
[ಭವಿಷ್ಯ ವಿಜ್ಞಾನ
- ಅನುಬಂಧ - ಒಂದು,
ಲೇಖಕ ಜಿ.ಟಿ. ನಾರಾಯಣ ರಾವ್
೧೯೯೩ ಅತ್ರಿ ಬುಕ್ ಸೆಂಟರ್ ಪ್ರಕಟಣೆ, ಮೊದಲ ಮುದ್ರಣ
೧೯೮೧. ಪುಟ ಸುಮಾರು ೯೦ ಬೆಲೆ ರೂ ೧೨]
[ಏಳನೇ ಮತ್ತು
ಕೊನೆಯ ಕಂತು]
ಇಪ್ಪತ್ತನೆಯ ಶತಮಾನ ಇನ್ನು ಕೆಲವೇ
ವರ್ಷಗಳಲ್ಲಿ (೧೯೯೩ರಲ್ಲಿ ಬರೆದ ಮಾತು.) ನೇಪಥ್ಯಕ್ಕೆ ನಿರ್ಗಮಿಸಿ ಇಪ್ಪತ್ತೊಂದನೆಯ
ಶತಮಾನ ರಂಗ ಪ್ರವೇಶಿಸಿರುತ್ತದೆ. ಸದ್ಯದಲ್ಲಿ ಮಾನವ ನವ ಶತಮಾನದ ಅರುಣೋದಯ
ಕಾಲದಲ್ಲಿದ್ದಾನೆ.
ವರ್ತಮಾನ ಜೀವನ ಹೇಗಿದೆ? ಎಲ್ಲಿ ನೋಡಿದರೂ
ಅಶಾಂತಿ, ತುಮುಲ, ಮಾಲಿನ್ಯ, ಬಿಕ್ಕಟ್ಟು, ಮನುಕುಲದ ಅಂತ್ಯಕಾಲವೇ ಸನ್ನಿಹಿತವಾಗಿದೆಯೇ ಎನ್ನುವ
ಸನ್ನಿವೇಶ. ಆಹಾರೋತ್ಪಾದನೆಯ ಆಧಿಕ್ಯದ ಜೊತೆಗೇ ಹಸಿವಿನ ಭೂತದ ಕರಾಳ ಕೂಗು.
ತಂತ್ರವಿದ್ಯೆಯ ಪರಾಕಾಷ್ಟೆಯ ಬೆನ್ನಿಗೇ ತೀವ್ರ ಶಕ್ತಿ ಬಿಕ್ಕಟ್ಟಿನ ಸಮಸ್ಯೆ.
ನಾಗರಿಕತೆಯ ಉಚ್ಛ್ರಾಯದ ಹಿನ್ನೆಲೆಯಲ್ಲಿ ಪಾಶವೀಯತೆಯ ಉಗ್ರ ಮುಖ. ಈ ವೈರುದ್ಧ್ಯಗಳನ್ನು ಗಮನಿಸಿ ಮಾನವ ಪ್ರಜ್ಞೆಯ ಮೂಲಭೂತ ವಿವೇಕದಲ್ಲಿ ಭರವಸೆ ಇರಿಸಿ ಬರಲಿರುವ
ಶತಮಾನದಲ್ಲಿ ಬದುಕು ಹೇಗಿರಬಹುದೆನ್ನುವುದನ್ನು ವೈಜ್ಞಾನಿಕವಾಗಿ ಮುನ್ನುಡಿಯುವುದು ಸಾಹಸವೇ ಸರಿ.
ಈ ನಿಟ್ಟಿನಲ್ಲಿ ಒಂದು ಪ್ರಯತ್ನ ಪ್ರಸಕ್ತ ರೂಪಕ. ಮಾನವ
ವಿವೇಕಯುತನಾಗಿ ತನ್ನ ಮನೆಯನ್ನೂ ಬದುಕನ್ನೂ ಹದದಲ್ಲಿಟ್ಟುಕೊಂಡು ತಂತ್ರವಿದ್ಯೆಯ ದಾಸನಾಗದೇ ಯಜಮಾನನಾಗಿ
ಉಳಿದದ್ದಾದರೆ ಇಪ್ಪತ್ತೊಂದನೆಯ ಶತಮಾನ ಅವನೆದುರು ಭವ್ಯ ನವ ಜೀವನವನ್ನು ಅನಾವರಣಗೊಳಿಸಬಲ್ಲುದೆಂಬ
ಆಶಾವಾದ ಪ್ರಸಕ್ತ ರೂಪಕದ ಪ್ರಧಾನ ಶ್ರುತಿ.
ಇದೊಂದು ವೈಜ್ಞಾನಿಕರೂಪಕ, ೧೯೮೩ರಲ್ಲಿ
ಬರೆದದ್ದು ಬೆಂಗಳೂರು ಆಕಾಶವಾಣಿಯ ಕೋರಿಕೆ ಮೇರೆಗೆ. ಅದೇ ವರ್ಷ ಇದು ಆಕಾಶವಾಣಿಯಲ್ಲಿ
ಪ್ರಸಾರವಾಗಿದೆ. ಇಲ್ಲಿ ಬರುವ ಪಾತ್ರಗಳು ಪ್ರತೀಕಾತ್ಮಕ.
ಕಾಲಪುರುಷ - ಚಿರಂತನ ಕಾಲದ ಪ್ರತೀಕ. ಎಲ್ಲ ಶತಮಾನಗಳ ಸಾರ್ವತ್ರಿಕ ಪ್ರಜ್ಞೆ.
ಇಪ್ಪತ್ತನೆಯ ಶತಮಾನ - ವರ್ತಮಾನ
ಕಾಲದ ಪ್ರತೀಕ. ಪ್ರಸಕ್ತ ಶತಮಾನದ ಅನುಭವಗಳ ಸಾರ.
ಇಪ್ಪತ್ತೊಂದನೆಯ ಶತಮಾನ - ಸದ್ಯವೇ ರಂಗಪ್ರವೇಶಿಸಲಿರುವ
ಹೊಸ ಕಾಲದ ಪ್ರತೀಕ. ಮಾನವನ ಭವಿಷ್ಯ ಆಶೋತ್ತರಗಳ ಮೂರ್ತರೂಪ.
