ಅಧ್ಯಾಯ ಹದಿನಾರು
ಆಪತ್ಕಾಲದಲ್ಲಿ ನೆರವಾಗುವವರು ನಿಜವಾದ ಮಿತ್ರರು ಎಂದು ಹೇಳುತ್ತಾರೆ. ಆಪತ್ತುಗಳು ಬರುವ ಮೊದಲೇ ರಕ್ಷಣೆ ನೀಡುವವರು ಆಪತ್ತುಗಳು ಬಾರದಂತೆ ಭದ್ರತೆ ನೀಡುವವರು ಯಾರು? ತಾಯಿಗೆ ಮಾತ್ರ ಈ ಶಕ್ತಿ ಇರುತ್ತದೆ. ದೇವರು ಎಲ್ಲಾ ಕಡೆ ಇರುವುದು ಸಾಧ್ಯವಿಲ್ಲವೆಂದು ಅವನು ತಾಯಂದಿರನ್ನು ಭೂಲೋಕದಲ್ಲಿ ಸೃಷ್ಟಿಸಿದ ಎಂಬ ಮಾತಿದೆ. ಹೆತ್ತವಳು ಮಾತ್ರ ತಾಯಿಯೆಂದು ತಿಳಿಯಬೇಕಾಗಿಲ್ಲ. ತಾಯಿ ಹೃದಯದ ಮಮತೆ ಗಂಡಸರಲ್ಲೂ ಇದೆ. ಅಂತಹವರು ಸಂಪರ್ಕಕ್ಕೆ ಬಂದಾಗ ಗುರುತಿಸುವ ಕಣ್ಣು ನಮಗಿರಬೇಕು ಅಷ್ಟೇ. ಈ ಲಕ್ಷ್ಮೀ ಟೀಚರು ತನ್ನ ಸಂಪರ್ಕಕ್ಕೆ ಬಂದವರನ್ನೆಲ್ಲಾ ಮಾತೃಹೃದಯದಿಂದ ಅಪ್ಪಿಕೊಂಡವರು. ಅತ್ಯಂತ ಮಡಿವಂತ ಬ್ರಾಹ್ಮಣ ಮನೆತನದ ಹೆಣ್ಣುಮಗಳೊಬ್ಬಳು ತಾನು ಹುಟ್ಟಿದ ಪರಿಸರದ ಎಲ್ಲಾ ನಂಬಿಕೆ, ಸಂಪ್ರದಾಯ, ಆಚಾರ ವಿಚಾರಗಳನ್ನು ಯಾವುದೇ ಘರ್ಷಣೆಗೆ ಆಸ್ಪದವಿಲ್ಲದಂತೆ ಕಳಚಿಕೊಂಡದ್ದು ವಿಶೇಷ. ಹೊಟ್ಟೆಯ ಹಸಿವಿಗೆ ಜಾತಿ, ಮತ, ಪಂಥಗಳ ಭೇದವಿಲ್ಲವೆಂಬುದನ್ನು ದೃಢವಾಗಿ ನಂಬಿದ ಅವರು ಶಿಕ್ಷಕ ವೃತ್ತಿಗೆ ಸೇರಿದಾಗಲೇ ತನಗಿರುವುದು ಮಾನವ ಧರ್ಮವೊಂದೇ, ತಾನು ಪಾಲಿಸಬೇಕಾದುದು ಮಾನವೀಯತೆಯನ್ನು ಮಾತ್ರವೆಂದು ನಂಬಿದರು. ಅದರಂತೆ ಬಾಳಿದರು. (ಚಿತ್ರದಲ್ಲಿ: ನನ್ನ ತಮ್ಮನ ಮದುವೆ ಸಂದರ್ಭದಲ್ಲಿ ಲಕ್ಷ್ಮೀ ಟೀಚರ್)
ಮಾತೃಭಾಷೆ ತಮಿಳಾದರೂ ಕ್ರಿಶ್ಚನ್ ಕೊಂಕಣಿ, ಗೌಡ ಸಾರಸ್ವತರ ಕೊಂಕಣಿಯನ್ನು ಅಷ್ಟೇ ಸುಲಲಿತವಾಗಿ ಮಾತಾಡಬಲ್ಲ ಅವರ ಜಾಣ್ಮೆ ವಿಶೇಷ. ಮಲೆಯಾಳ, ಕನ್ನಡ, ಹಿಂದಿ, ಇಂಗ್ಲಿಷ್, ತುಳು ಅಲ್ಲದೆ ತೆಲುಗನ್ನೂ ಅರ್ಥ ಮಾಡಿಕೊಳ್ಳಬಲ್ಲ ಪ್ರಾವೀಣ್ಯತೆ ಗಳಿಸಿದ ಅವರು ತನ್ನನ್ನು `ಸಾಡೇಸಾತ್' ಎಂದು ಲೇವಡಿ ಮಾಡಿಕೊಳ್ಳುತ್ತಿದ್ದರು. ಸಾಡೇ ಸಾತ್ ಎಂದರೆ ಅರೆಹುಚ್ಚನೆಂಬ ಅರ್ಥವೂ ಇದೆ. ಏಳೂವರೆ ಶನಿ ಹಿಡಿದವನು ತಲೆ ಕೆಟ್ಟವನಂತಿರುತ್ತಾನೆಂಬ ನಂಬಿಕೆ ಇದೆ. ಹಾಗೆ ತನಗೆ ಏಳೂವರೆ ಭಾಷೆಗಳಲ್ಲಿ ಸಂವಹನ ಸಾಧ್ಯವಾದದ್ದು ಈ ಸಾಡೇ ಸಾತ್ ಬುದ್ಧಿಯಿಂದಲೇ ಎಂಬುದು ಅವರ ವಾದ. ಪಾಕಶಾಸ್ತ್ರ ಪ್ರವೀಣೆಯಾದ ಇವರು ತನ್ನ ಮನೆಗೆ ಬಂದವರನ್ನು ಸತ್ಕರಿಸುವ ರೀತಿಯೇ ಅನನ್ಯ. ಕಸೂತಿ ಕಲೆಯಲ್ಲಿ ಅವರು ಎಂತಹ ಪ್ರವೀಣೆಯೆಂಬುದಕ್ಕೆ ಅವರು ಮಾಡಿತ ಕುಶಲ ಕಲೆಗಳು, ಕಸೂತಿಯ ಬಟ್ಟೆಗಳು ಸಾಕ್ಷಿ ಹೇಳುತ್ತಿದ್ದವು. ಹೊರನೋಟಕ್ಕೆ ಶುದ್ಧ ಸಂಪ್ರದಾಯವಾದಿಯಂತೆ ಕಾಣುವ ಅವರ ಆಂತರ್ಯದಲ್ಲಿ ವಿಶ್ವಮಾನವ ಪ್ರಜ್ಞೆ ಸದಾ ಜಾಗೃತವಾಗಿರುತ್ತಿತ್ತು.
ನಮ್ಮ ಬಿಡಾರ ಹೊಸ ಬಾಡಿಗೆ ಮನೆಗೆ ಬಂದ ಮೇಲೆ ಮನಸ್ಸಿಗೆ ಮಾತ್ರವಲ್ಲ ಮನೆಗೂ ಹತ್ತಿರವಾದೆವು. ನನ್ನ ತಂದೆ ತೀರಿದ ಮೇಲಂತೂ ಆ ಸ್ಥಾನವನ್ನು ಸಮರ್ಥವಾಗಿ ತುಂಬಿದವರವರು. ನನಗೊಂದು ಸಣ್ಣ ಶಸ್ತ್ರಚಿಕಿತ್ಸೆ ಕಂಕನಾಡಿ ಆಸ್ಪತ್ರೆಯಲ್ಲಿ ಮಾಡಬೇಕಾಯಿತು. ಆಗ ಹಗಲು ರಾತ್ರಿ ಜೊತೆಗಿದ್ದು ಶುಶ್ರೂಷೆ ಮಾಡಿದರು. ಉಡುಪಿಯ ಚಂದ್ರಕಲಾ ಭಕ್ತರ ನರ್ಸಿಂಗ್ ಹೋಮಿನಲ್ಲಿ ಮತ್ತೊಂದು ಶಸ್ತ್ರಚಿಕಿತ್ಸೆಗಾಗಿ ನಾನು ಎಡ್ಮಿಟ್ ಆದಾಗಲೂ ನನ್ನ ಜೊತೆ ಇದ್ದು ಕಾಪಾಡಿದವರು ಇದೇ ಲಕ್ಷ್ಮೀ ಟೀಚರು. ನನ್ನ ಮನೆಗೆ ಅಗತ್ಯವಾದ ಪರಿಕರಗಳೇನು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ ಮರುದಿನ ಮನೆಗೆ ಮುಟ್ಟಿಸುವ ಅವರ ಉದಾರತೆಗೆ ನಾನು ಬೆರಗಾಗಿದ್ದೇನೆ. ಹಾಗೆಂದು ಅವರೇನೂ ಆರ್ಥಿಕವಾಗಿ ಗಟ್ಟಿಗರಲ್ಲ. ಆದರೆ `ಸ್ವಂತಕ್ಕೆ ಸ್ವಲ್ಪ, ಲೋಕಕ್ಕೆ ಸರ್ವಸ್ವ' ಎನ್ನುತ್ತಾರಲ್ಲ, ಅಂತಹ ಸ್ವಭಾವದವರು. ಅವರಿಂದ ಕೃತಾರ್ಥರಾದವರ ಸಂಖ್ಯೆಯನ್ನು ಲೆಕ್ಕ ಇಡಲು ಸಾಧ್ಯವಿಲ್ಲ.
ಚಂದದ ಒಂದು ಸೀರೆ ಕೊಳ್ಳಲು ತಾಕತ್ತಿಲ್ಲದ ನಾನು ಕರ್ಕೇರಾರ ಚಂದ್ರಾ ಕ್ಲೋತ್ ಸ್ಟೋರಿನಿಂದ ವರ್ಷಕ್ಕೆರಡು ಸೀರೆ ಸಾಲ ಕೊಂಡು ಉಡುತ್ತಿದ್ದ ಕಾಲದಲ್ಲಿ ಎಷ್ಟೊಂದು ಸೀರೆಗಳನ್ನು ತಂದು ನನಗೆ ಉಡಿಸಿ ಸಂತೋಷಪಟ್ಟವರವರು. ಅವರ ಅಭಿಮಾನೀ ಬಳಗದವರು, ಬಂಧುಗಳು, ಮಿತ್ರರು, ಶಿಷ್ಯರು ಕೊಡುವ ನೀಲಿ ಸೀರೆಗಳು ವೈವಿಧ್ಯಮಯವಾಗಿದ್ದುವು. ಬಣ್ಣ ಮಾತ್ರ ನೀಲಿಯಾಗಿರುತ್ತಿದ್ದುವು. ಅವುಗಳಲ್ಲಿ ಹೆಚ್ಚಿನವು ನನ್ನ ಮನೆಗೇ ತಂದು ಕೊಡುತ್ತಿದ್ದ ಟೀಚರು ತನಗೆ ಸ್ವಂತಕ್ಕೆಂದು ಎಂದೂ ಸೀರೆ ಕೊಂಡದ್ದನ್ನು ನಾನು ಕಂಡಿಲ್ಲ. ``ಮಾಡದಿರು ಬಾಳನ್ನು ಬೇಳೆಯಂತೆ, ಕೂಡಿರಲಿ ಬಾಳು ಇಡಿಗಾಳಿನಂತೆ'' ಎಂಬ ಕವಿವಾಣಿ ಇವರ ಜೀವನತತ್ವ. ಅವರ ಬಳಿಗೆ ಬಂದು ಕೂತು ಅವರೊಂದಿಗೆ ನಾಲ್ಕು ಮಾತನಾಡಿದರೆ ನಮ್ಮ ಮನಸ್ಸಿನ ಕ್ಲೇಶಗಳೆಲ್ಲಾ ಮಾಯವಾದಂತಹ ಅನುಭವವಾಗುತ್ತಿತ್ತು. ನಮ್ಮ ಲೀಲಾವತಿ ಟೀಚರು ಮನೆಯಲ್ಲಿ ಯಾವುದೇ ರೀತಿಯ ಮಾನಸಿಕ ಬೇಗೆ ಉಂಟಾದ ಕೂಡಲೇ ಬಂದು ಇವರ ಸಮ್ಮುಖದಲ್ಲಿ ಕೂತು ಮನಸ್ಸು ತಂಪು ಮಾಡಿಕೊಳ್ಳುತ್ತಿದ್ದರು. ಅವರಲ್ಲಿಗೆ ಬಂದರೆ ಮನಸ್ಸು ಮಾತ್ರವಲ್ಲ ಹೊಟ್ಟೆಯನ್ನೂ ತಂಪು ಮಾಡಿಕೊಳ್ಳದೆ ಹೋಗಲು ಬಿಡುತ್ತಿರಲಿಲ್ಲ. ಗಂಭೀರವಾದ ಸಾಹಿತ್ಯಾಧ್ಯಯನದಲ್ಲಿ ನಿರತೆಯಾಗಿದ್ದರೂ ಬರವಣಿಗೆಯಲ್ಲಿ ಆಸಕ್ತಿ ತೋರಿದವರಲ್ಲ. ಯಾವ ಒಳ್ಳೆಯ ಓದು ಬರವಣಿಗೆ ಇದ್ದರೂ ಮೂಲತಃ ಮಾನವ ಕೇವಲ ಮನುಷ್ಯರೇ. ಓದು ಬರಹಗಳು ಎಲ್ಲಾ ಮನುಷ್ಯರನ್ನು ಸಹೃದಯವಂತರನ್ನಾಗಿ ಮಾಡಲು ಸಾಧ್ಯವಿಲ್ಲವೆಂಬುದನ್ನು ಉದಾಹರಣೆ ಸಹಿತ ವಿವರಿಸುವ ಚಿಂತನಾಶೈಲಿಗೆ ನಾನು ಬೆರಗಾಗಿ ಕಿವಿಯಾಗುತ್ತಿದ್ದೆ. ಸಂತನೊಳಗೊಬ್ಬ ದುಷ್ಟನೂ ಕಳ್ಳನೊಳಗೊಬ್ಬ ಸಂತನೂ ಇರಲು ಸಾಧ್ಯ ಎಂಬ ಸತ್ಯವನ್ನು ಮರೆಯಬಾರದು ಎಂದು ಯಾವಾಗಲೂ ಹೇಳುತ್ತಿದ್ದರು.
ನನ್ನ ಏಳಿಗೆಯ ಪ್ರತಿ ಕ್ಷಣಗಳನ್ನು ಕಂಡು ಸಂಭ್ರಮಿಸಿದ ಲಕ್ಷ್ಮೀ ಟೀಚರು ನನ್ನ ಕತೆಗಳು ಪತ್ರಿಕೆಯಲ್ಲಿ ಪ್ರಕಟವಾದಾಗ, ಆಕಾಶವಾಣಿಯಲ್ಲಿ ನನ್ನ ಸ್ವರ ಕೇಳಿದಾಗ ಹಿರಿ ಹಿರಿ ಹಿಗ್ಗಿದರು. ಪುಸ್ತಕಗಳು ಪ್ರಕಟಗೊಂಡಾಗ ನನ್ನ ಅಪ್ಪ ಎಷ್ಟು ಸಂತಸಪಡುತ್ತಿದ್ದರೋ ಅದಕ್ಕಿಂತ ಒಂದು ಪಟ್ಟು ಹೆಚ್ಚೇ ಸಂತಸಪಟ್ಟವರು ಈ ಲಕ್ಷ್ಮೀ ಟೀಚರು. ``ರೋಹಿಣೀ, ನೀನು ಯಾರನ್ನಾದರೂ ಪ್ರೀತಿಸಿದ್ದಿಯಾ, ಅಥವಾ ಯಾರನ್ನಾದರೂ ಮದುವೆಯಾಗುವ ಮನಸ್ಸಿದೆಯೇ ಹೇಳು. ನಾನು ಮುಂದೆ ನಿಂತು ಮದುವೆ ಮಾಡಿಸುತ್ತೇನೆ''. ಹೆತ್ತ ತಂದೆ ಕೇಳಬೇಕಾಗಿದ್ದ ಈ ಮಾತನ್ನು ಲಕ್ಷ್ಮೀ ಟೀಚರು ಹೇಳಿದಾಗ ನಾನು ಮೂಕಳಂತೆ ಅವರ ಮುಖವನ್ನೇ ದಿಟ್ಟಿಸಿ ನೋಡಿದ್ದೆ. ನನ್ನ ತಾಯಿಯ ಕಡೆಯ ಬಂಧುಗಳಾಗಲೀ, ತಂದೆ ಕಡೆಯ ಬಂಧುಗಳಾಗಲೀ, ನನ್ನ ಮದುವೆಯ ಬಗ್ಗೆ ಯೋಚನೆಯೇ ಮಾಡಿರದ ಕಾಲದಲ್ಲಿ ಈ ಟೀಚರ ಪ್ರಶ್ನೆ ಕೇಳಿ ನಾನು ಬೆರಗಾದೆ. ನನ್ನ ಜೀವನದ ಪ್ರಗತಿಯ ಪ್ರತೀ ಹೆಜ್ಜೆ-ಹೆಜ್ಜೆಯಲ್ಲೂ ಅವರ ಬ್ಯಾಂಕ್ ಎಕೌಂಟು ನನ್ನ ಎಕೌಂಟ್ಗೆ ವರ್ಗಾವಣೆಯಾಗುತ್ತಿತ್ತು. ಪುಸ್ತಕ ಪ್ರಕಟಣೆಗೆ, ತಮ್ಮನ ಮದುವೆಗೆ, ಕುಡುಪಿನಲ್ಲಿ ಜಾಗ ಖರೀದಿಗೆ, ಮನೆ ಕಟ್ಟುವುದಕ್ಕೆ ಹೀಗೆ ಹೀಗೆ ಲಕ್ಷ್ಮೀ ನನ್ನ ಮನೆಯಲ್ಲೇ ಬಿದ್ದಿರುವಂತಾದುದು ಎಂತಹ ಸೌಭಾಗ್ಯವಲ್ಲವೇ? ಕೋಟಿಗೊಬ್ಬರೂ ಇಲ್ಲದ ಇಂತಹ ಲಕ್ಷ್ಮೀ ಟೀಚರು ತನ್ನ ಮಮತೆಯ ಸಾಗರದಲ್ಲಿ ನನ್ನನ್ನು ಕ್ಷೇಮವಾಗಿ ದಡ ಮುಟ್ಟಿಸಿದರು.
(ಮುಂದುವರಿಯಲಿದೆ)

ಲಕ್ಷ್ಮೀ ಟೀಚರ್ ತರಹದ ವ್ಯಕ್ತಿ ಅಗಾಧ ಶಕ್ತಿ ಇರಲು ಸಾದ್ಯವೇ ಅನ್ನಿಸಿತು ಎಷ್ತೆಲ್ಲಾ ಒಳ್ಳೆಯ ಗುಣಗಳ ಕಲ್ಪತರು .
ReplyDelete"ತೀರಿಸುವ ಸಾಲವನ್ನು ಹೊರಬಹುದು. ತೀರಿಸಲಾರದ ಋಣಭಾರವನ್ನು ಈ ಜನ್ಮದಲ್ಲಂತೂ ಕೆಳಗಿಳಿಸಲಾರೆ. ಅಂತಹ ಹೊರೆಯನ್ನು ಅವರು ಮಮತೆಯಿಂದಲೇ ಹೊರಿಸಿದರು. ಈ ಪ್ರೀತಿಯ ಸಂಬಂಧಕ್ಕೆ ಬೆಲೆ ಕಟ್ಟಲಾಗದು, ತೀರಿಸಲಾಗದು....." ಎಂತಹ ಮಾತುಗಳು..!
ReplyDeleteಲಕ್ಷ್ಮೀ ಟೀಚರ್ರನ್ನು ಕಂಡಿದ್ದೇನೆ. ಅವರ ನೀಲಿ ಸಮವಸ್ತ್ರವನ್ನು ಕಂಡು ಚಿಂತಿಸಿದ್ದೇನೆ. ಆದರೆ ಆ ಬಗ್ಗೆ ಯಾರಲ್ಲೂ ಕೇಳಿ ತಿಳಿದಿಲ್ಲ. ಅವರೊಮ್ಮೆ ನಮ್ಮ ಅಣ್ಣನಿಗೆ ಆಪ ಮಾಡುವ ಕಾವಲಿ ತಂದು ಕೊಟ್ಟಾಗ ಯಾಕೆ ಅಂತ ಅಚ್ಚರಿ ಪಟ್ಟಿದ್ದೆ. ಕೊಡುವುದೇ ಅವರಿಗೆ ಸುಖ ಕೊಡುತ್ತಿತ್ತು. ಅನ್ನುವುದು ಈಗ ಅರ್ಥವಾಯಿತು.
ReplyDeleteಲಕ್ಶ್ಮೀ ಟೀಚರ್ ಅವರ ಚಿತ್ರ ನೋಡಿದೊಡನೇ ಕಣ್ಣಲ್ಲಿ ನೀರು ಬಂತು. ಅವರ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ. ಅವರ ಸದ್ಗುಣಗಳ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅವರಿಗೆ ಕಾನ್ಸರ್ ಆಗಿದ್ದುದು ನನಗೆ ತಿಳಿದಿರಲಿಲ್ಲ. ಅಯ್ಯೋ, ಇವರಿಗೆ ಇಷ್ಟು ಕಷ್ಟ ಬಂದಿತ್ತಲ್ಲಾ ಎಂದು ತುಂಬಾ ದುಃಖವಾಯಿತು.
ReplyDeleteಅವರು ನನ್ನ ೨ನೇ ಫಾರಂ ಮತ್ತು ೩ನೇ ಫಾರಂನ ವಿಜ್ಞಾನದ ಅಧ್ಯಾಪಿಕೆ. ಯಾವಾಗಲೂ ನೀಲಿ ಸೀರೆ. ನಾವು ಕೆ.ಜಿ.ರಾವ್ ಅವರ ಮನೆಯಲ್ಲಿದ್ದಾಗ ಅವರ ಮನೆಗೆ ಮತ್ತು ಪಕ್ಕದ ಸೋನ್ಸ್ (ನನ್ನ ಕ್ಲಾಸ್ ಮೇಟ್) ಮನೆಗೆ ತುಂಬಾ ಸಲ ಹೋಗಿದ್ದೇನೆ. ನನ್ನ ಟೀಚರ್ ಆಗಿದ್ದಾಗ ಬಿಳಿ ಬೆಳಕನ್ನು ಒಂದು ತ್ರಿಭುಜದ ಮೂಲಕ ಹಾಯಿಸಿದರೆ ಕಾಮನಬಿಲ್ಲಿನ ಬಣ್ಣಗಳು ಕಾಣುತ್ತವೆ ಎಂದು ತೋರಿಸಿದ್ದು ಈಗಲೂ ನೆನಪಿದೆ. ಅವರ ಸ್ವರ ಈಗ ತಾನೇ ಕೇಳಿದಂತೆ ಕಿವಿಯಲ್ಲಿ ಅನಿಸುತ್ತಿದೆ. ಒಮ್ಮೆ ಪಿ.ಎನ್.ಸಿಕ್ವೇರಾ ಮಾಸ್ಟರು ಏನೋ ಕಾರಣಕ್ಕಾಗಿ ನನ್ನನ್ನು ಬೈಯ್ಯುತ್ತಿದ್ದುದನ್ನು ಕೇಳಿ ಅವರಿಗೆ ಬಹಳ ಬೇಸರವಾಯಿತು. ನನ್ನನ್ನು ಪ್ರತ್ಯೇಕವಾಗಿ ಕರೆದು ಅವರ ದುಃಖ ಹೇಳಿದರು. ನಾನು ತಲೆ ಕೆಳಗೆ ಮಾಡಿ ಕೇಳಿಸಿಕೊಂಡೆ. ಮತ್ತೆ ಹೀಗೆಂದೂ ಆಗಲಿಲ್ಲ.
ಅವರು ಮದುವೆಯಾಗಲು ಒಪ್ಪಲಿಲ್ಲ ಎಂದು ಅವರ ತಂದೆಯವರಿಗೆ ದುಗುಡ. ನನ್ನ ತಂದೆಯವರಲ್ಲಿ ಬಂದು ಹೇಳಿಕೊಳ್ಳುತ್ತಿದ್ದರು. ಅಯ್ಯರ್ ಮಾಸ್ಟರು ತೀರಿ ಹೋದ ದಿನ ಬೆಳಗ್ಗೆ ಆರು ಗಂಟೆಗೂ ಮೊದಲೇ ಸೀತಾರಾಮ ಅವರು ನಮ್ಮ ಮನೆಗೆ ಬಂದು ನನ್ನ ತಂದೆಯವರಿಗೆ ವಿಷಯ ತಿಳಿಸಿದರು. ಅವರಿಬ್ಬರೂ ಅರ್ಧ ಗಂಟೆಯಾದರೂ ಮಾತನಾಡಿಕೊಂಡು ಬೇಕಾದ ವ್ಯವಸ್ಠೆ ಮಾಡಿದರು. ಶವಸಂಸ್ಕಾರಕ್ಕೆ ಸ್ಮಶಾನಕ್ಕೆ ನಾನೂ ಹೋಗಿದ್ದೆ. ಲಕ್ಶ್ಮೀಟೀಚರಿಗೆ ಆಕಾಶವೇ ಬಿದ್ದಂತೆ ಆಘಾತವಾಗಿತ್ತು. ಅವರು ಬಹಳ ಹೊತ್ತು ಶೋಕವನ್ನು ತಡೆಯದೆ ಅಳುತ್ತಿದ್ದರು. ಬಹಳ ದಿನ ಮಂಕಾಗಿ ಇದ್ದರು.
ನಾನು ಕಾಲೇಜು ಮುಗಿಸಿದ ಮೇಲೆ ಮದರಾಸು ಐ.ಐ.ಟಿ.ಗೆ ಅರ್ಜಿ ಕಳುಹಿಸಿದ್ದೆ. ಅಲ್ಲಿಂದ ಸಂದರ್ಶನಕ್ಕೆ ಆಹ್ವಾನ ಬಂದಿತ್ತು. ಅಲ್ಲಿ ತಮಿಳು ಭಾಷೆ ಆದ್ದರಿಂದ 'ಲಕ್ಷ್ಮೀ ಟೀಚರ ಹತ್ತಿರ ಹೋಗಿ ತಮಿಳು ಓದಲು ಬರೆಯಲು ಕಲಿ' ಎಂದು ತಂದೆಯವರು ಹೇಳಿದರು. ತಂದೆಯವರಿಗೆ ಚೆನ್ನಾಗಿ ತಮಿಳು ಮಾತಾಡಲು ಬಂದರೂ, ಓದಲು ಬರೆಯಲು ಬರುತ್ತಿರಲಿಲ್ಲ. ಲಕ್ಷ್ಮೀ ಟೀಚರು ಬರೆದು ಕೊಟ್ಟ ಲಿಪಿಯನ್ನು ಒಂದೆರಡು ವಾರದಲ್ಲಿ ಅಭ್ಯಾಸಮಾಡಿ ಕಲಿತೆ. ಮದರಾಸಿಗೆ ಹೋದ ಕೂಡಲೇ ಐ.ಐ.ಟಿ.ಯಲ್ಲಿ ಅಗತ್ಯವಿಲ್ಲದಿದ್ದರೂ, ಪೇಟೆಗೆ ಹೋದ ಕೂಡಲೇ ಅದರ ಅಗತ್ಯವಿತ್ತು. ಪ್ರತೀ ಸಲ ಬಸ್ಸಿನ ಇಲ್ಲವೇ ಅಂಗಡಿಗಳ ಬೋರ್ಡು ನೋಡಿ ಓದಿದ ಕೂಡಲೇ ಅವರ ನೆನಪು ಬರುತ್ತಿತ್ತು. ಈಗಲೂ ಚೆನ್ನಾಗಿ ತಮಿಳು ಓದಿ, ಬರೆದು, ಮಾತನಾಡಬಲ್ಲೆ. ಎಲ್ಲಾ ಅವರಿಂದಲೇ ಆರಂಭ.
ಗುರುರ್ದೇವೋಭವ ಎಂಬುದನ್ನು, ಮಾನವೀಯತೆಗಿMತ ಮಿಗಿಲಾದ ಧರ್ಮವಿಲ್ಲ ಎಂಬುದನ್ನು ಲಕ್ಷ್ಮಿ ಟೀಚರ ಅತ್ಯಂತ ಆತ್ಮೀಯ ಹೃದಯಸ್ಪರ್ಶಿ ಚಿತ್ರಣದಲ್ಲಿ ನಮ್ಮ ಮುಂದಿಟ್ಟು ಮನಮಿಡಿಯುವಂತೆ ಮಾಡಿದ ಲೇಖನಿಗೆ ನಮನ. ದಿನೇಶರಂತೆ ಇದನ್ನೋದುವ ಎಷ್ಟು ಹಳೇ ವಿದ್ಯಾರ್ಥಿಗಳ ಮನದಲ್ಲಿ ಅವರು ಅಮರರಾಗಿರ ಬಹುದು!
ReplyDelete- Shyaamala Madhav.