Showing posts with label ವಾಲಿಕುಂಜ. Show all posts
Showing posts with label ವಾಲಿಕುಂಜ. Show all posts

13 July 2012

ವಾಲಿಯ ವನವಾಸ ಇನ್ನು ನಿಷ್ಕಂಟಕ (ವಾಲಿಕುಂಜ ಸರಣಿಯ ಮೂರನೇ ಭಾಗ)


“ಉರ್ಣಿಗೆ ಹೋಗ್ತೀರಾ?” ನಿರೇನ್ ಕೇಳಿದರು. ನನ್ನ ಅಂಗಡಿಯ ‘ಲೌಕಿಕ ಬಂಧನಗಳು’ ಪೂರ್ಣ ಕಳಚದೇ ನನ್ನ ‘ಬಿಸಿಲೆಯ ವನವಾಸ’ ಸಮರ್ಪಕವಾಗದೆಂದು ಚಡಪಡಿಸುತ್ತಿದ್ದೆ. ಅಷ್ಟರಲ್ಲಿ ಮಳೆಗಾಲದ ನಿರೀಕ್ಷೆಗಳು ಸೇರಿ ಮಲೆ (ಸುತ್ತುವ) ಕಾಲಕ್ಕೆ ಇನ್ನು ಕನಿಷ್ಠ ಮೂರು ತಿಂಗಳ ವಿರಾಮ ಎನ್ನುವ ಸ್ಥಿತಿಗೆ ಮನಸ್ಸು ಮುದುಡುತ್ತಿತ್ತು. ವಾಲಿಕುಂಜದ ಪೂರ್ವ ತಪ್ಪಲು, ಮೊದಲ ಮಳೆ ಬಂದು ನೀರು ಹಸಿರು ಧಾರಾಳವಾಗಿರುವ ಕಾಲ, ಕುದುರೆ ಮುಖ ರಾಷ್ಟ್ರೀಯ ಉದ್ಯಾನವನದ (ಮುಂದೆಲ್ಲಾ ಹೇಳುವಂತೆ ಕುರಾಉ) ವ್ಯಾಪ್ತಿಯೊಳಗಿನ ಒಂದು ಹಳ್ಳಿ ಈ ಉರ್ಣಿ ಎಂದೆಲ್ಲಾ ಒಂದೇ ಬೀಸಿನಲ್ಲಿ ಮನಸ್ಸಿಗೆ ಬಂತು.


06 July 2012

ಅಜ್ಜಿಕುಂಜದ ವಿಹಾರ (ವಾಲಿಕುಂಜ ಸರಣಿಯ ಎರಡನೇ ಭಾಗ)



ಕೇದಿಗೆ ಅರವಿಂದ ರಾವ್ ಕಬ್ಬಿನಾಲೆಯ ಅಳಿಯ. ಮತ್ತು ಅವರ ಅಲ್ಲಿನ ಬಳಗ ವಾಲಿಕುಂಜ ವಲಯದ ಘಟ್ಟಶ್ರೇಣಿಯನ್ನುತ್ತರಿಸಿ ಕೆರೆಕಟ್ಟೆವರೆಗೆ ನಡೆಸಿದ ಚಾರಣವನ್ನೂ ಈ ಹಿಂದೆಯೇ ನಿಮಗೆ ತಿಳಿಸಿದ್ದೇನೆ. ಅರವಿಂದ್ ೨೬-೧-೯೧ರ ಗಣರಾಜ್ಯೋತ್ಸವದ ರಜಾದಿನಕ್ಕೆ ಹಿಂಬಾಲಿಸುವ ಆದಿತ್ಯವಾರವನ್ನು ಸೇರಿಸಿ ಅಲ್ಲಿನವರೊಡನೆ ತನ್ನ ಆರೋಹಣದ ಮಿತ್ರರನ್ನೂ ಸೇರಿಸಿ ವಾಲಿಕುಂಜ ಏರುವ ಹೊಳಹು ಹಾಕಿದರು. ಗಾಢ ಕತ್ತಲೆಯಲ್ಲೂ ನಮ್ಮನ್ನು ಒಪ್ಪಿಕೊಂಡ, ಜಲದೋಳುಗಳಲ್ಲಿ ನಮ್ಮಾಯಾಸವನ್ನು ನೀಗಿದ, ಈಗಾಗಲೇ ಎರಡು ಬಾರಿ ತಲೆಯಮೇಲೆ ಹೊತ್ತು ದಿಗಂತ ವಿಸ್ತಾರದ ಅಮೂಲ್ಯ ಕಾಣ್ಕೆಕೊಟ್ಟ ಶಿಖರ ಶ್ರೇಣಿಯ ಇನ್ನೊಂದೇ ಮೈ, ಮುಖ ನೋಡಿ, ನೆತ್ತಿ ಏರುವುದು ಮಾತ್ರವಲ್ಲ ಬಳಿಯಲ್ಲೇ ಶಿಬಿರವಾಸ? ನಾನು ಎರಡು ಯೋಚಿಸದೆ ಸೈಗುಟ್ಟಿದೆ.

29 June 2012

ವಾಲಿಕುಂಜದ ವಿವಿಧ ಮುಖ (ಸರಣಿಯ ಮೊದಲ ಭಾಗ)


“ವಾಲೀ ಬಾ ಯುದ್ಧಕ್ಕೆ. . .” ರಣಘೋಷದೊಡನೆ ಎಷ್ಟು ಬಾರಿ ಸುಗ್ರೀವ ಏರಿ ಹೋದನೋ ಅಷ್ಟೂ ಸೋಲಾಗಿತ್ತು ಅವನಿಗೆ. ಆದರೆ ತ್ರಾಣದಲ್ಲಿ ವಾಲಿಯ ಗಜಸಹಸ್ರವೇನು ಶತಕೋಟಿಯನ್ನೂ ಮೀರುವ, ಆಯುಷ್ಯದಲ್ಲಿ ತ್ರೇತಾಯುಗದ ಕಪಿಕುಲ ಶ್ರೇಷ್ಠನನ್ನು ಯುಗ ನಾಲ್ಕರಿಂದ ಹಿಂದಿಕ್ಕಿದ ಈ ವಾಲಿಯ ಮೇಲೆ ನಾನು ಏರಿಹೋದ ಅಷ್ಟೂ ಬಾರಿ ನನಗೆ ಸೋಲಾಗಿಲ್ಲ. ಅದನ್ನು ಜಯ ಎನ್ನಲು ಸಾಧ್ಯವಾಗದಂಥ ಸ್ಥಿತಪ್ರಜ್ಞ ಈ ವಾಲಿ ಅರ್ಥಾತ್ ವಾಲಿಕುಂಜ ಅಥವಾ ಅಜಿಕುಂಜ ಎನ್ನುವ ಪರ್ವತ ಶಿಖರ (ಸಮುದ್ರ ಮಟ್ಟದಿಂದ ೩೪೦೮ ಅಡಿ). ಕಾರ್ಕಳದಿಂದ ಆಗುಂಬೆಯತ್ತ ಹೋಗುವ ದಾರಿಯಲ್ಲಿ ಮಧ್ಯಂತರದಲ್ಲಿ ಸಿಗುವ ಊರು ಅಜೆಕಾರು. ಅಲ್ಲಿನ ಪೂರ್ವ ದಿಗಂತವನ್ನು ಸ್ಪಷ್ಟವಾಗಿ ತುಂಬುವ, ನೋಡಿದವರ ದಿಟ್ಟಿಗೇ ಚುಚ್ಚಿ ನಿಲ್ಲುವ ಈ ಶುದ್ಧ ಪೀನಾಕೃತಿಯನ್ನು ಕಂಡು ಮೋಹಿಸದವರು ವಿರಳ. ದಕ್ಷಿಣ ಉತ್ತರವಾಗಿ ಹಬ್ಬಿದ ಪಶ್ಚಿಮ ಘಟ್ಟವನ್ನು ಮನಸ್ಸಿಗೆ ತಂದುಕೊಳ್ಳಿ. ವಲಯದ ಪ್ರಖ್ಯಾತ ನಾಮರಲ್ಲಿ ಕುದುರೆಮುಖ ಮತ್ತೆ ಕುರಿಯಂಗಲ್ಲು ಕಳೆದಮೇಲೆ ಶಿಖರ ಶ್ರೇಣಿ ಓರೆಯಲ್ಲೇ ಕರಾವಳಿಯತ್ತ ನುಗ್ಗುವುದನ್ನು ಕಾಣುತ್ತೇವೆ. ಧಾವಂತಕ್ಕೆ ಕೊನೆ ಹೇಳಿ ಮತ್ತೆ ಪೂರ್ವಮುಖಿಯಾಗುವ ಬಿಂದು, ಹಾಸಿದ ಭೂಪಟದಲ್ಲಿ ಅಂತರ್ಜಿಲ್ಲಾ ಗಡಿರೇಖೆಯನ್ನು ಅನುಸರಿಸಿ ನೋಡಿದರೆ ಕಾಣುವ ಚೂಪು ವಾಲಿಕುಂಜ. ಪಶ್ಚಿಮಕ್ಕೆ ಅವಿಭಜಿತ ದಕ, ಪೂರ್ವಕ್ಕೆ ಚಿಕ್ಕಮಗಳೂರು ಜಿಲ್ಲೆ. ಅಜೆಕಾರಿಗೆ ಕಾಣುವಂತೆ ದಕ್ಷಿಣದ್ದು ಬಾಗಿದ ಮೈ, ಉತ್ತರದ್ದು ಸೆಟೆದು ನಿಂತಂತೆ ಕಡಿದು. ಭಾರೀ ಧನುಸ್ಸಿನ ಬಾಗಿದ ಹೆದೆ ದಕ್ಷಿಣ ಮೈ, ಅದನ್ನೂ ಮೀರಿದ ಕೊಪ್ಪು ಶಿಖರ, ಬಿಗಿದ ಸಿಂಜಿನಿ ಉತ್ತರ ಮೈ. ಉತ್ತರಮುಖಿಯಾಗಿ ವೀರಾಸನದಲ್ಲಿ ಕುಳಿತ ಕಪಿವೀರನ ನೆಲಮುಟ್ಟಿಸಿದ ಮಂಡಿಯಲ್ಲಿ ಕರಾವಳಿಯ ಅಜೆಕಾರಿದ್ದರೆ ಚಾಚಿದ ಬಾಲದ ಉದ್ದಕ್ಕೆ ಹಸಿರು ಮುಗಿಯದ ಘಟ್ಟ ಸಾಲು.