(ಪರ್ವತಾರೋಹಣ
ಸಪ್ತಾಹದ ನಾಲ್ಕನೇ ಭಾಗ)

ಪುತ್ತೂರು ನನ್ನ ಅಜ್ಜನ ಊರು. ಅಲ್ಲಿನ
ವಿವೇಕಾನಂದ ಕಾಲೇಜು, ಅದರಲ್ಲೂ ಪ್ರಾಂಶುಪಾಲರಾದ ಪ್ರೊ| ಎಂ. ಸೂರ್ಯನಾರಾಯಣಪ್ಪನವರು ನನಗೆ ಆತ್ಮೀಯರು.
ಅಜ್ಜನ ಮನೆಯಲ್ಲಿದ್ದುಕೊಂಡು, ಮಂಗಳೂರಿನಲ್ಲಿ ಅಂಗಡಿ ತೆರೆಯುವ ಸಿದ್ಧತೆಯಲ್ಲಿದ್ದ ಕಾಲದಲ್ಲಿ ನಾನು
ಬಂಡ್ವಾಳವಿಲ್ಲದ ಸರದಾರ. ಆದರೆ ಅಂದು ವಿವೇಕಾನಂದ ಕಾಲೇಜು ತನ್ನ ಬೇಡಿಕೆಯ ಪೂರ್ಣ ಮೊತ್ತ ನನಗೆ ಮುಂದಾಗಿ
ಕೊಟ್ಟು, ಪುಸ್ತಕ ಖರೀದಿಸಿ ಪ್ರೋತ್ಸಾಹಿಸಿದ ಕ್ರಮ ಅನನ್ಯ. ಸಹಜವಾಗಿ ಅಲ್ಲಿ ನಮ್ಮ ಪರ್ವತಾರೋಹಣ ಸಪ್ತಾಹದ
ನಾಲ್ಕನೇ ದಿನ ಎಂದರೆ ನನಗೆ ಹೆಚ್ಚಿನ ಉಮೇದು. ಸಾಲದ್ದಕ್ಕೆ ಇಡಿಯ ಕಾಲೇಜು ಮಾತ್ರವಲ್ಲ, ನನ್ನ ಬಹುತೇಕ
ಬಂಧುವರ್ಗವೂ ಪ್ರೇಕ್ಷಾಗಡಣದಲ್ಲಿ ಹಾಜರಿದ್ದು ಮಹಾಲಿಂಗೇಶ್ವರನ ಜಾತ್ರೆಯನ್ನೇ ಸೋಲಿಸ ಹೊರಟ ಸನ್ನಿವೇಶ
ಅಸಾಮಾನ್ಯವೇ ಇತ್ತು. ಮೈಸೂರಿನ ಪರ್ವತಾರೋಹಣ ದಿನಗಳಲ್ಲಿ ನನ್ನನ್ನು ನೆರಳಿನಂತೇ ಹಿಂಬಾಲಿಸಿದ್ದ ತಮ್ಮ
– ಆನಂದವರ್ಧನ, ಪುತ್ತೂರಿನಲ್ಲಿ ನನ್ನನ್ನು ಸೇರಿಕೊಂಡಿದ್ದ. ಶಿಲಾವರೋಹಣದಲ್ಲಿ ಆತ ಕೆಲವು ಹೊಸ ಪ್ರದರ್ಶನ
ತಂತ್ರಗಳಲ್ಲೂ ಪರಿಣತನಿದ್ದ. ಹಾಗಾಗಿ ಕಳೆದ ಮೂರು ದಿನಗಳಲ್ಲಿ ಪ್ರದರ್ಶನದ ನೇರ ನಿರ್ವಹಣೆಯಲ್ಲಿ ನಾನು
ಕಾಣದಿದ್ದ ಬಿಡುವು ಇಲ್ಲಿ ಸಿಕ್ಕಿತು. ನಾವು ಕಾಲೇಜಿನ ಎತ್ತರದ ತಾರಸಿಗೆ ಮೊದಲೇ ಏರಿ, ನಮ್ಮ ಇಳಿಯುವ
ಹಗ್ಗವನ್ನು ಎರಡೆಳೆಯಲ್ಲಿ ಭದ್ರ ಆಧಾರಗಳಿಗೆ ಯುಕ್ತ ಗಂಟುಗಳಿಂದ ಕಟ್ಟಿ, ಕೊಳ್ಳದಾಳಕ್ಕೆ ಬಿಟ್ಟು
ಸಿದ್ಧರಾಗಿದ್ದೆವು. ಹಾಗಾಗಿ ಕಲಾಪದುದ್ದಕ್ಕೆ ನಾನು ಮೈಕ್ ಹಿಡಿದು ಕೊಡುತ್ತಿದ್ದ ವೀಕ್ಷಕ ವಿವರಣೆ
ಹೆಚ್ಚು ಜನ ರಂಜಿಸಿತು. ಅದರಲ್ಲಿ ನಾನು ಕಲಾಪದ ವಿವರಣೆಯೊಡನೆ ಸದಸ್ಯನ ಆತ್ಮೀಯ ಪರಿಚಯ, ಪ್ರಾಕೃತಿಕ
ಪರಿಸರದ ಸಣ್ಣಪುಟ್ಟ ರಂಜನೀಯ ನೆನಪುಗಳು, ಹಾಸ್ಯ, ಪ್ರಶ್ನೋತ್ತರಗಳನ್ನೆಲ್ಲ ಬೆಳೆಸಿ ಆಕರ್ಷಕ ಮಾಡಿದ್ದು
ಮುಂದಿನ ದಿನಗಳಿಗೆ ಉತ್ತಮಿಸಲೊಂದು ಮಾದರಿಯಾಗಿಯೇ ನಡೆಯಿತು.