(ತಪೋಮಣೆಯಿಂದ ಸರ್ವಜ್ಞನ ಪೀಠಕ್ಕೆ ಭಾಗ-೨ ಚಕ್ರವರ್ತಿಗಳು ಸುತ್ತು ೧೫)
ಮಳೆಗಾಲದಲ್ಲಿ ಮೂರು ಹಗಲು, ಎರಡು ರಾತ್ರಿಗಳ ಸಾಹಸೀ ಪ್ರಾಕೃತಿಕ ಒಡನಾಟದ ಮೊದಲ ಭಾಗ ೬-೧೨-೨೦೧೩ರಂದು ಇಲ್ಲೇ ಪ್ರಕಟವಾಗಿದೆ ಗಮನಿಸಿ. ಹಾಗೇ ಚಕ್ರವರ್ತಿಗಳು ಪುಸ್ತಕದ ವಿ-ಧಾರಾವಾಹಿಯ ಹಿಂದಿನ ಎಲ್ಲ ೧೪ ಸುತ್ತುಗಳನ್ನೂ ಇಲ್ಲೇ ಆಯ್ದುಕೊಂಡು ನೋಡಲೂಬಹುದು.

ಆರೋಹಣ ಪರ್ವತಾರೋಹಿಗಳು ಸಾಹಸಿಗಳು, ಮಂಗಳೂರು,
ತನ್ನ ವಿವಿಧ ದಿಕ್ಕಿನ ಓಟಗಳ ಅನುಕೂಲಕ್ಕೆ
ಕೆಲವು ಹೋಟೆಲುಗಳನ್ನು ಖಾಯಂ ಆಗಿ ನೆಚ್ಚುವುದಿತ್ತು. ಹಾಗೆ ಉಡುಪಿ ದಾರಿಯಲ್ಲಿ
ಪಡುಬಿದ್ರೆ ಪೇಟೆಗೂ ತುಸು ಮೊದಲು ಹೆದ್ದಾರಿಯಂಚಿನಲ್ಲಿ ನಮಗೆ ಒಗ್ಗಿದ ಶುದ್ಧ ಸಸ್ಯಾಹಾರಿ
ಹೋಟೆಲ್ ನಾಗರಾಜ ಶೆಟ್ಟಿ ಎಸ್ಟೇಟಿನದ್ದು. ಅದರ ಅವನತಿಯಲ್ಲಿ
ಪಡುಬಿದ್ರೆ ಪೇಟೆಯದ್ದೇ ವಿಜಯ ವಿಹಾರಕ್ಕೆ
ಬದಲಿದೆವು. ಹೆದ್ದಾರಿಯಲ್ಲಿ ಮುಂದುವರಿಯುವುದೇ ಇದ್ದರೆ, ಕುಂದಾಪುರದ
ಶೆರೋನ್ ತುಂಬಾ ಕಾಲ ಬಳಸಿದ್ದೆವು. ಆದರೆ ಸಾಲಿಗ್ರಾಮದಲ್ಲಿ ಮಂಟಪ ಹೊಟೆಲ್ ಬಂದ ಮೇಲೆ ಆ ಕುಟುಂಬದ ಒಡನಾಟದ ನೆನಪೂ ಬೆಸೆದು ಶೆರೋನ್ ಬಿಟ್ಟಿದ್ದೇವೆ. ಕಾರ್ಕಳದಲ್ಲಿ ನಮಗೆ ಆಯ್ಕೆಯಿಲ್ಲದೆ ಕೆಲವು ಕಾಲ ಬಸ್ ನಿಲ್ದಾಣದ ಹೋಟೆಲಿಗೆ ಹೋಗುವುದಿತ್ತು. ಅಲ್ಲಿನ ರುಚಿ ಸಾಮಾನ್ಯ,
ಶುಚಿ ಅಷ್ಟಕ್ಕಷ್ಟೆ. ಆದರೆ ಮೂಡಬಿದ್ರೆಯಲ್ಲಿ ಹೋಟೆಲ್ ಪಡಿವಾಳ್ ಬಂದ ಮೇಲೆ ನಮಗೆ ರುಚಿಶುಚಿಗೆ
ನೆಲೆ ಸಿಕ್ಕಿದಂತಾಗಿತ್ತು. ಈಚೆ ಸುಮಾರು ಹತ್ತು ವರ್ಷಗಳಿಂದ
ಕಾರ್ಕಳದ ಅನಂತಶಯನದ ಬಳಿಯ ಹೊಸ ಹೋಟೆಲ್ ಪ್ರಕಾಶ್ ತನ್ನ ಸಾಹಿತ್ಯಕ ಕಾರ್ಯಕ್ರಮಗಳಿಗೆ ಆಶ್ರಯ ಕೊಡುವ ಕಂಪು ಸೇರಿ, ಶುಚಿ ಮತ್ತು ಜೈನರುಚಿಯೊಡನೆ ನಮ್ಮಂಥ ‘ತಿರುಗೂಳಿಗಳ
ಮನ ಗೆದ್ದಿದೆ.
ಏನೇ ಇರಲಿ, ಅಂದು ನಮ್ಮ ಬೆಳಗಿನ ಉಪಾಹಾರಕ್ಕೆ
ನಾಗರಾಜಶೆಟ್ಟಿ ಎಸ್ಟೇಟ್ ಹೋಟೆಲ್ನಲ್ಲಿ ನಿಂತೆವು.
ಅದು ಹೆದ್ದಾರಿಹೋಕರ ಅಗತ್ಯಗಳನ್ನು ಸರಿಯಾಗಿ ಗ್ರಹಿಸಿ ದಿನದಲ್ಲಿ ಹೆಚ್ಚು ಕಡಿಮೆ ಹದಿನಾರು ಗಂಟೆಯೂ ಸೇವಾತತ್ಪರವಾಗಿಯೂ ಇರುತ್ತಿತ್ತು. ಎಸ್ಟೇಟಿನ ನೇರ ಮುಂಬಯಿ ಸಂಪರ್ಕದಿಂದ
ಮುಂದುವರಿದ ದಿನಗಳಲ್ಲಿ ಹೋಟೆಲಿನ ಆಡಳಿತ ಒತ್ತಿನಲ್ಲಿ
ಭಾರೀ ಸ್ಟೇಯಿನ್ಲೆಸ್ ಸ್ಟೀಲ್ ಪಾತ್ರೆಗಳ ಮಳಿಗೆಯನ್ನೂ
ತೆರೆದಿತ್ತು. ಆ ಕಾಲಕ್ಕೆ ಮದುವೆ ಮುಂಜಿಗಳ ಜವುಳಿಗೆ ಗುರುಪುರಕ್ಕೆ ಹೋಗುತ್ತಿದ್ದ ಜಿಲ್ಲೆಯ ಜನ ಸ್ಟೀಲ್ ಸಾಮಾನುಗಳಿಗೆ ಪಡುಬಿದ್ರೆ ಇದು ಖ್ಯಾತವೂ ಆಗಿತ್ತು.
ಕಾಲಾನುಕ್ರಮದಲ್ಲಿ ಕೇಳಿಬಂದಂತೆ (ನನಗೆ ತೀರಾ ಅಪರಿಚಿತರಾದ) ನಾಗರಾಜ ಶೆಟ್ಟರ ಕೌಟುಂಬಿಕ ಕಲ್ಲೋಲಗಳಲ್ಲಿ ಎಲ್ಲ ವಹಿವಾಟೂ ಬಂದಾಗಿ ಇಂದು (೨೦೧೪) ಸಾಂಪ್ರದಾಯಿಕ ಬಾರ್ ಅಂಡ್ ರೆಸ್ಟೂರಾ ಮಟ್ಟದಲ್ಲಿ
ಮಸಕಾಗಿದೆ! ಆದರೆ ಅಂದು ನಮಗೆ ರುಚಿಕರ ಉಪಾಹಾರವನ್ನು ಅದು ಧಾರಾಳ ಕೊಟ್ಟಿತ್ತು. ತಿಂಡಿ ತಿನ್ನುವ ಬಿಡುವು,
ಬೈಕಿನಲ್ಲಿ ಗಂಟುಮೂಟೆ ಕಟ್ಟುವ ಕಲೆಯಲ್ಲಿ ಪಳಗದವರಿಗೆ
ಸಾವರಿಸಿಕೊಳ್ಳಲೂ ಅವಕಾಶ ಚೆನ್ನಾಗಿ ಒದಗಿಸಿತ್ತು.