಗೆ ಸಂತೋಷ ಕೊಡುತ್ತಿದ್ದ ಈ ವಿಷಯವನ್ನು ತಿಳಿಸದೆ ಬಿಟ್ಟರೆ ನನ್ನ ವೃತ್ತಾಂತದ ಬಲೆಯೊಳಗಣ ಅಮೂಲ್ಯ ತಂತುವೊಂದನ್ನು ಜಡಕಾಗಿ ಬಿಟ್ಟಂತೆಯೇ ಸರಿ.

ಮದುವೆ ಕಳೆದು ಹತ್ತು ವರ್ಷಗಳ ಸುಖಸಂತೋಷಗಳ ಕಾಲವನ್ನು ಕಳೆದಿದ್ದೆನು. ಚಳಿಗಾಲದ ಒಂದು ರಾತ್ರಿ ನನ್ನನ್ನು ಕಂಡು ಮಾತಾಡುವುದಕ್ಕಾಗಿ ಅಪರಿಚಿತನೊಬ್ಬನು ಬಂದು ಹೊರಗೆ ಕಾದುನಿಂತಿರುವುದಾಗಿ ಕೆಲಸದವಳು ಬಂದು ತಿಳಿಸಿದಳು. ಏಗ್ನೆಸ್ಸಳು ನಾನೂ ಮಕ್ಕಳ ಜತೆ ಸೇರಿಕೊಂಡು, ಸುಖವಾಗಿ ಬೆಂಕಿಯ ಬುಡದಲ್ಲಿ ಮಾತಾಡುತ್ತಾ ಕುಳಿತಿದ್ದೆವು. ಬಂದವನನ್ನು ಒಳಗೆ ಕರೆತರಲು ಕೆಲಸದವಳ ಹತ್ತಿರ ಹೇಳಿ, ನಮ್ಮ ಮಾತು ನಿಲ್ಲಿಸಿ, ಅವನನ್ನು ನಿರೀಕ್ಷಿಸಿ ಬಾಗಿಲ ಕಡೆಗೆ ನೋಡುತ್ತಾ ಕುಳಿತೆವು.

30 June 2015

ನನ್ನ ಜೀವನ ಪಥದ ದಿವ್ಯಜ್ಯೋತಿ

ಅಧ್ಯಾ ಅರವತ್ತೆರಡು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಅರವತ್ನಾಲ್ಕನೇ ಕಂತು
ದಿನಗಳು ಉರುಳುತ್ತಾ ಉರುಳುತ್ತಾ ಕ್ರಿಸ್ಮಸ್ ಕಾಲ ಬಂತು. ಈ ಮಧ್ಯೆ ನಾನು ಏಗ್ನೆಸ್ಸಳನ್ನು ಆಗಿಂದಾಗ್ಗೆ ಕೇಂಟರ್ಬರಿಗೆ ಹೋಗಿ ನೋಡಿ ಬರುತ್ತಲೇ ಇದ್ದೆನು. ನನ್ನ ಸಾಹಿತೀ ವೃತ್ತಿಯಲ್ಲಿ  ನನ್ನನ್ನು ಯಾರು ಎಷ್ಟೇ ಹೊಗಳಿ ಪ್ರೋತ್ಸಾಹಿಸಿದರೂ – ಒಮ್ಮೆಗೆ ಅಂಥಾ ಪ್ರೋತ್ಸಾಹ ನನ್ನನ್ನು ಎಷ್ಟೇ ಹುರಿದುಂಬಿಸಿದ್ದಿರಬಹುದಾದರೂ – ಆ ಹೊಗಳಿಕೆ ಪ್ರೋತ್ಸಾಹಗಳು ಏಗ್ನೆಸ್ಸಳ ಬರೇ ಒಂದು ಮಾತು ನನ್ನಲ್ಲಿ ಉಂಟು ಮಾಡುತ್ತಿದ್ದುದರಷ್ಟು ಪರಿಣಾಮವನ್ನು ಮಾಡುತ್ತಿರಲಿಲ್ಲ.

ನಾನು ವಾರಕ್ಕೊಮ್ಮೆ ಕೇಂಟರ್ಬರಿಗೆ ಹೋಗಿ ಬರುತ್ತಿದ್ದರೂ ನನ್ನ ಮನಸ್ಸು ಸುಖವಾಗುತ್ತಿರಲಿಲ್ಲ, ಅದಕ್ಕೆ ಶಾಂತಿಯಿರಲಿಲ್ಲ. ಇದಕ್ಕಾಗಿ ದೈಹಿಕ ಪರಿಶ್ರಮಗಳನ್ನು ಕೈಕೊಳ್ಳುತ್ತಿದ್ದೆನು. ಅದಕ್ಕಾಗಿ ಕುದುರೆ ಸವಾರಿ ಮಾಡುತ್ತಿದ್ದೆನು, ತುಂಬಾ ದೂರ ನಡೆಯುವುದೂ ಇತ್ತು. ಏನೇ ಮಾಡಿದರೂ ಮನಸ್ಸಿಗೆ ನೆಮ್ಮದಿಯಿರಲಿಲ್ಲ. ಏಗ್ನೆಸ್ಸಳು ನನ್ನ ಪತ್ನಿಯಾಗಬೇಕೆಂದು ನಾನು ಪರದೇಶದಲ್ಲಿದ್ದಾಗ ಉಂಟಾಗಿದ್ದ ಕಾಂಕ್ಷೆ ಈಗಲೂ ಹಾಗೆಯೇ ಇದ್ದು, ಅವಳಿಗೆ ನನ್ನ ಮನಸ್ಸನ್ನು ಬಿಚ್ಚಿ ತಿಳಿಸಬೇಕೆಂದು ಅದು ಒಂದು ಕಡೆಯಿಂದ ಒತ್ತಾಯಿಸುತ್ತಿದ್ದರೂ ಮತ್ತೊಂದು ಕಡೆಯಿಂದ, ಹೀಗೆ ತಿಳಿಸಿದ್ದಾದರೆ ನಮ್ಮ ಸಹೋದರ –ಸಹೋದರೀ ಭಾವಕ್ಕೆ ಸಹ ಭಂಗ ಬಂದು, ಕಾಂಕ್ಷೆಯಾಗಿ ಸಹ ಉಳಿಯದೇ ಹೋಗಬಹುದೆಂದು ಅದು ಹೆದರಿಸುತ್ತಲೂ ಇತ್ತು. ನಾನು ನನ್ನ ಕಾದಂಬರಿಗಳ ಕರಡು ಪ್ರತಿಗಳನ್ನು ಏಗ್ನೆಸ್ಸಳಿಗೆ ಓದಿ ಹೇಳುತ್ತಿದ್ದೆನು. ಆ ಕಾದಂಬರಿಗಳಲ್ಲಿ ತೋರುವ ನನ್ನ ಎಲ್ಲಾ ಭಾವನೆಗಳನ್ನು ಅವಳು ಅರಿತು, ಆನಂದಿಸಿ, ದುಃಖಿಸಿ, ನನ್ನನ್ನು ತುಂಬಾ ಪ್ರೋತ್ಸಾಹಿಸುತ್ತಿದ್ದಳು. ಡೋರಾಳಿಗೆ ಸಾಕಷ್ಟು ಬುದ್ಧಿಯೊಂದು ಇದ್ದಿದ್ದರೆ ನನ್ನ ಸಂತೋಷವನ್ನು ಎಷ್ಟೊಂದು ಹೆಚ್ಚಿಸಬಹುದಿತ್ತೆಂದು ಗ್ರಹಿಸುತ್ತಿದ್ದಂತೆಯೇ – ಇಷ್ಟೊಂದು ಬುದ್ಧಿ, ಜ್ಞಾನ, ಅನುಭವವುಳ್ಳ ಏಗ್ನೆಸ್ಸಳು ಸಹೋದರಿಯಂತಿರುವುದರ ಜತೆಗೆ ಪತ್ನಿಯೂ ಆಗಿದ್ದಿದ್ದರೆ ನನ್ನ ಬಾಳು ಎಷ್ಟೊಂದು ಸುಖ ಸಂತೋಷಮಯವಾಗಿರುತ್ತಿತ್ತೆಂದೂ ಗ್ರಹಿಸುತ್ತಿದ್ದೆನು.

23 June 2015

ಪಶ್ಚಾತ್ತಾಪದಿಂದ ಮರೆಯಾಗುತ್ತಿದ್ದ ಪುನೀತರಿಬ್ಬರ ಪರಿಚಯ

ಅಧ್ಯಾ ಅರವತ್ತೊಂದು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಅರವತ್ಮೂರನೇ ಕಂತು
ನಾನು ಬರೆಯಲು ಪ್ರಾರಂಭಿಸಿದ್ದ ಕಾದಂಬರಿ ಕೆಲಸವು ಮುಗಿಯುವವರೆಗೂ ನಾನು ಅತ್ತೆಯ ಮನೆಯಲ್ಲೇ ಇದ್ದೆನು. ನಾನು ಅತ್ತೆಯ ಈ ಮನೆಗೆ ಪ್ರಥಮವಾಗಿ ಬಂದಾಗ ಸಮುದ್ರದ ಮೇಲಿನ ಚಂದ್ರನನ್ನು ನೋಡುತ್ತಾ ಮಲಗುತ್ತಿದ ಕೋಣೆಯಲ್ಲೇ ನನ್ನ ಈ ಕೆಲಸವನ್ನು ಮಾಡುತ್ತಿದ್ದೆನು. ಈ ಕಾದಂಬರಿ ಕೆಲಸ ಮಾಡಿ ಪೂರೈಸಲು ನನಗೆ ಸಾಧಾರಣ ಆರು ತಿಂಗಳ ಕಾಲ ಹಿಡಿಯಿತು.

ಯಾವ ಕೆಲಸವನ್ನೇ ಕೈಕೊಂಡರೂ ನನಗೆ ಮನಸ್ಸಿನ ಸ್ವಾಸ್ಥ್ಯವೇ ಇರುತ್ತಿರಲಿಲ್ಲ. ಹೀಗಾಗಿ ನಾನು ಆಗಿಂದಾಗ್ಗೆ ಲಂಡನ್ನಿಗೆ ಹೋಗಿ ಟ್ರೇಡಲ್ಸನ ಮನೆಯಲ್ಲಿ ಒಂದೆರಡು ದಿನ ಇದ್ದು ಬರುತ್ತಿದ್ದೆನು. ನನಗೆ ಬರುವ ಪತ್ರಗಳೆಲ್ಲಾ ಟ್ರೇಡಲ್ಸನ ಮುಖಾಂತರವೇ ಬರುವಂತೆ ನನ್ನ ವಿಳಾಸವನ್ನು ಪ್ರಕಟಿಸಿದ್ದೆನು. ಇದಕ್ಕಾಗಿಯೇ ನನ್ನ ಹೆಸರು, ವಿಳಾಸಗಳನ್ನೊಳಗೊಂಡು ಒಂದು ಬೋರ್ಡನ್ನು ಟ್ರೇಡಲ್ಸನ ಆಫೀಸು ಬೋರ್ಡು ಜತೆಯಲ್ಲೇ ತೂಗಾಡಿಸಿದ್ದೆನು. ನನಗೆ ಅನೇಕ ಕಡೆಗಳಿಂದ ಪತ್ರಗಳು ಬರುತ್ತಿದ್ದುವು. ಆಂಗ್ಲ ಭಾಷೆಯ ಪ್ರಚಾರದಲ್ಲಿದ್ದ ಎಲ್ಲಾ ದೇಶಗಳಿಂದಲೂ ಪತ್ರಗಳು ಬರುತ್ತಿದ್ದವು. ನನ್ನ ಪ್ರಶಂಸೆ, ಕಾದಂಬರಿಗಳನ್ನು ಕುರಿತು ವಿಮರ್ಶೆ, ಅಪೂರ್ವಕ್ಕೊಮ್ಮೆ ನಾನೊಬ್ಬ ವಕೀಲನೆಂದು ಕಾನೂನು ಕಾಯಿದೆಗಳಿಗೆ ಸಂಬಂಧಪಟ್ಟೂ ಆ ಪತ್ರಗಳಿರುತ್ತಿದ್ದುವು. ಬ್ರಿಟಿಷ್ ಚಕ್ರಾಧಿಪತ್ಯದ ವಿದೇಶಾಂಗದ ಕಾರ್ಯದರ್ಶಿ ಸಂಬಳ ಪಡೆದು ಕೆಲಸ ಮಾಡುತ್ತಿರುವ ಕ್ರಮದಲ್ಲಿ ನಾನು ಈ ಎಲ್ಲಾ ದೇಶ ವಿದೇಶಗಳ ಪತ್ರಗಳಿಗೆ – ಸಂಬಳ ಪಡೆಯದೆ, ಉತ್ತರವನ್ನು ಕಳುಹಿಸುವ ಕೆಲಸ ಮಾಡುತ್ತಿದ್ದೆನು. ನಾನು ಹಿಂದೆ ವಕಾಲತ್ತು ಪಾಸಾಗಿದ್ದುದರಿಂದ, ವಕೀಲ ವೃತ್ತಿಯನ್ನು ಕುರಿತಾಗಿ ಬರುತ್ತಿದ್ದ ಪತ್ರಗಳಲ್ಲಿ ಕೆಲವು ಆಶ್ಚರ್ಯತರದವೂ ಇರುತ್ತಿದ್ದುವು. ನಾನು ಸ್ವಲ್ಪ ಪ್ರತಿಫಲ ತೆಗೆದುಕೊಂಡು ಬೇರೆಯವರು ನನ್ನ ಹೆಸರಿನಲ್ಲಿ ವಕಾಲತ್ತು ವೃತ್ತಿಯನ್ನು ನಡೆಸಲು ಎಡೆಸಿಗುವಂತೆ ನಾನು ಮಾಡಬೇಕೆಂದು ಪ್ರಾರ್ಥಿಸಿಯೂ ಪತ್ರಗಳು ಬಂದಿವೆ. ಈ ವಿಧದ ಪರಭಾರೆಯು, ಸರಕಾರವನ್ನು ವಂಚಿಸಿ, ಗುಪ್ತವಾಗಿ ನಡೆಯುತ್ತಿದ್ದುದಾಗಿಯೂ ನಾನು ಕೇಳಿದ್ದೇನೆ. ಅಂಥ ಪತ್ರಗಳಿಗೆ ವಿಶೇಷ ಉತ್ತರ ಕೊಡದೆ – ವಕಾಲತು ವೃತ್ತಿಯಲ್ಲೇ ಅಡಗಿರುವ ಅನ್ಯಾಯದ ಜತೆಗೆ ಈ ಒಂದು ಹೊಸ ಅನ್ಯಾಯವನ್ನೂ ಸೇರಿಸಿ ಸಮಾಜ ದ್ರೋಹ ಮಾಡಬಾರದೆಂದು ಮಾತ್ರ ಉತ್ತರವಿತ್ತದ್ದುಂಟು.

16 June 2015

ಏಗ್ನೆಸ್

ಅಧ್ಯಾ ಅರವತ್ತು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಅರವತ್ತೆರಡನೇ ಕಂತು
ಆ ರಾತ್ರಿ ಊಟವಾದನಂತರ ಅತ್ತೆಯೂ ನಾನೂ ಸಾಧಾರಣ ನಡುರಾತ್ರಿಯವರೆಗೂ ಕುಳಿತು ಮಾತಾಡಿದೆವು. ನಾವು ಮಾತಾಡದಿದ್ದ ವಿಷಯವಿಲ್ಲವೆಂಬಷ್ಟರವರೆಗೂ ಮಾತಾಡಿದೆವು. ಆಸ್ಟ್ರೇಲಿಯಕ್ಕೆ ಹೋದವರನ್ನು ಕುರಿತು ಪ್ರಸ್ತಾಪ ಬಂತು. ಅವರಿಂದ ಬರುವ ಪತ್ರಗಳಲ್ಲೆಲ್ಲ ಅವರ ಅಭಿವೃದ್ಧಿಯನ್ನು ಕುರಿತಾಗಿ ವರ್ತಮಾನವಿರುತ್ತಿತ್ತು. ಆರೋಗ್ಯ, ಕೃಶಿ ಉದ್ಯಮ, ಎಲ್ಲದರಲ್ಲೂ ಅಲ್ಲಿನವರು ಸುಖವಾಗಿ, ಸಂತೋಷವಾಗಿ, ಅಭಿವೃದ್ಧಿ ಪಥದಲ್ಲೇ ಮುಂದುವರಿಯುತ್ತಿದ್ದರು. ಅತ್ತೆಯ ಅನೇಕ ಅನುಭವಗಳ ಕಾರಣವಾಗಿ, (ಹೆಂಗುಸರು ಮದುವೆಯಾಗುವುದು ತಪ್ಪೆನ್ನುತ್ತಿದ್ದವಳು) ತನ್ನ ಪೂರ್ವದ ಅಭಿಪ್ರಾಯವನ್ನು ತಿದ್ದಿಕೊಂಡು ಜೇನೆಟ್ಟಳಿಗೆ ಮದುವೆಗೆ ಒಪ್ಪಿಗೆ ಕೊಟ್ಟಿದ್ದಳು. ಜೇನೆಟ್ಟಳು ಒಬ್ಬ ಶ್ರೀಮಂತ ಹೆಂಡದಂಗಡಿ ಒಡೆಯನನ್ನು ಮದುವೆಯಾಗಿದ್ದಳು. ಅತ್ತೆ ಆ ಮದುವೆಗೆ ಸ್ವತಃ ಹೋಗಿ ವಧೂವರರನ್ನು ಆಶೀರ್ವದಿಸಿ ಒಳ್ಳೊಳ್ಳೇ ಉಡುಗೊರೆ ವಸ್ತುಗಳನ್ನು ಕೊಟ್ಟಿದ್ದಳು. ಮಿ. ಡಿಕ್ಕರು ಸಹ ತಮ್ಮ ಬರವಣಿಗೆಯಿಂದ ಒಳ್ಳೆ ಸಂಪಾದನೆ ಮಾಡುತ್ತಿದರು. ಈಗ ಅವರ ಬರವಣಿಗೆಯ ಮಧ್ಯೆ ಚಾರ್ಲ್ಸ್ ದೊರೆಯ ತಲೆ ಬರುತ್ತಿರಲಿಲ್ಲ. ಹೀಗೆ ಅನೇಕ ವಿಷಯಗಳನ್ನು ಮಾತಾಡುತ್ತಾ ನಾನು ಮಿ. ವಿಕ್ಫೀಲ್ಡರನ್ನು ಏಗ್ನೆಸ್ಸಳನ್ನೂ ನೋಡಿ ಬರಬೇಕೆಂದು ನಿಶ್ಚೈಸಿದೆನು.

09 June 2015

ದೇಶಾಟನದಿಂದ ಹಿಂತಿರುಗಿದುದು

ಅಧ್ಯಾ ಐವತ್ತೊಂಬತ್ತು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಅರವತ್ತೊಂದನೇ ಕಂತು
ಶರತ್ಕಾಲದ ಒಂದು ಸಂಜೆ ನಾನು ಲಂಡನ್ನಿಗೆ ತಲುಪಿದೆನು. ಆಗ ಕತ್ತಲಾಗುತ್ತಾ ಬಂದಿತ್ತು. ಮತ್ತು ಬಲವಾದ ಮಳೆಯೂ ಸುರಿಯುತ್ತಿತ್ತು. ನಾನು ಪರ ಊರುಗಳಲ್ಲಿ ಒಂದು ವರ್ಷ ಕಾಲದಲ್ಲಿ ಒಟ್ಟಾಗಿ ಕಾಣದಿದ್ದಷ್ಟು ಹಿಮ ಮತ್ತು ಕೆಸರನ್ನು ಇಲ್ಲಿ ಒಂದೆರಡು ಮಿನಿಟುಗಳಲ್ಲೇ ಕಂಡೆನು. ಸುಂಕದ ಕಟ್ಟೆಯಿಂದ ಮಾನ್ಯುಮೆಂಟ್ ರಸ್ತೆಯವರೆಗೆ ನಾನು ನಡೆದೇ ಹೋಗಬೇಕಾಯಿತು. ಚರಂಡಿಗಳಲ್ಲು ಉಕ್ಕಿ ಹರಿಯುತ್ತಿದ್ದ ಕೆಸರು ನೀರನ್ನು ನೋಡುತ್ತಾ ನಡೆದು ಹೋಗುವಾಗ ಬದಿಯಲ್ಲೇ ನಿಂತಿದ್ದ ಪೂರ್ವದ ಕೆಲವು ಮನೆಗಳನ್ನು ಕಂಡೆನು. ಕಂಡದ್ದು ಹಳತು ಮತ್ತು ಕೊಳಕು ಮನೆಗಳಾಗಿದ್ದರೂ ಅವನ್ನು ಕಂಡಾಗ ಹಳೆ ಸ್ನೇಹಿತರನ್ನು ಕಂಡಷ್ಟೆ ಸಂತೋಷವಾಯಿತು.

02 June 2015

ನನ್ನ ದೇಶಾಟನ

ಅಧ್ಯಾ ಐವತ್ತೆಂಟು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಅರವತ್ತನೇ ಕಂತು
ಪ್ರವಾಸಿಗಳನ್ನು ಕಳುಹಿಸಿ ಕೊಟ್ಟನಂತರ ನನ್ನ ಮನಸ್ಸಿಗೆ ಬೆಳಕೆಂಬುದೇ ಇರಲಿಲ್ಲ – ಪ್ರಕೃತಿದತ್ತವಾದ ಕತ್ತಲಲ್ಲಿ ನಾವು ಹಿಂತಿರುಗಿದ್ದು ಮಾತ್ರವಲ್ಲ, ನನ್ನ ಮನಸ್ಸಿನಲ್ಲೇ ಗಾಢಾಂಧಕಾರ ತುಂಬಿತ್ತು. ಕೈಗೆ ಎಟಕದ ಅನೇಕ ಆಸೆಗಳೂ ಮುಗಿದು ಹೋಗಿದ್ದ ನೂರಾರು ಸವಿನೆನಪುಗಳೂ ಮನಸ್ಸಿದ್ದೂ ಕಾರ್ಯವಾಗದಿದ್ದ ಕಾರ್ಯಲೋಪಗಳೂ ನಷ್ಟಗಳೂ ದುಃಖಗಳೂ ಪಶ್ಚಾತ್ತಾಪಗಳೂ ನನ್ನನ್ನು ಬಹುವಾಗಿ ಬಾಧಿಸತೊಡಗಿದುವು.

ಪ್ರವಾಸಿಗಳನ್ನು ಕಳುಹಿಸಿಕೊಟ್ಟೆ. ನಾನು ಇಂಗ್ಲೆಂಡನ್ನು ಬಿಟ್ಟು ದೇಶಾಟನೆ ಮಾಡತೊಡಗಿದೆ. ಜೀವನದಲ್ಲಿ ಹೊಸ ಮಾರ್ಗವನ್ನು ಅವಲಂಬಿಸಿದೆ. ಇದರಿಂದ, ಇಲ್ಲಿಗೆ  ನನ್ನ ದುಃಖಗಳೆಲ್ಲಾ ಮುಗಿಯಿತು, ಮನಸ್ಸು ನೆಮ್ಮದಿಯಾಯಿತು ಎಂದು ಗ್ರಹಿಸಿದೆ. ಆದರೆ, ನಾನು ಹೀಗೆ ಗ್ರಹಿಸಿ ಸಮಾಧಾನ ತೆಗೆದುಕೊಳ್ಳುತ್ತಿದ್ದಾಗಲೇ ಕಟ್ಟವನ್ನು ಮುರಿದು ಪ್ರವಾಹವು ಒಮ್ಮೆಗೇ ಮೇಲೆ ಏರಿಬರುವಂತೆ, ಆವರೆಗೆ ಅಡಗಿದ್ದ ದುಃಖಗಳೂ ವಿಸ್ಮಯಗಳೂ ಆಶಾಭಂಗದಿಂದುಂಟಾಗಿದ್ದ ಸಮಸ್ಯೆಗಳೂ ದಿನದಿಂದ ದಿನಕ್ಕೆ ಬೆಳೆದು ತೋರಲಾರಂಭಿಸಿದುವು. ನಾನು ಏಕಾಂಗಿಯಾಗಿ ತಿರುಗುತ್ತಿರುವೆನೆಂದು ತಿಳಿಯುವಾಗಲೇ ಈ ವಿಧದ ಪ್ರಕ್ಷುಬ್ಧ ಮನಸ್ಸೇ ನನ್ನ ಜತೆಗಾರನಾಗಿ ಎಡೆಬಿಡದೆ ಹಿಂಬಾಲಿಸಿ ಬರತೊಡಗಿತು. ಈ ಪ್ರಕ್ಷುಬ್ಧತೆಯಲ್ಲಿ ವಿಮರ್ಶಾ ದೃಷ್ಟಿಯಿಂದ ನೋಡುವಾಗ ದುಃಖ ಮಾತ್ರವಿದ್ದುದಲ್ಲ, ಅದರಲ್ಲಿ ಪ್ರೇಮ, ಪರೋಪಕಾರ, ಕರುಣೆ, ಹುರುಪು, ನಿರುತ್ಸಾಹ ಇವುಗಳೆಲ್ಲದರ ಭಾವನೆಗಳು ಎದ್ದು ತೋರಬಲ್ಲಂಥ ಜನ, ಸ್ಥಳ , ಸನ್ನಿವೇಶಗಳೂ ಬಂದೊದಗುತ್ತಿದ್ದುವು. ಆದರೂ ದುಃಖವೇ ಪರಮಾಧಿಕ್ಯವಾಗಿತ್ತು. ಪತ್ನಿ, ಬಂಧು, ಸ್ನೇಹಿತ, ದೇಶವನ್ನೆಲ್ಲ ತೊರೆದು ಬಂದಿದ್ದವರ ಜತೆಗೆ, ಅವುಗಳಿಂದ ಉತ್ತಮ ಫಲ ನಿರೀಕ್ಷಿದಾಗಲೇ ದುಃಖಫಲ ಮಾತ್ರ ದೊರೆತ ಸಂದರ್ಭವೂ ಸೇರಿ, ನನ್ನ ಜೀವನದಲ್ಲಿ ಜಿಗುಪ್ಸೆಯುಂಟಾಗಿ ಧೈರ್ಯ, ಆಸಕ್ತಿಗಳು ಕುಸಿದು ಬಿದ್ದುವು.

26 May 2015

ಪ್ರವಾಸಿಗಳು

ಅಧ್ಯಾ ಐವತ್ತೇಳು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಐವತ್ತೊಂಬತ್ತನೇ ಕಂತು
ಈ ವಿಧದ ಅನೇಕ ದುಃಖಗಳ ಭಾರದಿಂದ ನಾನು ಕುಸಿದು ಬೀಳುವ ಸಂಭವ ತುಂಬಾ ಇದ್ದಿದ್ದರೂ ನನ್ನಿಂದಾಗಬೇಕಾಗಿದ್ದ ಕಾರ್ಯಗಳನ್ನು ನಿರ್ವಹಿಸಬೇಕೆಂಬ ಕರ್ತವ್ಯ ನಿಷ್ಠೆಯೇ ನನಗೆ ಶಕ್ತಿ ಕೊಟ್ಟು ನನ್ನಿಂದ ಕಾರ್ಯಗಳನ್ನು ಮಾಡಿಸುತ್ತಿತ್ತು. ಯಾರ್ಮತ್ತಿನ ಘಟನೆ ಬಹು ಘೋರತರದ್ದಾಗಿದ್ದುದರಿಂದ ಅದರ ವರ್ತಮಾನ ಜನರ ಮುಖಾಂತರವೂ ಪತ್ರಿಕೆಗಳ ಮುಖಾಂತರವೂ ಹರಡುವ ಸಂಭವವು ಬಹುವಾಗಿತ್ತು. ಈ ಯಾವ ವರ್ತಮಾನವೂ ಮಿ. ಪೆಗಟಿ ಮತ್ತು ಎಮಿಲಿಯವರಿಬ್ಬರಿಗೆ ತಿಳಿಯಬಾರದೆಂದೂ ಪ್ರವಾಸಿಗಳೆಲ್ಲರೂ ತಮ್ಮ ಪ್ರಾರಂಭದ ಉತ್ಸಾಹದಿಂದ ಮತ್ತು ನಿರ್ದಿಷ್ಟ ಗುರಿಯಿಂದ ಪ್ರಯಾಣಗೈಯ್ಯಬೇಕೆಂದೂ ನಾವು ಇಷ್ಟ ಪಡುತ್ತಿದ್ದೆವು. ಇದಕ್ಕಾಗಿಯೇ ನಾನು ಮಿ. ಮೈಕಾಬರರಿಗೆ ಮಾತ್ರ ಈ ವರ್ತಮಾನವನ್ನು ತಿಳಿಸಿ, ಅವರು ಮಿ. ಪೆಗಟಿ ಮತ್ತು ಎಮಿಲಿಯರಿಗೆ ಯಾವುದೇ ವಿಧದಲ್ಲಿ ಈ ವರ್ತಮಾನ ತಲಪದಂತೆ ನೋಡಿಕೊಳ್ಳಬೇಕೆಂದು ಹೇಳಿದೆನು. ಮಿ. ಮೈಕಾಬರರು ಈ ಜವಾಬ್ದಾರಿಯನ್ನು ಬಹು ಸಂತೋಷದಿಂದ ವಹಿಸಿಕೊಂಡು ಬಹು ದಕ್ಷತೆಯಿಂದ ನಿರ್ವಹಿಸಿದರು. ಮಿ. ಪೆಗಟಿ ಸ್ವಭಾವತಃ ಜನ ಸಂಪರ್ಕವನ್ನು ಬಯಸದವರಾಗಿದ್ದುದರಿಂದ ನಮ್ಮ ಈ ಕೆಲಸ ಹಗುರವಾಯಿತು. ಅಲ್ಲದೆ ಯಾರ್ಮತ್ತಿನ ಘಟನೆಗಳು ನಡೆದ ಒಂದೆರಡು ದಿನಗಳಲ್ಲೇ ಪ್ರವಾಸಿಗಳನ್ನು ಸಾಗಿಸುವ ಈ ಹಡಗು ಇಂಗ್ಲೆಂಡಿನಿಂದ ಹೊರಡುವುದಿದ್ದುದರಿಂದ ನಮ್ಮ ಕೆಲಸ ಮತ್ತಷ್ಟು ಸುಲಭವೂ ಆಯಿತು.

19 May 2015

ಸದ್ಯ ಸಂಭವಿಸಿರುವ ದುಃಖ ಮತ್ತು ಬೆಳೆದು ಬಂದಿರುವ ದುಃಖ

ಅಧ್ಯಾ ಐವತ್ತಾರು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಐವತ್ತೆಂಟನೇ ಕಂತು
ಅಯ್ಯೋ ಸ್ಟೀಯರ್ಫೋರ್ತ್, ಕಳೆದ ಸರ್ತಿ ನೀನು ನನ್ನನ್ನು ಬಿಟ್ಟು ಹೋಗುವಾಗ ಅದು ಕಡೇ ಸಾರಿಯ ಅಗಲುವಿಕೆಯೆಂದು ನಾನು ಗ್ರಹಿಸಿರಲಿಲ್ಲ! ನಿನ್ನ ಉತ್ತಮ ಗುಣಗಳನ್ನು ಮಾತ್ರ ನಾನು ಸದಾ ಗ್ರಹಿಸಿ ಸಂತೋಷಿಸುತ್ತಿದ್ದಾಗಲೇ “ನನ್ನ ಉತ್ತಮ ಗುಣಗಳ ಗಣನೆಯಿಂದ ಮಾತ್ರ ನನ್ನನ್ನು ನೆನೆಸು” ಎಂದು ನೀನು ನನಗೆ ಹೇಳಿದೆಯಲ್ಲಾ! ಅದು ಅಗತ್ಯವಿತ್ತೇ? ಇಂದು ಅವನ ಕಳೇಬರವನ್ನು ನೋಡುತ್ತಿರುವಾಗ ಅವನ ಸಹಸ್ರಾರು ಉತ್ತಮ ಗುಣಗಳು ಎದುರು ಬಂದು ನಿಲ್ಲದಿರುವುವೇ? ಈ ಗುಣಗಳನ್ನು ಹೊರತಾಗಿ ಇತರವುಗಳನ್ನು ನೆನಪಿಗೆ ತರಲು ಸಾಧ್ಯ ತಾನೆ ಆಗಬಹುದೇ?

ಸ್ಟೀಯರ್ಫೋರ್ತನ ಶವವನ್ನು ಮಿ. ಓಮರರಿಂದ ತರಿಸಿಕೊಂಡ `ಕಾಫಿ’ನ್ನಿನಲ್ಲಿಟ್ಟು ಬಂಡಿಯ ಮೂಲಕ ಕಾಫಿನ್ನನ್ನು ಸ್ಟೀಯರ್ಫೋರ್ತನ ಮನೆಗೆ ಸಾಗಿಸಿದೆವು. ಯಾರ್ಮತ್ತಿನಲ್ಲಿ ಸ್ಟೀಯರ್ಫೋರ್ತನು ತುಂಬಾ ಪರಿಚಿತನೂ ಹೆಸರುವಾಸಿಯೂ ಆಗಿದ್ದುದರಿಂದ ಅನೇಕ ನಾವಿಕರು ಬಂಡಿಯ ಹಿಂದೆಯೇ ಬಹುದೂರ ಬಂದಿದ್ದರು.

12 May 2015

ಚಂಡಮಾರುತ

ಅಧ್ಯಾ ಐವತ್ತೈದು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಐವತ್ತೇಳನೇ ಕಂತು
ನನ್ನ ಜೀವನದಲ್ಲೆಲ್ಲ ಅತಿ ಪ್ರಾಮುಖ್ಯವಾದ, ಎಂದೂ ಮರೆಯಲಾರದ, ಬಹು ಭಯಂಕರವಾದ, ಒಂದು ಘಟನೆಯನ್ನು ಸದ್ಯ ತಿಳಿಸಲಿದ್ದೇನೆ. ಈವರೆಗೆ ನಾನು ಬರೆಯುತ್ತಾ ಬಂದಿರುವ ನನ್ನ ಜೀವನ ವೃತ್ತಾಂತದ ಎಲ್ಲಾ ಭಾಗಕ್ಕೂ ಒಂದಲ್ಲದಿದ್ದರೆ ಇನ್ನೊಂದು ವಿಧದಲ್ಲಿ, ಸಂಬಂಧವಿರುವ ಈ ಘಟನೆ ನನ್ನ ಚರಿತ್ರೆಗೆಲ್ಲಕ್ಕೂ ಅದರ ಪ್ರಭಾವವನ್ನು ಬೀರಿದೆ. ವಿಶಾಲವಾದ ಬಯಲು ಪ್ರದೇಶದಲ್ಲೊಂದು ಎತ್ತರದ ಗೋಪುರವಿದ್ದರೆ ಅದರ ನೆರಳು ಅತ್ಯಂತ ದೂರದ ಗಡಿಯವರೆಗೂ ಬಿದ್ದೇ ಬೀಳುವಂತೆ, ನನ್ನ ಬಾಲ್ಯದ ವೃತ್ತಾಂತವನ್ನು ಬರೆಯುವಾಗಲೂ ಅನಂತರದ ಘಟನೆಗಳನ್ನು ಬರೆಯುವಾಗಲೂ ಮುಂದೆ ಈ ಭಯಾನಕ ಪ್ರಸಂಗವನ್ನು ಬರೆಯುವುದಿದೆಯಲ್ಲಾ ಎಂಬ ಅನುಭವ, ಆ ನೆರಳಿನಂತೆಯೇ ನಾನು ಉದ್ದೇಶಪಡದೇ ಈ ಎಲ್ಲಾ ಬರವಣಿಗೆಯಲ್ಲೂ ತನ್ನ ಪ್ರಭಾವವನ್ನು ಸ್ವಲ್ಪವಾದರೂ ಬೀರಿರಲೇಬೇಕು.

05 May 2015

ಮಿ. ಮೈಕಾಬರರ ವಹಿವಾಟುಗಳು

ಅಧ್ಯಾ ಐವತ್ನಾಲ್ಕು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಐವತ್ತಾರನೇ ಕಂತು
ದುಃಖದ ಹೊರೆಯಿಂದ ನನ್ನ ಮನಸ್ಸು ಹೇಗಿತ್ತೆಂದು ತಿಳಿಸುವ ಪ್ರಸಂಗ ಇದಲ್ಲ. ನನ್ನ ಭವಿಷ್ಯ ಮುಂದುವರಿಯದಂತೆ ಭದ್ರವಾದ ಒಂದು ಗೋಡೆಯೇ ಅಡ್ಡವಿದ್ದಂತೆ ನನಗೆ ತೋರುತ್ತಿತ್ತು. ನನ್ನ ಸರ್ವಶಕ್ತಿಗಳೂ ಮುಗಿದು ನಾನು ಪೂರ್ಣ ನಿಶ್ಶಕ್ತನ್ನಾಗಿ ಬಿದ್ದು, ಇನ್ನು ಸುಖ ದೊರಕಬೇಕಾದರೆ ಮರಣ ಒಂದಲ್ಲದೆ ಬೇರೆ ಮಾರ್ಗವೇ ಇಲ್ಲವೆಂಬಂತೆ ನನಗೆ ತೋರುತ್ತಿತ್ತು.

ಇದೇ ಸಮಯದಲ್ಲಿ ನಾವು, ಒಂದಲ್ಲದಿದರೆ ಒಂದು ವಿಧದಲ್ಲಿ ಪರದೇಶಕ್ಕೆ ಹೋಗಲಿದ್ದ ಮಿ. ಮೈಕಾಬರರ ವಹಿವಾಟುಗಳಲ್ಲಿ ಕೈ ಹಾಕಿ ಕೆಲಸ ಮಾಡುತ್ತಲಿದ್ದೆವು. ಈ ಕೆಲಸದಲ್ಲಿ ಮನಸ್ಸು ಹಾಕುತ್ತಿದ್ದುದರಿಂದ ಡೋರಾಳ ಮರಣದಿಂದುಂಟಾಗಿದ್ದ ದುಃಖ ಸ್ವಲ್ಪ ಹಗುರವಾಗಿಯೂ ತೋರುತ್ತಿತ್ತು. ಆದರೆ, ಮನಸ್ಸು ತಾತ್ಕಾಲಿಕವಾಗಿ ಬೇರೆ ವಿಷಯಗಳಲ್ಲಿ ಪ್ರವಹಿಸಿ ಪುನರಪಿ ಡೋರಾಳ ನೆನಪನ್ನೇ ಅಪ್ಪಿಕೊಳ್ಳುವಾಗ ದುಃಖದ ತೀಕ್ಷ್ಣತೆ ಮೊದಲಿಗಿಂತಲೂ ಎಷ್ಟೆಷ್ಟೋ ಹೆಚ್ಚಾಗಿರುತ್ತಿತ್ತು. ನನ್ನ ದುಃಖ ಶಮನಕ್ಕೆ ದೇಶಾಟನೆಯು ಉತ್ತಮ ಸಾಧನವೆಂದು ಅತ್ತೆ ಮತ್ತು ನನ್ನ ಮಿತ್ರರು ಸಲಹೆಯನ್ನು ಕೊಡುತ್ತಿದ್ದರು. ಹೇಗಿದ್ದರೂ ಮಿ. ಮೈಕಾಬರರ ಸಾಲಗಳನ್ನು ಪರಿಹರಿಸಿ, ಅವರ ಪರದೇಶ ಯಾತ್ರೆಗೆ ತಕ್ಕ ವ್ಯವಸ್ಥೆಗಳನ್ನು ಮಾಡಿ ಪೂರೈಸದೆ ನಾನು ಯಾವ ಆಲೋಚನೆಗಳನ್ನೂ ಮಾಡುವುದಿಲ್ಲವೆಂದು ನಿರ್ಧರಿಸಿಕೊಂಡೆನು.

28 April 2015

ಮತ್ತೊಂದು ಸಿಂಹಾವಲೋಕನ

ಅಧ್ಯಾ ಐವತ್ತ್ಮೂರು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಐವತ್ತೈದನೇ ಕಂತು
ಗತಕಾಲದ ಘಟನೆಗಳನ್ನು ಇನ್ನೊಮ್ಮೆ ನೋಡಲು ಬಯಸುತ್ತೇನೆ. ನನ್ನ ಜೀವನ ಯಾತ್ರೆಯಲ್ಲಿ ನಡೆದು ಮುಂದರಿಯುವ ಜನಸಂದಣಿಯ ಪ್ರವಾಹದ ನಡುವೆ ಸ್ಥಿರವಾಗಿ ನಿಂತಂತೆ ತೋರುತ್ತಿರುವ ನನ್ನ ಪತ್ನಿಯ ಮುದ್ದು ಮುಖದ ಸುಂದರ ಚಿತ್ರವೊಂದು ನನ್ನ ದೃಷ್ಟಿಯನ್ನು ಸೆಳೆಯುತ್ತಿದೆ. `ಒಮ್ಮೆ ನಿಂತು ನನ್ನನ್ನು ಪ್ರೀತಿಯಿಂದ ನೋಡಿ ಮುಂದರಿಸು – ನವಕುಸುಮವು ಬಾಡಿ ಬೀಳಲಿರುವುದನ್ನು ಒಮ್ಮೆ ನೋಡು’ ಎಂದು ಅದು ಸಲಿಗೆಯಿಂದ, ನಿಷ್ಕಳಂಕ ಪ್ರೇಮದಿಂದ ನನ್ನನ್ನು ಕರೆದು ಹೇಳುತ್ತಿದೆ!

`ಗುಣವಾಗಲು ಸ್ವಲ್ಪ ದಿನ ಬೇಕು’ ಎಂಬ ಸಮಾಧಾನದ ಮಾತುಗಳನ್ನು ನಾನು ಪುನಃ ಹೇಳುವ ಹಾಗಿಲ್ಲ – ಇನ್ನೆಂದೂ ಜಿಪ್ಪನೂ ಅವಳೂ ನನ್ನೆದುರು ಜತೆಯಾಗಿ ನಲಿದು ಆಡುವುದನ್ನು ನಾನು ಕಾಣೆನು!

ಜಿಪ್ಪನು ಮುದುಕನಾದನು; ಅವನ ದೃಷ್ಟಿ ಮಂದವಾಗಿದೆ. ಅವನು ಡೋರಾಳ ಹಾಸಿಗೆಯ ಒಂದು ಮೂಲೆಯಲ್ಲಿ ಸದಾ ಕುಳಿತು ಅವಳನ್ನು ಕಾಯುತ್ತಿರುವನು.

21 April 2015

ಆಸ್ಫೋಟನದಲ್ಲಿ ನಾನು ಸಹಾಯಕನಾಗುತ್ತೇನೆ

ಅಧ್ಯಾ ಐವತ್ತೆರಡು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಐವತ್ತನಾಲ್ಕನೇ ಕಂತು

ಮಿ. ಮೈಕಾಬರರು ಗೊತ್ತುಮಾಡಿದ್ದ ದಿನ ಬಂತೇ ಬಂತು. ಮಿ. ಡಿಕ್ಕರು ಮತ್ತು ನಾನೂ ಮಾತ್ರ ಕೇಂಟರ್ಬರಿಗೆ ಹೋಗುವುದೆಂದು ಮೊದಲು ನಿಶ್ಚಯ ಮಾಡಿದ್ದರೂ ಡೋರಾಳ ಒತ್ತಾಯಕ್ಕಾಗಿ ಅತ್ತೆಯೂ ನಮ್ಮ ಜತೆಯಲ್ಲಿ ಕೇಂಟರ್ಬರಿಗೆ ಬಂದಳು. ಡೋರಾಳಿಂದ ಇನ್ನೇನೂ ನಮಗೆ ಸಹಾಯ ಮಾಡಲು ಅನುಕೂಲವಿಲ್ಲದೆ ಆಗಿದ್ದುದರಿಂದ ಅತ್ತೆಯನ್ನು ಅವಳ ಒತ್ತಾಯದಿಂದಲಾದರೂ ಕಳುಹಿಸಿದರೆ ನಮಗೆ ಉಪಕಾರವಾಗಬಹುದೆಂದು ಅವಳು ಹಾಗೊಂದು ಒತ್ತಾಯ ಮಾಡಿದಳು. ಎಂದಿಗಿಂತಲೂ ತಾನು ಎಷ್ಟೆಷ್ಟೋ ಹುಷಾರಾಗಿರುವುದಾಗಿ ಹೇಳಿ, ನಾವು ಸ್ವಲ್ಪ ಹಿಂಜರಿಯುವುದನ್ನು ನೋಡಿ ಅವಳು ಅಳಲು ಪ್ರಾರಂಭಿಸಿದಳು. ಹಾಗಾಗಿ ನಾವು ಮೂವರು ನಮ್ಮ ಮನೆಯಿಂದಲೂ ಟ್ರೇಡಲ್ಸನು ಅವನ ಮನೆಯಿಂದಲೂ ಹೊರಟು ಕ್ಲುಪ್ತ ಸಮಯದಲ್ಲಿ ಕೇಂಟರ್ಬರಿ ಹೋಟೆಲಿಗೆ ತಲಪಿದೆವು.

14 April 2015

ದೀರ್ಘತರ ಯಾತ್ರಾರಂಭ

ಅಧ್ಯಾ ಐವತ್ತೊಂದು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಐವತ್ತ್ಮೂರನೇ ಕಂತು
ಈ ಮೊದಲು ಹೇಳಿದ ಸಂಗತಿಗಳು ನಡೆದ ಮರುದಿನ ಬೆಳಗ್ಗೆ ಮಿ. ಪೆಗಟಿ ನಮ್ಮ ಮನೆಗೆ ಬಂದರು. ಈ ದಿನಗಳಲ್ಲಿ ಅತ್ತೆ ಡೋರಾಳ ಶುಶ್ರೂಷೆಗಾಗಿ, ಹೆಚ್ಚಾಗಿ, ನನ್ನ ಮನೆಯಲ್ಲೇ ಇರುತ್ತಿದ್ದಳು. ಮಿ. ಪೆಗಟಿ ಬಂದಾಗ ಅತ್ತೆ ವಿಶ್ರಾಂತಿಗಾಗಿ ನಮ್ಮ ಹೂವಿನ ತೋಟದಲ್ಲಿ ತಿರುಗಾಡುತ್ತಿದ್ದಳು. ಎಮಿಲಿ ಸಿಕ್ಕಿದ ವರ್ತಮಾನವನ್ನೆಲ್ಲ ನಾನು ಹಿಂದಿನ ರಾತ್ರಿಯೇ ಅತ್ತೆಗೆ ತಿಳಿಸಿದ್ದುದರಿಂದ, ಅತ್ತೆಗೂ ನನಗೂ ಎಮಿಲಿಯ ಮುಖದಿಂದಲೇ ಮಿ. ಪೆಗಟಿಯು ತಿಳಿದಿರಬಹುದಾದ ವಿಷಯಗಳನ್ನು ತಿಳಿಯಲು ತುಂಬಾ ಕುತೂಹಲವಿತ್ತು. ಮಿ. ಪೆಗಟಿಗೂ ನಮ್ಮೊಡನೆ ಮಾತಾಡಿ ಅವರ ಮುಂದಿನ ಕೆಲವು ಕಾರ್ಯಗಳನ್ನು ಗೊತ್ತು ಮಾಡಿಕೊಳ್ಳಬೇಕಾಗಿದ್ದುದರಿಂದ, ಅವರು ನಮ್ಮೊಡನೆ ಮಾತಾಡಲು ತಯಾರಾಗಿದ್ದರು.

ಹಾಗಾಗಿ ಎಮಿಲಿಯ ವರ್ತಮಾನಗಳನ್ನು ತಿಳಿಯ ಬಯಸಿದೆವು. ಮಿ. ಪೆಗಟಿಯು ಹೇಳತೊಡಗಿದರು. ಲಿಟ್ಮರನು ತಿಳಿಸಿದ್ದ ವರ್ತಮಾನ ಬಹು ಅಂಶವೆಲ್ಲ ಸರಿಯೆಂದು ಅವರು ಒಪ್ಪಿದರು. ಲಿಟ್ಮರನಿಗೆ ಗೊತ್ತಿಲ್ಲದ ವಿಷಯವನ್ನು ಮಾತ್ರ ಅವರು ತಿಳಿಸಿದರು.

07 April 2015

ಮಿ. ಪೆಗಟಿಯ ಕನಸು ಫಲಪ್ರದವಾಯಿತು

ಅಧ್ಯಾ ಐವತ್ತು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಐವತ್ತೆರಡನೇ ಕಂತು
ನಾವು ಮಾರ್ಥಾಳನ್ನು ನದಿಯ ದಂಡೆಯಲ್ಲಿ ಕಂಡು ಮಾತಾಡಿ ಕೆಲವು ತಿಂಗಳುಗಳೇ ಕಳೆದಿದ್ದುವು. ಮಾರ್ಥಾಳಿಂದ ಯಾವ ವರ್ತಮಾನವೂ ಬರಲಿಲ್ಲ. ಎಮಿಲಿ ಮೃತಪಟ್ಟಿರಬೇಕೆಂದೇ ನಾನು ಊಹಿಸುತ್ತಿದ್ದೆನು. ನನ್ನ ಊಹೆ ನಿಜವೇ ಆಗಿ ಪರಿಣಮಿಸಿದ್ದು, ಮಿ. ಪೆಗಟಿಗೆ ಅದು ತಿಳಿದರೆ ಅವರ ಸ್ಥಿತಿ ಏನಾಗಬಹುದೆಂದು ಊಹಿಸಿಯೇ ನಾನು ಹೆದರುತ್ತಿದ್ದೆನು.

ಮಿ. ಪೆಗಟಿಯ ಮಟ್ಟಿಗೆ, ಅವರ ಊಹನೆಯೇ ಬೇರೆ ತೆರನಾಗಿತ್ತು. ಎಮಿಲಿ ಅವರಿಗೆ ಸಿಕ್ಕಿಯೇ ಸಿಕ್ಕುವಳೆಂದು ಅವರು ದೃಢವಾಗಿ ನಂಬಿಕೊಂಡಿದ್ದರು. ಅವರಿಗೆ ದೇವರಲ್ಲಿದ್ದ ಭಕ್ತಿಯಿಂದಲೂ ಮತ್ತು ತನ್ನ ಗುರಿ ನ್ಯಾಯವಾದುದೆಂಬ ಅವರ ಆತ್ಮವಿಶ್ವಾಸದಿಂದಲೂ ಈ ನಂಬಿಕೆ ಅವರಲ್ಲಿ ಅಚಲವಾಗಿತ್ತು. ಅವರ ಎಲ್ಲಾ ಕೆಲಸಗಳನ್ನೂ ಈ ನಂಬಿಕೆಗೆ ತಕ್ಕಂತೆ ಮಾಡುತ್ತಿದ್ದರು. ಅತ್ಯಂತ ಸಣ್ಣ, ಅಥವಾ ಸಂಶಯಾಸ್ಪದವಾದ, ವರ್ತಮಾನ ಸಿಕ್ಕಿದರೂ ಸಹ ಅವರು ಅದನ್ನು ಸ್ವತಃ ನಡೆದುಹೋಗಿ ಪರೀಕ್ಷಿಸುತ್ತಿದ್ದರು. ಇಪ್ಪತ್ತು ಮೂವತ್ತು ಮೈಲುಗಳನ್ನು ಎಮಿಲಿಗಾಗಿ ನಡೆಯುವುದೆಂದರೆ ಅವರಿಗೆ ಅದು ಬಹು ಸುಲಭದ್ದೇ ಆಗಿತ್ತು. ಮಿಸ್ ಡಾರ್ಟಲ್ಲಳಿಂದ ತಿಳಿದ ವರ್ತಮಾನವನ್ನು ಪರೀಕ್ಷಿಸುವುದಕ್ಕಾಗಿ ಅವರು ನೇಪಲ್ಸಿನವರೆಗೂ ಹೋಗಿ ಬಂದಿದ್ದರು. ಮನಸ್ಸಿನ ಕಲ್ಪನೆಗಳಿಂದ ಅಥವ ಅಂಥ ನಂಬಿಕೆಗಳಿಂದ ಅವರು ಎಂದೂ ತೃಪ್ತಿ ಪಡುತ್ತಿರಲಿಲ್ಲ.

31 March 2015

ನಾನೊಂದು ಗಂಭೀರ ರಹಸ್ಯದಲ್ಲಿ ಸಿಕ್ಕಿಕೊಂಡೆನು

ಅಧ್ಯಾ ನಲ್ವತ್ತೊಂಬತ್ತು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಐವತ್ತೊಂದನೇ ಕಂತು
ಒಂದು ದಿನ ಬೆಳಗ್ಗೆ ಕೇಂಟರ್ಬರಿಯಿಂದ ನನಗೊಂದು ಪತ್ರ ಬಂತು. ಪತ್ರ ಹೀಗಿತ್ತು –
ಪ್ರಿಯ ಮಹನೀಯರೇ
ನಮ್ಮ ನಿಮ್ಮೊಳಗಣ ಸ್ನೇಹ ಸಂಬಂಧಗಳ ವಿವಿಧ ಸಂದರ್ಭಗಳನ್ನು ನನ್ನ ನೆನಪಿನ ಕನ್ನಡಿಯಲ್ಲಿ ನೋಡಿದಾಗ ತೋರಿಬರುವ ಅನೇಕಾನೇಕ ನೆನವರಿಕೆಗಳು, ಈವರೆಗೆ ಮಾತ್ರವಲ್ಲದೆ, ಇನ್ನು ಮುಂದೂ ಸಹ, ನನ್ನ ಅಲ್ಪ ವಾಕ್ಚಾತುರ್ಯದಲ್ಲಿ ವಿವರಿಸಲಸಾಧ್ಯವಾದ ಅನೇಕಾನೇಕ ಆನಂದಯುತ ಭಾವನೆಗಳಿಗೆ ಪ್ರಚೋದಕವಾಗಿರುವುವು. ಹೀಗಿದ್ದರೂ ಇತ್ತೀಚೆಗೆ ಕೆಲಕಾಲದಿಂದ ನಾನು ಸ್ವಾತಂತ್ರ್ಯರಹಿತನಾಗಿ – ಪಾರತಂತ್ರನೇ ಆಗಿ – ಇರುವುದರಿಂದ ನನಗೆ ದೊರಕುವ ಕಿಂಚಿತ್ ಸಮಯಾವಕಾಶದಲ್ಲಾದರೂ ಅಂತಹ ನೆನವರಿಕೆಗಳನ್ನು ಗ್ರಹಿಸಿ ಆನಂದಿಸುವ ಯೋಗವನ್ನೇ ಕಳೆದುಕೊಂಡಿದ್ದೇನೆ. ಸ್ನೇಹದ ಬಳಸು ಕಡಿಮೆಯಾದ ಹಾಗೆಲ್ಲ ಅಳುಕು ಹೆಚ್ಚಾಗುವುದರಿಂದಲೂ ನೀವು ಸಾಹಿತ್ಯ ರಂಗದಲ್ಲಿ ಕೀರ್ತಿಯ ಔನ್ನತ್ಯವನ್ನು ಪಡೆದಿರುವುದರಿಂದ ನನ್ನಲ್ಲುಂಟಾಗುವ ಸ್ವಾಭಾವಿಕ ಅಂಜಿಕೆಯಿಂದಲು ನನಗೆ ಪರಮ ಪ್ರಿಯವಾದ ಮಿ. ಡೇವಿಡ್ ಕಾಪರ್ಫೀಲ್ಡ್ ಎಂಬ ನಿಮ್ಮ ಅಭಿದಾನದಿಂದ ನಿಮ್ಮನ್ನು ಸೀದಾ ಸಂಬೋಧಿಸಲು ನನ್ನ ಮನಸ್ಸು ಹೆದರುತ್ತಿದೆ. ನನ್ನ ಯೌವನ ಕಾಲದಲ್ಲಿ ಸಹೋದ್ಯೋಗಿಯಾಗಿದ್ದ, ಯಾರ ಹೆಸರನ್ನು ಇಲ್ಲಿ ಪ್ರಸ್ತಾಪಿಸಿದ ಭಾಗ್ಯವು ನನ್ನದಿದೆಯೋ ಆ ಹೆಸರನ್ನು, ನಮ್ಮ ಕುಟುಂಬದ ಘನಚರಿತ್ರೆಯ ಒಂದು ಪ್ರಾಮುಖ್ಯ ಅಂಶವಾಗಿ ಕಾದಿರಿಸುವ ಜವಾಬ್ದಾರಿಯನ್ನು ನನ್ನ ಧರ್ಮಪತ್ನಿಯು ನಿರ್ವಹಿಸುವಳೆಂದರೆ ಇಲ್ಲಿ ಅಪ್ರಸಂಗವಾಗಲಾರದು.

24 March 2015

ನನ್ನ ಮನೆ

ಅಧ್ಯಾ ನಲ್ವತ್ತೆಂಟು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಐವತ್ತನೇ ಕಂತು
ನನ್ನ ಮುಖ್ಯ ವೃತ್ತಿ ಪುಸ್ತಕಗಳನ್ನು ಬರೆಯುವುದಾಗಿತ್ತು. ಈ ವೃತ್ತಿಯನ್ನು ಬಹು ಶ್ರದ್ಧೆಯಿಂದ ಮಾಡುತ್ತಾ ಬಂದೆ. ನನ್ನ ಸಾಹಿತ್ಯ ಬಹು ಜನಾದರಣೀಯವಾಗುತ್ತ ಬರುತ್ತಿದೆಯೆಂದು ತಿಳಿದೆನು. ನಾನಾ ಜನರು ತಂತಮ್ಮ ಮೆಚ್ಚುಗೆಯನ್ನು ನನಗೆ ತಿಳಿಸುತ್ತಿದ್ದರು. ಆದರೆ, ನನ್ನ ಮನಸ್ಸಿಗೆ ಒಪ್ಪಿದಂಥ ಪ್ರಶಂಸೆಗಳಿಂದ ಮಾತ್ರ ಸಂತೋಷಪಡುತ್ತಾ ಬಾಕಿಯವುಗಳನ್ನು ಕುರಿತು ಯೋಚಿಸದೆ, ಯಾವ ವಿಧದಲ್ಲೂ ಹೆಮ್ಮೆಪಡದೆ, ಕಾರ್ಯವನ್ನು ಸಾಗಿಸುತ್ತಿದ್ದೆನು. ಆದರೆ, ನನ್ನ ಈ ವೃತ್ತಿಗೆ ನನ್ನ ಸಂಪೂರ್ಣ ಸಮಯ ಶಕ್ತಿ, ಶ್ರದ್ಧೆಗಳು ಅಗತ್ಯವೆಂದು ತೋರಿದ್ದರಿಂದ ಪಾರ್ಲಿಮೆಂಟಿನ ವರದಿಗಾರನಾಗಿ ಇನ್ನು ಮುಂದೆ ಕೆಲಸ ಮಾಡುವುದು ಅನುಚಿತವೆಂದು ಗ್ರಹಿಸತೊಡಗಿದೆ. ಕೊನೆಗೊಂದು ದಿನ ಇದನ್ನು ಕುರಿತು ಆಖೈರು ನಿರ್ಧಾರವನ್ನೇ ಮಾಡಿ ವರದಿಗಾರ ವೃತ್ತಿಯನ್ನು ಪೂರ್ತಿಯಾಗಿ ಬಿಟ್ಟುಬಿಟ್ಟೆ.

17 March 2015

ಮಾರ್ಥಾ

ಅಧ್ಯಾ ನಲ್ವತ್ತೇಳು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ನಲ್ವತ್ತೊಂಬತ್ತನೇ ಕಂತು
ಆದರೆ, ಅವಳ ನಡಿಗೆಯನ್ನೂ ಅವಳು ಹೋಗುತ್ತಿದ್ದ ಸ್ಥಳವನ್ನೂ ಗ್ರಹಿಸಿ ಆಗಲೇ ಅವಳನ್ನು ಮಾತಾಡಿಸದಿದ್ದು, ಅವಳು ಎಲ್ಲಿಯವರೆಗೆ ಹೋಗಬಹುದೆಂದು ತಿಳಿಯಲೋಸ್ಕರವೇ ನಾವು ಅವಳನ್ನು ಮತ್ತೂ ಹಿಂಬಾಲಿಸ ತೊಡಗಿದೆವು. ಮಾರ್ಥಾಳು ಕೆಲವು ಸರ್ತಿ ಬೆಳಕಿನಲ್ಲೂ ಕೆಲವು ಸರ್ತಿ ಕತ್ತಲಲ್ಲೂ ದಾಟಿ, ಮುಂದುವರಿಸುತ್ತಾ ನದಿಗೆ ಸಮೀಪವಾಗತೊಡಗಿದಳು. ಇಷ್ಟರಲ್ಲೇ ಅವಳಿಗೆ ನಮ್ಮ ಕಾಲಸಪ್ಪಳ ಕೇಳಿರಬೇಕು. ಅವಳು ಹಠಾತ್ತಾಗಿ ಚುರುಕಾಗಿ ನಡೆಯುತ್ತಾ ನದಿಯ ಅಂಚಿನವರೆಗೂ ತಲುಪಿ, ಅಲ್ಲಿನ ಒಂದು ಬಂಡೆಯನ್ನೇರಿ ನಿಂತಳು. ಈ ಸಂದರ್ಭಗಳನ್ನು ನೋಡುವಾಗ ಅವಳು ಆತ್ಮಹತ್ಯೆ ಮಾಡಿಕೊಳ್ಳುವುದರಲ್ಲಿ ತೊಡಗಿದ್ದಂತೆಯೂ ತನ್ನೆದುರಿದ್ದ ನದಿಗೆ ಧುಮುಕುವವಳಾಗಿಯೂ ತೋರಿತು. ಅಷ್ಟರಲ್ಲೇ ನಾನು ಒಂದು ಕಡೆಯಿಂದಲೂ ಮತ್ತೊಂದು ಕಡೆಯಿಂದ ಮಿ. ಪೆಗಟಿಯೂ ಅವಳ ಪಕ್ಕಕ್ಕೆ ಹಾರಿ ಹೋಗಿ ಅವಳ ಒಂದೊಂದು ಕೈಯನ್ನು ಬಲವಾಗಿ ಹಿಡಿದುಕೊಂಡೆವು. ನಾನು “ಮಾರ್ಥಾ” ಎಂದು ಕರೆದದ್ದಕ್ಕೆ ಉತ್ತರ ಕೊಡದೆ ಶೂನ್ಯ ದೃಷ್ಟಿಯಿಂದ ಸುತ್ತಲೂ ನೋಡಿದಳು. ಅವಳಿಗೆ ತಾನೆಲ್ಲಿದ್ದೇನೆಂಬ ಪ್ರಜ್ಞೆಯೇ ಇಲ್ಲದಿತ್ತು. ಪುನಃ “ಮಾರ್ಥಾ” ಎಂದು ಕರೆದೆನು.

10 March 2015

ಸುದ್ದಿ

ಅಧ್ಯಾ ನಲ್ವತ್ತಾರು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ನಲ್ವತ್ತೆಂಟನೇ ಕಂತು
ನನ್ನ ಮದುವೆಯಾಗಿ ಸಾಧಾರಣ ಒಂದು ವರ್ಷ ಕಳೆದಿರಬೇಕು. ಆಗ ಒಂದು ದಿನ ಸಂಜೆಯಲ್ಲಿ ನನ್ನ ಕೆಲಸ ಪೂರೈಸಿ ತಿರುಗಾಡುತ್ತಾ ಬರುವಾಗ ಸ್ಟೀಯರ್ಫೋರ್ತನ ಮನೆಯ ಸಮೀಪದ ರಸ್ತೆಯಲ್ಲೇ ಬಂದೆನು. ಹೆಚ್ಚಾಗಿ ನಾನು ಬೇರೆ ರಸ್ತೆಯಲ್ಲೇ ಹೋಗುತ್ತಿದ್ದರೂ ಆ ದಿನ ಮಾತ್ರ ಅಲ್ಲೆ ಬಂದೆನು. ಸ್ಟೀಯರ್ಫೋರ್ತನ ಮನೆಯಲ್ಲಾಗಲೀ ಮನೆ ಕಂಪೌಂಡಿನಲ್ಲಾಗಲೀ ಎಲ್ಲೂ ಜನರಿರಲಿಲ್ಲ. ಆ ವಠಾರವೇ ಹಾಳುಬಿದ್ದಂತೆ ತೋರುತ್ತಿತ್ತು. ಆ ಮನೆಯ ಕಿಟಕಿ ಬಾಗಿಲುಗಳೆಲ್ಲ ಮುಚ್ಚಿದ್ದುವು. ಆ ಮನೆಯ ಪರಿಚಯವಿಲ್ಲದಿದ್ದವರು ಅದನ್ನು ಹೊರಗಿನಿಂದ ನೋಡಿದ್ದರೆ ಮನೆಯ ಯಜಮಾನ ಮಕ್ಕಳು ಮರಿ ಸಂತಾನಗಳಿಲ್ಲದೆ ಒಬ್ಬನೇ ಇರುತ್ತಿದ್ದು, ಆತನೂ ಸಹ ಯಾರಿಗೂ ತಿಳಿಯದೆ ಸತ್ತು ಆ ಮನೆಯೊಳಗೆ ಅವನ ಹೆಣ ಬಿದ್ದು ಕೆಲವು ಕಾಲವಾಗಿದ್ದಂತೆ ತೋರಿ ಬರುತ್ತಿತ್ತು.

03 March 2015

ಮಿ. ಡಿಕ್ಕರನ್ನು ಕುರಿತಾದ ಅತ್ತೆಯ ಭವಿಷ್ಯವಾಣಿ ನಿಜವಾಯಿತು

ಅಧ್ಯಾ ನಲ್ವತ್ತೈದು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ನಲ್ವತ್ತೇಳನೇ ಕಂತು
ಡಾ| ಸ್ಟ್ರಾಂಗರ ಕಾರ್ಯದರ್ಶಿ ಕೆಲಸವನ್ನು ಬಿಟ್ಟು ಈಗಾಗಲೇ ಕೆಲವು ದಿನಗಳಾಗಿವೆ. ನನ್ನ ಕೆಲಸವನ್ನು ಬಿಟ್ಟರೂ ಅವರ ಮನೆಗೆ ಆಗಿಂದಾಗ್ಗೆ ಹೋಗಿಬರುವುದನ್ನು ಬಿಡಲಿಲ್ಲ. ನಮ್ಮ ಮನೆಗೂ ಅವರ ಮನೆಗೂ ವಿಶೇಷ ದೂರವಿಲ್ಲದಿದ್ದುದು ಹೀಗೆ ಹೋಗಿ ಬರಲು ಬಹಳ ಅನುಕೂಲವಾಗಿತ್ತು. ಕೆಲವೊಮ್ಮೆ ನಾವು ಅಲ್ಲಿಗೆ `ಟೀಪಾರ್ಟಿ’ಗಳಿಗಾಗಿಯೂ ಹೋಗುತ್ತಿದ್ದೆವು. ತನ್ನ ಚಿಕ್ಕ ಪ್ರಾಯದ ಪತ್ನಿಯ ಸಂತೋಷಕ್ಕಾಗಿ ಸಮಾಜದಲ್ಲಿ ನಡೆದುಬರುವ `ಪಾರ್ಟಿ’ಗಳನ್ನೂ ಹಾಸ್ಯ, ವಿನೋದ ಮೊದಲಾದುವುಗಳನ್ನೊಳಗೊಂಡ ಚಟುವಟಿಕೆಗಳನ್ನು ಅವರು ತಮ್ಮ ಮನೆಯಲ್ಲಿ ಆಗಿಂದಾಗ್ಗೆ ಜರುಗಿಸುತ್ತಿದ್ದರು. ಈ ಕೆಲಸಗಳನ್ನೆಲ್ಲ ಅವರು ಬಹು ನಿಷ್ಠೆಯಿಂದಲೇ ನಡೆಸುತ್ತಿದ್ದರು. ಡಾ| ಸ್ಟ್ರಾಂಗರ ಮನೋಭಾವಗಳನ್ನು ಅರಿತಿದ್ದ ಮಿಸೆಸ್ ಮಾರ್ತಲ್ ಹೇಮಳು ತನ್ನ ಮಗಳ ಗೃಹಕೃತ್ಯಗಳಲ್ಲಿ ಸಹಾಯ ಒದಗಿಸಲು ಎಂದಂದುಕೊಂಡು –
ತನಗೆ ಬಹು ಪ್ರಿಯವಾಗಿದ್ದ ವಿಲಾಸ ವಿನೋದಗಳನ್ನು ಅನುಭವಿಸುವುದಕ್ಕಾಗಿಯೇ ಡಾಕ್ಟರ್ ಸ್ಟ್ರಾಂಗರ ಮನೆಯಲ್ಲಿ – ಸಾಧಾರಣ ಶಾಶ್ವತವಾಗಿಯೇ ಎಂಬಷ್ಟರ ಮಟ್ಟಿನಲ್ಲಿ ನೆಲೆಸಿಬಿಟ್ಟಿದ್ದಳು. ಡಾಕ್ಟರರ ಪತ್ನಿಗೆ ಇಷ್ಟವಿಲ್ಲದಿದ್ದರೂ ಈ `ಸಿಪಾಯಿ’ಯು (ಮಿಸೆಸ್ ಮಾರ್ತಲ್ ಹೇಮಳನ್ನು ನಾವು ಹಾಗೆಯೇ ಹಿಂದಿನಿಂದ ಹೇಳಿಕೊಳ್ಳುದ್ದಿದ್ದೇವಷ್ಟೆ) “ಎನ್ನೆ, ಇಂದು ಕವೆಂಟ್ ಗಾರ್ಡನ್ನಿನ ಅಪೇರ ನೋಡಲು ಹೋಗೋಣ. ನಾಡಿದ್ದು ಮಾರ್ಕೆಟ್ ವಠಾರದ ವಸ್ತುಪ್ರದರ್ಶನ ನೋಡಲು ಹೋಗೋಣ” ಎಂದು ಮೊದಲಾಗಿ ಹೇಳಿ ಮಗಳನ್ನು ಒತ್ತಾಯಪಡಿಸಿ ಕರೆದುಕೊಂಡು ಹೋಗುತ್ತಿದ್ದಳು.