Showing posts with label ಕಪ್ಪೆ ಶಿಬಿರಗಳು. Show all posts
Showing posts with label ಕಪ್ಪೆ ಶಿಬಿರಗಳು. Show all posts

28 June 2018

ಮಣ್ಣಪಾಪು ಮನೆ ಮತ್ತು ಕಪ್ಪೆ ಶಿಬಿರ


ನಾವು ಬೆಳಿಗ್ಗೆ ಹತ್ತು ಗಂಟೆಗೆ ಕಾರೇರಿ ಮಂಗಳೂರು ಬಿಟ್ಟೆವು. ಉಡುಪಿ ಹೆದ್ದಾರಿಯೋಟಕ್ಕೆ ಪಡುಬಿದ್ರೆಯಲ್ಲಿ ಬಲ ಹೊರಳಿಕೆ, ಬೆಳ್ಮಣ್ಣಿನಲ್ಲಿ ಚಾ ವಿರಾಮ. ನನ್ನ ಜತೆಗಿದ್ದ ಜೀವನ ಜತೆಗಾತಿ ದೇವಕಿಗೆ "ನಿಟ್ಟೆ-ಬಿಟ್ಟೆ, ಕಾರುಕಳ್ಳ, ಗೋಳಿಬಜೆ..." ನನ್ನ ಮಾಮೂಲೀ ಹಾಸ್ಯ ಉದ್ಗಾರಗಳು. ಅವನ್ನು ಕಳೆದು, ಕುದುರೆಮುಖ ರಾಷ್ಟ್ರೀಯ ಉದ್ಯಾನದ ತನಿಖಾಠಾಣೆಯಲ್ಲಿ ಓಟ ನಿಧಾನಿಸಿದೆವು. ನೇರ ಮುಂದುವರಿಯುವ, ಅಂದರೆ ಭಗವತಿ ಘಾಟಿ (ಕುದುರೆಮುಖ ನಗರಕ್ಕೆ ಹೋಗುವ ದಾರಿ) ಏರುವ ಸಂಗತಿ, ಕಳೆದ ಸುಮಾರು ನಲ್ವತ್ತು ವರ್ಷಗಳಲ್ಲಿ
ನಾನು ಮಾಡಿದ್ದಕ್ಕೆ ಲೆಕ್ಕವಿಲ್ಲ. ಆದರೆ ಅದು ಬಿಟ್ಟು, ಅಲ್ಲೇ ಬಲ ತಿರುಗುವ, ಅಂದರೆ ಕೈಕಂಬ ಮನ್ನಿಸಿ ಮಾಳದತ್ತ ಮುಖ ಮಾಡಿದ್ದು, ತೀರಾ ಈಚೆಗೆ ಮತ್ತು ಇದು ಎರಡನೇ ಸಲ. 
ತಿಂಗಳ ಹಿಂದಷ್ಟೇ ಗೆಳೆಯ ಡಾ| ಕೃಷ್ಣಮೋಹನ ಪ್ರಭು (ಕೃಶಿ) ಜೊತೆಯಲ್ಲಿ ಕಾರಿನಲ್ಲಿ ಮೂಡಬಿದ್ರೆಯಿಂದ ಹೀಗೇ ಬಂದಿದ್ದೆ. ದಾರಿ ಸ್ವಲ್ಪ ಒಳಹೋದಂತೆ ನೇರ ಇಳಿಜಾರಾಗಿತ್ತು. ಆಗ ಒಮ್ಮೆಲೆ ಎದುರಿನ ಕಡುಹಸಿರ ವಿಸ್ತಾರ ಕಣಿವೆ, ತೆಳು ಬಿಸಿಲಿನಲ್ಲಿ ಕಣ್ಣ ತುಂಬಿತ್ತು. ದಪ್ಪನಾಗಿ ಹಾಸಿದ್ದ

05 October 2017

ಜೀವವೈವಿಧ್ಯ ಗುರುತಿಸುವಲ್ಲಿ......

ವರ್ಷಕ್ಕೊಂದು ಕಪ್ಪೆ ಶಿಬಿರ ಆರೇನೋ ಪೂರೈಸಿತು (ನೋಡಿ: ಕಪ್ಪೆ ಶಿಬಿರಗಳು). ಆದರೆ ಅದು ಇಷ್ಟೂ ಕಾಲ ಮಳೆಗಾಲದ ಮೊದಲ ಹೆಜ್ಜೆಯ ಜೀವ ಕಲಾಪದ ದಾಖಲೆ ಮಾತ್ರ ಆಯ್ತು. ವರ್ಷದ ಇತರ ಋತುಮಾನಗಳಲ್ಲಿ ಇದೇ ಕಪ್ಪೆಗಳ ವರ್ತನೆ ಏನು? ಅದಕ್ಕೂ ಮುಖ್ಯವಾಗಿ ಒಟ್ಟಾರೆ ಪ್ರಾಣಿಪರಿಸರವನ್ನು ಗಾಢವಾಗಿ ಪ್ರಭಾವಿಸುವ ಸಸ್ಯಪರಿಸರದ ತಿಳುವಳಿಕೆ ಗಳಿಸಿದರೆ ಹೇಗೆ? ಎಂಬ ಪ್ರಶ್ನೆಗಳಿಗೆ ತೀರಾ ಸಣ್ಣ ಉತ್ತರವಾಗಿ, ಗುಬ್ಬಿ ಲ್ಯಾಬ್ಸ್ ಮೊನ್ನೆ ಮೂರು ದಿನ (ಸೆಪ್ಟೆಂಬರ್ ೧೫ರಿಂದ ೧೭, ೨೦೧೭) ಮತ್ತೆ ಬಿಸಿಲೆಯ ಅಶೋಕವನ ಕೇಂದ್ರಿತವಾಗಿ ಇನ್ನೊಂದೇ

21 June 2017

ಬಿಸಿಲೆಯಲ್ಲಿ ಪ್ರೇಮ ಪರ್ವ


“ಬಾರೇ ಬಾರೇ ಚಂದದ ಚೆಲುವಿನ ತಾರೇ! ಬಾರೇ ಬಾರೇ....” ಕೊಳದ ನೀರಿನಲ್ಲಿ ಎತ್ತರಿಸಿದ ಕಣ್ಣನ್ನಷ್ಟೇ ಬಿಟ್ಟು ಹಾಡುತ್ತಿದ್ದನೊಬ್ಬ! ಅಂಚಿನ ಗೊಸರಿನ ಮೇಲೆ ಒಂಬತ್ತು ಜೋಡಿ ಬೆರಳುಗಳ ಮುದ್ರೆ ಬೀಳುವಷ್ಟೇ ಹಗುರಕ್ಕೆ ಕುಳಿತು ಧ್ವನಿ ಸೇರಿಸಿದ್ದನಿನ್ನೊಬ್ಬ. ತುಸು ಆಚೆಗೆ ಹುಲ್ಲಿನ ಎಡೆಯಲ್ಲಿ ಮೈಮರೆಸಿಯೂ ಮರೆತಂತೆ ಹಾಡುವವ ಮಗುದೊಬ್ಬ. ಪೊದರ ತಳದ ಕೊಳೆತ ಎಲೆಗಂಟಿದ ಕಸಕ್ಕೂ ಕಿರಿದಾದ ಮೂರ್ತಿಯಾದರೇನು ಗಾನಗೋಷ್ಠಿಗೆ ಕುಂದಿಲ್ಲದ ಎತ್ತರದ ಧ್ವನಿಯವನೀತ, ಕೆರೆಗೆ ವಾಲಿದ ಹಸಿರಗೆಲ್ಲಿನಲ್ಲಿ ಜೋಕಾಲಿಯಾಡುತ್ತ ಸಮೂಹಗಾನಕ್ಕೆ ಕಂಠಕೊಟ್ಟವನಾತ. ಹಸಿರಂಗಿ ಹಳದಿ ಚಡ್ಡಿಯವನಂತೂ ಗಾನಲಹರಿಯಲ್ಲಿ ಆ ಎತ್ತರದಿಂದ ಇನ್ನೊಂದೇ ಬಿತ್ತರಕ್ಕೆ ತೇಲಾಡುತ್ತಿದ್ದ. ಒಡಕು ಬಂಡೆಯ ಇರುಕಿನಲ್ಲಿ, ಭಾರೀ ಮರದ ಬೊಡ್ಡೆಗಂಟಿ, ಸುಯ್ಗುಟ್ಟುವ ವಾಟೆಗೆ ನೇತುಬಿದ್ದಂತೆಲ್ಲ ಕಂಡ, ಕಾಣದ ತಾಣಗಳಿಂದ, ಸರ್ವವ್ಯಾಪೀ ಸ್ಥಿತಿಯಲ್ಲಿ, ಘೋರಾಂಧಕಾರವೇ ಮಧುರಭಾವ ತಳೆದಂತೆ, ಹನಿ ಕುಟ್ಟುವ ತಾಳಕ್ಕೆ, ಬಿಬ್ಬಿರಿಗಳು ಹಿಡಿದ ಶ್ರುತಿಗೆ ಪಲ್ಲವಿಸುತ್ತಿದ್ದ ರಾಗ ಒಂದೇ “ಬಾರೇ ಬಾರೇ ಬಾರೇ ಬಾರೇ......”

21 July 2015

ಬಿಸಿಲೆ ಕಾಡಿನ ಕೊನೆಯ ದಿನಗಳು!

(ಸೈಕಲ್ ಸಾಹಸಕ್ಕೆ ಮುಂದೆ ಅಲಭ್ಯ)

ರಾತ್ರಿಯಿಡೀ ಉಧೋ ಮಳೆ. ತುಸು ಬಿಟ್ಟಿತು ಎನ್ನುವಾಗ, ಅಲಾರಾಂ ನಾಲ್ಕೂವರೆ ಎಂದೊರಲಿತು. ದಡಬಡ ಹೊರಡುತ್ತಿದ್ದಂತೆ ಸುರತ್ಕಲ್ಲಿನಿಂದ ಅಭಿ ಚರವಾಣಿ ಮನೆ ಬಿಟ್ಟಿದ್ದೇನೆ, ಪಂಚೇರ್ ಕಿಟ್ ಮರೆತುಬಿಟ್ಟೆ. ಹಿಂದೆ ಹೋಗಿ ತರ್ಲಾ?” “ಬಿಡು, ಪರ್ವಾಗಿಲ್ಲ. ರೈಗಳು ಏನೋ ತರ್ತಾರೆನನ್ನ ಸಮಾಧಾನ. ಐದೂಐವತ್ತಕ್ಕೆ ನಾನೂ ಸೈಕಲ್ ಏರಿದೆ.
ದಾರಿಯೆಲ್ಲ ಮಳೆ ಹೊಯ್ದು ಚೊಕ್ಕ ತೊಳೆದಂತಿತ್ತು. ಸೂರ್ಯಮೇಶ್ಟ್ರು ಕಣ್ಣು ಕೆಕ್ಕರಿಸುವಾಗ, ಪಡ್ಡೆ ಮೋಡಗಳು ಅಡಗುಮೂಲೆಗೆ ಧಾವಿಸಿದ್ದವು. ಆದರೆ ಉಡುಪಿ - ಮಂಗಳೂರು ಹೆದ್ದಾರಿ ಇಷ್ಟು ಸರಳವಾಗಿರಲಿಲ್ಲ. ಅಲ್ಲಿ ಚತುಷ್ಚಕ್ರ (ಮತ್ತು ಅದಕ್ಕೂ ಮೀರಿದವು!) ವಾಹನಗಳಿಗೆ ಹಾವುನಡೆ ಅಭ್ಯಸಿಸಲು ಆಚೆಗೂ ಈಚೆಗೂ ಕೈಕಂಬ ಬದಲಿಸುತ್ತಲೇ ಇರುತ್ತಾರೆ, ಜಲಕ್ರೀಡೆಯಾಡಲು ಅಸಂಖ್ಯ ಕೊಳಗಳನ್ನೂ ಮಾಡಿದ್ದಾರೆ. ಹೀಗಾಗಿ ಅದರಲ್ಲಿ ಸುರತ್ಕಲ್ ಸಮೀಪದಿಂದ, ಅಂದರೆ ಸುಮಾರು ಹನ್ನೆರಡು ಕಿಮೀ ಸೈಕಲ್ ತುಳಿಯಬೇಕಾದ ಅಭಿಗೆ, ಮಳೆ ಬಿಟ್ಟರೂ ಇರಿಚಲು ಬಿಡದ ಕಾಟ! ಆದರೂ ಆರು ಕಳೆದು ಎರಡೋ ಮೂರೋ ಮಿನಿಟಿನಲ್ಲಿ ಅವನು ನಂತೂರು ತಲಪಿದಾಗ, ನಮ್ಮ ಬಿಸಿಲೆ ಮಹಾಯಾನಕ್ಕೆ ಜೀವ ಬಂದಿತ್ತು.

19 July 2013

ಅದ್ವಿತೀಯ ಕಪ್ಪೆ ಶಿಬಿರ - ೨

[ವಿಶೇಷ ಸೂಚನೆ: ಇದನ್ನು ಓದುವ ಮುನ್ನ ೭-೯-೧೨ ಮತ್ತು ೧೪-೯-೧೨ರಂದು ನಾನಿಲ್ಲೇ ಎರಡು ಭಾಗಗಳಲ್ಲಿ ಪ್ರಕಟಿಸಿದ ಮಂಡೂಕೋಪಖ್ಯಾನವನ್ನು ಮತ್ತೊಮ್ಮೆ ಓದಿಕೊಳ್ಳುವುದು ಉತ್ತಮ]



“ಬಿಸಿಲೆಯಲ್ಲಿ ಕಪ್ಪೆ ಶಿಬಿರ ನಡೆದದ್ದು ಕಳೆದ ಮಳೆಗಾಲದ ಕೊನೇ ಪಾದ. ಈಗ ಹೊಸ ಮಳೆಗಾಲದ ಮೊದಲಪಾದ. ವೈಜ್ಞಾನಿಕ ಅಧ್ಯಯನಾಸಕ್ತರು ಋತುವೊಂದರಲ್ಲಿ ಕನಿಷ್ಠ ಮೂರು ಹಂತಗಳಲ್ಲಿ ಕ್ಷೇತ್ರ ಕಾರ್ಯ ನಡೆಸಿದರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಈಗ ನಡೆಸೋಣವೇ” ಸ್ವತಃ ಡಾ| ಕೆವಿ ಗುರುರಾಜ್ (ಕೆವಿಜಿ) ಮೊದಲ ಶಿಬಿರದ ‘ಕ್ಯಾಪ್ಟನ್’ ದೀಪಿಕಾರಿಗೆ ಪತ್ರ ಬರೆದರು. ಅದನ್ನು ಸಂತೋಷದಿಂದಲೇ ಸ್ವಾಗತಿಸಿದೆವು. ದೀಪಿಕಾ ಮತ್ತು ‘ವೈಸ್ ಕ್ಯಾಪ್ಟನ್’ ವಿವೇಕ್ ಹದಿನೈದು ದಿನಗಳ ಮೊದಲೇ ಊಟ ವಾಸಗಳ ವ್ಯವಸ್ಥೆಗೆ ಬಿಸಿಲೆ ‘ಸಂಬಂಧಿ’ಗಳನ್ನು ದೂರವಾಣಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಬಿಸಿಲೆ ಮಾಮೂಲೀ ದಿನಗಳಲ್ಲೇ ಚರವಾಣಿಗೆ ಬಹುತೇಕ ‘ಅವ್ಯಾಪ್ತ’ವಾದದ್ದು. ಮಳೆಗಾಲದ ಪರಿಣಾಮಗಳೊಡನೆ ಸ್ಥಿರವಾಣಿ ಸಂಪರ್ಕವೂ ಅಸಾಧ್ಯವಾದದ್ದು ಆಶ್ಚರ್ಯವೇನೂ ಅಲ್ಲ. ಇವರು ಖುದ್ದು ಹೋಗುವುದು ಅನಿವಾರ್ಯವಾಯಿತು. ದೀಪಿಕಾಗೆ ಜೊತೆಗೊಡಲೆಂದೇ ವಿವೇಕ್ ಬೆಂಗಳೂರಿನಿಂದ ಮಂಗಳೂರಿಗೆ ಬಂದು, ಇಬ್ಬರೂ ದಿನದ ಮೊದಲ ಸುಬ್ರಹ್ಮಣ್ಯ ಬಸ್ ಹಿಡಿದರು. ಅಲ್ಲಿನ ಎಲ್ಲಾ ‘ಗ್ರಹಗಳೂ’ ಪ್ರಶಸ್ತವಾಗಿದ್ದುದಕ್ಕೆ ಸುಬ್ರಹ್ಮಣ್ಯ-ಬಿಸಿಲೆಯ ನಡುವೆ ದಿನಕ್ಕೊಮ್ಮೆ ಮಾತ್ರ ಓಡಾಡುವ ಬಸ್ಸು ಅಂದು ಇವರಿಗೆ ಎರಡೂ ದಿಕ್ಕಿನಲ್ಲಿ ಸಿಕ್ಕಿತ್ತು! ನಡುವೆ ಸಿಕ್ಕ ಸುಮಾರು ಮೂರು ಗಂಟೆಗಳ ಅವಧಿಯಲ್ಲಿ ಇವರು, ತುಳಸಿ ಹೋಟೆಲಿನ ದೇವೇಗೌಡ ದಂಪತಿ ಹಾಗೂ ಸಮುದಾಯಭವನದ ಮಲ್ಲೇಶಪ್ಪರನ್ನು ನೋಡಿ ಎಲ್ಲ ನಿಗದಿಗೊಳಿಸಿದ್ದರು.

18 September 2012

ಬಹುಮುಖೀ ಕಪ್ಪೆ


ಕಪ್ಪೆ ಕಮ್ಮಟವೆಂದು ಸಾರ್ವಜನಿಕವಾಗಿ ನಾನು ವಟಗುಟ್ಟುವ (= ಘೋಷಿಸು) ಮುನ್ನ ನೆನಪಾದದ್ದು ಎರಡು ಹೆಸರು. ನನ್ನ ಕಣ್ಣೆದುರೇ ಪ್ರಾಣಿಶಾಸ್ತ್ರಜ್ಞರಾಗಿ ಬೆಳೆದ ಸೂರ್ಯ (ಉರುಫ್ ಸೂರ್ಯನಾರಾಯಣ ರಾವ್ ಅಡ್ಡೂರು, (‘ಹಾವಾಡಿಗ’ ಗೆಳೆಯ ಶರತ್ತನ ಚಡ್ಡಿದೋಸ್ತ್) ಮತ್ತು ಸವಿತಾ (ಶರತ್ತನ ಹೆಂಡತಿ). ಇಬ್ಬರೂ ಸ್ನಾತಕೋತ್ತರ ಪದವಿಯನಂತರ ಕಪ್ಪೆಯನ್ನೇ ಸಂಶೋಧನಾ ವಿಷಯವಾಗಿ ತೆಗೆದುಕೊಂಡು ಪಚ್ಚಡಿಧಾರಿಗಳಾದವರು! ಸವಿತಾ ಅಮೆರಿಕಾದ ದೂರದಲ್ಲಿದ್ದರೆ, ಸೂರ್ಯ ನನ್ನ ಒಡನಾಟ ದೂರನಾಗಿದ್ದ.

ಶಿಬಿರದಲ್ಲಿ ಭಾಗವಹಿಸುವ ಕುರಿತಂತೆ ಹಲವು ಗೆಳೆಯರು ಪೂರಕವಾಗಿ ಟ್ರೋಂಯ್ (=ಒಪ್ಪಿಗೆ) ಕೊಡುತ್ತ ಬಂದರು. ಉಡುಪಿಯಿಂದ ಈಚೆಗೆ ಪರಿಚಿತರಾದ ಇನ್ನೊಬ್ಬ ‘ಹಾವಾಡಿಗ’ ಗೆಳೆಯ ಗುರುರಾಜ ಸನಿಲ್ ಅಂತೂ ಎರಡು ದಿನ ಹಿಂದಿನವರೆಗೂ ಟ್ರೋಂಯ್ ಹೇಳುತ್ತಲೇ ಬಂದವರು, ಅನಿವಾರ್ಯ ಕರ್ತವ್ಯಗಳ ಕಟ್ಟುಪಾಡಿನಲ್ಲಿ ವಟರ್ (= ನಿರಾಕರಣೆ) ಹೇಳಿದರು. ದಂತವೈದ್ಯ ಗಣೇಶ್ ಭಟ್ ತುಂಬ ತಡವಾಗಿ ಉತ್ಸಾಹ ತೋರಿ ಟ್ರಿ ಟ್ರಿ ಟ್ರಿ (= ಪ್ಲೀಸ್ ಪ್ಲೀಸ್) ಹೇಳುತ್ತಲಿದ್ದಾಗ, ಸದಸ್ಯ ಸಂಖ್ಯೆ ಹದಿನೆಂಟರ ಮೇಲೇರಿ ‘ಸಂತೆ’ಯಾಗಿದ್ದಕ್ಕೆ ಸಖೇದ ದೀಪಿಕಾ ವಟರ್ಗುಟ್ಟಿದರು. (ಡಾ| ಕೆ.ವಿ. ಗುರುರಾಜ್ ಸ್ಪಷ್ಟವಾಗಿ ಹೇಳಿದ್ದರು “ಕಮ್ಮಟದ ಗರಿಷ್ಠ ಯಶಸ್ಸಿಗೆ, ಭಾಗಿಗಳ ಸಂಖ್ಯೆ ಕಡಿಮೆಯಿದ್ದಷ್ಟೂ ಅಂದರೆ ಸುಮಾರು ಹತ್ತರಿಂದ ಹನ್ನೆರಡು, ಒಳ್ಳೇದು.”) ಪದ್ಮಹಾಸ, ಅಭಿಜಿತ್ ಭಟ್ ಕಡೇ ಗಳಿಗೆಗೆ ಟ್ರಿಕ್, ಟ್ರಿಕ್, ಟ್ರಿಕ್ (= ವಶೀಲಿ) ಮಾಡಿ ದೀಪಿಕಾರ ಟ್ರೋಂಯ್ಕ್ ಪಡೆದಿದ್ದರು.

14 September 2012

ಕಪ್ಪೆ ಕಮ್ಮಟ

(ಮಂಡೂಕೋಪಖ್ಯಾನದ ಎರಡನೇ ಮತ್ತು ಅಂತಿಮ ಭಾಗ)

ಆಗಸ್ಟ್ ಇಪ್ಪತ್ನಾಲ್ಕರ ಅಪರಾತ್ರಿ ಎರಡು ಗಂಟೆಯ ಸುಮಾರಿಗೇ ಬೆಂಗಳೂರಿನಲ್ಲೊಂದು ಕ್ವಾಲಿಸ್ ನಗರದ ವಿವಿಧ ಮೂಲೆಗಳಿಗೆ ಓಡಾಡಿ ಐದಾರು ಬಿಸಿಲೆ ‘ಯಾತ್ರಿ’ಗಳನ್ನು ಸಂಗ್ರಹಿಸಲು ತೊಡಗಿತ್ತು. ಮೂರೂವರೆ ಗಂಟೆಯ ಸುಮಾರಿಗದು ನಗರ ಬಿಟ್ಟದ್ದೂ ಆಗಿತ್ತು. ಹಾಗೇ ಇತ್ತ ಮಂಗಳೂರಿನಲ್ಲೊಂದು ಟೆಂಪೋ ಟ್ರಾವಲ್ಲರ್ ಐದು ಗಂಟೆಯ ಸುಮಾರಿಗೆ ಓಡಾಡಿ ಹನ್ನೆರಡು ಮಂದಿಯನ್ನು ಒಟ್ಟು ಮಾಡಿತು. ಮತ್ತೆ ಜೋಡುಮಾರ್ಗ, ಉಪ್ಪಿನಂಗಡಿಗಳಲ್ಲಿ ಇನ್ನು ಕೆಲವರನ್ನು ಸೇರಿಸಿಕೊಂಡು ಮಳೆಯ ಏಕಧಾರೆಯನ್ನು ಅಡ್ಡಕ್ಕೆ ಕತ್ತರಿಸುತ್ತಾ ಕತ್ತಲೆಯನ್ನು ಉದ್ದಕ್ಕೆ ಸೀಳುತ್ತಾ ದಾರಿ ತೆಮರಿನ ಕಲಕು ನೀರನ್ನು ಆಗಸಕ್ಕೆ ಹಾರಿಸುತ್ತಾ ಬಿಸಿಲೆಯತ್ತ ಹೊರಟದ್ದೂ ಆಯ್ತು. ಆದರೆ ನಾವು ನಾಲ್ವರು, ಬಿಸಿಲೆಯ ಸಮುದಾಯ ಭವನದೊಳಗೆ ಬೆಚ್ಚಗೆ ಮಲಗಿದ್ದವರು ಮಾತ್ರ, ಸುಂದರ ಕನಸುಗಳಲ್ಲಿ, ಕೊಳಕುಕಪ್ಪೆ ಸುಂದರ ರಾಜಕುಮಾರನಾಗಿ ಕತೆ ಕಾಡಿಗೆ ಹೋದ ಮೇಲೇ ಸುಖವಾಗಿ ಬೆಳಗ್ಗೆ ಮಾಡಿದೆವು. ಆರಾಮದಲ್ಲಿ ಪ್ರಾತರ್ವಿಧಿಗಳನ್ನು ಮುಗಿಸಿ, ದೇವೇ ಗೌಡರ ಚಾ ಹಾಕಿ ಯಾರ್ಯಾರು ಎಲ್ಲೆಲ್ಲಿ ಎಂದು ತಿಳಿಯಲು ಚರವಾಣಿಯಲ್ಲಿ ಪ್ರಯತ್ನ ಮಾಡಿದೆವು.

11 September 2012

ಕತ್ತಲೆ ಕಾನಿನಲ್ಲಿ ಕಪ್ಪೆ ವೈದ್ಯರೊಡನೆ

ಚಿತ್ರ, ಲೇಖನ ಡಾ|| ರತ್ನಾಕರ್, ಮಂಟಪ ಕ್ಲಿನಿಕ್, ಶಿವಮೊಗ್ಗ.
ಪ್ರಿಯರೇ,
ನಮ್ಮ ಕಮ್ಮಟ, ಕೆವಿಜಿ ಒಡನಾಟದ ಕತೆ ಕೇಳಿಯೇ ಸಂತೋಷ ತಡೆಯಲಾಗದೆ ಗೆಳೆಯ, ರತ್ನಾಕರ ಉಪಾಧ್ಯರು ಪ್ರತಿಕ್ರಿಯೆಯಾಗಿ ಅವರದೊಂದು ೨೦೧೦ರ ಅನುಭವ ಕಥನವನ್ನು ಕಳಿಸಿದ್ದಾರೆ. ಅದಕ್ಕೆ ಸ್ವತಂತ್ರ ಲೇಖನದ ಯೋಗವೇ ಇರುವುದರಿಂದ ಇಲ್ಲಿ ಯಥಾವತ್ತು ನಿಮ್ಮೆದುರು ಪ್ರಸ್ತುತಪಡಿಸುತ್ತಿದ್ದೇನೆ. “ಮುಂದೆ ಮಂಟಪ ಇಲ್ಲ, ಹಿಂದೆ ಉಪಾಧ್ಯ” ಇಲ್ಲದ, ಆದರೆ ಪೂರ್ಣ ಸ್ವಯಾರ್ಜಿತದ ‘ಡಾಕ್ಟರ್’ ರತ್ನಾಕರ್ ಬಗ್ಗೆ ಇಲ್ಲೇ ಹಿಂದೆ ನನ್ನ ತೀರ್ಥಯಾತ್ರೆ ಹಾಗೂ ದಾಂಡೇಲಿಯ ದಂಡಯಾತ್ರೆಗಳಲ್ಲಿ ಸಾಕಷ್ಟು ಹೇಳಿರುವುದರಿಂದ ಇನ್ನು ಪೀಠಿಕೆ ಹೊಡೆಯದೆ ಅವರ ಲೇಖನಕ್ಕೆ. -ಅಶೋಕವರ್ಧನ

ಭಾಗ-೧

ಡಿಸ್ಕವರಿ ಚಾನಲ್‌ನ ‘ಲೈಫ್’ ಕಾರ್ಯಕ್ರಮದ ಬಗ್ಗೆ ಮಾಹಿತಿಯ ಲೇಖನ ಬರೆದು ಮರೆತಿದ್ದ ನನಗೆ ಕೆಲವು ಕಿರು ಸಂದೇಶಗಳು, ನೋಡುವಂತೆ ಪ್ರೇರೇಪಿಸಿದ್ದಕ್ಕೆ, ಭೇಟಿ ಆದಾಗ ಕೃತಜ್ಞತೆಗಳೂ ಬಂದವು. ಏನ್ರೀ ದೊಡ್ಡ ಬರವಣಿಗೆಗಾರರಾಗಿದ್ದೀರಿ ಎಂಬ ಪ್ರಶ್ನಾರ್ಥಕವೋ, ಕುಹಕವೋ ಕೇಳಲು ಸಿಕ್ಕಿತು. ಬರವಣಿಗೆ ಪ್ರಾರಂಭಿಸಿದ್ದರಿಂದ ಒಂದು ಲಾಭವಂತೂ ಹೌದು. ನನ್ನ ಕನ್ನಡ ವ್ಯಾಕರಣ, ಶಬ್ಧಗಳ ಬಳಕೆಯಲ್ಲಿ, ಆಯ್ಕೆಯ ಅನಿವಾರ್ಯತೆ ಆಗಿದೆ. ಆದರೂ ಶುದ್ಧ ಮಡಿವಂತಿಕೆಯ ಕನ್ನಡ ನನ್ನಿಂದ ಸಾಧ್ಯವಿಲ್ಲ ಎಂದು ತೀರ್ಮಾನಿಸಿದ ಮೇಲೆ ಮನಸ್ಸಿಗೆ ಬಂದ ಶಬ್ಧಗಳನ್ನು ಆಡುಭಾಷೆಯಲ್ಲೇ ಉಪಯೋಗಿಸಲು ಪ್ರಾರಂಭಿಸಿದಾಗ ಅದೊಂದು ನನ್ನದೇ ಶೈಲಿ ಎಂದ ಸ್ನೇಹಿತರೂ ಇದ್ದಾರೆ. ಇರಲಿ, ನನಗಂತೂ ‘ಲೇಖಕ’ ಎನ್ನುವ ಹಣೆಪಟ್ಟಿಯನ್ನು ಮೆಟ್ಟಿ ನಿಲ್ಲುವ ಇರಾದೆ. ಗುಂಪುಗಾರಿಕೆ, ಪ್ರತ್ಯೇಕತೆ ಎರಡರಲ್ಲೂ ಉದಾಸೀನವೇ. ಹಾಗಾಗಿಯೇ ವೃತ್ತಿಬಾಂಧವರೊಡನೆ ಎಷ್ಟು ಸಂಪರ್ಕ, ಸಂಸರ್ಗ ಮಾಡುತ್ತೇವೋ, ಅಷ್ಟೇ ಬೇರೆ ಉದ್ಯೋಗದಲ್ಲಿರುವವರೊಡನೆಯೂ ಬೆರೆಯ ಬೇಕೆನ್ನುವ ವಾದ ನನ್ನದು. ನಮ್ಮ ವೃತ್ತಿಕ್ಷೇತ್ರದ ಅನುಭವಗಳಲ್ಲಿ, ನಮ್ಮ ನಮ್ಮ ಅನುಭವಗಳ ವಿಸ್ತಾರದಲ್ಲಿ ಬಹಳ ಸಾಮಾನ್ಯ ಜನರಿಂದ ಹಿಡಿದು ಅಂತಾರಾಷ್ಟ್ರೀಯ ಖ್ಯಾತಿಯ ವ್ಯಕ್ತಿಗಳ ಪ್ರಭಾವವಿರುತ್ತದೆ. ವ್ಯಕ್ತಿ ವಿಕಸನ ಗುರುಗಳು ಹೇಳುವಂತೆ ‘ನಮ್ಮ ಆಲೋಚನೆ, ಕ್ರಿಯೆಗಳ ಗುಣಮಟ್ಟ ನಮ್ಮ ಸಂಪರ್ಕವಿರಿಸಿಕೊಂಡ ವ್ಯಕ್ತಿತ್ವಗಳಿಂದ ಪ್ರಭಾವಿತವಾಗಿರುತ್ತದೆ’.

07 September 2012

ಮಂಡೂಕೋಪಖ್ಯಾನ

Nyctibatrachus ಚಿತ್ರ ಕೃಪೆ ಡಾ. ಕೆ.ವಿ. ಗುರುರಾಜ್

“ಕಪ್ಪೆ ಕಪ್ಪೆ ಕಾಸು ಕೊಡ್ತೀನಿ, ನೀರ್ ಕೊಡ್ತಿಯಾ...” ಸ್ಲೇಟ್ ಮೇಲೆ ಪುಟ್ಟ ಪುಟ್ಟ ಪೂರ್ಣ ಹಸ್ತಗಳನ್ನು ತುಸು ಗೂನಾಗಿಸಿ (ಕಪ್ಪೆಯಂತೆ ಮಾಡಿ) ಇಟ್ಟ ಮಕ್ಕಳು, ಮುಖವರಳಿಸಿಕೊಂಡು ಜಪಿಸುವುದನ್ನು ಕಂಡಿದ್ದೆ. ನಾಲ್ಕೈದು ಪುರಶ್ಚರಣದಲ್ಲಿ ಮಂತ್ರ ಸಿದ್ಧಿಯಾದಂತೆ ಸ್ಲೇಟಿನ ಮೇಲೆ ಮೂಡಿದ ಪಸೆಯಲ್ಲಿ (ಇವರದೇ ಅಂಗೈಯ ಹಬೆ) ಸ್ಲೇಟಿನಲ್ಲಿದ್ದ ಹಳೇ ಬರಹಗಳನ್ನು ಚಂದಕ್ಕೆ ಒರೆಸುತ್ತಿದ್ದರು. (ಇಂದು ಬಿಡಿ, ಹಲಗೆ ಬಳಪವ ಪಿಡಿಯದಗ್ಗಳಿಕೆಯವರೇ ಎಲ್ಲ) ಆದರೆ ವಾಸ್ತವದಲ್ಲಿ ಹಾಗಲ್ಲ “ಪಸೆ ಎಲ್ಲಿದೆಯೋ ಅಲ್ಲಿಗೆ ಕಪ್ಪೆಗಳು ಆಕರ್ಷಿತವಾಗುತ್ತವೆ. ಬಾಯಿಯಿಂದ ನಾವು ನೀರು ಕುಡಿದಂತೇ ಕೆಲವು ಜಾತಿಯ ಕಪ್ಪೆಗಳಂತು ತೊಡೆಯ ತಳದ ಚರ್ಮದಿಂದಲೂ ನೀರನ್ನು ದೇಹವ್ಯವಸ್ಥೆಗೆ ಸೇರಿಸಿಕೊಳ್ಳುತ್ತವೆ” ಎನ್ನುತ್ತಾರೆ ಡಾ| ಕೆ.ವಿ. ಗುರುರಾಜ್. ಅವರ ಎರಡು ದಿನಗಳ (ಆಗಸ್ಟ್ ೨೫, ೨೬) ಕಪ್ಪೆ ಕಮ್ಮಟದಲ್ಲಿ ಮುಂದುವರಿಯುತ್ತಾ ನನಗೆ ಇನ್ನೂ ಹೆಚ್ಚು ತಿಳಿವು ಮೂಡಿತು. ನಮ್ಮನೆಯಲ್ಲಿ ತೊಳೆದಿಟ್ಟ ತಟ್ಟೆಗಳ ಸ್ಟ್ಯಾಂಡಿನಲ್ಲಿ ತಟ್ಟೆಯ ಪಸೆಗೋ ಲೋಟದ ಹಸಿಗೋ ವರ್ಷದ ಕೆಲವು ತಿಂಗಳುಗಳಲ್ಲಿ ಕೆಲವು ನಿಶಾಚರಿ ಕಪ್ಪೆಗಳು ನಿಯತವಾಗಿ ಬಂದು ಕುಳಿತು ‘ನಿದ್ರೆ’ಗೆ ಜಾರುತ್ತಿದ್ದವು. ಹಾಗೆಯೇ ಕೆಲವು ಮನೆ ಗೋಡೆಯ ಯಾವುದೋ ಒಳ ಮೂಲೆಯಲ್ಲಿ (ನಮಗರಿವಾಗದ ತೇವಾಂಶ ಗುರುತಿಸಿ) ಧ್ಯಾನಸ್ಥವಾಗುತ್ತಿದ್ದದ್ದೂ ಇತ್ತು. ಇವು ಕೇವಲ ಗಲೀಜು ಮಾಡಲು ವಕ್ಕರಿಸುವವಲ್ಲ ಎಂಬ ಅರಿವಿನ ದೀಪವೂ ಝಗ್ಗೆಂದಿತು! (ಅದೊಂದು ಶುಭ ಪ್ರಾತಃಕಾಲ ದೇವಕಿ ಲೋಟದಲ್ಲಿದ್ದ ಅಂಥಾ ಒಂದು ‘ಪುಟ್ಟಪ್ಪ’ನನ್ನು ಗಮನಿಸದೆ ಬಿಸಿ ಕಾಫಿ ಹಾಕಿ ನನಗೆ ಕೊಟ್ಟಿದ್ದಳು. ನಾನು ಅರಿವಿಲ್ಲದೆ ಬಾಯಿಗಿಟ್ಟದ್ದಕ್ಕೆ ಕಾಫಿ ಕೆಫೆಡೇಯ ಲಭ್ಯ ನೂರಾ ಒಂದು ಕಾಫಿ ವೈವಿಧ್ಯದ ಮೇಲಿನೊಂದು ಹೊಸ ರುಚಿ ನೋಡಲು ಸಾಧ್ಯವಾಯ್ತು!) ಹೊಸ ಅರಿವಿನ ಬೆಳಕಿನ ಮೂಲ - ಯಾರೀ ಕಪ್ಪೆ-ಪಂಡಿತ? ಏನೀ ಕಪ್ಪೆ-ಕಮ್ಮಟ?