Showing posts with label ಮಂಗಳೂರು. Show all posts
Showing posts with label ಮಂಗಳೂರು. Show all posts

27 February 2015

ಸೈಕಲ್ ದಿನಚರಿಯ ಕಳಚಿದ ಪುಟ

(ಚಕ್ರೇಶ್ವರ ಪರೀಕ್ಷಿತ ೬)

ಜಂಟಿ ಸೈಕಲ್ ಇನ್ನಿಲ್ಲ...

“ಆನಂದನಿಗೆ ಬೇರೆ ಕೆಲಸವಿಲ್ಲ” ಎಂದು ಅರೆ-ಕೋಪದೊಡನೇ ಉಡುಪಿಯ ಮಿಂಚಂಚೆಗೆ ಉತ್ತರಿಸಿದೆ. “ನಿಮ್ಮ ಸಹಪಾಠಿಯ ಗಂಡ, ಅಂದರೆ ನನ್ನ ತಮ್ಮ ಆನಂದನಿಗೆ, ನಮ್ಮ ಜಂಟಿ ಸೈಕಲ್ ಮಾರಾಟಕ್ಕಿದೆ ಎಂದು ಯಾರು ಹೇಳಿದರೋ ಗೊತ್ತಿಲ್ಲ. ನಾವದನ್ನು ಕೊಂಡು ಈ ಚೌತಿಗೆ ಎರಡು ವರ್ಷವಾಗುತ್ತಿದೆ.   ನಾನದರ ಗೇರ್ಯುಕ್ತ ಪರಿಷ್ಕೃತ ಆವೃತ್ತಿಯ ನಿರೀಕ್ಷೆಯಲ್ಲಿದ್ದೇನೆ. “ಅದು ಬಂದರೆ, ಇದು ಮಾರಬಹುದು” ಎಂದು ನನ್ನಷ್ಟಕ್ಕೇ ಹೇಳಿಕೊಂಡದ್ದಿದೆ - ಅಷ್ಟೆ. ಏನೇ ಇರಲಿ, ನೀವು ಕೇಳಿದ್ದಕ್ಕೆ...” ಎಂದು ಕೆಲವು ನಿರುತ್ತೇಜಕ ಕರಾರುಗಳ ಮೇಲೆ ಮಾರಾಟಕ್ಕೆ ಒಪ್ಪಿದೆ. ನನ್ನ ಗ್ರಹಚಾರಕ್ಕೆ ಆ ದಿಟ್ಟ ಮಹಿಳಾ ಗಿರಾಕಿ ಮರು-ಟಪಾಲಿಗೆ “ನನಗೆ ಆ ಬೈಸಿಕಲ್ ನೀವು ಹೇಳಿದ ಸ್ಥಿತಿ ಮತ್ತು ಬೆಲೆಯಲ್ಲಾದರೂ ಬೇಕೇ ಬೇಕು. ಹಣ ತಯಾರಿದೆ. ನೀವೇ ತಂದೊಪ್ಪಿಸುವ ಹಠ ಬಿಟ್ಟರೆ, ನಾನು ಅದನ್ನು ಅಲ್ಲಿಂದಲೇ ಸಂಗ್ರಹಿಸಿಕೊಳ್ಳುವ ವ್ಯವಸ್ಥೆ ಬೇಕಾದರೂ ಮಾಡಬಲ್ಲೆ.”


ಎರಡು ದಿನ ಹಗಲು ಒಳ್ಳೇ ಮಳೆ. ಮೂರನೇ ದಿನಕ್ಕಾಗುವಾಗ, ಪೂರ್ವಾಹ್ನ ಮತ್ತೆ ಮಳೆರಾಯ ಚಿಟಪಟ ಹನಿಗಳ ಬಿತ್ತನೆ ನಡೆಸಿದ್ದ. ಆದರೆ ಸಂಜೆಗೂ ಮುನ್ನ ಆತನ ಬುಟ್ಟಿ ಖಾಲಿಯಾಗಿತ್ತು. ಮೂರು ದಿನದಿಂದ ಕಾಡಿದ್ದ ನನ್ನ ಶೀತ ಇಳಿಮುಖದಲ್ಲಿತ್ತು, ದೇವಕಿಗೆ ಶೀತ ಹಿಡಿಯುವುದರಲ್ಲಿತ್ತು. ಹಾಗಾಗಿ ಬರಿಯ ಸಂಜೆ ಸರ್ಕೀಟೆಂದು ಜಂಟಿ ಸೈಕಲ್ ಏರಿದ್ದೆವು. ಶಕುನದ ಸುಭಗತನಕ್ಕೆ ಪಕ್ಕದ ಮನೆಯ ಅತ್ತೆಯ ಹತ್ತಿರ “ನಮ್ಮ ಅಂತಿಮ ಯಾತ್ರೆ” ಎಂದೂ ಹೇಳಿ ಬೈಸಿಕೊಂಡೇ ಬೈಸಿಕಲ್ ಹೊಡೆದೆವು. ಲೇಡಿಹಿಲ್, ಕೊಟ್ಟಾರ, ಕೂಳೂರು ತಲಪುವಾಗ ನಮ್ಮ ತಲೆಯೊಳಗೊಂದು ಹುಳ ಹೊಕ್ಕಿತು. ಸರಿ, ಅದಕ್ಕೆ ಒಲಿದು ಮತ್ತೂ ಮುಂದುವರಿದೆವು. ಅದುವರೆಗೆ ಜಂಟಿ ಸೈಕಲ್ಲನ್ನು ನಾವು ಬೈಕಂಪಾಡಿಯಾಚೆ ಒಯ್ಯುವ ಧೈರ್ಯ ಮಾಡಿರಲಿಲ್ಲ. ಈಗ ಸರಾಗ ಸುರತ್ಕಲ್, ಪಾವಂಜೆ, ಎನ್ನುತ್ತಾ ಮೂಲ್ಕಿ ಹೊರವಲಯದ ಕಿಲ್ಪಾಡಿಯವರೆಗೂ ಓಡಿಸಿದೆವು. ಅಲ್ಲಿ ನನ್ನ ಗೆಳೆಯ ಮೋಹನರಾಯರ ಮನೆ ಸೇರುವಾಗ ನಮ್ಮ ನಿತ್ಯದ ಗರಿಷ್ಠ ಸಮಯ ಎರಡು ಗಂಟೆ ಸಂದಿತ್ತು. ನಿಜ ಅತಿಥಿಗಳಿಗೆ (=ಹೇಳದೇ ಬಂದವರು) ಪಪ್ಪಾಯಿ ಕೊಟ್ಟು ಸತ್ಕರಿಸಿದ ಮೋಹನರಾವ್ ದಂಪತಿ, ಸಂತೋಷದಿಂದ ನಮ್ಮ ಸೈಕಲ್ಲಿಗೆ ರಾತ್ರಿಯ ತಂಗುದಾಣ ಕಲ್ಪಿಸಿದರು. ಅವರು ನಮಗೂ ಆಶ್ರಯ ಕೊಡುವ ಉತ್ಸಾಹದಲ್ಲಿದ್ದರೂ ನಾವು ಒಪ್ಪಿಕೊಳ್ಳಲಿಲ್ಲ. ಬೆಳಕು ಮಾಸಿದ್ದ ಹೊತ್ತಿನಲ್ಲಿ ಬಸ್ಸೇರಿ, ಕತ್ತಲಲ್ಲಿ ಮಂಗಳೂರಿಗೆ ಮರಳಿದೆವು. 

21 November 2014

ಚಕ್ರೇಶ್ವರನ ಸಿಂಹಾವಲೋಕನ

(ಚಕ್ರೇಶ್ವರ ಪರೀಕ್ಷಿತ – ೫)

ಕೊಂಕಣ ಸುತ್ತಿ ಮೈಲಾರ:




ಜೋಡುಮಾರ್ಗದ ಗೆಳೆಯ ಸುಂದರರಾವ್ ಮತ್ತು ರಮಾ ದಂಪತಿಗೆ ಒಂದು ಚಾ ದಂಡ ಹಾಕೋಣವೆಂದು ಅಂದು ಮಧ್ಯಾಹ್ನ ಎರಡೂವರೆಗೆ ಸೈಕಲ್ಲೇರಿ ಹೊರಟೆ. ಬರಿದೇ ಹೆದ್ದಾರಿಯಲ್ಲಿ ಬಂಟ್ವಾಳ ಜೋಡು ರಸ್ತೆಗೆ (ಬಿ.ಸಿ ರೋಡು) ಹಿಂದೊಮ್ಮೆ ಹೋಗಿ ಬಂದಿದ್ದೆ. ಹೊಸತನಕ್ಕಾಗಿ ಹೊಸ ದಿಕ್ಕು - ನಂತೂರು, ಕುಲಶೇಖರ, ನೀರ್ಮಾರ್ಗ ದಾರಿ ಅನುಸರಿಸಿದೆ. ಜಿಲ್ಲೆಯೊಳಗೆ ಸಾಮಾನ್ಯವಾಗಿ ನದಿಪಾತ್ರೆಯನ್ನನುಸರಿಸುವ ಅಥವಾ ಕಡಲ ಕಿನಾರೆ ಸಾಮೀಪ್ಯದ ದಾರಿಗಳು ಮಾತ್ರ ತುಸು ಸಮಾಧಾನದಲ್ಲಿರುತ್ತವೆ. ಉಳಿದವು ಹೆಚ್ಚಾಗಿ ಗುಡ್ಡೆಗಳ ಏಣು ಬಳಸಿ, ತಗ್ಗು ಸುಳಿಸಿ ಅಂಕಾಡೊಂಕು ಮತ್ತು ಒಮ್ಮೆ `ಸ್ವರ್ಗ’ದ ಎತ್ತರಕ್ಕೇರಿಸುತ್ತವೆ, ಮರುಕ್ಷಣಕ್ಕೆ `ಪಾತಾಳ’ದ ಆಳಕ್ಕೇ ತಳ್ಳುತ್ತವೆ.



ನೀರ್ಮಾರ್ಗದ ಕಥೆ ಇದೇ. ಸೈಕಲ್ ಇಳಿಯುವ ರಭಸವನ್ನು ಏರುವ ಶ್ರಮಕ್ಕೆ ಪರಿವರ್ತಿಸಲಾಗಿದ್ದರೆ ಎಂದು ಕೊರಗುವಂತೆ ಹೊಸ ಏರು ಎದುರಾಗುತ್ತಿತ್ತು. ಇಳಿಜಾರಿನ ಸುಳಿದಾಟಗಳಲ್ಲಿ ರಸ್ತೆಯ ಎಡ ಅಂಚು ಕಾಯ್ದುಕೊಳ್ಳುವುದು ಸುಲಭ. ಅದೇ ಏರು ದಾರಿಯಲ್ಲಿ ಸೈಕಲ್ಲಿಗೆ ಯಾವುದೇ ಮಗ್ಗುಲಿನ ಒಳ ಅಂಚು ಕಠಿಣವಾಗುತ್ತದೆ. ನಾವು ಮೋಟಾರ್ ವಾಹನಗಳಲ್ಲಿದ್ದರೆ ಮೂಲತಃ ನಮ್ಮದೇ ಸದ್ದಿನಿಂದ ದಾರಿಯ ಕಾಣಿಸದ ಹಿಂದುಮುಂದಿನ ವಾಹನಗಳ ಬರ-ಹೋಗುವ ಸೂಚನೆಗಳು ತಿಳಿಯದೇ ಹೋಗಬಹುದು. ಆದರೆ ಸುಸ್ಥಿಯ ಸೈಕಲ್ ನಡಿಗೆಗಿಂತಲೂ ಮೌನಿ. ರಸ್ತೆಯ ಯಾವುದೇ ಅಂಚನ್ನು ನಿಷ್ಠೆಯಿಂದ ಕಾಯ್ದುಕೊಳ್ಳುವ ಸೈಕಲ್ಲನ್ನು ಇತರ ವಾಹನಗಳು ಪಾದಚಾರಿಗಳ ವರ್ಗದಲ್ಲೇ ಕಾಣುವುದರಿಂದ ಆತಂಕಿತರಾಗುವುದಿಲ್ಲ ಮತ್ತು ರಿಯಾಯಿತಿಯನ್ನೂ ಕೊಡುತ್ತಾರೆ. (ಪೇಟೆಯೊಳಗೇ ಗಮನಿಸಿ: ಕೆಂಪು ಸಂಕೇತ, `ನೋ ಎಂಟ್ರಿ’, ಏಕಮುಖಸಂಚಾರಗಳಲ್ಲೆಲ್ಲ ಪೋಲಿಸರು ಸೈಕಲ್ಲನ್ನು ವಿಚಾರಿಸುವುದೇ ಇಲ್ಲ!) ನಾನಿದನ್ನು ಗಮನದಲ್ಲಿಟ್ಟುಕೊಂಡು ಕಠಿಣವಾದ ಎಡ ತಿರುವುಗಳಲ್ಲೆಲ್ಲ ಎಚ್ಚರಿಕೆ ಎಚ್ಚರಿಕೆಯಿಂದ ಬಲ ಮಗ್ಗುಲುಗಳನ್ನೇ ಬಳಸಿಕೊಂಡೆ.

07 November 2014

ಕಾಲಚಕ್ರದಲ್ಲಿ ಮತ್ತಷ್ಟು ಸುತ್ತುಗಳು


(ಚಕ್ರೇಶ್ವರ ಪರೀಕ್ಷಿತ – ೪)




ಕೆತ್ತಿ ಹೋದ ಕಲ್ಲು: ಹೆಸರು ಅಮೃತ ನಗರ, ಆಚೆ ಕೊನೆಯಲ್ಲಿ ಮೃತ ನಗರ ಕ್ಷಮಿಸಿ, ಮಾತಿನ ಅಲಂಕಾರಕ್ಕೆ ಹೇಳುತ್ತಿಲ್ಲ. ಮೂಡಬಿದ್ರೆ ದಾರಿಯಲ್ಲಿ ಕುಖ್ಯಾತವೇ ಆದ ಕೆತ್ತಿಕಲ್ಲಿನ ನೆತ್ತಿಯಲ್ಲಿ ಪುಟ್ಟ ವಸತಿ ವಠಾರದಲ್ಲಿ ನಿನ್ನೆ ಸಂಜೆ ನನ್ನ ಸೈಕಲ್ ಸರ್ಕೀಟು ಕಂಡ ಮನಕಲಕಿದ ವಾಸ್ತವವಿದು.


ಸೈಕಲ್ಲೇರಿ ಅದೇ ಕುಲಶೇಖರ, ಕುಡುಪು, ವಾಮಂಜೂರು ದಾರಿಗಾಗಿ ಗುರುಪುರಕ್ಕೆಂದೇ ಹೊರಟಿದ್ದೆ. ಪಿಲಿಕುಳ ಕವಲು ಎಡಕ್ಕೇ ಬಿಟ್ಟು ಮುಂದುವರಿದಂತೆ ಪಿರಿಪಿರಿ ಮಳೆ ಹಿಡಿದುಕೊಂಡಿತು. ಮೊನ್ನೆ ಹೀಗೇ ನಂತೂರು, ಕಾವೂರು, ಕೂಳೂರು ನೆನೆದುಕೊಂಡೇ ಹೋಗಿದ್ದೆ. ಕೆಲವರು ಮಳೆ ಕಂಡಾಗ ಹೌಹಾರುವ ಕ್ರಮ ನೋಡಿದಾಗ ಗೆಳೆಯ ವೆಂಕಟ್ರಮಣ ಉಪಾಧ್ಯರ ಮಾತು “ಅದ್ ನೀರು, ಸುಡೂಕ್ ಬೆಂಕಿಯಲ್ಲ ಕಾಣಿ” ನೆನಪಾಗುತ್ತದೆ. ಬಚ್ಚಲುಮನೆಯಲ್ಲಿ ಗಂಟೆಗಟ್ಟಳೆ ಶಿಖನಖಾಂತ “ಗೋವಿಂದಾನೆ ಗೋವಿಂದ” ಮಾಡುವಾಗ ಬಾರದ ಶೀತಜ್ವರ ಮಳೆಯಲ್ಲಿ ನೆಂದರೆ ಬರುತ್ತದೆಂಬರ ಭ್ರಮೆ ನನಗಿಲ್ಲ. ಆದರೆ ಇಂದು ಹಾಗಲ್ಲ. ನನಗೊಂದು ಲಕ್ಷ್ಯವಿತ್ತು; ಗುರುಪುರ ಸೇತುವೆಯ ಚಿತ್ರ-ದಾಖಲೆ. ಜಡಿಮಳೆ ಹಿಡಿದರೆ ಪ್ಲ್ಯಾಸ್ಟಿಕ್ ಕಳಚಿ ಕ್ಯಾಮರಾ ತೆಗೆಯುವುದಸಾಧ್ಯ. ಬದಲಿಗೆ ಇದು ನೋಡುವಾಂತ ಒಮ್ಮೆಲೇ ಎಡ ದಾರಿಗೆ ನುಗ್ಗಿದೆ ಬೋರ್ಡು ಹೇಳಿತು - ಅಮೃತ ನಗರ.

ಕೆಲವು ವರ್ಷಗಳ ಹಿಂದೆ ಒಮ್ಮೆಲೆ ಕೆತ್ತಿಕಲ್ಲು ರಾಷ್ಠ್ರವ್ಯಾಪೀ ಸುದ್ದಿ ಮಾಡಿತ್ತು. ಕರಾವಳಿ ವಲಯದ ಎಲ್ಲ ಪದವುಗಳಂತೆ ಈ ವಾಮಂಜೂರು ಪದವೂ ವಿಸ್ತಾರವಾಗಿ ಕರಿಗಟ್ಟಿದ್ದ ಮುರಕಲ್ಲಿನದೇ ಹರಹು. ವಸತಿ ಒತ್ತಡದಲ್ಲಿ ನಾಗರಿಕತೆ ಇಲ್ಲೂ ಪದವಿನ ಪೂರ್ವ ಅಂಚಿನವರೆಗೆ ದೃಢ ನೆಲ ನಂಬಿ ಸೈಟು, ಮನೆಯೆಂದು ಹರಡಿಕೊಂಡಿತ್ತು. ಆ ಮಳೆಗಾಲದಲ್ಲಿ ಒಮ್ಮೆಗೇ ಗುಡ್ಡೆ ನೆತ್ತಿಯಿಂದ ನೂರಿನ್ನೂರು ಅಡಿ ಕೆಳಗಿನವರೆಗೂ ಅಂದರೆ, ಕೆತ್ತಿಕಲ್ಲು ವಲಯದಲ್ಲಿ ಹಾದು ಹೋಗುವ ಮೂಡಬಿದ್ರೆ ದಾರಿಯೂ ಸೇರಿದಂತೆ ಸರಿ ಸುಮಾರು ಅರ್ಧ ಗುಡ್ಡೆಯೇ ಪೂರ್ವ ದಿಕ್ಕಿಗೆ ಕುಸಿಯತೊಡಗಿತ್ತು. ಟನ್‍ಗಟ್ಟಲೆ ತೂಕದ ಕಲ್ಲ ಹೋಳುಗಳು, ಮಣ್ಣು, ಕುರುಚಲು ಕಾಡು, ಮನೆ, ದಾರಿ ಎಲ್ಲವೂ ಗುರುಪುರ ನದಿಯ ಕಣಿವೆಯತ್ತ ಉರುಳಿ, ತೆವಳಿ ಸರಿಯತೊಡಗಿತ್ತು. ಇದರ ಗತಿ ನಿಧಾನಕ್ಕಿದ್ದುದರಿಂದ ಬಹುಶಃ ಮನುಷ್ಯ ಜೀವಹಾನಿಯೇನೂ ಆಗಲಿಲ್ಲ. ಆದರೆ ಅದೆಷ್ಟೋ ಮಂದಿಯ ಜೀವನಹಾನಿ, ಮೂಡಬಿದ್ರೆಯ ಬಹುದೊಡ್ಡ ಸಂಪರ್ಕ ಮಾರ್ಗನಾಶ ಉಪೇಕ್ಷಿಸುವ ಹಾಗಿರಲಿಲ್ಲ. ಪ್ರಜಾಪ್ರತಿನಿಧಿಗಳು, ದೇಶಾದ್ಯಂತ ಪರಿಣತರು ಬಂದರು, ಹೋದರು. ನೂರು ಸಾವಿರ ಊಹೆ, ಸಲಹೆ, ಆಶ್ವಾಸನೆಗಳು ಹರಿದವು, ಮರೆತರು. ಕೆಲವು ಕಾಲ ಕಳೆದು ಗಟ್ಟಿಯಾಗಿ ಆದದ್ದು ಒಂದೇ – ಅಲೆಯಲೆಯಾಗಿಯಾದರೂ ಮೂಡಬಿದ್ರೆ ಸಂಪರ್ಕ ರಸ್ತೆಯ ಪುನಃ ಸ್ಥಾಪನೆ. ಪ್ರಕೃತಿ ಸಹಜ ಕ್ರಿಯೆಯಲ್ಲಿ ತನ್ನ ದೊಡ್ಡ ಗಾಯ ಗೊಂದಲಗಳನ್ನು ಮಳೆಯಲ್ಲಿ ತೊಳೆದು, ಕುರುಚಲು ಹಸಿರಿನ ಪಟ್ಟಿ ಎಳೆದು ಮರೆಸಿತು. ಮುಂದಿನ ವರ್ಷಗಳ ಮಳೆಗಾಲಗಳಲ್ಲಿ ನೆತ್ತಿಯಿಂದ ವಿಶೇಷ ಕುಸಿತ ಆಗದಿದ್ದರೂ ಆ ವಲಯದ ಅಸ್ಥಿರತೆ ಇಂದಿಗೂ ಮುಂದುವರಿದಿದೆ. (ಈ ವರ್ಷದ ಕುಸಿತ ಗಮನಿಸಿ) ಪಿಲಿಕುಳದ ಸರೋವರದ ಭಾರದಿಂದ ಆಂತರ್ಯದ ಸೇಡಿಮಣ್ಣು ಕುಸಿದು, ತೊಳೆದು ಹೋಗುವಾಗ ಕುಸಿತ ಸಹಜ ಎನ್ನುವ ದೊಡ್ಡ ಊಹಾವರದಿ ಬಿಟ್ಟರೆ ಸ್ಪಷ್ಟ ಕಾರಣ, ಅದಕ್ಕೆ ಮದ್ದು, ಎಲ್ಲಕ್ಕೂ ಮುಖ್ಯವಾಗಿ ಸೊತ್ತು ಹಾನಿಯಾದವರಿಗೆ ವ್ಯವಸ್ಥೆ ಏನೇನೂ ಆದಂತಿಲ್ಲ. 

10 October 2014

ಚಕ್ರದುರುಳಿನೊಳಗಣ ಉರುಳು!

(ಚಕ್ರೇಶ್ವರ ಪರೀಕ್ಷಿತನ ದಿಗ್ವಿಜಯಗಳು -೩)



ಕಟೀಲಿನಲ್ಲಿ ದೀಪ ಬೆಳಗುವುದಿಲ್ಲ!


ಆ ಬೆಳಗ್ಗಿನ ಆಕಾಶಕ್ಕೆ ಮಿಶ್ರ ಭಾವ - ತುಸು ನಗೆ, ತುಸು ಅಳು. ನಾನಾದರೋ ಒಂದೇ ಮನಸ್ಸಿನಲ್ಲಿ ಸೈಕಲ್ ಹೊರಡಿಸಿದೆ. ಮನೋಭಿತ್ತಿಯಲ್ಲಿ ಎರಡು ಚಿತ್ರ ಸ್ಪಷ್ಟವಿತ್ತು. ನನ್ನ ಹಾರುವ ಕನಸಿನ `ಉತ್ತರಾಧಿಕಾರಿ’ ನೆವಿಲ್ ಹೈದರಾಬಾದಿಗೆ ಪೂರ್ಣ ವಲಸೆ ಹೋಗಿದ್ದವನು, ಈಚೆಗೆ ಮಂಗಳೂರಿನಲ್ಲಿ ಮತ್ತೆ ನೆಲೆಸುವ ಅಂದಾಜಿನಲ್ಲಿದ್ದಾನೆ. ಆತ ಮುಖಪುಸ್ತಕದಲ್ಲಿ ಹಳೆಯ ಹಾರೋ ಚಿತ್ರಗಳನ್ನು ರಮ್ಯ ಶೀರ್ಷಿಕೆಗಳೊಡನೆ ಏರಿಸುತ್ತಿದ್ದ. ಇದ್ದಕ್ಕಿದ್ದಂತೆ ಶನಿವಾರ ಸಂಜೆ ಮುಖಪುಸ್ತಕದಲ್ಲೇ ಒಂದು ಪ್ರಕಟಣೆ ಕೊಟ್ಟ – ನಾಳೆ ಬೆಳಗ್ಗೆ ಹ್ಯಾಟ್ ಹಿಲ್ ಹೆಲಿಪ್ಯಾಡಿನಲ್ಲಿ ಯಾಂತ್ರೀಕೃತ ನೇತು ತೇಲಾಟ (ಮೈಕ್ರೋಲೈಟ್) ಪ್ರದರ್ಶನ. ಕದ್ರಿಗುಡ್ಡೆ ಏರಿ, ಪಾಲಿಟೆಕ್ನಿಕ್, ಯೆಯ್ಯಾಡಿ ಹಿಂದಿಕ್ಕಿ ಹದಿನೈದೇ ಮಿನಿಟಿನಲ್ಲಿ ನಾನೇನೋ ಸರಿ ಸಮಯಕ್ಕೇ ಹೆಲಿಪ್ಯಾಡ್ ಸೇರಿದ್ದೆ. ಭರದಿಂದ ಓಲಾಡುವ ಗಾಳಿ, ಎಂದೂ ಗೋಳಿಟ್ಟು ಸುರಿಯಬಹುದಾದ ಮಳೆಯ ವಾತಾವರಣಕ್ಕೋ ಏನೋ ನಿರ್ಜನ, ಯಾರು ಬರುವಂತೆಯೂ ಕಾಣಲಿಲ್ಲ.

19 September 2014

ಚಕ್ರದ ಬೆನ್ನೇರಿ ಸ್ಫುಟಗೊಂಡ ಚಿತ್ರಗಳು

(ಚಕ್ರೇಶ್ವರ ಪರೀಕ್ಷಿತನ ದಿಗ್ವಿಜಯಗಳು -೨)

ಸಂದೀಪ್ ನನ್ನ ಸೈಕಲ್ ಪುನರ್ಜನ್ಮಕ್ಕೆ ಬಲ ಕೊಟ್ಟ ಗೆಳೆಯ. ಈ ತರುಣ ವೃತ್ತಿತಃ ಮಂಗಳೂರು ಇನ್ಫೊಸಿಸ್ಸಿನ ಮಾಯಾಲೋಕದೊಳಗೇ ಇದ್ದರೂ ಸದಾ `ತಪ್ಪಿಸಿಕೊಂಡು ತಿರುಗಲು’ (ಪ್ರಾಕೃತಿಕ ಸವಾಲುಗಳಿಗೆ ಮುಖ ಕೊಡಲು) ಬಯಸುತ್ತಿದ್ದವ. ಮೆರಥಾನ್ ಓಡಿದ, ಸೈಕಲ್ ಸ್ಪರ್ಧೆಯಲ್ಲಿ ನುಗ್ಗಿದ, ಈಜುಕೊಳ ಕಲಕಿದ! ಮೂರೂ ಸ್ತರದ (ಈಜು, ಓಟ ಮತ್ತು ಸೈಕಲ್ ಸವಾರಿ) ಸಂಯೋಜನೆ ಟ್ರಯತ್ಲಾನಿನಲ್ಲೂ ಉರುಡಿದ, ಎಲ್ಲಕ್ಕೂ ಮಿಗಿಲಾಗಿ ನಾನೆಲ್ಲಿಗೆ ಜತೆ ಕೇಳಿದರೂ ಸರಳವಾಗಿ “ಹೋಗಾಣಾ” ಅಂತ ತಣ್ಣಗೆ ಬರ್ತಿದ್ದ. ಸಂದೀಪರ ತಾಕತ್ತಿಗೆ ಎನೈಟಿಕೆಯ ನಿಸಾರ್ ಮತ್ತು ಕೆಲವು ಶುದ್ಧ ಸೈಕಲ್ ಗಿರ ಹಿಡಿದವರ ಬಳಗ (ಮಂಗಳೂರು ಸೈಕಲ್ಲಿಗರ ಸಂಘ – ಎಂ.ಸಿ.ಸಿ) ಭಾರೀ ಹಿಡಿಸಿತ್ತು. ಇವರ ಕರಾವಳಿ ಸೈಕಲ್ವಾಲಾಗಳ ಬಳಗ ಬೆಳಗುತ್ತಿರುವಷ್ಟರಲ್ಲೇ ಸಂದೀಪ್ ವೃತ್ತಿಯಲ್ಲಿ ಬಡ್ತಿ ಬಯಸಿ ಬೆಂಗಳೂರಿಸುವುದು ಅನಿವಾರ್ಯವಾಯ್ತು. ಆತ ಭವಿಷ್ಯ ಉಜ್ವಲಗೊಳಿಸುವುದು ಸರಿಯೇ. ಆದರೆ ಜಂಟಿ ಸೈಕಲ್ ಬಿಟ್ಟು ಒಂಟಿ ಹಿಡಿದ ನನಗೆ ಜತೆಗೊಡುವವರು ಯಾರೂಂತ ನಾನು ಗೊಣಗಿಕೊಳ್ಳುವಂತಾಯ್ತು! ಇನ್ಫೊಸಿಸ್ಸಿನಲ್ಲಿ ಸಂದೀಪ್ ಸಹೋದ್ಯೋಗಿಯಾಗಿದ್ದ, ನಾವು ತಮಾಷೆಗೆ ಗುರುತಿಸಿಕೊಂಡಂತೆ ಕಪ್ಪೆ ಕ್ಯಾಪ್ಟನ್ ದೀಪಿಕಾ “ಈಗ ನಾನೊಳ್ಳೆ ಸೈಕಲ್ ಕೊಂಡಿದ್ದೀನಿ, ದಾರಿ ತೋರ್ಸಿ” ಅಂದರು.

05 September 2014

ಚಕ್ರೇಶ್ವರ ಪರೀಕ್ಷಿತನ ಟಿಪ್ಪಣಿಗಳು

(ಮೊದಲ ಭಾಗ)

ಯಾಂತ್ರಿಕತೆ ಇಲ್ಲದ ವ್ಯಾಯಾಮ ಮತ್ತು ಔಪಚಾರಿಕತೆಗೆ ನಿಲುಕದ ಊರದರ್ಶನಕ್ಕೆ ನಾವು (ದೇವಕಿ ಸಮೇತನಾಗಿ) ಕೆಲವು ಕಾಲ ಸಂಜೆ ನಡಿಗೆಗೆ ತೊಡಗಿದ್ದೆವು. (ನೋಡಿ: ನಡೆದು ನೋಡಿ ಮಂಗಳೂರು ನರಕ) ದಿನಕ್ಕೊಂದು ದಾರಿ, ದಿಕ್ಕು; ಕನಿಷ್ಠ ಒಂದು ಗಂಟೆಯ ಸುತ್ತು. ಮಂಗಳೂರಿನಲ್ಲಿ ವಾಹನ ಸಮ್ಮರ್ದದಿಂದಲೂ ಹೆಚ್ಚು ವಿಷಾದಕರವಾಗಿ ನಗರಾಡಳಿತದಿಂದಲೂ ಸಂಪೂರ್ಣ ತಿರಸ್ಕೃತನಾದವ ಪಾದಚಾರಿ. ಇಲ್ಲದ ಪುಟ್ಟಪಥ ಹುಡುಕುತ್ತಾ ಕೊಳಚೆ ಪಾದ್ಯವನ್ನು ಪಡೆದು, ರಿಕ್ಷಾಕಾರನಿಂದ ಪ್ರಶಸ್ತಿಗಳನ್ನು ಪಡೆದು, ಇನ್ನೂ ದೊಡ್ಡ ವಾಹನಗಳಿಂದ ಅಕ್ಷರಶಃ ಅಭಿಷಿಕ್ತರೇ ಆಗಿ ನಾವು ವಿಭಿನ್ನ ಪಾಡುಪಟ್ಟಿದ್ದೆವು. ಮತ್ತೆ ದೈಹಿಕವಾಗಿ ನನ್ನ ಎತ್ತರಕ್ಕೆ ಒಗ್ಗಿದ ಬೀಸು ನಡೆಗೂ (ನನಗಿಂತ ಆರೇಳಿಂಚು ತಗ್ಗಿನ) ದೇವಕಿಯ ಪಾದಗತಿಗೆ ಹೊಂದಾಣಿಕೆಯೂ ಆಗುತ್ತಿರಲಿಲ್ಲ. ಕಂಬಳ ರಸ್ತೆಯ ಕೇಟರಿಂಗ್ ಮೆನೆಜಿಸರು (ಆನಂದ ಕೇಟರರ್ಸ್) ನಮ್ಮನ್ನು ಎಲ್ಲೆಲ್ಲೋ ಕಂಡು ವೈವಿಧ್ಯಮಯವಾಗಿ ತಮಾಷೆ ಮಾಡಿದ್ದೂ ನೆನಪಾಗುತ್ತದೆ. ನಾನು ಇಪ್ಪತ್ತಡಿ ಮುಂದೆ ಹೋಗುತ್ತಿದ್ದಾಗ “ರಾಯ್ರೇ ಹೆಂಡತಿ ಬಿಟ್ಟೋಡುದಾ?” ದೇವಕಿಯನ್ನು ಮುಂದೆ ಬಿಟ್ಟು ನಾನು ಹಿಂಬಾಲಿಸುವಾಗ “ಓ ಬಚ್ಚಿತಾ? ಪಾಪ” ಎರಡೂ ಬೇಡವೆಂದು ಜತೆಯಲ್ಲೇ ಹೋಗುವಾಗಲೂ
“ಅಕೊಳಿ, ಅಮ್ಮ ಓಡ್ತಾ ಇದ್ದಾರೆ, ನಿಧಾನಾ” ಇತ್ಯಾದಿ. (ಅಪ್ಪ, ಮಗ ಸೇರಿ ಹೊತ್ತ ಕತ್ತೆಯದೇ ಕಥೆ!) ಇವೆಲ್ಲಕ್ಕೂ ಪರಿಹಾರವಾಗಿ ದಕ್ಕಿದ್ದು ಜಂಟಿ ಸೈಕಲ್ಲು.

28 January 2014

ನೇತ್ರಾವತಿ ನದಿ ತಿರುವು - ರಾಷ್ಟ್ರೀಯ ಕಮ್ಮಟ


ದಕಜಿಲ್ಲೆಯ ಜೀವನದಿ ನೇತ್ರಾವತಿಯನ್ನು ಮೂಲದಲ್ಲೇ (ಜಲಾನಯನ ಪ್ರದೇಶದಲ್ಲೇ) ಪೂರ್ಣ ಕುಲಗೆಡಿಸುವ ಕೆಲಸಕ್ಕೆ ಹೊಸ ಮತ್ತು ದೊಡ್ಡ ಹೆಸರು - ‘ಎತ್ತಿನಹೊಳೆ (ಎತ್ತು ನೀರಾವರಿ) ತಿರುವು ಯೋಜನೆ. ‘ನೇತ್ರಾವತಿ ನದಿ ತಿರುವು ಎಂಬ ಮಹಾಯೋಜನೆ ನಾಡಿನಾದ್ಯಂತ ಪರಿಸರಾಸಕ್ತರು ಮತ್ತು ಸ್ವಲ್ಪ ಹೆಚ್ಚೇ ದಕ ಜಿಲ್ಲೆಯ ವಿಚಾರಪರರು ಒಡ್ಡಿದ ಪ್ರಾಥಮಿಕ ಪರೀಕ್ಷೆಗಳನ್ನು ಎದುರಿಸಲು ಹೆಣಗುತ್ತಲೇ ಇದೆ. ಏತನ್ಮಧ್ಯೆ ಮತ-ಮಾರುಕಟ್ಟೆಯಲ್ಲಿ ಬಯಲುಸೀಮೆಯ ಸಾಮಾನ್ಯರನ್ನು ಮರುಳುಗೊಳಿಸಲು, ಮುಖ್ಯವಾಗಿ ಭಾಜಪ ಸರಕಾರದ ಮುಖ್ಯಮಂತ್ರಿಗಳು (ಯಡ್ಯೂರಪ್ಪ, ಸದಾನಂದ ಗೌಡ, ಜಗದೀಶ ಶೆಟ್ಟರು ಅಲ್ಲದೆ ಜನತಾದ ಕುಮಾರಸ್ವಾಮಿಯೂ) ನಮ್ಮ ಜಿಲ್ಲೆಯವರಿಗೆ ಅಪರಿಚಿತ ಹೆಸರಿನ ಮುಸುಕು ಕೊಟ್ಟು ಘೋಷಿಸಿ, ಪೋಷಿಸಿದ ಯೋಜನೆಯ ಹೆಸರು ಎತ್ತಿನಹೊಳೆ ತಿರುವು. ವಾಸ್ತವದಲ್ಲಿ ಎತ್ತಿನಹೊಳೆಯ ಹೆಸರಿನಡಿಯಲ್ಲಿ ಇಲ್ಲಿ ಸೇರಿಕೊಳ್ಳುವ ಹಳ್ಳಗಳೆಲ್ಲ (ಕಾಡುಮನೆ, ಕೇರೀಹಳ್ಳ, ಹೊಂಗಡಳ್ಳ) ನೇತ್ರಾವತಿ ನದಿಯ ಮೂರು ಮುಖ್ಯ ಜಲಾನಯನ ಪ್ರದೇಶಗಳಲ್ಲಿ ಒಂದಾದ  ಸಕಲೇಶಪುರ-ಶಿರಾಡಿ ವಲಯದಲ್ಲಿರುವವೇ ಆಗಿವೆ. (ಉಳಿದೆರಡು ವಲಯಗಳು . ಬೆಳ್ತಂಗಡಿ-ಚಾರ್ಮಾಡಿ . ಕುಮಾರ ಪರ್ವತ-ಸುಬ್ರಹ್ಮಣ್ಯ.)

13 December 2013

ಸೈಕಲ್ ಪ್ರವಾಹಕ್ಕೀಡಾಯ್ತು ಮಂಗಳೂರು

(ಸೈಕಲ್ ಅಭಿಯಾನ ೨೦೧೩)

ಜಂಟಿ ಸೈಕಲ್ ಬಳಸುತ್ತ ನಾವು ವರ್ಷವೇನೋ ಕಳೆದೆವು. ಆದರೆ ಒಂಟಿಯಾಗಿ ನನಗೆ ಎರಡೆರಡು ಬಾರಿ ಸೈಕಲ್ ರ್ಯಾಲೀ ಅನುಭವ ಕೊಟ್ಟ ಆರೆಕ್ಸ್ ಲೈಫ್ ಬಳಗದ ವರ್ಷಾವಧಿ ಸೈಕಲ್ ರ್ಯಾಲೀಯಲ್ಲಿ ಭಾಗವಹಿಸಲಾಗದ ಬೇಸರವುಳಿದೇ ಇತ್ತು. ಅದು ಇಂದು (೨೦೧೩ ಡಿಸೆಂಬರ್ ೮) ತೀರಿತು. ಸುಮಾರು ಒಂದು ಸಾವಿರದ ಒಂಬೈನೂರಕ್ಕಿಂತ ಹೆಚ್ಚಿನ ಸೈಕಲ್ ಸಾಗರದಲ್ಲಿ (ಸೈ-ಸಾಗರ) ಈ ಬಾರಿ ಏಕೈಕ ಜಂಟಿ ಸವಾರರು (ಹಾಗಾಗಿ ಅನಿವಾರ್ಯವಾಗಿ ಗಣ್ಯತೆಯನ್ನೂ ಪಡೆದವರು) ನಾನು ಮತ್ತು ದೇವಕಿ. ನೋಂದಾವಣೆ ಲೆಕ್ಕಕ್ಕೆ ಸಂ. ೧೪೮೧ ಒಂದೇ ಆದರೂ ತಲೆ ಲೆಕ್ಕಕ್ಕೆ ಎರಡೆಂದೇ ದಾಖಲಿಸಿಕೊಳ್ಳಿ ಎಂದೇ ಸೇರಿದವರು. ನಾನು ಭಾಗವಹಿಸಿದ ಅವರ ೨೦೧೧ರ ರ್ಯಾಲೀ ಬೆಂಗ್ರೆಯವರೆಗೆ ಸಾಗಿ, ದೋಣಿಯಾನದ ಹೆಚ್ಚಿನ ಆಕರ್ಷಣೆಯನ್ನು ಒದಗಿಸಿತ್ತು. ಅಂದು (ಮೊದಲ ಬಾರಿ ಸವಾರರ ಸಂಖ್ಯೆ ಸಾವಿರ ದಾಟಿತ್ತು) ಮೊಗವೀರ ಮಹಾಸಭಾದ ಸದಸ್ಯರು ಬಹಳ ಚುರುಕಾಗಿಯೇ ದೋಣಿಗಟ್ಟಳೆ ಸೈಕಲ್ ಮತ್ತು ಭಾಗಿಗಳನ್ನು ದಾಟಿಸಿಕೊಟ್ಟಿದ್ದರು. ಅವರ ಸೇವಾಮನೋಭಾವ, ವೃತ್ತಿಪರತೆಗಳ ಬಗ್ಗೆ ಯಾರಿಗೂ ಸಂದೇಹವಿರುವುದು ಸಾಧ್ಯವಿಲ್ಲ. ಆದರೆ ಮಂಗಳೂರಿನ ಈ ವರ್ಷಾವಧಿ ಕಲಾಪದಲ್ಲಿ ಬಹುತೇಕ ಭಾಗಿಗಳು ಎಂಟು ವರ್ಷದಿಂದ ಹದಿನೈದರ ಒಳಗಿನವರು. ಇವರಲ್ಲಿ (ದೊಡ್ಡವರೂ ಸೇರಿದಂತೆ) ಬಹುದೊಡ್ಡ ಸಂಖ್ಯೆ ಅನ್ಯ ದಿನಗಳಲ್ಲಿ ಸಾರ್ವಜನಿಕ ದಾರಿಗಳಲ್ಲಿ ಸೈಕಲ್ ಬಿಟ್ಟವರಲ್ಲ. ಅವರೆಲ್ಲ ಮುಖ್ಯವಾಗಿ ಸಂಘಟಕರ ಕರೆ ಈ ರ್ಯಾಲೀ (ಸ್ಪರ್ಧೆಯಲ್ಲ,) ಮನೋಲ್ಲಾಸಕ್ಕಾಗಿ ಒಂದು ಆರೋಗ್ಯಕರ ಸೂಚನೆ ಎಂಬುದನ್ನು ಮನಸಾರೆ ಒಪ್ಪಿ ಬರುತ್ತಾರೆ, ದೊಡ್ಡ ಹಬ್ಬದಂತೇ ಆಚರಿಸುತ್ತಾರೆ (ಇಂಧನ ಉಳಿಸಿ, ವಾಯುಮಾಲಿನ್ಯ ತಡೆ, ಹಸುರುಮನೆ ಪರಿಣಾಮ ವಿರೋಧ, ಜಾಗತಿಕ ತಾಪಮಾನ ನಿಯಂತ್ರಣ ಇತ್ಯಾದಿ ದೊಡ್ಡ ಮಾತುಗಳು ಒತ್ತಟ್ಟಿಗಿರಲಿ, ಬಿಡಿ). ಈ ಸಂಭ್ರಮ ದೋಣಿ ಯಾನದಲ್ಲೇನಾದರೂ ಆಕಸ್ಮಿಕಗಳಿಗೆ ಕಾರಣವಾದರೆ ಎನ್ನುವ ಭಯ ನನ್ನನ್ನು ಕಾಡಿತ್ತು. ಕಾರಣವೇನೇ ಇರಲಿ, ವರ್ಷದಿಂದ ವರ್ಷಕ್ಕೆ ಏರುತ್ತಲೇ ಬಂದ ಭಾಗಿಗಳ ಸಂಖ್ಯೆಯನ್ನು ಒಂದೇ ಆಯಾಮದಲ್ಲಿ ಸುಧಾರಿಸುವ ಸಲುವಾಗಿಯಾದರೂ ದೋಣಿಯಾನ ನಿಲ್ಲಿಸಿದ್ದು ಸರಿಯೇ ಆಯ್ತು. ಮತ್ತಿನ ವರ್ಷದಲ್ಲಿ ಎಂಸಿಎಫ್ ಕಾರ್ಖಾನೆಯ ಹಿತ್ತಲಿನ ಹಳ್ಳಿಪರಿಸರದಲ್ಲಿ ದಾರಿಯಲ್ಲೇ ಸುತ್ತಾಡಿ ಮರಳುವಲ್ಲಿಗೇ ರ್ಯಾಲೀ ದಾರಿಯಿತ್ತು. ಈ ಬಾರಿಯೂ ಹಾಗೇ ಆಯೋಜಿತವಾಗಿತ್ತು; ದಾರಿ ಮಾತ್ರ ತುಸು ಭಿನ್ನ.

22 November 2013

ನರಕದ ನೀರು ಇದು! ತುಂಬಾ ಕ್ಲೀನ್ ಇದೆ ಸಾರ್!

ಪೀಠಿಕೆ: ಮೊನ್ನೆ ಬೆಂಗಳೂರಿನಲ್ಲಿ ಸಕ್ಕರೆ ತಿಂದು, ನೀರು ಕುಡಿದಮೇಲೆ ನಾನು ದೇವಕಿ ಬೈಕೇರಿ ಮೈಸೂರಿಗೆ ಬಂದೆವು. ನನ್ನ ಮೂಲಮನೆ ಅತ್ರಿಯಲ್ಲಿ ತಾಯಿಯನ್ನು ಕಂಡು, ಎರಡು ದಿನ ವಿರಾಮದಲ್ಲಿದ್ದು ಮಂಗಳೂರಿಸುವ ಯೋಜನೆ ನಮ್ಮದು. ನೆಲವಿರುವುದೇ ನಗರ ವಿಸ್ತರಣೆಗೆಂಬಂತೆ ಬಿಡದಿ, ರಾಮನಗರ, ಚೆನ್ನಪಟ್ಟಣ, ಮಂಡ್ಯ, ಶ್ರೀರಂಗಪಟ್ಟಣಾದಿ ಊರುಗಳು ಮೈಚಾಚುತ್ತಿವೆಯೋ ಅಥವಾ ಅವೆಲ್ಲ ಬೆಂಗಳೂರು ಮೈಸೂರುಗಳ ವಿಸ್ತರಣೆಗಳೇ ಆಗಿಹೋಗುತ್ತಿವೆಯೋ ಅರ್ಥವಾಗುವುದಿಲ್ಲಮತ್ತಲ್ಲಿನ ವಾಹನಶಿಸ್ತುಗಳನ್ನು ಹಾದು ಹೋಗುವುದು ಒಂದು ಯಜ್ಞ. ಮಾರ್ಗ ಚತುಷ್ಪಥ ಮಾಡಿದರೂ ವೇಗತಡೆಯ ದಿಬ್ಬ ನೂರೆಂಟು; ವೈಜ್ಞಾನಿಕ ರೂಪ, ಗಾತ್ರ, ಬಣ್ಣ ಒಂದಕ್ಕೂ ಇಲ್ಲದ ಕೀಲುಕಂಟಕಗಳು, ಅಸ್ಥಿತಜ್ಞರ ಮಿತ್ರರು! ಮಿನಿಟಿಗೆ ಸಾವಿರದೆಂಟು ಸಾಗುವ ವಾಹನ ಭರಾಟೆಯಲ್ಲಿ ನಾವು ಸಾವಿರದೊಂಬತ್ತನೆಯವರಾಗಿ ಮೈಸೂರು ಮತ್ತು ಸರಸ್ವತೀಪುರವನ್ನೂ ಪ್ರಾಣ, ಅಂಗಹೀನರಾಗದೆ ತಲಪುವಲ್ಲಿ ಯಶಸ್ವಿಯಾದೆವು. ಆದರೂ...

19 April 2013

ಜಂಟಿ ಸೈಕಲ್ ಬೆನ್ನೇರಿ


(ಕಳೆದ ವಾರದನಡೆದು ನೋಡು ಮಂಗಳೂರು ನರಕದ ಜಾಡಿನಲ್ಲಿ ಎರಡನೇ ಭಾಗ)

ಮಂಗಳೂರ ದಾರಿಗಳ ನವೀಕರಣದಲ್ಲಿ ಸುಖಕರ ಸವಾರಿಗೆ ನುಣುಪಿನ ಮೇಲ್ಮೈ ಧಾರಾಳ ಬರುತ್ತಿದೆ. ಇದು ಗುಡ್ಡೆ ಕಣಿವೆಗಳ ಊರಾದರೂ ಹೊಸ ಪ್ರಕ್ರಿಯೆಯಲ್ಲಿ ಏರಿಳಿತಗಳೂ ಸೌಮ್ಯಗೊಳ್ಳುತ್ತಿವೆ. ಇಲ್ಲಿ ವಾಹನ ಸಂಮರ್ದ ಕಡಿಮೆ ಇಲ್ಲ ಮತ್ತು ಚಾಲನಾಶಿಸ್ತು ಹೆಚ್ಚು ಇಲ್ಲ! ಆದರೂ ದಾರಿಗಳ ಅಗಲೀಕರಣ ಹಾಗೂ ಸ್ಪಷ್ಟ ಇಬ್ಭಾಗೀಕರಣದಿಂದ ಸೈಕಲ್ ಸವಾರಿಗೆ ಅನುಕೂಲ ದಿನೇ ದಿನೇ ಹೆಚ್ಚುವುದನ್ನು ಗಮನಿಸಿದೆ. ಜ್ಯೋತಿ ಸೈಕಲ್ ಕಂಪೆನಿಯವರು ನನಗೆ ಮೊದಲಿನಿಂದಲೂ ಪರಿಚಿತರು. ಅಲ್ಲಿ ಹೋದರೆ ನಾಲ್ಕೈದು ಸಾವಿರದಿಂದ ಲಕ್ಷ ಮೀರುವ ಹತ್ತೆಂಟು ಗುಣಮಟ್ಟದ (ದೇಶೀ, ವಿದೇಶೀ) ಸೈಕಲ್ ಕೂಡಲೇ ಕೊಡಬಲ್ಲರೆಂದೂ ನನಗೆ ಗೊತ್ತಿತ್ತು. ಹಾಗಾಗಿ ಈಗ, ಅಂದರೆ ಕಳೆದ ವಾರ ಹೇಳಿದಂತೆ, ಸಂಜೆಯ ನಡಿಗೆ ಸೋತಲ್ಲಿ, ಸೈಕಲ್ಲಿಗೆ ಮರಳುವ ಯೋಚನೆಯನ್ನು ನಮ್ಮಲ್ಲಿ ಗಟ್ಟಿ ಮಾಡಿಕೊಂಡೆವು.

12 April 2013

ನಡೆದು ನೋಡಿ ಮಂಗಳೂರು ನರಕ!


ಅತ್ರಿ ಬುಕ್ ಸೆಂಟರ್ ಇದ್ದ ಕಾಲದಲ್ಲಿ, ದಿನವಿಡೀ ಕೂತು ಕಾಲು, ದೇಹ ಜಡವೇರುತ್ತಿದ್ದಂತೆ ಸಂಜೆ ದೇವಕಿ ಬರುವುದನ್ನು ಕಾಯುತ್ತಿದ್ದೆ. ಅವಳು ಹೆಚ್ಚುಕಡಿಮೆ ಇಡೀ ಹಗಲು ಮನೆಯೊಳಗೆ, ಅಂಗಳದ ಮಿತಿಯಲ್ಲಿ ಎಷ್ಟು ತಿರುತಿರುಗಿದರೂ ವ್ಯಾಯಾಮದ ಭಾವ ಬರದೇ ತೊಳಲುತ್ತಿದ್ದಳು. ಸಂಜೆಯಾಗುತ್ತಿದ್ದಂತೆ ಇದ್ದ ಇಲ್ಲದ ಕೆಲಸ ಹಚ್ಚಿಕೊಂಡು ಕೇಂದ್ರ ಮಾರುಕಟ್ಟೆಯತ್ತ ನಡೆಯುತ್ತಿದ್ದಳು. ಅಲ್ಲಿ ಒಂದೋ ಎರಡೋ ತರಕಾರಿ, ಜಿನಸು ಸಣ್ಣದಾಗಿ ಕೊಂಡು, ಭುಜಕ್ಕೇರಿಸಿ ನಮ್ಮಂಗಡಿಗೆ ನಡೆದೇ ಬರುತ್ತಿದ್ದಳು. ಮಾರ್ಕೆಟ್ ಕಡೆ ಹೋಗುವ ಯಾವುದೇ ಪ್ರಸಂಗ ಇಲ್ಲದಾಗಲೂ ಅವಳು ನೇರ ದಾರಿ ಹಿಡಿದದ್ದು ಕಡಿಮೆ! ತಪ್ಪು ತಿಳಿಯಬೇಡಿ, ಅಲೋಶಿಯಸ್ ಗುಡ್ಡೆ ಹತ್ತಿ, ಬಾವುಟಗುಡ್ಡೆ ದಾರಿಯಲ್ಲಿ ಇಳಿದು ಬರುತ್ತಿದ್ದಳು ಅಥವಾ ಕದ್ರಿ ರಸ್ತೆಯಲ್ಲಿ ಮುಂದುವರಿದು, ಆರ್ಯಸಮಾಜಕ್ಕಾಗಿ ಬಳಸಂಬಟ್ಟೆ ಹಿಡಿಯುತ್ತಿದ್ದಳು. (ಇದರ ಅಂದಾಜಿಲ್ಲದವರು ಅನುಕಂಪ ತೋರಿಸುವುದಿತ್ತು, ಅರೆಹಾಸ್ಯದಲ್ಲೇ ಜಿಪುಣತನದ ಆರೋಪ ಮಾಡುವುದೂ ಇತ್ತು.) ಸ್ವಂತ ವಾಹನವೋ ಆಟೋದಲ್ಲೋ ಸುತ್ತಾಡಿ ಮನೇಲಿ ‘ವರ್ಕೌಟ್ ಮಶೀನ್’ ಇಟ್ಟುಕೊಳ್ಳುವುದು ನಮ್ಮಿಬ್ಬರ ಮನಸ್ಸಿನಲ್ಲಿ ಎಂದೂ ‘ವರ್ಕೌಟ್’ ಆದದ್ದೇ ಇಲ್ಲ.  ಹೀಗೆ ಎರಡು ಮೂರು ಕಿಮೀ ಸುತ್ತಿದರೂ ಸುಮಾರು ಸಂಜೆ ಐದು ಗಂಟೆಯೊಳಗೆ ನನ್ನನ್ನು ‘ಬಿಡುಗಡೆ’ ಮಾಡಲು ಅನುಕೂಲವಾಗುವಂತೆ ಆಕೆ ಅಂಗಡಿ ಸೇರುವುದನ್ನು ಮರೆಯುತ್ತಿರಲಿಲ್ಲ.

01 March 2013

ಮಂಗಳೂರು ವೈಲ್ಡ್ ಲೈಫ್ ಟ್ರಸ್ಟ್


(ಶರತ್ ಕಥನದಲ್ಲಿ ಎರಡನೇ ಮತ್ತು ಅಂತಿಮ ಭಾಗ)
- ಬಿ.ಕೆ. ಶರತ್
ಬ್ರ| ಓಡ್ರಿಕ್ ದೇವಾನಂದರಿಗೊಬ್ಬ ಬಾಡಿಗೆ ಕಾರಿನ ಗೆಳೆಯನಿದ್ದ, ಹೆಸರು ಜೋಸೆಫ್. ಅಲ್ಲದೇ ಹೋಗಿದ್ದರೆ, ಬರಿಯ ಬಾಡಿಗೆ ಮುಖ ನೋಡುವ ಯಾವ ಕಾರಿನವನೂ ಜುಜುಬಿ ಇಪ್ಪತ್ತು ಕಿಮೀಯ ಒಂದು ಓಟಕ್ಕೆ ಸ್ವಂತ ಕಾರನ್ನು ಹಾಳು ಮಾಡಿಕೊಂಡು, ಇಡೀ ದಿನ ಇಬ್ಬರು ಹುಡುಗರೊಡನೆ ಖಂಡಿತಾ ಒದ್ದಾಡುತ್ತಿರಲಿಲ್ಲ. ಮಳೆಗಾಲದ ದಿನ ಬೇರೆಓಡ್ರಿಕ್ ಹೆಚ್ಚಿನ ಭದ್ರತೆಗಾಗಿ ಪ್ರತಿ ಹಾವನ್ನು ಗೂಡುಗಳೊಳಗೇ ಪ್ರತ್ಯೇಕ ಚೀಲಗಳಲ್ಲಿ ತುಂಬಿಸಿಟ್ಟಿದ್ದರು. ಇನ್ನು ಗೂಡುಗಳೋ ವಿಚಿತ್ರ ಆಕಾರಗಳವೂ ಭಾರದವೂ ಇದ್ದವು. ಅವನ್ನು ಎತ್ತಿ, ನೂಕಿ ಕಾರಿಗೆ ತುಂಬಲು ಮಠದಲ್ಲಿ ಕೈಗಳು ಧಾರಾಳವೇ ಇತ್ತು. ಟಾಪಿನಲ್ಲಿ, ಡಿಕ್ಕಿಯಲ್ಲಿ, ಹಿಂದಿನ ಸೀಟು ತೆಗೆದ ಜಾಗದಲ್ಲಿ, ಮುಂದಿನ ಮುಕ್ಕಾಲಾಸನದ ಮೇಲೆ, ಕೊನೆಗೆ ಸಣ್ಣ ಒಂದೆರಡನ್ನು ಬಾನೆಟ್ ಮೇಲಕ್ಕೂ ಹೇರಿದ್ದಾಯ್ತು. ಈ ಭರದಲ್ಲಿ ಜೋಸೆಫ್ ಕಾರೊಳಗೆ ತಮ್ಮ ಮತ್ತು ನಮ್ಮಿಬ್ಬರ ಸ್ಥಾನ ಮರೆತೇ ಬಿಟ್ಟಿದ್ದರು. ಆದರೆ ಆ ದಿನಗಳಸರ್ವಿಸ್ ಕಾರುಗಳ ಚಾಲಾಕಿ ಎಲ್ಲವನ್ನು ಮೈಗೂಡಿಸಿಕೊಂಡ ಜೋಸೆಫ್ ಚಾರ್ಲಿಯನ್ನು ಎದುರು ಸೀಟಿನ ಕಾಲಿಡುವ ಜಾಗಕ್ಕೆ ನುಗ್ಗಿಸಿ, ಕುಕ್ಕುರುಗಾಲಿನಲ್ಲಿ ಕುಳಿತುಕೊಳ್ಳಲು ಸೂಚಿಸಿ, ಬಾಗಿಲು ಜಡಿದ. ಮತ್ತೆ ಸ್ವಂತದ ವ್ಯವಸ್ಥೆ. ಟೂಲ್ ಬಾಕ್ಸಿನಿಂದ ಮೂಲಬಣ್ಣ ಮತ್ತು ರಚನೆಯನ್ನು ಎಂದೋ ಕಳೆದುಕೊಂಡ ಟವೆಲ್ ತೆಗೆದ. ಅದನ್ನು ಗಂಟು ಹಾಕಿ ಅರ್ಧ ತೆರೆದ ಚಾಲಕನ ಬಾಗಿಲಿಗೂ ನಡುಗಂಬಕ್ಕೂ ಒಂದು ಸಡಿಲ ಬಳೆ ಕಟ್ಟಿದ. ಆ ಸಂದಿನಲ್ಲಿ ತೂರಿ, ಅರ್ಧ ಅಂಡು ಸೀಟಿನ ಅಂಚಿಗೆ ಮುಟ್ಟಿದಂತೆ ಇಟ್ಟು, ಉಳಿದಷ್ಟೂ ಭಾರವನ್ನು ಬಾಗಿಲ ಮೇಲೆ ಹಾಕಿ ಕಾರು ಹೊರಡಿಸಿಯೇ ಬಿಟ್ಟ.

26 February 2013

ಉರಗೋದ್ಯಾನ - ಕುದುರೆಯ ಬಾಯಿಯಿಂದ!


[‘ಮಂಗಳೂರಿನ ಆದಿ ಉರಗೋದ್ಯಾನ’- ನನ್ನ ನೆನಪಿನ ಅಪರಿಪೂರ್ಣ ಚಿತ್ರ ಓದಿದಾಗ ಕಾರ್ಕೋಟಕ ಕಚ್ಚಿದ ನಳಮಹಾರಾಜನಂತೆ (ಬಾಹುಕ) ಸದ್ಯ ಅಮೆರಿಕದಲ್ಲಿರುವ ಕಥಾನಾಯಕ - ಶರತ್‌ಗೆ ತನ್ನ ಪ್ರೇಮಸಮಾಗಮದ (ಅಯ್ಯೋ ಯಾವುದೋ ದಮಯಂತಿಯೊಡನಲ್ಲಪ್ಪಾ ಆದಿ ಉರಗೋದ್ಯಾನದೊಡನೆ) ನೆನಪುಗಳು ಕಾಡತೊಡಗಿದವು. ಅಶೋಕರೇ ಅದು ಹಾಗಲ್ಲಾ... ಎಂದು ಅಂತರ್ಜಾಲದ ‘ಸಂವಾದ ಪೆಟ್ಟಿಗೆಯೊಳಗೆ ಟಿಪ್ಪಣಿಸತೊಡಗಿದಾತನಿಗೆ ನಾನು (ಋತುಪರ್ಣ) ಸರಿಯಾದ ಪಟ್ಟೇ ಹಾಕಿರಬೇಕು. ನನ್ನಿಂದ ಯಾವತ್ತೂ ‘ಅಕ್ಷರವೈರಿ ಎಂದು ಗೇಲಿಗೊಳಗಾಗುತ್ತಿದ್ದಾತ ಆಶ್ಚರ್ಯಕರವಾಗಿ ಮೂರು ಕಂತುಗಳಲ್ಲಿ ಅವ್ಯವಸ್ಥಿತ ಟಿಪ್ಪಣಿಗಳಂತೆ, ಇಂಗ್ಲಿಶಿನ ಜಾಯಮಾನವನ್ನು ತನ್ನ ಭಾವಮಾನಕ್ಕೆ ತಕ್ಕಂತೆ ಜಗ್ಗಾಡಿ ಒಂದು ಸಮಗ್ರ ಚಿತ್ರಣವನ್ನೇ ಮಿಂಚಂಚೆ ಮೂಲಕ ಕಳಿಸಿದರು. ಈ ಉರಗೋದ್ಯಾನದಲ್ಲಿ ಶರತ್‌ನ ಅವಳಿ ಸೋದರನಂತೇ ತೆತ್ತುಕೊಂಡ ಅಥವಾ ಈತನಿಗಿಂತಲೂ ಒಂದು ಕೈ ಹೆಚ್ಚೇ ದುಡಿದರೂ ಸಹಜ ನಾಚಿಕೆ ಸ್ವಭಾವದಲ್ಲಿ ಹೆಚ್ಚು ಬೆಳಕಿಗೆ ಬಾರದ ಚಾರ್ಲ್ಸ್ ಪಾಲ್ ಕೂಡಾ ನನಗಷ್ಟೇ ಆತ್ಮೀಯ. ಶರತ್ ಮರೆತೋ ತಿಳಿಯದೆಯೋ ಬಿಟ್ಟಿರಬಹುದಾದ ಇನ್ನಷ್ಟು ವಿವರಗಳನ್ನು ಕಲೆಹಾಕಲು ನಾನು ಚಾರ್ಲ್ಸ್ ಸಂಪರ್ಕ ಮಾಡಿದೆ. ಆದರೀ ಪುಣ್ಯಾತ್ಮ ಅಕ್ಷರವೈರಿ ಮಾತ್ರವಲ್ಲ, ಪ್ರಚಾರ-ಸಂಕೋಚಿ! ನಾನು ಮುಖತಃ ಭೇಟಿಯಾದರೂ, ಮಿಂಚಂಚೆಯಲ್ಲಿ ಹೊಡೆದು, ಚರವಾಣಿಯಲ್ಲಿ ಕೊರೆದರೂ  ಟಿಪ್ಪಣಿ ಬರಲಿಲ್ಲ, ಸಂದರ್ಶನ ದಕ್ಕಲಿಲ್ಲ, ಚಿತ್ರಗಳೂ ಒದಗಲಿಲ್ಲ. ತಾಳ್ಮೆ ಕಳೆದು ಶರತ್ ಕೊಟ್ಟ ವಿವರಗಳನ್ನೇ ಕನ್ನಡಿಸಿ, ವ್ಯವಸ್ಥೆ ಮಾಡಿ, ಮೊದಲ ಕಂತು ಇನ್ನೇನು ಜಾಲತಾಣಕ್ಕೇರಬೇಕೆನ್ನುವಲ್ಲಿ...

ನಿಮಗೆ ಗೊತ್ತು, ನನ್ನ ಜಾಲತಾಣ ನಿರ್ವಾಹಕ - ಮಗ, ಅಭಯಸಿಂಹ. ನನ್ನ ಸಾದಾ ಬರಹವನ್ನು ಸಾರ್ವತ್ರಿಕಕ್ಕೆ ಲಿಪ್ಯಂತರಗೊಳಿಸಿ (Ansi to Unicode), ಚಿತ್ರಗಳನ್ನು ಹದಗೊಳಿಸಿ (resolution, cropping, positioning), ಸೇತುಗಳನ್ನು (ಚಿತ್ರ, ವಿಡಿಯೋ, ಹಳೇ ಉಲ್ಲೇಖಗಳು ಎಷ್ಟೋ ಬಾರಿ ವಾಸ್ತವದಲ್ಲಿ ಕಾಣುವಂತೆ ಆಯಾ ಜಾಲತಾಣದಲ್ಲೇ ಇರಬೇಕೆಂದಿಲ್ಲ)  ನೇರ್ಪುಗೊಳಿಸಿ ಜಾಲಕ್ಕೇರಿಸಲು ಕನಿಷ್ಠ ಅರ್ಧ ಗಂಟೆ ವ್ಯಯಿಸುತ್ತಾನೆ. ಹಾಗೇ ಅಭಯ ಈ ಲೇಖನವನ್ನು ಮಾಡುತ್ತಿರುವ ಕಾಲಕ್ಕೆ ನಡುವೆ ನಮ್ಮಿಬ್ಬರ ಸಮಾನ ಗೆಳೆಯ - ಪ್ರಜಾವಾಣಿಯ ಇಸ್ಮಾಯಿಲ್ ಸಂಪರ್ಕಕ್ಕೆ ಬಂದರು. ಅವರಿಗೆ ಇದರ ಸ್ವಾರಸ್ಯ ಹಿಡಿಸಿದ್ದಕ್ಕೇ ನಾನು ತುಸು ಸಂಗ್ರಹಗೊಳಿಸಿದ ರೂಪವನ್ನು ಕೊಟ್ಟು ಪ್ರಜಾವಾಣಿಯಲ್ಲಿ ಪ್ರಕಟಗೊಳ್ಳುವವರೆಗೆ ಇಲ್ಲಿ ಪ್ರಕಟಣೆಯನ್ನು ಮುಂದೂಡಬೇಕಾಯ್ತು. ಇಂದಿನ ಮಟ್ಟದಲ್ಲಿ ಮುದ್ರಣ ಮಾಧ್ಯಮದ ಸಾರ್ವಜನಿಕ ಸಂಪರ್ಕ ವ್ಯಾಪ್ತಿ ಜಾಲತಾಣಕ್ಕಿಲ್ಲದಿದ್ದರೂ ಇಲ್ಲಿ ಬರಹಗಳಿಗೆ ಸ್ಥಳ ಸಂಕೋಚದ ಬಾಧೆಯಿಲ್ಲ, ಪತ್ರಿಕೆಗಳಂತೆ ಕ್ಷಣಿಕತೆಯಿಲ್ಲ, ಚಲನ ದೃಶ್ಯ ಹಾಗೂ ಧ್ವನಿಗಳ ಸೇರ್ಪಡೆಯೇ ಮುಂತಾದ ಸೌಲಭ್ಯಗಳನ್ನು ಗಣಿಸಿದರೆ ಇದರ ಶಕ್ತಿ ಅಪಾರ. ಅವಕ್ಕೆಲ್ಲ ಹೊಂದುವಂತೆ ಈಗ ಮಂಗಳೂರಿನ ಸರ್ವಪ್ರಥಮ ಹಾವುಗಳ ಸಂಗ್ರಹಾಗರದ ಹುಟ್ಟು ಬೆಳವಣಿಗೆಯ ಕಥೆಯನ್ನು ಎರಡು ಕಂತಿನಲ್ಲಿ direct from the horse’s mouth (ಕುದುರೆಯ ಬಾಯಿಯಿಂದ!) ಎನ್ನುತ್ತಾರಲ್ಲಾ ಹಾಗೆ ಡಾ| ಬಿ.ಕೆ. ಶರತ್ (ಕೃಷ್ಣ - ಅಮೆರಿಕದ ಅಗತ್ಯಕ್ಕಾಗಿ ಸ್ಫುಟಗೊಂಡ ಈತನದೇ ಅಪ್ಪನ ಹೆಸರು) ಮಾತುಗಳಲ್ಲೇ ಓದಿ -ಅಶೋಕವರ್ಧನ]

21 December 2012

ಮಂಗಳೂರಿನ ಆದಿ ಉರಗೋದ್ಯಾನ!


ತಿಂಗಳೆ ಕಣಿವೆಯ ಜಲಪಾತಗಳು - ಭಾಗ ಒಂದು

ಆಗುಂಬೆಯ ದಾರಿ ಬದಿಯಲ್ಲಿ ಒನಕೆ ಅಬ್ಬಿ ಉತ್ತರ ದಿಕ್ಕಿಗಾದರೆ ಬರ್ಕಣ ದಕ್ಷಿಣಕ್ಕೆ. ಬರ್ಕಣ ದೂರದರ್ಶನದಲ್ಲಿ ದಕ್ಕಿದ್ದರೂ ಅದರ ತಲೆ ತಳ ನೋಡಲು ಇನ್ನೊಮ್ಮೆಬರ್ಕಣ್ಣಾಎಂಬುದು ನಮ್ಮ ದೊಡ್ಡ ಯೋಜನೆಗೆ ಪಲ್ಲವಿಯೇ ಆಗಿತ್ತು. ಯಾಕೆಂದರೆ ಕಣ್ಣಿಗೆ ಕಾಣುವಂತೆಯೂ, ಸರ್ವೇಕ್ಷಣ ಭೂಪಟ ಹೇಳುವಂತೆಯೂ ಕಣಿವೆ ಸೀತಾ ನದಿಯ ಬಲು ಮುಖ್ಯ ಜಲಾನಯನ ಪ್ರದೇಶ. ಅದನ್ನು ಗುರುತಿನ ಸೌಕರ್ಯಕ್ಕಾಗಿ ಕಣಿವೆಯ ಹೆಚ್ಚು ಕಡಿಮೆ ಕೇಂದ್ರದಲ್ಲಿರುವ ಹಳ್ಳಿಯೊಡನೆ ಗುರುತಿಸಿ ತಿಂಗಳೆ ಕಣಿವೆ ಎನ್ನಬಹುದು. ಅಲ್ಲಿ ಘಟ್ಟ ಮಾಲೆ ತೆಗೆದುಕೊಂಡ ತೀವ್ರ ತಿರುವಿನಲ್ಲಿ ಹಲವು ಜಲಪಾತಗಳೇ ಹುದುಗಿದ್ದವು. ಬರ್ಕಣ ಅವುಗಳಲ್ಲಿ ಒಂದು. ಆದರೆ ಅವರಿವರ ಸೂಚನೆಯಂತೆ ಕಣಿವೆಯಾಳದ ಕಾಡಿನಲ್ಲಿ ನಿಜ ದರ್ಶನೀಯ ಜಲಪಾತವೆಂದರೆ ಕೂಡ್ಲುತೀರ್ಥ. ಮತ್ತದಕ್ಕೆ ಹೋಗಲು ಸ್ಪಷ್ಟ ಮಾರ್ಗದರ್ಶನ ಕೊಡಬಹುದಾದ ವ್ಯಕ್ತಿ ತಿಂಗಳೆಯ ಯಜಮಾನ (ಜಮೀನ್ದಾರ) ರವೀಂದ್ರ ಹೆಗ್ಡೆ (ಇಂದು ನಮ್ಮೊಂದಿಗಿಲ್ಲ). ಹೀಗೆ ಅಂದಾಜುಗಳಿಗೆ ಆಧಾರ ಸಿಕ್ಕ ಮೇಲೆ ಮುಹೂರ್ತ ನೋಡಲಿಲ್ಲ.

08 June 2012

ನಗರ ತುಣುಕುಗಳು

ಮಂಗಳೂರಿನಲ್ಲಿದ್ದಾಗ ಸಂಜೆ ನಾವಿಬ್ಬರು ಸುಮಾರು ಒಂದು ಗಂಟೆಯ ಸಮಯಮಿತಿ ಹಾಕಿಕೊಂಡು, ದಿನಕ್ಕೊಂದು ದಿಕ್ಕಿನಲ್ಲಿ ಆದಷ್ಟು ಬಿರುಸಿನ ನಡಿಗೆ ಹೋಗುತ್ತೇವೆ. ದಿನವಿಡೀ ನಡೆಯುವ ‘ನಮ್ಮನೆ’ಯ ಚಟುವಟಿಕೆಯಲ್ಲಿ ಅನಿವಾರ್ಯವಾಗಿರುವ ಬಾಧ್ಯತೆ ಕಳಚಿಕೊಂಡು, ಮುಕ್ತವಾಗಿ ಮತ್ತು ಮೌನವಾಗಿ ತರಹೇವಾರಿ ಮನೆ, ಮನಗಳ ರೂಪ ಆಶಯಗಳನ್ನು ಗ್ರಹಿಸಿಕೊಳ್ಳುತ್ತಾ ಸಾಗುತ್ತೇವೆ. ಎಷ್ಟೋ ಪರಿಚಿತ ಹೆಸರುಗಳೂ (ಮನೆಯೆದುರಿನ ನಾಮ ಫಲಕಗಳಲ್ಲಿ) ವ್ಯಕ್ತಿಗಳೂ ಸಿಗುತ್ತಾರೆ. ಎಲ್ಲಕ್ಕೂ ಮುಖ್ಯವಾಗಿ ನಗರ ಸಮಸ್ಯೆಗಳ ಬಹುಮುಖ ದರ್ಶನವಾಗುತ್ತಿರುವುದರಲ್ಲಿ ಕೆಲವನ್ನು ಇಲ್ಲಿ ಸಂಕಲಿಸುತ್ತಿದ್ದೇನೆ. ಇವು ಸಾರ್ವಜನಿಕ ಜಾಗೃತಿಗೆ ಕಾರಣವಾಗಬೇಕು ಎಂಬ ಆಶಯದಲ್ಲಿ ಮೊದಲು ಪತ್ರಿಕೆಗಳಿಗೆ ಕಳಿಸಿದ್ದೆ. ಹಾಗೆ ಪ್ರಕಟವಾದವನ್ನು ಇಲ್ಲಿ ಮತ್ತಷ್ಟು ಪರಿಷ್ಕರಿಸಿ (-ಅದಕ್ಕೂ ಹೆಚ್ಚಿನ ಸ್ವಾತಂತ್ರ್ಯ ಉಂಟಲ್ಲಾ!) ಕೆಳಗೆ ಪೋಣಿಸುತ್ತೇನೆ.

ಯುದ್ಧ ಸ್ಮಾರಕವೋ? ಸ್ಪ್ರಿಂಗ್ ಪ್ರದರ್ಶನವೋ?

ಇದು ಮಂಗಳೂರು ಕದ್ರಿ ಗುಡ್ಡೆಯ ಮೇಲಿರುವ ಅತ್ಯಂತ ಪ್ರತಿಷ್ಠಿತ ಸರಕಾರೀ ಅತಿಥಿ ಗೃಹದ ಎದುರು, ಆಕಾಶವಾಣಿಯ ಹಿತ್ತಿಲಿನಲ್ಲಿರುವ ವೀರಯೋಧ ಸ್ಮಾರಕ ಆವರಣದ ಹೊರಗೆ, ಸಾರ್ವಜನಿಕ ದಾರಿಯಲ್ಲಿನ ದೃಶ್ಯ. ಹಲವು ಕಾಲದಿಂದ ಇಲ್ಲಿ ಪ್ರತಿಷ್ಠಾಪನೆಗೊಂಡೇ ಇರುವ ಈ ಲಾರಿ ಯಾವುದೋ ಯುದ್ಧ ಭಾಗಿ ಇರಬಹುದೇ? ಹೌದಾದಲ್ಲಿ ಅದರ ಇತಿಹಾಸವನ್ನು ನಾಮಫಲಕದಲ್ಲಿ ದಾಖಲಿಸಿ, ಹೆಚ್ಚು ಭದ್ರವೂ ಪರಿಸರಕ್ಕೆ ಸೂಕ್ತವೂ ಆದ ಅಡಿಪಾಯದೊಡನೆ ಯೋಧ ಸ್ಮಾರಕ ಆವರಣದೊಳಗೆ ಸೇರಿಸಬೇಕು. ಅಲ್ಲಾ ಎಂದಾದರೆ ಎರಡನೇ ಅವಕಾಶ ಯೋಧ ಸ್ಮಾರಕದ ಪ್ರಾಯೋಜಕ ಸಂಸ್ಥೆ - ಕೆನರಾ ಸ್ಪ್ರಿಂಗ್ಸಿನದ್ದು. ‘ಲಾರಿ ಎಷ್ಟು ಮುಕ್ಕಾದರೂ ನಮ್ಮ ಸ್ಪ್ರಿಂಗ್ಸ್ ಅಮರ’ ಎಂಬುದನ್ನು ಸಾರುವಂತಿರುವ ಈ ಪ್ರದರ್ಶಿಕೆಯನ್ನು ಅವರದೇ ಕಾರ್ಖಾನೆಯ ಪ್ರದರ್ಶನಾಂಗಣಕ್ಕೆ ವರ್ಗಾಯಿಸಿಕೊಳ್ಳುವುದು ಉಚಿತ. ಇಲ್ಲವಾದರೆ ಮೌಲ್ಯಗಳು ಅದಲುಬದಲಾಗಿ ಇಲ್ಲಿನ ಸ್ಪ್ರಿಂಗ್ ಪ್ಲೇಟುಗಳು ಕಳಚಿ ಲಾಂಗು, ಮಚ್ಚುಗಳಾದಾವು. ಭವ್ಯ ಭಾರತೀಯ ಸಂಸ್ಕೃತಿಯ ಸ್ವಘೋಷಿತ ಉತ್ತರಾಧಿಕಾರಿಗಳು, ಅಪರೂಪಕ್ಕೆ (ರೆಸಾರ್ಟ್‌ಗಳೆಲ್ಲಾ ವಿವಿಧ ಭಿನ್ನಮತೀಯರಿಂದ ತುಂಬಿ ಹೋದದ್ದಕ್ಕೆ?) ಈ ಅತಿಥಿಗೃಹಕ್ಕೆ ಬರುವುದುಂಟು. ಆಗ ತಮ್ಮ ‘ಕುಟುಂಬ ಕಲಹ’ವನ್ನು ಲೋಕೋತ್ತರವಾಗಿಸುವ ಮಹಾಯಾನದಲ್ಲಿ, ಇದೇ ಲಾಂಗು ಮಚ್ಚುಗಳನ್ನು ತಮ್ಮ ‘ಕುರುಕ್ಷೇತ್ರ’ಗಳಲ್ಲಿ ಬಳಸಿಬಿಟ್ಟಾರು. ಯೋಧ ಸ್ಮಾರಕಕ್ಕೆ ಹೊಸಹೊಸ ಸ್ವಾತಂತ್ರ್ಯ ಸಮರ  ಸೇನಾನಿಗಳ ಹೆಸರುಗಳು ಸೇರುವ ಅಪಾಯವೂ ಇದೆ! (ಪ್ರಜಾವಾಣಿ)

09 April 2012

ಲಕ್ಯಾದಲ್ಲಿ ಮೃಗಜಲ!



ಮಂಗಳೂರ ನೀರಿನ ಕಟ್ಟೆ (ಚಿತ್ರಕೃಪೆ ಡೈಜಿ ವರ್ಲ್ಡ್)
ಮಂಗಳೂರಿನ ಹಿಂಗದ ದಾಹಕ್ಕೆ ಈಚಿನ ವರ್ಷಗಳಲ್ಲಿ ದಟ್ಟವಾಗಿ ಕೇಳಿಬರುತ್ತಿರುವ ಪರಿಹಾರ ಲಕ್ಯಾ ಅಣೆಕಟ್ಟು. ಇದು ಪಶ್ಚಿಮ ಘಟ್ಟದ ಪೂರ್ವ ಮಗ್ಗುಲಿನ ದಟ್ಟ ಕಾಡಿನ ನಡುವಣ ವಿಸ್ತಾರ ಬೋಗುಣಿಯಂಥಾ ಜಾಗದಲ್ಲಿದ್ದ ಕುದುರೆಮುಖ ಗಣಿಯ ಒಂದು ಅಂಗ. ಹಾಗೇ ಇನ್ನೊಂದು ಅಂಗವಾಗಿ ಅಲ್ಲಿನ ಕಚ್ಚಾ ಅದಿರನ್ನು ತಪ್ಪಲಿನ ಮಂಗಳೂರಿಗೆ ಕಳಿಸಲು ಜೋಡಿಸಿದ, ಸುಮಾರು ಒಂದು ನೂರು ಕಿಮೀ ದೀರ್ಘವಾದ ಭಾರೀ ಕೊಳವೆಸಾಲೂ ಇದೆ. ಅಣೆಕಟ್ಟು, ಕೊಳವೆಸಾಲನ್ನು ಬೆಸೆಯುವ ಬೀಸು ಹೇಳಿಕೆಗೆ ವಿಶ್ವಾಸದ ಕವಚ ತೊಡಿಸುವಂತೆ ಆ ವಲಯ ಭಾರೀ ಮಳೆಬರುವ ಮತ್ತು ಸಹಜವಾಗಿ ಹಲವು ನದಿಗಳ ಉಗಮಸ್ಥಾನವೂ ಹೌದು!

ಮಂಗಳೂರ ನಗರಾಡಳಿತವಾದರೋ ಇದರ ಪ್ರಾಯೋಗಿಕತೆಯನ್ನು ಒರೆಗೆ ಹಚ್ಚಬೇಕಿತ್ತು. ಅದು ಬಿಟ್ಟು, ಸ್ಥಳೀಯ ಜಲಸಂಪತ್ತನ್ನು ರೂಢಿಸುವಲ್ಲಿನ ತನ್ನ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಇದನ್ನು ಮುಕ್ತ ಕಂಠದಿಂದ ಸ್ವಾಗತಿಸಿ, ಪ್ರಚುರಿಸುತ್ತಿರುವುದು ನಾಚಿಗೆಗೇಡು. ಸರಕಾರ, ವಿವೇಚನಾಪರ ಜನಪ್ರತಿನಿಧಿಗಳು ಮತ್ತು ವಿಚಾರಪರ ಸಾರ್ವಜನಿಕರು ಇದರ ಹುಸಿಯನ್ನು ತಿಳಿದವರೇ ಇದ್ದಾರೆ. ಎಂಥದ್ದೇ ಅಣೆಕಟ್ಟೆ ಯಾವುದೇ ಕೊಳವೆ ಸಾಲು ನೀರಸಂಗ್ರಹಕ್ಕೂ ಸಾಗಣೆಗೂ ಬಂದೀತು ಎನ್ನುವುದು ತಪ್ಪು. ಅದನ್ನು ಸ್ಪಷ್ಟಪಡಿಸುವಂತೆ ಪ್ರಸ್ತುತ ಲಕ್ಯಾ ಅಣೆಕಟ್ಟು ಮತ್ತು ಕೊಳವೆಸಾಲಿನ ಕಥೆ ನನಗೆ ತಿಳಿದಷ್ಟು, ಸೂಕ್ಷ್ಮದಲ್ಲಿ  ಹೇಳುತ್ತೇನೆ.

10 December 2010

ಏನ್ ಸೈಕಲ್ ಸಾsss ಏನ್ ಸೈಕಲ್ssss

[ಕುಮಾರಧಾರಾವಾಹಿಯ ಎರಡನೇ ಮುಳುಗಿಗೆ ಮೊದಲು ಇಲ್ಲೊಂದು ಹೊರಳು ಸೇವೆಯ (ಮಡೆಸ್ನಾನ?) ವರ್ತಮಾನ ತುರ್ತಾಗಿ ಒದಗಿದೆ. ಇದುಮುಗಿಸಿ ಅಲ್ಲಿಗೆ ಹೋದರಾಗದೇ?]

ಉಯ್ಯಾಲೆಯಾಡಿಸುವ ಮಣ್ಣ ಜಾಡುಗಳಲ್ಲಿ, ಹೊಂಡ ಬಿದ್ದ ದಾರಿಗಳಲ್ಲಿ, ಅಂಚುಗಟ್ಟೆಗಳು ಮೊಳೆಯದ ಕಾಂಕ್ರೀಟ್ ಹಾಸುಗಳಲ್ಲಿ ಹರಿದು ಬಂದವೋ ಬಂದವು. ಝಗಮಗಾಯಿಸುವ ದೀಪಗಳ ಬೆಳಕಿನಲ್ಲಿ, ಕಣ್ಣುಕಿತ್ತು ನೇಲಿದಂಥಾ ಟ್ಯೂಬ್ ಲೈಟುಗಳ ಮಂಕಿನಲ್ಲಿ, ಕತ್ತಲಮೂಟೆಯದೇ ಸೋರಿಕೆಯಲ್ಲೂ ಚಟುಲತೆಯ ಕಿಡಿಯಂತೆ ಸಿಡಿದು ಸೇರಿದವೋ ಸೇರಿದವು. ಅಮ್ಮನ ಕಾರಿನ ಢಿಕ್ಕಿಯಿಂದಿಳಿದು ಬಳುಕುವ ಪುಟಾಣಿಯಾಗಿ, ಅಪ್ಪನ ಬೈಕಿನ ಮುಂದೊತ್ತುವ ನೆರಳಾಗಿ, ಗೆಳೆಯರ ದಂಡಿನ ಸರದಾರನಾಗಿ, ಮುದಿಭ್ರಾಂತು ಒಂಟಿಭೂತವಾಗಿಯೂ ಕೂಡಿಕೂಡಿ ಸಂಕಿ ಅಸಂಕಿಯಾಯ್ತು. ಹತ್ತರಿಂದ ಎಂಬತ್ತರ ವಯೋಮಾನ, ಗಂಡುಹೆಣ್ಣೆನ್ನದ ಏಕೋಭಾವ, ಬುಗ್ಗೆ ಮಾರುವವನಿಂದ ವಿಶ್ವಯಾನಿಯವರೆಗಿನವರೆಲ್ಲಾ ಅಂದು,  ಡಿಸೆಂಬರ್ ಐದರ ಆದಿತ್ಯವಾರ ಬೆಳಕು ಹರಿಯುವ ಮುನ್ನ ಒಟ್ಟಾದದ್ದು ಸೈಕಲ್ ಸವಾರಿಗೆ. ಗೆಳೆಯ ಉಪಾಧ್ಯ ಉದ್ಗರಿಸಿದರು “ಅಯ್ಯಬ್ಬಾ! ಮಂಗ್ಳೂರಲ್ಲಿ ಇಷ್ಟೊಂದು ಸೈಕಲ್ ಇತ್ತಾ!” ಇದು ಆರೆಕ್ಸ್ ಲೈಫ಼್ ಕೊಟ್ಟ ಕರೆ ‘ಹಸುರಿನ ನವೋದಯಕ್ಕೆ ಸೈಕಲ್ ತುಳಿಯಿರಿ’ಗೆ ಬಂದ ಅಪೂರ್ವ ಜನಬಲ. ನಾಲ್ಕು ವರ್ಷದ ಹಿಂದೆ ಸುಮಾರು ಮುನ್ನೂರು, ಮತ್ತಿನ ವರ್ಷಕ್ಕೇರಿ ಬಂತು ಇಮ್ಮಡಿ, ನಿನ್ನೆಯ ವರ್ಷದಲ್ಲಿ ಎಂಟ್ನೂರು, ಇಂದು ಸಾವಿರಾದಿನ್ನೂರಾಚೆ - ಅಸಂಖ್ಯ!