Showing posts with label ಪುಸ್ತಕೋದ್ಯಮ. Show all posts
Showing posts with label ಪುಸ್ತಕೋದ್ಯಮ. Show all posts

05 September 2017

ನಾಟ್ಯಾಚಾರ್ಯ ಮುರಲೀಧರ ರಾವ್ ಸ್ಮರಣೆ


[ಖ್ಯಾತ ನಾಟ್ಯಗುರು ಕೆ. ಮುರಲೀಧರ ರಾವ್ ಈಚೆಗೆ (ಮೇ ೧, ೨೦೧೭) ನಿಧನರಾದರು. ಮುರಲೀಧರರಾಯರು ನಾಟ್ಯಕೆ ಗುರುವೆನಲು ಬರೆದ ಮತ್ತು ರೂಪಿಸಿದ (ರೇಖಾಚಿತ್ರ ಹಾಗೂ ಛಾಯಾಚಿತ್ರಗಳೂ ಅವರವೇ) ‘ನೃತ್ಯಲೋಕ’ದ ಪ್ರಕಾಶಕ ನಾನು. ಅವರ ಗಣ್ಯ ಶಿಷ್ಯವರ್ಗದಲ್ಲಿ ಹೆಸರಾಂತ ಶ್ರೀವಿದ್ಯಾಮುರಲೀಧರ್ ಈಚೆಗೆ (೨-೯-೨೦೧೭) ಮಂಗಳೂರ ಪುರಭವನದಲ್ಲಿ ‘ಗುರುಸ್ಮರಣೆ’ಯನ್ನು ತುಂಬ ಅರ್ಥಪೂರ್ಣವಾಗಿ ನಡೆಸಿದರು. ಆ ಕಲಾಪದ ದೊಡ್ಡ ಹಾಸಿನಲ್ಲಿ ಅಯಾಚಿತವಾಗಿ ನನಗೂ ಒಂದು ಸಣ್ಣ ಅಭಿಪ್ರಾಯ ಮಂಡನೆಗೆ ಅವಕಾಶ ಒದಗಿದ ಬಲದಲ್ಲಿ, ಇಲ್ಲಿ ಮುರಳೀಧರರಾಯರ ಸ್ಮರಣೆಗೊಂದು ದಾಖಲೀಕರಣದ ನೆಲೆ ಕೊಡಲು ಪ್ರಯತ್ನಿಸಿದ್ದೇನೆ.]

ದ್ರೋಣರ ಪಾದಕ್ಕೆ ಬಾಣ ಹೊಡೆದಂತೆ....

ಹದಿನೈದು ದಿನಗಳ ಹಿಂದೆ ಶ್ರೀವಿದ್ಯಾ ಮುರಲೀಧರ್ ನನಗೆ ದೂರವಾಣಿಸಿ "ಗುರುಸ್ಮರಣೆ ಮಾಡ್ತಾ ಇದ್ದೇವೆ, ನೀವೂ ಭಾಗವಹಿಸಬೇಕು" ಎಂದು ಕರೆದರು. ಆಗ ನನ್ನ ಮನಸ್ಸು ೧೯೯೮ರ ಮೇ ೨೮ರಷ್ಟು ಹಿಂದಕ್ಕೆ ಜಾರಿತು. ಅಂದು ನನಗೆ ಅಷ್ಟೇನೂ ಪರಿಚಯವಿಲ್ಲದ ನಾಟ್ಯಾಚಾರ್ಯ ಕಾಸರಗೋಡು (ಕೆ.) ಮುರಲೀಧರರಾವ್ ಎನ್ನುವವರು, ಮೈಸೂರಿನಲ್ಲಿದ್ದುಕೊಂಡು ಬರೆದ, ಮಂಗಳೂರಿನ ನನ್ನ ಬಡ-ಪ್ರಕಾಶನ ವ್ಯವಸ್ಥೆ - ಅತ್ರಿಗೆ, ಬೃಹತ್ ಗ್ರಂಥವೇ ಆದ ನೃತ್ಯಲೋಕದ ಲೋಕಾರ್ಪಣೆ. ಆಗ "ಈಕೆ ಮಡಿಕೇರಿಯ ಕಾಲೇಜ್
ಹುಡುಗಿ, ಮುರಳೀಧರರಾಯರ ಶಿಷ್ಯೆ, ಪುಸ್ತಕದಲ್ಲಿ ಪ್ರಕಟವಾದ ಚಿತ್ರಗಳ ರೂಪದರ್ಶಿ" ಎಂದು ನನ್ನ ತಂದೆ (ಜಿಟಿನಾ) ಪರಿಚಯಿಸಿದ್ದು ಶ್ರೀವಿದ್ಯಾರಾಮನ್ನರನ್ನು (ಹೆಸರಿನ ಉತ್ತರಾರ್ಧ ಆಕೆಯ ತಂದೆಯದ್ದು). ಅಂದು ಸಭಾಕಲಾಪದ ಬೆನ್ನಿಗೆ ಗುರುವಿನ ಪ್ರತಿಭಾ ಅಭಿವ್ಯಕ್ತಿಯಾಗಿ ರಂಗದಲ್ಲಿ ನೃತ್ಯ ಕಲಾಪದೊಂದಿಗೆ ಮೆರೆದವರೂ ಈಕೆಯೇ. ಅನಂತರದ ದಿನಗಳಲ್ಲಿ ಶ್ರೀವಿದ್ಯಾ ಮಂಗಳೂರು ವಿವಿನಿಲಯದ ಸ್ನಾತಕೋತ್ತರ ವಿದ್ಯಾರ್ಥಿನಿ, ಸಂಶೋಧನಪಟು, ಎಲ್ಲೋ ಅಧ್ಯಾಪಿಕೆ ಎಂದೆಲ್ಲಾ ಕಾಣುತ್ತಿದ್ದಂತೆ ಗೃಹಿಣಿಯಾಗಿ ಶ್ರೀವಿದ್ಯಾಮುರಲೀಧರ್ (ಈಗ ಹೆಸರಿನ ಉತ್ತರಾರ್ಧ ಆಕೆಯ ಪತಿಯದ್ದು) ಅನ್ನಿಸಿಕೊಂಡದ್ದೂ ಆಯ್ತು. ಮತ್ತೆ ಪತಿಯನ್ನನುಸರಿಸಿ ವಿದೇಶದಲ್ಲಿ ಕೆಲಕಾಲ ಇದ್ದದ್ದು, ಮರಳಿ ಮಂಗಳೂರನ್ನೇ ಕಾರ್ಯಕ್ಷೇತ್ರವಾಗಿ ಆರಿಸಿಕೊಂಡದ್ದೂ ಆಯ್ತು.

01 November 2016

ಕನ್ನಡ ಪ್ರಶಸ್ತಿ - ಸಂಭ್ರಮ, ಸಂಕಟ


ಕನ್ನಡ ರಾಜ್ಯೋತ್ಸವದ ನೆಪದಲ್ಲಿ ವಾರ್ಷಿಕ ವಿಧಿಯಾಗಿ ನಿನ್ನೆ `ವಿಜೇತ’ರ ಪಟ್ಟಿ ಘೋಷಣೆಯಾಗಿದೆ. ಇದರಲ್ಲಿ ಸಕಾರಣ ವೈಯಕ್ತಿಕವಾಗಿ ನಾನು ಸಂಭ್ರಮಪಡಬಹುದಾದ ಕೆಲವು ಹೆಸರುಗಳಿವೆ. ಅದನ್ನು ಮೊದಲು ಹಂಚಿಕೊಳ್ಳುತ್ತೇನೆ.

ಜೆ. ಆರ್ ಲಕ್ಷ್ಮಣರಾವ್ – ೯೫ರ ಹರಯದ ಹಿರಿಯ ಸಾಹಿತಿ. ಕೇವಲ ಭಾಷಾ ಪ್ರಾವೀಣ್ಯದವರ ಸಂಚಿನಲ್ಲಿ, ವಾಸ್ತವದಲ್ಲಿ ಅವಮಾನಕಾರಿಯಾಗಿ `ವಿಜ್ಞಾನ ಸಾಹಿತಿ’ ಎಂದೇ ವರ್ಗೀಕರಿಸಿ, ಇಷ್ಟು ಕಾಲ ಪ್ರಶಸ್ತಿ ದೂರರಾಗಿದ್ದವರು. ಗಣಿತಾಧ್ಯಾಪಕನಾಗಿದ್ದುಕೊಂಡು, ಸುಧಾ ವಾರಪತ್ರಿಕೆಯ `ನಕ್ಷತ್ರ ವೀಕ್ಷಣೆ’ ಅಂಕಣದಿಂದಷ್ಟೇ ಕನ್ನಡ ಸೆಜ್ಜದಲ್ಲಿ ಕಿರು ಹಣತೆಯಾಗಿದ್ದ ನನ್ನ ತಂದೆ – ಜಿ.ಟಿ. ನಾರಾಯಣರಾವ್, ಕನ್ನಡ ವಿಶ್ವಕೋಶವೆಂಬ ಹೆದ್ದೀಪದಲ್ಲಿ ಒಂದಾಗಲು ನಿಮಿತ್ತರಾದವರಲ್ಲಿ ಜೆ.ಆರ್. ಲಕ್ಷ್ಮಣರಾಯರು ಮುಖ್ಯರು. (ಕನ್ನಡದ ಕರೆ ಅಧ್ಯಾಯ ನೋಡಿ. )

29 July 2016

ಜಿಟಿನಾರಾಯಣ ರಾವ್ ಹಿನ್ನುಡಿ

ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ  ಹತ್ತೊಂಬತ್ತನೇ ಅಧ್ಯಾಯ
[ಅತ್ರಿ ಬುಕ್ ಸೆಂಟರಿನ ಪ್ರಕಾಶನ ವಿಭಾಗದೆಲ್ಲ ಪ್ರಕಟಣೆಗಳಿಗೂ ಅಘೋಷಿತ ಸಂಪಾದಕರೇ ಆಗಿದ್ದ ನನ್ನ ತಂದೆ ಜಿ.ಟಿ. ನಾರಾಯಣರಾವ್ ಪುಸ್ತಕ ಮಾರಾಟ ಹೋರಾಟಕ್ಕೆ ಬರೆದ ಸಂಪಾದಕೀಯ. ]


ಪ್ರಸ್ತುತ ಪುಸ್ತಕಕರ್ತೃವಿನ ತಂದೆಯಾಗಿ ಮತ್ತು ತನ್ನ ವೃತ್ತಿ ಜೀವನದ ದಿನಗಳಂದು ಒಬ್ಬ ಗೌರವ-ಪುಸ್ತಕ ವ್ಯಾಪಾರಿಯಾಗಿ ನಾನು ಈ ನಾಲ್ಕು ಸೂತ್ರವಾಕ್ಯಗಳನ್ನು ಪೋಣಿಸುವುದು ಉಚಿತ ಮತ್ತು ಅಪೇಕ್ಷಣೀಯ ಎಂದು ಭಾವಿಸಿದ್ದೇನೆ.

`ಸವಾಲನ್ನು ಎದುರಿಸುವ ಛಲ’ ಎಂಬ ನನ್ನ ಪುಸ್ತಕದಲ್ಲಿ [೧೯೯೩ರ ಅತ್ರಿ ಬುಕ್ ಸೆಂಟರಿನ ಪ್ರಕಟಣೆ. ಸದ್ಯ ಅಭಿನವ ಪ್ರಕಾಶನ, ಬೆಂಗಳೂರು ಮರುಮುದ್ರಣ ತಂದಿದೆ] ಪ್ರಕಟವಾಗಿರುವ ಒಂದು ಶೀರ್ಷಿಕೆ: ಸಹಕಾರದಲ್ಲಿ ಒಂದು ಪ್ರಯೋಗ – ಮೌಲ್ಯ – ವಾಸ್ತವತೆ ಸಂಘಟ್ಟನೆ. ಈ ಲೇಖನ ಬರೆದ ವರ್ಷವೇ - ೧೯೭೫, ನಮ್ಮ ಮಗನ `ಅತ್ರಿ ಬುಕ್ ಸೆಂಟರ್’ ಪುಸ್ತಕ ಮಳಿಗೆ ಪ್ರಾರಂಭವಾದದ್ದು ಕೇವಲ ಆಕಸ್ಮಿಕ. ಆ ಲೇಖನದ ಸಮಾರೋಪ:

22 July 2016

ಪುಸ್ತಕೋದ್ಯಮದ ಸಾಮಯಿಕ ಟಿಪ್ಪಣಿಗಳು


ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ  ಹದಿನೆಂಟನೇ ಅಧ್ಯಾಯ
[ಮೂಲದಲ್ಲಿ ರಸಪ್ರಸಂಗಗಳಿಗೆ ಜತೆಗೊಟ್ಟ, ಪುಸ್ತಕ ಮಾರಾಟದ್ದೇ ಇನ್ನಷ್ಟು ಬಿಡಿ ಪ್ರಸಂಗಗಳು]


ಸ್ಥಾನಮಹತ್ತ್ವ
ಭಾರತದ ಬಹಳ ದೊಡ್ಡ ಪ್ರಕಾಶಕ ಮತ್ತು ವಿತರಣ ಸಂಸ್ಥೆ - ಯು.ಬಿ.ಎಸ್. ಪಬ್ಲಿಷರ್ಸ್ ಅಂಡ್ ಡಿಸ್ಟ್ರಿಬ್ಯೂಟರ್ಸ್, ವಾರ್ಷಿಕ ವಿಧಿಯಂತೆ ೧೯೯೫ರಲ್ಲಿ ಮಂಗಳೂರಿನಲ್ಲಿ ಎರಡನೇ ಸಲ ಪುಸ್ತಕ ಪ್ರದರ್ಶನ ಮತ್ತು ರಿಯಾಯಿತಿ ಮಾರಾಟವನ್ನು ವ್ಯವಸ್ಥೆ ಮಾಡಿದ್ದರು. ಇದು ವಿತರಕ ಮತ್ತು ಬಿಡಿ ಮಾರಾಟಗಾರನ ನಡುವಣ ಗೌರವವನ್ನು ಉಲ್ಲಂಘಿಸಿದಂತೆ ಎಂದು ನನಗನ್ನಿಸಿದ್ದಕ್ಕೆ ನಾನು ಬರೆದ ಪ್ರತಿಭಟನಾ ಪತ್ರದ ಕನ್ನಡ ರೂಪ:

ಇದೀಗ ಸಾರ್ವಜನಿಕರಿಗೆ ರಿಯಾಯಿತಿ ಮಾರಾಟ ಮೇಳವನ್ನು ನೀವು ಎರಡನೇ ಬಾರಿಗೆ ಮಂಗಳೂರಿನಲ್ಲಿ ನಡೆಸುತ್ತಿದ್ದೀರಿ. ಕಳೆದ ೨೦ ವರ್ಷಗಳಿಗೂ ಮಿಕ್ಕು ಕಾಲದಿಂದ ನಾನೂ ಸೇರಿದಂತೆ ಇತರ ಸ್ಥಳೀಯ ಪುಸ್ತಕ ವ್ಯಾಪಾರಿಗಳು ಈ ವಲಯದ ಸಾರ್ವಜನಿಕರ ಪುಸ್ತಕ ಅಗತ್ಯಗಳನ್ನು ಪೂರೈಸುತ್ತ ಬಂದಿದ್ದೇವೆ. ಇದರಲ್ಲಿ ನೀವು ನಮಗೆಲ್ಲ ವಿವಾದಾತೀತ ಸಗಟು ಸರಬರಾಜುದಾರ ಮತ್ತು ಮಹಾಪೋಷಕ ಸಂಸ್ಥೆಯಾಗಿಯೇ ನಡೆದುಕೊಂಡಿದ್ದೀರಿ. ನಿಮ್ಮನ್ನು ನಾವು ಕನಸುಮನಸುಗಳಲ್ಲೂ ಓರ್ವ ಪ್ರತಿಸ್ಪರ್ಧಿಯಾಗಿ ಅಥವಾ ವ್ಯಾಪಾರ ಸಂಹಿತೆಗೆ ಧಕ್ಕೆ ತರುವ ಕೂಟವಾಗಿ ಕಂಡವರಲ್ಲ. ಆದರೆ ಈಗ ಈ `ಸೇಲ್’ನ ಪ್ರಚಾರ, ಪ್ರದರ್ಶನ ಮತ್ತು ಮಾರಾಟ ಸ್ಪಷ್ಟವಾಗಿ ನಮ್ಮ ನ್ಯಾಯಬದ್ಧವಾದ ಹಿತಾಸಕ್ತಿಗಳ ಬುಡಕ್ಕಿಡುವ ಕೊಡಲಿ ಏಟಿನಂತೇ ಕಾಣುತ್ತಿದೆ. ನೀವು ಕೊಡುವ ೧೦% ವಟ್ಟಾ ಮತ್ತು ಮುಖ್ಯವಾಗಿ, ಸಾಮಾನ್ಯ ಮಾರುಕಟ್ಟೆಗೆ ಇನ್ನೂ ಲಭ್ಯವಿಲ್ಲದ ಪುಸ್ತಕಗಳನ್ನು ಇಲ್ಲಿಗೆ ಒದಗಿಸಿಕೊಳ್ಳುವ ಚಾತುರ್ಯ, ನಿಮ್ಮ ಉದ್ದೇಶಗಳ ಬಗ್ಗೇ ನಮಗೆ ಸಂಶಯವನ್ನು ಹುಟ್ಟಿಸುವಂತಿದೆ. ಉದಾಹರಣೆಗೆ ಕಳೆದ ವರ್ಷ ನಿಮ್ಮ ಮಾರಾಟ ಮೇಳಕ್ಕೆ ಬಂದ `ಮಿಶನರೀಸ್ ಇನ್ ಇಂಡಿಯಾ’ ಪುಸ್ತಕಕ್ಕೆ ನಾನು ಮೊದಲೇ ಬೇಡಿಕೆ ಸಲ್ಲಿಸಿದ್ದೆ. ವಿತರಣಕಾರನ ಸಹಜ ಔದಾರ್ಯಕ್ಕೆ ಎರವಾಗಿ ನೀವದನ್ನು ನನಗೆ ಕೊಡದೆ, ನಿಮ್ಮ ಸೇಲಿನಲ್ಲಿ ಚೆನ್ನಾಗಿ ಮಾರಿಕೊಂಡಿರಿ. ಹಾಗೇ ಈ ವರ್ಷ ಸಾಕಷ್ಟು ಮುಂಚಿತವಾಗಿಯೇ ನಾನು ಕೇಳಿ ಇಲ್ಲ ಎನ್ನಿಸಿಕೊಂಡ ಪುಸ್ತಕ - `ಗಣೇಶ ಕೋಶ’, ಈಗ ನಿಮ್ಮ ಮೇಳದಲ್ಲಿ ಭರದಿಂದ ಮಾರಾಟವಾಗುತ್ತಿರುವುದು ತಿಳಿದು ಬಂತು. ನನಗೆ ೨೫% ರಿಯಾಯ್ತಿ ಕೊಟ್ಟು, ೪೫ ದಿನ ಕಾಯುವುದಕ್ಕಿಂತ ೧೦% ನೇರ ಗಿರಾಕಿಗೇ ಕೊಟ್ಟು, ನಗದು ಪಡೆಯುವುದು ನಿಮಗೆ ತುಂಬ ಹಿತವಾಗಿ ಕಂಡಿರಬೇಕು!

15 July 2016

ದುಡ್ಡು ಕೆಟ್ಟದ್ದು ನೋಡಣ್ಣ

ಪುಸ್ತಕ ಮಾರಾಟ ಹೋರಾಟ (೧೯೯೯) 
ಹದಿನೇಳನೇ ಅಧ್ಯಾಯ

[ಮೂಲದಲ್ಲಿ ರಸಪ್ರಸಂಗಗಳಿಗೆ ಜತೆಗೊಟ್ಟ, ಪುಸ್ತಕ ಮಾರಾಟದ್ದೇ ಕೆಲವು ಬಿಡಿ ಪ್ರಸಂಗಗಳು]

ಹೀಗೊಂದು ಪುಸ್ತಕಾಪಹರಣ ಪ್ರಸಂಗ

ಡಾ|ರಮಾಪತಿ ನನಗೆ ಮಿತ್ರ ಚಿತ್ರಗ್ರಾಹಿ ಮೂಲಕ ಪರಿಚಯಕ್ಕೆ ಸಿಕ್ಕವರು. ಆದರೆ ಈತ ತನ್ನ ನಯವಾದ ಮಾತು, ವಿಸ್ತಾರವಾದ ಪುಸ್ತಕಾಸಕ್ತಿಗಳಿಂದ ಬೇಗ ಆತ್ಮೀಯರಾಗಿದ್ದರು. ಅವರು ಬಂದಾಗೆಲ್ಲ ಅದೂ ಇದೂ ಮಾತಾಡುತ್ತ ಅರ್ಧ ಮುಕ್ಕಾಲು ಗಂಟೆ ಅಂಗಡಿಯೆಲ್ಲ ಓಡಾಡಿ ಏನಾದರೂ ಸಣ್ಣಪುಟ್ಟ ಪುಸ್ತಕ ಕೊಂಡು ಹೋಗುತ್ತಿದ್ದರು. ನಾನು ನನ್ನ ಕೆಲಸ ಮಾಡುತ್ತ ಕುಳಿತಲ್ಲಿಂದಲೇ ಹಗುರವಾಗಿ ಅವರ ಮಾತಿಗೆ ಸೇರಿಕೊಳ್ಳುತ್ತಿದ್ದೆ. ಒಂದು ದಿನ ಅವರು ಹೋದ ಮೇಲೆ, ನನ್ನ ಸಹಾಯಕ ಅನುಮಾನಿಸುತ್ತಲೇ ಅವರ ಬಗ್ಗೆ ಅಪಸ್ವರ ತೆಗೆದ. ನಾನು ಕೆದಕಿ ಕೇಳಿದ ಮೇಲೆ “ಡಾಕ್ಟರ್ ಪುಸ್ತಕ ಕದೀತಾರೋಂತ” ಸಂಶಯ ತೋಡಿಕೊಂಡ. ನನಗೆ ನಂಬಿಕೆ ಬರಲಿಲ್ಲ. ಆದರೆ ಸಹಾಯಕನ ಮಾತು ಖಂಡಿತ ತಳ್ಳಿ ಹಾಕುವಂತದ್ದಲ್ಲ ಅನ್ನಿಸಿ, “ಇನ್ನೊಮ್ಮೆ ಅವರು ಕದ್ದ ಸಂಶಯ ಬಂದಾಗ ನನಗೆ ತಿಳಿಸು. ತನಿಖೆಯ ಅಪ್ರಿಯ ಕೆಲಸ ನಾನೇ ಮಾಡುತ್ತೇನೆ.” ಎರಡು ದಿನ ಕಳೆದು ರಮಾಪತಿ ಬಂದರು.

08 July 2016

ಪುಸ್ತಕ ಮಾರಾಟದಲ್ಲಿ ರಸಪ್ರಸಂಗಗಳು

ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ  ಹದಿನಾರನೇ ಅಧ್ಯಾಯ
[ಪ್ರಸಕ್ತ ಅಧ್ಯಾಯದಲ್ಲಿ ಸುಳ್ಯದಲ್ಲಿ ನಡೆದ ಅವಿಭಜಿತ ದಕಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾನು ಮಂಡಿಸಿದ ಪ್ರಬಂಧ – ಪುಸ್ತಕ ಮಾರಾಟದಲ್ಲಿ ರಸಪ್ರಸಂಗಗಳು ಮತ್ತು ಕೆಲವು ವೈನೋದಿಕ ಚುಟುಕುಗಳನ್ನು ಸಂಕಲಿಸಿದ್ದೇನೆ. ಇದಕ್ಕೆ ಪೂರಕವಾದ ರೇಖಾಚಿತ್ರಗಳನ್ನು ಆ ಕಾಲದಲ್ಲಿ ಅಜ್ಜನ ಪ್ರೇರಣೆಯಲ್ಲಿ ಅಭಯ ಬರೆದಿದ್ದವನ್ನೂ ಸೇರಿಸಿದ್ದೇನೆ.]

ಐನ್ಸ್ಟೈನರಿಗೆ ದಕ್ಕದ ಡ್ರಾಫ್ಟ್!

ನನ್ನ ಪ್ರಕಾಶನದ `ಆಲ್ಬರ್ಟ್ ಐನ್ಸ್ಟೈನ್’ ಎಂಬ ಪುಸ್ತಕದ ವಿಮರ್ಶೆ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಪ್ರಕಟವಾಯಿತು. ಅದನ್ನು ಓದಿದವರೊಬ್ಬರು ತುಮಕೂರಿನಿಂದ ಪುಸ್ತಕದ ಬೆಲೆ, ಅಂಚೆ ವೆಚ್ಚ ಸೇರಿಸಿ ಡ್ರಾಫ್ಟ್ ಕಳಿಸಿ, ಪ್ರತಿಯೊಂದಕ್ಕೆ ಬೇಡಿಕೆ ಮಂಡಿಸಿದರು. ಆದರೆ ನಾನು ಪುಸ್ತಕ ಕಳಿಸದೆ ಡ್ರಾಫ್ಟ್ ಮರಳಿಸಿದೆ! ಜೊತೆಗೆ ನಾನವರಿಗೆ ಬರೆದ ಪತ್ರ ಹೀಗಿತ್ತು:
“ಸ್ವಾಮೀ ಐನ್ಸ್ಟೈನರು ೧೯೫೫ರಲ್ಲೇ ತೀರಿಹೋಗಿದ್ದಾರೆ. ಜೀವಿತಾವಧಿಯಲ್ಲಿ ಅವರೆಂದೂ ಮಂಗಳೂರಿಗೆ ಬಂದದ್ದಿಲ್ಲ. ಮತ್ತೆ ನಮಗವರ ಉತ್ತರಾಧಿಕಾರ ಒದಗಿದ್ದೂ ಇಲ್ಲ. ಹಾಗಾಗಿ ನೀವು ಆಲ್ಬರ್ಟ್ ಐನ್ಸ್ಟೈನರ ಹೆಸರಿನ ಖಾತೆಗೆ ಪಾವತಿಯಾಗುವಂತೆ ಕಳಿಸಿದ ಡ್ರಾಫ್ಟನ್ನು ಮರಳಿಸಿದ್ದೇನೆ. ಅವರ ಹೆಸರಿನ ಪುಸ್ತಕ ಬೇಕಾದಲ್ಲಿ ನನ್ನ ಅಂಗಡಿಯ ಹೆಸರಿನಲ್ಲಿ ಡ್ರಾಫ್ಟ್ ಕಳಿಸಿ.”

01 July 2016

ಕನ್ನಡ ಕಾದಂಬರಿ ನೂರು ವರ್ಷ – ಉದ್ಯಮದ ದೃಷ್ಟಿಯಲ್ಲಿ


ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ  ಹದಿನೈದನೇ ಅಧ್ಯಾಯ
[ಭಂಡಾರ್ಕರ್ಸ್ ಕಾಲೇಜು ಕುಂದಾಪುರ ಏರ್ಪಪಡಿಸಿದ್ದ ಕನ್ನಡ ಕಾದಂಬರಿ ನೂರು ವರ್ಷ ಗೋಷ್ಠಿಯಲ್ಲಿ ೧೯-೧೨-೧೯೯೮ರಂದು ಓದಿದ ಪ್ರಬಂಧ]

ಪುಸ್ತಕೋದ್ಯಮದಲ್ಲಿ ನನ್ನದು ೨೫ ವರ್ಷಗಳ ಅಖಂಡ ಅನುಭವ. ಮುಖ್ಯವಾಗಿ ನಾನು ಪುಸ್ತಕ ಮಾರಾಟಗಾರ, ಸಣ್ಣ ಮಟ್ಟದಲ್ಲಿ ಪ್ರಕಾಶಕ ಮತ್ತು ವಿತರಕ, ಇನ್ನೂ ಸಣ್ಣ ಮಟ್ಟದಲ್ಲಿ ಲೇಖಕ. ಇವುಗಳ ಮುನ್ನೆಲೆಯಲ್ಲಿ ಕನ್ನಡ ಕಾದಂಬರಿಯನ್ನು ಪ್ರತ್ಯೇಕಿಸಿ ಕಾಣಲು, ವಿಶ್ಲೇಷಿಸಲು ಪ್ರಯತ್ನಿಸಿದ್ದೇನೆ.

ಯಾವುದೇ ಉದ್ಯಮದ ಮೂಲದಲ್ಲಿ ಹಲವು ವೃತ್ತಿಗಳ ಸಂಗಮ ಅಥವಾ ಹಲವು ಭಿನ್ನ ಆಸಕ್ತಿಗಳ ಸಂಯೋಜನೆ ಕಾಣುತ್ತೇವೆ. ಬಿಡಿಸಿ ಹೇಳುವುದಿದ್ದರೆ, ಪುಸ್ತಕೋದ್ಯಮದ ಎರಡು ಕೊನೆಯಲ್ಲಿರುವ ಲೇಖಕ ಮತ್ತು ಓದುಗರನ್ನು ಹವ್ಯಾಸಿಗಳೆಂದು ಬಾವಿಸಿದರೂ ನಡುವಣ ಮುದ್ರಕ, ಪ್ರಕಾಶಕ, ಮಾರಾಟಗಾರ, ಗ್ರಂಥಪಾಲ ಮುಂತಾದವರು ವೃತ್ತಿಪರರಾಗಲೇಬೇಕು. ಎರಡನೆಯದಾಗಿ, ಪುಸ್ತಕೋದ್ದಿಮೆಯ ಯಶಸ್ಸು ಯಾವುದೇ ವಾಣಿಜ್ಯ ವಹಿವಾಟಿನಂತೆ ಕಡಿಮೆ ಹಣ ಹೂಡಿ, ಹೆಚ್ಚು ಹಣ ತೆಗೆಯುವುದನ್ನೇ ಅವಲಂಬಿಸಿದೆ. ಸಾಮಾಜಿಕ ಉಪಯುಕ್ತತೆ ಮತ್ತು ಬದ್ಧತೆ, ಮೌಲ್ಯಗಳ ರಕ್ಷಣೆ ಮತ್ತು ಪೋಷಣೆ ವ್ಯಕ್ತಿ ಸಂಸ್ಕಾರದ ಮೇಲೆ ಹಿಂಬಾಲಿಸುವ ಆಕಸ್ಮಿಕಗಳು, ಹೆಚ್ಚಿನ ಸಂದರ್ಭಗಳಲ್ಲಿ ಜಾಣರು ಹೊಸೆದ ಆದರ್ಶಗಳು.

17 June 2016

ಹವ್ಯಾಸಿ ಪ್ರಕಾಶಕರಿಗೆ ಸಲಹೆ

ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ ಹದಿನಾಲ್ಕನೇ ಅಧ್ಯಾಯ

[ಜಿಟಿ ನಾರಾಯಣ ರಾಯರಿಂದ ಸಂಪಾದಕೀಯ ಟಿಪ್ಪಣಿ: ವೃತ್ತಿಪ್ರಕಾಶಕರು ಅನುಭವದಿಂದ ಕಲಿಯುವ ಪಾಠ ಒಂದುಂಟು. ಬದುಕಿನಲ್ಲಿ ಬಿಟ್ಟಿ ಕೂಳಿಲ್ಲ (ಬೌತವಿಜ್ಞಾನದಲ್ಲಿ ಇದು ಉಷ್ಣಗತಿವಿಜ್ಞಾನದ ಎರಡನೆಯ ನಿಯಮ ಎಂಬ ಗಂಭೀರ ಅಭಿಧಾನ ಹೊತ್ತು ಸಿದ್ಧಾಂತಕೋವಿದರಿಗೂ ತಂತ್ರವಿದ್ಯಾಪಾರಂಗತರಿಗೂ ಏಕ ರೀತಿಯ ಸವಾಲಾಗಿದೆ. ಹುಸಿ/ಹಸಿ ವಿಜ್ಞಾನಿಗಳಿಗಾದರೋ ಕಲ್ಪನಾಲೋಕಕ್ಕೆ ಜಿಗಿಯಲು ಅದ್ಭುತ ರಾಕೆಟ್ಟನ್ನು ಒದಗಿಸಿದೆ!) ಹವ್ಯಾಸಿ ಪ್ರಕಾಶಕರು ಹೀಗಲ್ಲ: ಪುಸ್ತಕ ಪ್ರಕಾಶನ ಇವರಿಗೆ ಜೀವನಯಾಪನೆಯ ಮಾರ್ಗವಲ್ಲ. ಬದಲು, ಸರಸ್ವತೀ ಪೂಜಾ ಕೈಂಕರ್ಯ. ಉದ್ದೇಶ ಘನ ನಿಜ, ನಿರ್ವಹಣೆ? ಬದುಕಿನಲ್ಲಿ ಬಿಟ್ಟಿ ಕೂಳು ಗಳಿಸಲು ಹಲಬಗೆಯ ತಂತ್ರಗಳ ಅನ್ವೇಷಣೆ, ಹೇಗೂ ಇರಲಿ, ಇಂಥ ಜ್ಞಾನಸೇವಕರು ಗಮನಿಸಲೇ ಬೇಕಾದ ಒಂದು ವ್ಯಾಪಾರ ಸೂತ್ರವಿದೆ: ಪುಸ್ತಕದ ಹೂರಣ ತೋರಣಗಳು ಗಟ್ಟಿ ಆಗಿದ್ದು ಗ್ರಾಹಕರ ಆವಶ್ಯಕತೆಗೆ ಪೂರೈಕೆ ಆಗುವಂತಿರಬೇಕು. ಮತ್ತು ಈ ನೆಲೆಯಲ್ಲಿ ಮಾರಾಟ ಬೆಲೆ, ವ್ಯಾಪಾರ ವಟ್ಟಾ, ಸಾಗಣೆ ವೆಚ್ಚ ಮುಂತಾದವು ನಿಗದಿ ಆಗಬೇಕು. ಇದಲ್ಲವಾದರೆ ಹವ್ಯಾಸಿಗೆ (ಹವೆ+ಆಸಿ) ಉಳಿಯುವುದು ಕೇವಲ ಅಹವೆಯ ಆಸೆ ಮತ್ತು ಹತಾಶೆ]


ಉಡುಪಿಯ ಫಲಿಮಾರು ಮಠಕ್ಕೆ ದಿನಾಂಕ ೩೦-೮-೧೯೯೬ರಂದು ನಾನು ಬರೆದ ಪತ್ರ:
ನಾನು ವೃತ್ತಿ ಪುಸ್ತಕ ವ್ಯಾಪಾರಿ, ನಿಮ್ಮ ಪ್ರಕಟಣೆ – ತಂತ್ರಸಾರವನ್ನು, ಮಠಕ್ಕೆ ಹೆಚ್ಚು ಹತ್ತಿರದವರೂ ನನ್ನ ಹಿತೈಷಿಗಳೂ ಆಗಿರುವ ಎಚ್.ಕೃಷ್ಣ ಭಟ್ಟರ ಮೂಲಕ ಅನೇಕ ಸಲ ತರಿಸಿ ಮಾರಿದವನು. ಅವರು ರಾಗೋಪೈ ಸಂಶೋಧನ ಕೇಂದ್ರದ ವ್ಯವಸ್ಥೆಯನ್ನು ನನಗಾಗಿ ಇದಕ್ಕೆ ಬಳಸಿಕೊಂಡಿದ್ದಾರೆ. ಹಾಗೇ ಈ ಬಾರಿ ೧೫ ಪ್ರತಿ ತರಿಸಿಕೊಂಡೆ. ಪ್ರತಿಸಲವೂ ನೀವು ಪುಸ್ತಕೋದ್ಯಮದ ಸರ್ವಸಮ್ಮತ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ನನ್ನಷ್ಟಕ್ಕೇ ಅಸಮಾಧಾನಪಟ್ಟುಕೊಂಡಿದ್ದೆ. ಆದರೆ ಈ ಬಾರಿ ಮುದ್ರಿತ ಬೆಲೆ ರೂ ೧೦೦ನ್ನು ಮುದ್ರೆ ಹೊಡೆದು ರೂ ೧೨೫ಕ್ಕೆ ಏರಿಸಿದ್ದು ಮತ್ತು ವ್ಯಾಪಾರೀ ವಟ್ಟಾದಲ್ಲಿ ನನಗೆ ಹನ್ನೆರಡೂವರೆ ಶತಾಂಶ ಮಾತ್ರ ಸಿಕ್ಕುವಂತೆ ಇಳಿಸಿದ್ದು ನನ್ನನ್ನು ತೀವ್ರವಾಗಿ ತಟ್ಟಿದೆ. ದಯವಿಟ್ಟು ನನ್ನ ದೀರ್ಘ ವಿವರಣೆಯನ್ನು ಮನಗೊಟ್ಟು ಓದಿ ಸಹಾಯಕ್ಕೆ ಒದಗುವಿರೆಂದು ಭಾವಿಸುತ್ತೇನೆ.

10 June 2016

ಪುಸ್ತಕೋದ್ಯಮದ ನೆಲಕ್ಕೆ ಮೌಲ್ಯ ಕಚ್ಚಿಸುವ ಹನಿಗಳು

ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ
ಹದಿಮೂರನೇ ಅಧ್ಯಾಯ

೧. ಮನೆಗೊಂದು ಗ್ರಂಥಾಲಯಕ್ಕೆ ಒಂದು ದಿಕ್ಸೂಚೀ ತಿದ್ದುಪಡಿ

ಗ್ರಂಥಾಲಯ ತಜ್ಞ ಕೆ.ಎಸ್. ಉಮಾಪತಿಯವರು ೨೪-೧೧-೯೬ರ ಪ್ರಜಾವಾಣಿಯಲ್ಲಿ `ಮನೆಗೊಂದು ಗ್ರಂಥಾಲಯ’ ಲೇಖನ ಪ್ರಕಟಿಸಿದರು.
ಅದಕ್ಕೆ ನಾನು ಬರೆದು ಕಳಿಸಿದ್ದ ಪ್ರತಿಕ್ರಿಯಾತ್ಮಕ ಟಿಪ್ಪಣಿಯನ್ನೂ ಪ್ರಜಾವಾಣಿ ತನ್ನ ೮-೧೨-೯೬ರ ಸಂಚಿಕೆಯಲ್ಲಿ ಪ್ರಕಟಿಸಿತು. ಅದು ಹೀಗಿದೆ: 

ಉಮಾಪತಿಯವರು ಕೊಟ್ಟ ಆದರ್ಶ ಸರಿ. ಆದರೆ ಅನುಸರಣೆಗೆ ಪರಿಸರ ಸರಿಯಿಲ್ಲ ಎಂಬುದಕ್ಕೆ ಪುಸ್ತಕ ವ್ಯಾಪಾರಿಯ ಕೆಲವು ಮಾತುಗಳು:
೧. ಬಹುಸಂಖ್ಯಾತ ಕನ್ನಡ ರತ್ನಕೋಶ ಎಲ್ಲೂ ಸಹಜ ವಿತರಣೆಗ ಬಂದೇ ಇಲ್ಲ. ಅದರ ಹೊಣೆ ಹೊತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆದಿಯಾಗಿ ಎಲ್ಲ ಇಲಾಖೆ, ಅಕಾಡೆಮಿ, ವಿಶ್ವವಿದ್ಯಾನಿಲಗಳ ಪ್ರಕಟಣಾಂಗಗಳು ಸದಾ ಮಾಹಿತಿ ಮಸಕುವುದರಲ್ಲಿ ಮತ್ತು ನೈಜ ವಿತರಣೆಯನ್ನು ಬಿಟ್ಟು, ಪುಸ್ತಕಗಳನ್ನು `ಮುಗಿಸಿಬಿಡುವುದರಲ್ಲಿ’ ಸ್ಪರ್ಧಿಸುತ್ತಿರುತ್ತವೆ. ಯಾವುದೋ ಕೆಟ್ಟ ಗಳಿಗೆಯಲ್ಲಿ ಸರಕಾರ ಕನ್ನಡ ಪ್ರಕಾಶನರಂಗಕ್ಕೆ ಆಧಾರವಾಗಿ ನಿಲ್ಲುವ ನಿರ್ಧಾರ ತಳೆಯಿತು. ಮುಂದೆ ಆ ಅಧಿಕಾರಕ್ಕೆ ಬಂದೆಲ್ಲರೂ ಅಪ್ರಿಯತೆಯ ಭಯದಲ್ಲಿ ಎಂದೂ ಹಿಂದೆ ನೋಡದೆ, ಆ ತಪ್ಪಿಗೆ ಬಲಕೊಡುತ್ತ ಬಂದಿದ್ದಾರೆ. ಅದೇ ನಿಟ್ಟಿನಲ್ಲಿ ಹೊಸ ಇಲಾಖೆ, ಯೋಜನೆಗಳನ್ನು ಹುಟ್ಟಿಸುತ್ತಲೇ ಇದ್ದಾರೆ. ಇಂದು ಅತಿ ಮುದ್ದಿನಿಂದ ಮಗು ಕೆಟ್ಟಂತೇ ಆಗಿದೆ ಕನ್ನಡ ಪುಸ್ತಕೋದ್ಯಮದ ಸ್ಥಿತಿ. ಪ್ರಕಟಣೆಗಳಲ್ಲಿ ಸತ್ತ್ವವಿಲ್ಲ, ಮಾಡಿದ್ದನ್ನು ಜನರಿಗೆ ಮುಟ್ಟಿಸುವಲ್ಲಿ ಆಸಕ್ತಿಯಿಲ್ಲ. ಅಪಕ್ವ ಬರವಣಿಗೆ, ಕುಲಗೆಟ್ಟ ಮುದ್ರಣ, ತಲೆ ಒಡೆಯುವ ಬೆಲೆ, ಅಲ್ಪಸಂಖ್ಯಾತರಾದ ಕೊಂಡೋದುಗರನ್ನು ಕೀಳ್ಗಳೆಯುವ ಧೋರಣೆ ಇಂದು ರೂಢಿಸಿದೆ.

27 May 2016

ಹುರಿ ಮೂರು ನೇಣು ಒಂದೇ – ಕಸಾಪ ಮತ್ತು ಒಂದು ಸಮ್ಮೇಳನ

`ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ
ಅಧ್ಯಾಯ ಹನ್ನೆರಡು
[ಜಿ.ಟಿ. ನಾರಾಯಣರಾವ್ ಬರೆದ ಸಂಪಾದಕೀಯ ಟಿಪ್ಪಣಿ: ಅಂತಃಸತ್ತ್ವದೀಪ್ತ ಜನಾಂಗದ ದೈನಂದಿನ ಗತಿಶೀಲ ಜೀವನದ ವೇಳೆ ಹಲವಾರು ಮೌಲ್ಯಗಳು ಕೆನೆಗಟ್ಟುತ್ತವೆ; ಮೊಸರು ಕಡೆವಾಗ ಬೆಣ್ಣೆ ತುಣುಕುಗಳು ಮೈದಳೆಯುವಂತೆ. “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡಮುಂತಾದ ಅನುಭವೋಕ್ತಿಗಳು ಇಂಥ ಮೌಲ್ಯಗಳ ಮೊತ್ತಕ್ಕೆ ನಿದರ್ಶನಗಳು. ಮೊತ್ತವೇ ಸಂಸ್ಕೃತಿಪೀಳಿಗೆಯಿಂದ ಪೀಳಿಗೆಗೆ ಹರಿಯುವ ಜೀವನಾದರ್ಶ, ಇದನ್ನು ಸಭ್ಯವ್ಯಕ್ತಿಗಳ ಸಹಜ ನಡೆಯಲ್ಲಿ ಸದಾ ಕಾಣಬಹುದು. ನುಡಿಗಳಲ್ಲಿ ಕೇಳಬಹುದು. ಆದರೆ ಆದರ್ಶದ ಹಾದಿ ಎಂದೂ ಸರಳವಲ್ಲ. ಪ್ರತಿಯೊಂದು ಪೀಳಿಗೆಯೂ ವ್ಯಕ್ತಿಯೂ ಹಾದಿಯನ್ನು ಸ್ವತಃ ಕಂಡುಕೊಂಡು ಅದರ ಮೇಲೆ ಅಂಜದೆಯೆ ಅಳುಕದೆಯೆ ನಡೆಯುವುದೊಂದೇ ಋಜು ಜೀವನಕ್ಕೆ ಪ್ರವರ್ತನಕಾರಿ. ತಾತ್ಕಾಲಿಕ ವೈಫಲ್ಯಗಳು? ಶಾಶ್ವತ ಸತ್ಯದೆಡೆಗಿನ ಕೈಗಂಬಗಳುಪರೀಕ್ಷಾ ಕೇಂದ್ರಗಳು. ನಡೆದಂತೆ ಕಾಣೆಯಾಗುವ ಸಿಂಹಿಕಾ ಪ್ರಕರಣಗಳು ಇವು. ಸಾಗರೋಲ್ಲಂಘನದ ವೇಳೆ ಹನುಮಂತ ಮೈನಾಕಾಮಿಷ ಮತ್ತು ಸಿಂಹಿಕಾಪಾಯಗಳನ್ನು ಎದುರಿಸಿದ ಪರಿನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆಅನ್ವೇಷಕನಿಗೆ ಉಲ್ಲಾಸ ಉತ್ಸಾಹ ಉಚ್ಛ್ವಾಸ ಊಡಬೇಕು.
ಉಲ್ಲಾಸನಾವೆಯನ್ನೇರಿ ಸಾರಿದೆ ನಾನು
ವರ್ತಮಾನದಿ ತೀವ್ರ ಕಾರ್ಯಮಗ್ನತೆಯಲ್ಲಿ
ಆದರ್ಶಗಳ ಬೀಡ ದಾಟುತ್ತ ಹೋದಂತೆ
ಆದೆ ನಾನಾದರ್ಶ! ವೈಚಿತ್ರ್ಯ ಅತ್ರಿಸೂನು]

20 May 2016

ಚಾ ಬಸಿಯೊಳಗೆ ಚಂಡಮಾರುತ ಮೈಸೂರು ವಿಶ್ವವಿದ್ಯಾನಿಲಯ

`ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ
ಅಧ್ಯಾಯ ಹನ್ನೊಂದು

[ಜಿ.ಟಿ. ನಾರಾಯಣರಾವ್ ಬರೆದ ಸಂಪಾದಕೀಯ ಟಿಪ್ಪಣಿ: ಧೀರರು ಹೊಸ ಹಾದಿ ತುಳಿದು ವಿಕ್ರಮಾಭಿಮುಖರಾಗುತ್ತಾರೆ. ಅವರ ನಡವಳಿಕೆಗಳು ಇತರರಿಗೆ ಅನುಸರಣೀಯ ನಿಯಮಗಳಾಗುತ್ತವೆ. ಇಲ್ಲಿಯ ಸೂತ್ರ: ಪ್ರೀತಿನೀತಿ ತಲದಲ್ಲಿ ಧೈರ್ಯ ಮತ್ತು ಪುರೋಗಮನ. ಗುಣಗಳಿಲ್ಲದವರು ಧೀರರ ಸ್ಥಾನಗಳಿಗೆ ಬಂದಾಗ ನಿಯಮಗಳ ದಾಸರಾಗುತ್ತಾರೆಮಂತ್ರ ಮರೆತು ತಂತ್ರ ಲೀನರಾಗುವ ಯಾಂತ್ರಿಕರಂತೆ ಇಂಥ ಪಲಾಯನ ಶೂರರಿಗೆ ಮೊದಲ ತಂಗುದಾಣ ನಿಯಮಗಳ ಗೋಜಲು ಮತ್ತು ಇದಕ್ಕೆ ಖುದ್ದು ಅವರ ದೇಣಿಗೆ. ಸರಕಾರದ ಜಡ ಯಂತ್ರವನ್ನು ಝಾಡಿಸಿ ಋಜುಕಾರ್ಯಮಗ್ನವಾಗಿಸಲು ಬೇಕಿಂದು ನಮಗೊಬ್ಬ `ಬೃಹನ್ನಳೆ’, ಒಬ್ಬ `ಕೃಷ್ಣ’. ಆಗ ಎಂಥ `ಉತ್ತರಕುಮಾರನೂ ಯುದ್ಧಗಾಮಿ ಆಗುತ್ತಾನೆ, ಎಂಥ `ಅರ್ಜುನನೂ ಶಸ್ತ್ರಧಾರಿ ಆಗುತ್ತಾನೆ. `ಪಂಗುಂ ಲಂಘಯತೇ ಗಿರಿಂ.]

[೧೯೯೯ರಲ್ಲಿ ನಾನೇ ಬರೆದ ಪೀಠಿಕೆ: ಸಾಮಾಜಿಕ ಬಾಧ್ಯತೆ ಇರುವ ಮೈಸೂರು ವಿಶ್ವವಿದ್ಯಾನಿಲಯದ ಪುಸ್ತಕ ಪ್ರಕಾಶನ ಮತ್ತು ಪ್ರಕಟಣೆಗಳ ಏಕೈಕ ಅಂಗವಾದ ಪ್ರಸಾರಾಂಗ ತೀವ್ರ ಕರ್ತವ್ಯಚ್ಯುತಿ ಎಸಗುತ್ತಿದೆ. ಅದನ್ನು ಸರಿದಾರಿಗೆ ನಿರ್ದೇಶಿಸಬೇಕಾದ ಕುಲಸಚಿವ, ಕುಲಪತಿ, ಕುಲಾಧಿಪತಿ ಹಾಗೂ ವಿದ್ಯಾ ಸಚಿವರುಗಳೆಲ್ಲ ನನ್ನ ಮನವಿಗಳಿಗೆ ನಿಷ್ಕ್ರಿಯರಾಗಿಯೇ ಉಳಿದರು. ಹೋರಾಟವನ್ನು ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯಾಗಿ ನ್ಯಾಯಾಲಯವಾದರೂ ಸ್ವೀಕರಿಸೀತೇ ಎಂಬ ಉದ್ದೇಶದಿಂದ ೧೯೯೭ರ ಮಧ್ಯೆ, ಹೀಗೊಂದು ಲೇಖನ ಸಂಕಲಿಸಿದೆ]

ಸ್ವಪರಿಚಯ: ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವೀಧರ. ಸ್ವೋದ್ಯೋಗ ಬಯಸಿ ೧೯೭೪ರಲ್ಲಿ ಪುಸ್ತಕ ವ್ಯಾಪಾರಿಯಾದೆ. ೧೯೭೫ರಲ್ಲಿ ಮಂಗಳೂರಿನಲ್ಲಿ ಅತ್ರಿ ಬುಕ್ ಸೆಂಟರ್ ಹೆಸರಿನ ಪುಸ್ತಕ ಮಳಿಗೆಯನ್ನೇ ತೆರೆದು, ನಡೆಸಿಕೊಂಡು ಬಂದಿದ್ದ್ಡೇನೆ. ಸುಲಭ ವ್ಯಾಪಾರೀ ಸಾಮಗ್ರಿಗಳನ್ನು ಬಿಟ್ಟು, ಸಾರ್ವಜನಿಕ ಜ್ಞಾನಾಭಿವೃದ್ಧಿಗೆ ಸಹಕಾರಿಯಾಗುವಂತೆ ಅಂಗಡಿಯನ್ನು ಬೆಳೆಸಿದ್ದೇನೆ. ವ್ಯಾವಹಾರಿಕ ನ್ಯಾಯ ಪರಿಪಾಲನೆಯಲ್ಲಿ ಎಂದೂ ಎರಡನೆಯವನಾಗದ ಎಚ್ಚರ ವಹಿಸಿದ್ದೇನೆ. ಇದೇ ಮಾನದಂಡದಲ್ಲಿ ನನ್ನ ಪುಸ್ತಕ ಪ್ರಕಾಶಕ, ವಿತರಕರಿಂದಲೂ ಸೇವೆಯನ್ನು ನಿರೀಕ್ಷಿಸಿದ್ದೇನೆ. ವಿರೋಧ ಬಂದಲ್ಲಿ ಪ್ರಜ್ಞಾವಂತ ನಾಗರಿಕನ ನೆಲೆಯಲ್ಲಿ, ನ್ಯಾಯದ ಚೌಕಟ್ಟಿನಲ್ಲಿ ಹೋರಾಡಿದ್ದೇನೆ. ಅಂಥ ಒಂದು ಹೋರಾಟವನ್ನಿಲ್ಲಿ ನಿರೂಪಿಸುತ್ತಿದ್ದೇನೆ.

13 May 2016

ಕನ್ನಡ ಪುಸ್ತಕ ಪ್ರಾಧಿಕಾರ

`ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ
ಅಧ್ಯಾಯ ಹತ್ತು

[ಜಿ.ಟಿ. ನಾರಾಯಣರಾವ್ ಬರೆದ ಸಂಪಾದಕೀಯ ಟಿಪ್ಪಣಿ: ಜನಪ್ರಿಯತೆ ಕಳೆದುಕೊಳ್ಳುವ, ಪಟ್ಟಭದ್ರ ಹಿತಾಸಕ್ತಿಗಳನ್ನು ರಕ್ಷಿಸಿ ತನ್ಮೂಲಕ ಸ್ವಂತ ಸುಖವನ್ನು ಸಾಧಿಸುವ, ಮುಂತಾಗಿ ಸರಕಾರ (ಅಂದರೆ ಮಂತ್ರಿಮಹೋದಯರು) ಪ್ರದರ್ಶಿಸುವ ಅನೇಕ ತದ್ದಿಂಗಿಣ ತೋಮ್ಗಳ ಸಾಲಿಗೆ ಸೇರುತ್ತದೆ ಬಗೆಬಗೆಯ ಪ್ರಾಧಿಕಾರಗಳು. ಉದ್ದೇಶ ಸ್ಪಷ್ಟವಿರದ ಮತ್ತು ಮಾರ್ಗ ತಿಳಿದಿರದ, ಪಂಚೇಂದ್ರಿಯಶೂನ್ಯ ವಿಕ್ತ ಸೃಷ್ಟಿಗಳಿವು. ಸಹಜವಾಗಿ ಪ್ರಾಧಿಕಾರದ ಅಧ್ಯಕ್ಷಗಿರಿಗೆ, ಸದಸ್ಯ ಪಟ್ಟಕ್ಕೆ ಅಂತೆಯೇ ಆಡಳಿತ ವರ್ಗಕ್ಕೆ ಯೋಗ್ಯತೆಯ ಹೊರತಾದ ಇತರ ಎಲ್ಲ ಪ್ರಭಾವಗಳೂ ಪೈಪೋಟಿ ನಡೆಸುತ್ತಿರುತ್ತವೆ. ಪಾರ್ಕಿನ್ಸನ್ನನ ಮೊದಲೆರಡು ನಿಯಮಗಳು ಇಂಥ ಹುಲುಸು ಕನ್ನೆನೆಲದಲ್ಲಿ ತಕ್ಷಣವೇ ಬುಸುಗುಟ್ಟುತ್ತವೆ: . ಲಭ್ಯ ಕಾಲವನ್ನು ಪೂರ್ತಿ ಆಕ್ರಮಿಸುವಂತೆ ಕೆಲಸ ಸತತವಾಗಿ ವರ್ಧಿಸುತ್ತದೆಗುಮಾಸ್ತರ ದಂಡು, ಮೇಲ್ವಿಚಾರಕರ ದಿಂಡು, ಅಧಿಕಾರಿಗಳ ಹಿಂಡು... ಇತ್ಯಾದಿ! . ಸದಾ ಆದಾಯವನ್ನು ಮೀರಿ ಜಿಗಿಯುತ್ತದೆ ವೆಚ್ಚಸಾರಿಗೆ, ಸಂಪರ್ಕ, ಸೌಕರ್ಯ, ಸವಲತ್ತು....! ದುಂದುಗಾರಿಕೆಯ ಬರಡು ನೆಲದಲ್ಲಿ ಮೊದಲ ಬಲಿ ಮೂಲೋದ್ದೇಶ!]

22 April 2016

ಎನ್.ಬಿ.ಟಿಗೆ ಬಡಿದ ಲಕ್ವ

ಜಿ.ಎನ್.ಅಶೋಕವರ್ಧನನ `ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ
ಅಧ್ಯಾಯ ಒಂಬತ್ತು

[ಜಿ.ಟಿ. ನಾರಾಯಣರಾವ್ ಬರೆದ ಸಂಪಾದಕೀಯ ಟಿಪ್ಪಣಿ: ಅಧಿಕಾರದಿಂದ ವ್ಯಕ್ತಿಗೆ ಗೌರವವೇ? ವ್ಯಕ್ತಿಯಿಂದ ಅಧಿಕಾರಕ್ಕೆ ಪ್ರತಿಷ್ಠೆಯೇ? ಯಾವುದೇ ಕ್ಷೇತ್ರದಲ್ಲಿ ಅರ್ಹತೆಗೆ ಮೊದಲ ಮಣೆ ಸಲ್ಲದಿದ್ದರೆ ಅರ್ಹರು ಅಲ್ಲಿಗೆ ಕಾಲಿಡಲು ಅಂಜುತ್ತಾರೆ, ಹಿಂಜರಿಯುತ್ತಾರೆ. ಅನರ್ಹರಾದರೋ ದೌಡಾಯಿಸಿ ಬರುತ್ತಾರೆ. ಸ್ಥಾನಾಕ್ರಮಣ ಮಾಡುತ್ತಾರೆ. ಮುಂದೆ, ತಮ್ಮ ನಿಜ ಯೋಗ್ಯತೆಯನ್ನು (?) ಲೋಕಕ್ಕೆ ಸಾಬೀತು ಮಾಡಿ ತೋರಿಸಲು ಬಯಲಾಡಂಬರಗಳಿಗೆ ಶರಣಾಗುತ್ತಾರೆ. cosmetic dressingನಲ್ಲಿ ಅಥವಾ ತೋಟ ಶೃಂಗಾರದಲ್ಲಿ ಮೊದಲ ಬಲಿ ಅಧಿಕಾರದ ಮೂಲೋದ್ದೇಶ. ಯಥಾ ರಾಜ: ತಥಾ ಪ್ರಜಾಃಅಧಿಕಾರಿ ಹೇಗೋ ಹಾಗೆ ಅನುಯಾಯಿಗಳು. ಅಂದ ಮೇಲೆ ಇಂಥ ವ್ಯವಸ್ಥಾಪನೆಗಳಿಗೆ ಯಥಾ ಕಾಲದಲ್ಲಿ ಲಕ್ವ ಬಡಿಯುವುದು ಅಥವಾ ಕ್ಯಾನ್ಸರ್ ಕೆಡೆಯುವುದು ನೈಸರ್ಗಿಕ ನಿಯಮ.]

ನ್ಯಾಷನಲ್ ಬುಕ್ ಟ್ರಸ್ಟ್ (ಹ್ರಸ್ವ ರೂಪದಲ್ಲಿ ಎನ್ಬೀಟಿ) ಒಂದು ದಿಲ್ಲಿ ಮೂಲದ ಸರಕಾರೀ ಪುಸ್ತಕೋದ್ಯಮ ಸಂಸ್ಥೆ. ನಾನು ಪುಸ್ತಕೋದ್ಯಮಕ್ಕೆ ಪ್ರವೇಶಿಸಿದ ಆರಂಭದಲ್ಲಿ (೧೯೭೦ರ ದಶಕ) ನನಗಿದರ ಪ್ರಕಟಣೆಗಳಲ್ಲಿ ಕನ್ನಡ ಪುಸ್ತಕಗಳು ಗೀತಾ ಬುಕ್ ಹೌಸ್ನಿಂದಲೂ ಇಂಗ್ಲಿಶ್ ಪುಸ್ತಕಗಳು ಅನ್ಯ ಖಾಸಗಿ ವಿತರಕರಿಂದಲೂ ತರಿಸಿ ಗೊತ್ತಿತ್ತು. ತಿಂಗಳು, ಎರಡು ತಿಂಗಳಿಗೊಮ್ಮೆ ಮಾರಿಹೋದ ಹಳತರಲ್ಲಿ ಬೇಡಿಕೆ ನೋಡಿಕೊಂಡು ತಲಾ ಎರಡು ಮೂರು ಪ್ರತಿಗಳಂತೆ ಮತ್ತೆ ಮತ್ತೆ ತರಿಸಿಕೊಳ್ಳುತ್ತಿದ್ದೆ. ಮರುಮುದ್ರಣ ಬಂದಾಗ ಒಮ್ಮೆಗೇ ಐದೋ ಹತ್ತೋ ತರಿಸಿ ಸಂಭ್ರಮಿಸುತ್ತಿದ್ದೆ. ಏನೇ ಇರಲಿ, ಆರಡಿ ಉದ್ದದ ಕಪಾಟಿನ ಒಂದು ಅಂಕಣವಿಡೀ ಎನ್ಬೀಟಿ ಪ್ರಕಟಣೆಗಳಿಗೆ ಮೀಸಲಿಟ್ಟಿದ್ದೆ. ಸಹಜವಾಗಿ ಗಂಭೀರ ಓದುಗರು (ಇಂಥವರು ಸಾಕಷ್ಟು ಇದ್ದರು) ಬಂದ ಕೂಡಲೇ ನೇರ ಕಪಾಟಿಗೆ ನಡೆಯುತ್ತಿದ್ದರು. ಹಲವು ಇಲಾಖೆಗಳು, ವಿದ್ಯಾಸಂಸ್ಥೆಗಳು ಎನ್ಬೀಟಿ ಪ್ರಕಟಣೆಗಳನ್ನು ಕೊಳ್ಳುವಲ್ಲಿ ತೀರ ನಿಶ್ಚಿಂತರಾಗುತ್ತಿದ್ದದ್ದು ಪರೋಕ್ಷವಾಗಿ ಎನ್ಬೀಟಿಯ ಗುಣಕ್ಕೆ ಸಂದ ಗೌರವ ಎನ್ನಬಹುದು. ಚಟುವಟಿಕೆಗಳ ವಿಸ್ತರಣೆ ವಿಕೇಂದ್ರೀಕರಣ ಇತ್ಯಾದಿಗಳ ಹೆಸರಿನಲ್ಲಿ ಎನ್ಬೀಟಿಯ ಪ್ರಾದೇಶಿಕ ಕಛೇರಿಯೇ ಬೆಂಗಳೂರಿಗೆ ಬಂದಿತು. ಮುಂದೆ ವಿತರಣೆಯಲ್ಲೂ ಏಕಸ್ವಾಮ್ಯ ಕಳೆಯುವಂತೆ ಜಿಲ್ಲೆ ತಾಲೂಕು ಕೇಂದ್ರಗಳವರೆಗೂ ಇದು ಹಲವು ಆಧುನಿಕ ಮಾರುಕಟ್ಟೆ ಆಮಿಷಗಳೊಂದಿಗೆ ತಲಾಷಿ ನಡೆಸಿತು. ೧೯% ಬಡ್ಡಿದರದ ಬ್ಯಾಂಕ್ ಸಾಲದಲ್ಲಿ ವ್ಯಾಪಾರ ನಡೆಸುತ್ತಿದ್ದಂಥ ನನ್ನಿಂದಲೂ ರೂ ೧೦೦೦ ನಿಬಡ್ಡಿ ಠೇವಣಿ ಪಡೆದು, ಪ್ರತಿನಿಧಿ ಸಂಖ್ಯೆ ಏರಿಸಿಕೊಂಡಿತು. ಮಂಗಳೂರಿನಂತಲ್ಲೂ ರಾಷ್ಟ್ರೀಯ ಪುಸ್ತಕ ಮೇಳ ನಡೆಸಿ ಜನರ ಕಣ್ಣು ಕೋರೈಸಿತು. ಆದರೆ ಇದು ನಂದುವ ಜ್ಯೋತಿಯ ಅಂತಿಮ ಹಂತ ಎಂಬ ತಿಳಿವಳಿಕೆ ನನಗೆ ಸ್ಪಷ್ಟವಾಯಿತು. ನನ್ನ ಮಟ್ಟಿಗೆ ಎನ್ಬೀಟಿಗೆ ಬಡಿದ ಲಕ್ವದ ಕತೆ ಹೀಗಿದೆ: