(ದಂಡಯಾತ್ರೆ ಎರಡನೇ ಹಾಗೂ ಅಂತಿಮ ಭಾಗ)
ನೆನಪುಗಳ ಹೊರೆಯಲ್ಲದಿನ್ನೊಂದ ಒಯ್ಯದಿರು
ನಿನ್ನನಡೆಯಚ್ಚಲ್ಲದಿನ್ನೊಂದ ಉಳಿಸದಿರು
ಡಾ| ಮಂಟಪ ರತ್ನಾಕರ ಉಪಾಧ್ಯರ ಬಹುಮುಖೀ ಹವ್ಯಾಸ ಮತ್ತು ಸಾಮಾಜಿಕ ಕೆಲಸಗಳಿಂದ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಯೊಬ್ಬರ (ಹೆಸರು ಬೇಡ) ಆತ್ಮೀಯ ಪರಿಚಯ ಬೆಳೆದಿತ್ತು. ಪರಿಚಯ ಒಡನಾಟಕ್ಕೆ ಬೆಳೆದು ಕೆಲವು ಪ್ರಾಕೃತಿಕ ವೈಶಿಷ್ಟ್ಯ ಅನಾವರಣ ಯಾತ್ರೆಗಳನ್ನು ಇವರ ಅನೌಪಚಾರಿಕ ಮಿತ್ರಮಂಡಳಿ ನಡೆಸಿದ್ದೂ ಇತ್ತು. ಹಾಗೇ ಈಚೆಗೆ ರೂಪುಗೊಂಡಿತ್ತು ಕುಳಗಿ ಕೇಂದ್ರಿತವಾದ ದಾಂಡೇಲಿ-ಅಣಶಿ ವ್ಯಾಘ್ರಧಾಮದ ಭೇಟಿ. ನಾವು (ನಾನು ಮತ್ತು ಹೆಂಡತಿ ದೇವಕಿ) ಸ್ವತಂತ್ರವಾಗಿ ಬೆಳಿಗ್ಗೆ ಬೈಕೇರಿ ಮಂಗಳೂರು ಬಿಟ್ಟದ್ದು ಮತ್ತು ಪಯಣದ ವಿವರ ಕಳೆದ ವಾರ ಹೇಳಿದ್ದೇನಷ್ಟೆ. (ಅವರಿನ್ನೂ ಸಂಜೆ ಟೆಂಪೋದಲ್ಲಿ ಸಂಜೆ ಶಿವಮೊಗ್ಗ ಬಿಡಬೇಕಿತ್ತು)
