( ಜಮ್ಮು   ಕಾಶ್ಮೀರ 
 ಪ್ರವಾಸ   ಕಥನ 
 ೯ ) 
 
ವೈಷ್ಣೋದೇವಿ   ದರ್ಶನದೊಡನೆ 
 ನಮ್ಮ   ಪ್ಯಾಕೇಜಿನ   ಮುಖ್ಯ   ವೀಕ್ಷಣಾಂಶಗಳು   ಮುಗಿದಿದ್ದುವು .  ಉಳಿದದ್ದು   ಮರುಪಯಣ .  ಆದರೆ   ನಮ್ಮ   ತಂಡ   ಒಗ್ಗೂಡುವಲ್ಲಿ   ಇದ್ದಂತೇ   ಚದುರುವಲ್ಲೂ   ಭಿನ್ನ   ಇಷ್ಟಾನಿಷ್ಟಗಳಿದ್ದುವು .  ಅದಕ್ಕನುಗುಣವಾಗಿ   ಗಿರೀಶ್   ನಮ್ಮ   ಒಳಗುಂಪುಗಳಿಗೆ   ಅವರವರ   ಊರಿಗೆ   ಮರುಪಯಣದ   ಟಿಕೆಟ್ಟು   ಸಹಿತ   ಮುಂದಿನ   ಕಲಾಪಗಳನ್ನು   ವಿಷದಪಡಿಸಿದರು .  ಆ   ಪ್ರಕಾರ  ( ಇನ್ನೊಂದೇ 
 ಕಾರಿನಲ್ಲಿ   ನಮಗೆ   ಜೊತೆಗೊಟ್ಟಿದ್ದ )  ಓಬಳೇಶ್   ಕುಟುಂಬ   ಜಮ್ಮುವಿಂದಲೇ   ವಿಮಾನದಲ್ಲಿ   ಚನ್ನೈಗೆ   ಹಾರುವುದಿತ್ತು .  ಕತ್ರದ   ಹೊಸಹಗಲಿನಲ್ಲಿ   ಗಿರೀಶ್   ಕಾರಿನಲ್ಲಿ   ಅವರನ್ನು   ವಿಮಾನ   ನಿಲ್ದಾಣಕ್ಕೆ   ಬಿಟ್ಟು ,  ಸುವರ್ಣ ,  ರೇಖಾ   ಮತ್ತು   ವಿದ್ಯಾರಣ್ಯರನ್ನು   ಜಮ್ಮುವಿಗೆ   ಕರೆದೊಯ್ದರು .  ಎರಡನೇ   ಕಂತಿಗೆ   ಉಳಿದ   ಎಂಟೂ   ಜನಕ್ಕೆ   ಮಧ್ಯಾಹ್ನದ   ಊಟದವರೆಗೆ   ಅದೇ   ಹೋಟೆಲಿನಲ್ಲಿ   ವಿಶ್ರಾಂತಿ .  
 
 
 
ಅರ್ಧ   ಹಗಲು 
 ಸುಮ್ಮನೆ   ಕೂರುವುದು   ನಮ್ಮಿಂದಾಗದು .  ಹಾಗೆಂದು   ಪ್ರವಾಸೀ   ಕೇಂದ್ರದ   ಅವಗುಣಗಳನ್ನು   ರೂಢಿಸಿಕೊಂಡ   ಕತ್ರ   ಸುತ್ತುವ   ಮನಸ್ಸೂ   ನಮಗೆ   ಬರಲಿಲ್ಲ .  ಆಗ   ಒದಗಿದ್ದು   ಹೋಟೆಲಿನಿಂದ   ಎರಡೇ   ಮಿನಿಟು   ದೂರದಲ್ಲಿದ್ದ   ಹೊಸಾ   ಮಾಲ್ - ಮಲ್ಟಿಪ್ಲೆಕ್ಸ್ .  ಅಲ್ಲಿ   ವಾರದ   ಹಿಂದಷ್ಟೇ   ಬಿಡುಗಡೆಗೊಂಡ   ಹಿಂದಿ   ಚಿತ್ರ  ` ಪೀಕು ’ – ( ಅಮಿತಾಭ್ ,  ದೀಪಿಕಾ ,  ಇರ್ಫಾನ್ )  ನಮ್ಮನ್ನು   ಆಕರ್ಷಿಸಿತ್ತು .  ಗಂಟೆ   ಹತ್ತಾದರೂ   ಧಿಯೇಟರೇನು   ಆ   ವಲಯದ   ಪೇಟೆಯೇ 
 ಖಾಲಿ   ಹೊಡೆದಿತ್ತು .  ನಾವು   ನಿರ್ಯೋಚನೆಯಿಂದ   ಹತ್ತೂಕಾಲರ   ಪ್ರದರ್ಶನಕ್ಕೆ   ಟಿಕೆಟ್   ಖರೀದಿಸಿದೆವು .  ಟಿಕೆಟ್ಟಿನಾಕೆ   ಸಂಕೋಚದಲ್ಲೇ   ಹೇಳಿದಳು  “ ಇದರಿಂದ   ಪೀಕುಗೆ   ಮೂರು   ಜನ   ಪ್ರೇಕ್ಷಕರು   ಬಂದಂತಾಯ್ತು !  ಕನಿಷ್ಠ   ಆರು   ಜನವಾಗದಿದ್ದರೆ   ಪ್ರದರ್ಶನ   ರದ್ದಾಗುತ್ತದೆ .  ಆಗ   ಇದೇ   ಟಿಕೆಟ್ಟನ್ನು   ನೀವು   ಮತ್ತೈದೇ   ಮಿನಿಟಿನಲ್ಲಿ   ತೊಡಗುವ ,  ಇನ್ನೊಂದೇ   ಹೊಸ   ಸಿನಿಮಾ  –  ಗಬ್ಬರಿಗೆ  ( ಅಕ್ಷಯ   ಕುಮಾರ್ ,  ಪ್ರಿಯಾಂಕಾ )  ಬಳಸಿ   ಸಹಕರಿಸಬೇಕು .”  ಪೀಕುಗೆ   ನಮಗೂ   ಮೊದಲೇ   ಮುಂಬೈ   ತರುಣನೊಬ್ಬ   ಟಿಕೆಟ್   ತೆಗೆದಿದ್ದ .  ಆತ   ನಮ್ಮ   ಸೇರ್ಪಡೆಯಿಂದ   ತುಸು   ಉತ್ತೇಜಿತನಾಗಿ   ವಠಾರದಲ್ಲಿದ್ದ   ಇತರ   ನಾಲ್ಕೈದೇ   ಮಂದಿಯಲ್ಲಿ   “ ಪೀಕು   ದೇಖೋ ”  ಪುಸಲಾವಣೆಗಿಳಿದ .  ಆದರೆ   ಅವರ   ಹೇಳಿಕೆ   ನಮ್ಮ   ಸಾಮಾನ್ಯ   ಚಿತ್ರವೀಕ್ಷಕರ   ಮನೋಸ್ಥಿತಿಗೆ   ಹಿಡಿದ   ಕನ್ನಡಿ : “ ಅಯ್ಯೋ   ಆ   ಮುದ್ಕ   ಅಮಿತಾಬ್ ...!”
 ಅನಿವಾರ್ಯವಾಗಿ   ನಾವು   ಮೂವರು   ಮತಾಂತರಗೊಂಡೆವು .  ಹಾಗೆಂದು   ಅಲ್ಲಿ   ಗಬ್ಬರ್   ಯಶಸ್ವಿ   ಎಂದು   ಭಾವಿಸಬೇಡಿ .  ಒಟ್ಟು   ವೀಕ್ಷಕ   ಸಂಖ್ಯೆ   ಹದಿನೈದನ್ನು   ಮೀರಲಿಲ್ಲ !   
VIDEO 
ಚಿತ್ರದಲ್ಲಿ ,  ಪ್ರತಿಷ್ಠಿತ   ಇಂಜಿನಿಯರಿಂಗ್   ಕಾಲೇಜಿನ   ಅಧ್ಯಾಪಕನೊಬ್ಬ   ಜಗಭ್ರಷ್ಟನಿಂದ   ಸತ್ತೂ   ಬದುಕುತ್ತಾನೆ .  ಮತ್ತೆ   ಆದರ್ಶ   ಸಮಾಜ   ರಚನೆಯ   ಪಣ   ತೊಟ್ಟು ,  ಆಪ್ತ   ಶಿಷ್ಯವೃಂದದ   ಕೂಟ   ಕಟ್ಟುತ್ತಾನೆ . ` ಗಬ್ಬರ್ ’  ಎಂಬ   ವೀರನಾಮದಲ್ಲಿ   ಅತಿಮಾನುಷ   ಸಾಹಸಗಳೊಡನೆ   ನಾಯಕತ್ವ   ಕೊಡುತ್ತಾನೆ .  ಮಹಾಭ್ರಷ್ಟನನ್ನು   ಮುಗಿಸುವುದರಲ್ಲಿ   ಕಥೆ   ಶಿಖರ   ಮುಟ್ಟುತ್ತದೆ .  ಆ   ಉದ್ದಕ್ಕೂ   ಹರಿದ 
 ಸಂದೇಶಗಳ   ಪ್ರವಾಹಕ್ಕೆ   ತಾರ್ಕಿಕ   ಕೊನೆ   ತೋರುವಂತೆ , “ ಕಾನೂನಿಗೆ   ಯಾರೂ   ಅತೀತರಲ್ಲ ”  ಎನ್ನುವುದನ್ನೂ   ಮೆರೆಯಿಸಿ ,  ನಾಯಕ   ಗಲ್ಲುಗಂಬ   ಏರುವುದರೊಂದಿಗೆ   ನಮಗೆ   ಮುಕ್ತಿ   ಸಿಕ್ಕಿತು . [ ಶಿಳ್ಳೆ   ಬೊಬ್ಬೆಗಳ   ಕೊರತೆ   ಕಂಡು  ( ಅಕ್ಷಯ್   ಕುಮಾರ್ ) “ ಫ್ಯಾನುಗಳಿರಲಿಲ್ಲ ”  ನಾನಂದೆ .  ಒಂದೂವರೆ   ಗಂಟೆ   ತಂಪಾಗಿ   ಕಳೆದ   ಸಂತೋಷಕ್ಕೆ   ಜತೆಗಾತಿ  “ ಏಸಿ   ಇತ್ತಲ್ಲಾ ”  ಅನ್ನಬೇಕೆ !] 
ಹೋಟೆಲಿನಲ್ಲಿ  ಉಳಿದವರ ಜತೆ   ಊಟ   ಮುಗಿಸಿದೆವು .  ಗಿರೀಶ್   ನಿಶ್ಚೈಸಿದ್ದ   ಕಾರು   ನಮ್ಮನ್ನೇ   ಕಾದಿತ್ತು .  ಅದನ್ನೇರಿ   ಹೋಟೆಲಿಗೂ   ಕತ್ರಕ್ಕೂ   ವಿದಾಯ   ಹೇಳಿದೆವು .  ಜಮ್ಮು   ದಾರಿಯಲ್ಲಿ    ನಗ್ರೋಟ 
 ಎಂಬಲ್ಲಿ   ಎರಡು   ದೇವಸ್ಥಾನಗಳ   ಸಂದರ್ಶನವಾಯ್ತು .  
  ಇದು   ದೊಡ್ಡ   ದೇವರ  ( ವೈಷ್ಣೋದೇವಿ )  ಭಕ್ತರಲ್ಲಿ   ಕಿರಿಪಾಲು   ಕೇಳುವಂತೆ   ` ಪ್ರಥಮ   ವೈಷ್ಣೋದೇವಿ ’  ಎಂದೇ   ಪ್ರಸಿದ್ಧವಂತೆ . ( ಮಂಜುನಾಥನ   ಭಕ್ತರಲ್ಲಿ   ಚಾರ್ಮಾಡಿಯ   ಅಣ್ಣಪ್ಪ   ಪಾಲು   ಕೇಳಿದ   ಹಾಗೆ ?)  ಅಲ್ಲಿನ   ವಿಸ್ತಾರ   ಬಸ್   ನಿಲ್ದಾಣದಲ್ಲಿ   ಎರಡು   ಪ್ರವಾಸೀ   ಬಸ್ಸುಗಳು   ಬಂದು   ಠಿಕಾಣಿ   ಹೂಡಿದ್ದು   ಪ್ರೇಕ್ಷಣೀಯವಾಗಿತ್ತು .  
 ಗ್ಯಾಸ್   ಸ್ಟವ್ ,  ತರಕಾರಿ   ಕೊಚ್ಚು ,  ಅಡುಗೆ - ಪಡುಗೆ   ಬಸ್ಸಿನ   ಬುಡದಲ್ಲೇ   ನಡೆದಿತ್ತು .  ಯಾತ್ರಿಗಳು   ಮಂದಿರದ   ಹಜಾರಗಳಲ್ಲಿ   ಮನಸ್ಸಿನ   ಶಾಂತಿಯನ್ನೂ   ದೇಹದ   ವಿಶ್ರಾಂತಿಯನ್ನೂ   ತಳುಕು   ಹಾಕಿ   ನಿದ್ರಿಸಿದ್ದರು !  ನಾವು   ಸಾಕಷ್ಟು   ಚುರುಕಿನಲ್ಲೇ   ದೇವಾಲಯಕ್ಕೊಂದು   ಸುತ್ತು   ಹಾಕಿ   ಪ್ರಯಾಣ   ಮುಂದುವರಿಸಿದೆವು .  
  
ಜಮ್ಮು   ಹೊರವಲಯದಲ್ಲಿ 
 ಇನ್ನೊಂದು   ದೇವಳ   ದರ್ಶನ  –  ರಘುನಾಥ   ಮಂದಿರ .  ಇದು   ಪಕ್ಕಾ   ವಾಣಿಜ್ಯ   ಹಾಗೂ   ವಸತಿ   ಸಂಕೀರ್ಣಗಳ   ಮತ್ತು   ಸದಾ   ಜನವಾಹನ   ಸಮ್ಮರ್ದವುಳ್ಳ   ವಠಾರದ   ನಡುವೆ   ಇದೆ .  ಆದರೂ   ಬಹಳ   ದೊಡ್ಡ   ವಠಾರವುಳ್ಳ   ದೇವಳ .  
  ಇಲ್ಲಿ   ಹಲವು   ಆರಾಧನಾಮೂರ್ತಿಗಳ   ನಡುವೆ   ರಘುನಾಥ   ಅಧಿ   ದೇವರು .  ಏಳು   ಗೋಪುರಗಳ   ಮಂದಿರ ,  ಸುಮಾರು   ನೂರೈವತ್ತು   ವರ್ಷಗಳ   ಪ್ರಾಚೀನತೆಯುಳ್ಳ   ಬಹುಜನ   ವಿಶ್ವಾಸದ   ಕೇಂದ್ರ ,  ಎಂದೆಲ್ಲ   ಅಂತರ್ಜಾಲ   ವಿಶ್ವಕೋಶ  ( ವಿಕಿಪೀಡಿಯ )  ಇದರ   ಕುರಿತು   ಉದ್ದುದ್ದ   ಹಾಡುತ್ತದೆ .  ಮುಂದುವರಿದು ,  ಸಹಜವಾಗಿ   ೨೦೦೨ರಷ್ಟು   ಹಿಂದೆಯೇ   ಎರಡೆರಡು   ಬಾರಿ   ಇದರ   ಮೇಲೆ   ಉಗ್ರರ   ಕೈ   ಬಾಂಬು   ದಾಳಿ   ನಡೆದು   ಹಲವು   ಜೀವಹಾನಿಯಾದದ್ದನ್ನೂ   ದಾಖಲಿಸುತ್ತದೆ .  ಹಾಗಾಗಿ   ಈಗ   ಭಾರೀ   ಸೈನಿಕ   ಬಂದೋಬಸ್ತು .  ಅಂದರೆ   ವೈಷ್ಣೋದೇವಿ   ಮಂದಿರದಂತೇ   ನಮ್ಮನ್ನು   ಜಾಲಾಡಿ ,  ವಾಚು ,  ಪೆನ್ನಿನವರೆಗೆ   ಎಲ್ಲವನ್ನೂ    ಹೊರಗೇ 
 ಉಳಿಸಿ   ಒಳಗೆ   ಬಿಟ್ಟರು .  ಒಂದು   ಸುತ್ತು   ಹಾಕಿದೆವು .  ಅದಕ್ಕಿರುವ   ಜನಪ್ರಿಯತೆಗೆ  ( ಆದಾಯಕ್ಕೆ )  ನಿರ್ವಹಣೆ   ತುಂಬ   ಕೊಳಕಾಗಿದೆ .  ಲೌಕಿಕ   ಶುದ್ಧವನ್ನೇ   ಕಾಣದ   ತಾಣ   ಏನು   ಪಾರಮಾರ್ಥಿಕಶುದ್ಧಿಯನ್ನು   ಕೊಟ್ಟೀತೋ ! “ ಸ್ವರ್ಗವೇ   ಭೂಮಿಯೊಳಗಿರದಿರೆ   ನೀನು ,  ಬೇರೆಲ್ಲೂ   ಇಲ್ಲಾ ”  ಎಂಬ   ಕುವೆಂಪು   ಗೀತೆ   ಗುನುಗಿಕೊಂಡು   ಕಾರಿಗೆ   ಮರಳಿದೆವು .  ಕಾರಿನವನು   ನಮ್ಮನ್ನು   ರೈಲ್ವೆ   ನಿಲ್ದಾಣಕ್ಕೊಯ್ದು   ಬಿಟ್ಟು   ಹೋದ .  
  
ಜಮ್ಮು   ರೈಲ್ವೇ 
 ನಿಲ್ದಾಣಕ್ಕೆ   ನೆರೆ   ಬಂದಿತ್ತು .  ಎಲ್ಲಾ   ಆರಾಮ್  ಘರ್  ಗಳಿಗೂ   ಪ್ಲ್ಯಾಟ್   ಫಾರಮ್ಮಿನ   ಆಸನ   ಸಾಲುಗಳಿಗೂ  ಜಗುಲಿಗೂ  ಜನಮಹಾಪೂರ   ಬಂದು   ತಳಮಳಿಸಿತ್ತು .  ಇನ್ನೂ   ಸಂಜೆ   ಐದು   ಗಂಟೆ ,  ನಮಗೆ   ರೈಲು   ರಾತ್ರಿ   ಒಂಬತ್ತರ   ಮೇಲೆ !  ಅಂದರೆ   ಸುಮಾರು   ನಾಲ್ಕರಿಂದ   ಐದು   ಗಂಟೆಯವರೆಗೆ  ( ಸಮಯಕ್ಕೆ   ಸರಿಯಾಗಿ   ಯಾವ   ರೈಲು   ಓಡುತ್ತದೆ   ಹೇಳಿ !)  ನಾವು   ಅಕ್ಷರಶಃ   ಕೇರಾಫ್   ರೈಲ್ವೇ   ಫುಟ್ಪಾತ್ !  ಇದ್ದದ್ದರಲ್ಲಿ   ಚೊಕ್ಕವಿದ್ದ ,  ಫ್ಯಾನ್   ತಳದ   ನೆಲ   ಹುಡುಕಿ ,  ಗಂಟು   ಗದಡಿ   ಎದುರಿಟ್ಟುಕೊಂಡು ,  ಅದರ   ಮೇಲೆ   ಗಿರೀಶ್   ಕಟ್ಟಿಸಿಕೊಟ್ಟಿದ್ದ   ಬುತ್ತಿಯೂಟ   ಇಟ್ಟುಕೊಂಡು   ಕುಳಿತೆವು .  
  ಜನಸಾಗರ ,  ವರ್ತನಾ   ವೈಖರಿಗಳು , “ ಪ್ರಯಾಣಿಕರ   ಗಮನಕ್ಕೆ ”  ಘೋಷಣೆಗಳು ,  ಕಡಲನ್ನು   ಚಮಚದಲ್ಲಿ   ಮೊಗೆದಂತೆ   ಆಗೀಗ   ಬಂದು   ಹೋಗುತ್ತಿದ್ದ   ರೈಲು   ಗಾಡಿಗಳು ,  ಶ್ವಾನ   ಸಹಿತ   ವಿಶೇಷ   ಪೋಲಿಸ್   ತನಿಖೆಗಳು   ಮಿನಿಟು   ಮಿನಿಟಾಗಿ   ಎಳೆದು   ನಮ್ಮ   ಸಮಯವನ್ನು   ತರಲು   ಸಹಕರಿಸುತ್ತಿತ್ತು .  ಮೂರು   ಅಡ್ಡೆ   ಸುತ್ತಿ ,  ಹೊರಾವರಣದ   ಕಟ್ಟಡಕ್ಕೆ   ಹೋಗಿ ,  ಸ್ಥಳನಿರ್ದೇಶನ   ಕಾಣಿಸದ   ನಮ್ಮಿಬ್ಬರ   ಟಿಕೆಟ್ಟನ್ನು   ಸರಿಪಡಿಸಿಕೊಂಡು   ಬಂದೆ .  ಉಳಿದಂತೆ  ` ವಿಚಾರಣಾ   ಅಡ್ಡೆ ’ ಯ   ತಲೆ   ತಿನ್ನುವುದು ,
 ಮೂತ್ರದೊಡ್ಡಿ   ಸಂದರ್ಶನ ,  ಅಕ್ಬಾರ್   ದುಕಾನ್   ಹುಡುಕಾಟ ,  ಚಿಲ್ಲರೆ   ಖರೀದಿಗಳು ,  ಚಾಯ್ಪಾನದ   ಭ್ರಮೆ   ಎಲ್ಲಾ   ಮುಗಿದ   ಮೇಲೆ  “ ಬಾಲೇ   ಟೋಟದ   ಪಕ್ಕದ   ಕಾಡೊಲು ...”  ಇದ್ದ   ಪ್ರಜೆಗಳಂತೆ ,  ರಾತ್ರಿ   ಊಟ   ಯಾವ   ವೇಳೆಗೆ   ಪ್ರಶಸ್ತ   ಎಂದು   ಗಂಭೀರ   ಚರ್ಚೆ   ನಡೆಸಿದೆವು .   
ಗಣೇಶ   ಭಟ್ಟ್ 
 ದಂಪತಿ   ಹವಾನಿಯಂತ್ರಿತ   ಭೋಗಿ   ಬಯಸಿದ್ದರಿಂದ   ತುಸು   ಮೊದಲಿನ   ಪ್ರತ್ಯೇಕ   ಗಾಡಿ .  ಅದು   ಲೆಕ್ಕಕ್ಕೆ   ಏಳೂವರೆಯಾದರೂ   ಎಂಟೂಹತ್ತಕ್ಕೆ   ಅವರನ್ನೊಯ್ಯಿತು .  ನಮ್ಮ   ಮತ್ತು   ಧನಂಜಯರ   ಕುಟುಂಬದ   ಗಾಡಿ   ಒಂಬತ್ತರದ್ದು   ಜಮ್ಮು   ಬಿಡುವಾಗ   ಹತ್ತಾಗಿತ್ತು .  ಗಾಡಿಯೊಳಗೆ   ನಮ್ಮೆರಡು   ಕುಟುಂಬಕ್ಕೆ   ಸಿಕ್ಕ   ಸ್ಥಾನಗಳು   ಭಿನ್ನ   ಮೂಲೆಗಳಲ್ಲಿದ್ದುವು .  ಸಹಜವಾಗಿ   ರಾತ್ರಿಯುದ್ದಕ್ಕೆ   ಬಂದುಹೋಗುವವರ   ಗೊಂದಲ ,  ನಮ್ಮ   ಸೊತ್ತುಗಳ   ಕುರಿತ   ಆತಂಕ  -  ನಮ್ಮ   ನಿದ್ರೆ   ಕನಸಾಯ್ತು .  ಬೆಳಿಗ್ಗೆ   ಏಳು   ಗಂಟೆಯ   ಸುಮಾರಿಗೆ   ದಿಲ್ಲಿ   ತಲಪಿದೆವು .  ಅಲ್ಲಿ   ಒಟ್ಟಾಗಿ   ಟ್ಯಾಕ್ಸೀ   ಮಾಡಿ   ಮತ್ತೆ   ಕರೋಲ್ಭಾಗಿನ   ಹೋಟೆಲ್   ಸನ್ಶೈನ್   ಸೇರಿಕೊಂಡೆವು .  
  ಆ   ದಿನ   ಎಲ್ಲರಿಗೂ 
 ವಿಶ್ರಾಂತಿ   ದಿನವೆಂದೇ   ಗಿರೀಶ್   ಘೋಷಿಸಿದ್ದರು .  ಅದು   ಕೊಳ್ಳುಬಾಕರಿಗೆ   ದಿಲ್ಲಿ   ಮಾರುಕಟ್ಟೆ   ಕೊಳ್ಳೆ   ಹೊಡೆಯುವುದಕ್ಕೆ   ಇರಬಹುದು .  ಅಥವಾ   ಕಾಶ್ಮೀರದ   ಭೌಗೋಳಿಕ   ಅಸ್ಥಿರತೆಯಲ್ಲೋ   ರಾಜಕೀಯ   ತಳಮಳದಲ್ಲೋ   ಸಮಯಕ್ಕೆ   ಬರಲಾಗದಿದ್ದರೆ   ಎಂದು   ಟ್ರಾವೆಲ್ಸಿನವರು   ಹೆಚ್ಚುವರಿಯಾಗಿ   ಇಟ್ಟುಕೊಂಡದ್ದೂ    ಇರಬಹುದು .
 ಮಾರಣೇ   ದಿನ   ಅಲ್ಲಿಂದ   ` ಮರಳಿ   ಕರ್ನಾಟಕ ’  ಸಂಚಾರ   ವ್ಯವಸ್ಥೆ   ( ನಾವೇ   ಬಯಸಿದಂತೆ ) ನಮ್ಮ ತಂಡವನ್ನು  ಇನ್ನಷ್ಟು ಚದುರಿಸಿತು .  ಧನಂಜಯ   ಕುಟುಂಬಕ್ಕೆ   ವಿಮಾನದ   ಟಿಕೆಟ್ .  ಭಟ್   ಕುಟುಂಬಕ್ಕೆ   ಬೆಳಿಗ್ಗೆ   ಬೇಗನೆ   ಹೊರಡುವ   ಬೆಂಗಳೂರು   ರೈಲು .  ನಮಗೆ   ಸುಮಾರು   ಹತ್ತು   ಗಂಟೆಗೆ   ಹೊರಡುವ   ಮಂಗಳೂರು   ರೈಲು .  ಈ   ಗೊಂದಲದಲ್ಲಿ   ವಿಕ್ರಂ 
 ಟ್ರಾವೆಲ್ಸಿನೊಡನೆ   ಹೆಚ್ಚು    ಒಡನಾಡಿದವರೇ 
 ಆದ   ಸುವರ್ಣ   ಮತ್ತು   ರೇಖಾ   ಜೋಡಿ   ಮಾತ್ರ   ಅತಂತ್ರರಾದದ್ದು   ದೊಡ್ಡ   ವಿಪರ್ಯಾಸ ;  ಆ   ಮೂವರಿಗೆ   ಟಿಕೆಟ್ಟೇ 
 ಆಗಿರಲಿಲ್ಲ .  ಅದನ್ನು   ಸರಿಪಡಿಸಲು   ಗಿರೀಶ್   ಸರ್ಕಸ್   ನಡೆಸಿದ್ದರು . ( ಎರಡು   ದಿನಗಳ   ದಿಲ್ಲಿ   ವಿಶ್ರಾಂತಿಯ   ಕೊನೆಯಲ್ಲಿ ,  ಸ್ವತಃ   ಗಿರೀಶ್   ಜೊತೆಗೊಟ್ಟು ,  ಬಳಸು   ದಾರಿಯಲ್ಲಿ   ಮೂವರನ್ನೂ   ಊರು   ಮುಟ್ಟಿಸಿದರೆಂದು   ಅನಂತರ   ತಿಳಿಯಿತು )  
ಭಾರತೀಯ   ದೇಗುಲಗಳ 
 ಪೈಕಿ   ಆರಾಧನೆಗೂ   ಭಕ್ತರಿಗೂ   ಆಧುನಿಕ   ಶಿಸ್ತು   ಮತ್ತು   ಶುಚಿಯನ್ನು   ಅಳವಡಿಸಿದವುಗಳಲ್ಲಿ   ರಾಮಕೃಷ್ಣಾಶ್ರಮ  ( ಕ್ರಿ . ಶ . ೧೮೯೭ .  ಇದು   ಬಹುಶಃ   ಪ್ರಥಮವೂ   ಇರಬೇಕು )  ಅಗ್ರೇಸರ .  ಅನಂತರದ   ದಿನಗಳಲ್ಲಿ   ಅದನ್ನು   ಅನುಸರಿಸಿದಂತೆ   ಹಲವು   ಭಕ್ತಿ   ಕೇಂದ್ರಗಳೇನೋ   ಬಂದಿವೆ .  ಆದರೆ   ರಾಮಕೃಷ್ಣಾಶ್ರಮಗಳು   ರೂಢಿಸಿದ   ಸರಳತೆ   ಮತ್ತು   ಮಂದಿರ   ಕೇಂದ್ರಿತವಾದ   ಆರ್ಥಿಕ   ಉತ್ಪನ್ನವನ್ನು   ವಿವಿಧ   ಸಾಮಾಜಿಕ   ಸೇವೆಗೇ   ಬದ್ಧವಾಗಿಸುವ  ( ಅನಾಥಾಶ್ರಮ ,  ವಿದ್ಯಾ   ಸಂಸ್ಥೆ ,  ವಿದ್ಯಾರ್ಥಿ   ನಿಲಯ ,  ಆದಿವಾಸಿಗಳ   ಪುನರುತ್ಥಾನ   ಇತ್ಯಾದಿ )  ಕ್ರಮವನ್ನು  ಇನ್ನೊಂದು   ಸಂಸ್ಥೆಯಲ್ಲಿ   ನಾನು   ಕಾಣಲಿಲ್ಲ .  ಅಂದರೆ, ಉಳಿದವು   ದೇಗುಲದ   ಮತ್ತು   ತತ್ಸಂಬಂಧೀ   ಆಚರಣೆಗಳ   ವೈಭವೀಕರಣ   ನಡೆಸುತ್ತವೆ .  ಇವರ   ವಿನಿಯೋಗಗಳೇನಿದ್ದರೂ   ತಮ್ಮದೇ   ಭಕ್ತಿ   ಪೂರಕವಾದ   ಚಟುವಟಿಕೆಗೆ ,  ಸಂಸ್ಥೆಗೆ   ಲಾಭ   ತರುವ   ಬಾಬುಗಳಿಗಷ್ಟೇ   ಇರುತ್ತವೆ .  ಎಷ್ಟೋ   ಸಂದರ್ಭಗಳಲ್ಲಿ   ಇಂಥಾ   ದೇವಳಗಳಲ್ಲಿ   ಮೂಲ   ಹೂಡಿಕೆ   ಪಕ್ಕಾ   ವಾಣಿಜ್ಯೋದ್ಯಮಗಳದ್ದೇ   ಇರುವುದನ್ನು   ನಾವು   ಕಾಣುತ್ತೇವೆ .  ಇಂಥ   ಭಕ್ತ್ಯೋದ್ಯಮದಲ್ಲಿ   ದಿಲ್ಲಿಯ   ಅಕ್ಷರಧಾಮ   ಎಂಬ   ಸ್ವಾಮಿ   ನಾರಾಯಣರ   ಆರಾಧನಾ   ಕೇಂದ್ರ   ತನ್ನ   ವಿಸ್ತಾರ   ವೈಭವಗಳಿಂದಲೇ   ಬಹುಪ್ರಚುರಿತವಾಗಿದೆ .  ಇದರ   ಗುಜರಾಥ್   ಶಾಖೆಯ   ಮೇಲೆ   ೨೦೦೨ರಲ್ಲಿ   ಭಯೋತ್ಪಾದಕರ   ದುರಾಕ್ರಮಣವಾಗಿತ್ತು .  ಅದು   ಉಂಟು   ಮಾಡಿದ   ಅನುಕಂಪದ   ಅಲೆಯೂ   ಈ   ಮಂದಿರಗಳಿಗೆ   ಕೊಟ್ಟ 
 ಪ್ರಚಾರ   ಸಣ್ಣದಲ್ಲ .  ಹಾಗಾಗಿ   ದಿಲ್ಲಿ - ವಿಶ್ರಾಂತಿಯ   ಪೂರ್ವಾಹ್ನ   ನಾವಿಬ್ಬರು   ಮೆಟ್ರೋ   ರೈಲೇರಿ   ಅಕ್ಷರಧಾಮಕ್ಕೆ   ಭೇಟಿ   ಕೊಟ್ಟೆವು .  
  ಸುಮಾರು   ಎರಡು   ಗಂಟೆಗಳ   ಕಾಲ   ಅದರ   ಖಾಯಂ   ಪ್ರದರ್ಶನಗಳನ್ನೆಲ್ಲ   ವಿರಾಮದಲ್ಲಿ   ನಡೆದು   ನೋಡಿದೆವು .  ಸಂಜೆಗಳಿಗೇ   ಮೀಸಲಾದ   ವಿಶೇಷ   ಪ್ರದರ್ಶನಗಳ   ಬಗ್ಗೆ   ಪ್ರಚಾರ   ಸಾಹಿತ್ಯ   ನೋಡಿಯೇ   ಸಾಕೆನ್ನಿಸಿತು .  ಪಾರಂಪರಿಕವಾಗಿ   ಆರಾಧನಾ   ಕೇಂದ್ರಗಳಿಗೆ   ಏನೂ   ಕೊರತೆಯಿಲ್ಲದ   ದೇಶದಲ್ಲಿ   ಅಕ್ಷರಧಾಮ   ತನ್ನನ್ನೇ   ಬಣ್ಣಿಸಿಕೊಳ್ಳುವ   ಇನ್ನೊಂದು   ವಾಣಿಜ್ಯ   ಕೇಂದ್ರ .  
 ಕನಿಷ್ಠ   ನಾಗರಿಕ   ಸೌಕರ್ಯಗಳಿಗೂ  ( ನೆಲ ,  ನೀರು ,  ವಿದ್ಯುತ್ ,  ಸಂಪರ್ಕ   ಇತ್ಯಾದಿ )  ವಿಪರೀತ   ಒತ್ತಡ   ಇರುವ   ಮಹಾನಗರ   ಕೇಂದ್ರಿತವಾಗಿಯೇ   ಬರುವ   ಅಕ್ಷರಧಾಮವನ್ನು   ಯಾವ   ಮೌಲ್ಯದ   ಹೆಸರಿನಲ್ಲೂ   ನಾನು   ಮೆಚ್ಚಲಾರೆ . ( ಅದರ   ಶಿಲ್ಪಕಲಾವೈಭವ ,  ಪ್ರದರ್ಶಿಕೆಗಳ   ಮಹತ್ತ್ವ ,  ವಿಶೇಷ   ಪ್ರದರ್ಶನಗಳ   ಪರಿಣಾಮ   ಮುಂತಾದವುಗಳು   ವಿವಿಧ   ಮಾಧ್ಯಮಗಳಲ್ಲಿ   ಸಾಕಷ್ಟು   ಇವೆ  –  ಆಸಕ್ತರು   ಓದಿಕೊಳ್ಳಬಹುದು !)  
ಸಂಜೆ   ಮತ್ತೆ 
 ಕರೋಲ್   ಭಾಗ್   ಮಾರುಕಟ್ಟೆಯಲ್ಲಿ   ಸಾಕಷ್ಟು   ವ್ಯಾಪಕವಾಗಿಯೇ   ಸುತ್ತಿ   ಹೋಟೆಲಿಗೆ   ಮರಳಿದೆವು .  ಮರು   ಬೆಳಿಗ್ಗೆ   ಆರಾಮವಾಗಿ   ನಾವಿಬ್ಬರೇ   ಗಿರೀಶ್   ಮಾಡಿಕೊಟ್ಟ   ರಿಕ್ಷಾ   ಏರಿ   ನಿಜಾಮುದ್ದೀನ್   ರೈಲ್ವೇ   ನಿಲ್ದಾಣಕ್ಕೆ   ಹೋದೆವು . 
ಹತ್ತು   ಗಂಟೆ 
 ಐದು   ಮಿನಿಟಿಗೆಂದು   ನಿಗದಿಗೊಂಡ   ರೈಲು   ಅರ್ಧ   ಗಂಟೆ   ತಡವಾಗಿ   ಹೊರಟದ್ದೇ   ನಮ್ಮ   ಪುಣ್ಯ .  ಅದು   ದಿಲ್ಲಿ   ಹೊರವಲಯ   ತಲಪುತ್ತಿದ್ದಂತೆ   ಮಧ್ಯಾಹ್ನದ  ` ಬಿಸಿಯೂಟ ’ ಕ್ಕೆ   ಹೆಸರು   ನೋಂದಾಯಿಸಿಕೊಳ್ಳುವ   ಜನಕ್ಕೆ   ಹೆಸರು   ಕೊಟ್ಟೆವು .  ಆದರೆ   ರೈಲಿನ   ವಿರಾಮದ   ಓಟದಲ್ಲಿ   ನಿಗದಿತ   ಊಟದ - ನಿಲ್ದಾಣ ,  ಅಂದರೆ   ಸವಾಯ್   ಮಾಧೋಪುರ ,  ಬರುವಾಗ   ಅಪರಾಹ್ನ   ಗಂಟೆ   ಮೂರಾಗಿತ್ತು .  ಈ   ಪಾಠ   ನಮ್ಮ 
 ಮುಂದಿನ   ಮೂರು   ಊಟಗಳನ್ನು   ಪರೋಕ್ಷವಾಗಿ   ಕಾಪಾಡಿತು !  ನಾವು   ದಿಲ್ಲಿ   ಪೇಟೆ   ಸುತ್ತಾಟದಲ್ಲಿ   ಸಂಗ್ರಹಿಸಿದ್ದ   ಮಾವು ,  ಸೌತೆ  ( ಕಾಕ್ಡೀ ),  ಬಾಳೇಹಣ್ಣು   ತುಂಬಾ   ಉಪಯೋಗಕ್ಕೆ   ಬಂತು .  ಉಳಿದಂತೆ   ಸ್ವಲ್ಪ   ಹಗುರ   ಹೊಟ್ಟೆಯಲ್ಲೇ   ಇದ್ದು ,  ಮಾರಿ   ಬರುತ್ತಿದ್ದ   ಚಾ   ಮತ್ತು   ಆಯ್ದ   ಸಣ್ಣಪುಟ್ಟ   ತಿನಿಸುಗಳಲ್ಲೇ   ಮುಂದಿನ   ಪ್ರಯಾಣಾವಧಿಯನ್ನು   ಪೂರೈಸಿಕೊಂಡೆವು .  ಸಿಕ್ಕಿದ್ದನ್ನು   ತಿಂದು ,  ಸಿಕ್ಕಿದಲ್ಲಿ   ತೂರಿ   ಸಾರ್ವಜನಿಕ   ಪೀಡೆಗಳಾಗಲಿಲ್ಲ ,  ಸ್ವಂತ   ಆರೋಗ್ಯವನ್ನೂ   ಉಳಿಸಿಕೊಂಡೆವು .  
 
 
ಸೆಕೆ ,  ನೀರಿನ 
 ಅಭಾವ   ರೈಲು   ಪ್ರಯಾಣದಲ್ಲಿ   ಬಹಳ   ಕಾಡಿತು . ` ಬಾಟಲ್ಡ್   ವಾಟರ್ ’ ನ   ಭ್ರಮೆಯವರಿಗೆ  ` ಠಂಡ   ಪಾನಿ ’
 ಎಷ್ಟೂ   ಎಲ್ಲೂ   ಸಿಗುತ್ತಿತ್ತು .  ಅದಕ್ಕೆ   ಸರಿಯಾಗಿ   ಪರ್ಲ್ಪೆಟ್   ಬಾಟಲುಗಳು  ( ಎಷ್ಟೋ   ಅರ್ಧಂಬರ್ಧ   ನೀರಿದ್ದಂತೇ )  ಭೋಗಿಯೋಳಗೂ   ಮಾರ್ಗದುದ್ದಕ್ಕೂ   ಎರಚಾಡಿಕೊಂಡಿದ್ದದ್ದನ್ನು   ನೋಡಿದಾಗ   ಸಂಕಟವಾಗುತ್ತಿತ್ತು .  ನಾವಂತೂ   ಸಾರ್ವಜನಿಕ   ವಿತರಣೆಗಳನ್ನು   ಆದಷ್ಟು   ಬಳಸಿ , ` ವ್ಯವಸ್ಥೆ ’  ಅದನ್ನು   ಪೂರ್ಣ   ನಿರಾಕರಿಸುವ   ದಿನ   ದೂರ   ಮಾಡಲು   ಯತ್ - ಕಿಂಚಿತ್   ಕರ್ತವ್ಯ   ಪೂರೈಸಿದ್ದೇವೆ . (ನಮ್ಮ ಸರಕಾರೀ ಕನ್ನಡ ಶಾಲೆಗಳನ್ನು ನೆನೆಸಿಕೊಳ್ಳಿ.)  ನಮ್ಮ   ಎರಡು   ಟಪ್ಪರ್   ವೇರ್   ಖಾಯಂ   ಬಾಟಲುಗಳನ್ನು   ಉದ್ದಕ್ಕೂ   ನಿಲ್ದಾಣಗಳಲ್ಲಿ   ಸಿಕ್ಕ  ` ಕುಡಿಯುವ   ನೀರು ’  ಅಡ್ಡೆಗಳಿಂದ   ಮರುಪೂರಣಗೊಳಿಸಿಕೊಳ್ಳುತ್ತಲೇ   ಬಳಸಿದ್ದೇವೆ .  ಆ   ನಲ್ಲಿಗಳ   ಪರಿಸರ 
 ಎಲ್ಲೆಡೆ   ಶುದ್ಧವಿತ್ತೆಂದು   ಹೇಳಲಾರೆ .  ಆದರೆ   ಆ   ನೀರಿನಿಂದ   ನಮ್ಮ 
 ಆರೋಗ್ಯ   ಎಲ್ಲೂ   ಕೆಡಲಿಲ್ಲ !  ಅದಕ್ಕೂ   ಮಿಕ್ಕು   ಕನಿಷ್ಠ   ಹನ್ನೆರಡರಿಂದ   ಇಪ್ಪತ್ತು   ಪರ್ಲ್ಪೆಟ್   ಬಾಟಲುಗಳ   ಪ್ರಸರಣವನ್ನು   ಕಡಿಮೆಮಾಡಿದ್ದೇವೆ .  ಎರಡನೇ   ದಿನ   ಹಗಲು   ಸುಮಾರು   ಹನ್ನೊಂದು   ಗಂಟೆಗೇ   ನಮ್ಮ   ಭೋಗಿಯ   ಅನ್ಯ   ಬಳಕೆಯ   ನೀರದಾಸ್ತಾನು   ಮುಗಿದು   ಹೋಗಿತ್ತು .  ಒಂದೆರಡು   ದೊಡ್ಡ   ನಿಲ್ದಾಣಗಳನ್ನು   ಕಳೆದರೂ   ಪರಿಸ್ಥಿತಿ   ಸುಧಾರಿಸಲಿಲ್ಲ .  ನಾನು   ಮೊದಲು   ಗಾಡಿಯ   ರಕ್ಷಕನ   ಬಳಿ   ದೂರು   ಸಲ್ಲಿಸಿದೆ .  ಆತ   ಎಂಜಿನ್   ಚಾಲಕನನ್ನು   ಸಂಪರ್ಕಿಸಲು   ತಿಳಿಸಿದ .  ಚಾಲಕನೂ   ಅಸಹಾಯಕ .  ಆ   ದಾರಿಯಲ್ಲಿ   ಭೋಗಿಗಳಿಗೆ 
 ನೀರು   ಮರುಪೂರಣ   ವ್ಯವಸ್ಥೆಯಿದ್ದ   ನಿಲ್ದಾಣ  ( ಮಡ್ಗಾಂವ್ )  ಬರಬೇಕಾದರೆ   ಸಂಜೆ   ಏಳಾಗಿತ್ತು .  ದುರಂತವೆಂದರೆ   ಇದು   ಗಾಡಿಯ   ಕಕ್ಕೂಸುಗಳಲ್ಲಿ ,  ಕೈತೊಳೆಯುವ   ಬಾನಿಗಳಲ್ಲೂ   ಪರ್ಲ್ಪೆಟ್   ಬಾಟಲುಗಳ   ಮೆರೆತವನ್ನು   ಕಾಣಿಸಿತ್ತು .  ಇದರ   ಮೇಲೆ   ಬಹುತೇಕ   ಸಾರ್ವಜನಿಕರ   ಅಶಿಸ್ತು   ಹಾಗೂ   ನೈರ್ಮಲ್ಯಗಳ   ಕೊರತೆ   ನಮ್ಮ   ಪ್ರಯಾಣವನ್ನು   ಅಸಹ್ಯಗೊಳಿಸಿತ್ತು . 
ಒಟ್ಟು   ಯೋಜಿತ 
 ಪ್ರವಾಸದ   ನಿರೀಕ್ಷೆಗಳು   ಸೋತದ್ದನ್ನು   ಈ   ಮರುಪಯಣ   ಹೆಚ್ಚಿಸಿತು .
 ಕತ್ರದ   ಅರ್ಧ   ದಿನದಿಂದ   ತೊಡಗಿ   ಸುಮಾರು   ನಾಲ್ಕು   ದಿನಗಳ   ಉದ್ದವನ್ನು   ನಾವು   ನೀರಸವಾಗಿ   ಕಳೆದೆವು . ( ಇದು   ಮೊದಲೇ   ಸ್ಪಷ್ಟವಾಗಿದ್ದರೆ   ನಾವೂ   ಜಮ್ಮುವಿನಿಂದಲೇ   ವಿಮಾನ   ಹಿಡಿದು   ಮುಗಿಸುತ್ತಿದ್ದೆವು   ಖಂಡಿತ .)  ನಮ್ಮ   ರೈಲಾದರೋ   ಮತ್ತೆ   ಕೇರಳ   ಲಕ್ಷ್ಯದ್ದೇ   ಆಗಿತ್ತು .  ಅದು   ತೀರಾ   ಅವೇಳೆ  –  ಮಧ್ಯರಾತ್ರಿ   ಒಂದು   ಗಂಟೆಯ   ಸುಮಾರಿಗೆ ,  ಮಂಗಳೂರ   ಸಂಧಿಸ್ಥಳದಲ್ಲಿ  ( ಕಂಕನಾಡಿ )  ಕೇವಲ   ಐದು   ಮಿನಿಟಷ್ಟೇ   ನಿಂತು   ಮುದುವರಿಯುವುದಿತ್ತು .  ಇದು   ನಮ್ಮ   ಒಳಗುದಿಯನ್ನು   ಹೆಚ್ಚಿಸಿ , ‘ ಮಂಗಳೂರು   ತಪ್ಪಿಯೇ   ಹೋಗಬಹುದು ’  ಎಂಬ   ಆತಂಕವನ್ನೇ   ಮೂಡಿಸಿತ್ತು .  ಹಾಗಾಗಿ   ನಾವು   ಕುಂದಾಪುರದಿಂದಲೇ   ಸಜ್ಜಾಗಿ   ಕುಳಿತು ,  ಹಾದುಹೋಗುವ   ನಿದ್ದೆಗಣ್ಣಿನ   ನಿಲ್ದಾಣಗಳ   ಲೆಕ್ಕ   ಹಾಕಿದೆವು .  ಉಡುಪಿ   ಮಂಗಳೂರುಗಳ   ನಿಗದಿತ   ತಂಗುವಿಕೆಯನ್ನು   ಮೀರಿ   ಯಾವ್ಯಾವುದೋ   ಕಾರಣಕ್ಕೆ   ಹಸಿರು   ಕಂದೀಲು   ಸಿಗದೆ   ನಿಂತದ್ದೆಲ್ಲ   ಸೇರಿ   ಭಾರೀ   ವಿಳಂಬವನ್ನೇ   ಲೆಕ್ಕ   ಹಾಕಿದ್ದೆವು .  ಆದರೆ   ಒಂದು   ಗಂಟೆಯ   ಸುಮಾರಿಗೇ   ಕಂಕನಾಡಿ   ಬಂದಾಗ   ಕಡೆಗೂ   ಮುಗಿಯಿತಲ್ಲ   ಎಂಬ   ಬಿಡುಗಡೆಯ   ಭಾವ   ಬಂದಿತ್ತು .  ನಿಲ್ದಾಣದ   ಆಟೋ   ರಾಕ್ಷಸ   ನಿರ್ದಯೆಯಿಂದ   ನೂರೈವತ್ತು   ರೂಪಾಯಿ  ( ಮುಂದಾಗಿಯೇ   ಮಾತಾಡಿದಂತೇ )  ವಸೂಲು   ಮಾಡಿ   ಮನೆ   ಮುಟ್ಟಿಸಿದಾಗ ,  ಬಳಕೆದಾರ   ಜಾಗೃತಿಗೂ   ಮಿತಿಯುಂಟೆಂದು   ಕೇವಲ   ತರ್ಕಿಸಿ   ತೃಪ್ತಿಪಟ್ಟುಕೊಂಡೆವು .  
   
ಮರು   ಹಗಲೇ 
 ವಿಕ್ರಂ   ಟ್ರಾವೆಲ್ಸಿಗೆ   ನಾನು   ೧೪   ಅಂಶಗಳ   ವಿವರಣೆ   ಕೇಳಿ   ಪತ್ರ   ಬರೆದೆ .  ಆ   ಪತ್ರದಲ್ಲಿನ   ಹಣಕಾಸಿನ 
 ಲೆಕ್ಕ   ಮತ್ತು   ನಮ್ಮ   ವೈಯಕ್ತಿಕ   ದೂರುಗಳನ್ನು   ಬದಿಗಿಟ್ಟು   ಸಾರಾಂಶವನ್ನು   ಮಾತ್ರ   ಕೊಡುತ್ತೇನೆ : 
“ ನಾವು   ಮಂಗಳೂರು   ಬಿಡುವ  ( ೩ - ೫ - ೧೫ )  ಮೊದಲೇ   ಪತ್ರಿಕೆಯಲ್ಲಿ   ಓದಿ   ತಿಳಿದಿದ್ದೆವು  - ' ಕಾಶ್ಮೀರದಲ್ಲಿ   ಮಳೆಯಿಂದ   ಭೂಕುಸಿತಗಳಾಗಿವೆ .  ಜಮ್ಮು   ಶ್ರೀನಗರ   ದಾರಿಯನ್ನು   ಏಕಮುಖ   ಸಂಚಾರಕ್ಕೆ   ತೆರೆದಿದ್ದಾರೆ .'   ಈ   ಕುರಿತು   ನಿಮ್ಮ   ಪ್ರತಿನಿಧಿ  -  ಗಿರೀಶ್   ತಿಳುವಳಿಕೆ   ತಂದುಕೊಳ್ಳದೆ   ಆರಾಮವಾಗಿ   ಹನ್ನೊಂದು   ಗಂಟೆಗೆ   ಜಮ್ಮು   ಬಿಟ್ಟದ್ದಕ್ಕೆ   ನಾವು  ( ಒಟ್ಟು   ತಂಡ )  ಅಪಾರ   ಹಿಂಸೆ ,  ಕಾನೂನಿನ ವಿರುದ್ಧದ   ಪ್ರಯಾಣ ,  ಅವೇಳೆಯಲ್ಲಿ   ಊಟ ,  ವಿಶ್ರಾಂತಿ   ಎಲ್ಲ   ಅನುಭವಿಸಬೇಕಾಯ್ತು .  ಸ್ಥಳೀಯ   ಕಟ್ಟಳೆಗಳನ್ನು   ಪ್ರವಾಸೀ   ನಿರ್ವಾಹಕ   ಮೊದಲೇ   ತಿಳಿದುಕೊಂಡು   ತಂಡವನ್ನು   ನಡೆಸಬೇಡವೇ ?  ಇದು ವೀಕ್ಷಣಾ   ಸ್ಥಳ   ಮತ್ತು   ಸಮಯದ   ಹೊಂದಾಣಿಕೆಗೂ ಅನ್ವಯಿಸಬೇಕಿತ್ತು .  ನಮ್ಮ ಬಹುತೇಕ   ಮಧ್ಯಾಹ್ನದ   ಊಟಗಳು ತಡವಾಗಿಯೂ   ಸ್ಥಳವೀಕ್ಷಣಾ   ಸಮಯ   ತೀರಾ   ಅವಸರದ್ದೂ ಆದದ್ದು ಸರಿಯೇ ? ವೈಷ್ಣೋದೇವಿ   ಬೆಟ್ಟ   ಇಳಿದ   ಮೇಲೆ   ನಾವು   ನಮ್ಮದೇ   ವೆಚ್ಚದಲ್ಲಿ ,  ಎಚ್ಚರಿಕೆಯಲ್ಲಿ   ಹೋಟೆಲು   ಸೇರಿಕೊಂಡೆವು .  ಅಪರಿಚಿತ ಸ್ಥಳ ,  ಅವೇಳೆ ,  ಭಾಷಾ ಸಮಸ್ಯೆ , ( ಕಾಶ್ಮೀರ ಎಂದ ಮೇಲೆ ಭಯೋತ್ಪಾದನೆ ಹಾಗೂ ಪಾಕೃತಿಕ ಅಸ್ಥಿರತೆಯನ್ನೂ ಸೇರಿಸಿ ,)  ಚರವಾಣಿಯದ್ದೂ ಸಂಪರ್ಕ ಸಮಸ್ಯೆ ಇದ್ದಲ್ಲಿ ಪ್ರವಾಸೀ ಸದಸ್ಯರನ್ನು   ಸುಕ್ಷೇಮವಾಗಿ   ಮತ್ತೆ ಸೇರಿಸಿಕೊಳ್ಳುವ ಜವಾಬ್ದಾರಿ   ಟ್ರಾವೆಲ್ಸ್ಗೆ ಬೇಡವೇ ? ದಾಲ್ ಸರೋವರದಲ್ಲಿ
ದೋಣಿ ,  ಉಳಿದಂತೆ   ಕುದುರೆ ,  ದೋಲಿ ,  ಜೀಪು ,  ಕೊನೆಗೆ ಬೂಟು ,  ಕೋಟುಗಳಲ್ಲೂ ನಮ್ಮನ್ನು ಸ್ಥಳೀಯರ ಸುಲಿಗೆಗೆ ಬಿಟ್ಟು ನಿರ್ವಾಹಕ ದೂರ ಉಳಿದದ್ದು ಸರಿಯಲ್ಲ .  ಪೂರ್ವಸಿದ್ಧ ಯೋಜನೆಯಲ್ಲಿದು ಗುಪ್ತ - ವೆಚ್ಚಗಳಾಗಿಯೇ ನಮ್ಮನ್ನು ಕಾಡಿವೆ . ಕಾಶ್ಮೀರದ ಬೇಸಗೆಯಲ್ಲಿ   ಮುಖ್ಯವಾಗಿ   ಎರಡು   ಋತುಗಳು  -  ಸೇಬಿನದ್ದು   ಮತ್ತು   ಹೂಗಳದ್ದು  ( ಟುಲಿಪ್ ).  ಟುಲಿಪ್ ಉದ್ಯಾನವನ ಇದ್ದಾಗಲೂ ನಮಗೆ ತಪ್ಪು ಮಾಹಿತಿ ಕೊಟ್ಟು ,  ತೋರಿಸದಿದ್ದುದು ಯಾಕೆ ?  ಪ್ರವಾಸೀ   ಮಾರ್ಗದರ್ಶಿ   ವ್ಯವಸ್ಥೆಗಳ ನಿರ್ಹಣೆಯೊಡನೆ ಮಾಹಿತಿ ಮೂಲವೂ ಆಗಬೇಕಿತ್ತು .   ವೈಷ್ಣೋದೇವಿಯ   ಸ್ಥಳಪುರಾಣ   ಬಿಟ್ಟರೆ   ಎಲ್ಲೂ ಆ ವಿವರಗಳು ನಮಗೆ ಸಿಕ್ಕಲಿಲ್ಲ ,  ಅಲ್ಪ ಸ್ವಲ್ಪ ಹೇಳಿದ್ದಿದ್ದರೆ ಅವು   ಸಮರ್ಪಕವಾಗಿರಲಿಲ್ಲ .  ಇದು   ಮೊದಲೆಂಬಂತೆ   ಯೋಜಿತ ಪ್ರವಾಸವನ್ನು ಒಪ್ಪಿಕೊಂಡ ನನಗೆ ಈ ಯಾತ್ರೆ ಭಾರೀ   ನಿರಾಶೆಯನ್ನೇ   ಉಂಟು   ಮಾಡಿದೆ .”   
 
ವಿಕ್ರಂ ಟ್ರಾವೆಲ್ಸಿಗೆ ಚರವಾಣಿಯ   ಕಿರು 
 ಸಂದೇಶದಲ್ಲಿ   ಎರಡೆರಡು   ಬಾರಿ ಮೇಲಿನ   ಪತ್ರದ   ನೆನಪು   ಹುಟ್ಟಿಸಿದೆ .  ಕೊನೆಗೆ   ವೈಯಕ್ತಿಕವಾಗಿ   ಅವರಲ್ಲಿಗೆ   ಹೋಗಿ ,  ಬಾಯ್ದೆರೆ   ಹೇಳಿ   ಬಂದೆ .  ಮತ್ತೆ   ವಿರಾಮದಲ್ಲಿ   ಮಾಲಿಕರ   ದೂರವಾಣಿ   ಕರೆ   ಮಾತ್ರ   ಬಂತು  – “SORRY!” ( ಇನ್ನೊಮ್ಮೆ   ಬನ್ನಿ ,  ತಿದ್ದಿಕೊಂಡು   ನಡೆಸುತ್ತೇವೆ  –  ಎಂದೂ   ಸೇರಿಸಿದ್ದರು .)  ನಿಜ ,  ಜಮ್ಮು   ಕಾಶ್ಮೀರ   ಸಿದ್ಧ   ಪ್ರವಾಸೀ   ಯೋಜನೆಯ   ಕೊನೆಯಲ್ಲಿ   ನಮಗುಳಿದದ್ದು   ದೊಡ್ಡ ,  ಭರಿಸಲಾಗದ   ವಿಷಾದ   ಮಾತ್ರ .  ಅಸಂಖ್ಯ   ಸಾಹಸ   ಯಾತ್ರೆ ,  ಮೂರು   ಸುದೀರ್ಘ   ಮೋಟಾರ್   ಸೈಕಲ್   ಯಾನಗಳನ್ನೂ  ( ಒಂದು   ದಕ್ಷಿಣ   ಭಾರತ,   ಉಳಿದೆರಡು   ಅಖಿಲ   ಭಾರತ )  ಕೇವಲ   ವೈಯಕ್ತಿಕ   ನೆಲೆಯಲ್ಲಿ   ಯೋಜಿಸಿ ,  ಯಶಸ್ವಿಯಾಗಿ   ಪೂರೈಸಿದ   ನನಗೆ   ಇನ್ನೊಂದು   ಪೂರ್ವಸಿದ್ಧ   ಪ್ರವಾಸ   ಖಂಡಿತಕ್ಕೂ   ಬೇಡ .  
( ಒಂಬತ್ತು   ಕಂತುಗಳ 
 ಜಮ್ಮು   ಕಾಶ್ಮೀರ 
 ಪ್ರವಾಸ   ಕಥನ 
 ಮುಗಿಯಿತು ) 
 
 
"ಪೂರ್ವಸಿದ್ಧ ಪ್ರವಾಸ ಖಂಡಿತಕ್ಕೂ ಬೇಡ" - ನನ್ನದೂ ಇದೇ ಅಭಿಪ್ರಾಯ
ReplyDeleteWonderful and useful information with some precautions to be taken with Travel agency. Thank your Ashokvardhana
ReplyDeleteTumba vicharagalu tiliyitu;Lekhana oodisi kondu hoyitu,yellu noyisalilla.Dhanyavadagalu.
ReplyDeleteಎಲ್ಲರೂ ಪಾಠ ಕಾಳಿಯ ಬಹುದಾದ ಪ್ರವಾಸೀ ಅನುಭವ ಸಾರ! ನೀಜ್, ಸ್ವತಂತ್ರ ಪ್ರವಾಸವೇ ಉತ್ತಮ.
ReplyDelete- Shyamala Madhav.