30 October 2011

ಹಾರೋಣ ಬಾಆಆಆಆಆಆ


(ಕರಾವಳಿಗೆ ಹೊಸ ಸಾಹಸ ಕ್ರೀಡೆ - ಭಾಗ ಒಂದು)

೧೯೮೦ರ ದಶಕದ ಮೊದಲ ಭಾಗದಲ್ಲಿ ಸ್ಕೈ ರೈಡರ್ಸ್ ಎಂಬ ಇಂಗ್ಲಿಷ್ ಸಿನಿಮಾ ನೋಡಿದಾಗ ಒಮ್ಮೆಲೇ ನನಗೆ ಬಗಲಲ್ಲಿ ರೆಕ್ಕೆ ಮೊಳೆಯುವ ನೋವು ಶುರುವಾಗಿತ್ತು. ಗಡಿಬಿಡಿಯಾಗಬೇಡಿ, ಅದು ಹ್ಯಾಂಗ್ ಗ್ಲೈಡಿಂಗ್ ಅಥವಾ ನೇತು ತೇಲಾಟದ ಹುಚ್ಚು. ಯಾವುದೇ ಕೋಡುಗಲ್ಲ ನೆತ್ತಿ, ಶಿಖರಾಗ್ರಕ್ಕೆ ಹೋದರೆ “ಹೂಪ್” ಎಂದು ಉದ್ಗರಿಸಿ, ಬಾನಾಡಿಗಳೊಡನೆ ರೆಕ್ಕೆ ಜೋಡಿಸುವ ತುಡಿತಕ್ಕೆ ಇಲ್ಲಿತ್ತು ಸುಲಭ ದಾರಿ. ಕಡಲತಡಿಯ ಗಾಳಿಯ ಹೆಗಲೇರಿ ಸುಂದರ ದೃಶ್ಯ ಹೊಸೆಯುವ ಕಡಲಕ್ಕಿಗಳ ಗೆಣೆಕಾರರಾಗುವ ಅವಕಾಶ ನೇತು ತೇಲಾಟದಲ್ಲಿತ್ತು. ಸೂರ್ಯನತ್ತ ಹಾರಿದ ಮರಿ ವೈನತೇಯ ಇನ್ನು ಪುರಾಣ ಕಲ್ಪನೆಯಲ್ಲ. ಫ್ಯಾಂಟಮ್ ಸಾಹಸಗಳ ಚಿತ್ರಕಥೆಯಲ್ಲಿ ಬಂದ ಗರುಡನ ಬಳಗದ ಠಕ್ಕು, ಇಲ್ಲಿ ವಾಸ್ತವ. ಎಲ್ಲಕ್ಕೂ ಮಿಗಿಲಾಗಿ ರೈಟ್ ಸೋದರರ ಮೂಲ ಆಶಯ - ಸಾಮಾನ್ಯನಿಗೆ ಹಾರಾಟ, ನೇತು ತೇಲಾಟದಲ್ಲಿ ನಮಗೂ ದಕ್ಕುವಂತಿತ್ತು; ಕಾರ್ಯರೂಪಕ್ಕೆ ಇಳಿಸುವುದಷ್ಟೇ ಬಾಕಿ!

11 October 2011

ರಣಘೋಷ - ಹೀಗೊಂದು ಯಕ್ಷಗಾನ!


ಶಿವರಾಮಕಾರಂತ ಪೀಠ, ಮಂವಿವಿನಿಲಯ ಈಚೆಗೆ ‘ಕಾರಂತರು ಮತ್ತು ಯಕ್ಷಗಾನ’ ಎಂಬೊಂದು ದಿನದುದ್ದದ ವಿಚಾರ ವಿಚಾರಗೋಷ್ಠಿ ಹಮ್ಮಿಕೊಳ್ಳಲಿದ್ದ ಸುದ್ಧಿ ನನಗೆ ಸಿಕ್ಕಿತು. ಸಹಜವಾಗಿ ನಾನು ವಿಚಾರಿಸಿದೆ, “ಕಾರಂತ ಪ್ರಯೋಗದ ಸಮರ್ಥ ಪ್ರದರ್ಶನ ಅಥವಾ ಪ್ರಾತ್ಯಕ್ಷಿಕೆಯನ್ನು ಕೊಡಬಹುದಾದ ಏಕೈಕ ತಂಡ ಉಡುಪಿಯ ಎಂಜಿಎಂ ಕಾಲೇಜಿನ ಯಕ್ಷಗಾನ ಕೇಂದ್ರ. ಸಹಜವಾಗಿ ದಿನಪೂರ್ತಿ ಪ್ರಬಂಧ, ಚರ್ಚೆಗಳಿಗೆ ಕಲಶಪ್ರಾಯವಾಗಿ ಅವರ ಪ್ರದರ್ಶನ ಇರಲೇಬೇಕು. ಪ್ರಸಂಗ ಯಾವುದು?” ನನ್ನದು ಉದ್ದೇಶವಿಲ್ಲದ ಅಧಿಕ ಪ್ರಸಂಗವಾಗಿತ್ತು! ಕಾರಂತ ಪ್ರಯೋಗಗಳ ಉತ್ತರಾಧಿಕಾರದ ಕಾನೂನು ಹೋರಾಟ ಅತ್ಯುಚ್ಛ ನ್ಯಾಯಾಲಯದವರೆಗೂ ಏರಿದ್ದು, ಯಕ್ಷಗಾನ ಕೇಂದ್ರಕ್ಕೆ ಆಂಶಿಕ ಸೋಲಾದದ್ದು ನನಗೆ ತಿಳಿಯದ್ದೇನೂ ಅಲ್ಲ. (ಆ ಪ್ರಸಂಗದಲ್ಲಿ ಯಕ್ಷಗಾನ ಕೇಂದ್ರ ನನಗೆ ಹತ್ತಿರವಿದ್ದಷ್ಟೇ ಎದುರು ಪಕ್ಷದ ವಕೀಲ, ಎ.ಪಿ. ಗೌರೀಶಂಕರ - ನನ್ನ ಸೋದರಮಾವ, ಆತ್ಮೀಯರು!) ನ್ಯಾಯಾಲಯವೇ ಒಪ್ಪಿಗೆ ಕೊಟ್ಟ ಮಿತಿಗಳ ಒಳಗೆ ಆ ಗೋಷ್ಠಿಗೆ ಏನಾದರೂ ದಕ್ಕೀತು ಎಂಬ ನಿರೀಕ್ಷೆ ನಾನು ಇಟ್ಟುಕೊಂಡದ್ದು ತಪ್ಪಾಗಿತ್ತು. ಕಾರಂತ ಪೀಠ ಅವಶ್ಯ ಕೇಳಿದ್ದರು ಕೂಡಾ. ಆದರೆ ಉಡುಪಿಯ ಯಕ್ಷಗಾನ ಕೇಂದ್ರ ಕಾನೂನಿನ ಹೊಸ ‘ರಣಘೋಷ’ ಕೇಳಿಸಿಕೊಳ್ಳಲಿಚ್ಛಿಸದೆ, ವಿವಿನಿಲಯದ ಕರೆಯನ್ನು ಒಪ್ಪಿಕೊಂಡಿರಲಿಲ್ಲ. ಕಾರಂತ ಯಕ್ಷಗಾನ ಗೋಷ್ಠಿ ಶುಷ್ಕ ಗದ್ಯವೇ ಆಗಿ ನಡೆದುಹೋಯಿತು.

01 October 2011

ಚೋಕ್ರೀ ಬೆಳಗಾಂವೀ! (ದಿಬ್ಬಣದ ಎರಡನೇ ಹೆಜ್ಜೆ)

ಪ್ರಿಯ ನಾರಾಯಣಾ,

ಧರ್ಮಸ್ಥಳದಲ್ಲಿ ಪ್ರತಿ ವರ್ಷವೂ ತಾಳಿ, ಸೀರೆ, ಪಂಚೆ ಕೊಟ್ಟು ಉಚಿತ ವಿವಾಹಯೋಗ ಕಲ್ಪಿಸುವುದು ಯಾರಿಗೆ ಗೊತ್ತಿಲ್ಲ. ಮತ್ತೆ ಯಾವುದೇ ನೋಂದಣಿ ಇಲಾಖೆಯಲ್ಲಿ ಧರ್ಮನಿರಪೇಕ್ಷವಾಗಿ, ಕಾನೂನು ಪ್ರಕಾರ ದಾಂಪತ್ಯ ಸಂಬಂಧ ಕುದುರಿಸುವುದು ನಮಗೆ ತಿಳಿಯದ್ದೂ ಅಲ್ಲ, ತಿರಸ್ಕಾರವೂ ಇಲ್ಲ. (ಇಂಥವೇ ಆಶಯಗಳ ಒಂದು ಪರಿಷ್ಕೃತ ರೂಪ - ಕುವೆಂಪು ಪ್ರಣೀತ ‘ಮಂತ್ರ ಮಾಂಗಲ್ಯ.’ ಇದು ಮಾತ್ರ ನನಗೆ ಇಲಾಖಾ ನೋಂದಣಿಯ ಒಣಕುಂಟೆಗೆ ಸಾಂಪ್ರದಾಯಿಕತೆಯ ಚಿಗುರು, ಹೂ ಅಂಟಿಸುವ ಪ್ರಯತ್ನದ ಹಾಗೇ ಕಂಡದ್ದರಿಂದ ಅಷ್ಟು ಒಲವು ಮೂಡಲಿಲ್ಲ.) ಆದರೆ ಮದುವೆ ಹೇಗಾಗಬೇಕೆಂಬ ಸ್ವಾತಂತ್ರ್ಯ ಗಂಡು ಹೆತ್ತವರದೊಂದೇ ಅಲ್ಲವಲ್ಲಾ. ತೋರಿಕೆಗೆ ಒಂದು ಗಂಡಿಗೆ ಒಂದು ಹೆಣ್ಣು ಅಂದರೆ ಮದುವೆ. ಸ್ವಲ್ಪ ಯೋಚಿಸಿದರೆ ನಮ್ಮಲ್ಲೊಂದು ಸಮೂಹ ಚಿಂತನೆಯಿದ್ದಷ್ಟೇ ಬಲವಾಗಿ ಹೆಣ್ಣಿನ ಹಿಂದೆಯೂ ಇರಲೇಬೇಕು. ಮದುವೆ ಎರಡರ ಸಮಪಾಕಕ್ಕೆ ಕೇವಲ ನಾಂದಿ.