Showing posts with label ಮಾನವ-ಚಂದ್ರನ ಮೇಲೆ. Show all posts
Showing posts with label ಮಾನವ-ಚಂದ್ರನ ಮೇಲೆ. Show all posts

04 June 2013

ಚಂದ್ರನ ನೈಸರ್ಗಿಕ ಪರಿಸ್ಥಿತಿ

(ಮಾನವ, ಚಂದ್ರನ ಮೇಲೆ ಕಂತು ೯ ಮತ್ತು ಅಂತಿಮ)

ಚಂದ್ರನ ನೈಸರ್ಗಿಕ ಪರಿಸ್ಥಿತಿಗಳ ವಿಚಾರ ವೀಕ್ಷಣೆ ಮತ್ತು ಪ್ರಯೋಗಗಳಿಂದ ತಿಳಿದಿರುವುದರ ಸಾರಾಂಶವಿಷ್ಟು.

ಹೆಸರು
ಸರಾಸರಿ ವ್ಯಾಸ (ಕಿ.ಮೀ)
ದ್ರವ್ಯರಾಶಿ ದ್ರವ್ಯರಾಶಿ ಭೂಮಿ =
ಸಾಂದ್ರತೆ ನೀರು =
ಆವರ್ತನ ಅವಧಿ
ಪರಿಭ್ರಮಣ ಅವಧಿ
ಗುರುತ್ವಾಕರ್ಷಣ ಬಲ ಭೂಮಿ =
ಚಂದ್ರ
೩೪೬೦
.೦೧೨
.೩೩
೨೭.೩೨ದಿ
೨೭.೩ದಿ
/
ಭೂಮಿ
೧೨೬೪೦
.೫೨
೨೩ಗಂ.೫೬ಮಿ.
೨೩೬.೨೪ದಿ

ಭೂಮಿಯಿಂದ ಚಂದ್ರನ ಸರಾಸರಿ ದೂರ ೩,೮೨,೨೦೦ ಕಿಮೀ.

ಚಂದ್ರನಲ್ಲಿ ಆಂತರಿಕ ಬಲಗಳು ಇವೆಯೇ ಇಲ್ಲವೇ ಇದು ವಿವಾದದಲ್ಲಿದೆ. ಜ್ವಾಲಾಮುಖಿಗಳು, ಸಾಗರಗಳ ಪ್ರಹಾರ, ವಾಯುಮಂಡಲದ ಹೊಡೆತ ಇತ್ಯಾದಿ ಭೂಮಿಯ ಆಂತರಿಕ ಬಲಗಳು. ಕೊನೆಯವೆರಡು ಹೇಗೂ ಚಂದ್ರನಲ್ಲಿಲ್ಲ. ಜ್ವಾಲಾಮುಖಿಗಳ ಅಸ್ತಿತ್ವದ ಬಗ್ಗೆ ಸ್ಪಷ್ಟ ಪುರಾವೆ ಲಭಿಸಿಲ್ಲ. ಎಂದರೆ ಚಂದ್ರಗರ್ಭ ಸಹ ಘನೀಭವಿಸಿ ಹೋಗಿದೆಯೇ (ಭೂಮಿಯಲ್ಲಿ ಹೀಗಾಗಿಲ್ಲವಷ್ಟೆ?) ಅಥವಾ ಚಂದ್ರನ ತೊಗಟೆ ಸಾಕಷ್ಟು ದಪ್ಪ ಮತ್ತು ಗಡಸಾಗಿದ್ದು ಸುಪ್ತ ಜ್ವಾಲಾಮುಖಿಗಳ ಪ್ರಕಟಣೆಯನ್ನು ಅದುಮಿಟ್ಟಿದೆಯೇ ಉತ್ತರ ಖಚಿತವಿಲ್ಲ. ಚಂದ್ರನ ಮೇಲೆ ಬಾಹ್ಯ ಬಲಗಳ ಪ್ರಹಾರ ಭೂಮಿಯ ಮೇಲೆ ಆಗುವುದಕ್ಕಿಂತ ಅದೆಷ್ಟೊ ಪಾಲು ಹೆಚ್ಚು. ಒಂದನೆಯ ಹೊಡೆತ ಸೂರ್ಯನಿಂದ. ಸೌರಶಕ್ತಿ (ಎಂದರೆ ವಿದ್ಯುತ್ಕಾಂತ ತರಂಗಗಳ ಸಂಕೀರ್ಣ ಮೊತ್ತ) ಅವ್ಯಾಹತವಾಗಿ ಆಕಾಶದ ಎಲ್ಲೆಡೆಗೆ ಚೆಲ್ಲುತ್ತಿದೆ. ಆದರೆ ಭೂಮಿಯ ವಾಯುಮಂಡಲ ಇದರ ಎಷ್ಟೋ ಅಂಶಗಳನ್ನು ತಡೆದೋ ಹೀರಿಯೋ ಜರಡಿ ಕೆಲಸ ಮಾಡಿ ಹಿತಮಿತವೆನ್ನುವಷ್ಟನ್ನು ಮಾತ್ರ ನೆಲದೆಡೆಗೆ ಹರಿಯ ಬಿಡುವುದು. ಚಂದ್ರನಲ್ಲಿ ವಾಯುಮಂಡಲದ ರಕ್ಷಾ ಕವಚ ಇಲ್ಲದಿರುವುದರಿಂದ ಹಗಲಿನ ಭಾಗ ಸೌರಶಕ್ತಿಯ ಪೂರ್ಣ ಪ್ರವಾಹದಿಂದ ತೊಯ್ದಿರುತ್ತದೆ. ಅದೇ ವೇಳೆಯಲ್ಲಿ ರಾತ್ರಿಯ ಭಾಗಕ್ಕೆ ಉಪವಾಸ. ಇದರಿಂದ ಚಂದ್ರತಲದ ಕಲ್ಲು ಮಣ್ಣು ಲೋಹಾಂಶಗಳ ಮೇಲೆ ಆಗುವ ಪರಿಣಾಮಗಳು ತೀವ್ರ ಮತ್ತು ಭೂಮಿಯ ಮೇಲಿನ ಪರಿಣಾಮಗಳಿಗಿಂತ ಬೇರೆ. ಎರಡನೆಯ ಹೊಡೆತ ಉಲ್ಕೆಗಳಿಂದ. ಭೂಮಿಗೆ ವಾಯು ಕವಚವಿರುವುದರಿಂದ ನಮಗೆ ಉಲ್ಕೆಗಳಿಂದ ರಕ್ಷೆ ಇದೆ. ಆದರೆ ಚಂದ್ರ ತಲದ ಮೇಲೆ ಚಿಕ್ಕ ದೊಡ್ಡ ಉಲ್ಕೆಗಳ ಅವಿಚ್ಛಿನ್ನ ಪ್ರಹಾರ ನಡೆದಿರುವುದು. ಚಂದ್ರನ ಹೊರಮೈ ಮೇಲೆ ಕಾಣುವ ಸಿಡುಬು ಕಲೆಗಳಂಥ ಚಿಕ್ಕ ಗುಳಿಗಳು, ಕೂಪಗಳು ಇಂಥ ಬಡಿತಗಳಿಂದಾಗಿರಬಹುದು. ಗಡಸು ತೊಗಟೆಯ ಮೇಲೆ ಈ ತರದ ಗಾಯಗಳಾಗುವುದು ಸಾಧ್ಯವಿಲ್ಲ; ತೊಗಟೆ ಮೆದುವಾಗಿದ್ದಾಗ ಇವು ಆಗಿರಬಹುದು. ಆದ್ದರಿಂದ ಗುಳಿಗಳ ಕೂಪಗಳ ರಚನೆ, ಪ್ರಾಯ ಮುಂತಾದವುಗಳ ವಿಶ್ಲೇಷಣೆ ಚಂದ್ರನ ರಚನೆಯನ್ನು ವಿವರಿಸಬಹುದೆಂಬ ನಿರೀಕ್ಷೆ ಇದೆ. ಕೂಪ ಮತ್ತು ಗುಳಿಗಳು ಚಂದ್ರನ ಜ್ವಾಲಾಮುಖಿಗಳ ಸ್ಫೋಟನೆಯಿಂದಲೂ ಆಗಿರಬಹುದೆಂದು ಕೆಲವರ ಮತ. ಹಿಂದೊಮ್ಮೆ ಕ್ರಿಯಾಪಟುಗಳಾಗಿದ್ದ ಜ್ವಾಲಾಮುಖಿಗಳಿಂದ ಪ್ರವಹಿಸಿದ ಲಾವಾರಸ ಆಕಾರ ರಹಿತ ಕೊರಕಲು ಕಣಿವೆಗಳಿಗೆ ಲೇಪನಗೊಂಡು ಕೂಪಗಳಾಗಿರಬಹುದೆಂದು ಅವರ ವಾದ. ಈ ಕೂಪಗಳ ಗಾತ್ರ ರೂಪ ಬದಲಾದದ್ದನ್ನು ಗಮನಿಸಲಾಗಿದೆ. ಪೂರ್ಣ ಚಂದ್ರಗ್ರಹಣ ಕಾಲದಲ್ಲಿ ಕೆಲವು ಕೂಪಗಳು ಸ್ವಯಂ ಪ್ರಭೆ ಬೀರಿವೆ. ಅವುಗಳ ಒಳಗೆ ಇರುವ ಲೋಹಾಂಶಗಳ ವಿಶ್ಲೇಷಣೆ ಸಾಕಷ್ಟು ಆದ ಮೇಲೆ ಇದರ ಕಾರಣ ತಿಳಿಯಬಹುದು

21 May 2013

ಮುಂದಿನ ಕತೆ


(ಮಾನವ, ಚಂದ್ರನ ಮೇಲೆ ಕಂತು ೮)

ಅಪೊಲೊ ೧೧ರ ಜಯಭೇರಿ ನೆನಪಿನ ನೇಪಥ್ಯಕ್ಕೆ ನಿರ್ಗಮಿಸುವ ಮೊದಲೇ ಅಪೊಲೊ ೧೨ ಮೊಳಗು ಕೇಳಿಸಿತು. ಹೀಗಾಗಿ ಹಿಂದಿನ ನಾಟಕೀಯತೆ ನವ್ಯತೆ ರೋಮಾಂಚಕತೆ ಇದಕ್ಕೆ ಲಭಿಸಲಿಲ್ಲ. ಆದ ಮಾತ್ರಕ್ಕೆ ಇದು ಸಾಧಿಸಿದ ವಿಜಯ ಕಡಿಮೆ ಎಂದು ಭಾವಿಸಬಾರದು. ಸ್ಥೂಲವಿವರ ಹೀಗಿದೆ. ಯಾನಿಗಳು ಮೂವರು. ನಾಯಕ ಚಾರ್ಲ್ಸ್ ಕಾನ್ರಾಡ್ (೩೯). ಆಕಾಶಮಾನವರಲ್ಲಿ ಬಲು ಕುಳ್ಳನಾದ ಇವನು ಚಂದ್ರನ ಮೇಲೆ ಕಾಲಿಟ್ಟೊಡನೆ “ನನಗೆ ಬಲು ದೊಡ್ಡವನೆಂದೆನಿಸಿತು” ಎಂದು ಉದ್ಗರಿಸಿದ; ಮುಂದುವರಿಯುತ್ತ “ಅದು ನೀಲ್‌ನಿಗೆ ಪುಟ್ಟ ಹೆಜ್ಜೆ. ಆದರೆ ನನಗೆ ಬಲು ಉದ್ದವಾದದ್ದು” ಎಂದು ನೀಲ್ ಆರ್ಮ್‌ಸ್ಟ್ರಾಂಗ್‌ನ ಮೊದಲ ಮಾತಿನ ಅಣಕ ಮಾಡಿದ. ಅಲನ್ ಎಲ್.ಬೀನ್ (೩೭) ಕಾನ್ರಾಡನ ಹಿಂದೆ ಕಾಲೂರಿದ (ಈ ಸಲ ಎರಡನೆಯ ಒಟ್ಟಾಗಿ ನಾಲ್ಕನೆಯ) ಆಕಾಶಮಾನವ. ರಿಚರ್ಡ್ ಎಫ್. ಗಾರ್ಡನ್ (೪೦) ಮಾತೃ ನೌಕೆಯ ಚಾಲಕ. ಆದ್ದರಿಂದ ಅವನು ಚಂದ್ರ ಕಕ್ಷೆಯಲ್ಲಿಯೇ ಇದ್ದ.

30 April 2013

ಚಂದ್ರನ ಮೇಲ್ಮೈ


(ಜಿ.ಟಿ.ನಾ ಅವರ ಮಾನವ, ಚಂದ್ರನ ಮೇಲೆ ಪುಸ್ತಕದ ವಿ-ಧಾರಾವಾಹಿ ಕಂತು ಏಳು)

ಮುಂದಿನ ಕತೆಯ ಸ್ಪಷ್ಟತೆಗಾಗಿ ಚಂದ್ರನ ಮೇಲ್ಮೈಯ ಸ್ವಲ್ಪ ಹೆಚ್ಚು ವಿವರ ತಿಳಿದಿರುವುದು ಒಳ್ಳೆಯದು. ದೂರದ ಚಂದ್ರ ಹೇಗೆಯೇ ಕಾಣಲಿ, ಕವಿ ಕಲ್ಪನೆ ಅದನ್ನು ಹೇಗೆಯೇ ವಿವರಿಸಲಿ ವಾಸ್ತವಿಕ, ಚಂದ್ರ ಭಿನ್ನ. ಆಳವಾದ ಕೂಪಗಳು, ಅಸಂಖ್ಯಾತ ಕುಳಿಗಳು, ಕಡಿದಾದ ಪರ್ವತಗಳು, ಕಲ್ಲು, ಬಂಡೆ, ದೂಳಿನ ರಾಶಿ ರಾಶಿ - ಇವು ಚಂದ್ರನ ಹೊರಮೈ ನಿವಾಸಿಗಳು. ಇಂಥ ಅಸಮಾನತೆಗಳ ಪರಿಣಾಮ ನಮಗೆ ಚಂದ್ರನ ಮೇಲೆ ಕಾಣುವ ಕಲೆಗಳು, ಮೊಲ, ಇತ್ಯಾದಿ. ಒಂದು ಕಾಲದಲ್ಲಿ ಬರಿಗಣ್ಣಿಂದ ನೋಡಿ, ದೂರದರ್ಶಕಗಳಿಂದ ಹೆಚ್ಚು ವಿವರ ಸಂಗ್ರಹಿಸಿ, ಅವುಗಳಿಗೆ ಸಾಕಷ್ಟು ಕಲ್ಪನೆಯ ಮೆರುಗು ಮೆತ್ತಿ ಚಂದ್ರ ಲೋಕದಲ್ಲಿ ಸಮುದ್ರ, ಹಚ್ಚ ಹಸುರು ಕಾಡು ಮುಂತಾದ ಭೂಮಿಯ ತದ್ರೂಪಗಳನ್ನೇ ಮನುಷ್ಯ ಕಂಡ. ಅಂದು ನೀಡಿದ ಹೆಸರುಗಳು ವಾಸ್ತವಿಕಾರ್ಥಗಳನ್ನು ಕಳೆದುಕೊಂಡಿದ್ದರೂ ಐತಿಹಾಸಿಕ ಸಂಕೇತಗಳಾಗಿ ಇಂದಿಗೂ ಉಳಿದುಕೊಂಡಿವೆ. ಚಂದ್ರ ಬಿಂಬದಲ್ಲಿ ಕಪ್ಪಾಗಿ ಕಲೆಗಳಂತೆ ತೋರುವ ಪ್ರದೇಶಗಳು ಹೋಲಿಕೆಯಿಂದ ಇತರ ಪ್ರದೇಶಗಳಿಗಿಂತ ತಗ್ಗಿನಲ್ಲಿವೆ. ಮಾರೇ (ಅಂದರೆ ಸಮುದ್ರ ಎಂದರ್ಥ) ಟ್ಯಾಂಕ್ವಿಲ್ಲಿಟ್ಯಾಟಿಸ್, ಮಾರೇ ನೆಕ್ಟಾರಿಸ್, ಮಾರೇ ಇಂಬ್ರಿಯಂ ಮುಂತಾದುವು ಈ ಕಾಲ್ಪನಿಕ ಸಮುದ್ರಗಳು. ಆಲ್ಪ್ಸ್ ಎಪಿನೈನ್, ಕೌಕಸಸ್, ಲೆಬ್‌ನಿಟ್ಸ್ (ಎತ್ತರ ೩೦,೦೦೦ ಅಡಿ) ಮುಂತಾದುವು ಪರ್ವತಗಳು. ಟೈಕೋ, ಕ್ಲೇವಿಯಸ್ ಮುಂತಾದುವು ಕೂಪಗಳು. ಆಕಾಶದಲ್ಲಿ ಕಲ್ಲುಗಳ, ಬಂಡೆಗಳ, ಲೋಹಗಟ್ಟಿಗಳ ಯಾದೃಚ್ಛಿಕ ಚಲನೆಯಿದೆ. ಇವು ವಿಶ್ವದಲ್ಲಿ ಗತಿಸಿಹೋದ ನಕ್ಷತ್ರಗಳ ಗ್ರಹಗಳ ಅವಶೇಷಗಳಾಗಿರಬಹುದೆಂದು ಊಹೆ. ಇಂಥವು ಒಂದು ಗ್ರಹದ ಸಮೀಪ ‘ಅತಿಕ್ರಮ ಪ್ರವೇಶ’ ಮಾಡಿದಾಗ ಆ ಗ್ರಹದ ಗುರುತ್ವಾಕರ್ಷಣ ಬಲದಿಂದ ಪ್ರಭಾವಿತವಾಗುತ್ತವೆ.  ಗ್ರಹದ ತಳದೆಡೆಗೆ ಏರುತ್ತಿರುವ ವೇಗದಿಂದ ಧಾವಿಸಿ ಬಡಿದು ನುಚ್ಚುನುರಿಯಾಗುವುವು. ಭೂಮಿಯನ್ನು ಆವರಿಸಿರುವ ವಾಯುಮಂಡಲ ಇಂಥ ಅನಗತ್ಯ ಅನಿರೀಕ್ಷಿತ ಅತಿಥಿಗಳ ಹೊಡೆತದಿಂದ ಮನುಷ್ಯರನ್ನು ರಕ್ಷಿಸುತ್ತದೆ. ಉಲ್ಕೆಗಳು ಉರಿದು ವಾಯುಮಂಡಲದ ಎತ್ತರದಲ್ಲಿಯೇ ನಾಶವಾಗಿ ಹೋಗುತ್ತವೆ. ವಾಯು ಕವಚವಿಲ್ಲದ ಚಂದ್ರನಲ್ಲಿ ಇಂಥ ರಕ್ಷಣೆ ಇಲ್ಲ. ಚಂದ್ರತಲದ ಕುಳಿಗಳು ಕೂಪಗಳು ಉಲ್ಕೆಗಳ ನಿರಂತರ ಪ್ರಹಾರದಿಂದಾಗಿರಬಹುದು. ಒಂದು ಕಾಲದಲ್ಲಿ ಮಿದುವಾಗಿದ್ದ ಚಂದ್ರನ ಮೈಮೇಲೆ ಈ ಕಾರಣದಿಂದ ಶಾಶ್ವತ ಕಲೆಗಳಾಗಿರಬೇಕು ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ಚಂದ್ರಕಂಪದ ಕೊಡುಗೆಯೂ ಇಲ್ಲಿ ಇದ್ದಿರಬಹುದು. ಇಂದೂ ಎಂದಿನಂತೆ ಉಲ್ಕಾ ಪ್ರಹಾರ ಚಂದ್ರನಿಗೆ ತಪ್ಪಿದ್ದಲ್ಲ.

16 April 2013

ಆರ್ಮ್‌ಸ್ಟ್ರಾಂಗ್ ಸಂಗಡಿಗರು

(ಮಾನವ, ಚಂದ್ರನ ಮೇಲೆ - ಆರನೇ ಕಂತು)

ನೀಲ್ ಎ. ಆರ್ಮ್‌ಸ್ಟ್ರಾಂಗ್ (೩೮) ಅಪೊಲೊ ೧೧ರ ನಾಯಕ. ಮೈಕಲ್ ಕಾಲಿನ್ಸ್ (೩೪) ಸಹಯಾನಿ. ಇವನು ಸಿಯೆಮ್ಮಿನ ಚಾಲಕ. ಎಡ್ವಿನ್ ಈ. ಅಲ್ಡ್‌ರಿಚ್ (೩೯) ಎಲ್ಲೆಮ್ಮಿನ ಚಾಲಕ. ನೌಕೆ ಎಷ್ಟು ಜಟಿಲ ರಚನೆಯೋ ಅಷ್ಟೇ ಜಟಿಲ ವಿಷಯ ಇವರ ಆರಿಸುವಿಕೆ ಮತ್ತು ಶಿಕ್ಷಣ. ಸಾಮಾನ್ಯತೆ ಅಸಾಮಾನ್ಯತೆಯ ಶಿಖರ ಏರಬೇಕಾದರೆ ಅಸಾಧಾರಣ ಮನೋದೈಹಿಕ ದಾರ್ಢ್ಯ ಮತ್ತು ಉದ್ದೇಶಪೂರ್ವಕ ಕ್ರಮಬದ್ಧ ಶಿಕ್ಷಣಗಳು ಮೇಳೈಸಬೇಕು - ಯೋಜನೆಯ ಮಾನವಾಂಶ ಇಲ್ಲಿದೆ. ಆಕಾಶನೌಕೆ ಎಷ್ಟೇ ಪರಿಷ್ಕಾರ ರಚನೆ ಆಗಿರಲಿ, ಗಣಕ ಯಂತ್ರಗಳೂ ನೆಲದ ಮೇಲಿನ ವಿಜ್ಞಾನಿಗಳ ತಂಡವೂ ಎಷ್ಟೇ ಉತ್ಕೃಷ್ಟವಾಗಿ ಪಥ ನಿರ್ದೇಶನ ಮಾಡಲಿ - ಆಕಾಶದ ಅನಂತ ವಿಸ್ತಾರದಲ್ಲಿ ಕೊನೆಯ ನಿರ್ಧಾರ ಯಾನಿಗಳದ್ದೇ. ಯಂತ್ರದ ಹಿಂದಿನ ಮನುಷ್ಯನ ಪಾತ್ರ ಬಲು ಮಹತ್ವದ್ದು. ನಿನ್ನ ಆಯುಧ ಅರಿತುಕೊ, ಸೈನಿಕಾ! ಎಂಬುದು ಸೈನ್ಯದ ಪ್ರಥಮ ಪಾಠ. ಆದ್ದರಿಂದ ಯಾನಿ - ನೌಕೆ- ಪರಿಸರ ಈ ಮೇಳ ನಿಷ್ಕೃಷ್ಟವಾಗಬೇಕು. ಇಲ್ಲಿ ಪರಿಸರದ ಮೇಲೆ ಮನುಷ್ಯನ ನಿಯಂತ್ರಣ, ಅಂಕೆ ಸಾಧ್ಯವಿಲ್ಲ. ಅಂದರೆ, ಗುರುತ್ವಾಕರ್ಷಣಬಲ, ವಾಯುಮಂಡಲ, ಚಂದ್ರನ ದೂರ, ಯಂತ್ರ ರಚನೆಗೆ ಲಭ್ಯವಾಗಿರುವ ಲೋಹಗಳು ಇತ್ಯಾದಿಗಳು ಪರಿಸರ. ಯಾನಿಯ (ಅಂದರೆ ಮನುಷ್ಯನ) ಇತಿಮಿತಿಗಳನ್ನು  ಲಕ್ಷ್ಯದಲ್ಲಿಟ್ಟುಕೊಂಡು, ಪರಿಸರವನ್ನು ಹೊಂದಿ ನೌಕೆಯ ರಚನೆ ಆಗಬೇಕು. ನೌಕೆಯ ವಿವರಗಳು ಈಗಾಗಲೇ ಹೇಳಿದೆ. ಯಾನಿಗಳು ಅನುಭವೀ ವಿಮಾನ ಚಾಲಕರಾಗಿರಬೇಕು (ಪೈಲಟ್‌ಗಳು). ಅತಿದೂರದ ಮಹಾವೇಗದ ವಾಯುಯಾನದ ಮನೋದೈಹಿಕ ಸಮಸ್ಯೆಗಳು, ಅಪಾಯಗಳು, ಪರಿಹಾರಗಳು ಅವರಿಗೆ ಮಾತ್ರ ತಿಳಿದಿರುತ್ತವೆ. ಇಂಥವರಿಗೆ ಮುಂದಿನ ಶಿಕ್ಷಣ ನೀಡುತ್ತಾರೆ.


02 April 2013

ತವರೂರ ದಾರಿಯಲಿ


ಮಾನವ, ಚಂದ್ರನ ಮೇಲೆ
ಲೇಖಕ: ಜಿ.ಟಿ. ನಾರಾಯಣ ರಾವ್
(ಕಂತು ಐದು)

ಎಲ್ಲ ವ್ಯವಸ್ಥೆಗಳು ಸಮರ್ಪಕವಾಗಿವೆ. ಹೊರಡಿನೆಲ.
ಸರಿನೌಕೆ.
ಇನ್ನುಳಿದದ್ದು ಅವರು ಭೂಮಿಗೆ ಮರಳಿದ ಕತೆ. ಈ ಪ್ರಯಾಣದಲ್ಲಿ ಹೊಸತು ಅಥವಾ ನಿರೀಕ್ಷೆ ವಿಶೇಷವಾಗಿರದಿದ್ದರೂ ಎದುರಿಸಬೇಕಾದ ಅಪಾಯವೇನೂ ಕಡಿಮೆ ಇರಲಿಲ್ಲ. ಯಾತ್ರಿಕರು ಸಜೀವರಾಗಿ ನೆಲದ ಮೇಲೆ ಕಾಲಿಡುವವರೆಗೂ ಚಂದ್ರಯಾನ ಯಶಸ್ವಿಯಾಯಿತೆಂದು ಹೆಮ್ಮೆಪಡುವಂತಿಲ್ಲ. ಇಲ್ಲವಾದರೆ ಶಸ್ತ್ರ ಚಿಕಿತ್ಸೆ ಯಶಸ್ವಿ, ರೋಗಿ ಉಳಿಯಲಿಲ್ಲಎಂಬಂತಾದೀತು. ಮರುಪ್ರಯಾಣದ ವಿವರವಿಷ್ಟು. ತಾರೀಕು ೨೫, ೧ ಗಂ. ೧೦ ಮಿ. ಆರಂಭ. ೨೫, ೧೫ ಗಂ. ೫೧ ಮಿ. ಭೂಮಿಯಿಂದ ೬,೬೦,೦೦೦ ಕಿಮೀ ದೂರ. ೨೬, ೧೫ ಗಂ. ೫೧ ಮಿ. ಭೂಮಿಯಿಂದ ೩,೩೦,೦೦೦ ಕಿಮೀ ದೂರ. ಮುಂದೆ ಬಾಹ್ಯ ವಾತಾವರಣ ಪ್ರವೇಶ (೨೫೦ ರಿಂದ ೩೦೦ ಕಿಮೀ), ಆಗಿನ ವೇಗ ಗಂಟೆಗೆ ೮೧,೨೭೬ ಕಿಮೀ. ಕ್ಷಣ ಕ್ಷಣ ಈ ವೇಗ ಭೂಮಿಯ ಗುರುತ್ವಾಕರ್ಷಣದಿಂದ ಏರುತ್ತಿದೆ. ಈ ಮರುಪ್ರವೇಶ ಒಂದು ಅಗ್ನಿ ಪ್ರವೇಶವೇ. ವಾಯುಮಂಡಲಕ್ಕೆ ನೌಕೆ ಪ್ರವೇಶಿಸುವ ಬಿಂದುವಿನಲ್ಲಿ ಒಂದು ಸ್ಪರ್ಶಕ ಎಳೆಯಬೇಕು. ಅದೇ ರೀತಿ ನೌಕೆಯ ಪಥವಾದ ವಕ್ರರೇಖೆಗೂ ಒಂದು ಸ್ಪರ್ಶಕ ಎಳೆಯಬೇಕು. ಇವೆರಡು ಸ್ಪರ್ಶಕಗಳ ನಡುವಿನ (ಲಘು) ಕೋನದ ಹೆಸರು ಮರುಪ್ರವೇಶ ಕೋನ. ಇದರ ಬೆಲೆ ೫.೪ ಡಿಗ್ರಿಗಳಿಗಿಂತ ಕಡಿಮೆ ಇದ್ದರೆ ವಾಯುಮಂಡಲದ ಹೊರಮೈ ಮೇಲೆ ನೌಕೆ ಕುಪ್ಪಳಿಸಿ ಬಾಹ್ಯಾಕಾಶಕ್ಕೆ ಉಚ್ಚಾಟನೆಗೊಳ್ಳುವುದು. .೪ ಡಿಗ್ರಿಗಳಿಗಿಂತ ಹೆಚ್ಚಿದ್ದರೆ ಅಂಥ ಪ್ರವೇಶ ಬಲು ತೀವ್ರ ಎನ್ನಿಸುತ್ತದೆ. ವಾಯು ಕಣಗಳಿಗೂ ನೌಕೆಗೂ ನಡುವೆ ಏರ್ಪಡುವ ಮಹಾ ಘರ್ಷಣೆಯಿಂದ ಜನಿಸುವ ಉಷ್ಣವನ್ನು ನೌಕೆ ಸಹಿಸಲಾರದು; ಉರಿದು ನಾಶವಾಗಿ ಹೋಗುವುದು. ಉಲ್ಕೆಗಳಿಗೆ ಒದಗುವ ದುರ್ಗತಿ ಇದೇ. ಬೂದಿ ಸಮಾಧಿ. ಅಪೊಲೊ ೮ ಸಾಧಿಸಿದ ಮರುಪ್ರವೇಶ ಕೋನ ೬.೪೩ ಡಿಗ್ರಿ. ಆ ಎತ್ತರ, ಆ ವೇಗದಲ್ಲಿ ಸಾಧಿಸಿದ ಈ ತಾಂತ್ರಿಕ ಯಶಸ್ಸು ಅದ್ಭುತ, ಅತ್ಯದ್ಭುತ. ಮುಂದೆ ಕಾದು ಕೆಂಪಗಾಗಿದ್ದ ಕೆಂಡದುಂಡೆ ಪಿಕಿಂಗ್, ಟೋಕಿಯೋ ನಗರಗಳ ಮೇಲೆ ಧಾವಿಸಿತು. ಆಗಲೇ ತೆರೆದುಕೊಂಡ ಪ್ಯಾರಾಚೂಟ್ಗಳು ಅದರ ವೇಗವನ್ನು ನಿಯಂತ್ರಿಸಿದುವು. ಪೆಸಿಫಿಕ್ ಸಾಗರದ ನಿಶ್ಚಿತ ವಲಯದಲ್ಲಿ ನೌಕೆ ನೀರಿಗೆ ಬಡಿದಪ್ಪಳಿಸಿತು - ಡಿಸೆಂಬರ್ ೨೭, ೧೦ ಗಂ. ೫೧ ಮಿ. ಯಾತ್ರಿಕರು ಸುರಕ್ಷಿತರಾಗಿ ಮರಳಿದರೆಂದು ತಿಳಿದಾಗ ಜನ ಅದುಮಿಟ್ಟ ಕಾತರತೆಯನ್ನು ನಿಶ್ವಸಿಸಿದರು.

19 March 2013

ರಾಕೆಟ್ ಮಾರಕಾಸ್ತ್ರ


ಮಾನವ, ಚಂದ್ರನ ಮೇಲೆ
ಲೇಖಕ: ಜಿ.ಟಿ. ನಾರಾಯಣ ರಾವ್
(ಕಂತು ನಾಲ್ಕು)

ಗೊಡ್ಡಾರ್ಡನ ಕನಸನ್ನು ತಮ್ಮ ಕನಸೇ ಎಂದು ಅತ್ಯುತ್ಸಾಹದಿಂದ ಸ್ವಾಗತಿಸಿದವರು ವಿಜ್ಞಾನಿಗಳ ಒಂದು ಕಿರಿತಂಡ. ಅದನ್ನು ಸಾಕಷ್ಟು ಧನ ಸಹಾಯದಿಂದ ಮತ್ತು ನಿಷ್ಠಾಪೂರ್ವಕ ದುಡಿಮೆಯಿಂದ ವಾಸ್ತವವಾಗಿಸಬೇಕು ಎಂದು ಅವರು ಪಣತೊಟ್ಟರು. ಇವರು ನಾಝೀ ಜರ್ಮನಿಯ ಪ್ರತಿಭಾನ್ವಿತ ವಿಜ್ಞಾನಿಗಳು. ಒಬ್ಬ ವಿಜ್ಞಾನಿ ಬರೆದಿದ್ದಾನೆ. “ಪ್ರಪಂಚದ ಇತರ ರಾಷ್ಟ್ರಗಳು ಗೊಡ್ಡಾರ್ಡನ ಸಂಶೋಧನೆಯನ್ನು ಅಲಕ್ಷಿಸಿದ್ದಾಗ, ತಮ್ಮ ನೆಲದ (ಅಮೆರಿಕಾದ) ಮೇಲೆಯೇ ವಿಶೇಷ ಮಹತ್ತ್ವಪೂರ್ಣ ಪ್ರಯೋಗಗಳು ಮುಂದುವರಿಯುತ್ತಿದ್ದರೂ ಅವುಗಳನ್ನು ಅರಿಯದಿದ್ದಾಗ ರಾಕೆಟ್ ಯಾನ ಕೇವಲ ಕನಸುಗಾರರ ಬುರುಡೆ ಎಂದು ಅದಕ್ಕೆ ಬೆಲೆ ನೀಡದಿದ್ದಾಗ ಜರ್ಮನಿಯ ವಿಜ್ಞಾನಿಗಳು ಗೊಡ್ಡಾರ್ಡನ ಸಿದ್ಧಾಂತಗಳಲ್ಲಿ ಭವಿಷ್ಯದ ಯುದ್ಧನಿರ್ಣಾಯಕ ಆಯುಧವನ್ನು ಕಂಡರು.” ಕ್ಯಾಪ್ಟನ್ ವಾಲ್ಟರ್ ಡಾರ್ನ್ ಬರ್ಗರ್ ಎಂಬ ಮಿಲಿಟೆರಿ ಅಧಿಕಾರಿಯ ಮುಂದಾಳುತನದಲ್ಲಿ ಡಾ. ವರ್ನರ್ ವಾಬ್ರಾ ಎಂಬ ತರುಣ ವಿಜ್ಞಾನಿಯ ನೆರವಿನಿಂದ (೧೯೩೨) ನಾಝೀ ಜರ್ಮನಿಯ ರಾಕೆಟ್ ಸಂಶೋಧನ ಯೋಜನೆ ತ್ವರಿತ ಗತಿಯಿಂದ ಮುಂದೆ ಸಾಗಿತು. ಹೀಗೆ ಬಲು ಚಿಕ್ಕ ಪ್ರಮಾಣದಲ್ಲಿ ಆರಂಭವಾದ ರಾಕೆಟ್ ಸಂಸ್ಥೆ ನಾಝೀ ಜರ್ಮನಿಯ ವರಿಷ್ಠ ಆಡಳಿತೆಯ ಪ್ರೋತ್ಸಾಹ ಅನುಮೋದನೆಗಳಿಂದ ಪೀಣ್ಮುಂಡ್ ಎಂಬ ಸ್ಥಳದಲ್ಲಿ ಗುಪ್ತವಾಗಿ ಪ್ರವರ್ಧಿಸಿತು. ಇಲ್ಲಿನ ಗುಪ್ತ ಸ್ಥಳದಲ್ಲಿದ್ದ ಜರ್ಮನರು ಹಗಲೂ ರಾತ್ರಿಯೂ ಎಡೆಬಿಡದೆ ದುಡಿದರು - ರಾಕೆಟ್ ಇಂಜಿನಿಯರಿಂಗ್‌ನಲ್ಲಿ ಬಲು ದೊಡ್ಡ ಸಾಧನೆ ಮಾಡಬೇಕೆಂದು ಅವರ ಛಲ. ಜರ್ಮನ್ ಭಾಷೆಯಲ್ಲಿ Vergeltungswaffe zwei ಅಂದರೆ ಪ್ರತೀಕಾರಾಸ್ತ್ರ - II ಎಂದು ಕರೆದರು. 

05 March 2013

ಚಂದ್ರಬೊಂಬೆಯಲ್ಲಿಗೆ ನೆಗೆಯಬೇಕಾದರೆ


ಮಾನವ, ಚಂದ್ರನ ಮೇಲೆ
ಲೇಖಕ: ಜಿ.ಟಿ. ನಾರಾಯಣ ರಾವ್
(ಕಂತು ಮೂರು)
ಬುದ್ಧಿ ಬಂದಾಗ ಮೊದಲ ಆಕರ್ಷಣೆ ಆಕಾಶ. ‘ಮನುಷ್ಯನಿಗೆ ಭೂಮಿ ತೊಟ್ಟಿಲು. ಸದಾ ನೀವು ತೊಟ್ಟಿಲಲ್ಲೇ ಉಳಿದೀರೇ!” ಎಂದು ರಷ್ಯಾ ದೇಶದ ರಾಕೆಟ್ ಪಿತಾಮಹ ಕಾನ್‌ಸ್ಟಾಂಟಿನ್ ಎಡ್ವರ್ಡೋವಿಚ್ ನಿಯೋಲ್ಕೋವ್‌ಸ್ಕಿ ಪ್ರಶ್ನಿಸಿದ್ದ (೧೮೯೮). ತೊಟ್ಟಿಲಿನ ತಳ ಹೇಗೂ ಇದ್ದದ್ದೇ. ಮೇಲೆ ನೆಗೆಯಬಹುದೇ? ಹಕ್ಕಿ ಹಾರುತ್ತಿಲ್ಲವೇ? ಮೋಡ ತೇಲುತ್ತಿಲ್ಲವೇ? ಚಂದ್ರ ಸೂರ್ಯ ನಕ್ಷತ್ರ ಜಾರುತ್ತಿಲ್ಲವೇ? ಆದರೆ ಒಂದು ವಿಚಾರ; ಮನುಷ್ಯ ದೇಹದ ರಚನೆ ನೆಲದ ಮೇಲೆ ಬಾಳಲು. ಹಾರಿದರೆ ಬೀಳುತ್ತಾನೆ. ಹೆಚ್ಚು ಹಾರಿದರೆ ಕಾಲು ಮುರಿದುಕೊಳ್ಳುತ್ತಾನೆ. ಆದ್ದರಿಂದ ಹಾರುವುದು ಬೀಳುವುದು ಎಂದರೇನು ಎಂದು ವಿಚಾರಿಸಿದ ಮನುಷ್ಯನಿಗೆ ಭೂಮಿಯ ಗುರುತ್ವಾಕರ್ಷಣ ಬಲ ಪರಿಚಯವಾಯಿತು.

19 February 2013

ತಾಯಿ ಮತ್ತು ಮಗಳು


ಮಾನವ, ಚಂದ್ರನ ಮೇಲೆ
ಲೇಖಕ: ಜಿ.ಟಿ. ನಾರಾಯಣ ರಾವ್
(ಕಂತು ಎರಡು)
ಮೇಲಿನ ಮಿಲಿಟೆರಿ ಕವಾಯಿತಿನಲ್ಲಿ ಭೂಮಿಯಿಂದ ವಿವಿಧ ಗ್ರಹಗಳ ದೂರಗಳು ಹೀಗಿವೆ (ದಶಲಕ್ಷ ಕಿಮೀಗಳಲ್ಲಿ) ಸೂರ್ಯನ ಕಡೆಗೆ - ಶುಕ್ರ ೪೦, ಬುಧ ೯೧.. ಸೂರ್ಯನ ವಿರುದ್ಧ ದಿಕ್ಕಿಗೆ ಮಂಗಳ ೭೭.೬ ಗುರು ೧೨೬೯ ಯುರೆನಸ್ ೨೭೦೪ ನೆಪ್ಚೂನ್ ೪೩೨೦ ಪ್ಲುಟೋ ೫೭೩೧.

ಭೂಮಿಯ ಉಪಗ್ರಹವಾಗಿರುವ ಚಂದ್ರನ ದೂರ ೩,೮೨,೪೦೦ ಕಿಮೀ. ಆಕಾಶದಲ್ಲಿ ಚಂದ್ರ ನಮಗೆಷ್ಟು ಸಮೀಪ! ಚಂದ್ರ ನಮ್ಮ ನೆರೆಮನೆ. ಶುಕ್ರದೂರ ಚಂದ್ರದೂರದ ನೂರರಷ್ಟಕ್ಕಿಂತಲೂ ಹೆಚ್ಚು. ಮಂಗಳದೂರ ಇನ್ನೂರರಕ್ಕಿಂತಲೂ ಹೆಚ್ಚು; ಶುಕ್ರ ಮಂಗಳಗಳು ನಮ್ಮ ನೆರೆ ಗ್ರಹಗಳು. ಆದ್ದರಿಂದ ಆಕಾಶಯಾನ ಅಂತರಗ್ರಹ ಪ್ರಯಾಣ ಮಾಡುವ ಮನುಷ್ಯನ ಮೊದಲ ಆಕಾಶ ನಿಲ್ದಾಣ ಸಮೀಪದ ಚಂದ್ರ. ವೈಜ್ಞಾನಿಕ ವೀಕ್ಷಣೆಗೆ ಚಂದ್ರನಷ್ಟು ಸುಲಭವಾಗಿ ದೊರೆಯುವ ಆಕಾಶಕಾಯ ಬೇರೊಂದಿಲ್ಲ. ಚಂದ್ರನಲ್ಲಿರುವ ಕಲೆಗಳು ಅಲ್ಲಿರುವ ವಿವಿಧ ಗಾತ್ರದ ಕೂಪಗಳಿಂದಾದವು. ಚಂದ್ರನ ಬೆಟ್ಟಗಳ ಎತ್ತರಗಳನ್ನು ನಿಖರವಾಗಿ ಅಳೆಯಲಾಗಿದೆ. ನಮ್ಮ ನೆರಳಿನ ಉದ್ದ ಸೂರ್ಯನ ಕೋನೋನ್ನತಿ ಇವನ್ನು ತಿಳಿದಾಗ ನಮ್ಮ ಎತ್ತರವನ್ನು ಗುಣಿಸಿ ಹೇಳಬಹುದು. ಇದೇ ಕ್ರಮದಿಂದ ಚಂದ್ರನ ಬೆಟ್ಟಗಳ ಎತ್ತರಗಳನ್ನು ಭೂಮಿಯಲ್ಲಿ ಕುಳಿತೇ ಅಳೆದಿದ್ದಾರೆ.

05 February 2013

ಮಾನವ, ಚಂದ್ರನ ಮೇಲೆ

ಮಾನವ, ಚಂದ್ರನ ಮೇಲೆ
ಲೇಖಕ: ಜಿ.ಟಿ. ನಾರಾಯಣ ರಾವ್
(ಕಂತು ಒಂದು)

[ಕರ್ನಾಟಕ ಸಹಕಾರೀ ಪ್ರಕಾಶನ ಮಂದಿರ, ನಿಯಮಿತ, ಬೆಂಗಳೂರು ಮುದ್ರಣ: ೧೯೭೦ ೮+೧೦೩ ಪುಟಗಳು ಬೆಲೆ ರೂ ಮೂರು. ನನ್ನ ತಂದೆ - ಜಿಟಿನಾ ಅವರ ಎಲ್ಲ ಕೃತಿಗಳನ್ನು ಅಂತರ್ಜಾಲಕ್ಕೇರಿಸಿ ಉಚಿತವಾಗಿ ಸಾರ್ವಜನಿಕಕ್ಕೆ ಒದಗಿಸುವ ಯೋಜನೆಯಲ್ಲಿ ‘ಭವಿಷ್ಯವಿಜ್ಞಾನ,ದನಂತರದ ಕೃತಿ ಇದು. Micro soft wordನ ೨೦ರ ಗಾತ್ರದ ಅಕ್ಷರಗಳಲ್ಲಿ ವಾರಕ್ಕೆ ಸುಮಾರು ೧೫-೨೦ ಪುಟ, ಅಂದರೆ ಮೂಲ ಪುಸ್ತಕದ ಅಧ್ಯಾಯ ಒಂದರ ತಾರ್ಕಿಕ ಕೊನೆಯಲ್ಲಿ ಕೊನೆಗೊಳ್ಳುವಂತೆ ಹೊಂದಿಸಿಕೊಂಡು ಧಾರಾವಾಹಿಯಾಗಿಸುತ್ತಿದ್ದೇನೆ - ಅಶೋಕವರ್ಧನ]

ಅಧ್ಯಾಯ ಒಂದು
ಖಗೋಳಶಾಸ್ತ್ರ ಕಂಡ ಚಂದ
ಕಲ್ಪನೆಯಲ್ಲಿ
“ಶಿಶುರಾಮನಾಗಸದಿ ಮೆರೆದ ಪೂರ್ಣೇಂದುವಂ ನೋಡಿ, ಮೋಹಿಸಿ, ಪಡೆಯೆ ಹಲುಬಿ, ಹಂಬಲಿಸಿ, ಕಾಡಿದನು ಕೌಸಲ್ಯೆಯಂ.” (ರಾಮಾಯಣ ದರ್ಶನಂ)

ಇಪ್ಪತ್ತನೆಯ ಶತಮಾನದ ದಶರಥ “ಶಿವ ಶಿವಾ, ತಿರೆಗರಸನಾದರೇನೊಂದು ಕೂಸಿನ ಬಯಕೆ ಬಡತನವನೊಡರಿಸಿತಲಾ! ತನ್ನ ಸಿರಿಯಿನಿತು ಪುಸಿಯಾಯ್ತೇ?” ಎಂದು ದುಃಖಿಸಬೇಕಾಗಿಲ್ಲ. ಮಗುವಿನ ಸಮೇತ ಆಕಾಶನೌಕೆಯಲ್ಲಿ ಕುಳಿತು ಚಂದ್ರಮಂಡಲದೆಡೆಗೆ ಹಾರಿದರೆ ಮುಂದಿನ ಎರಡು ದಿವಸಗಳಲ್ಲಿ ಅವರು ಗುರಿ ತಲುಪಿರುತ್ತಾರೆ. ಆದರೆ ಶಿಶುರಾಮ ತಾನು ಬಯಸಿದ ಚಂದ್ರ ಅದು - ಎಂದು ಖಂಡಿತವಾಗಿಯೂ ಒಪ್ಪಲಾರ. ಏರು, ತಗ್ಗು, ಗುಂಡಿಗುಳುಪುಗಳಿರುವ ಈ ಮರುಭೂಮಿಯನ್ನಲ್ಲ ತಾನು ಬಯಸಿದ್ದು. ಎತ್ತರದಲ್ಲಿ ಇನ್ನೂ ಅಗಲವಾಗಿ ಪ್ರಕಾಶಮಾನವಾಗಿ ಕಾಣುವ (ಭೂಮಿಯ) ಬಿಂಬವನ್ನು ಎಂದು ಅತ್ತರೆ ದಶರಥನಿಗೆ (ಅಥವಾ ಕವಿಗೆ) ಹೊಸತೊಂದು ತಲೆನೋವು ಉಂಟಾಗದಿರದು. ಒಂದು ಮಿತಿಯಲ್ಲಿ ಕಲ್ಪನೆ ಚಂದ: ಅದರ ಬೆನ್ನೇರಿ ಹೋದ ವಾಸ್ತವಿಕತೆ ಕಾಣುವುದು ಬೇರೇನನ್ನೋ!