Showing posts with label ಚಂದ್ರಶೇಖರ ಎ.ಪಿ. Show all posts
Showing posts with label ಚಂದ್ರಶೇಖರ ಎ.ಪಿ. Show all posts

29 April 2020

ಹೋಗಿ ಬಲ್ಲಾಳರಾಯ ದುರ್ಗಕ್ಕೆ

(ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ ಭಾಗ ೫) 

ಲೇಖಕ: ಎ.ಪಿ. ಚಂದ್ರಶೇಖರ 

(ಚಿತ್ರಗಳು: ಕೀರ್ತಿ, ಮಂಗಳೂರು) 

[ಪಶ್ಚಿಮ ಘಟ್ಟದಲ್ಲಿ ನನ್ನ ಮೊದಲ ಹೆಜ್ಜೆ ಮೂಡಿಸುವ ದಿನ. ಮೈಸೂರಿನಿಂದ ಅದಕ್ಕೆಂದೇ ಬಂದ ಗೆಳೆಯ ವಿಶ್ವನಾಥ್ ಜತೆಗೆ ದಿಢೀರ್ ಸೇರ್ಪಡೆಯಾದವ, ಅಧಿಕೃತ ಪರ್ವತಾರೋಹಣಕ್ಕೇ ಅದೇ ಮೊದಲು ಪ್ರವೇಶ ಪಡೆದವ, ಸೋದರ ಮಾವನ ಮಗ ಎ.ಪಿ. ಚಂದ್ರಶೇಖರ. ಸಣ್ಣಾಳು, ಇನ್ನೂ ಚಡ್ಡಿ ಪ್ರಾಯ (೮/೯ನೇ ತರಗತಿ). ಆದರೆ ಔಪಚಾರಿಕ ವಿದ್ಯೆಯೊಡನೆ ಹಳ್ಳಿಯ ವಿದ್ಯೆಯಲ್ಲಿ ಅಪ್ಪನ ಗರಡಿಯಲ್ಲಿ (ನೋಡಿ: ಅಸಮ ಸಾಹಸಿ ಮರಿಕೆ ಅಣ್ಣ) ಪಳಗಿದವ ಎನ್ನುವುದೇ ಆತನ ಅರ್ಹತೆ. ಚಿಕ್ಕಪ್ಪ ಗೌರೀಶಂಕರರ ಪ್ಯಾಂಟ್ ಹಾಕಿ, ಬಡಕಲು ಹೊಟ್ಟೆಗೆ ಬೆಲ್ಟ್
ಕಾಯಿಸಿ, ನೇತುಬೀಳುವ ಪ್ಯಾಂಟ್ ಕಾಲುಗಳನ್ನು ಗೋಣಿ ಹಗ್ಗದಲ್ಲಿ ಎತ್ತಿ ಕಟ್ಟಿ, ಇನ್ಯಾರದೋ ಕ್ಯಾನ್ವಾಸ್ ಶೂಗೆ ಮೂರು ಉಣ್ಣೆ ಕಾಲ್ಚೀಲದಲ್ಲಿ ಬಿಗಿ ಕೊಟ್ಟು ಯಶಸ್ವಿಯಾಗಿ ನಡೆದಿದ್ದ. (ನೋಡಿ: ಗಡಿಬಿಡಿಯಲ್ಲಿ ಕುಮಾರಮುಡಿಗೆ) ಮುಂದೊಮ್ಮೆ ಹೀಗೇ ಮಳೆಗಾಲದ ಬಿರುಸಿನಲ್ಲಿ ನಾವು ಮೊದಲ ಬಾರಿಗೆ ಕೂಡ್ಲುತೀರ್ಥ ನೋಡಲು ಹೋಗುವಾಗಲೂ ಚಂದ್ರ ಜತೆಗಿದ್ದ. ಅಷ್ಟೇ ಅಲ್ಲ ಬೆಳೆದಿದ್ದ. ಕೂಡ್ಲುತೋಟದಲ್ಲಿ ನಾವು ಕಂಡ ಪೂರ್ಣ ಬಳ್ಳಿಯದೇ ಸೇತುವೆ ಕುರಿತು ‘ಅಟ್ಟೆ ಬೂರುದ ಕಟ್ಟೆ’ ಎಂದು ಉದಯವಾಣಿಗೆ ಒಂದು ಲೇಖನವನ್ನೂ ಬರೆಯುವಷ್ಟು ಪ್ರೌಢನಾಗಿದ್ದ. ಇಂಥವೇ ಉಮೇದುಗಳೊಡನೆ ಚಂದ್ರ ನಮ್ಮೊಡನೆ ಬಲ್ಲಾಳರಾಯನ ದುರ್ಗವನ್ನೂ ಅನುಭವಿಸಿದ, ವಯಸ್ಕರ ಶಿಕ್ಷಣ ಮಾಲೆಯವರ ಮಾಸಿಕ - ಪುಸ್ತಕ ಪ್ರಪಂಚದಲ್ಲಿ ಪ್ರಕಟವಾಗುವಂತೆ (ಆಗಸ್ಟ್ ೧೯೮೩) ಸಾಹಸಯಾನದ ಲೇಖನವನ್ನೂ ಬರೆದಿದ್ದ. ಅದರ ಪೂರ್ಣ ಪಾಠ ಈಗ ನಿಮ್ಮ ಮುಂದೆ.