15 October 2020

ಬಾಂಧವ್ಯ ಹೆಚ್ಚಿಸಿದ ಕಾನ್ಹಾ ವನಧಾಮ

(ಭಾರತ ಅ-ಪೂರ್ವ ಕರಾವಳಿಯೋಟ - ೧೧) 



ಎರಿಕ್ ಡಿ ಕುನ್ನಾರನ್ನು ನೀವು ಮರೆತಿಲ್ಲವೆಂದು ಭಾವಿಸುತ್ತೇನೆ (ನೋಡಿ: ರಣಥೊಂಬರಾದ ಹುಲಿಗಳು). ಒಂದೇ ವಾಕ್ಯದಲ್ಲಿ ಹೇಳುವುದಿದ್ದರೆ, ಅವರು ‘ಇಂಡಿಯನ್ ಅಡ್ವೆಂಚರ್ಸ್’ ಎಂಬ ಖಾಸಗಿ ಪ್ರವಾಸೋದ್ಯಮ ಸಂಸ್ಥೆಯಲ್ಲಿ ಪರಿಸರ ಮಾರ್ಗದರ್ಶಿ (ಗೈಡ್ ಅಲ್ಲ, ನ್ಯಾಚುರಲಿಸ್ಟ್). ೧೯೯೦ರ ನಮ್ಮ ಭಾರತ ಸೀಳೋಟಕ್ಕೆ ಅವರು ಚೆನ್ನಾಗಿಯೇ ಸೌಕರ್ಯಗಳ ವ್ಯವಸ್ಥೆ ಮಾಡಿದ್ದರು, ಸ್ವತಃ ನಿಂತು ನಿಭಾಯಿಸಲು ಅವಕಾಶ ಕಳೆದುಕೊಂಡಿದ್ದರು. ಈ ಬಾರಿ, "ನಾನು ಕಾನ್ಹಾ ವನಧಾಮದಲ್ಲೇ ಇದ್ದೇನೆ ಮತ್ತು ಸಮೀಪದ ಬಾಂಧವಘರ್‍ನಲ್ಲೂ ಏನು ಮಾಡಲು ಸಾಧ್ಯ ನೋಡ್ತೇನೆ..." ಎಂದೇ ಮುಂದಾಗಿಯೇ ಬರೆದಿದ್ದರು.

ಅನಂತರ ನಮ್ಮೊಳಗೆ ನಡೆದ ಕೆಲವು ಪತ್ರ ವಿನಿಮಯದಲ್ಲಿ ಅವರು ನಮ್ಮನ್ನು ಅತಿಥಿಯಾಗಲ್ಲ, ಮನೆಯವರಂತೇ ಭಾವಿಸಿದ್ದು ಸ್ಪಷ್ಟವಿತ್ತು. ಆದರೂ ನಾವು ವೃಥಾ ಹೊರೆಯಾಗಬಾರದಲ್ಲಾ ಎಂದೇ ಬಾಂಧವಘರ್‍ನತ್ತ ಹೋಗುತ್ತಿದ್ದಂತೆ... 

ಜಿಲ್ಲಾ ಕೇಂದ್ರ ಉಮರಿಯಾದಲ್ಲಿ ವನ್ಯ ಇಲಾಖೆ ಬಾಗಿಲು ತಟ್ಟಿದ್ದೆವು. ಅವರು ಮೂವತ್ತು ಕಿಮೀ ಮುಂದಿನ ತಾಲಕ್ಕೆ ಹೊಣೆ ಜಾರಿಸಿದ್ದರು. ತಾಲದಲ್ಲಿ ‘ಭ್ರಷ್ಟ ಬಂಗ್ಲೆ’ಯವರೆಗೂ ನಾವು ಮಾಡಿದ ಪ್ರಯತ್ನ ನಿಮಗೆ ತಿಳಿದೇ ಇದೆ. ಅಷ್ಟರಲ್ಲಿ ವನ್ಯ ಇಲಾಖೆಯ ಚಪರಾಸಿಯೊಬ್ಬನ ಗುಟ್ಟಿನ ಮಾತಿನಂತೆ, ಅಲ್ಲೇ ಇದ್ದ ಮಧ್ಯಪ್ರದೇಶ ಪ್ರವಾಸೋದ್ಯಮ ಇಲಾಖೆಯ ಅತಿಥಿಗೃಹಕ್ಕೂ ಹೋಗಿದ್ದೆವು. ಅದು ಭೂಮಿಯಲ್ಲಿರಲಿಲ್ಲ; ಮೂರನೆಯದೋ ನಾಲ್ಕನೆಯದೋ ತಾರಾಮಂಡಲದಲ್ಲಿತ್ತು! "ಡಬ್ಬಲ್ ಬೆಡ್ಡಿನ ರೂಮಿಗೆ ನಾನೂರು, ತಿನಿಸು ತಿರುಗಾಟ ಎಕ್ಸ್ಟ್ರಾ" ಎಂದು ತಣ್ಣಗೆ ಹೇಳಿದರು. ಅಂದರೆ ನಾಲ್ಕು ಜನಕ್ಕೆ ಎಂಟ್ನೂರು, ಮೇಲೆಷ್ಟೋ ಎನ್ನುವ ಲೆಕ್ಕಾಚಾರ ನಮ್ಮ ಎಟುಕಿಗೆ ನಿಲುಕುವಂತದ್ದಲ್ಲ. ಊರಿನಲ್ಲಿ ಡಬ್ಬಾ ಹೋಟೆಲುಗಳೇನೋ ಇದ್ದವು. ಆದರೂ ಎರಿಕ್ ಮಾತಿನ ಎಳೆ ಹಿಡಿದು, ಒಂದು ಪ್ರಯತ್ನ ಎಂಬಂತೆ ಇಂಡಿಯನ್ ಅಡ್ವೆಂಚರ್ಸಿಗೆ ಹೋದರೆ, ನಮಗೆ ಆಶ್ಚರ್ಯ ಕಾದಿತ್ತು. ಸ್ಥಳೀಯ ವ್ಯವಸ್ಥಾಪಕ ಮನೀಷ್

ಮೊಗಿಯಾ - ಎರಿಕ್ಕರ ಮಿತ್ರ, ಎರಿಕ್ ಸೂಚನೆ ನೆನಪಿನಲ್ಲಿಟ್ಟು, ಸ್ವಂತ ಉಮೇದಿನಲ್ಲಿ ನಮಗೆ ಊಟ ವಾಸ ಎಲ್ಲವನ್ನೂ ಉಚಿತವಾಗಿ ಕಾಯ್ದಿರಿಸಿ, ದಾರಿ ನೋಡುತ್ತಿದ್ದರು. ನಾವು ಹೋಗದಿದ್ದರೆ ಅಪರಾಧವೇ ಆಗುತ್ತಿತ್ತು! 

ಇಂಡಿಯನ್ ಅಡ್ವೆಂಚರ್ಸ್ ತಾರಾ ದರದ್ದೇ ಹೋಟೆಲ್ ಸರಣಿ. ಮೋಜಿಗೆ ಬರುವವರೇ ನಿಜದಲ್ಲಿ ಇವರನ್ನು ಸಾಕುವುದೂ ಇರಬಹುದು. ಆದರೆ ಪ್ರಾಕೃತಿಕ ವೈಶಿಷ್ಟ್ಯಗಳ ಕುರಿತು ಗಂಭೀರ ಆಸಕ್ತಿ ಇಟ್ಟು ಬರುವವರಿಗೆ, ಈ ಸಂಸ್ಥೆ ಪೈಸೆ ಮೋಸವಾಗದಂಥ ಸೌಕರ್ಯಗಳೊಡನೆ, ಎರಿಕ್ ಡಿ ಕುನ್ನಾರಂಥ ಮಾರ್ಗದರ್ಶಿಯನ್ನೂ ಕೊಡುತ್ತದೆ. (ಬಹುಶಃ ಮನೀಶ್ ಮೋಗಿಯಾ ಕೂಡಾ ಅಂಥವರೇ) ಮೂಲತಃ ವನ್ಯ ಹವ್ಯಾಸಿ, ವಿಜ್ಞಾನ

ವಿದ್ಯಾರ್ಥಿ, ವೃತ್ತಿಗೆ ಅಗತ್ಯವಾದ ಅಧ್ಯಯನ ಮತ್ತು ಅನೇಕ ವರ್ಷಗಳ ಕ್ಷೇತ್ರಕಾರ್ಯದ ಅನುಭವ ಪೇರಿಸಿಕೊಂಡ ‘ಪ್ರಕೃತಿ ಮಾರ್ಗದರ್ಶಿ’ (ನ್ಯಾಚುರಲಿಸ್ಟ್) ಎಂಬಂಥ ಎರಿಕ್ಕರ ಹುದ್ದೆಯ ಕಲ್ಪನೆಯೂ ವನ್ಯ ಇಲಾಖೆಯಗಳಲ್ಲಿ ಇಲ್ಲದಿರುವುದೇ ನಮ್ಮ ವನ್ಯ ಇಲಾಖೆಯ ದುರಂತ. ಸರಕಾರೀ ವಠಾರದಲ್ಲಿ ಹಾಳುಬಿದ್ದ ಅತಿಥಿಗೃಹದ್ದೇ ನೀಲ ನಕ್ಷೆಯನ್ನು ಅಡ್ವೆಂಚರ್ಸ್ ತನ್ನ ಕಾಟೇಜುಗಳಿಗೆ ಬಳಸಿಕೊಂಡಂತಿತ್ತು. ಆದರೆ ನಿರ್ಮಾಣ, ನಿರ್ವಹಣೆ ಮತ್ತು ಸೇವೆ ನಿಜಕ್ಕೂ ಅಪೂರ್ವ. 

ಬಾಂಧವಘರ್ ಒಂದು ಕಾಲದಲ್ಲಿ ಹುಲಿ ಸಂಖ್ಯೆಯಲ್ಲಿ ಭಾರತಕ್ಕೆ ಅಗ್ರಣಿಯಾಗಿತ್ತು. ಮತ್ತೆ ಕಳ್ಳಬೇಟೆಯಲ್ಲಿ ಬಳಲಿದ್ದೂ ಆಯ್ತು. ಇನ್ನೊಂದು ಕಾಲದಲ್ಲಿ ನಾಗರಿಕ ಜಾನುವಾರುಗಳ ಅಕ್ರಮ ಪ್ರವೇಶದಿಂದ ಸೋಂಕು ತಗುಲಿ ಇಲ್ಲಿನ ಕಾಟಿಗಳು ಸಂಪೂರ್ಣ

ಅಳಿದೇ ಹೋಗಿದ್ದವಂತೆ. ಅನಂತರ ಸಮೀಪದ ಕಾನ್ಹಾ ವನಧಾಮದಿಂದ ‘ಕಾಟಿ ಮರುಪರಿಚಯ’ದ ಪ್ರಯೋಗ ನಡೆದದ್ದನ್ನೂ ಅಂತರ್ಜಾಲ ಹೇಳುತ್ತದೆ. 

ನಮ್ಮ ವನಸಂಚಾರ ಬೆಳಗ್ಗೆ (೫-೫-೯೬) ಐದೂವರೆ ಗಂಟೆಗೇ ತೊಡಗಿತ್ತು. ಮನೀಶ್ ಒಳ್ಳೆಯ ಖಾಸಗಿ ಜಿಪ್ಸಿಯನ್ನೇ ನಮಗೆ ರಿಯಾಯ್ತಿ ದರದಲ್ಲಿ ವ್ಯವಸ್ಥೆ ಮಾಡಿಕೊಟ್ಟರು. [ದೇವಕೀ ಪತ್ರ] "...ಜಿಪ್ಸಿಗೆ ನಾನೂರು ಅರಣ್ಯ ಗೇಟಿಗೆ ಐವತ್ತು ಕೊಟ್ಟು ವನಧಾಮ ಸುತ್ತಿದೆವು. ಜಿಂಕೆ, ನವಿಲು ಲೆಕ್ಕ ಹಾಕಿ ಮುಗಿಯದಷ್ಟು ಇವೆ. ಸಣ್ಣ ಜಿಂಕೆಯಂತೇ ಕಾಣುವ ಚಿಂಕಾರಗಳನ್ನು ಕಂಡೆವು. ಕಪ್ಪು ಮುಸುಡಿನ ಮಂಗಗಳು ಇಲ್ಲದ ಜಾಗವೇ ಇಲ್ಲ. ರಾಜರ ಕಾಲದ ದೊಡ್ಡ ವಿಗ್ರಹ - ಶೇಷಶಾಯಿಯದು, ಕೊಳವೊಂದರ ನಡುವೆ ನೋಡಿದೆವು. ಅಲ್ಲಿಂದ ಬೆಟ್ಟದ ಮೇಲೆ ಅರಮನೆ, ಕೋಟೆ ಎಲ್ಲಾ ಇದೆಯಂತೆ. ಅದಿನ್ನೂ ಅರಸು ಮನೆತನದ ವಶದಲ್ಲೇ ಇದ್ದು, ಪ್ರತ್ಯೇಕ ಅನುಮತಿ ಮಾಡಿಸಿಕೊಳ್ಳುವವರಿಗೆ ಮಾತ್ರ ಪ್ರವೇಶವಂತೆ, ನಾವು ನೋಡಲಿಲ್ಲ...." 

೨೦೧೨ರಿಂದೀಚೆಗೆ ಅರಣ್ಯ ಇಲಾಖೆ ಕೋಟೆಯ ಅವಶೇಷಗಳ ವೀಕ್ಷಣೆಯನ್ನು ಪೂರ್ಣ ನಿರ್ಬಂಧಿಸಿದ್ದಾರಂತೆ. ಐತಿಹ್ಯಗಳು ಇದು

ರಾಮ, ತಮ್ಮ ಲಕ್ಷ್ಮಣನಿಗೆ ಕೊಟ್ಟ ಜಹಗೀರೆನ್ನುತ್ತವೆ; ಹಾಗಾಗಿ ಹೆಸರು - ಬಾಂಧವಘರ್ ಅರ್ಥಾತ್ ತಮ್ಮನ ಮನೆ. ಇನ್ನೂ ದೊಡ್ಡ ತಮಾಷೆ, ಲಕ್ಷ್ಮಣ ಇಲ್ಲಿಂದ ಲಂಕಾಧಿಪತಿ ರಾವಣನ ಮೇಲೆ ಕಣ್ಗಾವಲು ನಡೆಸಿದ್ದನಂತೆ!) 

ಒಂಬತ್ತೂವರೆಗೆ ಗಂಟೆಗೆ ಬಾಂಧವಘರ್ ಬಿಟ್ಟೆವು. ಹಿಂದಿನದಲ್ಲಿ ಜಬ್ಬಲ್‍ಪುರ ಬಿಟ್ಟಾಗ ಉಲ್ಲೇಖಿಸಿದ ಕಾಲ್ಪನಿಕ ತ್ರಿಕೋನ ನೆನಪಿಸಿಕೊಳ್ಳಿ. ನಾವು ಮತ್ತೆ ಅದರ ಎಡಭುಜದ ಕೆಳಮೂಲೆ, ಅಂದರೆ ಶಹಾಪುರದವರೆಗೂ ಬಂದ ರಸ್ತೆಯಲ್ಲೇ ಮರಳಿದೆವು. ಹಾಗೆಂದ ಮಾತ್ರಕ್ಕೆ ಮತ್ತೆ ಉಮರಿಯಾ ಮತ್ತೆ ಶಹಾಪುರವೆಂದು ಗೀಟೆಳೆದಷ್ಟು ಸರಳವಲ್ಲ ನಿಜ ಮಾರ್ಗಕ್ರಮಣ (ಸುಮಾರು ೭೫ ಕಿಮೀ). ಹೋಗುವಾಗ ಹೊಸತರ (ಬಾಂಧವಘರ್) ನಿರೀಕ್ಷೆಯಲ್ಲಿದ್ದವರಿಗೆ ನಗಣ್ಯವಾದ ವಿವರಗಳು, ಯಾಂತ್ರಿಕತೆ ಕೆಲವೇ

ಗಂಟೆಗಳ ಅಂತರದಲ್ಲಿ ಮರಳಿ ಅನುಭವಿಸುವಂತಾದಾಗ ಕಾಡುತ್ತವೆ. ಈ ವಲಯದ ದಾರಿಯ ಕುರಿತು ಅಭಯನಿಗೆ ನಾ ಬರೆದ ಪತ್ರ, "...ಇದುವರೆಗೆ ನಾವು ಅನುಭವಿಸಿದ ಕಂತ್ರಿಯೆಷ್ಟ್ (ಕಂತ್ರಿ-est!) ದಾರಿ ಇದು. ಹಳೆಯ ಡಾಮರು ದಾರಿ ಒಂದು ಹಂತದಲ್ಲಿ ಹೊಂಡ ಬಿದ್ದದ್ದಕ್ಕೆ, ಉಬ್ಬಿದ ತೇಪೆ ಹಾಕಿದ್ದರು. ಮತ್ತೆ ತೇಪೆಯೂ ಕಿತ್ತು ಹೋಗಿ, ದಾರಿಯಲ್ಲ - ಅಡ್ಡ ಚರಂಡಿಗಳ ಹಾಸಾಗಿತ್ತು. ಅಂಚೆಲ್ಲ ಹರಿದು ಹೋಗಿ, ವ್ಯತ್ಯಾಸ ಅಳೆಯಲು ಕೆಲವೆಡೆಗಳಲ್ಲಿ ಅಡಿಕೋಲಲ್ಲ, ಗಜಕೋಲು ತರಬೇಕು. ಕೊಟಕ್ಕೆಂದು ಹೊಂಡಕ್ಕೆ ಬಿದ್ದು, ಧಡಕ್ಕೆಂದು ದಿಬ್ಬ ಬಡಿದು, ಕಿತ್ತ ಕಲ್ಲಪುಡಿಗಳಲ್ಲಿ ಜರಬರ ಜಾರಿ ಹೈರಾಣಾಗಿ ಹೋದೆವು. ಸಾಲದ್ದಕ್ಕೆ ಎದುರಿನಿಂದ ವಿರಳವೇ ಆದರೂ ಬರುತ್ತಿದ್ದ ಬಸ್, ಲಾರಿಗಳು ನಮಗೆ ದಾರಿ ಕೊಡಲು, ಅಂದರೆ ಅವರು ಬದಿಗಿಳಿಯಲು ಚೌಕಾಸಿ ಮಾಡುತ್ತಿದ್ದವು. ಮೈಮೇಲೇ ನುಗ್ಗುವಂತೆ ಬರುವವಕ್ಕೆ ನಾವು ಒಮ್ಮೊಮ್ಮೆ ದಾರಿ ಕೊಟ್ಟು, ಅಂಚುಗಳಲ್ಲಿ ಕಲ್ಲು ಮಣ್ಣಿಗೆ ಇಳಿದು ಒದ್ದಾಡಿದ್ದಿತ್ತು. ಇಲ್ಲವಾದರೆ ನಡು ದಾರಿಯಲ್ಲೇ ನಾವು ಸ್ವಲ್ಪ ಹೆಚ್ಚೇ ಅಡ್ಡಾದಿಡ್ಡಿ ಸವಾರಿ ಮಾಡಿ, ಎದುರಿನವರನ್ನು ಹೆದರಿಸಿ ("ನಮ್ಮ ಅಡಿಗೆ ಬಿದ್ದು ಸಾಯುವುದು ಬೇಡಪ್ಪಾಂತ...") ಬದಿಗೆ ಸರಿಸಿದ್ದೂ ಇತ್ತು. ಸರಿದಾರಿಗಳಲ್ಲಿ ಅನ್ಯ ವಾಹನಗಳನ್ನು ಗತ್ತಿನಲ್ಲಿ ಹಿಂದಿಕ್ಕುವ ನಾವು ಇಲ್ಲಿ

ಸೋಲುತ್ತಿದ್ದೆವು. ಮೇಲೆ, ಮಿನಿಟೆರಡು ಅವರೆಬ್ಬಿಸಿದ ದೂಳು ಹೊಗೆಯಲ್ಲಿ ಮುಳುಗೇಳುತ್ತಿದ್ದೆವು. ಮೊದಲೇ ಹೇಳಿದ್ನಲ್ಲಾ - ಎಷ್ಟೂ... ಕಂತ್ರಿಯೆಷ್ಟೂ ರೋಡೂ!!" 

ಅದೇ ಪತ್ರದಲ್ಲಿ, ಬಿಸಿಲ ಪ್ರಭಾವದ ಕುರಿತೂ ಎರಡು ಸಾಲು ನೋಡಿ "...ಬಿಸಿ ಗಾಳಿ, ಉರುಬಿಸಿಲಿಗೆ ನಮ್ಮ ಹೆಲ್ಮೆಟ್ ಸಾಕಾಗುವುದಿಲ್ಲ. ಸಿನಿಮಾಗಳಲ್ಲಿ ಕಾಣುವ ದರೋಡೆಕೋರರಂತೇ ಇರುತ್ತಿತ್ತು ನಮ್ಮ ವೇಷ. ದೊಡ್ಡ ಮುಂಡನ್ನು ತಲೆ ಮೇಲೆ ಹಣೆ ಮುಚ್ಚುವಂತೆ ಬಿಡಿಸಿ ಹಾಕಿ, ಗದ್ದದ ಅಡಿಯಲ್ಲಿ ಸಡಿಲಕ್ಕೆ ಒಂದು ಗಂಟಿಕ್ಕಿ, ಒಂದು ಸೆರಗನ್ನು ಮೂಗು ಬಾಯಿಗೆ ಅಡ್ಡಲಾಗಿಯೂ ಇನ್ನೊಂದನ್ನು ಕುತ್ತಿಗೆಗೆ ಸುತ್ತಿ, ಹೆಕ್ಕತ್ತು ಆವರಿಸುವಂತೆಯೂ ಮಾಡಿಕೊಳ್ಳುತ್ತೇವೆ. ಅನುಕೂಲವಿದ್ದಲ್ಲೆಲ್ಲ ಮುಂಡನ್ನು ನೀರಿನಲ್ಲಿ ಚಂಡಿ ಮಾಡುತ್ತಲೂ ಇರುತ್ತೇವೆ. ಸ್ವಲ್ಪ ತಂಪಾಗುತ್ತದೆ, ಅಲ್ಲದಿದ್ದರೂ ಬಿಸಿಲಿಗೆ ಚರ್ಮ ಕರಂಚುವುದಿಲ್ಲ. "ಬಿಸಿಗೂ ಚಳಿಗೂ ಅದೇ ಬಾಯಿಯಿಂದ ಊದುವ ಮನುಷ್ಯನನ್ನು ನಂಬಬಾರದು" ಎಂದು ಹೇಳಿದ ಪುರುಷಾಮೃಗದ ಅಪನಂಬಿಕೆಗೆ ನಮ್ಮೀ ಹೊದಿಕೆ ಇನ್ನೊಂದೇ ಸಾಕ್ಷಿಯಾದೀತು!" 


ದಟ್ಟ ಕಾಡಿನ ನಡುವೆ ಮಾರ್ಗ ಸುಸ್ಥಿತಿಯಲ್ಲಿರುವ ಒಂದು ತುಣುಕಿನಲ್ಲಿ ನಾವು ಸಹಜವಾಗಿ ವೇಗ ಹೆಚ್ಚಿಸಿದ್ದೆವು. ನಿರ್ಜನ, ವಾಹನ ಸಂಚಾರ ಇಲ್ಲವೆನ್ನುವಷ್ಟು ವಿರಳ, ದಟ್ಟ ಕಾಡಲ್ಲದೆ ದಾರಿಗೇ ಕವಿದು ಬಂದಂತೆ ಪೊದರೂ ಹಬ್ಬಿ, ತಲೆ ಸುಟ್ಟರೂ ಹಸಿರುಗಾಳಿ ತೀಡುತ್ತದೆ ಎಂದೇ ಉಲ್ಲಾಸ ಹೆಚ್ಚಿತ್ತು. ಆದರೆ ಒಂದು ಸಣ್ಣ ತಿರುವು ಕಳೆದು ನೇರ ದಾರಿಗೆ ಬರುತ್ತಿದ್ದಂತೆ ಒಮ್ಮೆಲೆ ನಮ್ಮ ಎದೆ ಝಿಲ್ ಎನ್ನಿಸಿತ್ತು. ಅನತಿ ದೂರದಲ್ಲಿ, ರಸ್ತೆ ನಡುವೆ ಎನ್ನುವಂತೇ ಎರಡು ಮನುಷ್ಯರೇ ಅಪಘಾತಕ್ಕೆ ಸಿಕ್ಕಿ ಬಿದ್ದಿರುವಂತೆ ಕಾಣಿಸಿತು. ಹತ್ತಿರ ಹೋದಾಗ ಮನುಷ್ಯರಲ್ಲ ಎಂಬ ಸಣ್ಣ ಸಮಾಧಾನ ಮಾತ್ರ ದಕ್ಕಿತು. ಎರಡು ದೊಡ್ಡ ಗಾತ್ರದ ಕರಿಮುಸುಡಿನ ಮಂಗಗಳು, ಯಾವುದೋ ಲಾರಿ ಢಿಕ್ಕಿ ಹೊಡೆದ ರಭಸಕ್ಕೆ, ರಕ್ತದ ಮಡುವಿನಲ್ಲಿ ಭಯಾನಕವಾಗಿ ಸತ್ತು ಬಿದ್ದಿದ್ದವು.

ವನಧಾಮಗಳಲ್ಲಿ ಅನಿವಾರ್ಯವಾಗಿ ಸಾಗುವ ಸಾರ್ವಜನಿಕ ದಾರಿಗಳ ಅಂಚಿನಲ್ಲಿ ಎಷ್ಟೆಲ್ಲ ರೂಪದಲ್ಲಿ ‘ನಿಧಾನವಾಗಿ ಚಲಿಸಿ, ವನ್ಯಮೃಗಗಳು ಅಡ್ಡ ಹಾಯಲು ಬಿಡಿ’ ಬೋರ್ಡುಗಳು ಬಂದರೂ ಐವತ್ತು ನೂರು ಮೀಟರಿಗೊಮ್ಮೆ ವೇಗ ತಡೆಗಳನ್ನೆಬ್ಬಿಸಿದರೂ

ಮುಗ್ಧ ಪ್ರಾಣಿಗಳನ್ನು ಕೆಡೆದು ಸಾಗುವವರಿಗೇನು ಹೇಳೋಣ. ಮುಂದೆ ಸಿಕ್ಕ ವನ್ಯ ತನಿಖಾ ಗೇಟಿನಲ್ಲಿ ನಾವು ನಮ್ಮ ತೃಪ್ತಿಗಾಗಿ ದೂರು ದಾಖಲಿಸುವುದಕ್ಕಿಂತ ಹೆಚ್ಚೇನೂ ಮಾಡಲಾಗಲಿಲ್ಲ. 

ಹನ್ನೆರಡು ಗಂಟೆಯ ಸುಮಾರಿಗೆ ಶಹಾಪುರ ತಲಪಿದ್ದೆವು. ಮುಂದೆ ಹೊಸದೇ ಕವಲು ಹಿಡಿದು ಕಾನ್ಹಾ ರಾಷ್ಟ್ರೀಯ ಉದ್ಯಾನದ ದಿಕ್ಕು ಹಿಡಿದಿದ್ದೆವು. ಹಾಗೆ ಸುಮಾರು ಹತ್ತು - ಹನ್ನೆರಡು ಕಿಮೀ ಕಳೆದಾಗ ಸಿಕ್ಕ ‘ಫಾಸಿಲ್ ಪಾರ್ಕಿಗೆ’ ಕೈಕಂಬ ವಿಶಿಷ್ಟ ಅನಿಸಿತು. ನೋಡಿಯೇ ಬಿಡೋಣವೆಂದು ನುಗ್ಗಿದೆವು. ‘ಘುಗ್‍ಹುವಾ ಪಳೆಯುಳಿಕೆಗಳ ಉದ್ಯಾನ’ (Ghughua Fossil Park, Shahpura) ವನಧಾಮಗಳಂತೇ ರಾಷ್ಟ್ರೀಯ ಅಂತಸ್ತನ್ನೇ ಪಡೆದಿದೆ. ಕೋಟ್ಯಂತರ ವರ್ಷಗಳ ಹಿಂದಿನ ಅಸಂಖ್ಯ ಸಸ್ಯ ವೈವಿಧ್ಯ, ಸ್ಥಿತ್ಯಂತರದಲ್ಲಿ ಕಲ್ಲಿನಂತೇ ಆಗಿರುವುದನ್ನು ನಾವಿಲ್ಲಿ ಕಾಣಬಹುದು. ೧೯೭೦ರ ಸುಮಾರಿಗೆ ಇವನ್ನು ಓರ್ವ ಸರಕಾರೀ ಅಧಿಕಾರಿ ಗುರುತಿಸಿದನಂತೆ. ೧೯೮೩ರಲ್ಲಿ ಇದಕ್ಕೆ

ರಾಷ್ಟ್ರೀಯ ಉದ್ಯಾನದ ಮನ್ನಣೆ ಒದಗಿದೆ. ನಮಗಂತೂ ಅದು ಅನಿರೀಕ್ಷಿತ, ಅಪೂರ್ವ ಮತ್ತು ಸ್ಮರಣೀಯ ಅನುಭವ. 

ಅಲ್ಲಿನ ಸಸ್ಯ ವೈವಿಧ್ಯಗಳಲ್ಲಿ ನೀಲಗಿರಿ ಮರದ ಪಳೆಯುಳಿಕೆ ಅತ್ಯಂತ ಹಳತ್ತು. ಮತ್ತೆ ಪ್ರಮುಖವಾಗಿ ಗುರುತಿಗೆ ಸಿಕ್ಕಿದ ಸಸ್ಯ ವೈವಿಧ್ಯದಲ್ಲಿ ತಾಳೆ ಜಾತಿಯವು ಹೆಚ್ಚಂತೆ. (೨೦೧೨ರಲ್ಲಿ ಡೈನಾಸಾರಿನ ಮೊಟ್ಟೆಯೊಂದೂ ಅನಾವರಣಗೊಂಡಿದೆ) ಅಲ್ಲಿನ ಸರಕಾರೀ ವ್ಯವಸ್ಥೆ ಎಂದಿನಂತೆ ತೀರಾ ಕೆಟ್ಟದಿತ್ತು. ಇದ್ದೊಬ್ಬ ಮುದಿ ಚೌಕೀದಾರ ಇದಕ್ಕೂ ನೋಟಕರು ಬಂದರೆಂದು ಅತಿ ಉತ್ತೇಜಿತನಾಗಿಬಿಟ್ಟ! (ವಿದೇಶೀಯರೆಂದರೆ ಭಾರತೀಯ ಚೌಕಿದಾರರೆಲ್ಲ ಹೀಗೆ ಯಾಕೆ?!) ಆತ ಪ್ರದರ್ಶಿಕೆಗಳ ನಿಜಮೌಲ್ಯ ಮತ್ತು ತನ್ನ ಜವಾಬ್ದಾರಿಗಳ ಅರಿವಿಲ್ಲದವ. ಯಾವುದೇ ಹಣದ ಅಪೇಕ್ಷೆ ಇಲ್ಲದೇ ಪ್ರದರ್ಶಿಕೆಗಳ ಕುರಿತು ತಾನು ಕೇಳಿದ್ದನ್ನೆಲ್ಲ

ನಮಗೆ ಪಾಠ ಒಪ್ಪಿಸಿ, ಸ್ಮರಣಿಕೆಯಾಗಿ ಯಾವುದನ್ನು ಬೇಕಾದರೂ ಒಯ್ಯಲೂ ಸೂಚಿಸಿದ್ದ! ನಾವು ಆತನಿಗೆ ಸರಳವಾಗಿ ಪಳೆಯುಳಿಕೆಗಳ ಸಂರಕ್ಷಣೆಯ ಪಾಠವನ್ನು ಮಾಡಿದೆವು. ಅಜ್ಞಾತವಾಗಿ ವಿಕಸಿಸುವಲ್ಲಿ ಹಲವು ಯುಗಗಳನ್ನೇ ಗೆದ್ದು ಆದ ಪಳೆಯುಳಿಕೆಗಳು, ನಮ್ಮ ಕೆಲವೇ ದಶಕಗಳ ಜೀವಮಾನದಲ್ಲಿ, ಎಲ್ಲೋ ಒಂದು ಕ್ಷಣದ ಗರ್ವಕ್ಕೆ ಸ್ಮರಣಿಕೆಯಾಗಿ ಕಾಣಿಸಿ, ಕಸವಾಗದಂತೆ ಅಲ್ಲೇ ಉಳಿಸಿ ಬಂದೆವು. 

ನಿವಾಸ್, ಬಡಾ ಸಾಗರ್, ಫೂಲ್ ಸಾಗರ್ ಕಳೆದು ಕಾನ್ಹಾ ವನಧಾಮದ ಜಿಲ್ಲಾ ಕೇಂದ್ರ ಮಂಡ್ಲವನ್ನು ಮೂರೂವರೆ ಗಂಟೆಗೆ ಮುಟ್ಟಿದ್ದೆವು. ಆದರೆ ಇಲ್ಲಿ ಹಿಂದಿನ ಬಾಂಧವಘರ್ ಜಿಲ್ಲಾ ಕೇಂದ್ರದಲ್ಲಿ ಮಾಡಿದ ತಪ್ಪನ್ನು ಮತ್ತೆ ಮಾಡದೇ ಮುಂದುವರಿದೆವು. (ಅರಣ್ಯ ಇಲಾಖೆಯ ಕಛೇರಿಗೆ ಹೋಗಲಿಲ್ಲ!) ಮುಂದಿನ ದಾರಿಯಂತು ಎರಿಕ್ ಪತ್ರ ಮುಖೇನ ಕೊಟ್ಟಿದ್ದ ಎಚ್ಚರಿಕೆಯ ಮಾತುಗಳನ್ನು ಮತ್ತೆ ಮತ್ತೆ ನೆನಪಿಗೆ ತರಿಸಿತ್ತು. "ನೀವು ಕಾನ್ಹಾಕ್ಕೆ ಬರುವುದಿದ್ದರೆ ಬೇಸಗೆಯ ದಿನಗಳಲ್ಲೇ ಬರಬೇಕು. ಇಲ್ಲವಾದರೆ ಸಣ್ಣ ಸಣ್ಣ ಕಲ್ವರ್ಟ್‍ಗಳಷ್ಟೇ ಇರುವ ಅಸಂಖ್ಯ ಕಾಡ ತೊರೆಗಳ ಪ್ರವಾಹದ ಖಯಾಲಿಯಲ್ಲಿ, ಕಚ್ಚಾ ರಸ್ತೆಯ ಜಾಲಗಳಲ್ಲಿ ಕಳೆದೇ

ಹೋಗುತ್ತೀರಿ." ಸುಮಾರು ಐವತ್ತು ಕಿಮೀ ಅಂತರವನ್ನು ಒಂದೂವರೆ ಗಂಟೆಯಲ್ಲಿ ಕ್ರಮಿಸಿ, ಕಾನ್ಹಾ ರಾಷ್ಟ್ರೀಯ ಉದ್ಯಾನದ ಸ್ವಾಗತ ವಲಯ - ಮೋಚ, ತಲಪಿದ್ದೆವು. ಎರಿಕ್ ಕೊಟ್ಟಿದ್ದ ನಕ್ಷೆಯ ಬಲದಲ್ಲಿ, ವನಧಾಮದ ಪ್ರವೇಶ ದ್ವಾರ - ಕಿಸ್ಲಿಗೂ ಸುಮಾರು ೧೭ ಕಿಮೀ ಮೊದಲೇ ಕವಲಾದೆವು. ಬಂಜಾರ್ ನದಿ ದಂಡೆಯ ಮೇಲಿದ್ದ, ಇಂಡಿಯನ್ ಅಡ್ವೆಂಚರ್ಸ್ ಬಳಗದ ಕಾನ್ಹಾ ಶಾಖೆ - ‘ಚಾಲೆಟ್’ಗೆ ಹೋಗಿ, ಎರಿಕ್ ಡಿ ಕುನ್ನಾರಿಗೆ ಒಪ್ಪಿಸಿಕೊಂಡೆವು. 

ವನ್ಯ ಇಲಾಖೆಯ ಕಲಾಪಪಟ್ಟಿಯಂತೆ, ನಾವು ಆ ಸಂಜೆಯ ವನವಿಹಾರದ ಸಮಯ ಮೀರಿದ್ದೆವು. ಆದರೆ ಕಿರಿದರಲ್ಲೂ ಕಾನ್ಹಾ ಕಲಾಪಗಳನ್ನು ಪೂರ್ಣ ಅನುಭವಿಸಿಯೇ ಹೋಗಬೇಕೆಂಬ ಎರಿಕ್ಕರ ಒತ್ತಾಯಕ್ಕೆ ಮಣಿದು, ಮರು ಹಗಲಿನ ಎರಡೂ ವನವಿಹಾರ

ಅನುಭವಿಸಿದೆವು. (ಇನ್ನೆಲ್ಲೂ ಮಾಡದಂತೆ) ಎರಡು ರಾತ್ರಿಗಳನ್ನು ಎರಿಕ್ಕರ ಸಂಗದಲ್ಲಿ ಬಹಳ ಚೆನ್ನಾಗಿಯೇ ಕಳೆದೆವು. (ತಾ.೪೦, ಔ. ೨೦೦೦, ದಿನದ ಓಟ ೨೩೨ ಕಿಮೀ) 

ಸೂರ್ಯನ ಮೊದಲ ಕಿರಣ ಕಾನ್ಹಾದ ಮರಗಳ ಕುಡಿ ಮುಟ್ಟುವಾಗ (೬-೫-೯೬) ಎರಿಕ್ ಮಾಡಿಕೊಟ್ಟ ಬಾಡಿಗೆ ಜೀಪೇರಿ ನಾವು ವನಧಾಮದ ಕಿಸ್ಲಿ ದ್ವಾರದ ಬಳಿ ಇದ್ದೆವು. ವನ ಪ್ರವೇಶದ ಶುಲ್ಕ ಮತ್ತು ವಿಶೇಷ ಹುಲಿ ಪ್ರದರ್ಶನದ ಶುಲ್ಕ ಕೊಟ್ಟು ‘ರೋಮಾಂಚಕ ಕ್ಷಣ’ ಗಣನೆ ನಡೆಸಿದ್ದೆವು. ‘ಕಾನ್ಹಾದ ಹುಲಿ ಪ್ರದರ್ಶನ’ ಅರ್ಥಾತ್ ಟೈಗರ್ ಶೋ, ಆ ಕಾಲದ ಮುದ್ರಣ ಮಾಧ್ಯಮಗಳಲ್ಲಿ ಇಂದಿನ ‘ವೈರಲ್’ ಎನ್ನುವ ಮಟ್ಟದ ಪ್ರಚಾರದ ಅಲೆಗೆ ಸಿಕ್ಕ ವಿಷಯ. ನಾವು ತಿಳಿದಂತೆ, ಬೆಳಕು ಹರಿಯುವ ಮೊದಲೇ ವನ್ಯ ಇಲಾಖೆಯ ಆನೆಗಳು ಹುಲಿಗಳನ್ನು ಹುಡುಕಿ ದಟ್ಟ ಕಾಡು ನುಗ್ಗುತ್ತವಂತೆ. ಹುಲಿ ಕಾಣಿಸಿದಾಗ, ಮಾಹುತರು ವನಧಾಮದ ದ್ವಾರ ಕಛೇರಿಗೆ ವಾಕಿಟಾಕಿ ಮೂಲಕ (ಗಮನಿಸಿ ಅದು ಚರವಾಣಿ ಇಲ್ಲದ ದಿನಗಳು) ಸುದ್ಧಿ ಕೊಡುತ್ತಾರೆ. ಹಾಗೆ ಬಂದ ಮಾಹಿತಿಯ ಆಧಾರದಲ್ಲಿ, ಇಲಾಖೆ ನಮ್ಮ

ಜೀಪಿಗೊಂದು ಸರದಿ ಸಂಖ್ಯೆ, ಅಂದಾಜು ಸಮಯ ಮತ್ತು ಸ್ಥಳ ತಿಳಿಸಿ ಒಳ ಬಿಟ್ಟರು. 

ಜೀಪಿನ ಚಾಲಕ ಹಿಂಚುಮುಂಚಿನ ಸಮಯ ನೋಡಿಕೊಂಡು, ಇತರತ್ರ ಕಾಡು ಸುತ್ತಿಸಿದ. (ದೇವಕಿ ಅಭಯನಿಗೆ ಕಾರ್ಡ್ ಬರೆಯುತ್ತ) ".... ತುಂಬಾ ಜಿಂಕೆ, ಮಂಗ, ನವಿಲು, ಕೆಲವು ಸಾಂಬಾರ್, ನೀಲ್ ಘಾಯ್, ಒಂದು ಕಪ್ಪು ಜಿಂಕೆ... ಕಾಣ ಸಿಕ್ಕವು. ಚಾಲಕ ನಿಗದಿತ ಸಮಯಕ್ಕೆ ನಮ್ಮನ್ನು ಟೈಗರ್ ಶೋ ಸ್ಥಳಕ್ಕೆ ಮುಟ್ಟಿಸಿದ..." ಅಲ್ಲಿ ಒಂದು ಸಾಕಾನೆ ಕಾದಿತ್ತು. ಅದರ ಮಾಹುತ ನಮ್ಮಲ್ಲಿ ಆರೇಳು ಮಂದಿಯನ್ನು (ಇತರ ಜೀಪುಗಳಲ್ಲಿ ಬಂದವರು ಸೇರಿ) ಏರಿಸಿಕೊಂಡು, ಕಾಡೊಳಗಿನಿಂದ ಇನ್ನೊಂದಾನೆಯ ಮಾಹುತ ಊದುತ್ತಿದ್ದ ಬಿಗಿಲಿನ ಧ್ವನಿಯತ್ತ ಒಯ್ದ. ತುಸು ಅಂತರದಲ್ಲೇ ನಮಗೆ ಆಶ್ಚರ್ಯವಾಗುವಂತೆ ಮೂರ್ನಾಲ್ಕು ಹುಲಿಗಳು, ದೊಡ್ಡ ಬೆಕ್ಕುಗಳಂತೆ, ಅಲ್ಲಿ ಇಲ್ಲಿ ಪೊದರ ನೆರಳಲ್ಲಿ

ವಿಶ್ರಮಿಸಿದ್ದವು. ಆಶ್ಚರ್ಯ ಯಾಕೆಂದರೆ, ನಾವು ತಿಳಿದಂತೆ ಪ್ರೌಢ ಹುಲಿಗಳು ಬೇಟದ ಕಾಲಕ್ಕೆ ಮಾತ್ರ ಜೋಡಿಯಾಗುತ್ತವೆ. ಉಳಿದಂತೆ ಏಕಾಂಗಿಗಳು, ಸಿಂಹಗಳಂತೆ ಸಂಘಜೀವಿಗಳಲ್ಲ. ("ಹೆಚ್ಚುವರಿ ಸಂಪಾದನೆಗಾಗಿ ಅಧಿಕಾರಿ-ಮಾಹುತರ ದುಷ್ಟಕೂಟ, ಪ್ರದರ್ಶನ ವಲಯಗಳಲ್ಲಿ ಹುಲಿಗಳಿಗೆ ಉಚಿತ ಬಲಿಪಶುವನ್ನು ಇಟ್ಟೇ ಆಕರ್ಷಿಸಿರುತ್ತಾರೆ" ಎಂದು ಕೇಳಿದ ಮಾತು ನಿಜವೇ ಇರಬೇಕು!) ನಾವು ಸ್ಥಳ ಮುಟ್ಟುತ್ತಿದ್ದಂತೆ, ಅಲ್ಲಿ ಮೊದಲು ವೀಕ್ಷಕರನ್ನು ತಂದಿದ್ದ ಆನೆ ಜೀಪಿನತ್ತ ಮರಳಿತು. ಅದು ಮರಳುವವರೆಗೆ ‘ಟೈಗರ್ ಶೋ’ ನಮ್ಮದು. ನಮ್ಮ ಮಾಹುತನಿಗೆ ಹುಲಿಗಳನ್ನನುಸರಿಸುತ್ತ, ಬರುವ ಇನ್ನೊಂದಾನೆಗೆ ಬಿಗಿಲ ಸಂದೇಶ ಕಳಿಸುವ ಜವಾಬ್ದಾರಿ. 

ಹುಲಿಗಳ ಜಡ ಹರಿಯುವಂತೆ, ಆನೆ ನಿಧಾನಕ್ಕೆ ಅವುಗಳನ್ನು ಸಮೀಪಿಸುತ್ತಿತ್ತು. ಹತ್ತು - ಹದಿನೈದು ಅಡಿಯಷ್ಟು ಹತ್ತಿರವಾದಾಗ, ಮಾಹುತನ ಬಿಗಿಲು ಅದಕ್ಕೆ ಕರ್ಕಶವಾದಾಗ, ಪಕ್ಕಾ ಮನೆ ಬೆಕ್ಕಿನ ಹುಸಿ ಮುನಿಸು ತೋರಿ, ಟಸ್ ಪುಸ್ ಎಂದು, ಮೆಲ್ಲನೆ ಇನ್ನೊಂದೇ ನೆರಳಿಗೆ ಜಾರುತ್ತಿತ್ತು. ಅವು ‘ದುಷ್ಟ ವ್ಯಾಘ್ರ’ನಾಗಿ ‘ಘುಡುಘುಡಿಸಿ ಭೋರಿ’ಡಲೇ ಇಲ್ಲ! ನಾನು ಕೇಳಿದಂತೆ, ಹುಲಿಗಳು ಹಗಲಿನ ಬಿಸಿಗೆ ಸಾಮಾನ್ಯವಾಗಿ ಮರ ಪೊದರ ನೆರಳು, ನೀರ ಸಾಮೀಪ್ಯ ನೆಚ್ಚಿ ವಿಶ್ರಮಿಸುತ್ತವೆ. ಮತ್ತೆ ಅವು ಹೊಟ್ಟೆ ತುಂಬಿರುವಾಗ ಆಕ್ರಮಣಶೀಲವಾಗಿಯೂ ಇರುವುದಿಲ್ಲ. ಅಷ್ಟಲ್ಲದೆ ಆನೆ ಎದುರಾದಾಗ, ಅದರ ಮಹಾಕಾಯ ಹಾಗೂ ಶಕ್ತಿಯ ಅರಿವಿನೊಡನೆ ಏರಿ ಹೋಗುವುದಕ್ಕಿಂತ, ಜಾರಿ ಉಳಿಯುವುದನ್ನೇ ನೆಚ್ಚುತ್ತವೆ. ಈ ತಿಳಿವುಗಳು ನಿಜವೇ ಇರಬಹುದು. ಆದರೆ ಅದನ್ನೇ ಬಂಡವಾಳವಾಗಿಸಿಕೊಂಡು ದಿನಕ್ಕೆ ಹತ್ತಿಪ್ಪತ್ತು ಸಲ ಎನ್ನುವಂತೆ, ಹುಲಿಯ ಬೆನ್ನು ಬಿದ್ದು ಪ್ರದರ್ಶನದ ಲಾಭ ತೆಗೆಯುವುದು ಸರಿಯೇ? ಎಲ್ಲೋ ಒಂದು ಹುಲಿ ಅಕಸ್ಮಾತ್ ರೇಗಿ ಆಕ್ರಮಣ ಮಾಡಿದರೆ? ಸಹಜ ಸಾಮರ್ಥ್ಯದಲ್ಲಿ ಆನೆಯೇನೋ ರಕ್ಷಣೆ ಮಾಡಿಕೊಂಡೀತು. ಆದರೆ ಆ ಪ್ರಕ್ರಿಯೆಯ ತೀವ್ರತೆಯನ್ನು ಅದರ ಬೆನ್ನ ಮೇಲೆ ಕುಳಿತ ಅಬೋಧ ವಿಹಾರಿಗಳು ತಾಳಿಕೊಂಡಾರೇ? (ಈಚೆಗೆ ಆನೆ ಬೆನ್ನ ಮೇಲೆ ಪದ್ಮಾಸನ ಹಾಕಿದ ಸ್ವಾಮಿ ರಾಂದೇವ್ ನೆನೆಸಿಕೊಳ್ಳಿ!) 


(ದೇವಕಿ ಪತ್ರ) "....ಒಂದು ಹುಲಿ ಆನೆಯ ಕಿರಿಕಿರಿಯಲ್ಲೇ ಆಚೆ ಈಚೆ ಸುತ್ತಿ ಒಂದು ಕಡೆ ಮಲಗಿತು. ಆನೆ ಮೆಲ್ಲನೆ ಪುನಃ ಸಮೀಪಿಸುವುದರೊಳಗೆ ಒಮ್ಮೆಲೇ ಜಿಗಿದೋಡಿ, ಒಂದು ಜೀವಂತ ಜಿಂಕೆ ಮರಿಯನ್ನು ಹಿಡಿಯಿತು. ಅದಕ್ಕೆ ಪ್ರತಿಕ್ರಿಯೆ ಎನ್ನುವಂತೆ

ಅಷ್ಟೇ ಚುರುಕಾಗಿ ಬೇರೆ ಮಗ್ಗುಲಿನಿಂದ ಇನ್ನೆರಡು ಹುಲಿಗಳೂ ಧಾವಿಸಿ ಬಂದವು. ಜಿಂಕೆ ಮರಿ ಇನ್ನೂ ಕಾಲು ಬಡಿಯುತ್ತ ಇದ್ದಂತೇ ಇನ್ನೊಂದು ವೀಕ್ಷಕರ ತಂಡ ಹೊತ್ತ ಆನೆ ಬಂತು, ನಮ್ಮ ಶೋ ಅವಧಿ ಮುಗಿದಿತ್ತು...." ನಮ್ಮ ಅಂದಾಜಿನಂತೆ, ಆ ಜಿಂಕೆ ಮರಿ ಮೊದಲೇ ಟೈಗರ್ ಶೋ ಪರಿಣತರು ಕೊಟ್ಟ ಬಲಿಪಶುವೇ ಇದ್ದಿರಬೇಕು. ಮಾಹುತ ಹೇಳಿದಂತೆ, ಆ ಹುಲಿಗಳಾದರೂ ಒಂದೇ ತಾಯಿಯ, ಈಗ ತಾನೇ ಪ್ರೌಢತೆ ಮುಟ್ಟುತ್ತಿರುವ ಮರಿಗಳೂ ಇರಬಹುದು. ಬೆಕ್ಕುಗಳು ಇಲಿಯನ್ನು ಆಡಿಸಿ, ಆಡಿಸಿ ಕೊಲ್ಲುವಂತೇ ಅವು ಮೊದಲೇ ಸಿಕ್ಕ ಮರಿಯನ್ನು ಹಿಡಿದು, ಬಿಟ್ಟು ನೋಡುತ್ತಿದ್ದಿರಬೇಕು. ಏನೇ ಇರಲಿ, ರಕ್ತಪಾತ ನಮ್ಮೆದುರು ಆಗಲಿಲ್ಲ! 

ಲೆಕ್ಕ ಭರ್ತಿಗೆ ಕಾನ್ಹಾದ ಕಿಸ್ಲಿ ದ್ವಾರದ ಬಳಿ ಒಂದು ಪ್ರಕೃತಿ ಪರಿಚಯ ಕೇಂದ್ರ (ಎನ್ನೈಸಿ) ಇತ್ತು, ಅಷ್ಟೆ. ಹೆಚ್ಚುವರಿಯಾಗಿ ಕಾಡಿನ ನಡುವೆ ಒಂದು ಮ್ಯೂಸಿಯಂ ಕೂಡಾ ಕಟ್ಟಿಹಾಕಿದ್ದರು! ವನಧಾಮಗಳ ನೀತಿ ಸಂಹಿತೆ ಸ್ಪಷ್ಟವಾಗಿ ಹೇಳುತ್ತದೆ - ವನ ಸಂರಕ್ಷಣೆಯ ಆವಶ್ಯಕತೆಗಾಗಿ ರಸ್ತೆ, ಅನಿವಾರ್ಯವಾದಲ್ಲಿ ಕಾವಲು ಠಾಣೆಗಳನ್ನು ಬಿಟ್ಟು ಇನ್ಯಾವುದೇ ನಾಗರಿಕ ರಚನೆ/ ಚಟುವಟಿಕೆ

ವನಾಂತರಂಗದಲ್ಲಿ ಇರಬಾರದು. ಆ ಕಾರಣಕ್ಕೆ ವನಧಾಮದ ಘೋಷಣೆಯೊಡನೆ ಆವರಣದೊಳಗೆ ಬರುವ ಎಲ್ಲ ನಾಗರಿಕ ವಸತಿ ಮತ್ತು ವ್ಯವಸ್ಥೆಗಳನ್ನು ನಿರ್ದಾಕ್ಷಿಣ್ಯವಾಗಿ ಮರುವಸತಿಗೆ ಒಳಪಡಿಸಲಾಗುತ್ತದೆ. (ಅದೂ ಎಷ್ಟು ಕಠೋರ ಎನ್ನುವುದನ್ನು ನಾನು ಕುದುರೆಮುಖ ವನಧಾಮದ ಒಳಗಿನ ಹಳ್ಳಿಗಳ ಪುನರ್ವಸತಿ ಕಾಲದಲ್ಲಿ ಕಂಡಿದ್ದೇನೆ. ಕೃಷಿಕರು ಬಿಟ್ಟು ಹೋಗುವ ಅಡಿಕೆ, ತೆಂಗು, ಕಾಫಿ ಮುಂತಾದ ಕೃಷಿ ಸಸ್ಯಗಳನ್ನು ಕಡಿದು, ಗದ್ದೆಗಳ ಬದುಗಳನ್ನು ಕೆತ್ತಿ, ಬಾವಿಗಳನ್ನು ನಿಗಿದು, ಮನೆ ಕೊಟ್ಟಿಗೆಗಳನ್ನು ಬಿಚ್ಚಿ ಪ್ರಾಕೃತಿಕ ಪುನರುತ್ಥಾನಕ್ಕೆ ಸುಲಭ ಮಾಡಿಕೊಟ್ಟಿದ್ದರು!) ಆದರೆ ಕಾನ್ಹಾದಲ್ಲಿ ಅರಣ್ಯಾಧಿಕಾರಿಗಳ ದುರಾಚಾರಕ್ಕೆ ಸರಿಯಾಗಿ ಕಾಡಿನ ನಡುವೆಯೇ ಮ್ಯೂಸಿಯಂ ಕಟ್ಟಿಟ್ಟಿದ್ದರು. ಅದನ್ನು ಸಾರ್ವಜನಿಕರು ವನಧಾಮದ ಪ್ರಾಕೃತಿಕ ಸತ್ಯ ನೋಡಲು ಸಿಗುವ ಸೀಮಿತ ಅವಧಿಯಲ್ಲೇ ನೋಡಿಕೊಳ್ಳಬೇಕು. ಒಂದು ಸಾವಿರ ಚದರ ಕಿಮೀಗೂ ಮಿಕ್ಕ ಕಾಡನ್ನೇ (ಹುಲಿ ಪ್ರದರ್ಶನ ಸೇರಿ) ಎರಡು ಅವಧಿಗಳಲ್ಲಿ ನೋಡಿ ಮುಗಿಸಲಾಗದ ನಾವು, ಮ್ಯೂಸಿಯಮ್ಮಿನಲ್ಲಿ ಸಮಯ ಕಳೆಯಲು ಉತ್ಸಾಹಿಗಳಾಗಲಿಲ್ಲ. ಭಂಡರು ಹೇಗೂ ಹಣ ಹಾಳು ಮಾಡುವುದೇ ಇದ್ದರೆ, ಕನಿಷ್ಠ ಕಾಡಿನ ಪ್ರಾಕೃತಿಕ ಸ್ಥಿತಿಗೆ ಹೊರೆ ಕಡಿಮೆ ಮಾಡುವಂತೆ, ಕಿಸ್ಲಿ ದ್ವಾರದ ಬಳಿಯೇ ಕಿಸಿಯಬಹುದಿತ್ತಲ್ಲಾ ಎನ್ನುವ ಮಾತು ನಮ್ಮೊಳಗೇ ಉಳಿಯಿತು. ಅಂಥದ್ದೇ ನಮಗೆ ಕಾಣಿಸಿದ ಇನ್ನೊಂದು ಪ್ರಕರಣ .... 

ಎಡ - ಎರಿಕ್, ಬಲ (ಪರಿಚಯಿಸಿಕೊಟ್ಟ) - ದಿ. ರಾಘವ ಆಚಾರ್ಯ

ವನಧಾಮದೊಳಗೆ ಒಂದು ಸುವಿಸ್ತಾರ ಪ್ರದೇಶಕ್ಕೆ ಕಬ್ಬಿಣದ ಬಲೆಗಳ ಆವರಣ ಮಾಡಿ, ‘ಹುಲ್ಲು ಸಂಶೋಧನಾ ಕೇಂದ್ರ’ ಬೋರ್ಡು ತಗುಲಿಸಿದ್ದರು. ಆ ಬೇಲಿ ಇಲಾಖೆಯ ಸಂಶೋಧನಾ ಗಾಂಭೀರ್ಯವನ್ನೇ ಪ್ರಶ್ನಿಸುವಂತೆ ಹಲವೆಡೆಗಳಲ್ಲಿ ಹರಿದುಹೋಗಿತ್ತು. ಮೇಲ್ನೋಟಕ್ಕೇ ಅಲ್ಲಿ ಕಾಣಿಸಿದ್ದು ಪ್ರಯೋಗಭೂಮಿಯ ಬಿಗಿಯಲ್ಲ, ಕುರುಚಲು ಪೊದೆಗಳ ಸಹಜತೆ. ಬೇಲಿ ನುಸುಳಿ ಅನೇಕ ವನ್ಯ ಜಿಂಕೆ ಕಡವೆಗಳು ಅದರೊಳಗೆ ಮೇಯುತ್ತಲೂ ಇದ್ದವು. ನಿಜದಲ್ಲಿ ಮೇಯ್ದವರು ಯಾರು?! 

ಸಂಜೆಯ ಅವಧಿಯಲ್ಲೂ ಕಾಡು ಸುತ್ತಿ ವಸತಿಗೆ ಬಂದಾಗ ನಮ್ಮೆರಡೂ ಬೈಕುಗಳು ಹಿಂದಿನದ ಆಘಾತಕ್ಕೆ ಬೇಸತ್ತು ಲಾಚಾರಾಗಿರುವುದನ್ನು ಗುರುತಿಸಿದ್ದೆವು. ಟಾರ್ಚ್ ಬೆಳಕಿನಲ್ಲೇ ಅವನ್ನು ಬಿಚ್ಚಿ, ಸಮೀಪದಲ್ಲೇ ಇದ್ದ ಅಂಗಡಿಯಲ್ಲಿ ಎರಡೆರಡು ಬಾರಿ ಹುಡುಕಿಸಿ, ಪಂಚೇರ್ ರೀಪೇರಿ ಮಾಡಿಸಿಕೊಂಡಿದ್ದೆವು. ಆದರೂ ಪಂಚೇರ್ ಸರಣಿ ಮಾರಣೇ ದಿನದ ದಾರಿಯಲ್ಲೂ ಮತ್ತೆ ಮತ್ತೆ ಕಾಡಿತ್ತು ಎಂದರೆ ದಾರಿಯ ಸ್ಥಿತಿ ನೀವೇ ಊಹಿಸಿಕೊಳ್ಳಿ. 


ಎರಡು ರಾತ್ರಿಯ ವಾಸ, ಊಟ, ತಿಂಡಿ ಎಲ್ಲಕ್ಕೂ ಮಿಕ್ಕು ನಮಗೊಂದು ಆತ್ಮೀಯ ಪರಿಸರವನ್ನೇ ಕಟ್ಟಿಕೊಟ್ಟ ಎರಿಕ್ ಡಿ ಕುನ್ನಾರಿಗೆ ಹಾರ್ದಿಕ ವಂದನೆಯನ್ನಷ್ಟೇ ಹೇಳಿ, ಬೆಳಿಗ್ಗೆ (೭-೫-೯೬) ಐದೂವರೆ ಗಂಟೆಗೆ ಕಾನ್ಹಾ ಬಿಟ್ಟೆವು. ಮುಂದಿನ ಮಾರ್ಗಕ್ರಮಣ ದಿನಚರಿಯಲ್ಲಿ ದಾಖಲಾದಂತೆ ಹೇಳುವುದಿದ್ದರೆ, ಇನ್ನಷ್ಟು ಮತ್ತಷ್ಟು ಹಾಳು ದಾರಿ, ಸಹಜವಾಗಿ ಪಂಚೇರ್ ಸರಣಿ. ನೆನಪಿನ ಪುಟಗಳು ವಿಶೇಷವಾಗಿ ಏನನ್ನೂ ಉಳಿಸಿಕೊಂಡಿಲ್ಲ. ದಿನಚರಿಯ ಗೀಚು ದಾಖಲಾತಿಗಳಲ್ಲಿ ಸಮಯ, ಮೀಟರ್ ಓದುಗಳೊಡನೆ ಇಂಡ್ರಿ, ಮಂಡ್ಲಾ, ಅಂಜನಿಯಾ, ಬಿಚ್ಚಿಯಾ, ಮಿಚಿನಾಲಾ.... ಹೆಸರುಗಳ ಮೆರವಣಿಗೆ ಕಾಣುತ್ತದೆ. ನಾವು ದಾಖಲಿಸಿಕೊಂಡ ಈ ಹೆಸರುಗಳನ್ನಾದರೂ ಪೂರ್ಣ ನಂಬಬೇಡಿ! ಅವರಿವರಲ್ಲಿ ಕೇಳಿದ್ದು, ನಮಗೆ ಸುಲಲಿತವಲ್ಲದ ಹಿಂದಿ ಲಿಪಿಯ (ಭಾಷೆ ಬೇರೆ, ಹಾಗಾಗಿ ಉಚ್ಛಾರಣೆ ಬೇರೆ ಇರಬಹುದು) ಬೋರ್ಡು, ಪ್ರಾದೇಶಿಕ ಉಚ್ಛಾರಣಾ ಬೇಧದೊಡನೆ ಬರೆಯುವವರ ತಪ್ಪೂ ಸೇರಿರಬಹುದಾದ ಇಂಗ್ಲಿಷ್ ಬೋರ್ಡು ಮತ್ತಿವೆಲ್ಲವುಗಳ ಕನ್ನಡ ಲಿಪಿಯ ದಾಖಲಾತಿ ಸೇರಿ ಏನಕ್ಕೇನೋ ಆಗಿದ್ದರೆ ಬಯ್ಯಬೇಡಿ! 

ಹಳ್ಳಿ ಊರುಗಳ ನಾಮ ಸಂಕೀರ್ತನೆಗೆ ‘ನನ್ನ ಮುಂದಿನದು ಪಂಚೇರ್’, ‘ಕಿಶೋರ್ ಹಿಂದಿನದು ಪಂಚೇರ್’ ಪಲ್ಲವಿಯಂತೆ ಸೇರಿಕೊಳ್ಳುತ್ತವೆ. ಸಾಲದೆಂಬಂತೆ ಒಂದೆರಡು ವಿಶೇಷಣಗಳು - ‘ದರಿದ್ರ ಘಾಟಿ ರಸ್ತೆ’, ‘ಕಿಶೋರ್ ದಾರಿ ತಪ್ಪಿದರು’ (ಎಲ್ಲೋ ಒಂದೆರಡು ಕಿಮೀ ಭಿನ್ನ ದಾರಿ ಹಿಡಿದು ಮರಳಿರಬೇಕು) ಇತ್ಯಾದಿ. ಇವಕ್ಕೆ ಸಣ್ಣದಾಗಿ ಸಾಂತ್ವನ ನೀಡುವಂತೆ ಎಲ್ಲೆಲ್ಲೋ ಚಾ, ಜಿಲೇಬಿ, ಖೋವಾಜೀ, ಇಡ್ಲಿ ಮೊಸರು, ಕಾಕಡೀ ಹೋಳು (ಮುಳ್ಳು ಸೌತೆಯಂತವು) ಧ್ವಂಸ ಮಾಡಿದ್ದೂ ಇವೆ. ಇಷ್ಟರ ಮೇಲೆ ೪೫ ಡಿಗ್ರಿ ಮೀರಿದ ಸೂರ್ಯ ಪ್ರತಾಪವನ್ನೂ ಸೇರಿಸಿಕೊಂಡು ಪ್ರಬಂಧ ಪೂರೈಸುವ ಕೆಲಸವನ್ನು ನಿಮ್ಮ ಕಲ್ಪನೆಗೇ ಬಿಡುತ್ತೇನೆ. ಪಂಡರಿಯಾ, ಚಿಲ್ಪಿ, ಲೋಮಾಳ, ಕೋಟಾಗಳನ್ನು ಕಳೆದು ನಾಲ್ಕು ಗಂಟೆಗೆ, ದೊಡ್ಡ ಪಟ್ಟಣವೇ ಆದ ಬಿಲಾಸ್ ಪುರ ತಲಪುವಲ್ಲಿಗೆ ದಿನದ ಸವಾರಿ ಸಾಕೆನ್ನಿಸಿದೆವು. (ತಾ. ೩೮, ದಿನದ ಓಟ ೨೯೧ ಕಿಮೀ) 
(ಮುಂದುವರಿಯಲಿದೆ)

6 comments:

  1. ಯಾರ ಪಾಪದ ಪಾಲು ಎಷ್ಟು, ಯಾರು ಯಾರಿಗೆ ಮಂಕುಬೂದಿಯನ್ನು ಎರಚುತ್ತಿದ್ದಾರೆ, ಯಾರ ಹಿತಾಸಕ್ತಿಗಳ ಉದ್ಧಾರಕ್ಕಾಗಿ ಏನೇನು ನಡೆಯುತ್ತದೆ ಎಂಬ ವಿಷಯಗಳು ಆಲೋಚನೆ ಮಾಡಿದಷ್ಟೂ ಜಟಿಲವಾಗುತ್ತಾ ಹೋಗುತ್ತವೆ.

    ಈಗ ಅಮೇರಿಕದ ವಿಷಯ ನೋಡಿ. ಕೇವಲ ಕಳೆದ ಇನ್ನೂರು-ಮುನ್ನೂರು ವರ್ಷಗಳಲ್ಲಿ ಇಲ್ಲಿ ಪ್ರಕೃತಿಯ ನಾಶ ಎಷ್ಟು ನಡೆದಿದೆ ಎಂದರೆ ನಮಗೆ ಊಹಿಸಲೂ ಸಾಧ್ಯ ಇಲ್ಲ. ಇಂದು ಕೆಲವರು ಎಚ್ಚೆತ್ತುಕೊಂಡು ಒಂದಷ್ಟು ಪ್ರದೇಶಗಳನ್ನು ರಾಷ್ಟ್ರೀಯ/ರಾಜ್ಯ ಉದ್ಯಾನವನಗಳು ಎಂದು ಘೋಷಿ ಉಳಿಸಿಕೊಂಡಿದ್ದಾರೆ. ಈ ಜಾಗಗಳಲ್ಲಿ ಅನೇಕ ರೀತಿಯಲ್ಲಿ ಸುವ್ಯವಸ್ಥೆ ಕಂಡುಬರುತ್ತದೆ, ಅವುಗಳನ್ನು ಸಂದರ್ಶಿಸಲು, ಅಲ್ಲಿ ಚಾರಣ ಮಾಡಲು ಬಹಳ ಖುಷಿಯಾಗುತ್ತದೆ ಕೂಡ. ಆದರೆ ಆಳವಾಗಿ ಅಧ್ಯಯನ ಮಾಡುತ್ತಾ ಹೋದಂತೆ ಅನೇಕ ಕುಂದುಕೊರತೆಗಳು ಕೂಡ ಅನಾವರಣಗೊಳ್ಳುತ್ತಾ ಸಾಗುತ್ತವೆ - ಅವುಗಳನ್ನು ಸಂಭಾಳಿಸಲೆಂದು ಬದಿಗಿಟ್ಟಿರುವ ಹಣ ಅತ್ಯಲ್ಪ. ಆದರೆ ಇತರೆಡೆ ಅದರ ಹಲವಾರು ಪಟ್ಟು ಹಣ ವಿನಿಯೋಗಿಸಿ ಪ್ರಕೃತಿಯನ್ನು ಇನ್ನೂ ಇನ್ನೂ ಹಾಳುಗೆಡವುವ ಅನೇಕ ವಿಷಯಗಳು ನಿರಾತಂಕವಾಗಿ ನಡೆಯುತ್ತಲೇ ಇವೆ. ಆದರೆ ಮೇಲಿಂದ ಮೇಲೆ ನೋಡುವವರಿಗೆ ಎಲ್ಲೆಡೆಯೂ ಸೂಪರ್ ಫೀಲಿಂಗ್!

    ದುರದೃಷ್ಟವಶಾತ್ ಭಾರತದಲ್ಲಿ ನಾನು ಹೀಗಿರುವ ಪ್ರದೇಶಗಳನ್ನು ಸುತ್ತಿದ್ದು ಕಮ್ಮಿ, ಹೀಗಾಗಿ ಜಾಸ್ತಿ ಏನೂ ಹೇಳಲಾರೆ. ಕೆಲವು ವರ್ಷಗಳ ಹಿಂದೆ ಉತ್ತರದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನಕ್ಕೆ ಹೋಗಿದ್ದೆವು. ಅನೇಕ ರೀತಿಯಲ್ಲಿ ನಮ್ಮ ಅನುಭವ ಉತ್ತಮವೇ ಇತ್ತು - ನಮ್ಮ ಉತ್ತಮ ಅನುಭವಕ್ಕಾಗಿ ಪ್ರಕೃತಿ ಎಷ್ಟರ ಮಟ್ಟಿಗೆ ಬಲಿಯಾಗಿತ್ತು ಸರಿಯಾಗಿ ಗೊತ್ತಿಲ್ಲ, ಅದು ಬೇರೆ ಮಾತು. ಆದರೆ ಇಲಾಖೆಯವರೇ ನಡೆಸುತ್ತಿದ್ದ ಕಾಟೇಜುಗಳಲ್ಲಿ ಉಳಿದುಕೊಂಡದ್ದು, ದುರಾಸೆ-ಸೊಕ್ಕು-ಅಸಡ್ಡೆ ಇತ್ಯಾದಿ ಕಾಣಸಿಗಲಿಲ್ಲ, ಎಲ್ಲಿಯೂ ಲಂಚ ಕೊಡಬೇಕಾಗಿ ಬರಲಿಲ್ಲ. ಹೀಗಾಗಿ ತಕ್ಕಮಟ್ಟಿಗೆ ಪ್ರಾಮಾಣಿಕವಾಗಿಯೇ ಇತ್ತು ಎಂಬ ಭಾವನೆ ಸಿಕ್ಕಿತ್ತು. ಅದಕ್ಕಿಂತಲೂ ಒಳಗಿನ ಕಥೆ ಗೊತ್ತಿಲ್ಲ. ಆಗ ಅದಕ್ಕಿಂತ ಹೆಚ್ಚು ಮೂಗು ತೂರಿಸಿ ಅಧ್ಯಯನ ಮಾಡುವ ಸಮಯವೂ ಇರಲಿಲ್ಲ.

    ReplyDelete
  2. "........ ಸ್ಮರಣಿಕೆಯಾಗಿ ಯಾವುದನ್ನು ಬೇಕಾದರೂ ಒಯ್ಯಲೂ ಸೂಚಿಸಿದ್ದ ........" 🤣

    ReplyDelete
  3. ಪೂರ್ವ ಕರಾವಳಿಯ ಈ ಉದ್ಯಾನ ತ್ರಯಗಳು ಹೆಸರುವಾಸಿದವುಗಳು. ಇವುಗಳ ನಿರ್ವಹಣೆರಲಿ ಮಧ್ಯಪ್ರದೇಶ ಸರ್ಕಾರ ತೋರುವ ಉದಾಸೀನ ಅಸಡ್ಡೆ, ಅಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯ, ನಿರಾಸಕ್ತಿ ಇಲ್ಲಿ ಢಾಳಾಗಿ ಕಾಣಿಸುತ್ತವೆ . ಇವನ್ನು ನೀವು ನೋಡಿ ಸುಮಾರು 24 ವರ್ಷ ಆದರೂ - ಈಗ ಅವೇನೂ ಉದ್ದಾರ ಆಗಿಲ್ಲ ಅನಿಸುತ್ತದೆ. ಈ ಪ್ರವಾಸ ರುದ್ರ ಭಯಾನಕ .ಅ ರಸ್ತೆ, ತಿರುವು, ಗಳು ಹಳ್ಳ ಹಿಡಿದಿವೆ. ಭೀಕರ ಗುಂಡಿಗಳು, ಅವೇನು ರಸ್ತೆಯೋ - ಹಿಂದೆ ನದಿಯಂದು ಹರಿದು - ಈಗ ಬತ್ತಿಹೋದ ಐತಿಹ್ಯವೋ ಅನಿಸಿತು. ಮತ್ತು ಈ ಪ್ರವಾಸ ಇಲಾಖೆಯ ಯೋಜಿತ ಲಾಭಿ ಆಗಿ- ಹುಲಿ, ಜಿಂಕೆಗಳನ್ನು- ಅಲ್ಲಿ - ನಿಯೋಜನೆ ಮಾಡುವುದಂತು- ಇಡೀ ಸರ್ಕಾರ / ಇಲಾಖೆಯ ಕೇಳರಿಯದ ಕರಾಳ ಮುಖ ಆಗಿ- ಇಡೀ ಭಾರತದಲ್ಲಿ ಹೀಗಿಲ್ಲ ಅನಿಸಿ- ಇಡೀ ವ್ಯವಸ್ಥೆ ಇಲ್ಲಿ ಪರಮ ಪಾತಾಳ ತಲುಪಿದೆ. ಈ ವಿಕೃತಿ ನಾ ಓದಲಿಲ್ಲ. ಅಲ್ಲಿ ಹಸಿರು ಹೂ ಹಕ್ಕಿ ಹಾಡು ಇಲ್ಲ. ಮರುಭೂಮಿಯಲಿ ಕಂಡ ಕರಾಳ ನಿರ್ಜೀವ ರಾಗರಹಿತ ಕಾಡು ಅನಿಸಿತು. ಇಷ್ಟು ಕೆಟ್ಟ ಕಡೆ ಪ್ರವಾಸೋದ್ಯಮ ಅನುದಿನವೂ ಪಾತಾಳ ತಲುಪಿ- ಇದು ಪೂರ್ಣ ಅದೋಗತಿ ತರ ಕಾಣುತ್ತದೆ. ಇಂಥ ಪ್ರವಾಸಿ ಕುಲಗೆಟ್ಟ ರಾಜ್ಯ ಇನ್ನೊಂದು ಇರಲಾರದು

    ReplyDelete
    Replies
    1. ಭಾರತದ ಒಟ್ಟಾರೆ ಸರಕಾರೀ ಧೋರಣೆಗಳ ಪ್ರತಿಬಿಂಬವಾಗಿ ಇಲ್ಲಿ ಈ ಮೂರನ್ನು ಮಾತ್ರ ಕಾಣುತ್ತಿದ್ದೀರಿ. ನನ್ನ ಈ ಸಾಹಸಯಾನದ ಹಿಂದಿನ ಕಂತುಗಳು, ಬರಲಿರುವ ಕಂತುಗಳು ಇದಕ್ಕೂ ಮೊದಲ ಪ್ರಾಕ್ರುತಿಕ ಭಾರತ ಸೀಳೋಟದ ಕಂತುಗಳಲ್ಲೂ ಇಂಥವೇ ಅನುಭವಗಳು ಹೆಚ್ಚಿವೆ - ಓಡಿ ನೋಡಿ. "ಇಷ್ಟೊಂದು ಕುಲಗೆಟ್ಟ ರಾಜ್ಯ, ವನಧಾಮಗಳು ಇನ್ನೊಂದು ಇರಲಾರದು" ಎನ್ನುವ ಮಾತು ಪಕ್ಷಪಾತವಾದೀತು!! ಪಾಪದ ಪಾಲನ್ನು ಇಡಿಯ ಭಾರತಕ್ಕೆ ಅನ್ವಯಿಸಿದರೆ ತಪ್ಪಾಗಲಾರದು

      Delete
  4. ಆಗ್ರಾದ ತಾಜ್ಮಹಲ್ ಗೆ ನಮ್ಮ ಎರಡನೇ ಭೇಟಿಯ ಸಮಯದಲ್ಲಿ(1994) ವಿದೇಶೀ ದಂಪತಿ ಗಳಿಗೆ ಗೈಡ್ ಆಗಿ ಬಂದಿದ್ದ ಒಬ್ಬ,ಅಲ್ಲಿನ ಮಾರ್ಬಲ್ ಕಂಬಗಳಲ್ಲಿ ಕುಸುರಿ ಕೆಲಸ ಮಾಡಿ ದ್ದ,ಹಸಿರು,ಕೆಂಪು ಬಣ್ಣದ ಸಣ್ಣ ಸಣ್ಣ ಶಿಲೆಗಳನ್ನು ಬೇಕಾದರೆ, ಎಬ್ಬಿಸಿ ಕೊಡುತ್ತೇನೆ,ಸ್ಮರಣಿಕೆಯಾಗಿ ಇಟ್ಟು ಕೊಳ್ಳಿ ಎಂದು ರಾಜಾರೋಷವಾಗಿ ಹೇಳುತ್ತಿದ್ದುದನ್ನು ಕಿವಿಯಾರೆ ಕೇಳಿದ್ದೆವು.ಅಲ್ಲಿನ ಎಷ್ಟೋ ಕಂಬಗಳಲ್ಲಿ ಹಾಗೆ ತೆಗೆದಿದ್ದು,ಖಾಲಿಯಾಗಿದ್ದನ್ನೂ ಕಂಡಿದ್ದೆವು.ಈ ಬಗ್ಗೆ ದೂರು ಯಾರಿಗೆ ಕೊಡುವುದು? ಇಲಾಖೆ ಗೆ ಗೊತ್ತಿಲ್ಲ ದೇ ಇದೆಲ್ಲಾ ನಡೆಯುತ್ತದೆಯೇ? ಒಬ್ಬ ಗೈಡ್ ಹಾಗೆ ಎಬ್ಬಿಸಿದರೆ ಇತರರು ಸುಮ್ಮನಿರುತ್ತಾರೆಯೇ? ಒಳ್ಳೆಯ ದರ ಬಂದರೆ ಅವರೂ ಮಾರುವವರೇ ಅಲ್ಲವೇ?ಇನ್ನೂ ಒಳ್ಳೆಯ ದರ ಸಿಕ್ಕಿದರೆ ತಾಜ್ಮಹಲ್ ನ್ನೇ ಮಾರಿಯಾರು.ಈಗೇನಾದರೂ ಅಲ್ಲಿ ಸಿಸಿ ಕ್ಯಾಮರಾ ಗಳು ಬಂದಿರಬಹುದೇನೋ ತಿಳಿಯದು��ಹುಲಿಗಳ ಪರೇಡ್ ವ್ಯವಸ್ಥಿತ ಯೋಜನೆ ಎಂದು ತಿಳಿದಾಗ, ಶಿವಮೊಗ್ಗದ ಬಳಿ ತ್ಯಾವರೆಕೊಪ್ಪದಲ್ಲಿ ಪದೇಪದೇ ಕಂಡ ಒಂದೇ ರೀತಿಯ ಸಿಂಹ ಗಳು ನೆನಪಾದವು.ಅವೇನು ಏಕಪಾತ್ರಾಭಿನಯ ಮಾಡಿತ್ತೋ ಎನ್ನುವ ಸಂದೇಹ ಈಗ ಬಂತು.��

    ReplyDelete
    Replies
    1. ನಿಮ್ಮ ತಾಜ್ಮಹಲ್ ಅನುಭವ ಶೋಚನೀಯ. ಹುಲಿ ಪ್ರದರ್ಶನ ೨೦೧೨ರಲ್ಲಿ ನಿಲ್ಲಿಸಿದ್ದಾರೆ ಮತ್ತು ಈಗಿನ ಕಾನ್ಹಾ ವ್ಯವಸ್ಥೆ ತುಂಬ ಚೆನ್ನಾಗಿದೆಯೆಂದೂ ನಿನ್ನೆಯಷ್ಟೇ Eric D'Cunha ಖಾಸಗಿ ಟಿಪ್ಪಣಿಯಲ್ಲಿ ಹೇಳಿದ್ದಾರೆ. ಅವರನ್ನು ವರ್ತಮಾನದ ಉತ್ತಮಸ್ಥಿತಿಯ ಕುರಿತು ವಿವರವಾಗಿ ಬರೆಯಲು ಕೇಳಿಕೊಂಡಿದ್ದೇನೆ. ತ್ಯಾವರೆಕೊಪ್ಪ ಅಥವಾ ಬನ್ನೇರುಘಟ್ಟದಂಥ ಸಫಾರಿಪಾರ್ಕ್ಗಳ ಕತೆ ಪ್ರಾಣಿ ಸಂಗ್ರಹಲಾಯದ್ದೇ ಬಿಡಿ.

      Delete