Showing posts with label ಮಹಾಲಿಂಗ ಭಟ್. Show all posts
Showing posts with label ಮಹಾಲಿಂಗ ಭಟ್. Show all posts

04 December 2017

ಮಾನವೀಯತೆ - ಅಹಿಂಸೆ

(ಕಿನ್ನಿಕಂಬಳದ ಮೂಲಮೂರಿ ಮತ್ತು ಕರಾವಳಿಯ ಕಥನ - ಉತ್ತರಾರ್ಧ)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
 (ಭಾಗ ೧೩)
- ಕೆ. ಮಹಾಲಿಂಗ ಭಟ್
‘ಮಾನವೀಯತೆ - ಅಹಿಂಸೆ’ ಮೌಲ್ಯಗಳನ್ನು ಮರುಶೋಧಿಸುವ ಬಾಗಲೋಡಿ ಗುಣವೇ ಪವಾಡ ಪುರುಷದಂಥ ಪ್ರಸಿದ್ಧ ಕತೆಯನ್ನು ಕೊಟ್ಟಿದೆ. ಸಾಹಿತ್ಯ ಪರಿಷತ್ತಿಗಾಗಿ ಕೆ. ನರಸಿಂಹಮೂರ್ತಿ ಸಂಪಾದನೆಯಲ್ಲಿಯೂ (ಕೃತಿ: ಅತ್ಯುತ್ತಮ ಸಣ್ಣ ಕತೆಗಳು) ಗಿರಡ್ಡಿಯವರ ಮರೆಯಬಾರದ ಹಳೆಯ ಕತೆಗಳು ಸಂಕಲನದಲ್ಲಿಯೂ ಇದು ಬಂದಿದೆ. ಬಾಗಲೋಡಿಯವರು ಇತಿಹಾಸ ಲೋಕಕ್ಕೆ ಪ್ರವೇಶಿಸುವಾಗ ಕಾಲದ ಖಂಡಾಂತರಗಳನ್ನು ದಾಟಿ ನಿರ್ಮಿಸುವ ಪುರಾತನ ವಾತಾವರಣಕ್ಕೂ ಅವರದ್ದೇ ಆದ ಛಾಪೊಂದು ಇರುತ್ತವೆಂಬುದಕ್ಕೆ ಇದು ಸಾಕ್ಷಿ. ಸರ್ವಾರ್ಥಸಿದ್ಧಿ ಎಂಬ ಭಿಕ್ಕು, ತಾನು ಕೊಲೆಯ ಹಿಂಸೆಯೊಂದನ್ನು ನಡೆಸಿ ಅಹಿಂಸೆಯನ್ನು ಉಳಿಸಿದ್ದ ಸತ್ಯವನ್ನು ತನ್ನ ಕೊನೆಯುಸಿರಿನ ಜೊತೆಯಲ್ಲಿ ಸ್ಫೋಟಿಸುವ ಕತೆ ಇದು. ಹೆಸರುಗಳು, ಪರಿಭಾಷೆಗಳು, ವಿವರಗಳ ಮೂಲಕ ಬೌದ್ಧ ಚಾರಿತ್ರಿಕ ವಾತಾವರಣದ ಹಿನ್ನೆಲೆಯಲ್ಲಿ ಈ ಮಹಾನ್ ಅಹಿಂಸಾಮೂರ್ತಿ ಭಿಕ್ಕು ಕ್ರೂರ, ಮೂರ್ಖ ರಾಜನನ್ನು ಕೊಂದುಬಿಟ್ಟಿದ್ದ ಸತ್ಯವನ್ನು ಕತೆ ತೆರೆಯಿಸುತ್ತದೆ. "ನಾನೀ ಕಥೆಯನ್ನು ನಿನಗೆ ಹೇಳಿದುದು ಪಶ್ಚಾತ್ತಾಪದಿಂದಲ್ಲ, ಆತ್ಮಲಾಂಛನದಿಂದಲ್ಲ, ಸರ್ವಥಾ ಅಲ್ಲ.... ನಿನಗೆ ಕರ್ತವ್ಯಜ್ಞಾನಕ್ಕಾಗಿರಲಿ ಎಂದು ಹೇಳಿದ್ದೇನೆ," ಎನ್ನುತ್ತಾನೆ ಬೌದ್ಧ ಸಂನ್ಯಾಸಿ. ಅಹಿಂಸೆ ಕರುಣೆಗಳಂಥ ಭಿಕ್ಕುವಿನ ಮೂಲವಾಸನೆಗಳು ಇಲ್ಲಿ ಹೊಸ ಅರ್ಥ ಪಡೆದು ಹೊಳೆವ ‘ಪವಾಡ’ ಸಾಧಿಸುತ್ತವೆ. ದೇವರಾಯರ ವ್ಯಂಗ್ಯ ವಿನೋದವೂ ಚಾರಿತ್ರಿಕ ಕಾಲದ ನಿರ್ಮಾಣವೂ ಮಾನವೀಯತೆಯ ಪ್ರತಿಪಾದನೆಗಾಗಿ ‘ಮಾನಸಿಕ ದೂರ’ ಒಂದನ್ನು ನಿರ್ಮಿಸುತ್ತವೆ. ಈ ಒಂದು ವಿಶಿಷ್ಟ ‘ಓರೆನೋಟ’ದ ಮೂಲಕ ರೂಢಿಸಿಕೊಂಡ

27 November 2017

ಕಿನ್ನಿಕಂಬಳದ ಮೂಲಮೂರಿ ಮತ್ತು ಕರಾವಳಿಯ ಕಥನ

(ಬಾಗಲೋಡಿ ವಾಙ್ಮಯ ಸಮೀಕ್ಷೆ ೧)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)

(ಭಾಗ ೧೨)
- ಕೆ. ಮಹಾಲಿಂಗ ಭಟ್
ಬಾಗಲೋಡಿ ದೇವರಾಯರಿಗೂ ನನಗೂ ಇರುವ ನಂಟು ಮೂರು ಅವಿಭಾಜ್ಯ ಗಂಟುಗಳಿಂದಾದುದು: ನಾವಿಬ್ಬರೂ ಕರಾವಳಿಯ ಶಿಶುಗಳು, ಸಾಹಿತ್ಯಾರಾಧಕರು ಮತ್ತು ವೈಯಕ್ತಿಕವಾಗಿ ಅವರು ಅಂದು (೧೯೪೨-೪೪) ನಡೆದಾಡಿ ಬೆಳಗಿದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಇಂದು (೨೦೦೩) ನಾನೊಬ್ಬ ಯುವ ಕನ್ನಡ ಉಪನ್ಯಾಸಕ. ಅವರನ್ನು ನಾನು ಕಂಡಿಲ್ಲ. ಪ್ರಿಸಮ್ ಸಂಸ್ಥೆ ಪ್ರಕಟಿಸಿರುವ (೨೦೦೦) ಬಾಗಲೋಡಿ ದೇವರಾಯ - ಸಮಗ್ರ ಕತೆಗಳು ಎಂಬ ಕೃತಿಯಲ್ಲಿ ಪ್ರಕಟವಾಗಿರುವ ಅವರ ಚಿಂತನೆಯ ಹೊಳಹು ಸೆಳವುಗಳನ್ನು ಆಧರಿಸಿ ಈ ಸಮೀಕ್ಷೆ ಮಾಡಿದ್ದೇನೆ. ಸಮಗ್ರ ಕತೆಗಳು ಸಂಕಲನದಲ್ಲಿ ಬಾಗಲೋಡಿಯವರ ೨೬ ಕತೆಗಳಿವೆ. ಅವರ ಕತೆಗಾರಿಕೆ ತಂತ್ರ ಹಿಂದಿನ ತಲೆಮಾರಿನದು - ಉದಾಹರಣೆಗೆ ಮಾಸ್ತಿಯವರಲ್ಲಿ ಪ್ರಕಟವಾಗುವ ಅನನ್ಯತೆ. ಆದರೆ ಕಲೆಗಾರಿಕೆ ಇಪ್ಪತ್ತನೆಯ ಶತಮಾನದ ಸೂಕ್ಷ್ಮತೆಗಳಿಗೆ ವಿಶಿಷ್ಟ ಸ್ಪಂದನ.

14 May 2013

ಮೂರು ತಿಂಗಳು ಬಾಳುವ ಹೂವಿನ ಗುಡ್ಡ - ಡಾ| ಕೆ. ಮಹಾಲಿಂಗ ಭಟ್


[ಡಾ| ಕೇಜಿ ಭಟ್ಟರನ್ನು ನಾನು ಮೊದಲು ಪುಸ್ತಕ ವ್ಯಾಪಾರಿಯಾಗಿ ಸಂಪರ್ಕಿಸಿದ್ದೆ. ಮುಂದುವರಿದು ನನ್ನದೇ ಹುಚ್ಚಿನ ಬಿಸಿಲೆ ವಲಯಕ್ಕೆ ಚಾರಣಕ್ಕೆ ಕರೆದಾಗ ಹಿರಿತನ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರೊಫೆಸರರ ಹಮ್ಮುಗಳೊಂದೂ ಇಲ್ಲದೆ ವಿಜ್ಞಾನಿಯ ಕುತೂಹಲ, ತನಗೆ ತಿಳಿದದ್ದನ್ನು ಇತರರಲ್ಲಿ ಯಾವುದೇ ಕೃಪಣತೆಯಿಲ್ಲದೇ ಹಂಚಿಕೊಳ್ಳುವ ಪ್ರೀತಿ, ಇನ್ನೂ ಮುಖ್ಯವಾಗಿ ತಾನು ಇತರರಿಗೆ ಹೊರೆಯಾಗಬಾರದೆಂಬ ವಿನಯ ಇಟ್ಟುಕೊಂಡು ಬಂದರು. ಆ ಎಲ್ಲದರ ಮತ್ತೂ ಹೆಚ್ಚಿನದರ ಪರಿಚಯಕ್ಕೆ ನನ್ನೊಂದು ಮುಖ್ಯ ಜಾಲಬರಹವನ್ನು ಇಲ್ಲಿ ಚಿಟಿಕೆ ಹೊಡೆದು  ಓದಬಹುದು. ಅಂಥಾ ಕಾಕುಂಜೆ ಗೋಪಾಲಕೃಷ್ಣ ಭಟ್ಟರ ಒಂದು ವೈಶಿಷ್ಟ್ಯವನ್ನು ಮಾತ್ರ ಎತ್ತಿಕೊಂಡು, ಗೆಳೆಯ ಡಾ| ಮಹಾಲಿಂಗ ಭಟ್ಟರು ತಮ್ಮ ವಿಜಯವಾಣಿಯ ಅಂಕಣದಲ್ಲಿ ಬರೆದುಕೊಂಡರು. ಅದರ ಹೆಚ್ಚಿನ ಪ್ರಸರಣಕ್ಕಾಗಿ ಈಗ ನನ್ನ ಜಾಲತಾಣಕ್ಕೂ ಅವಕಾಶಮಾಡಿಕೊಟ್ಟರು. - ಅಶೋಕವರ್ಧನ]

ಮೂರು ತಿಂಗಳು ಬಾಳುವ ಹೂವಿನ ಗುಡ್ಡ
-ಡಾ| ಕೆ. ಮಹಾಲಿಂಗ ಭಟ್

ಕರ್ನಾಟಕದ ಸಸ್ಯತಜ್ಞರಿಗೆ ಉಡುಪಿಯ ಕೆ.ಜಿ.ಭಟ್ ಎಂದರೆ ಗೌರವ, ಅಚ್ಚರಿ ಎಲ್ಲವೂ. ಅಂಥದ್ದೇನು ಅವರ ಮಹತ್ವ? ಎಷ್ಟೋ ಜನ ದಿನನಿತ್ಯ ಕಾಲುದಾರಿಯ ತುಳಿದು ನಡೆಯುತ್ತಾರೆ, ಅಲ್ಲಿರುವ ಚಿಕಿಣಿ ಹುಲ್ಲುಗಳು ಪಾದದ ಭಾರಕ್ಕೆ ಪೂರ್ತಿ ಮುದುಡುತ್ತವೆ. ಹಾಗಿದ್ದರೂ ಬಿಸಿಲು ತಿನ್ನುವುದಕ್ಕೆ, ಗಾಳಿ ಕುಡಿಯುವುದಕ್ಕೆ, ಬದುಕನ್ನು ಪಡೆಯುವುದಕ್ಕೆ ಅವು ಮತ್ತೆ ಸೆಡೆದು ನಿಲ್ಲುತ್ತವೆ. ಕೆ.ಜಿ.ಭಟ್ಟರೂ ಎಲ್ಲರಂತೆ ಈ ಹುಲ್ಲದಾರಿಗಳಲ್ಲಿ ನಡೆದವರೇ, ಆದರೆ ಉಳಿದವರು ಮೆಟ್ಟಿ ಮುಂದೆಸಾಗಿದ ಕಾಲಡಿಯ ಸಸಿಗಳಲ್ಲಿ ಇದುವರೆಗೆ ವಿಜ್ಞಾನ ಜಗತ್ತು ಗುರುತಿಸದ ಸಸ್ಯಗಳು ಅವರಿಗೆ ಹಲವು ಸಲ ಸಿಕ್ಕಿವೆ. ವಾಸ್ತವದಲ್ಲಿ ಅವರು ಪದವಿಕಾಲೇಜಿನ ಮೇಷ್ಟ್ರು, ಸುತ್ತಲಿನ ವಿಶ್ವವಿದ್ಯಾನಿಲಯದ ಪ್ರೊಫೆಸರುಗಳು ಮಾತ್ರ “ಕೆ.ಜಿ. ಸರ್ ಒಂದು ಸಸ್ಯವನ್ನು ವಿವರಿಸಿದರೆ ಅದಕ್ಕೆ ಬೇರೆ ಅಫೀಲು ಇಲ್ಲ” ಎಂದು ಕೃತಜ್ಞತೆಯಲ್ಲಿ ನೆನೆಯುತ್ತಾರೆ. ‘ಟೇಕ್ಸೋನಮಿ’ ಎನ್ನುವುದು ಬೋಟನಿಯಲ್ಲಿ ಸಸ್ಯಗಳ ವರ್ಗೀಕರಣಶಾಸ್ತ್ರ. ಇದು ಜಗತ್ತಿನ ಎಲ್ಲ ಸಸ್ಯಗಳನ್ನು ಗುರುತಿಸಿ ಹೆಸರಿಸಿ ಅವನ್ನು ಹಲವು ಗುಂಪುಗಳಲ್ಲಿ ಬೇರ್ಪಡಿಸುವ ಸಸ್ಯವಿಜ್ಞಾನದ ಕ್ರಮ. ಕೆ.ಜಿ.ಭಟ್ಟರಿಗೆ ಯಾವುದೇ ಹಸಿರು ಕಣ್ಣಿಗೆ ಕಂಡೊಡನೆ ಆ ಮೂಕ, ನಿಶ್ಚಲ ಜೀವದ ದೇಹರಚನೆಯ ಬಗ್ಗೆ ಚಿಂತನೆ ಸುರಾಗುತ್ತದೆ, ವಿಜ್ಞಾನದ ವಿಭಾಗಕ್ರಮದಲ್ಲಿ ಈ ಹಸಿರುವ್ಯಕ್ತಿತ್ವವು ಎಲ್ಲಿ ಕೂತಿದೆ ಇಲ್ಲಾ ಅದಕ್ಕೆ ಎಲ್ಲಿ ಹೊಸಜಾಗ ನೀಡಬೇಕಾಗಿದೆ? ಎಂಬುದು ಅವರಿಗೆ ಜ್ಞಾನಧ್ಯಾನವಾಗುತ್ತದೆ.

19 October 2010

ಮೊದಲಿಗೆ ಹಡಗಿನಲ್ಲಿ ಹೋದ ಕನ್ನಡದ ರಾಗಗಳು


[ಮಂಗಳೂರಿನ ಯಾವುದೋ ಇಲಾಖಾ ಕಛೇರಿಯಲ್ಲಿ ಐವತ್ತು ವರ್ಷಕ್ಕೂ ಮಿಕ್ಕ ಭೂದಾಖಲೆಗಳು ಅಟ್ಟಿಬಿದ್ದಿದ್ದವಂತೆ. ಹವಾಮಾನ ಪ್ರಭಾವ, ದೂಳು, ಜಿರಳೆ, ಗೆದ್ದಲು ಇತ್ಯಾದಿ ಪಾರುಕಂಡ ಅಷ್ಟನ್ನೂ ದೂಳು ಹೊಡೆದು ಬಲೆ ಕಳೆದು ಮುಂದುವರಿಸುವಲ್ಲೇ ಅನ್ನ ಕಾಣಬೇಕಾದ ಬುದ್ಧಿ ಶೂನ್ಯರು ಎಲ್ಲ ಸುಟ್ಟು ಕಛೇರಿ ಬೆಳಗಿದರಂತೆ. ಅಪೂರ್ವಕ್ಕಾದರೂ ಬರಬಹುದಾಗಿದ್ದ ಕುತೂಹಲದ ಕಣ್ಣುಗಳು ಇನ್ನು ತಣಿಯವು, ಹಳಗಾಲದ ಕಿಡಿಯೊಂದು ವರ್ತಮಾನದ ದೀವಟಿಗೆ ಬೆಳಗುವ ಚಂದ ಇನ್ನು ಸಿಗದು. ಉದ್ದೇಶ, ಗ್ರಹಿಕೆಗಳೇನೇ ಇರಲಿ ನೂರಿನ್ನೂರು ವರ್ಷಗಳ ಹಿಂದಿನ ಪಾಶ್ಚಾತ್ಯ ಮತಪ್ರಚಾರಕರು ಹಿಡಿದಿಟ್ಟ ‘ವರ್ತಮಾನದ ನೋಟಗಳು’, ಮತ್ತವನ್ನು ಕಾಪಿಟ್ಟು ಕಾಲಕಾಲಕ್ಕೆ ಹೊಸಬೆಳಕು ಕೊಟ್ಟು ಭವಿಷ್ಯ ಉಜ್ವಲ ಮಾಡುವ, ಹೊಸ ಅರ್ಥಧಾರೆಗಳನ್ನು ಹರಿಸಿ ಬೆಳೆ ತೆಗೆಯುವ ಮಂದಿಯನ್ನಾದರೂ ನೋಡಿ ಕಲಿಯಬಾರದಿತ್ತೇ ಎನ್ನುವ ಕೊರಗು ಮಾತ್ರ ನಮಗುಳಿಯಿತು. ಏನೋ ಹುಡುಕುತ್ತಾ ಇನ್ನೇನೋ ಎಡವಿ ಮತ್ತದರ ಬೆನ್ನು ಹಿಡಿದು ಬಂದ ಜರ್ಮನಿಯ ರೆ| ಹಾಕೆ ಮತ್ತಷ್ಟೇ ತೀವ್ರ ಕಾಳಜಿಯ (ನಮ್ಮ) ಮಹಾಲಿಂಗ ಭಟ್ಟರ ಜುಗಲಬಂದಿ ಪ್ರಜಾವಾಣಿಯ ೨-೧೦-೧೦ರ ಕರಾವಳಿ ಪುಟದಲ್ಲಿ ಬಂತು. ಇದೂ ಕಾಪಿಡುವ ಸಂಗತಿ. ಕೇವಲ ‘ಗಜೇಟ್’ (=ಹಳೆ ಪೇಪರ್) ಆಗಿ ‘ಸರಕಾರೀ ಭೂ ದಾಖಲೆ’ಯಂತೆ ಆಗಬಾರದೆಂಬ ಹಂಬಲದಲ್ಲಿ ಇಲ್ಲಿ ಪ್ರಕಟಿಸಲು ಕೇಳಿಕೊಂಡೆ. ಉತ್ಸಾಹಿ ಮಹಾಲಿಂಗರು ಪ್ರಜಾವಾಣಿಯಲ್ಲಿ ಸ್ಥಳಾನುಕೂಲಕ್ಕಾಗಿ ಹೇಳದೆಬಿಟ್ಟ ಇನ್ನಷ್ಟು ಅಂಶಗಳನ್ನು ಸೇರಿಸಿಕೊಟ್ಟಿದ್ದಾರೆ. ಅವರು ಮತ್ತು ಹಾಕೆಯವರು ಕೊಟ್ಟ ಹೆಚ್ಚಿನ ಚಿತ್ರಗಳೂ ಬ್ಲಾಗಿಗರಿಗೆ ಲಾಭ. ಹಾಕೆಯವರು ಬ್ಲಾಗಿನ ಸಾಧ್ಯತೆಗಳನ್ನು ದುಡಿಸಿಕೊಳ್ಳುವಂತೆ ಒಂದು ಟ್ಯೂನನ್ನೂ ಕೊಟ್ಟಿದ್ದಾರೆ - ಅಶೋಕವರ್ಧನ]

30 August 2010

ಮಹಾಲಿಂಗರು ಕಂಡ ಸಂಜೀವರ ಸಾಹಸ


ಚಿಕ್ಕಾಸಿನ ಕೂಲಿಗೆ ಯಾರ್ಯಾರದೋ ಕಾರು ತೊಳೆಯುತ್ತಿದ್ದ ಹುಡುಗನಿಗೆ ಸಮೀಪದ ದೇವಾಲಯದ ವಠಾರದಿಂದ ‘ಯಕ್ಷ ಸಂಗೀತ’ಕೇಳಿದ್ದು, ಆಕರ್ಷಿತನಾದ್ದು ಆಶ್ಚರ್ಯವಲ್ಲ. ಹುಡುಗನ ಕುತೂಹಲ ಕಮರದಂತೆ ಕಲಿಸಿಕೊಟ್ಟ ಗುರು, ಕಿವಿಗೆ ಬಿದ್ದದ್ದು ಮನಸ್ಸು ದೇಹವನ್ನೇ ಏನು ಇಂದು ‘ಬೆಳೆದು ನಿಂತ ಹುಡುಗನ’ ಬದುಕನ್ನೇ ಆವರಿಸಿದ್ದು ಆಶ್ಚರ್ಯ. ಅಂಥವರು ರೂಢಿಯ ಜಾಡಿನಲ್ಲಿ ಮಾತಿನ ಗಾಡಿ ಹೊಡೆಯುವುದಾಗಲೀ ದೇಹದಂಡನೆಯಲ್ಲಿ ನಿರ್ವಂಚನೆಯ ಕಸುಬುಗಾರಿಕೆ ತೋರುವುದಾಗಲೀ ಇದು ಮೊದಲಲ್ಲ. ಆದರೆ ಆ ಅಭಿವ್ಯಕ್ತಿಯ ಶಿಲ್ಪಕ್ಕೆ ಕುಂದು ಬಾರದಂತೆ ಮರೆತುಹೋದ ಕುಸುರಿಯನ್ನು ಹುಡುಕಿ ತಂದು ಸೇರಿಸಿ, ಇವರಂತೆ ಭೂರಿ ಸಮಾರಾಧನೆ ನಡೆಸಿದವರು ಹಿಂದಿಲ್ಲ (ಮುಂದೆ ಇರಲಾರದು!) ಬಾಲ್ಯದಲ್ಲಿ ಅಕ್ಷರಜ್ಞಾನ ಅರ್ಥಾತ್ ಕಲಿಕೆಯ ಔಪಚಾರಿಕ ದ್ವಾರವನ್ನು ಅಷ್ಟಾಗಿ ಹಾದುಹೋಗಲಾಗದವರೂ ಲೋಕ ಶಿಕ್ಷಣದಲ್ಲಿ, ಕಾಲಪ್ರವಾಹದ ಸವಕಳಿಯಲ್ಲಿ ಗುರುವಾಗಿ ಸಂಪನ್ಮೂಲ ವ್ಯಕ್ತಿಯಾಗಿ ತೋರುವುದು ವಿಶೇಷವಲ್ಲ. ಇಂದೂ ಹೊಟ್ಟೆಪಾಡು ಮುಖ್ಯವಾಗಿ ಯಕ್ಷಶಿಕ್ಷಣಕ್ಕೆ ಬಂದು, ಅಕ್ಷರಕ್ಕೆರವಾಗುವ ಎಳೆಜೀವಗಳಿಗೆ ಸಂಜೀವವಾಗುವ, ಯಕ್ಷಶಿಕ್ಷಣದೊಡನೆ ಔಪಚಾರಿಕ ವಿದ್ಯೆಯನ್ನೂ ಒದಗಿಸುವ ಮಹಾಗುರುತನ ಗುರುತರವಾದದ್ದು, ಸದ್ಯ ಭಾರತದ ಸಂದರ್ಭದಲ್ಲಿ ಹೀಗೊಂದು ಸಾಧನೆಯನ್ನು ಕಾಣಿಸುತ್ತಿರುವ ಎರಡನೆಯ ಸಂಸ್ಥೆ -  ಉಡುಪಿಯ ಎಂ.ಜಿ.ಎಂ ಕಾಲೇಜಿನಾಶ್ರಯದ ಯಕ್ಷಗಾನ ಕೇಂದ್ರ (ವರ್ತಮಾನದ ಸಮರ್ಥ ನಿರ್ದೇಶಕ ಪ್ರೊ| ಹೆರಂಜೆ ಕೃಷ್ಣ ಭಟ್). ಕೇಂದ್ರದ ಒಡನಾಡಿದ ವ್ಯಕ್ತಿಶಕ್ತಿಗಳು ಬಹುವರ್ಣಮಯ. ಅದರ ಹುಟ್ಟು ಆಕಸ್ಮಿಕವೇ ಆದರೂ ವಿಕಾಸದಲ್ಲಿ ಇಂದು ಮುಟ್ಟಿದೆ ಸ್ವರ್ಣಪಥ. ಅದರ ಇತಿಹಾಸಕ್ಕೆ ಕೂರುವ ದೂಳು ತೊಳೆಯುತ್ತ, ಕಿಲುಬು ಕಳೆಯುತ್ತ, ‘ಗುರು’ತು ಮರೆತರೂ ಗುರುತು ಉಳಿಯುವ ಕೆಲಸ ಮಾಡುತ್ತಿರುವವರೇ (‘ಕಾರು ತೊಳೆದ ಹುಡುಗ’) ಬನ್ನಂಜೆ ಸಂಜೀವ ಸುವರ್ಣ. ಕೌಟುಂಬಿಕ ಹಿನ್ನೆಲೆ, ಸಂಸ್ಕಾರ ಯಕ್ಷಗಾನ ಕೇಂದ್ರದ ಪ್ರಾಂಶುಪಾಲ ಸಂಜೀವರಿಗೆ ನೂಕು ಬಲ ಕೊಟ್ಟಿಲ್ಲ. ಸಾಮಾಜಿಕ ವರ್ಗ ವಿಭಜನೆಗಳು ಸುವರ್ಣರಿಗೆ ಇಂದಿಗೂ ಅನುಕೂಲವಾಗಿರುವುದು ಸಂಶಯಾಸ್ಪದವೇ (ಅವರು ಎಲ್ಲೂ ಹೇಳಿಕೊಳ್ಳರು.). ಆದರೆ ಬೆಸ್ತರವಳ ಮಗ ‘ವೇದ’ಗ್ರಹಣ ಮಾಡಿದಂತೆ, ಕಾಡಬೇಡ ಮಹಾಕವಿಯಾದಂತೆ ಯಕ್ಷಲೋಕದಲ್ಲಿಂದು ಅದ್ವಿತೀಯ (ನಿರ್ವಿವಾದಿತ) ಮಹಾಗುರುವೆಂದರೆ ಬನ್ನಂಜೆ ಸಂಜೀವ ಸುವರ್ಣ.