Showing posts with label ದೂದ್ ಸಾಗರ್. Show all posts
Showing posts with label ದೂದ್ ಸಾಗರ್. Show all posts

17 August 2012

ಕ್ಷೀರಪಥದಿಂದ ಕಾಳಿ ಪಾತ್ರೆಗೆ (ದೂದ್ ಸಾಗರ್ ಸರಣಿಯಲ್ಲಿ ಹನಿ ಮೂರು)


ಗೋವಾ-ಕರ್ನಾಟಕದ ವಾಸ್ತವದ ಗಡಿ ರೇಖೆ ಘಟ್ಟದ ಮೇಲೆಲ್ಲೋ ಇದ್ದರೂ ತನಿಖಾ ಠಾಣೆಯನ್ನು ಮೊಲೆನ್ನಿನಲ್ಲೇ ಇಟ್ಟುಕೊಂಡಿದ್ದರು. ಇವರಿಗೆ ‘ಬಾಟಲಿ-ಪುತ್ರ’ರಿಂದ ಒಳ್ಳೆಯ ಕರ (ಅಥವಾ ಮೇಲ್ಸಂಪಾದನೆ) ಸಂಗ್ರಹವಾಗುತ್ತದಂತೆ. ಕುಡಿಯುವ ಯೋಗ್ಯತೆ ಇಲ್ಲದ ನಮ್ಮನ್ನವರು ಕೀಳ್ಗಣ್ಣಲ್ಲಿ ಕಂಡರು. ಆದರೆ ಅಲ್ಲಿ ಸಹಜವಾಗಿ ವಿಕಸಿಸಿದ್ದ ಧಾಬಾ ಮಾತ್ರ ನಮ್ಮ ಹಸಿವು, ಬಾಯಾರಿಕೆಗಳ ಅಗತ್ಯಕ್ಕೆ ಸಾಕಷ್ಟು ‘ದಂಡ’ ಹಾಕಿದ್ದನ್ನು ಸಂತೋಷದಲ್ಲೇ ಒಪ್ಪಿ ಮುಂದುವರಿದೆವು. ದಾರಿ ನಮ್ಮ  ಶಿರಾಡಿ ಘಾಟಿಯನ್ನೇ ಹೋಲುತ್ತಿತ್ತು. ಡಾಮರೂ ಮೊದಲೇ ಹೇಳಿದಂತೆ ನುಣ್ಣಗೇ ಇತ್ತು. ಆದರೆ ಅದಕ್ಕೆ ತಕ್ಕಂತೆ (ಇಂದು ನಾವು ಹೊಸ ಚತುಷ್ಪಥಗಳಲ್ಲಿ ಕಾಣುತ್ತಿರುವ) ಏರು, ತಿರುವುಗಳ ವ್ಯವಸ್ಥೆಯಲ್ಲಿ ವೈಜ್ಞಾನಿಕ ಕೊರತೆಯಿಂದ ಸಾಕಷ್ಟು ಅಪಘಾತಗಳು ಆಗುತ್ತಿದ್ದುದನ್ನು ಗಮನಿಸಿದೆವು. ಒಂದು ತೀವ್ರ ಏರಿನ ತಿರುವಿನಲ್ಲಿ ದಾರಿಯಲ್ಲಿ ಭಾರೀ ಮೀನುಗಳ ರಾಶಿ. “ಅರೆ, school of fish ಘಾಟಿಯ ಚಂದ ನೋಡಲು ಚಾರಣ ಬಂದಿರಬೇಕು” ಎಂದು ಉದ್ಗರಿಸಿಹೋಯ್ತು! ಸ್ವಲ್ಪ ಮುಂದೆ ಯಾವುದೋ ಗುದ್ದಿ ಜಖಂಗೊಂಡ ಟೆಂಪೋ ಕಂಡ ಮೇಲೆ ಮಾತನ್ನು ಸಂಜೆ ಪತ್ರಿಕಾ ಕಾಲಂಗೆ ಪರಿಷ್ಕರಿಸಿಕೊಂಡೆ: ‘ವಿಹಾರಕ್ಕೆ ಹೊರಟ ಮೀನುಗಳ ದುರ್ಮರಣ! ಕೊಲೆಗಾರ ಲಾರಿ ಕೊಳ್ಳಕ್ಕೆ ಹಾರಿ ಆತ್ಮಹತ್ಯೆ!!’ ಅನುಬಂಧ - ಆರೋಹಣ ಸಾಹಸಿಗಳ ಅಶ್ರು ತರ್ಪಣ!!!

10 August 2012

ಅಮಲಿನ ಗೋವಾ (ದೂದ್ ಸಾಗರ್ ಸರಣಿ - ಹನಿ ಎರಡು)


ಯೋಜನಾವಧಿಯಲ್ಲಿ ನೆನಪಿನ ಬೆರಗಿಗೆ (ನನ್ನದೇ) ಪುಸ್ತಕದಂಗಡಿಯಲ್ಲಿ ನಿಜದ ದಾರಿ ಹುಡುಕುತ್ತ ಸುಮಾರು ಭೂಪಟ, ಪ್ರವಾಸ ಕಥನದ ಪುಸ್ತಕಗಳನ್ನು ಮಗುಚಿ ಹಾಕಿದ್ದೆ. ಇಪ್ಪತ್ನಾಲ್ಕು ವರ್ಷದ ಮೇಲೂ ದೂದ್‌ಸಾಗರ್ ಬಳಿ ರೈಲ್ವೇ ಹಳಿ ಮಾತ್ರ ಕಾಣುತ್ತಿತ್ತು. ಅಸ್ಪಷ್ಟ ದಾರಿ ಸೂಚಕ ಗೀಟುಗಳು ದಕ್ಷಿಣದಲ್ಲಿ ಕಾಲೆಮ್‌ವರೆಗೂ ಉತ್ತರದಲ್ಲಿ ಕೊಲೆನ್‌ವರೆಗೂ ಹರಿದಿತ್ತು. ನಮಗೆ ಮತ್ತೆ ಬೈಕ್ ಬಿಟ್ಟು ರೈಲೇರಲು ಮನಸ್ಸಿರಲಿಲ್ಲ. ಮುಂದೇನು ಎಂಬ ನನ್ನ ಯೋಚನೆಗೆ ಭಂಗ ಬರುವಂತೆ ಒಂದು ಗಿರಾಕಿ, ಕೃಷಿ ಪುಸ್ತಕ ಕೇಳಿ ಬಂದರು. One straw revolution ಕೊಟ್ಟೆ. ಆತ ನಸುನಕ್ಕು “ಇದು ನಮ್ಮ ಗೋವಾದ್ದೇ ಪ್ರಕಟಣೆ” ಎನ್ನಬೇಕೇ. ನಾನು ಗಿರಾಕಿ ಮರೆತು, ಅವರಲ್ಲಿ ಗೋವಾ ಮಾಹಿತಿದಾರ ಎಂ.ವಿ ಹೆಗಡೆಯವರನ್ನು ಕಂಡುಕೊಂಡೆ! ಕೊಲೆನ್ನಿನಲ್ಲೇ ಕೃಷಿ ನಡೆಸಿದ್ದ ಹೆಗಡೆಯವರು ದಾರಿ ವಿವರ ಮತ್ತು ಸ್ವತಃ ಸಹಾಯ ಮಾಡಬಲ್ಲೊಬ್ಬ ಮಿತ್ರನಿಗೆ ಪತ್ರವನ್ನೂ ಕೊಟ್ಟರು. ಹಾಗೆ ರೂಪಿಸಿದ್ದ ಯೋಜನೆ ಮರುದಿನಕ್ಕಿತ್ತು. ಮೊದಲ ದಿನ ರೈಲು ಯಾನದ ಅನಿಶ್ಚಿತತೆಗೇ ಮೀಸಲು. ಅರ್ಧ ದಿನವೇ ಉಳಿದಿದ್ದುದರಿಂದ ಮೊದಲು ಆರಾಮವಾಗಿ ನಮ್ಮ ಮತ್ತು ಬೈಕ್‌ಗಳ ಹೊಟ್ಟೆಗೆ ಆಹಾರ ಹಾಕಿದೆವು.

20 July 2012

ದೂದ್ ಸಾಗರ್ (ಹನಿ ಒಂದು - ಕೊಂಕಣ ರೈಲು ಕಂಡೀರಾ)


ಭೂ ತಾಯಿಯ ಹಾಲಿನ ಭಾಂಡದಲ್ಲಿ ಉಕ್ಕು ಬಂದಿತ್ತು, ಬೆಟ್ಟ ಬಟ್ಟಲ ಅಂಚಿನಲ್ಲಿ ಬೆರಗಿನ ಬುರುಗು ತುಳುಕಿತ್ತು. ಮಳೆತೊಳೆದ ಬೆಟ್ಟ ಸಾಲಿನ ನೆತ್ತಿಯಿಂದ ಹಾಲಹೊಳೆ, ಹೌದು ಹೆಸರೇ ಹಾಗೆ - ದೂದ್ ಸಾಗರ್, ಅಕ್ಷರಶಃ ನೊರೆಯುಬ್ಬಿಸಿ ಧುಮುಗುಡುತ್ತಿತ್ತು. ಆ ಎತ್ತರದಿಂದ ನಮ್ಮ ಪಾದಮೂಲದವರೆಗೆ ಮತ್ತೂ ಕೆಳಕ್ಕೆ ಮಿಂದ ಬಂಡೆಯನ್ನೆ ಮತ್ತೆ ಮೀಯಿಸುವಂತೆ, ಒತ್ತಿನ ಹಸುರಿಗೆ ಪ್ರತಿ ಕ್ಷಣದ ಬೆರಗು ಹೊಸದೇ ಅನ್ನಿಸುವಂತೆ ‘ಉಧೋ’ ಹೇಳುತ್ತಲೇ ಇತ್ತು. ನೊರೆ ಚೆಂಡು ಮುಕ್ಕುಳಿಸಿ, ವಾತಾವರಣದಲ್ಲೆಲ್ಲ ಹುಡಿ ಹಾರಿಸಿ, ಮಳೆಯನ್ನೂ ತಾನೇ ವಹಿಸಿಕೊಂಡು ಸಂಭ್ರಮಿಸುತ್ತಿದ್ದ ದೂದ್ ಸಾಗರ್ ಹೊಳೆಯ ಜಲಪಾತ ಅತಿಶಯೋಕ್ತಿಗಳೆಲ್ಲವನ್ನೂ ಅನ್ವರ್ಥಗೊಳಿಸಿಕೊಂಡಿತ್ತು. ನನ್ನ ನೆನಪಿನ ಮಸುಕು ಎಳೆ ಹಿಡಿದು, ಕನಿಷ್ಠ ಸೌಕರ್ಯಗಳ ಕೊರತೆ ಮೀರಿ, ನಿರುತ್ತೇಜಕ ಮಳೆ ಮಬ್ಬುಗಳ ಪೊರೆ ಹರಿದು ಹದಿಮೂರು ಕಿಮೀ ನಡೆದು ಬಂದ ನಮಗೆ ಪರಮ ಧನ್ಯತೆಯ ಸನ್ನಿವೇಶ. ದೇಶ ಸ್ವಾತಂತ್ರ್ಯ ಸ್ವರ್ಣ ಸಂಭ್ರಮದ ಔಪಚಾರಿಕತೆಗಳಲ್ಲಿ ಸಿಕ್ಕಿಕೊಂಡಿದ್ದಾಗ ನಮಗಿಲ್ಲಿ ನಿಜ ಹಬ್ಬ. ಪಶ್ಚಿಮ ಘಟ್ಟದ, ಗೋವಾ ವಲಯದ, ಕಗ್ಗಾಡಮೂಲೆಯ, ಯುಗಾಂತರಗಳ ರುದ್ರ ನಾಟ್ಯಕ್ಕೆ ಐದು ಮಿನಿಟಿಗಾದರೂ ಪ್ರೇಕ್ಷಕರಾಗುವ ಅವಕಾಶ. ಈ ಸಾಹಸ ಯಾತ್ರೆಯ ರಮ್ಯ ಕಥಾಮೃತವನ್ನಿನ್ನು ಸಾದ್ಯಂತ ಬಣ್ಣಿಸುತ್ತೇನೆ (“...ಬಣ್ಣಿಪೆನೀ ಕಥಾಮೃತವಾ” ಇಲ್ಲಿ ಚಂಡೆ ಬಡಿಬೇಕು!).