02 April 2018
ವೈಲ್ಡ್ ಬೋರ್ ಕಾರಿಡಾರ್!!
06 April 2017
ಗೇರುಬೀಜದ ಅನುಬಂಧ
12 July 2011
ಪುಣ್ಯದ ಹೊಳೆಯಲ್ಲಿ ಕೊನೆಯ ಮುಳುಗು
ವೈಜ್ಞಾನಿಕ ತಳಹದಿಯ ವ್ಯಕ್ತಿತ್ವ ವಿಕಸನ ಶಿಬಿರದ ಅಂತಿಮ ಕಂತು
(ವನ್ಯಪುನರುತ್ಥಾನದಲ್ಲೊಂದು ಸಣ್ಣ ಪ್ರಯೋಗ ಭಾಗ ೫)
ಮೂರನೇ ಬೆಳಿಗ್ಗೆಯ ಉದಯರಾಗ - ಜಲಸಂರಕ್ಷಣೆ ಮತ್ತು ಮರುಪೂರಣದ ಪ್ರಾತ್ಯಕ್ಷಿಕೆ. ಇದಕ್ಕೆ ನಾಯಕತ್ವ ಎಡೆಂಬಳೆಯ ಸತ್ಯನಾರಾಯಣನದ್ದೇ. ಎಡೆಂಬಳೆ ಕೃಷಿಕ್ಷೇತ್ರ ವ್ಯಾಪ್ತಿಯಲ್ಲಿ ಐವತ್ತು ಎಕ್ರೆಗೂ ಮಿಕ್ಕ ನೆಲವಾದರೂ ಅಂದು ಸ್ಪಷ್ಟ ಕೃಷಿಗೆ ಒಡ್ಡಿಕೊಂಡ ಜಾಗ ಎರಡು ಮೂರೆಕ್ರೆ ಮಾತ್ರ. ಉಳಿದವು ಮುರಕಲ್ಲಿನ ಹಾಸು, ಮುಳಿಗುಡ್ಡೆ (ಇಂದು ರಬ್ಬರ್ ತೋಟ ಬಂದು ಇವರಿಗೆ ಆರ್ಥಿಕ ಚೈತನ್ಯ ಊಡಿದೆ). ಮನೆ ಸಮೀಪದ ಬಾವಿ, ಕೆರೆ ಒರತೆಯಿಲ್ಲದ ಕಗ್ಗಲ್ಲ ಕೋರೆಯಂತಾಗಿ ಫೆಬ್ರವರಿ ಮಾರ್ಚಿನಲ್ಲೇ ನೀರಿಗೆ ತತ್ವಾರ. ತೋಟದ ಪಾಡು ಬಿಡಿ, ಸ್ವಂತದ ಗೃಹೋಪಯೋಗಕ್ಕೂ ತೋಟದ ಇನ್ನೊಂದೇ ತುದಿಯಲ್ಲಿರುವ ದೂರದ ತೂತುಬಾವಿ ನೆಚ್ಚುವುದು ಅನಿವಾರ್ಯವಾಗಿದೆ. ತೋಟ, ಗುಡ್ಡೆ ಪೂರ್ತಿ ಓಡಾಡಿಸಿ ಮಳೆನೀರಿಗಡ್ಡಗಟ್ಟಿದ ದಿಂಡುಗಳು, ತೋಡಿದ ಇಂಗುಗುಂಡಿಗಳು ಮತ್ತವುಗಳ ಇಳಿದಿಕ್ಕಿನ ದಂಡೆಗಳ ನೆಲಹಿಡಿದಿಡುವ ಸಸ್ಯ ವೈವಿಧ್ಯ, ಅನಿವಾರ್ಯವಾಗಿ ಒದಗಿದ ಮಾಜೀ ಕಲ್ಪಣೆಗಳು ಮತ್ತವಕ್ಕೆ ಪದವಿನ ಹರಿನೀರನ್ನು ಒಡ್ಡಿಸಿಕೊಡುವ ಚರಂಡಿಗಳು, ಗುಡ್ಡೆಯಲ್ಲಿ ನೆಟ್ಟ ಸಸಿಗಳಿಗೆ ಬೇಸಗೆಯಲ್ಲಿ ಸೀಮಿತ ನೀರೂಡುವ ವ್ಯವಸ್ಥೆಗಳು, ಗೃಹ ಬಳಕೆಯ ಕ್ರಮಗಳೊಂದೊಂದೇ ಅನಾವರಣಗೊಂಡಾಗ ನಗರದಲ್ಲಿ ನಲ್ಲಿಯ ಕೊನೆಯನ್ನಷ್ಟೇ ನೋಡುವ ಮಂದಿಗೆ ಹೊಸಬೆಳಗು ಮೂಡಿದ್ದರೆ ಆಶ್ಚರ್ಯವಿಲ್ಲ.
04 July 2011
ಪವಾಡ ಸುಳ್ಳು, ಇರುವುದೆಲ್ಲ ಯಕ್ಷಿಣಿ!
28 June 2011
ಏಳಿ ಎದ್ದೇಳಿ
“ಸ್ವಾಮೀ ತುಂಬಾ ಒಳ್ಳೆ ಕೆಲಸ ಮಾಡಿದಿರಿ. ಇನ್ನು ನಮ್ಮಲ್ಲಿ ಅರ್ಜಂಟಿಗೆ ಕಾಡು ನೋಡಬೇಕೆಂಬವರನ್ನು ನಿಮ್ಮ ಅಭಯಾರಣ್ಯಕ್ಕೆ ತರಬಹುದಲ್ಲಾ” ಟೂರ್ ಕಂಡಕ್ಟರ್ ಒಬ್ಬರ ಪ್ರಾಮಾಣಿಕ ಮಾತು. “ಅಶೋಕಣ್ಣಾ ಇನ್ನು ನಮ್ಮ ಧ್ಯಾನ ಬಳಗದ ಸತ್ಸಂಗಗಳು ನಿಮ್ಮ ಔಷಧೀಯ ತರುಲತೆಗಳ ನೆರಳಲ್ಲಿ” ಎಂದರೊಬ್ಬರು ಅಧ್ಯಾತ್ಮ ಜೀವಿ. “ಹೌದಯ್ಯಾ ಅಲ್ಲೇನೇನು ಪ್ರಾಣಿ ಬಿಟ್ಟಿದ್ದೀರಿ?” ಜನ್ಮದಲ್ಲೊಮ್ಮೆ ಯಾವುದೋ ವನಧಾಮಕ್ಕೆ ಕಾರಿನಲ್ಲಿ ಹೋಗಿ ಬಂದವರ ಪ್ರಶ್ನೆ. “ನಿನ್ನ ಜಮೀನಿನಲ್ಲಿ ಈ ವರ್ಷ ಅಡಿಕೆ ಎಷ್ಟಾದೀತು” ಸಮೀಪದ ಕೃಷಿಕ ಬಂಧು ಒಬ್ಬರ ಕುಹಕವಿಲ್ಲದ ಕುತೂಹಲ. “ಸ್ವಲ್ಪ ನಿಮ್ಮ ಅಭಯಾರಣ್ಯದ ದಾರಿ ಹೇಳಿ. ವಾರಾಂತ್ಯದಲ್ಲೊಮ್ಮೆ ನಮ್ಮ ಶಾಲಾ ಮಕ್ಕಳನ್ನು ಪಿಕ್ನಿಕ್ ಮಾಡಿಸ್ತೇನೆ” ಮುಖ್ಯೋಪಾಧ್ಯಾಯ ಉವಾಚ. (ನಮ್ಮಗ) ಅಭಯ ಅವನ ಆರೇಳು ಸಹಪಾಠಿಗಳನ್ನು ಹೀಗೇ ಒಮ್ಮೆ ಅಭಯಾರಣ್ಯಕ್ಕೆ ಒಯ್ದಿದ್ದ. ಮೃಗಜಲದ (ಗೊತ್ತಲ್ಲಾ, ಇದು ನಮ್ಮ ಬಾವಿಯ ಹೆಸರು!) ಕಟ್ಟೆಯಿಂದ ಇಣುಕಿ, ನಲ್ವತ್ತಡಿ ಆಳದ ನೀರು ಮೇಲೆ ತರುವ ಬಗ್ಗೆ ಒಬ್ಬ ನಾಗರಿಕಳಿಗೆ ಗಂಭೀರ ಸಮಸ್ಯೆ ಎದುರಾಯ್ತು. ಅಭಯ ರಾಟೆ, ಹಗ್ಗ ತೋರಿಸಿ “ವ್ಯಕ್ತಿಯೊಬ್ಬರ ಸೊಂಟಕ್ಕೆ ಹಗ್ಗ ಬಿಗಿದು ಇಳಿಸ್ತೇವೆ. ಅವರು ಜೊತೆಗೊಯ್ದ ಕ್ಯಾನಿನಲ್ಲಿ ನೀರು ತುಂಬಿಕೊಂಡ ಮೇಲೆ ಎಳೀತೇವೆ” ಎಂದ. ಮುಗ್ದೆ ಥಟ್ಟಂಥ “I will go this time” ಎಂದದ್ದೇ ಹಗ್ಗ ಬಿಗಿಸಿಕೊಳ್ಳಲು ಗಂಭೀರವಾಗಿ ತಯಾರಾಗಿಬಿಟ್ಟಳಲ್ಲಾ! ಒಮ್ಮೆ ಮಂಗಳೂರಿನಿಂದ ಸುಮಾರು ಮೂವತ್ತು ಕಿಮೀ ದೂರದ ನಂದಿಕೂರಿನಲ್ಲಿದ್ದ ಬಂಡೆಗಳಲ್ಲಿ ಶಿಲಾರೋಹಣಕ್ಕೆ ಆಸಕ್ತರ ಹಿಂಡನ್ನು (ಅವರವರ ದ್ವಿಚಕ್ರ ವಾಹನಗಳಲ್ಲಿ) ಕರೆದೊಯ್ದಿದ್ದೆ. ಜೊತೆಗೊಟ್ಟಿದ್ದ ತರುಣ ಡಾಕ್ಟರ್ ಒಬ್ಬರು “ಫ಼ಸ್ಟ್ ಟೈಮ್ ನಾನಿಷ್ಟು ಲಾಂಗ್ ಸ್ಕೂಟರ್ ಓಡಿಸಿದ್ದು” ಎಂದು ಸಂತೋಷದಲ್ಲಿ ಬೀಗಿದ್ದರು. ಹೀಗೆ ಪಟ್ಟಿಬೆಳೆಸಿ ನಿಮಗೆ ಪುಡಾರಿ ಭಾಷಣ ನೆನಪಾಗುವ ಮೊದಲು ಸ್ಪಷ್ಟಪಡಿಸುತ್ತೇನೆ. ನಾಗರಿಕತೆ ನಮ್ಮಲ್ಲೆಷ್ಟು ಪಾರಿಸರಿಕ, ಪ್ರಾಕೃತಿಕ ಬಿಡಿ, ಸಾಮಾನ್ಯಜ್ಞಾನದ್ದೂ ಅರಿವಿನ ಕೊರತೆಯನ್ನು ಉಂಟುಮಾಡಿದೆ ಎಂದು ಕಾಣುತ್ತಲೇ ಇತ್ತು. ಅದನ್ನು ಸ್ವಲ್ಪಾದರೂ ತುಂಬಿಕೊಡುವಂತೆ, ಮನುಷ್ಯ ಪ್ರಯತ್ನಕ್ಕೆಷ್ಟು ಸಾಧ್ಯತೆಗಳಿವೆ ಎನ್ನುವುದನ್ನು ಆಯ್ದ ಕೆಲವು ತರುಣರಿಗಾದರೂ ನಮ್ಮ ಮಿತಿಯಲ್ಲಿ ಮಾಡಿಕೊಡಬೇಕೆಂದು ಒಮ್ಮೆ ನಮಗೆ (ದೇವಕಿ, ಅಭಯ ಸೇರಿ) ಅನ್ನಿಸಿತು. (ಪ್ರಕೃತಿ ಪ್ರತಿಯೊಬ್ಬರಲ್ಲಡಗಿಸಿದ ಹನುಮಂತತ್ವಕ್ಕೊಂದು ಜಾಂಬವ ಸನ್ನೆಗೋಲಿಕ್ಕುವ ಪ್ರಯತ್ನ!)23 May 2011
ಮಂಜು ನೆನಪುಗಳು
“ಮಂಜೂ, ಗುಂಡುಕಟ್ಟೆ ಬಂತು” ಕಂಡಕ್ಟರ್ ಬಿಗಿಲು ಹೊಡೆದು ಹೇಳಿದ. ಒಂದು ಹೋಟ್ಲು, ಕಾಲುಕಟ್ಟಿದ ಒಂಜಿ ಕಟ್ಟದ ಕೋರಿ, ಒಕ ಡಾಕ್ಟ್ರು, ಗೋಳಿಮರದ ಮರೆಯಲ್ಲಿ ಕಸಾಯಿ ಅಡ್ಡೆ-ಮೀನ ಕಟ್ಟೆ, ತಟ್ಟಿ ಜೋಪಡಿಯಂತೆ ಗಡಂಗು, ನಾಲ್ಕು ಗುಟ್ಕಾಮಾಲಾಲಂಕೃತ ಸರ್ವಸರಕಿನ ಅಂಗಡಿ, ಎಂಟು ಮನೆ ಮತ್ತೆ ಬೀಡಾಡಿ ಜನ, ಜಾನುವಾರು, ನಾಯಿ. ಅತ್ತ ಎರಡು ಮಿನಾರು, ಇತ್ತ ಸ್ವಲ್ಪ ತಗ್ಗಿನಲ್ಲಿ ಪರ್ಯಾಯವಾಗಿ ಹಸಿರು, ಕೇಸರಿ ಪತಾಕೆ ಶೋಭಿಸುವ ಸಣ್ಣ ಮೈದಾನ ಹೀಗೆ ಮೋಂಟುಗೋಳಿ ಪೇಟೆ ಮುಗೀತು ಎನ್ನುವಲ್ಲಿ ಇಳಿದದ್ದಾಯ್ತು. ಬೋಳೋಬೋಳು ಪದವು, ರಣಗುಡುವ ಬಿಸಿಲಿನಲ್ಲಿ, ನಾಲ್ಕು ಮುಳ್ಳು ಪೊದರು, ಸುಟ್ಟುಳಿದ ಮುಳಿಕರಿ ಬಿಟ್ಟರೆ ಎಲ್ಲವೂ ಬೆಂಗಾಡಿನದೇ ರೂಪ! ತುಸುವೇ ತಗ್ಗುದಿಣ್ಣೆಗಳ ಮುರಕಲ್ಲ ಹರಹು - ಸುಟ್ಟು ರಸಸೋತ ಜೇನ ಎರಿಯದ್ದೇ ರೂಪ. ಮತ್ತೆ ಎಲ್ಲಿ ನೋಡಿದರೂ ಅಳತೆಗೆ ಕಡಿದಿಟ್ಟ ಕಲ್ಲ ಒಟ್ಟಣೆ, ನಕ್ಕರಿಕಲ್ಲಿನ ರಾಶಿ, ಹರಕು ಡಾಮರಿನಂಚಿನಲ್ಲಿ ಹುಗಿಯುವ ಚರಳು, ಪದವಿನ ಸುಳಿಗಾಳಿಗೇಳುವ ದೂಳು ಎಲ್ಲಾ ಮುರಮಯ! ಕೈಯಲ್ಲಿ ಹಿಡಿದ ಹದಿನಾರು ಪುಟದ ಕರೆಯೋಲೆಯೇನೋ ‘ಬನ್ನಿ ಅಭಯಾರಣ್ಯಕೆ’ ಎಂದರೂ ನಕ್ಷೆ ಸರಿಯಿದ್ದೀಯಾ ಎಂದರೂ ಪುಷ್ಟಿಕೊಡುವಂತೆ ಹಸಿರು, ತಣ್ಪು ಕಾಣುತ್ತಿರಲಿಲ್ಲ. ಕತ್ತು ಹೊರಹೊರಳಿಸುವಾಗ ನಾಲ್ಕು ಹೆಜ್ಜೆ ಹಿಂದೆ, ದಾರಿ ಬದಿಯಲ್ಲೊಂದು ಬ್ಯಾನರು. ಅರ್ಧಂಬರ್ಧ ಕಟ್ಟಿಬಿಟ್ಟ ಕಟ್ಟಡ ಒಂದರ ತುಕ್ಕಿನ ಸರಳಿಗೂ ಗಲಗಲ ಎನ್ನುವ ಅಕೇಸಿಯಾ ಮರದ ರೆಂಬೆಗೂ ಮೈತ್ರಿ ಮಾಡಿ ಕಟ್ಟಿಕೊಂಡಿತ್ತು ‘ಅಭಯಾರಣ್ಯಕ್ಕೆ ದಾರಿ.’
15 May 2011
ವನ್ಯಪುನರುತ್ಥಾನದಲ್ಲೊಂದು ಸಣ್ಣ ಪ್ರಯೋಗ
25 December 2009
ತೆರೆಮರೆಯ ಕುಣಿತ
07 December 2009
ಎಣ್ಣೆ ಬೇಕು ದೀವಟಿಗೆಗೆ!
ಐದು ತಿಂಗಳ ದೂರದಲ್ಲಿ ಕೇಳಿತೀ ಮೊದಲ ಅಟ್ಟಹಾಸ. ಡಾ| ಮನೋಹರ ಉಪಾಧ್ಯ, ಎರಡು ಯಕ್ಷಪ್ರಸಂಗಗಳ ದೀವಟಿಗೆ ಆಟ ದಾಖಲೀಕರಣದ ಯೋಜನೆಗೆ ಬಣ್ಣ ಬಳಿದು, ವೇಷ ತೊಟ್ಟು, ಗೆಜ್ಜೆ ಕಟ್ಟಿಯಾಗಿತ್ತು! ಈ (ಕೆಲಸದಲ್ಲಿ) ರಾಕ್ಷಸನಿಗೆ ಚಂಡೆ ಮದ್ದಳೆಗಳ ಹಿಮ್ಮೇಳವಷ್ಟೇ ನನ್ನದು. ನನ್ನ ಮಗ (ಸಿನಿ-ನಿರ್ದೇಶಕ) ಅಭಯಸಿಂಹನ ಪೂರ್ಣ ತಾಂತ್ರಿಕ ಜವಾಬ್ದಾರಿಯಲ್ಲಿ ದಾಖಲೀಕರಣದ ವೆಚ್ಚಗಳ ಅಂದಾಜುಪಟ್ಟಿ ಮಾಡಿಸಿದೆವು. ತಂಡ ಮತ್ತು ಪ್ರಸಂಗಗಳ ಆಯ್ಕೆಯಲ್ಲಿ ಬಡಗು ತಿಟ್ಟಿಗೆ ಅದ್ವಿತೀಯ ಗುರು ಬನ್ನಂಜೆ ಸಂಜೀವ ಸುವರ್ಣರ ನೇತೃತ್ವದ ಉಡುಪಿ ಯಕ್ಷಗಾನ ಕೇಂದ್ರ. ಕೆಲಕಾಲದಿಂದ ಯಕ್ಷಗಾನಕ್ಕೆ ಸಾಂಪ್ರದಾಯಿಕ ಚಂದ ಮರುಕಳಿಸಲು ಕ್ರಿಯಾತ್ಮಕವಾಗಿ ಹೆಣಗುತ್ತಿರುವ ಪೃಥ್ವೀ ರಾಜ್ ಕವತ್ತಾರ್ಗೆ ತೆಂಕು ತಿಟ್ಟಿನ ತಂಡವೊಂದರ ಸಂಯೋಜನೆ ಮತ್ತು ನಿರ್ದೇಶನವನ್ನೂ ವಹಿಸಿಕೊಟ್ಟೆವು. ಮಳೆ ಪೂರ್ಣ ನಿಂತ ಮೇಲಿನ ಒಂದು ದಿನವನ್ನು ಪ್ರದರ್ಶನಕ್ಕೆ ನಿಶ್ಚಯಿಸಿಕೊಂಡದ್ದೂ ಆಯ್ತು.19 November 2009
ದೀವಟಿಗೆ ಕಥಾನಕವನ್ನು ಬಣ್ಣಿಪೆನು ಪೊಡಮಡುತ

ಕೇಳಿ ಹೊಡೆದ್ರೀ, ಸಭಾಕ್ಲಾಸ್ ಕೊಟ್ರೀ, ನಿಜದ ದೀವಟಿಗೆ ಆಟ ಎಲ್ರೀ ಎನ್ನಬೇಡಿ. ಹಾಡು, ಭಾಷಣಗಳನ್ನಾದರೋ ನನ್ನ ಮಿತಿಯ ಲಿಖಿತ ಸಾಹಿತ್ಯದಲ್ಲಿ ಹಿಂದಿನೆರಡು ಕಥಾನಕಗಳಲ್ಲಿ ‘ಸುಧಾರಿಸಿದ್ದು’ ನಿಜ. ಅಂದ ಮಾತ್ರಕ್ಕೆ ಬಹುಮುಖೀ ಯಕ್ಷಗಾನ ಬಯಲಾಟಕ್ಕೆ ನಾನು ನೇರ ನುಗ್ಗುವುದು ಸರಿಯಾಗದು. ಹಾಗಾಗಿ ಅಂದಿನ ಪ್ರದರ್ಶನದ ಕುರಿತು ಸುಧಾ ವಾರಪತ್ರಿಕೆಯಲ್ಲಿ ನನ್ನ ಹೆಸರಿನಲ್ಲಿ ಪ್ರಕಟವಾದ (ಲಿಪಿಕಾರ ನಾ, ಕವಿ ನಂಬಿಯಾರ್) ಲೇಖನದ ಸಂಕ್ಷಿಪ್ತ ರೂಪವನ್ನು ಮೊದಲು ನಕಲಿಸುತ್ತೇನೆ.