Showing posts with label ರಾಮಚಂದ್ರ ಎಂ. Show all posts
Showing posts with label ರಾಮಚಂದ್ರ ಎಂ. Show all posts

18 December 2017

ಕಾಣಲಾಗದ ದೇವ

(ಮರಣೋತ್ತರ ನುಡಿನಮನಗಳು ೪)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
 (ಭಾಗ ೧೫)
- ಎಂ. ರಾಮಚಂದ್ರ
ಕಳೆದ ಶತಮಾನದ ಐದನೆಯ ದಶಕದ ಪೂರ್ವಾರ್ಧ. ನಾನಾಗ ಹೈಸ್ಕೂಲು ವಿದ್ಯಾರ್ಥಿ. ಒಂದು ದಿನ ನನ್ನ ಕಿರಿಯ ಸಹಪಾಠಿಯೊಬ್ಬನ ಕೈಯಲ್ಲಿ ‘ಆರಾಧನಾ’ ಎಂಬ ಪುಸ್ತಕ ನೋಡಿದೆ. ‘ಏನಿದು ಆರಾಧನೆ’ ಎಂಬ ಕುತೂಹಲದಿಂದ ಮಿತ್ರನ ಕೈಯಿಂದ ಪುಸ್ತಕ ತೆಗೆದು ಪುಟ ತೆರೆದೆ - ಅದೊಂದು ಕಥಾಸಂಗ್ರಹ; ಲೇಖಕ ಬಾಗಲೋಡಿ ದೇವರಾಯ ಎಂಬುದು ಮುಖಪುಟದಲ್ಲೇ ಮುದ್ರಿತವಾಗಿತ್ತು. ಸಂಗ್ರಹದಲ್ಲಿದ್ದ ಕತೆಗಳ ಮೇಲೆ ಕಣ್ಣಾಡಿಸಿದೆ. ಅವುಗಳ ಶೀರ್ಷಿಕೆ, ಕಥಾವಸ್ತು, ನಿರೂಪಣ ವಿಧಾನ, ಭಾಷಾ ಶೈಲಿ ಎಲ್ಲದರಲ್ಲೂ ಒಂದು ನಾವೀನ್ಯವನ್ನು ಕಂಡೆ.

ನಾನು ಹೈಸ್ಕೂಲು ದಾಟಿ, ಮಂಗಳೂರಲ್ಲಿ ಅಲೋಶಿಯಸ್ ಕಾಲೇಜನ್ನು ಸೇರಿದೆ. ಹಾಸ್ಟೆಲ್ ನಿವಾಸಿಯಾದೆ. ನನ್ನ ಸಹವಾಸಿಯೊಬ್ಬನ ಹೆಸರಿನ ಹಿಂದೆ ‘ಬಾಗಲೋಡಿ’ ಎಂಬ ಸ್ಥಳನಾಮವಿತ್ತು. ಆಸಕ್ತಿಯಿಂದ ವಿಚಾರಿಸಿದಾಗ ಆತ ಬಾಗಲೋಡಿ ದೇವರಾಯರ ಸಂಬಂಧಿಯೆಂಬುದು ತಿಳಿಯಿತಲ್ಲದೆ, ದೇವರಾಯರ ಬಗ್ಗೆ ಹೆಚ್ಚಿನ ವಿವರಗಳು ಸಿಕ್ಕಿದುವು.